ಕಾಶೀನಾಥ್ ಪುತ್ರನ ಚಿತ್ರದಲ್ಲಿ ಗಣೇಶ್ ಕಾಸರಗೋಡು ಖಳ ನಟ

ಕನ್ನಡ ಚಿತ್ರರಂಗದ ಬಗ್ಗೆ ತಿಳಿದುಕೊಂಡವರಿಗೆ ಗಣೇಶ್ ಕಾಸರಗೋಡು ಎನ್ನುವ ಹೆಸರು ಹೊಸತೇನಲ್ಲ. ಕಳೆದ ನಾಲ್ಕು ದಶಕಗಳಿಂದ ಸಿನಿಮಾ ವಿಭಾಗದಲ್ಲಿ ಜನಪ್ರಿಯ ಪತ್ರಕರ್ತರಾಗಿ ಗುರುತಿಸಿಕೊಂಡವರು ಗಣೇಶ್. ಇವರು ಹುಟ್ಟಿದ್ದು ಕಾಸರಗೋಡಿನಲ್ಲಿ. ಓದಿದ್ದೂ ಅಲ್ಲೇ. ಎಂ.ಎ. ಕನ್ನಡ ಪದವಿಯಲ್ಲಿ Rank ವಿಜೇತರಾದವರು. ಇವರ ಪತ್ರಿಕೋದ್ಯಮದ ಸೇವೆ ಗುರುತಿಸಿ ವೈಎನ್ಕೆ ಸಾಹಿತ್ಯ ಪ್ರಶಸ್ತಿ, ಮೀಡಿಯಾ ಅಚೀವ್ಮೆಂಟ್ ಅವಾರ್ಡ್, ಇಂಡಿವುಡ್ ಮೀಡಿಯಾ ಎಕ್ಸಲೆನ್ಸ್ ಅವಾರ್ಡ್ ಸೇರಿದಂತೆ ಸಾಕಷ್ಟು ಪ್ರಶಸ್ತಿಗಳು ದೊರಕಿವೆ.

2011-12ನೇ ಸಾಲಿನ ಪ್ರತಿಷ್ಠಿತ ಕರ್ನಾಟಕ ರಾಜ್ಯ ಸರ್ಕಾರದ ಚಲನಚಿತ್ರ ಸಾಹಿತ್ಯ ಪ್ರಶಸ್ತಿ ಇವರ 'ಚದುರಿದ ಚಿತ್ರಗಳು' ಪುಸ್ತಕಕ್ಕೆ ಲಭಿಸಿದೆ. ಚಂದನ ಮತ್ತು ಖಾಸಗಿ ವಾಹಿನಿಗಳಲ್ಲಿ ಸಿನಿಮಾ ಸಂಬಂಧಿತ ವಿಶೇಷ ಸರಣಿ ಕಾರ್ಯಕ್ರಮಗಳನ್ನು ಕೂಡ ನೀಡಿರುವ ಗಣೇಶ್ ಕಾಸರಗೋಡು ಅವರು ವೃತ್ತಿ ಬದುಕಿನ ಆರಂಭದಲ್ಲಿ ಕೆಲಕಾಲ ಹೈಸ್ಕೂಲ್ ಟೀಚರಾಗಿದ್ದದ್ದೂ ಉಂಟು.

ಹವ್ಯಾಸಿಯಾಗಿ ಪೆನ್ಸಿಲ್ ಚಿತ್ರಗಳನ್ನು ಬರೆದಿದ್ದೂ ಇದೆ! ಇವರ 25ನೇ ಪುಸ್ತಕ 'ಶುಭಂ' ಇಂದು ಬಿಡುಗಡೆಯಾಗುತ್ತಿದೆ. ಅದಕ್ಕೂ ಮೊದಲು ಅವರು ತಮ್ಮ ವೈವಿಧ್ಯಮಯ ವೃತ್ತಿ ಅನುಭವಗಳ ನಡುವೆ ಇದೀಗ ನಟನಾಗಿ ಬದಲಾಗುತ್ತಿರುವ ವಿಚಾರವನ್ನು ಫಿಲ್ಮೀಬೀಟ್ ಜತೆಗೆ ವಿಶೇಷವಾಗಿ ಹಂಚಿಕೊಂಡಿದ್ದಾರೆ. ಮುಂದೆ ಓದಿ..

 'ಶುಭಂ' ಪುಸ್ತಕದ ಬಳಿಕ ಬರಹಕ್ಕೆ ವಿದಾಯ ಹೇಳಿ ಅಭಿನಯಕ್ಕೆ ಪ್ರವೇಶಿಸುತ್ತೀರಂತೆ?

'ಶುಭಂ' ಪುಸ್ತಕದ ಬಳಿಕ ಬರಹಕ್ಕೆ ವಿದಾಯ ಹೇಳಿ ಅಭಿನಯಕ್ಕೆ ಪ್ರವೇಶಿಸುತ್ತೀರಂತೆ?

ಹಾಗೇನಿಲ್ಲ. ನಾಲ್ಕೈದು ಪತ್ರಿಕೆಗಳಿಗೆ ಬರೆಯುತ್ತಿದ್ದ ನಾನು ಎರಡು ವರ್ಷಗಳಿಂದ ನಾನು ಎಲ್ಲಕ್ಕೂ ತುಸು ವಿರಾಮ ನೀಡಿದ್ದೆ. ಯಾವುದೇ ಪ್ರಸ್ಮೀಟ್ ಗೆ ಹೋಗಿರಲಿಲ್ಲ. ಕಾರಣ ಇಂದು ಬಿಡುಗಡೆಯಾಗುತ್ತಿರುವ ‘ಶುಭಂ' ಎನ್ನುವ 900 ಪುಟಗಳ ಬೃಹತ್ ಕೃತಿಯ ರಚನೆಯಲ್ಲಿ ತೊಡಗಿಸಿಕೊಂಡಿದ್ದೆ. ಆದರೆ ಅದರ ಪ್ರಿಂಟ್ ಬರುತ್ತಿದ್ದ ಹಾಗೆ ನನ್ನನ್ನು ಕಾಡತೊಡಗಿದ ಪ್ರಶ್ನೆ `ಮುಂದೇನು ಮಾಡೋಣ?' ಎನ್ನುವಂಥದ್ದೇ ಹೊರತು, ಬರಹಕ್ಕೆ ವಿದಾಯ ಹೇಳಿ ವಿಶ್ರಾಂತಿ ಜೀವನ ನಡೆಸುವ ಕನಸು ನನಗಿನ್ನೂ ಬಂದಿಲ್ಲ! `ಶುಭಂ- ಪಾರ್ಟ್ ಸೆಕೆಂಡ್' ಬರೆಯಬಹುದಾದರೂ ಸಾಕಷ್ಟು ವಿಷಯವನ್ನು ಶುಭಂನಲ್ಲೇ ಹೇಳಿರುವ ಕಾರಣ, ಮತ್ತೆ ಅದೇ ಪ್ರಯತ್ನ ಬೇಡ ಅನಿಸಿತು. ಅಂಥದೊಂದು ಸಮಯದಲ್ಲೇ ಇಂಥದೊಂದು ಸಿನಿಮಾ ಆಫರ್ ಬಂದಿದೆ.

 'ಎಲ್ಲಿಗೆ ಪಯಣ ಯಾವುದೋ ದಾರಿ' ಚಿತ್ರದಲ್ಲಿ ನೀವು ಪಯಣಿಸಲು ತೀರ್ಮಾನಿಸಿದ್ದೇಕೆ?

'ಎಲ್ಲಿಗೆ ಪಯಣ ಯಾವುದೋ ದಾರಿ' ಚಿತ್ರದಲ್ಲಿ ನೀವು ಪಯಣಿಸಲು ತೀರ್ಮಾನಿಸಿದ್ದೇಕೆ?

ಚಿತ್ರದ ಪೋಸ್ಟರ್ ಒಂದನ್ನು ಉಪೇಂದ್ರ ಬಿಡುಗಡೆ ಮಾಡಿದ್ದರು. ನನಗೆ ಆ ಹೆಸರಿನಿಂದ ಹಿಡಿದು ಚಿತ್ರದ ಪೋಸ್ಟರ್ ಡಿಸೈನ್ ತನಕ ಎಲ್ಲವೂ ತುಂಬ ಇಷ್ಟವಾಗಿತ್ತು. ಆಗ ನನಗೆ ಚಿತ್ರತಂಡದ ಜತೆ ಸಂಪರ್ಕ ಇರಲಿಲ್ಲವಾದರೂ ಪೋಸ್ಟರ್ ಬಗ್ಗೆ ಎರಡು ಮೆಚ್ಚುಗೆಯ ಮಾತುಗಳನ್ನು ಫೇಸ್ಬುಕ್ ನಲ್ಲಿ ಬರೆದಿದ್ದೆ. ಅದನ್ನು ನೋಡಿ ಚಿತ್ರದಲ್ಲಿ ನಾಯಕನಾಗಿ ನಟಿಸುತ್ತಿರುವ ಕಾಶೀನಾಥ್ ಪುತ್ರ, ಅಭಿಮನ್ಯು ನನಗೆ ಫೋನ್ ಮಾಡಿ ಥ್ಯಾಂಕ್ಸ್ ಹೇಳಿದ್ದರು. ಬಳಿಕ ನಿರ್ದೇಶಕ ಕಿರಣ್ ಸೂರ್ಯ ಅವರ ಕಡೆಯಿಂದಲೂ ಫೋನ್ ಬಂತು. ಒಂದಷ್ಟು ದಿನಗಳ ಬಳಿಕ "ನಮ್ಮ ಸಿನಿಮಾದಲ್ಲಿ ಒಂದು ಪಾತ್ರ ಮಾಡುತ್ತೀರ?'' ಎಂದು ಅವರೇ ಒಂದು ಮೆಸೇಜ್ ಕಳಿಸಿದರು. ನಾನು ಮನೆಗೆ ಬರಲು ಹೇಳಿದೆ. ಬಂದವರಿಗೆ ನನ್ನನ್ನು ಇದ್ದ ಹಾಗೆಯೇ ತೋರಿಸಿದರೆ ಸರಿ. ಪಾತ್ರಕ್ಕಾಗಿ ವಿಗ್ ಹಾಕೋದು ಅಥವಾ ಗಡ್ಡ ತೆಗೆಸೋದು ಎಲ್ಲ ಮಾಡಲಾರೆ ಎಂದೆ. "ಇಲ್ಲ ಸರ್ ನಿಮ್ಮ ಈ ಲುಕ್ಕೇ ನಮಗೆ ಬೇಕು. ಚಿತ್ರದಲ್ಲಿ ನೀವು ಒಬ್ಬ `ಕೋಲ್ಡ್ ಬ್ಲಡೆಡ್ ಕಿಲ್ಲರ್ ಆಗಿರುತ್ತೀರ' ಎಂದರು. ಒಮ್ಮೆ ಖಳನಾಗಿ ನಟಿಸುವ ಆಸೆಯಿದ್ದ ನನಗೆ ತಕ್ಷಣವೇ ಒಪ್ಪಿಗೆಯಾಯಿತು.

 ಸಿನಿಮಾ ಕ್ಯಾಮೆರಾದ ಮುಂದೆ ಇದೇ ನಿಮ್ಮ ಪ್ರಥಮ ಅನುಭವವೇ?

ಸಿನಿಮಾ ಕ್ಯಾಮೆರಾದ ಮುಂದೆ ಇದೇ ನಿಮ್ಮ ಪ್ರಥಮ ಅನುಭವವೇ?

ಈ ಹಿಂದೆ `ಗಂಗಾ ಕಾವೇರಿ' ಎನ್ನುವ ಚಿತ್ರದಲ್ಲಿ ನಟಿಸಿದ್ದೆ. ಅದಕ್ಕೆ ವಿಷ್ಣುಕಾಂತ್ ನಿರ್ದೇಶಕರು. ವೆಂಕಟಪ್ಪ ನಿರ್ಮಾಪಕರು. ವೆಂಕಟಪ್ಪ ಅವರು ನನ್ನ ಬರವಣಿಗೆಗೆ ಅಭಿಮಾನಿ ಎಂದೇ ಹೇಳಿಕೊಳ್ಳುತ್ತಿದ್ದರು. ಅವರಿಗೆ ತಮ್ಮ ಚಿತ್ರತಂಡದ ಜತೆಗೆ ನನ್ನನ್ನು ಕೂಡ ಸೇರಿಸಿಕೊಳ್ಳುವ ಆಸೆಯಿತ್ತು. ನಿಜ ಹೇಳಬೇಕೆಂದರೆ ಅವರು ಚಿತ್ರೀಕರಣಕ್ಕೆಂದು ಯೋಜನೆ ಹಾಕಿದ್ದ ಲೊಕೇಶನ್ ಗೆ ಹೋಗಲು ನನಗೂ ಆಸಕ್ತಿಯಿತ್ತು. ಸುಮ್ಮನೇ ಅವರೊಂದಿಗೆ ಸುತ್ತಾಡುವ ಬದಲು ಏನಾದರೂ ಕೆಲಸ ಇದ್ದರೆ ಚೆನ್ನಾಗಿರುತ್ತದೆ ಎಂದೆ. ಹಾಗೆ ಒಂದು ಪಾತ್ರ ನೀಡಿದ್ದರು! ಗೋಮುಖ, ಹಿಮಾಲಯ, ಬ್ಯಾಂಕಾಕ್ ನಲ್ಲಿ ಚಿತ್ರೀಕರಣ ನಡೆದಿತ್ತು. ಹಾಗೆ ಚಿತ್ರದೊಳಗೆ ಒಂದು ಜನಾಂಗದ ಹಿರಿಯನ ಪಾತ್ರದಲ್ಲಿ ಕಾಣಿಸಿಕೊಂಡಿದ್ದೆ.

 ದರ್ಶನ್ ಅವರ `ಪೊರ್ಕಿ’ ಚಿತ್ರದಲ್ಲಿ ನೀವು ಭಾಗಿಯಾಗಿದ್ದ ಅನುಭವ ಹೇಗಿತ್ತು?

ದರ್ಶನ್ ಅವರ `ಪೊರ್ಕಿ’ ಚಿತ್ರದಲ್ಲಿ ನೀವು ಭಾಗಿಯಾಗಿದ್ದ ಅನುಭವ ಹೇಗಿತ್ತು?

ತುಂಬ ಚೆನ್ನಾಗಿತ್ತು. ಸ್ನೇಹಿತ ಸಂತೋಷ್ ಪೈಯವರ ಮೂಲಕ ದತ್ತಾತ್ರೇಯ ಎನ್ನುವವರು ತಮಗೆ ಒಂದು ಸಿನಿಮಾ ಮಾಡಿಕೊಡುವಂತೆ ವಿನಂತಿಸಿಕೊಂಡಿದ್ದರು. ಅವರಲ್ಲಿ ತೆಲುಗಿನ `ಪೋಕಿರಿ' ಸಿನಿಮಾದ ರೈಟ್ಸ್ ಇತ್ತು. ನಾನು ಮೊದಲು ಸಂಪರ್ಕಿಸಿದ್ದು ದುನಿಯಾ ವಿಜಯ್ ಅವರನ್ನು. ಅವರು ಒಪ್ಪಿಕೊಂಡರೂ ಕೂಡ ಡೇಟ್ಸ್ ಕೊಡಲು ತಡಮಾಡಿದರು. ಹಾಗೆ ದರ್ಶನ್ ಅವರನ್ನು ಸಮೀಪಿಸಿದೆವು. ನಿರ್ಮಾಪಕರು ಚಿತ್ರ ಪೂರ್ತಿ ಮಾಡುತ್ತಾರೆ ಎನ್ನುವ ಭರವಸೆಯನ್ನು ನನ್ನಿಂದ ಪಡೆದ ಬಳಿಕ ದರ್ಶನ್ ಚಿತ್ರ ಮಾಡಲು ಒಪ್ಪಿಕೊಂಡರು. ಎಂ.ಡಿ ಶ್ರೀಧರ್ ಚಿತ್ರದ ನಿರ್ದೇಶಕರು. ಬಹುಶಃ ಎರಡೇ ತಿಂಗಳಲ್ಲಿ ಚಿತ್ರೀಕರಣ ಪೂರ್ತಿಗೊಳಿಸಿದಂಥ ಚಿತ್ರ ಅದೊಂದೇ ಇರಬೇಕು.

 ಅಂದುಕೊಂಡತೆ ನಡೆದಿದ್ದರೆ ಈಗಾಗಲೇ ರಾಜ್ ಕುಮಾರ್ ಕುಟುಂಬದ ಚಿತ್ರವೊಂದರಲ್ಲಿಯೂ ನೀವು ನಟಿಸಬೇಕಾಗಿತ್ತಲ್ಲವೇ?

ಅಂದುಕೊಂಡತೆ ನಡೆದಿದ್ದರೆ ಈಗಾಗಲೇ ರಾಜ್ ಕುಮಾರ್ ಕುಟುಂಬದ ಚಿತ್ರವೊಂದರಲ್ಲಿಯೂ ನೀವು ನಟಿಸಬೇಕಾಗಿತ್ತಲ್ಲವೇ?

ಹೌದು! ಪತ್ರಕರ್ತ ವೀರೇಶ್ ಅವರ ಪತ್ರಿಕಾಗೋಷ್ಠಿಯೊಂದರಲ್ಲಿ ಪಾರ್ವತಮ್ಮ, ಪುನೀತ್ ಮತ್ತು ರಾಘವೇಂದ್ರ ರಾಜ್ ಕುಮಾರ್ ಅವರು ಜತೆಯಾಗಿ ಕುಳಿತುಕೊಂಡಿದ್ದರು. ನಾನು ಹೊರಡುವ ಮುನ್ನ ಪಾರ್ವತಮ್ಮ ಅವರೇ ಕರೆದು ನನ್ನಲ್ಲಿ ಹೇಳಿದ್ದು ಹೀಗೆ, "ಗಣೇಶ್, ನೀವು ನನ್ನ ಮಗನ ಚಿತ್ರದಲ್ಲಿ ನಟಿಸಬೇಕಂತೆ, ತುಂಬ ವರ್ಷಗಳಿಂದ ಹೇಳ್ತಾ ಇದ್ದಾನೆ'' ಎಂದು ಪುನೀತ್ ಕಡೆಗೆ ನೋಡಿದರು. ನನಗೆ ತಮಾಷೆ ಎನಿಸಿತಾದರೂ ಪಾರ್ವತಮ್ಮ ಹೇಳಿದ ಕಾರಣ ಅದರ ಗಂಭೀರತೆ ಅರ್ಥ ಮಾಡಿಕೊಂಡು ಒಪ್ಪಿಕೊಂಡೆ! ಆದರೆ ಅವರು ನಟಿಸಲು ಆಸೆ ಇದೆ ಎಂದಿದ್ದರೇ ಹೊರತು, ನನ್ನನ್ನು ಪಾತ್ರವಾಗಿಸುವಂಥ ಪ್ರಾಜೆಕ್ಟ್ ಸಿದ್ಧವಿರಲಿಲ್ಲ. ಆದರೆ ಅದರ ಬಳಿಕ ಸಿಹಿಗಾಳಿ ಸಿನಿಮಾ ಮಾಡಿದಂಥ ನಿರ್ದೇಶಕ ಸಾರಥಿ ತಮಗೆ ಶಿವಣ್ಣನ ಜತೆಗೆ ಒಂದು ಚಿತ್ರ ಮಾಡುವ ಆಸೆಯಿದೆ ಎಂದರು. ಕತೆ ಹೇಳಲು ನಾನು ಅವರನ್ನು ಕರೆದುಕೊಂಡು ಹೋದೆ. ಶಿವಣ್ಣ ಕತೆ ಕೇಳಿ ಖುಷಿಪಟ್ಟರು. ಅದರಲ್ಲಿ ಒಂದು ಪತ್ರಕರ್ತನ ಪಾತ್ರ ಇತ್ತು. ಅದನ್ನು ನಾನು ಮಾಡುವುದಾಗಿ ತೀರ್ಮಾನ ಆಗಿತ್ತು. ಆದರೆ ಶಿವಣ್ಣನ ಕಾಲ್ಶೀಟ್ ಸಿಗದೆ ಪ್ರಾಜೆಕ್ಟ್ ಮುಂದೆ ಹೋಗುತ್ತಲೇ ಬಂದಿದೆ.

More from Filmibeat

English summary
Ganesh Kasarago is Kannada Film Journalist and Critic of Sandalwood. Now he is starting his Acting career with Kashinaths son Alok aka Abhimanyu.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X