ನನ್ನ ಕೊನೆ ಉಸಿರಿನ ತನಕ ನನಗೆ ಫೇವರಿಟ್ ಸ್ಟಾರ್ ಶಿವಣ್ಣ: ಮಯೂರಿ
Recommended Video
ಯಾವುದೇ ಯುವ ಕಲಾವಿದರು ಯಾವುದೇ ಸ್ಟಾರ್ ಜತೆಗೆ ನಟಿಸುವಾಗ ಆ ಚಿತ್ರದ ಸೆಟ್ ನಲ್ಲಿ ಮತ್ತು ಆ ಸಂದರ್ಭದ ಮಾಧ್ಯಮಗೋಷ್ಠಿಗಳಲ್ಲಿ ತಮ್ಮ ಚಿತ್ರದ ತಾರೆಯೇ ತಮಗೆ ಫೇವರಿಟ್ ಎಂದು ಹೇಳುವುದು ಸಹಜ. ಆದರೆ ಶೂಟಿಂಗ್ ಮುಗಿದು ಚಿತ್ರ ತೆರೆಗೆ ಬಂದ ಮೇಲೆಯೂ ಅದೇ ಸ್ಟಾರ್ ನನ್ನ ಫೇವರಿಟ್ ಎಂದು ಹೇಳುವುದಾದರೆ ಅಲ್ಲಿ ಒಂದು ನೈಜವಾದ ಪ್ರೀತಿ, ಅಭಿಮಾನ ಇರುವುದು ಸತ್ಯ ಎಂದು ಗೋಚರವಾಗುತ್ತದೆ.
ಅಂಥದೊಂದು ಸತ್ಯವನ್ನು 'ಫಿಲ್ಮೀಬೀಟ್ ಕನ್ನಡ'ದ ಜತೆಯಲ್ಲಿ ಹಂಚಿಕೊಂಡಿದ್ದಾರೆ. ಚಂದನವನದ ಚಿಗರೆ ಕಂಗಳ ಚೆಲುವೆ ಮಯೂರಿ. ಇತ್ತೀಚಿಗಷ್ಟೆ 57ನೇ ವರ್ಷದ ಜನ್ಮದಿನ ಆಚರಿಸಿಕೊಂಡಿರುವ ಶಿವರಾಜ್ ಕುಮಾರ್ ಅವರ ಬಗ್ಗೆ ಮಾತನಾಡಿರುವ ಮಯೂರಿ ತಮ್ಮ ಮತ್ತು ಶಿವಣ್ಣನ ಜನ್ಮ ದಿನಾಚರಣೆಗಳು ಒಂದೇ ದಿನದ ವ್ಯತ್ಯಾಸದಲ್ಲಿರುವುದಾಗಿ ಹೇಳಿದ್ದಾರೆ.
ವಿಕಿಪೀಡಿಯದಲ್ಲಿ ತಮ್ಮ ಜನ್ಮದಿನಾಂಕ ತಪ್ಪಾಗಿದೆ. ಎಲ್ಲರೂ ಅದೇ ದಿನ ಶುಭ ಹಾರೈಸುತ್ತಾರೆ. ಆದರೆ ಇಲ್ಲಿ ನಾನೇ ನಿಜವಾದ ಡೇಟ್ ತಿಳಿಸಿದ್ದೇನೆ. ಜನ್ಮ ದಿನಾಂಕ ಜತೆಗಿರುವುದಕ್ಕಷ್ಟೇ ಅಲ್ಲ ಬೇರೆ ಯಾವ ಯಾವ ಕಾರಣಗಳಿಗೆ ಶಿವರಾಜ್ ಕುಮಾರ್ ಅವರು ತಮಗೆ ಇಷ್ಟ ಎನ್ನುವುದರ ಬಗ್ಗೆ ಮಯೂರಿ ವಿವರವಾದ ಮಾಹಿತಿ ನೀಡಿದ್ದಾರೆ.

ಚಿತ್ರರಂಗದಲ್ಲಿ ನೀವು ತುಂಬ ಮೆಚ್ಚುವ ಸ್ಟಾರ್ ನಟ ಯಾರು?
''ಸಾಮಾನ್ಯವಾಗಿ ಪ್ರತಿಯೊಬ್ಬ ಸ್ಟಾರ್ ನಟರು ಕೂಡ ಒಂದೊಂದು ಕಾರಣಕ್ಕಾಗಿ ಪರದೆಯ ಮೇಲೆ ಇಷ್ಟವಾಗುತ್ತಾರೆ. ಆದರೆ ಆಫ್ ಸ್ಕ್ರೀನ್ ವಿಚಾರಕ್ಕೆ ಬಂದರೆ ನಿಜಕ್ಕೂ ಹೇಳ್ತೀನಿ, ನಾನು ನೋಡಿರುವ ಎಲ್ಲ ಕಲಾವಿದರ ನಡುವೆಯೂ ನನ್ನ ಕೊನೆ ಉಸಿರಿನ ತನಕ ನನ್ನ ಫೇವರಿಟ್ ಆಗಿ ಉಳಿದುಕೊಳ್ಳುವುದು ಖಂಡಿತವಾಗಿ ಅದು ಶಿವಣ್ಣನೇ. ನಿಜವಾಗಿ ಇಂಥ ಸರಳ, ವಿರಳ ಪ್ರತಿಭಾವಂತ ನಟನನ್ನು ಪಡೆಯಲು ನಮ್ಮ ಕನ್ನಡ ಚಿತ್ರರಂಗ ಪುಣ್ಯ ಮಾಡಿದೆ ಅಂತಾನೇ ಹೇಳಬೇಕು.''

ಶಿವರಾಜ್ ಕುಮಾರ್ ನಿಮಗೆ ಹೆಚ್ಚು ಇಷ್ಟ ಆಗಲು ಕಾರಣವೇನು?
ಕನ್ನಡ ಚಿತ್ರರಂಗಕ್ಕೆ ಒಂದು ಪರ್ಯಾಯ ಪದ ಎಂಬಂತೆ ಗುರುತಿಸಿಕೊಂಡವರು ಡಾ.ರಾಜ್ ಕುಮಾರ್. ಅಂಥ ಲೆಜೆಂಡ್ ಜತೆ ಭೇಟಿಯಾಗುವ ಅವಕಾಶ ನನಗೆ ದೊರಕಲಿಲ್ಲ. ಆದರೆ, ಅವರ ಪುತ್ರ ಮಾತ್ರವಲ್ಲದೆ, ಇಂದು ಕನ್ನಡ ಚಿತ್ರರಂಗದಲ್ಲಿ ಅತ್ಯಂತ ಬೇಡಿಕೆಯ ಸ್ಟಾರ್ ಆಗಿ ಗುರುತಿಸಿಕೊಂಡಿರುವವರು ಶಿವರಾಜ್ ಕುಮಾರ್. ಮಾತ್ರವಲ್ಲ ಬಾಲ್ಯದಿಂದಲೇ ಶಿವಣ್ಣನ ಎನರ್ಜಿ, ಸರಳತೆಯ ಕುರಿತಾದ ಹಲವಾರು ಕತೆಗಳನ್ನು ಕೇಳಿದ್ದೆ. ಅವೆಲ್ಲವೂ ನನ್ನನ್ನು ತುಂಬ ಇಂಪ್ರೆಸ್ ಮಾಡಿದ್ದವು. ಈ ಎಲ್ಲ ಕಾರಣಗಳಿಂದ ಶಿವಣ್ಣ ನನಗೆ ಫೇವರಿಟ್. ಜತೆಗೆ ನನ್ನ ಮತ್ತು ಅವರ ಬರ್ತ್ ಡೇಗಳು ಕೂಡ ಒಂದೇ ದಿನದ ವ್ಯತ್ಯಾಸದಲ್ಲಿವೆ. ಪ್ರಸ್ತುತ ವಿದೇಶದಲ್ಲಿರುವ ಅವರಿಗೆ ಫಿಲ್ಮೀಬೀಟ್ ಮೂಲಕ ಶುಭಾಶಯಗಳು.

ಶಿವಣ್ಣನನ್ನು ಭೇಟಿಯಾದಾಗ ಅವರ ಬಗ್ಗೆ ಕೇಳಿದ್ದ ಕತೆಗಳಲ್ಲಿ ನಿಜವಿದೆ ಅನಿಸಿತೇ?
''ಮೊದಲ ಭೇಟಿಯಿಂದಲೇ ಅವರ ಬಗ್ಗೆ ಕೇಳಿದ್ದೆಲ್ಲವೂ ನಿಜ ಎಂಬ ಅರಿವಾಗಿದೆ. ಆದರೆ ನಾನು ಕಂಡಂತೆ ಅವರಿಗೊಂದು ವಿಶೇಷ ಗುಣ ಇದೆ. ಅವರು ಎಲ್ಲರನ್ನೂ ಪ್ರೀತಿಯಿಂದ ಮಾತನಾಡಿಸುತ್ತಾರೆ ನಿಜ. ಇತರರ ಮುಂದೆ ತಮ್ಮ ಬಗ್ಗೆ ಹೇಳಿಕೊಳ್ಳುವುದಿಲ್ಲ ಎನ್ನುವುದು ಕೂಡ ಸತ್ಯ. ಆದರೆ ಶಾಟ್ ಬಳಿಕ ಸೆಟ್ ನಲ್ಲಿ ತಮ್ಮನ್ನು ತಾವೇ ಮೆಚ್ಚಿಕೊಳ್ತಾರೆ.! ಮಾನಿಟರ್ ನೋಡಿ ತಮ್ಮ ನಟನೆಯನ್ನು ತಾವೇ ಆಸ್ವಾದಿಸುತ್ತಾರೆ. ನಾವು ಕೂಡ ಅವರ ಜತೆಗಿದ್ದರೆ ನೋಡಿ ಏನ್ ಚೆನ್ನಾಗಿ ಆಕ್ಟಿಂಗ್ ಮಾಡಿದ್ದಾನೆ ಶಿವಣ್ಣ ಎಂದು ನಗೋರು. ನಿಮಗೆ ಇದು ತಮಾಷೆ ಅನಿಸಬಹುದು. ಆದರೆ ಟೇಕ್ ಗೆ ಮುನ್ನ ಕನ್ನಡಿ ತೋರಿಸಿದ್ರೂ ಸಹ ಅದನ್ನೊಮ್ಮೆ ನೋಡಿ, ನೀನು ಬಿಡು ಸೂಪರ್ ಆಗಿದ್ದೀಯ ಎಂದು ನಗೋರು. ನಿಜಕ್ಕೂ ಇದರಲ್ಲಿ ಒಂದು ಆತ್ಮವಿಶ್ವಾಸದ ಔಷಧ ಇದೆ ಎಂದೇ ನನ್ನ ಅಭಿಪ್ರಾಯ. ಯಾಕೆಂದರೆ, ಸದಾ ಪಕ್ಕದವರ ಊಟದ ತಟ್ಟೇನೇ ಅದ್ಭುತ, ಎಂದು ಕೊರಗುವವರ ನಡುವೆ, ಶಿವಣ್ಣನ ಥರ ಸೆಲ್ಫ್ ಬೂಸ್ಟಿಂಗ್ ಅಭ್ಯಾಸ ಮಾಡ್ಕೊಂಡು ಬಿಟ್ಟರೆ ನಮಗೆ ಒಳ್ಳೆಯದು.''

'ರುಸ್ತುಂ' ಸಿನಿಮಾ ಚಿತ್ರೀಕರಣದ ವೇಳೆ ಅವರ ಜತೆಗೆ ನಡೆದ ಏನಾದರೂ ಅವಿಸ್ಮರಣೀಯ ಘಟನೆಗಳು ಇವೆಯೇ?
''ನನ್ನ ಮತ್ತು ಶಿವಣ್ಣನ ಭೇಟಿ, ಜತೆಯಾಗಿ ನಟಿಸುವ ಸಂದರ್ಭಕ್ಕೆ ಕಾರಣವಾಗಿದ್ದು 'ರುಸ್ತುಂ' ಚಿತ್ರ ಎನ್ನುವುದನ್ನು ಹೇಳಲೇಬೇಕು. 'ರುಸ್ತುಂ' ಸಿನಿಮಾ ಸೆಟ್ ನಲ್ಲಿ ಇದ್ದಂಥ ಮತ್ತೋರ್ವ ಆಕರ್ಷಣೆ ಬಾಲಿವುಡ್ ನಟ ವಿವೇಕ್ ಒಬೇರಾಯ್ ಅವರು. ಶಿವಣ್ಣನ ಮೇಲೆ, ರಾಜಕುಮಾರ್ ಫ್ಯಾಮಿಲಿಯ ಮೇಲೆ ಇಟ್ಟಿರುವಂಥ ಅಭಿಮಾನ ಎದ್ದು ಕಾಣುತ್ತಿತ್ತು. ಮಾತ್ರವಲ್ಲ ಅವರೇ ಒಂದು ಘಟನೆಯ ಬಗ್ಗೆ ಕೂಡ ಹೇಳಿಕೊಂಡರು. ಅವರ ಮಾವ ಕರ್ನಾಟಕದ ರಾಜಕಾರಣಿಯಾಗಿದ್ದ (ಜೀವರಾಜ್ ಆಳ್ವ) ಕಾರಣ ಅವರು ಡಾ. ರಾಜ್ ಬಗ್ಗೆ ಮಾತನಾಡುತ್ತಾ ಅವರಿಗೆ ಮುಖ್ಯಮಂತ್ರಿಯೇ ಆಗಿಬಿಡುವಷ್ಟು ಅವಕಾಶಗಳಿದ್ದರೂ ರಾಜಕೀಯ ಕ್ಷೇತ್ರಕ್ಕೇ ಕಾಲಿಡಲಿಲ್ಲ. 'ಜನರೇ ನನ್ನನ್ನು ರಾಜಕುಮಾರ ಮಾಡಿರಬೇಕಾದರೆ ನಾನೇಕೆ ಮಂತ್ರಿಯಾಗಲಿ?' ಎಂದಿದ್ದನ್ನು ನೆನಪಿಸಿ ಅಚ್ಚರಿ ಪಡುತ್ತಿದ್ದುದಾಗಿ ಹೇಳಿದರು. ಸಾಮಾನ್ಯವಾಗಿ ಪ್ರತಿ ಸೀನ್ ಆದ ಮೇಲೆ ತಾವಾಯಿತು ತಮ್ಮ ಕೆಲಸ ಆಯಿತು ಎಂದು ಸುಮ್ಮನಿರುತ್ತಿದ್ದ ವಿವೇಕ್ ಒಬೇರಾಯ್ ಅವರು ಸೆಟ್ ನಲ್ಲಿ ಅಷ್ಟೊಂದು ಬೆರೆತು ಮಾತನಾಡಲಿಕ್ಕು ಕೂಡ ಶಿವಣ್ಣನ ವರ್ತನೆಗಳೇ ಕಾರಣ ಎಂದರೆ ಅಚ್ಚರಿ ಇಲ್ಲ.


Click it and Unblock the Notifications











