ಕೊರೊನಾ ನಂತರ ಸಿನಿಮಾ ಉದ್ಯಮ: ರಮೇಶ್ ಅರವಿಂದ್ ವಿಶ್ಲೇಷಣೆ
ಆರ್ಥಿಕತೆ ಮೇಲೆ ಗದಾಪ್ರಹಾರ ಮಾಡಿರುವ ಕೊರೊನಾ ವೈರಸ್, ಕನ್ನಡ ಚಿತ್ರರಂಗದ ಮೇಲೆ ಬೀರಿರುವ ಪರಿಣಾಮಗಳೇನು? ಕೊರೊನಾ ನಂತರ ಚಿತ್ರರಂಗದಲ್ಲಿ ಆಗಬಹುದಾದ ಬದಲಾವಣೆಗಳೇನು? ಎಂಬ ಬಗ್ಗೆ ನಟ, ನಿರ್ದೇಶಕ ರಮೇಶ್ ಅರವಿಂದ್ ಅವರು 'ಕನ್ನಡ ಫಿಲ್ಮೀಬೀಟ್' ಜೊತೆ ಮಾತನಾಡಿದ್ದಾರೆ. ಅವರ ಅಭಿಪ್ರಾಯಗಳನ್ನು ಅವರದ್ದೇ ಮಾತಿನಲ್ಲಿ ಇಲ್ಲಿ ನೀಡಲಾಗಿದೆ.
''ಮಾನವ ಮೂಲತಃ ಸಂಘಜೀವಿ, ಆತನಿಗೆ ಸಮುದಾಯದಲ್ಲಿ ಬದುಕುವುದೇ ಇಷ್ಟ. ಭಾರತೀಯರು ನಾವು ದುಃಖ, ಸಂತೋಶ ಎರಡನ್ನೂ ಬಂಧು-ಬಾಂಧವರೊಂದಿಗೆ ಹಂಚಿಕೊಂಡು ಜೀವಿಸುವವರು. ಈ ಕೊರೊನಾ ಖಾಯಿಲೆಯಿಂದಾಗಿ ನಾವು ಒಂಟಿಯಾಗಿ ಬದುಕುತ್ತಿದ್ದೇವಷ್ಟೆ, ಇದು ನಮ್ಮ ಗುಣವಲ್ಲ. ಒಮ್ಮೆ ಈ ರೋಗ ಮರೆಯಾಗಲಿ ಎಲ್ಲರೂ ಇಮ್ಮಡಿ ಉತ್ಸಾಹದೊಂದಿಗೆ ಮರಳುತ್ತಾರೆ''.
''ಹಾಗೆಯೇ ಸಿನಿಮಾಕ್ಕೂ ಸಹ, ಈಗಿನ ಕೊರೊನಾ ಕಾರಣದಿಂದ ಸಿನಿಮೋದ್ಯಮಕ್ಕೆ ಹಿನ್ನೆಡೆ ಆಗಿದೆಯಷ್ಟೆ. ಆದರೆ ಒಮ್ಮೆ ಕೊರೊನಾ ಸಂಕಷ್ಟ ಮುಗಿದ ಮೇಲೆ ಜನರು ಹಿಂದಿನಂತೆಯೇ ಥಿಯೇಟರ್ ಗೆ ನುಗ್ಗುತ್ತಾರೆ ಎನ್ನುವುದರ ಬಗ್ಗೆ ನನಗೆ ಅನುಮಾನವಿಲ್ಲ. ಜೀವನ ಸುಲಭದ್ದಲ್ಲ, ಬಹಳ ಕಠಿಣ, ಹಾಗಾಗಿ ಮನೊರಂಜನೆ ಇಲ್ಲದಿದ್ದರೆ ಜೀವನ ಸವೆಸುವುದು ಇನ್ನಷ್ಟು ಕಷ್ಟವಾಗುತ್ತದೆ''.

'ಮಾಡರ್ನ್ ಡೇಸ್' ಸೂಪರ್ ಹಿಟ್ ಆಗಿದ್ದು ಇಂಥಹುದೇ ಸಮಯದಲ್ಲಿ
''ಹಿಂದೊಮ್ಮೆ ಹೀಗೆಯೇ ಆಗಿತ್ತು, 1930 ರ ಸಮಯದಲ್ಲಿ ದಿ ಗ್ರೇಟ್ ಡಿಪ್ರೆಶನ್ ಉಂಟಾಗಿತ್ತು, ಜಗತ್ತೇ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಒದ್ದಾಡಿತ್ತು. ದಿ ಗ್ರೇಟ್ ಡಿಪ್ರೆಶನ್ ಅಂಚಿನಲ್ಲಿಯೇ ಬಿಡುಗಡೆ ಆಗಿದ್ದ ಚಾರ್ಲಿ ಚಾಪ್ಲಿನ್ ಅವರ 'ಮಾಡರ್ನ್ ಡೇಸ್' ಸಿನಿಮಾ ಸೂಪರ್ ಹಿಟ್ ಆಯಿತು. ಈಗಲೂ ಹಾಗೆಯೇ ಈ ಸಂಕಷ್ಟದ ಕಾಲ ಸರಿದು ಹೋಗುತ್ತದೆ. ಕೊರೊನಾ ಮುಗಿದ ಮೇಲೆ ಬಿಡುಗಡೆ ಆಗುವ 'ಒಳ್ಳೆಯ ಚಿತ್ರ' ಖಂಡಿತ ಸೂಪರ್ ಡೂಪರ್ ಹಿಟ್ ಆಗುತ್ತದೆ ನೋಡುತ್ತಿರಿ''.

''ಕೊರೊನಾ ದಿಂದ ಅತಿಯಾಗಿ ಬಾಧಿತರಾಗಿರುವವರು ಇವರು''
''ಸದ್ಯ ಕೊರೊನಾ ಸಂಕಷ್ಟದಿಂದ ಸಿನಿಮೊದ್ಯಮದಲ್ಲಿ ಅತಿಯಾಗಿ ಬಾಧಿತರಾಗಿರುವವರು ದಿನಗೂಲಿ ನೌಕರರು. ನಂತರ ಸಾಲ ತಂದು ಸಿನಿಮಾ ನಿರ್ಮಾಣ ಮಾಡಿರುವ ನಿರ್ಮಾಪಕರು. ಇಬ್ಬರೂ ಬಹುವಾಗಿ ತೊಂದರೆಗೆ ಸಿಲುಕಿದ್ದಾರೆ. ಕೊರೊನಾ ಲಾಕ್ಡೌನ್ ಐದಾರು-ತಿಂಗಳು ಮುಂದುವರೆದು ಬಿಟ್ಟರೆ, ನಟ-ನಟಿಯರಿಗೂ ಕಷ್ಟ ಎದುರಾಗಿಬಿಡುತ್ತದೆ. ಹಣಕಾಸಿನ ಲೆಕ್ಕಾಚಾರದ ಬಗ್ಗೆ ನನಗೆ ಗೊತ್ತಿಲ್ಲ, ಆದರೆ ಸರ್ಕಾರ ಅಗತ್ಯ ನೆರವು ನೀಡುವುದೆನ್ನುವ ವಿಶ್ವಾಸವಿದೆ

''ಕೊರೊನಾ ನಂತರ ಗುಣಮಟ್ಟದ ಪ್ರೇಕ್ಷಕ ಹುಟ್ಟಿಕೊಂಡಿರುತ್ತಾನೆ''
''ಕೊರೊನಾ ಮುಗಿಯುವಷ್ಟರಲ್ಲಿ ಗುಣಮಟ್ಟದ ಪ್ರೇಕ್ಷಕ ಹುಟ್ಟಿಕೊಂಡಿರುತ್ತಾನೆ. ಮನೆಯಲ್ಲಿ ಕುಳಿತು ಅಭ್ಯಾಸವಿಲ್ಲದ ಪ್ರೇಕ್ಷಕ, ನೆಟ್ಫ್ಲಿಕ್ಸ್, ಅಮೆಜಾನ್ ಪ್ರೈಂಗಳಂತಹಾ ಓಟಿಟಿಗಳಲ್ಲಿ ತನಗೆ ಪರಿಚಯವೇ ಇಲ್ಲದ ಭಾಷೆಯ, ಪ್ರದೇಶದ ಸಿನಿಮಾಗಳು, ವೆಬ್ ಸೀರೀಸ್ಗಳನ್ನು ನೋಡಿದ್ದಾನೆ. ಅವನು ತಾನು ನೋಡಿದ ಸಿನಿಮಾಗಳ ಗುಣಮಟ್ಟವನ್ನು ಕನ್ನಡದ ಸಿನಿಮಾಗಳೊಂದಿಗೆ ಹೋಲಿಸಿ ನೋಡುತ್ತಾನೆ. ಹಾಗಾಗಿ ಅವನ ನಿರೀಕ್ಷೆಯಂತೆ ಸಿನಿಮಾ ಕಟ್ಟುವ ಪ್ರಬುದ್ಧತೆಯನ್ನು ಬರಹಗಾರರು, ನಿರ್ದೇಶಕರು ಬೆಳೆಸಿಕೊಳ್ಳಲೇ ಬೇಕಾಗುತ್ತದೆ. ಸ್ವತಃ ನನ್ನ ಶ್ರೀಮತಿಯವರೇ ಮಲೆಯಾಳಂ ಸಿನಿಮಾಗಳನ್ನು ನೋಡಿದ್ದಾರೆ. ನಾನೂ ನೋಡಿದ್ದೇನೆ, ಇದೆಲ್ಲಾ ನಮ್ಮ ಮನೆಯಲ್ಲಿ ಮುಂಚೆ ಆಗದ ವಿದ್ಯಮಾನ''.

ಪ್ರೇಕ್ಷಕ ಓಟಿಟಿ ಗಳಿಗೆ ಹೆಚ್ಚು ಹತ್ತಿರವಾಗಿದ್ದಾನೆ: ರಮೇಶ್
''ಕೊರೊನಾ ಲಾಕ್ಡೌನ್ನಲ್ಲಿ ಪ್ರೇಕ್ಷಕ ಓಟಿಟಿ ಗಳಿಗೆ ಹೆಚ್ಚು ಹತ್ತಿರವಾಗಿದ್ದಾನೆ. ಪ್ರೇಕ್ಷಕನಿಗೆ ಅವನ ಆಸಕ್ತಿಯ, ಅವನ ಅನುಕೂಲಕ್ಕೆ ತಕ್ಕಂತೆ ಕಂಟೆಂಟ್ ಅನ್ನು ಓಟಿಟಿಗಳು ಒದಗಿಸುತ್ತಿವೆ. ವಿಶ್ವದ ಅತ್ಯುತ್ತಮ ಸಿನಿಮಾಗಳನ್ನೇ ಪ್ರೇಕ್ಷಕನ ಮುಂದೆ ಇರಿಸಿದೆ ಓಟಿಟಿಗಳು. ಇವು ಹೊಸ ಸಾಧ್ಯತೆಯನ್ನು ಎಲ್ಲಾ ಚಿತ್ರರಂಗಕ್ಕೂ ನೀಡಿದೆ. ಸಿನಿಮಾ ಮಂದಿರಗಳಲ್ಲಿ ಪ್ರೇಕ್ಷಕನನ್ನು ತಲುಪಲಾಗದ ಸಿನಿಮಾಗಳು ಓಟಿಟಿಗಳ ಮೂಲಕ ತಲುಪುತ್ತಿವೆ. ಕನ್ನಡದ ದಿಯಾ ಮತ್ತು ಲವ್ ಮಾಕ್ಟೇಲ್ ಇದಕ್ಕೆ ಅತ್ಯುತ್ತಮ ಉದಾಹರಣೆ''.

ವಾದವನ್ನು ಪೂರ್ಣವಾಗಿ ಒಪ್ಪಲಾಗದು: ರಮೇಶ್ ಅರವಿಂದ್
''ನೆಟ್ಫ್ಲಿಕ್ಸ್, ಅಮೆಜಾನ್ ಪ್ರೈಂ ವಿಚಾರಕ್ಕೆ ಬರುವುದಾದರೆ ಓಟಿಟಿಗಳು ಚಿತ್ರಮಂದಿರಗಳನ್ನು ಕೊಲ್ಲುತ್ತವೆ ಎಂಬ ವಾದ ಪೂರ್ಣವಾಗಿ ಒಪ್ಪಲಾಗುವುದಿಲ್ಲ. ಟಿವಿ ಬಂದಾಗ ಸಿನಿಮಾ ಮೇಲೆ ಪರಿಣಾಮ ಬೀರುತ್ತವೆ ಎನ್ನಲಾಗಿತ್ತು, ನ್ಯೂಸ್ ಚಾನೆಲ್ಗಳು ಬಂದಾಗ ದಿನ ಪತ್ರಿಕೆಗಳು ಬಿದ್ದೇ ಹೋಗುತ್ತವೆ ಎಂದಿದ್ದರು. ಆದರೆ ಅದಾವುದೂ ಆಗಿಲ್ಲ. ಸಣ್ಣ ಮಟ್ಟದ ಪರಿಣಾಮವನ್ನು ಅಲ್ಲಗಳೆಯಲಾಗದಾದರೂ, ಸಿನಿಮೋದ್ಯಮ ಕಾಲದ ಅಗತ್ಯಕ್ಕೆ ತಕ್ಕಂತೆ ತನ್ನನ್ನು ತಾನು ಬದಲಾವಣೆಗೆ ಒಡ್ಡಿಕೊಂಡಿದೆ. ಓಟಿಟಿ ಕಾಲದಲ್ಲೂ ಹೀಗೆಯೇ ಆಗುತ್ತದೆ''.

ಈ ವಿಷಮ ಕಾಲವೂ ಸರಿದುಹೋಗುತ್ತದೆ: ರಮೇಶ್
''ಆರೋಗ್ಯದ ಕಾರಣಕ್ಕಾಗಿ ನಾವೆಲ್ಲಾ ಒಬ್ಬಂಟಿಯಾಗಿ ಬದುಕುತ್ತಿದ್ದೇವೆ. ಆದರೆ ಎಲ್ಲಾ ಕಾಲದಂತೆ ಈ ವಿಷಮ ಕಾಲವೂ ಸರಿದುಹೋಗುತ್ತದೆ, ಭರವಸೆಯ ಬೆಳ್ಳಿ ಗೆರೆ ಮೂಡಿಯೇ ತೀರುತ್ತದೆ''.


Click it and Unblock the Notifications











