Don't Miss!
- News DK Shivakumar: ಕಾಂಗ್ರೆಸ್ ಭವಿಷ್ಯದಲ್ಲಿ ನನ್ನನ್ನು ಸಿಎಂ ಮಾಡಲಿದೆ
- Automobiles ಅಡ್ವೆಂಚರ್ ಬೈಕ್ ಪ್ರಿಯರಿಗೆ ಸಿಹಿಸುದ್ದಿ: ಬಿಡುಗಡೆಗೆ ಸಜ್ಜಾದ ಸುಜುಕಿ V-Strom 800 DE ಬೈಕ್
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Lifestyle ವಿಭಿನ್ನ ಶೈಲಿಯಲ್ಲಿ ಮೊಟ್ಟೆ ಸಾಂಬಾರ್ ಮಾಡಿ..! ಇಲ್ಲಿದೆ ಸಿಂಪಲ್ ಅಡುಗೆ
- Sports IPL 2024: ಕೆಕೆಆರ್ ವಿರುದ್ಧದ ಪಂದ್ಯಕ್ಕೂ ಮುನ್ನ ಕ್ರಿಕೆಟ್ ಬಿಟ್ಟು ಆರ್ಸಿಬಿ ಆಟಗಾರರು ಮಾಡಿದ್ದೇನು?
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಕುಂಗ್ ಫು' ಕಲಿತು ಆಕ್ಷನ್ ಸಿನಿಮಾ ಮಾಡುವಾಸೆ ಎಂದ 'ದಮಯಂತಿ' ರಾಧಿಕಾ!
Recommended Video
ರಾಧಿಕಾ ಕುಮಾರಸ್ವಾಮಿ ಎಂದರೆ ರಮ್ಯ, ಸೌಮ್ಯ ಚೆಲುವು ಎಂದುಕೊಂಡಿದ್ದವರೇ ಹೆಚ್ಚು. ಆದರೆ ಉಗ್ರವಾಗಿ ಕೆಂಗಣ್ಣು ಬಿಟ್ಟು ಕೂಡ ಹೇಗೆ ಆಕರ್ಷಕ ನಟನೆ ನೀಡಬಲ್ಲೆ ಎಂದು ದಮಯಂತಿ ಮೂಲಕ ತೋರಿಸಿದ್ದಾರೆ. ಚಿತ್ರದ ಟೀಸರ್ ಒಂದರಲ್ಲೇ ಅಷ್ಟೊಂದು ಗಮನ ಸೆಳೆದ ಈ ನಟಿ ದಮಯಂತಿಯಾಗಿ ಹೇಗೆಲ್ಲ ನಟಿಸಿದ್ದಾರೆ ಎನ್ನುವ ಕುತೂಹಲ ಎಲ್ಲರಲ್ಲಿಯೂ ತುಂಬಿದೆ.
ಸಾಲದ್ದಕ್ಕೆ ಚಿತ್ರೀಕರಣದ ವೇಳೆ ತಮ್ಮ ಸಮರ್ಪಣಾ ಮನೋಭಾವದಿಂದ ತಂಡದ ಗಮನ ಸೆಳೆದಿದ್ದಾರೆ. ನಿರ್ದೇಶಕರು ರೆಸ್ಟ್ ತೆಗೆದುಕೊಳ್ಳಲು ಸಲಹೆ ನೀಡಿದರೂ, ಚಿತ್ರತಂಡವನ್ನು ಕಾಯಿಸಬಾರದು ಎನ್ನುವ ಕಾರಣ ನೀಡಿ, ಲೆನ್ಸ್ ಧರಿಸಿದ ಕಣ್ಣುಗಳಿಂದ ತಾಸುಗಟ್ಟಲೆ ನಟಿಸಿ ಕಣ್ಣಿಗೆ ಅಪಾಯವಾಗುವ ಹಂತವನ್ನು ಕೂಡ ತಲುಪಿದ್ದರಂತೆ. ಅದೃಷ್ಟವಶಾತ್ ಆ ಕ್ಷಣದ ನೋವು ಬಿಟ್ಟರೆ ಕಣ್ಣುಗಳಿಗೆ ದೊಡ್ಡ ದುರಂತವೇನೂ ಸಂಭವಿಸಿಲ್ಲ.
ರಾಧಿಕಾ ಕುಮಾರಸ್ವಾಮಿ ಹುಟ್ಟುಹಬ್ಬದ ಖುಷಿ ಹೆಚ್ಚು ಮಾಡ್ತಾರೆ ದರ್ಶನ್
ಇಂದು ಸಂಜೆ ಚಿತ್ರದ ಆಡಿಯೋ ಬಿಡುಗಡೆಯನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ನೆರವೇರಿಸುತ್ತಿದ್ದಾರೆ. ಅದಕ್ಕೂ ಮೊದಲು ರಾಧಿಕಾ ಅವರು ಈ ಬಾರಿಯ ತಮ್ಮ ಜನ್ಮದಿನದ ವಿಶೇಷ ಮತ್ತು ಮುಂದಿನ ಪ್ರಾಜೆಕ್ಟ್ ಗಳ ಕುರಿತು ಸವಿವರ ಮಾಹಿತಿಯನ್ನು ಫಿಲ್ಮೀಬೀಟ್ ಜತೆಗೆ ಇಲ್ಲಿ ಹಂಚಿಕೊಂಡಿದ್ದಾರೆ. ಮುಂದೆ ಓದಿ....
ಮೊದಲನೆಯದಾಗಿ ಜನ್ಮದಿನದ ಶುಭಾಶಯಗಳು. ಆಚರಣೆಯ ವಿಶೇಷಗಳೇನಿವೆ?
ವಂದನೆಗಳು. ಈ ಬಾರಿ `ದಮಯಂತಿ' ಚಿತ್ರದ ಆಡಿಯೋ ಬಿಡುಗಡೆ ಒಂದೇ ವಿಶೇಷ! ಯಾಕೆಂದರೆ ವೈಯಕ್ತಿಕವಾಗಿ ಈ ಬಾರಿ ನಾನು ಜನ್ಮದಿನಾಚರಣೆ ಮಾಡಿಕೊಳ್ಳುತ್ತಿಲ್ಲ. ಕಾರಣ ನನ್ನ ತಂದೆ ತೀರಿ ಹೋಗಿ ಇದೇ 19ಕ್ಕೆ 6 ತಿಂಗಳಾಗುತ್ತಿದೆ ಅಷ್ಟೇ. ಅವರಿಗೆ ಮಂಗಳೂರಲ್ಲಿದ್ದಾಗ ಜ್ವರ ಕಾಣಿಸಿಕೊಂಡಿತ್ತು. ಅಂದು ಮಂಗಳೂರಿನ ಮನೆಯಲ್ಲಿ ನೇಮ(ಭೂತಾರಾಧನೆ) ನಡೆದಿತ್ತು. ತಮಗೆ ಅನಾರೋಗ್ಯ ಎನ್ನುವ ಕಾರಣಕ್ಕೆ ಪೂಜೆ ನಿಲ್ಲಿಸಬಾರದು ಎಂದು ಅವರು ನನಗೆ ತಾಕೀತು ಮಾಡಿದ್ದರು. ರಾತ್ರಿ ಎಲ್ಲರಲ್ಲಿಯೂ ಚೆನ್ನಾಗಿಯೇ ಮಾತನಾಡಿದ್ದರಂತೆ. ಬೆಳಗ್ಗಿನ ಜಾವ ಪೂಜೆ ಮುಗಿಯುತ್ತಿದ್ದ ಹಾಗೆ ಬೆಂಗಳೂರಿನಿಂದ ಫೋನ್ ಬಂತು, ಅವರಿಗೆ ಹೃದಯಾಘಾತವಾಗಿದೆ ಎಂದು! ಅವರ ಅಗಲಿಕೆಯ ನೋವು ಸಹಜವಾಗಿ ನನ್ನಲ್ಲಿ ಈಗಲೂ ಇದೆ. ಆದರೆ ಇಂದು ಇಷ್ಟು ದೊಡ್ಡ ಬಜೆಟ್ ಹಾಕಿ `ದಮಯಂತಿ' ಚಿತ್ರ ನಿರ್ಮಿಸಿರುವ ನಿರ್ಮಾಪಕರಿಗೆ, ಚಿತ್ರದ ಪ್ರಚಾರಕ್ಕೆ ಯಾವುದೇ ತೊಂದರೆ ಆಗಬಾರದು ಎನ್ನುವ ಕಾರಣಕ್ಕೆ ಜನ್ಮದಿನದ ಸಂಭ್ರಮವಾಗಿ ಆಡಿಯೋ ಬಿಡುಗಡೆ ಕಾರ್ಯಕ್ರಮ ಹಾಕಿಕೊಳ್ಳಲು ಒಪ್ಪಿಕೊಂಡೆ.
'ದಮಯಂತಿ' ರಾಧಿಕಾ ಕುಮಾರಸ್ವಾಮಿ ಮತ್ತೆ ಸುದ್ದಿಯಲ್ಲಿರುವುದು ಇದೇ ಕಾರಣಕ್ಕೆ!
ಒಂದು ಬ್ರೇಕ್ ತೆಗೆದುಕೊಂಡು ಮರಳಿದಾಗ ನಿಮಗೆ ನಟನೆ ಹೇಗೆ ಅನಿಸುತ್ತಿದೆ?
ಮದುವೆ ಟೈಮಲ್ಲಿ ಇನ್ನು ಮುಂದೆ ನಟನೆಗೆ ಮರಳುವುದೇ ಬೇಡ ಎಂದುಕೊಂಡಿದ್ದೆ. ಆ ದಿನಗಳಲ್ಲಿ ಸಾಮಾನ್ಯವಾಗಿ ಯಾವುದೇ ನಾಯಕಿಗೆ ಮದುವೆಯ ಬಳಿಕ ಮತ್ತೆ ನಾಯಕಿಯಾಗುವ ಅವಕಾಶ ಸಿಗುವುದು ಕಷ್ಟವಿತ್ತು. ಅಲ್ಲದೆ ಎರಡನೇ ಇನ್ನಿಂಗ್ಸ್ ಆರಂಭ ಮಾಡುವಾಗ ವಿವಾಹಿತೆಯೆನ್ನುವ ಜವಾಬ್ದಾರಿ ಇದ್ದ ಕಾರಣ, ಗ್ಲಾಮರ್ ಪ್ರದರ್ಶನಕ್ಕೆ ಒತ್ತು ಕೊಡುವ ಪಾತ್ರಗಳನ್ನು ಮಾಡುವಂತೆಯೂ ಇರಲಿಲ್ಲ. ಆದರೆ ಈಗ `ದಮಯಂತಿ'ಯ ಮೂಲಕ ಪ್ರವೇಶ ಮಾಡಿರುವ ಜಾನರ್ ಖಂಡಿತವಾಗಿಯೂ ಗ್ಲಾಮರ್ ಗಿಂತಲೂ ಅಭಿನಯದ ಗ್ರಾಮರ್ ಗೆ ಹೆಚ್ಚು ಮಹತ್ವ ನೀಡಿರುವುದನ್ನು ಕಾಣಬಹುದು.
ರಾಜೇಂದ್ರ ಪೊನ್ನಪ್ಪ ಚಿತ್ರದಲ್ಲಿ ನೀವು ಕೊಡವ ಡ್ರೆಸ್ ನಲ್ಲಿ ಕಾಣಿಸಲಿದ್ದೀರ?
ಇಲ್ಲ. ಅದರಲ್ಲಿ ನನ್ನ ಪಾತ್ರದ ಚಿತ್ರೀಕರಣ ಪೂರ್ತಿಯಾಗಿದೆ. ಪಾತ್ರ ಚೆನ್ನಾಗಿತ್ತು. ಆದರೆ ಕೊಡವ ಮಹಿಳೆಯ ವಸ್ತ್ರಧಾರಣೆ ನನಗಂತೂ ಇರಲಿಲ್ಲ. ಸೀರೆ, ಲಂಗ ದಾವಣಿಯಲ್ಲೇ ಕಾಣಿಸಿಕೊಂಡಿದ್ದೇನೆ. ಬಹುತೇಕ ಚಿತ್ರೀಕರಣ ಎಲ್ಲ ಚಿಕ್ಕಮಗಳೂರಿನಲ್ಲಿ ನಡೆದಿತ್ತು. ರವಿಸರ್ ಗೆ ಡಾಕ್ಟರೇಟ್ ಗೌರವ ದೊರಕಿರುವ ವಿಷಯ ತಿಳಿಯಿತು. ಅದು ಅವರಿಗೆ ಮಾತ್ರವಲ್ಲ, ಕನ್ನಡ ಚಿತ್ರರಂಗಕ್ಕೆ ಹೆಮ್ಮೆಯ ವಿಚಾರ ಎನ್ನಬಹುದು. ಈ ಸಂದರ್ಭದಲ್ಲಿ ನಿಮ್ಮ ಮೂಲಕ ಅವರಿಗೆ ನಾನು ಅಭಿನಂದನೆಗಳನ್ನು ಸಲ್ಲಿಸುತ್ತೇನೆ.
ರಾಜಕೀಯ ಪ್ರವೇಶದ ಯೋಜನೆ ಏನಾದರೂ ಇದೆಯ?
ನಾನು ಯಾವುದನ್ನೂ ಯೋಜನೆ ಹಾಕಿ ಮಾಡಿದವಳಲ್ಲ. ಉದಾಹರಣೆಗೆ ನಟಿಯಾಗಬೇಕು ಎನ್ನುವ ಕನಸಿದ್ದರೂ, ಇಷ್ಟು ದೊಡ್ಡ ಚಿತ್ರಗಳಿಗೆ ನಾಯಕಿಯಾಗಬೇಕು ಎನ್ನುವ ಯೋಜನೆ ಹಾಕಿ ವೃತ್ತಿ ಬದುಕು ಶುರು ಮಾಡಿರಲಿಲ್ಲ. ಆದರೆ ಅದೃಷ್ಟ ಇಲ್ಲಿಗೆ ಕರೆ ತಂದಿದೆ. ಅದೇ ರೀತಿ ಚಿತ್ರರಂಗಕ್ಕೆ ಬಂದ ಆರಂಭದ ದಿನಗಳಿಂದಲೂ ಅನಾಥಾಶ್ರಮ, ವೃದ್ಧಾಶ್ರಮಗಳನ್ನು ಸ್ಥಾಪಿಸಿ ಸಹಾಯ ಹಸ್ತ ಚಾಚುವ ಕನಸಿತ್ತು. ಹಾಗಂತ ಅದಕ್ಕಾಗಿ ರಾಜಕಾರಣಿಯಾಗುವ ಕನಸೇನೂ ಕಟ್ಟಿಲ್ಲ. ಆದರೆ ಎಲ್ಲ ಪಕ್ಷಗಳಲ್ಲಿಯೂ ನನಗೆ ಆತ್ಮೀಯರಿದ್ದಾರೆ. ಹಾಗಾಗಿ ರಾಜಕೀಯದ ಪ್ರವೇಶವನ್ನು ಕೂಡ ನಿರಾಕರಿಸುತ್ತೇನೆ ಎಂದು ಹೇಳಲಾರೆ.
ರಾಜಕೀಯ ಎಂಟ್ರಿ ಬಗ್ಗೆ ರಾಧಿಕಾ ಕುಮಾರಸ್ವಾಮಿ ಹೇಳಿದ್ದೇನು?
ಉಪೇಂದ್ರ ಅವರ `ಪ್ರಜಾಕೀಯ’ದ ಬಗ್ಗೆ ನಿಮ್ಮ ಅನಿಸಿಕೆ ಏನು?
ಉಪೇಂದ್ರ ಅವರು ಒಂದು ಯೋಜನೆ ಹಾಕಿದ್ದಾರೆ ಎಂದರೆ ಅದರಲ್ಲಿ ಬುದ್ಧಿವಂತಿಕೆಯ ದಾರಿ ಇರುತ್ತದೆ ಎನ್ನುವ ಸಂಪೂರ್ಣ ನಂಬಿಕೆ ಇದೆ. ಯಾಕೆಂದರೆ ಅದನ್ನು ಅವರ ಸಿನಿಮಾಗಳೇ ಸಾಬೀತು ಮಾಡಿವೆ. ಅದೇ ರೀತಿ ಅವರು ಚಿತ್ರರಂಗದಲ್ಲಿ ಕೂಡ ಅಜಾತ ಶತ್ರು. ಅವರ ಪ್ರಜಾಕೀಯಕ್ಕೆ ಪ್ರತಿಯೊಬ್ಬರು ಬೆಂಬಲ ಸೂಚಿಸಿದ್ದಾರೆ. ಅವರ ಪಕ್ಷದ ಕಾರ್ಯವಿಧಾನಗಳು ಹೇಗಿರುತ್ತವೆ ಎನ್ನುವ ಬಗ್ಗೆ ನನಗೆ ಹೆಚ್ಚು ಅರಿವಿಲ್ಲ. ಆದರೆ ಒಂದೇ ಉದ್ಯಮದ ಕಲಾವಿದೆಯಾಗಿದ್ದುಕೊಂಡು ನಾನು ಅವರ ಪ್ರಯತ್ನಕ್ಕೆ ಶುಭ ಕೋರುತ್ತೇನೆ.
ಇತ್ತೀಚೆಗೆ ದೊಡ್ಡ ಹೆಸರು ಮಾಡುತ್ತಿರುವ ತುಳು ಚಿತ್ರರಂಗದ ಬಗ್ಗೆ ಏನು ಹೇಳುತ್ತೀರಿ?
ಖಂಡಿತವಾಗಿ ಖುಷಿಯಿದೆ. ತುಳು ಸಿನಿಮಾಗಳಿಗೆ ಆರಂಭ ಕಾಲದಿಂದಲೂ ಮಂಗಳೂರಿನಂತೆ ಮುಂಬೈನಲ್ಲೂ ಪ್ರೇಕ್ಷಕರಿದ್ದರು. ಐಶ್ವರ್ಯಾ ರೈ, ಶಿಲ್ಪಾ ಶೆಟ್ಟಿ, ಸುನೀಲ್ ಶೆಟ್ಟಿಯಂಥ ಹಲವರು ಕನ್ನಡ ಸೇರಿದಂತೆ ಬಾಲಿವುಡ್ನಲ್ಲಿ ಸ್ಟಾರ್ ಗಳಾಗಿದ್ದನ್ನೂ ನೋಡಿದ್ದೇವೆ. ಆದರೆ ಇತ್ತೀಚೆಗೆ ತುಳು ಚಿತ್ರಗಳು ಬೆಂಗಳೂರಲ್ಲಿ ಕೂಡ ಯಶಸ್ವಿ ಪ್ರದರ್ಶನ ಕಾಣುತ್ತಿರುವುದು ಕಂಡು ಖುಷಿಯಾಗಿದೆ. ನಮ್ಮ ಕನ್ನಡ ಸಿನಿಮಾಗಳು ಏನು ಪ್ಯಾನ್ ಇಂಡಿಯಾ ಪ್ರದರ್ಶನದೊಂದಿಗೆ ಗುರುತಿಸಲ್ಪಡುತ್ತಿದೆಯೋ ಅದೇ ರೀತಿ, ನಮ್ಮದೇ ರಾಜ್ಯದ ತುಳು ಚಿತ್ರಗಳು ಪ್ಯಾನ್ ಕರ್ನಾಟಕ ಪ್ರದರ್ಶನ ಕಾಣುವಂತಾಗಲಿ.
ಇನ್ನಷ್ಟು ಹೊಸ ಪ್ರಾಜೆಕ್ಟ್ ಗಳಲ್ಲಿ ತೊಡಗಿಸಿಕೊಳ್ಳುವ ಸೂಚನೆ ನೀಡಿದ್ದೀರಿ?
ಹೌದು. ದಮಯಂತಿಯ ರಾಣಿ ಲುಕ್ ಬಳಿಕ, ಭೈರಾದೇವಿಯಲ್ಲಿ ಅಘೋರಿ ಗೆಟಪ್ ನಲ್ಲಿ ಕಾಣಿಸಿಕೊಳ್ಳಲಿದ್ದೇನೆ. ಅದರ ಬಳಿಕದ ಹೊಸ ಪ್ರಾಜೆಕ್ಟ್ ನಲ್ಲಿ ಡ್ಯಾನ್ಸ್ ಮತ್ತು ಹಾಸ್ಯಕ್ಕೆ ಪ್ರಾಧಾನ್ಯತೆ ನೀಡುವ ಕನಸಿದೆ. ನೃತ್ಯದ ಬಗ್ಗೆ ನನಗೆ ಮೊದಲಿನಿಂದಲೂ ಆಸಕ್ತಿ ಇತ್ತು. ಶಾಸ್ತ್ರೀಯ ನೃತ್ಯಾಭ್ಯಾಸ ಮಾಡಿಲ್ಲವಾದರೂ ನೃತ್ಯ ನಿರ್ದೇಶಕರು ನೀಡುವ ಕ್ಲಾಸಿಕ್ ಸ್ಟೆಪ್ಸ್ ಗಳನ್ನು ಕೂಡ ನಿಭಾಯಿಸಿರುವ ಉದಾಹರಣೆಗಳಿವೆ. ಒಂದಷ್ಟು ಕಥಕ್ ಗೊತ್ತು. ಅದರಲ್ಲಿ ಇನ್ನಷ್ಟು ಆಳವಾದ ಅಭ್ಯಾಸ ಮಾಡಬೇಕಿದೆ. ಅದೇ ರೀತಿ ಕುಂಗ್ ಫು ಕಲಿತು ಆಕ್ಷನ್ ಓರಿಯೆಂಟೆಡ್ ಚಿತ್ರವೊಂದನ್ನು ಮಾಡುವ ಯೋಜನೆಯೂ ಇದೆ.