Don't Miss!
- News ಉಕ್ರೇನ್ ವಿರುದ್ಧ ರಷ್ಯಾ ಗಂಭೀರ ಆರೋಪ!
- Lifestyle ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- Sports RR vs DC: ಅವೇಶ್ ಖಾನ್, ರಿಯಾನ್ ಪರಾಗ್ ಶೈನ್; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ವಿನ್
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಆರತಿಗೊಬ್ಬ ಕೀರ್ತಿಗೊಬ್ಬ'ದಲ್ಲಿ ದ್ವಿಪಾತ್ರದಲ್ಲಿದ್ದಾರೆ ತೇಜಸ್ ಗೌಡ
ಮೊದಲ ನೋಟಕ್ಕೆ ತಮಿಳು ನಟ ಅಜಿತ್ ಅವರನ್ನೇ ಹೋಲುತ್ತಾರೆ. ಆದರೆ ತೇಜಸ್ ಗೌಡ ಎನ್ನುವ ಹೆಸರೇ ಹೇಳುವಂತೆ ಇವರು ನಮ್ಮ ಅಪ್ಪಟ ಕನ್ನಡದ ಕಲಾವಿದ. ಪೂರ್ಣಚಂದ್ರ ತೇಜಸ್ವಿ ಎನ್ನುವ ಇವರ ಪೂರ್ಣ ಹೆಸರಿನಲ್ಲಂತೂ ಕನ್ನಡಿಗರ ಸ್ವಾಭಿಮಾನವೇ ಇದೆ! ಒನ್ ಟೈಮ್' ಎನ್ನುವ 15 ಮಂದಿ ನಿರ್ದೇಶಕರು ನಟಿಸಿದ್ದ ಚಿತ್ರದ ಮೂಲಕ ನಾಯಕನಾಗಿ ನಟಿಸಿದ ಇವರಿಗೆ ಕನ್ನಡದಲ್ಲಿ ಸರಿಯಾಗಿ ಬ್ರೇಕ್ ಸಿಗಲಿಲ್ಲ.
ಆದರೆ ತಮಿಳಲ್ಲಿ ಇವರು ನಟಿಸಿದ ಕಲ್ಯಾಣಮ ಕಲ್ಯಾಣಂ' ತುಂಬ ಜನಪ್ರಿಯವಾಗಿತ್ತು. ಅಜಿತ್ ಅವರನ್ನು ಹೋಲುವವನ ಪಾತ್ರದಲ್ಲಿ ತಲೈ ಪೋಲೆ ವರುಮಾ' ಎನ್ನುವ ಚಿತ್ರದಲ್ಲಿ ಇವರನ್ನು ನಾಯಕನಾಗಿ ಆರಿಸಲಾಯಿತು. ತೆಲುಗಲ್ಲಿಯೂ ಒಂದು ಧಾರಾವಾಹಿಯಲ್ಲಿ ನಟಿಸಿರುವ ತೇಜಸ್ ಇದೀಗ ಕನ್ನಡ ಧಾರಾವಾಹಿಯೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಆರತಿಗೊಬ್ಬ ಕೀರ್ತಿಗೊಬ್ಬ' ಧಾರಾವಾಹಿಯಲ್ಲಿ ದ್ವಿಪಾತ್ರವನ್ನು ನಿರ್ವಹಿಸಲಿದ್ದಾರೆ.
ಧಾರಾವಾಹಿಯಾದರೂ ತಮಿಳಲ್ಲಿ ಕನ್ನಡಕ್ಕಿಂತ ಅಧಿಕವೆನಿಸುವ ಸಂಭಾವನೆ ಪಡೆಯುತ್ತಿದ್ದ ತೇಜಸ್, ಅಲ್ಲಿ ಜನಪ್ರಿಯರೂ ಹೌದು. ಆದರೆ ಅವೆಲ್ಲವನ್ನೂ ಬಿಟ್ಟು ಕನ್ನಡದ ಧಾರಾವಾಹಿಗೆ ಮರಳಲು ಅವರಿಗೆ ತವರಿನ ಮೇಲಿರುವ ಅಭಿಮಾನದ ಜತೆಗೆ ಕಾರಣವಾಗಿರುವ ಇತರ ಅಂಶಗಳ ಬಗ್ಗೆ ಫಿಲ್ಮೀಬೀಟ್ ಜತೆಗೆ ವಿವರವಾಗಿ ಮಾತನಾಡಿದ್ದಾರೆ. ಮುಂದೆ ಓದಿ...
'ಆರತಿಗೊಬ್ಬ ಕೀರ್ತಿಗೊಬ್ಬ' ಧಾರಾವಾಹಿಯ ಪಾತ್ರವನ್ನು ಒಪ್ಪಿಕೊಳ್ಳಲು ಕಾರಣವೇನು?
ತಮಿಳು, ತೆಲುಗು ಧಾರಾವಾಹಿಗಳಲ್ಲಿ ನಟಿಸುತ್ತಿದ್ದೆ. ನನಗೆ ಧಾರಾವಾಹಿ ಒಪ್ಪಿಕೊಳ್ಳಲು ಪ್ರಮುಖ ಆಕರ್ಷಣೆಯಾಗಿ ಕಾಣಿಸಿದ್ದು, ನಿರ್ದೇಶಕ ಮೈಸೂರು ಮಂಜು ಸರ್. ಯಾಕೆಂದರೆ ಅವರ ನಿರ್ದೇಶನದ `ಅಗ್ನಿಸಾಕ್ಷಿ' ಧಾರಾವಾಹಿ ಕರ್ನಾಟಕದಲ್ಲಿ ಏನು ಇತಿಹಾಸ ಸೃಷ್ಟಿ ಮಾಡಿದೆ ಎನ್ನುವುದು ಎಲ್ಲರಂತೆ ನನಗೂ ಗೊತ್ತು. ಅಂಥ ನಿರ್ದೇಶಕರ, ನಿರ್ಮಾಣದ ನಮ್ಮ ಕನ್ನಡ ಧಾರಾವಾಹಿಯಲ್ಲಿ ಪಾತ್ರವಾಗುವುದು ಉತ್ತಮ ಅವಕಾಶ ಎನ್ನುವ ಕಾರಣಕ್ಕೆ ಒಪ್ಪಿಕೊಂಡೆ. ಮಾತ್ರವಲ್ಲ, ಇದೊಂದು ರಿಮೇಕ್ ಧಾರಾವಾಹಿಯಾಗಿದ್ದು, ಮೂಲ ತಮಿಳನ್ನು ನಾನು ನೋಡಿದ್ದೆ. ಅಲ್ಲಿ ನಾಯಕನ ದ್ವಿಪಾತ್ರ ನೋಡಿ ಮೆಚ್ಚಿದ್ದ ನನಗೆ ಅದೇ ಪಾತ್ರ ಕನ್ನಡದಲ್ಲಿ ದೊರಕಿರುವುದು ಖುಷಿ ನೀಡಿದೆ.
ಮೂಲ ಧಾರಾವಾಹಿ ನೋಡಿರುವ ಕಾರಣ ಕನ್ನಡದಲ್ಲಿ ನಿಮಗೆ ಸುಲಭವಾಗಲಿದೆಯೇ?
ನಮ್ಮ ನಿರ್ದೇಶಕರು ಮೂಲ ಕತೆಯ ಒಂದೆಳೆಯನ್ನು ತೆಗೆದುಕೊಂಡು ರಿಮೇಕ್ ಮಾಡುತ್ತಿದ್ದರೂ, ಸನ್ನಿವೇಶಗಳನ್ನು ಬೇರೆಯೇ ರೀತಿಯಲ್ಲಿ ಕಟ್ಟಿಕೊಡುತ್ತಿದ್ದಾರೆ. ನಮ್ಮ ನೇಟಿವಿಟಿಗೆ ತಕ್ಕಂತೆ ಬದಲಾಯಿಸುತ್ತಿರುವುದು, ಆಕರ್ಷಕ ಸಂಭಾಷಣೆಗಳನ್ನು ರಚಿಸಿರುವುದು ನನಗೆ ಕೂಡ ಹೊಸ ಧಾರಾವಾಹಿಯಂತೆಯೇ ಅನಿಸಿದೆ. ಅಲ್ಲದೆ ಇದುವರೆಗೆ ತಮಿಳು, ತೆಲುಗು ಸೀರಿಯಲ್ ಮಾತ್ರ ಮಾಡಿದ್ದ ಕಾರಣ, ನನಗೆ ಕನ್ನಡದಲ್ಲಿ ಸಂಪೂರ್ಣ ಹೊಸ ವಾತಾವರಣವಾಗಿದೆ.
ಪರಭಾಷಾ ಧಾರಾವಾಹಿಗಳ ಬಳಿಕ ಕನ್ನಡದ ಸೆಟ್ ನಲ್ಲಿ ಸೇರಿಕೊಂಡಾಗ ಹೇಗೆ ಅನಿಸುತ್ತದೆ?
ಡಬ್ಬಿಂಗ್ ಇರುವುದಿಲ್ಲ. ಡೈರೆಕ್ಟ್ ಆಗಿ ರೆಕಾರ್ಡ್ ಮಾಡಲಾಗುತ್ತದೆ. ಆದರೆ ಇಲ್ಲಿ ಆರಂಭದ ಎಪಿಸೋಡ್ ಗಳನ್ನು ಇಲ್ಲಿಯೂ ಸಂಭಾಷಣೆಗಳನ್ನು ಆಮೇಲೆ ಡಬ್ಬಿಂಗ್ ಮಾಡಿಕೊಳ್ಳಲಾಗುತ್ತಿದೆ. ಅಲ್ಲಿ ಸೆಟ್ ಗೆ ಹೋದರೆ ಕೆಲಸ ಆಯ್ತು, ನಮ್ ಪಾಡಾಯ್ತು ಎಂದು ವಾಪಾಸು ಬರುತ್ತಿದ್ದೆ. ಆದರೆ ಇಲ್ಲಿ ಎಲ್ಲರೂ ನಮ್ಮ ಭಾಷೆಯವರೇ ಹಾಗಾಗಿ ಸೆಟ್ ನಲ್ಲಿ ಹೆಚ್ಚು ಬೆರೆಯುತ್ತೇನೆ. ತಮಿಳಲ್ಲಿ ಸಿನಿಮಾ ಮಾಡಬೇಕೆಂದು ಹೋಗಿದ್ದೆ. ಆಗ ನೋಟ್ ಬ್ಯಾನ್ ಆದ ಕಾರಣ, ನಿರ್ಮಾಪಕರು ಸಂಕಷ್ಟಕ್ಕೊಳಗಾಗಿ ಆ ಪ್ರಾಜೆಕ್ಟ್ ಅರ್ಧಕ್ಕೆ ನಿಂತು ಹೋಯಿತು. ಆದರೆ ಅಲ್ಲಿನ ಪ್ರೇಕ್ಷಕರು ನನಗೆ ಒಬ್ಬ ಸಾಮಾನ್ಯ ಸಿನಿಮಾ ನಟನಿಗೆ ನೀಡುವ ಅಭಿಮಾನವನ್ನೇ ನೀಡಿದ್ದಾರೆ. ಇಲ್ಲಿ ಮನೆಗೆ ಬಂದಂಥ ಅನುಭವವಾಗುತ್ತಿದೆ.
ಮುಂದೆ ಸಿನಿಮಾಗಳಲ್ಲಿ ನಟಿಸುವ ಪ್ರಯತ್ನ ನಡೆಸುವುದಿಲ್ಲವೇ?
ನಿಜ ಹೇಳಬೇಕೆಂದರೆ ನನ್ನ ಒಂದು ಮಲಯಾಳಂ ಸಿನಿಮಾ ಈಗಾಗಲೇ ಚಿತ್ರೀಕರಣದ ಕೊನೆಯ ಹಂತದಲ್ಲಿದೆ. ತಮಿಳಲ್ಲಿಯೂ ಆಫರ್ ಗಳಿವೆ. ಅಲ್ಲಿನ `ತಲಾ ಅಜಿತ್ ಫ್ಯಾನ್ಸ್ ಅಸೋಸಿಯೇಶನ್' ಮಂದಿ ನನ್ನನ್ನು ಜ್ಯೂನಿಯರ್ ಅಜಿತ್ ಹಾಗೆ ಕಾಣುತ್ತಿದ್ದು, ಸಿನಿಮಾ ನೋಡಲು ಬಯಸುತ್ತಿದ್ದಾರೆ. ‘ಆರತಿಗೊಬ್ಬ ಕೀರ್ತಿಗೊಬ್ಬ' ಧಾರಾವಾಹಿಯ ಲಾಂಚ್ ಸಮಯದಲ್ಲಿಯೂ ಫ್ಯಾನ್ಸ್ ಅಸೋಸಿಯೇಶನ್ ನ ಚೆನ್ನೈ ಮತ್ತು ಬೆಂಗಳೂರು ತಂಡದ ಇಬ್ಬರು ಬಂದು ನನಗೆ ಶುಭ ಕೋರಿದ್ದಾರೆ. ಸಿನಿಮಾ ಕನಸು ಮುಂದುವರಿಯುತ್ತದೆ. ಒಳ್ಳೆಯ ಪ್ರಾಜೆಕ್ಟ್ ಸಿಕ್ಕರೆ ಖಂಡಿತವಾಗಿ ಚಿತ್ರನಟನಾಗಿ ಮುಂದುವರಿಯಲು ಸಿದ್ಧನಿದ್ದೇನೆ.
ವೈಯಕ್ತಿಕವಾಗಿ ನಿಮ್ಮ ಮೆಚ್ಚಿನ ನಟ ಮತ್ತು ಇತರ ಮೆಚ್ಚಿನ ವಿಚಾರಗಳ ಬಗ್ಗೆ ಹೇಳಿ
ನಿಜ ಹೇಳಬೇಕೆಂದರೆ ನಾನು ಅಜಿತ್ ಅವರ ಚಿತ್ರಗಳನ್ನಾಗಲೀ, ಸ್ಟೈಲನ್ನಾಗಲೀ ಫಾಲೋ ಮಾಡಿಲ್ಲ. ಆದರೆ ಸಿನಿಮಾರಂಗ ಇಷ್ಟಪಡಲು ಕಾರಣವಾಗಿದ್ದು ಡಾ. ರಾಜ್ ಕುಮಾರ್ ಅವರು. ಚಿಕ್ಕಂದಿನಿಂದಲೇ ನಾನು ಡಾ.ರಾಜ್ ಕುಮಾರ್ ಅವರು ಅಭಿಮಾನಿ. ಇಂದು ಸುದೀಪ್ ಅವರ ಚಿತ್ರಗಳನ್ನು ಇಷ್ಟಪಡುತ್ತೇನೆ. ನಾನು ಕೂಡ ಅವರ ತವರಾದ ಶಿವಮೊಗ್ಗದವನೇ. ಹಿಂದೆ ಕನ್ನಡ ರಾಜ್ಯೋತ್ಸವದ ಸಮಯದಲ್ಲಿ ಶನೀಶ್ವರ ದೇವಸ್ಥಾನದಲ್ಲಿ ಯುವಕರ ಸಂಘ ಕಟ್ಟಿಕೊಂಡಿದ್ದ ಅವರನ್ನು ಕಂಡಿದ್ದೇನೆ. ಹಾಗಾಗಿ ಅವರು ನನಗೆ ಇಷ್ಟವಾಗುತ್ತಾರೆ. ಉಳಿದಂತೆ ನನಗೆ ವ್ಯಾಯಾಮ, ವರ್ಕೌಟ್ ಮಾಡುವ ಅಭ್ಯಾಸ ಇವೆ. ಆಹಾರದ ವಿಚಾರಕ್ಕೆ ಬಂದರೆ ಮಟನ್ ಚಿಕನ್ ಎಂದರೆ ಇಷ್ಟ!