Don't Miss!
- Automobiles ಅದ್ಭುತ ಫೀಚರ್ಸ್ ಪಡೆದುಕೊಂಡ ಟಾಟಾ ಟಿಯಾಗೋ ಇವಿ: ಪ್ರತಿ ಕಿ.ಮೀ ಚಲಿಸಲು ಕೇವಲ 60 ಪೈಸೆ ವೆಚ್ಚ
- Sports IPL 2024: ಗಾಯದ ಕಾರಣದಿಂದ ಆಟಗಾರ ಲೀಗ್ನಿಂದ ಹೊರ ನಡೆದರೆ ಸಿಗುವ ಹಣವೆಷ್ಟು?
- News ಬೈಯಪ್ಪನಹಳ್ಳಿ 'ಮೆಟ್ರೋ' ನಿಲ್ದಾಣದಲ್ಲಿ ಪಾರ್ಕಿಂಗ್ ಸಮಸ್ಯೆ: ಪ್ರಯಾಣಿಕರಿಗೆ ತೊಂದರೆ
- Technology Airtel & Noise: ಇನ್ಮುಂದೆ ಏರ್ಟೆಲ್ ಪೇಮೆಂಟ್ ಬ್ಯಾಂಕ್ ಸ್ಮಾರ್ಟ್ವಾಚ್ನದ್ದೇ ಹವಾ! ಟ್ಯಾಪ್-ಟು-ಪೇ ಫೀಚರ್ಸ್..
- Finance ಬಾಬಾ ರಾಮ್ದೇವ್ಗೆ ಖುದ್ದು ಹಾಜರಾಗುವಂತೆ ಖಡಕ್ ಸೂಚನೆ ನೀಡಿದ ಸುಪ್ರೀಂ ಕೋರ್ಟ್
- Lifestyle ಈರುಳ್ಳಿ ಹಾಕದೆ 3 ಪದಾರ್ಥ ಹಾಕಿ 5 ನಿಮಿಷದಲ್ಲಿ ಚಟ್ನಿ ಮಾಡಬಹುದು.! ಇಲ್ಲಿದೆ ರೆಸಿಪಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸಂದರ್ಶನ : ರಮೇಶ್ ಗೆದ್ದಿದ್ದೂ, ಈ ಮಟ್ಟಕ್ಕೆ ಬೆಳೆದಿದ್ದೂ, ಎಲ್ಲವೂ ಇವುಗಳಿಂದ
''ಹಲೋ ಹೇಳಿ.. ಹೇಗಿದ್ದೀರಾ..'' ಫೋನ್ ಮಾಡಿದ ತಕ್ಷಣ ಹೀಗೊಂದು ಧ್ವನಿ ಬಂತು. ಆ ಧ್ವನಿಯಲ್ಲಿ ಒಂದು ಅಕ್ಕರೆ ಇತ್ತು, ಸರಳತೆ ಇತ್ತು, ಅಹಂ ಇಲ್ಲದ ಅಂತರಾಳದಿಂದ ಈ ಮಾತು ಬಂದಿತ್ತು. ಆ ಧ್ವನಿ ಯಾರದ್ದು ಗೊತ್ತೆ 'ನಟ ನಿರ್ದೇಶಕ ರಮೇಶ್ ಅರವಿಂದ್' ಅವರದ್ದು.
ಜಂಟಲ್ ಮ್ಯಾನ್ ಆಫ್ ಸ್ಯಾಂಡಲ್ ವುಡ್ ಎಂದೆ ಕರೆಸಿಕೊಳ್ಳುವ ರಮೇಶ್ ಇಂದು ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಈ ವಿಶೇಷ ದಿನ ತಮ್ಮ ಬ್ಯುಸಿ ಶೆಡ್ಯೂಲ್ ನಡುವೆಯೂ ಸಮಯ ಮಾಡಿಕೊಂಡು 'ಫಿಲ್ಮಿಬೀಟ್ ಕನ್ನಡ'ದ ಜೊತೆಗೆ ಮಾತಿಗೆ ಸಿಕ್ಕರು.
ರಮೇಶ್ ಅವರ ಈ ಅದ್ಬುತ ಮಾತುಗಳು ನಿಮ್ಮ ಜೀವನ ಬದಲಿಸಬಹುದು
ವಿಶೇಷವಾಗಿ, ಈ ಸಂದರ್ಶನದಲ್ಲಿ ಅವರು ತಮ್ಮ 'ಈ ಮಟ್ಟದ ಬೆಳವಣಿಗೆಗೆ ಏನು ಕಾರಣ?' ಎನ್ನುವುದನ್ನು ಹೇಳಿಕೊಂಡಿದ್ದಾರೆ. ಜಸ್ಟ್ ಇಮ್ಯಾಜಿನ್..ಒಬ್ಬ ವ್ಯಕ್ತಿ 30ಕ್ಕೂ ಹೆಚ್ಚು ವರ್ಷ ಚಿತ್ರರಂಗದಲ್ಲಿ ಇರುವುದು, 140ಕ್ಕೂ ಅಧಿಕ ಸಿನಿಮಾ ನಾಯಕನಾಗಿ ನಟಿಸುವುದು ಎಂದರೆ ಅದು ತಮಾಷೆ ಮಾತಲ್ಲ.
ಒಬ್ಬ ನಟನಾಗಿ, ನಿರ್ದೇಶಕನಾಗಿ, ಟಿವಿ ನಿರೂಪಕನಾಗಿ, ನಿರ್ಮಾಪಕನಾಗಿ, ಬರಹಗಾರನಾಗಿ ಹೀಗೆ ಪ್ರತಿ ವಿಭಾಗದಲ್ಲಿಯೂ ಗೆದ್ದಿರುವ ರಮೇಶ್ ತಮ್ಮ ಇಡೀ ಬದುಕಿನ ಯಶಸ್ಸಿಗೆ ಕಾರಣವಾದ ಅಂಶಗಳನ್ನು ಬಿಚ್ಚಿಟ್ಟಿದ್ದಾರೆ. ಅಂದಹಾಗೆ, ನಾನ್ ನಿಮ್ಗೆ ಪ್ರಾಮಿಸ್ ಮಾಡ್ತೀನಿ ಅವರ ಈ ಮಾತುಗಳು ನಿಮ್ಗೆ ಖಂಡಿತ ಸ್ಫೂರ್ತಿ ನೀಡುತ್ತದೆ ಅಂತ.
ಸಂದರ್ಶನ : ನವಿ ಕನಸು (ನವೀನ್ ಎಂ ಎಸ್)
ನಮ್ಮ ಕಡೆ ಇರುವ ಜವಾಬ್ದಾರಿಗಳನ್ನು 100% ಮಾಡಬೇಕು
''ಪ್ರತಿಯೊಂದು ಸಂಬಂಧದಲ್ಲಿ ಎರಡು ಡೀಲ್ ಇರುತ್ತದೆ. ನಾನು - ನೀವು ಆಗಬಹುದು, ನಾನು - ನನ್ನ ಹೆಂಡತಿ ಆಗಿರಬಹುದು, ನಾನು - ಯಾವುದೇ ನಿರ್ಮಾಪಕರು.. ಹೀಗೆ ಯಾರೇ ಆಗಿರಬಹುದು, ಎರಡೂ ಕಡೆ ಜವಾಬ್ದಾರಿಗಳು ಇರುತ್ತದೆ. ಮೊದಲು ನಾವು ನಮ್ಮ ಕಡೆ ಇರುವ ಜವಾಬ್ದಾರಿಗಳನ್ನು 100% ಮಾಡಬೇಕು. ಅದು ಬಹಳ ಮುಖ್ಯ. ಸಣ್ಣ ಪುಟ್ಟ ಕೆಲಸಗಳಿಂದ ಹಿಡಿದು ದೊಡ್ಡ ಪ್ರಾಜೆಕ್ಟ್ ವರೆಗೆ ನಮ್ಮ ಕರ್ತವ್ಯವನ್ನು ಸರಿಯಾಗಿ ಮಾಡಿಬಿಡಬೇಕು.''
ಎಮೋಷನಲ್ ಬ್ಯಾಲೆನ್ಸ್ ಇರಬೇಕು
''ಇಂದಿನ ಯಂಗ್ ಸ್ಟರ್ಸ್ ಗಳು ಎಮೋಷನಲ್ ಬ್ಯಾಲೆನ್ಸ್ ಇಟ್ಟುಕೊಳ್ಳುವುದು ಬಹಳ ಮುಖ್ಯ. ಯಾವುದೇ ವಿಷಯಕ್ಕೆ ಇದ್ದಕ್ಕಿದ್ದ ಹಾಗೆ ಪ್ರತಿಕ್ರಿಯೆ ನೀಡುವುದು, ಇದ್ದಕ್ಕಿದ್ದ ಹಾಗೆ ಸಿಟ್ಟು ಮಾಡಿಕೊಳ್ಳುವುದು, ಇದ್ದಕ್ಕಿದ್ದ ಹಾಗೆ ಸಂತೋಷಪಡುವುದು ಮಾಡದೆ, ಎಮೋಷನಲ್ ಆಗಿ ಸಮತೋಲನವಾಗಿ ಇದ್ದರೇ, ಅದರಿಂದ ನಮಗೆ ತುಂಬ ಒಳ್ಳೆದಾಗುತ್ತದೆ.''
ರಮೇಶ್ ಅವರಿಗೆ ಜೀವನ ಹೇಳಿ ಕೊಟ್ಟ ನಾಲ್ಕು ಗುರುಗಳಿವರು
ಇವತ್ತಿನ ವರೆಗೂ ನಾನು ಯಾರ ಜೊತೆಗೂ ಜಗಳ ಮಾಡಿಲ್ಲ
''ನನಗೆ ಇವತ್ತಿಗೆ 54 ವರ್ಷ ಆಯ್ತು. ಇವತ್ತಿನ ವರೆಗೂ ನಾನು ಯಾರ ಜೊತೆಗೂ ಜಗಳ ಮಾಡಿಲ್ಲ. ಜಗಳ ಮಾಡುವ ರೀತಿಯ ಸಂದರ್ಭಗಳನ್ನೇ ನಾನು ಸೃಷ್ಟಿಸಿಕೊಳ್ಳುವುದಿಲ್ಲ. ಅದು ನನಗೆ ತುಂಬ ಸಹಾಯ ಮಾಡಿತು. ಆಸ್ತಿ, ಅಂತಸ್ತು ಏನನ್ನು ಕೇರ್ ಮಾಡದೆ, ಎಲ್ಲರಿಗೂ ಅದೇ ರೀತಿಯ ಮರ್ಯಾದೆ ಕೊಟ್ಟು, ಎಲ್ಲರ ಜೊತೆಗೆ ಪ್ರೀತಿ ಇಂದ ಇದ್ದು ಬಿಟ್ಟರೆ, ಅದು ದೊಡ್ಡ ಪ್ಲಸ್ ಪಾಯಿಂಟ್.''
ಪ್ರತಿಯೊಬ್ಬರಲ್ಲಿ ನಿರಂತರ ಕಲಿಕೆ ಇರಬೇಕು
''ನಿರಂತರವಾಗಿ ಎಲ್ಲವನ್ನು ಕಲಿಯುತ್ತಿರಬೇಕು. ನಾನು ದಿನ ಏನಾದರೂ ಓದುತ್ತೇನೆ. ಸಿನಿಮಾ ಬಗ್ಗೆ ತಿಳಿದುಕೊಳ್ಳುತ್ತೇನೆ, ಹೊಸ ಕ್ಯಾಮರಾ ಇರಬಹುದು ಅವರ ಬಗೆ ಗಮನ ಹರಿಸುತ್ತೇನೆ. ಪ್ರತಿಯೊಬ್ಬರಲ್ಲಿ ನಿರಂತರ ಕಲಿಕೆ ಇರಬೇಕು. ಆ ರೀತಿಯದ ಒಂದು ಕುತೂಹಲ ಲಾಂಗ್ ರನ್ ಗೆ ಬಹಳ ಮುಖ್ಯ.''
ರಮೇಶ್ ಹುಟ್ಟುಹಬ್ಬಕ್ಕೆ 'ಕೋಟ್ಯಧಿಪತಿ' ಕಡೆಯಿಂದ ಸರ್ಪ್ರೈಸ್ ಗಿಫ್ಟ್
ಸೋಲುವುದು ತಪ್ಪೇ ಅಲ್ಲ.. ಸೋಲು ಗ್ಯಾರಂಟಿ..
''ಸೋಲುವುದು ತಪ್ಪೇ ಅಲ್ಲ ಸೋಲು ಗ್ಯಾರಂಟಿ. ಎಲ್ಲರ ಸೋಲು ಇನ್ನೊಂದು ತುದಿಯಲ್ಲಿ ಕಾಯುತ್ತಿರುತ್ತದೆ. ಸೋಲುವುದನ್ನು ತಪ್ಪಿಸಿಕೊಳ್ಳುತ್ತೇನೆ ಎನ್ನುವ ವ್ಯಕ್ತಿಗಿಂತ ದೊಡ್ಡ ಮೂರ್ಕ ಯಾರು ಇಲ್ಲ. ಸೋಲು ಇವತ್ತಲ್ಲ ನಾಳೆ ಬರುತ್ತದೆ ಆದರೆ, ಸೋಲನ್ನು ವೈಯಕ್ತಿಯವಾಗಿ ತೆಗೆದುಕೊಳ್ಳಬಾರದು. ಸೋಲುವುದಕ್ಕೆ ತುಂಬ ಕಾರಣಗಳು ಇರುತ್ತದೆ. ಎಲ್ಲ ಸೋಲಿಗೆ ನಾನೇ ಕಾರಣ ಎಂದುಕೊಳ್ಳಬಾರದು. ಸೋಲು ಕಲಿಸುವಷ್ಟು ಗೆಲುವು ಕಲಿಸುವುದಿಲ್ಲ. ಯೋಚನೆ ಮಾಡಿ ಹೆಜ್ಜೆ ಇಡಬೇಕು ಅಷ್ಟೆ''.
ಇಷ್ಟು ವರ್ಷದ ಜರ್ನಿಯಲ್ಲಿ ನಾನು ಲೇಟ್ ಹೋಗಿದ್ದೆ ಇಲ್ಲ
''ನನ್ನ ಜವಾಬ್ದಾರಿಯನ್ನು ನಾನು ಮಾಡುತ್ತೇನೆ. ನಟ ಆದರೆ ಅದರ ಕೆಲಸ, ನಿರ್ದೇಶಕನಾಗಿದ್ದರೆ ಅದರ ಕೆಲಸ ಸರಿಯಾಗಿ ಮಾಡುತ್ತೇನೆ. ನನ್ನ ಇಷ್ಟು ವರ್ಷದ ಜರ್ನಿಯಲ್ಲಿ ಯಾವುದೇ ಟಿವಿ ಶೋ, ಸಿನಿಮಾ ಸೆಟ್ ಗೆ ಲೇಟ್ ಹೋಗಿದ್ದೆ ಇಲ್ಲ. ನನ್ನ ಬಗ್ಗೆ ಯಾರೂ ಕಂಪ್ಲೆಂಟ್ ಮಾಡಿಲ್ಲ, ಅದೇ ರೀತಿ ನಾನು ಯಾರ ಬಗ್ಗೆಯೂ ಕಂಪ್ಲೆಂಟ್ ಮಾಡಿಲ್ಲ. ಎಲ್ಲರ ಜೊತೆಗೆ ಪ್ರೀತಿಯಿಂದ ನಡೆದುಕೊಂಡಿರುವುದು ನನಗೆ ಪ್ಲಸ್ ಆಯ್ತು.''
ಕರ್ನಾಟಕದ ಪ್ರತಿ ವಿಧ್ಯಾರ್ಥಿಯನ್ನು ಭೇಟಿ ಮಾಡಬೇಕು
''ಆಕ್ಟಿಂಗ್, ಡೈರೆಕ್ಷನ್, ಟಿವಿ ಶೋ ಎಲ್ಲವನ್ನು ಹೀಗೆ ಮುಂದುವರೆಸುತ್ತಲೇ ಇರುತ್ತೇನೆ. ನ್ಯಾಷನಲ್ ಲೆವೆಲ್ ನಲ್ಲಿ ಇಂಗ್ಲೀಷ್ ಶೋವೊಂದನ್ನು ಮಾಡಬೇಕು ಎಂಬ ಆಸೆ ಇದೆ. ಸ್ಟಾಂಡ್ ಅಪ್ ಕಾಮಿಡಿ, ದೊಡ್ಡ ಮ್ಯಾಸಿಕ್ ಶೋ (lion king musical) ರೀತಿಯಲ್ಲಿ ಮಾಡಬೇಕು ಎಂಬ ಕನಸಿದೆ. ಆರ್ 360 ಅಂತ ಒಂದು ಗ್ರೂಪ್ ಮಾಡಿಕೊಂಡಿದ್ದೇನೆ. ಅದರ ಮೂಲಕ ಕರ್ನಾಟಕದ ಪ್ರತಿ ವಿದ್ಯಾರ್ಥಿಯನ್ನು ಭೇಟಿ ಮಾಡಬೇಕು ಎನ್ನುವ ಯೋಜನೆ ಇದೆ. ಸರ್ಕಾರಿ ಸ್ಕೂಲ್ ಗಳಿಗೆ ಹೋಗಿ ಅಲ್ಲಿನ ಮಕ್ಕಳಲ್ಲಿ ಇರುವ ಸಂಗೀತ, ನೃತ್ಯ, ಚಿತ್ರಕಲೆ ರೀತಿಯ ಪ್ರತಿಭೆಗೆ ಶಕ್ತಿ ತುಂಬುವ ಕೆಲಸ ಅದು ''
ನನ್ನ ಮಕ್ಕಳಿಗೆ ಇದೇ ಮಾಡು ಎಂದು ಹೇಳುವುದಿಲ್ಲ
''ನನ್ನ ಮಕ್ಕಳಿಗೆ ಇದೇ ಮಾಡು ಎಂದು ಹೇಳುವುದಿಲ್ಲ. ನಮ್ಮ ತಂದೆಗೆ ನಾನು ಇಂಜಿನಿಯರ್ ಆಗಬೇಕು ಅಂತ ಇತ್ತು. ಆದರೆ, ನಾನು ಆಕ್ಟರ್ ಆದೆ. ಅವರೂ ಅದಕ್ಕೆ ಅಡ್ಡ ಬರಲಿಲ್ಲ. ಅದೇ ರೀತಿ ನನ್ನ ಮಕ್ಕಳಲ್ಲಿ ಇರುವ ಕನಸಿಗೆ ಸರ್ಪೋರ್ಟ್ ಮಾಡುತ್ತೇನೆ. ಮಗಳು ಕಾರ್ಪೋರೇಟ್ ಹಾಗೂ ಮಗ ಕಂಪ್ಯೂಟರ್ ಫೀಲ್ಡ್ ಅನ್ನು ಆಯ್ಕೆ ಮಾಡಿಕೊಂಡಿದ್ದಾರೆ.''
ನನಗೆ ವಿಶ್ ಮಾಡಿದ ಪ್ರತಿಯೊಬ್ಬರಿಗೆ ಥ್ಯಾಂಕ್ಯು
''ಪ್ರತಿ ವರ್ಷ ನನ್ನ ಬರ್ತ್ ಡೇ ತುಂಬ ಸಿಂಪಲ್ ಆಗಿ ಇರುತ್ತದೆ. ಎಲ್ಲ ಸ್ನೇಹಿತರು, ಹಿತೈಷಿಗಳು ವಿಶ್ ಮಾಡುತ್ತಿದ್ದಾರೆ. ಸೋಷಿಯಲ್ ಮೀಡಿಯಾಗಳಲ್ಲಿ ತುಂಬ ಗೆಳೆಯರು ಶುಭ ಕೋರುತ್ತಿದ್ದಾರೆ. ನನಗೆ ವಿಶ್ ಮಾಡಿದ ಪ್ರತಿಯೊಬ್ಬರಿಗೆ ಈ ಮೂಲಕ ಥ್ಯಾಂಕ್ಯು ಹೇಳುತ್ತೇನೆ. ಹುಟ್ಟುಹಬ್ಬದ ದಿನವೂ ಒಂದು ಹೊಸ ಸಿನಿಮಾದ ಸ್ಕ್ರಿಪ್ಟ್ ವರ್ಕ್ ನಡೆಯಿತು.''