twitter
    For Quick Alerts
    ALLOW NOTIFICATIONS  
    For Daily Alerts

    ದೂರಾದರೇನೇ ಕೊರೊನಾ; ಸೇಫು ಚಿತ್ರೀಕರಣ: ಸೋನು ಗೌಡ

    |

    'ಇಂತಿ ನಿನ್ನ ಪ್ರೀತಿಯ' ಚಿತ್ರದ ಬಳಿಕ ಸೋನು ಗೌಡ ಒಂದಷ್ಟು ಪರಭಾಷಾ ಸಿನಿಮಾಗಳಲ್ಲಿ ನಟಿಸಿದ್ದರು. ಆದರೆ ನಾಲ್ಕು ವರ್ಷದ ಹಿಂದೆ ಮರಳಿ ಬಂದವರು ಕನ್ನಡದಲ್ಲೇ ಬ್ಯುಸಿಯಾದರು.

    ಕಿರಗೂರಿನ ಗಯ್ಯಾಳಿಗಳು' ಚಿತ್ರದ ನಾಗಮ್ಮನ ಪಾತ್ರ ಮತ್ತು 'ಗುಲ್ಟು' ಸಿನಿಮಾದ ನಾಯಕಿಯ ಪಾತ್ರದ ಮಧ್ಯದಲ್ಲಿರುವ ಅಜಗಜಾಂತರ ವ್ಯತ್ಯಾಸವೊಂದೇ ಸಾಕು; ಸೋನು ಗೌಡ ಎಷ್ಟು ಉತ್ತಮ ಕಲಾವಿದೆ ಎನ್ನುವುದನ್ನು ನಿರೂಪಿಸಲು. 'ಗುಲ್ಟು' ಬಳಿಕ ಅವರಿಗೆ ಕೈ ತುಂಬ ಸಿನಿಮಾಗಳು ಲಭಿಸಿದವು. ನಟಿಸಿದ ಸಿನಿಮಾಗಳಲ್ಲೆಲ್ಲ ನಾಯಕಿಗೆ ಪ್ರಾಧಾನ್ಯತೆಯೂ ಇರುತ್ತಿತ್ತು. ಉಪೇಂದ್ರ ನಾಯಕರಾಗಿದ್ದ ಐ ಲವ್ ಯೂ' ಕಳೆದ ವರ್ಷದ ಹಿಟ್ ಸಿನಿಮಾ ಆಗಿದ್ದು, ಅದರಲ್ಲಿ ರಚಿತಾ ರಾಮ್ ಪ್ರಧಾನ ಪಾತ್ರದಲ್ಲಿದ್ದರೂ, ಕ್ಲೈಮ್ಯಾಕ್ಸ್ ನಲ್ಲಿ ಹೈಲೈಟ್ ಆಗುವಂತಹ ಪಾತ್ರವನ್ನು ನಿರ್ವಹಿಸುವ ಮೂಲಕ ಕೌಟುಂಬಿಕ ಪ್ರೇಕ್ಷಕರ ಮನವನ್ನು ಸೋನುಗೌಡ ಗೆದ್ದಿದ್ದರು.

    ಒಂದೊಳ್ಳೆಯ ಕಮರ್ಷಿಯಲ್ ಯಶಸ್ಸಿನ ಬಳಿಕ ಪುನೀತ್ ರಾಜ್ ಕುಮಾರ್ ಅವರ ನಟನೆಯ 'ಯುವರತ್ನ' ಚಿತ್ರದಲ್ಲಿ ನಟಿಸುತ್ತಿದ್ದ ಸೋನುಗೌಡ ಅವರನ್ನು ಲಾಕ್ಡೌನ್ ಒಂದು ಸಂಕಷ್ಟಕ್ಕೆ ಈಡು ಮಾಡಿದೆ. ಅದು ಏನು ಎನ್ನುವುದನ್ನು ಫಿಲ್ಮೀಬೀಟ್ ನಡೆಸಿದ ಪ್ರಶ್ನೋತ್ತರದಲ್ಲಿ ಸ್ವತಃ ಸೋನು ಗೌಡ ಅವರೇ ವಿವರಿಸಿದ್ದಾರೆ. ಮುಂದೆ ಓದಿ...

    ಅನಿರೀಕ್ಷಿತವಾಗಿ ಮನೆಯೊಳಗೆ ಸೇರಿಕೊಂಡಾಗ ಅನಿಸಿದ್ದೇನು?

    ಅನಿರೀಕ್ಷಿತವಾಗಿ ಮನೆಯೊಳಗೆ ಸೇರಿಕೊಂಡಾಗ ಅನಿಸಿದ್ದೇನು?

    ನಿಜಕ್ಕೂ ಇದು ಎಲ್ಲರಿಗೂ ತುಂಬ ಅನಿರೀಕ್ಷಿತವಾಗಿತ್ತು. ಅವಕಾಶಗಳಿದ್ದರೂ ತಿಂಗಳುಗಟ್ಟಲೆ ಮನೆಯಲ್ಲಿ ಇರಬೇಕಾಗುತ್ತದೆ ಎಂದು ಯಾರೂ ಕೂಡ ಅಂದುಕೊಂಡಿರುವುದಿಲ್ಲ. ಸುಮ್ಮನೆ ಮನೆಯಲ್ಲಿ ಕುಳಿತುಕೊಳ್ಳುವುದು ಎಂದರೆ ಒಂದು ರೀತಿ ಆತಂಕದ ವಾತಾವರಣ ಹೆಚ್ಚಿದ ಹಾಗೆ ಆಗಿರುತ್ತಿತ್ತು. ಆದರೆ ನನಗೆ ಈ ಸಂದರ್ಭದಲ್ಲಿ ತುಂಬ ದೊಡ್ಡ ಬೆನ್ನೆಲುಬಾಗಿ ನಿಂತವರು ನಮ್ಮ ತಂದೆ. ತಂದೆ ಯಾವಾಗಲೂ ಹೇಳುತ್ತಿದ್ದರು `ವರ್ಕ್ ಹಾರ್ಡ್ ಸೇವ್ ಮೋರ್' ಎಂದು. ಅದು ಯಾಕೆ ಎನ್ನುವುದು ನನಗೆ ಈಗ ಸರಿಯಾಗಿ ಅರ್ಥವಾಗಿದೆ. ಕಳೆದ ಆರು ತಿಂಗಳಿನಿಂದ ನಾನು ಯಾವುದೇ ಚಿತ್ರೀಕರಣದಲ್ಲಿ ಭಾಗಿಯಾಗಿಲ್ಲ. ಆದರೆ ಹಿರಿಯ ಮೇಕಪ್ ಆರ್ಟಿಸ್ಟ್ ಆಗಿರುವ ನಮ್ಮ ತಂದೆ, ಈ ದಿನಗಳಲ್ಲಿ ಅವರಿಗೂ ಕೆಲಸ ಇರದಿದ್ದರೂ ಸಂಸಾರವನ್ನು ಚೆನ್ನಾಗಿ ತೂಗಿಸಿಕೊಂಡು ಹೋಗಿದ್ದಾರೆ. `ಬದುಕಲ್ಲಿ ಲಕ್ಷುರಿಗಿಂತ ಕಂಫರ್ಟ್ ಆಗಿರುವುದು ಮುಖ್ಯ' ಎಂದು ಅವರು ಹೇಳುತ್ತಾರೆ. ಫೈನಾನ್ಸಿಯಲ್ ಮ್ಯಾನೇಜ್ಮೆಂಟ್ ಮತ್ತು ಸ್ಟ್ರೆಸ್ ಮ್ಯಾನೇಜ್ಮೆಂಟ್, ಟೈಮ್ ಮ್ಯಾನೇಜ್ಮೆಂಟ್ ಇವೆಲ್ಲವನ್ನು ಕೂಡ ಅವರಿಂದಲೇ ಕಲಿಯಬೇಕು ಎಂದು ಅರ್ಥ ಮಾಡಿಕೊಂಡೆ.

    ನಿಮ್ಮಲ್ಲಿನ ಕಲಾವಿದೆಯ ಮೇಲೆ ತಂದೆಯ ಪ್ರಭಾವ ಎಷ್ಟಿದೆ?

    ನಿಮ್ಮಲ್ಲಿನ ಕಲಾವಿದೆಯ ಮೇಲೆ ತಂದೆಯ ಪ್ರಭಾವ ಎಷ್ಟಿದೆ?

    ತುಂಬಾ ಇದೆ. ಅವರು ಮೇಕಪ್ ಕಲಾವಿದರಾಗಿದ್ದರೂ ನಟಿಯಾಗಿ ನಾನು ಹೇಗಿರಬೇಕು ಎನ್ನುವ ಬಗ್ಗೆ ಹಲವಾರು ಉತ್ತಮ ಸಲಹೆಗಳನ್ನು ನೀಡುತ್ತಿರುತ್ತಾರೆ. "ಕಲಾವಿದರಾದವರು ಎಲ್ಲವನ್ನು ಕಲಿತಿರಬೇಕು. ಬರೀ ಡಾನ್ಸ್, ಮ್ಯೂಸಿಕ್ ಕಲಿತರೆ ಸಾಲದು" ಎನ್ನುವುದು ಅವರ ಅಭಿಪ್ರಾಯ. ಉದಾಹರಣೆಗೆ ಚಿತ್ರವೊಂದರಲ್ಲಿ ಈರುಳ್ಳಿ ಹೆಚ್ಚುವ ದೃಶ್ಯ ಇದೆ ಎಂದಿಟ್ಟುಕೊಳ್ಳಿ. ನನಗೆ ಅದನ್ನು ಹೆಚ್ಚೋಕೆ ಬರುತ್ತಿಲ್ಲ, ಆದರೆ ಆ ದೃಶ್ಯದಲ್ಲಿ ಅದು ತುಂಬ ಮುಖ್ಯ ಎಂದಾದಾಗ ನಾನು ಹೊಸದಾಗಿ ಕಲಿತು ಈರುಳ್ಳಿ ಹೆಚ್ಚಿದರೆ ಅದು ಖಂಡಿತವಾಗಿ ಪ್ರೇಕ್ಷಕರಿಗೆ ತಿಳಿಯಬಲ್ಲದು. ಹಾಗಾಗಿ ಆ ದೃಶ್ಯ ನಿರ್ದೇಶಕರು ಬಯಸುವಂಥ ಪರಿಣಾಮ ನೀಡಲು ಅಸಾಧ್ಯ. ಹಾಗಾಗಿ ನಟಿ ಎನ್ನುವ ಕಾರಣಕ್ಕಾಗಿ ಸಾಮಾನ್ಯ ಮಹಿಳೆ ನಿರ್ವಹಿಸುವ ಕೆಲಸಗಳನ್ನು ನಿರಾಕರಿಸಲು ಸಾಧ್ಯವಿಲ್ಲ ಎನ್ನುವುದು ಅವರ ಅಭಿಪ್ರಾಯ.


    ಅದೇ ವೇಳೆ, ಸಮಯಕ್ಕೆ ಸರಿಯಾಗಿ ಚಿತ್ರೀಕರಣದ ಜಾಗಕ್ಕೆ ತಲುಪುವುದು ಕೂಡ ಅವರಿಂದಲೇ ಕಲಿತಿದ್ದೇನೆ. ಒಟ್ಟಿನಲ್ಲಿ ನನಗೆ ನಾನೇ ಮೇಕಪ್ ಮಾಡಲು ಕಲಿಯುವಲ್ಲಿಂದ ಹಿಡಿದು ಎಲ್ಲ ರೀತಿಯಲ್ಲಿಯೂ ತಂದೆಯ ಪ್ರಭಾವ ತುಂಬಾ ಇದೆ.

    ಸಮಯ ಕಳೆದಿದ್ದು?

    ಸಮಯ ಕಳೆದಿದ್ದು?

    ಮೊದಲೆಲ್ಲ ಚಿತ್ರೀಕರಣದ ನಡುವೆ ವರ್ಕೌಟ್ ಮಾಡಲು ಸಮಯ ಸಿಗುತ್ತಿಲ್ಲ ಎನ್ನುವ ಕಾರಣ ಹೇಳುವುದು ಸುಲಭವಾಗಿತ್ತು. ಆದರೆ ಈಗ 24 ಗಂಟೆ ಮನೆಯಲ್ಲೇ ಇರಬೇಕಾದ ಸಂದರ್ಭ ಬಂದಿರುವ ಕಾರಣ, ನಿತ್ಯವೂ ವರ್ಕೌಟ್ ಮಾಡುತ್ತಿರುತ್ತೇನೆ. ಅದೇ ರೀತಿ ಡಾನ್ಸ್ ಪ್ರಾಕ್ಟೀಸ್ ಮಾಡುವುದಕ್ಕೆ ಕೂಡ ಹೇರಳವಾದ ಅವಕಾಶ ದೊರಕಿದೆ. ಅಡುಗೆಯ ವಿಚಾರದಲ್ಲಿ ಕೂಡ ಅಷ್ಟೇ, ಅಲ್ಲಿಯೂ ಭಾಗಿಯಾಗಿದ್ದೇನೆ. ಒಟ್ಟಿನಲ್ಲಿ ಎಲ್ಲವನ್ನು ನೈಜವಾಗಿ ನಿಭಾಯಿಸಬಲ್ಲ ಪರಿಪೂರ್ಣ ಮಹಿಳೆಯಾಗಿ ನಟಿಸಲು ನಾನು ತಯಾರಾಗಿದ್ದೇನೆ. ಇನ್ನು ಎಲ್ಲರಂತೆ ನಾವು ಕೂಡ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ಎಲ್ಲ ಹಳೆಯ ಸಿನಿಮಾಗಳನ್ನು ನೋಡುತ್ತಿದ್ದೆವು. ಆಗಿನ ಸಿನಿಮಾಗಳನ್ನು ನೋಡುತ್ತಿದ್ದರೆ, ನನಗೆ ಅಂಥ ಪಾತ್ರಗಳನ್ನು ನಿಭಾಯಿಸುವ ಆಸೆ ಆಗುತ್ತಿತ್ತು. ಯಾರಾದರೂ ಹಳೆಯ ಸಿನಿಮಾಗಳ ರಿಮೇಕ್ ಮಾಡಿದರೆ, ನಾಯಕಿಯ ಕ್ಯಾರೆಕ್ಟರ್ ನಾನು ಮಾಡಬೇಕು ಅನಿಸುವಷ್ಟು ಪ್ರಭಾವ ಬೀರಿವೆ. ಎಲ್ಲವೂ ಒಂದಕ್ಕಿಂತ ಒಂದು ಚೆನ್ನಾಗಿತ್ತು. ಇದರ ನಡುವೆ 'ವಿರುದು' ಎನ್ನುವ ತಮಿಳು ಸಿನಿಮಾ ನೋಡಿದೆ. ಅದು ಕಲಾವಿದನಿಗೆ ರಾಷ್ಟ್ರ ಪ್ರಶಸ್ತಿ ತಂದು ಕೊಟ್ಟಂಥ ಚಿತ್ರ. ಅಂಥ ಚಿತ್ರಗಳಲ್ಲಿ ನಟಿಸಲು ಅವಕಾಶ ಸಿಕ್ಕರೆ ನಟಿಸಬೇಕು ಅಂತ ಇದೆ.

    ಒಟ್ಟಿನಲ್ಲಿ ಆದಷ್ಟು ಬೇಗ ಚಿತ್ರೀಕರಣಕ್ಕಾಗಿ ನಿರೀಕ್ಷಿಸುತ್ತಿದ್ದೀರ?

    ಒಟ್ಟಿನಲ್ಲಿ ಆದಷ್ಟು ಬೇಗ ಚಿತ್ರೀಕರಣಕ್ಕಾಗಿ ನಿರೀಕ್ಷಿಸುತ್ತಿದ್ದೀರ?

    ಎರಡು ದಿನಗಳ ಹಿಂದಿನ ತನಕ ಮನಸ್ಥಿತಿ ಅದೇ ರೀತಿ ಇತ್ತು. ಯಾಕೆಂದರೆ `ಯುವರತ್ನ'ದಲ್ಲಿ ನನ್ನ ಭಾಗದ ಚಿತ್ರೀಕರಣ ಮುಗಿದಿತ್ತು. ಇನ್ನು ಒಂದು ಶೆಡ್ಯೂಲ್ ಮುಗಿಸಿರುವ 'ಶಬ್ದ'ದ ಚಿತ್ರೀಕರಣಕ್ಕೆ ಯಾವಾಗ ಕರೆಯುತ್ತಾರೆ ಗೊತ್ತಿಲ್ಲ. ಆದಷ್ಟು ಬೇಗ ಶೂಟಿಂಗ್ ಶುರುವಾಗಲಿ ಎಂದು ಕಾಯುತ್ತಿದ್ದೆ. ಆದರೆ ಎರಡು ದಿನದ ಹಿಂದೆ ಒಂದು ಗೋಲ್ಡ್ ಫೈನಾನ್ಸ್ ಜಾಹೀರಾತಲ್ಲಿ ನಟಿಸಿದೆ. ಅದರ ಚಿತ್ರೀಕರಣದಲ್ಲಿ ತಂತ್ರಜ್ಞರು ಮಾಸ್ಕ್ ಹಾಕಿಕೊಂಡು ಲೈಟ್ ಅರೇಂಜ್ ಮಾಡಲು ಕಷ್ಟ ಪಡುವುದನ್ನು ಕಂಡೆ. ಲೊಕೇಶನ್‌ಗೆ ಊಟ ತಂದವರ ಬಗ್ಗೆ ಪರಿಚಯ ಇರುವುದಿಲ್ಲ. ಆ ಆತಂಕಗಳನ್ನೆಲ್ಲ ಅನುಭವಿಸಿದಾಗ ಅನಿಸಿದ್ದು ಮೊದಲು ನಮ್ಮ ಜೀವ ಮುಖ್ಯ.


    ಶೂಟಿಂಗ್ ಬೇಕಾದರೆ ಆಮೇಲೆ ಮಾಡಿಕೊಳ್ಳಬಹುದು. ಯಾಕೆಂದರೆ ಕೊರೊನಾ ಒಬ್ಬರಿಗೆ ಬಂದರೆ ಎಲ್ಲರಿಗೂ ಬರುವ ಸಾಧ್ಯತೆ ಹೆಚ್ಚು. ಅಲ್ಲಿ ನಾವು ಹೆಚ್ಚೂ ಕಡಿಮೆ 40 ಜನ ಇದ್ದೆವು. ಎಷ್ಟೇ ಜಾಗರೂಕತೆ ವಹಿಸಿದರೂ ಸಾಮಾಜಿಕ ಅಂತರ ಸಾಧ್ಯವೇ ಇರುವುದಿಲ್ಲ. ನನಗೆ ಒಂದು ದಿನದಲ್ಲೇ ಇಷ್ಟು ಕಷ್ಟವಾಗಿದೆ. ಧಾರಾವಾಹಿಗಳ ಚಿತ್ರೀಕರಣ ಹೇಗೆ ನಡೆಯುತ್ತಿದೆ ಎಂದು ನನಗೆ ಅಚ್ಚರಿ ಅನಿಸಿದೆ. ಅವಸರದಿಂದ ಸಿನಿಮಾ ಚಿತ್ರೀಕರಣ ಮಾಡುವವರು, ಒಟಿಟಿಯಲ್ಲಿ ಬಿಡುಗಡೆ ಮಾಡುವುದಾದರೆ ಸರಿ. ಅಥವಾ ಚಿತ್ರಮಂದಿರದಲ್ಲೇ ಬಿಡುಗಡೆ ಎಂದಾದರೆ ಇಷ್ಟು ಬೇಗ ಚಿತ್ರೀಕರಣ ಮಾಡಬೇಕಾದ ಅಗತ್ಯ ಇಲ್ಲ. ಯಾಕೆಂದರೆ ಜನ ಥಿಯೇಟರ್‌ಗೆ ಬರಲು ಇನ್ನಷ್ಟು ಸಮಯ ಬೇಕಾಗಬಹುದು.

    English summary
    Actress Sonu Gowda talks about how she spent locdown period And furure shooting issues.
    Saturday, June 27, 2020, 10:08
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X