ಸಂದರ್ಶನ : ಛಾಯಾಗ್ರಹಣದಲ್ಲೊಂದು ಕಮಾಲ್ ಉದಯ ಬಲ್ಲಾಳ್
ಸಾಮಾನ್ಯ ಸಿನಿಮಾ ವೀಕ್ಷಕರು ಕೂಡ ಇಂದು ಸಿನಿಮಾಗಳ ಯಶಸ್ಸಿನಲ್ಲಿ ನಾಯಕನನ್ನು ಮಾತ್ರ ಕಾಣುತ್ತಿಲ್ಲ. ನಾಯಕಿ ಸೇರಿದಂತೆ ಉಳಿದ ಪೋಷಕ ಕಲಾವಿದರು, ಚಿತ್ರದ ಸಂಗೀತ ನಿರ್ದೇಶಕ, ಸಾಹಸ ಸಂಯೋಜಕ ಎಲ್ಲರನ್ನು ಕೊಂಡಾಡುತ್ತಾರೆ. ಆದರೆ ಬಹಳಷ್ಟು ಬಾರಿ ಛಾಯಾಗ್ರಹಕನನ್ನೇ ಮರೆತು ಹೋಗುತ್ತಾರೆ.
ನಿರ್ದೇಶಕರ ಕಣ್ಣು ಎಂದೇ ಕರೆಸಿಕೊಳ್ಳುವ ಕ್ಯಾಮರಾಮ್ಯಾನ್ ಅನ್ನು ತಮ್ಮದೇ ಕಣ್ಣೆಂಬಂತೆ ಕಂಡು ಆತನ ಕೆಲಸವನ್ನೇ ಮರೆತುಬಿಡುವವರು ಹೆಚ್ಚು. ಹಾಗಾಗಿಯೇ ಕನ್ನಡದಲ್ಲಿ ಹೊಸ ಛಾಯಾಗ್ರಾಹಕರು ಗುರುತಿಸಿಕೊಳ್ಳುವುದಕ್ಕೆ ತುಸು ಹೆಚ್ಚೇ ಸಮಯ ತೆಗೆದುಕೊಳ್ಳುತ್ತಾರೆ. ಅಂಥವರ ಪಟ್ಟಿಯಲ್ಲಿ ಸೇರಿಕೊಳ್ಳುವವರು ಉದಯ ಬಲ್ಲಾಳ್.
ಜಾಹಿರಾತಿನಿಂದ ಶುರು ಮಾಡಿ, ಬಳಿಕ ತುಳು ಸಿನಿಮಾಗಳನ್ನು ಮಾಡುತ್ತ ಈ ಛಾಯಾಗ್ರಾಹಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. ಶಶಿ ಕುಮಾರ್ ಮಗನ ಮೊದಲ ಸಿನಿಮಾ, ರಾಘವೇಂದ್ರ ರಾಜ್ ಅವರ 25ನೇ ಸಿನಿಮಾ ಹೀಗೆ ಸಾಕಷ್ಟು ಅವಕಾಶಗಳು ಅವರ ಕೈ ನಲ್ಲಿ ಇವೆ.
ಉದಯ ಬಲ್ಲಾಳ್ ಅವರ ಸಂದರ್ಶನದ ಆಯ್ದ ಭಾಗ ಮುಂದಿದೆ ಓದಿ...

ನಿಮಗೆ ಸಿನಿಮಾ ಛಾಯಾಗ್ರಹಣದಲ್ಲಿ ಆಸಕ್ತಿ ಮೂಡಲು ಕಾರಣಗಳೇನು?
ನಾನು ಜನಿಸಿದ್ದು ಕಾಸರಗೋಡು ಕರಾವಳಿಯ ಬಾಯಾರ್ ಎಂಬಲ್ಲಿ. ಇಲೆಕ್ಟ್ರಾನಿಕ್ಸ್ ಆಯ್ದುಕೊಂಡು ಮಂಗಳೂರಿನ ಕೆಪಿಟಿಯಲ್ಲಿ ಕಂಪ್ಯೂಟರ್ ಹಾರ್ಡ್ ವೇರ್ ನೆಟ್ ವರ್ಕಿಂಗ್ ಡಿಪ್ಲೊಮಾ ಮಾಡಿದ್ದೆ. ನನ್ನ ಕುಟುಂಬದಲ್ಲಿ ಚಿತ್ರರಂಗದತ್ತ ಮುಖ ಮಾಡಿದವರು ಯಾರು ಇಲ್ಲ. ಆದರೆ, ಫೊಟೋಗ್ರಫಿಯಲ್ಲಿನ ಆಸಕ್ತಿ ನನ್ನನ್ನು ಸಿನಿಮಾ ಛಾಯಾಗ್ರಾಹಕನಾಗುವ ತನಕ ತಂದು ನಿಲ್ಲಿಸಿದೆ. ಆರಂಭದಲ್ಲಿ ಕರಾವಳಿಯ ಮದುವೆಗಳಲ್ಲಿ ಛಾಯಾಗ್ರಾಹಕನಾಗಿದ್ದೆ! ಸಿನಿಮಾ ಛಾಯಾಗ್ರಹಣದ ಬಗ್ಗೆ ಕಲಿತುಕೊಳ್ಳಲೆಂದೇ ಬೆಂಗಳೂರಿಗೆ ಬಂದರು.

ಬೆಂಗಳೂರು ಅದರಲ್ಲಿಯೂ ಗಾಂಧಿನಗರ ನಿಮ್ಮನ್ನು ಹೇಗೆ ಸ್ವಾಗತಿಸಿತು?
ಅದು ಸುಮಾರು ಹತ್ತು ಹನ್ನೆರಡು ವರ್ಷಗಳ ಹಿಂದಿನ ಮಾತು. ಬೆಂಗಳೂರಿನ ‘ಕ್ಯಾಪ್ಚರ್' ಎನ್ನುವ ಇನ್ಸ್ಟಿಟ್ಯೂಟ್ ನಲ್ಲಿ ಸಿನಿಮಾ ಛಾಯಾಗ್ರಹಣದ ಬಗ್ಗೆ ಅರಿತುಕೊಂಡು ‘ಗೂಳಿ' ಸಿನಿಮಾ ಖ್ಯಾತಿಯ ಪಿ ಎಲ್ ರವಿಯವರ ‘18 ಕ್ರಾಸ್' ಚಿತ್ರದಲ್ಲಿ ಸಹಾಯಕ ಛಾಯಾಗ್ರಾಹಕನಾಗಿ ಸೇರಿಕೊಂಡು ವೃತ್ತಿರಂಗ ಪ್ರವೇಶಿಸಿದೆ. ಅದರಲ್ಲಿ ದೀಪಕ್ ಮತ್ತು ರಾಧಿಕಾ ಪಂಡಿತ್ ನಟಿಸಿದ್ದರು. ರವಿಯವರದೇ ಛಾಯಾಗ್ರಹಣದ ‘ಹ್ಯಾಟ್ರಿಕ್ ಹೊಡಿಮಗ' ಚಿತ್ರದಲ್ಲಿಯೂ ನಾನು ಸಹಾಯಕನಾಗಿದ್ದೆ. ಆ ದಿನಗಳಲ್ಲಿ ಕ್ಯಾಮೆರಾಗಳು ವಿಡಿಯೋ ಟೇಪ್ ಮೂಲಕ ಕಾರ್ಯ ನಿರ್ವಹಿಸುತ್ತಿತ್ತು. ‘ನವಶಕ್ತಿ ವೈಭವ', ‘ಮಿ.ತೀರ್ಥ', ‘ಬಂಧು ಬಳಗ', ‘ಸಿಐಡಿ ಈಶ' ‘ಉಲ್ಲಾಸ ಉತ್ಸಾಹ' ಚಿತ್ರಗಳಿಗೆ ಕೆಲಸ ಮಾಡಿದೆ.

ಪ್ರಾರಂಭದಲ್ಲಿ ಆದ ಏಳು ಬೀಳಿನ ಬಗ್ಗೆ ಹೇಳಿ?
ಡಿಜಿಟಲ್ ಕ್ಯಾಮೆರಾ ಬಂದ ಮೇಲೆ ನಾನು ಮನೋಹರ ಜೋಷಿಯವರ ಬಳಿ ಸಹಾಯಕರಾಗಿ ‘ನನ್ ಲೈಫಲ್ಲಿ' ಎನ್ನುವ ಒಂದು ಚಿತ್ರ ಮಾಡಿದೆ. ನನ್ನ ಪ್ರಕಾರ, ಪ್ರತಿಯೊಬ್ಬ ಛಾಯಾಗ್ರಾಹಕರಿಗೂ ಅವರದೇ ಆದ ಶೈಲಿಗಳಿವೆ. ಹಾಗಾಗಿ ಬೇರೆ ಬೇರೆ ಕ್ಯಾಮರಾ ಮ್ಯಾನ್ ಜೊತೆಗೆ ಕೆಲಸ ಮಾಡುವ ಮೂಲಕ ವೈವಿಧ್ಯಮಯತೆ ಹೇಗೆಲ್ಲ ಇರುತ್ತದೆ ಎಂದು ಅರಿತುಕೊಳ್ಳಲು ಸಾಧ್ಯವಾಗಿದೆ. ಆದರೆ ಆ ಹೊತ್ತಿಗಾಗಲೇ ಮನೆಯಿಂದ ಬೆಂಗಳೂರಿನಿಂದ ವಾಪಾಸು ಬರುವಂತೆ ಕರೆ ಬರುತ್ತಲೇ ಇತ್ತು. ಯಾಕೆಂದರೆ ಸಹಾಯಕರಾಗಿದ್ದಾಗ ಶ್ರಮ ಮತ್ತು ಅನುಭವ ಹೆಚ್ಚಾಗಿರುತ್ತದೆಯೇ ಹೊರತು ಹೆಸರು, ಸಂಬಳ ಸಿಗುವುದು ಕಡಿಮೆಯೇ. ಹಾಗಾಗಿ ಮನೆ ಮಂದಿಯನ್ನು ಹೆಚ್ಚು ವಿರೋಧಿಸಲಾರದೆ, ಜಾಹೀರಾತು ಪ್ರಪಂಚಕ್ಕೆ ಕಾಲಿಟ್ಟೆ. ಮುಂಬೈನ ಕೆಲವೊಂದು ಪ್ರಾಜೆಕ್ಟ್ ಗಳಲ್ಲಿ ತೊಡಗಿಸಿಕೊಂಡೆ.

ಸ್ವತಂತ್ರ ಛಾಯಾಗ್ರಹಕನಾದ ಮೇಲಿನ ಅನುಭವ ಹೇಗಿತ್ತು?
ಮುಂಬೈನಲ್ಲಿ ಜಾಹಿರಾತು ಶೂಟಿಂಗ್ ನಲ್ಲಿ ತೊಡಗಿಸಿಕೊಂಡಿದ್ದಾಗಲೇ ಸ್ವತಂತ್ರ ಛಾಯಾಗ್ರಹಣದಲ್ಲಿ ಒಂದು ಡಾಕ್ಯುಮೆಂಟರಿ ಮಾಡಿದೆ. ಪ್ರಸ್ತುತ ‘ಚಾರ್ಲಿ777' ಚಿತ್ರವನ್ನು ನಿರ್ದೇಶಿಸುತ್ತಿರುವ ಕಿರಣ್ ರಾಜ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದಂಥ ‘ದಿ ಯಕ್ಷಗಾನ ಪಪ್ಪೆಟ್ಸ್' ಎನ್ನುವ ಆ ಡಾಕ್ಯುಮೆಂಟರಿ 2015ರ ಬೆಂಗಳೂರಿನ ‘ಧಾತು ಪಪ್ಪೆಟ್ ಫೆಸ್ಟಿವಲ್'ಗೆ ಅಧಿಕೃತ ಆಯ್ಕೆ ಆಗುವುದರ ಜೊತೆಗೆ ಯುಎಸ್ಎ ‘ಸ್ಪಾಟ್ಲೈಟ್ ಫಿಲ್ಮ್ ಅವಾರ್ಡ್ಸ್' ನಲ್ಲಿ ಪ್ರಶಸ್ತಿ ಪಡೆದು ಕೊಂಡಿತ್ತು. ಹಾಗೆಯೇ ನನಗೆ ಮೊದಲ ಸಿನಿಮಾ ಛಾಯಾಗ್ರಾಹಕರಾಗುವ ಅವಕಾಶ ದೊರಕಿದ್ದು ಕೂಡ ತವರಿನಿಂದಲೇ ಎನ್ನುವುದು ವಿಶೇಷ.

ಮೊದಲ ಸಿನಿಮಾ ಯಾವುದು..?
ಮಂಗಳೂರಿನಲ್ಲಿ ತಯಾರಾದ ಕೊಂಕಣಿ ಚಿತ್ರ ಅದಾಗಿತ್ತು. ಸಿನಿಮಾ ಹೆಸರು ಅಶೆಮ್ ಜಲೆಮ್ ಕಶೆಮ್. ಎರಡನೇ ಚಿತ್ರ ತುಳು ಭಾಷೆಯದಾಗಿತ್ತು. ಅದರಲ್ಲಿ ತುಳು ರಂಗಭೂಮಿ, ಚಿತ್ರರಂಗದ ದಿಗ್ಗಜ ದೇವದಾಸ್ ಕಾಪಿಕಾಡ್ ಪ್ರಧಾನ ಪಾತ್ರ ನಿರ್ವಹಿಸಿದ್ದರು. ‘ಅರೆ ಮರ್ಲೆರ್' ಎನ್ನುವ ಆ ಸಿನಿಮಾ ಶತದಿನೋತ್ಸವ ಕಂಡಿತ್ತು ಎನ್ನುವುದು ಗಮನಾರ್ಹ ಸಂಗತಿ. ಮೂರನೇ ಚಿತ್ರ ಇತ್ತೀಚೆಗೆ ತಾನೇ ತೆರೆಗೆ ಬಂದ ಪೃಥ್ವಿ ಅಂಬಾರ್ ನಾಯಕರಾಗಿದ್ದ ‘ಡಿಕೆ ಬಾಸ್' ಆಗಿತ್ತು. ನಾಲ್ಕನೇ ಚಿತ್ರ ‘ಜೈ ಮಾರುತಿ ಯುವಕ ಮಂಡಲ' ಚಿತ್ರೀಕರಣ ಪೂರ್ತಿಯಾಗಿದ್ದು ಬಿಡುಗಡೆಯ ಹಂತದಲ್ಲಿದೆ. ಐದನೆಯ ಚಿತ್ರವಾಗಿ ಶಶಿಕುಮಾರ್ ಅವರ ಪುತ್ರ ನಾಯಕರಾಗಿರುವ ‘ಮೊಡವೆ' ಚಿತ್ರೀಕರಣ ನಡೆಯುತ್ತಾ ಇದೆ. ಅದರ ಶೆಡ್ಯೂಲ್ ಬ್ರೇಕ್ ನಲ್ಲಿರುವಾಗಲೇ ಮತ್ತೆರಡು ಸಿನಿಮಾಗಳು ಲಭಿಸಿವೆ. ರಾಘವೇಂದ್ರ ರಾಜ್ ಕುಮಾರ್ ಅವರ ಅಭಿನಯದ 25ನೇ ಚಿತ್ರ ‘ಆಡಿಸಿದಾತ'ಕ್ಕೂ ಕೆಲಸ ಮಾಡುತ್ತಿದ್ದೇನೆ.

ಮನೆಯಿಂದ ಸಿಕ್ಕ ಪ್ರತಿಕ್ರಿಯೆಗಳು ಹೇಗಿದ್ದವು?
ನನ್ನ ತಾಯಿ ಸರೋಜಾ ಬಲ್ಲಾಳ್ ಚಿತ್ರರಂಗದ ಬಗ್ಗೆ ಹೆಚ್ಚು ತಿಳಿದುಕೊಂಡವರು ಅಲ್ಲವಾದರೂ ಈ ಮಗನ ಆಸಕ್ತಿಗೆ ಪ್ರೋತ್ಸಾಹ ನೀಡಿದ್ದಾರೆ. ತಂದೆ ರಾಘವೇಂದ್ರ ಬಲ್ಲಾಳ್ ನಿವೃತ್ತ ಮುಖ್ಯ ಶಿಕ್ಷಕರು. ಮಗಳು ಶರ್ಮಿಳಾ ತಂದೆಯ ಹಾದಿಯಲ್ಲಿ ನಡೆದು ಶಿಕ್ಷಕಿಯಾಗಿದ್ದಾರೆ. ನಾನು ಮಾತ್ರ ಯಾರಿಗೂ ಸಂಪರ್ಕವಿರದ ಅರಿಯದ ಬಣ್ಣದ ಲೋಕಕ್ಕೆ ಕಾಲಿಟ್ಟಾಗ ತಂದೆ ತಾಯಿಗೆ ಆತಂಕವಾಗಿದ್ದು ನಿಜ. ಆದರೆ ಪ್ರಸ್ತುತ ಗುರುತಿಸಿಲ್ಪಡುತ್ತಿರುವ ಸಿನಿಮಾ ಛಾಯಾಗ್ರಾಹಕನಾಗಿ ಬೆಳೆಯುತ್ತಿರುವುದರ ಬಗ್ಗೆ ಮನೆಯಲ್ಲಿ ಖುಷಿಯಿದೆ. ನನ್ನ ಪತ್ನಿ ಮಾನಸ ಬ್ಯಾಂಕ್ ಉದ್ಯೋಗಿಯಾಗಿದ್ದು, ನನ್ನ ಆಸಕ್ತಿಗೆ ಒತ್ತಾಸೆಯಾಗಿದ್ದಾಳೆ.


Click it and Unblock the Notifications











