ಒನ್ ಇಂಡಿಯಾ ಜೊತೆ 'ಇಷ್ಟಕಾಮ್ಯ' ಯಶಸ್ಸು ಆಚರಿಸಿಕೊಂಡ ಮಯೂರಿ
ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರು ನಿರ್ದೇಶನ ಮಾಡಿದ್ದ 'ಇಷ್ಟಕಾಮ್ಯ' ಸಿನಿಮಾ ಬಿಡುಗಡೆ ಆಗಿ ಮೂರು ವಾರ ಕಳೆದರೂ ಎಲ್ಲಾ ಕಡೆ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ.
ಇದೀಗ ಚಿತ್ರದ ಯಶಸ್ಸಿನ ಬಗ್ಗೆ ನಟಿ ಮಯೂರಿ ಅವರು ಫಿಲ್ಮಿಬೀಟ್ ಕನ್ನಡದೊಂದಿಗೆ ತಮ್ಮ ಖುಷಿ ಹಂಚಿಕೊಂಡಿದ್ದಾರೆ. ಇತ್ತೀಚೆಗೆ ಒನ್ ಇಂಡಿಯಾ ಕನ್ನಡ ಕಛೇರಿಗೆ ಭೇಟಿ ಕೊಟ್ಟಿದ್ದ ನಟಿ ಮಯೂರಿ ಅವರು 'ಇಷ್ಟಕಾಮ್ಯ' [ವಿಮರ್ಶೆ: 'ಇಷ್ಟಕಾಮ್ಯ', ಕನ್ನಡ ಮಣ್ಣಿನ ರಮ್ಯ ಪ್ರೇಮಕಾವ್ಯ] ಚಿತ್ರದ ಕುರಿತಾದ ಹಲವಾರು ವಿಚಾರಗಳನ್ನು ನಮ್ಮೊಂದಿಗೆ ಹಂಚಿಕೊಂಡು ತಮ್ಮ ಎರಡನೇ ಚಿತ್ರದ ಯಶಸ್ಸನ್ನು ಕೇಕ್ ಕತ್ತರಿಸುವ ಮೂಲಕ ಸಂಭ್ರಮದಿಂದ ಆಚರಿಸಿಕೊಂಡಿದ್ದಾರೆ.
ಲೋಕಲ್ ಚಾನೆಲ್ ಒಂದರಲ್ಲಿ ನಿರೂಪಕಿಯಾಗಿ ಕಾಣಿಸಿಕೊಂಡು ಮೊಟ್ಟ ಮೊದಲ ಬಾರಿಗೆ ಕ್ಯಾಮೆರಾ ಎದುರಿಸಿದ್ದ ನಟಿ ಮಯೂರಿ ಅವರು 'ಅಶ್ವಿನಿ ನಕ್ಷತ್ರ' ಎಂಬ ಧಾರಾವಾಹಿ ಮೂಲಕ ಎಲ್ಲರ ಮನೆ ಮಾತಾದರು. ತದನಂತರ 'ಕೃಷ್ಣಲೀಲಾ' ಎಂಬ ಚಿತ್ರದಲ್ಲಿ ಮಿಂಚಿ ಬೆಳ್ಳಿತೆರೆಯ ಮೇಲೂ ಪ್ರೇಕ್ಷಕರನ್ನು ಮೋಡಿ ಮಾಡಿದರು.

ನಟಿ ಮಯೂರಿ, ಛಾಯಾಗ್ರಾಹಕ ರವಿ ಮತ್ತು ಸಂಕಲನಕಾರ ಶ್ರೀಕಾಂತ್ ಅವರ ಜೊತೆ ನಿಮ್ಮ ಫಿಲ್ಮಿಬೀಟ್ ಕನ್ನಡ ನಡೆಸಿದ ಚಿಟ್ ಚಾಟ್ ಇಲ್ಲಿದೆ ನೋಡಿ.....
* 'ಇಷ್ಟಕಾಮ್ಯ' ಸಿನಿಮಾ ಯಶಸ್ಸು ಕಂಡಿದೆ ಹೇಗನ್ನಿಸುತ್ತಿದೆ?
-ನನ್ನ ಮೊದಲ ಸಿನಿಮಾ 'ಕೃಷ್ಣಲೀಲಾ' 100 ದಿನ ಆಯ್ತು, ಇದೀಗ ಮೇಷ್ಟ್ರ ಸಿನಿಮಾ 'ಇಷ್ಟಕಾಮ್ಯ' ಕೂಡ ಯಶಸ್ವಿಯಾಗಿದೆ. ನನಗೆ ಎಲ್ಲೋ ಒಂದು ಕಡೆ ನಂಬಿಕೆ ಇತ್ತು ಈ ಸಿನಿಮಾ ಖಂಡಿತ ಯಶಸ್ವಿ ಆಗುತ್ತೆ ಅಂತ.
ಪ್ರಯತ್ನಪಟ್ಟರೆ ಫಲ ಉಂಟು ಅಂತ ಹಿರಿಯರು ಹೇಳಿದ್ದು ಸುಳ್ಳಲ್ಲಾ ಅಂತ ನನಗೆ ಈಗ ಅನಿಸುತ್ತಿದೆ. ನಾನು ತುಂಬಾ ಕಷ್ಟಪಟ್ಟಿದ್ದೀನಿ ಅಚ್ಚರಿ ಅನ್ನೋ ಪಾತ್ರ ಮಾಡಲು. ನನಗೆ ತುಂಬಾ ಖುಷಿ ಆಗ್ತಾ ಇದೆ.

ನಮ್ಮ ಅಮ್ಮ ಯಾವಾಗ್ಲೂ ಹೇಳ್ತಾ ಇದ್ರು, ನೀನು ಮುಟ್ಟಿದ್ದೆಲ್ಲಾ ಚಿನ್ನ ಆಗ್ತಾ ಇದೆ ಅಂತ. ಅದು ನಿಜ ಆಗಿದೆ. ಚಿತ್ರದಲ್ಲಿ ಎಲ್ಲರ ಪಾತ್ರ ಕೂಡ ತುಂಬಾ ಚೆನ್ನಾಗಿ ಮೂಡಿಬಂದಿದೆ.['ಇಷ್ಟ-ಕಷ್ಟ'ಗಳ 'ಇಷ್ಟಕಾಮ್ಯ'ಕ್ಕೆ ವಿಮರ್ಶಕರು ಸೋತು ಹೋದ್ರಾ?]
* ಕಿರುತೆರೆಗೂ-ಹಿರಿತೆರೆಗೂ ವ್ಯತ್ಯಾಸ ಏನು? ನಿಮ್ಮ ಅಭಿಪ್ರಾಯ
-ವ್ಯತ್ಯಾಸ ಅಂದ್ರೆ ಎರಡರಲ್ಲೂ ನಟನೆ ಮಾಡುತ್ತೇವೆ, ಆದರೆ ಕಿರುತೆರೆ ನನಗೆ ತಾಯಿ ಇದ್ದಂತೆ, ಹಿರಿತೆರೆಯನ್ನು ನಾನು ತಂದೆಗೆ ಹೋಲಿಸುತ್ತೇನೆ. ಕಿರುತೆರೆ ಇಲ್ಲಾ ಅಂದಿದ್ರೆ ಯಾರೂ ನನ್ನನ್ನು ಗುರುತಿಸುತ್ತಿರಲಿಲ್ಲ, ಮಯೂರಿ ಅನ್ನೋ ಹುಡುಗಿಗೆ ಅವಕಾಶ ಕೊಡಬೇಕು ಅಂತ ಯಾರಿಗೂ ಅನಿಸುತ್ತಿರಲಿಲ್ಲ. 'ಅಶ್ವಿನಿ ನಕ್ಷತ್ರ' ಸೀರಿಯಲ್ ಅನ್ನು ನಾನು ನನ್ನ ಕೊನೆ ಉಸಿರು ಇರೋ ತನಕ ನೆನಪು ಮಾಡಿಕೊಳ್ಳುತ್ತೇನೆ.
* 'ಇಷ್ಟಕಾಮ್ಯ' ಮಾಡಬೇಕಾದರೆ 'ಅಚ್ಚರಿ'ಗೆ ಅಚ್ಚರಿ ಆಗಿದ್ದೇನು?
-'ಅಚ್ಚರಿ'ಗೆ ಅಚ್ಚರಿ ಆಗಿದ್ದೇ ಪಾತ್ರ. ಅಚ್ಚರಿ ಅಂದ್ರೆ ಏನೂ ತಿಳಿಯದ ಒಂದು ಪುಟ್ಟ ಹುಡುಗಿ. ಆಗಷ್ಟೇ ಪ್ರೀತಿ-ಪ್ರೇಮ ಅಂತ ಕನಸು ಕಾಣೋ ವಯಸ್ಸು. ಚಿತ್ರದಲ್ಲಿ 'ಅಚ್ಚರಿ' ಅನ್ನೋ ಪಾತ್ರಕ್ಕೆ ಡಿಸ್ಟ್ರಾಕ್ಷನ್ಸ್ ಇರುತ್ತೆ. ಇದು ತುಂಬಾ ಸ್ಟ್ರಾಂಗ್ ಪಾತ್ರ. ಎರಡು ಮುಖ ಇರುವ ಪಾತ್ರ, ಸೀರಿಯಲ್ ನಲ್ಲಿ ಅತ್ತು-ಅತ್ತು ಸಾಕಾಗಿತ್ತು, ಸೋ ಸಿನಿಮಾದಲ್ಲಿ ಎರಡು ಮುಖ ಇರುವ ಪಾತ್ರ ವಹಿಸೋದು ಅಂದಾಗ ಖುಷಿ ಆಯ್ತ. ನಾನು ನನ್ನ ಪಾತ್ರವನ್ನು ಅನುಭವಿಸಿಕೊಂಡು ನಟಿಸಿದ್ದೇನೆ.
* ಮತ್ತೆ ಸೀರಿಯಲ್ ಗೆ ಆಫರ್ ಬಂದ್ರೆ?
- ನನ್ನ ಅಮ್ಮ ಹೇಳಿದ ಹಾಗೆ 10 ಮಾಡಿ ಸೋಲೋ ಬದಲು 1 ಮಾಡಿ ಗೆಲ್ಲೋದು ಒಳ್ಳೆಯದು ಅಂತ. ಹಾಗಂತ ಎರಡು ಕಡೆ ಮ್ಯಾನೇಜ್ ಮಾಡೋಕ್ಕಾಗಲ್ಲ, ಮಾಡಿದ್ರೆ ಆ ಮನುಷ್ಯ ಸೋತು ಹೋಗುತ್ತಾನೆ. ಸೋ ಮುಂದೆ ಲೈಫ್ ನಲ್ಲಿ ಸೀರಿಯಲ್ ಮಾಡಬೇಕು ಅಂತ ಅನಿಸಿದ್ರೆ, ಖಂಡಿತ ಮಾಡುತ್ತೇನೆ. ಸದ್ಯಕ್ಕೆ ಸೀರಿಯಲ್ ಬಗ್ಗೆ ಯೋಚನೆ ಇಲ್ಲ.[ಅಂದು 'ಅಮೆರಿಕಾ! ಅಮೆರಿಕಾ!!' ಇಂದು 'ಇಷ್ಟಕಾಮ್ಯ']
* 'ಇಷ್ಟಕಾಮ್ಯ' ಉಳಿದ ಪಾತ್ರದ ಬಗ್ಗೆ ?
-ಚಿತ್ರದಲ್ಲಿ ಎಲ್ಲರಿಗೂ ಸಮಾನ ಪಾತ್ರ ಇತ್ತು, ಎಲ್ಲರಿಗೂ ಅವರದೇ ಆದಂತಹ ಡೈಲಾಗ್ಸ್ ಇತ್ತು. ಎಲ್ಲರೂ ಪೈಪೋಟಿ ಕೊಡುವವರೇ ಆಗಿದ್ದರು. ಕಾವ್ಯ, ವಿಜಯ್ ಸೂರ್ಯ ಎಲ್ಲರೂ ನನಗೆ ಚಾಲೆಂಜ್ ಆಗಿದ್ದರು. ಫ್ರೀ ಟೈಮ್ ನಲ್ಲಿ ಎಲ್ಲರಿಂದಲೂ ಹಲವಾರು ವಿಚಾರಗಳನ್ನು ಕಲಿತಿದ್ದೇನೆ.
* ಎಡಿಟಿಂಗ್ ಮಾಡುವಾಗ ಯಾವ ರೀತಿ ಎಂಜಾಯ್ ಮಾಡಿದ್ರಿ?
-ಶ್ರೀಕಾಂತ್: ನನಗೆ ಈ ಸಿನಿಮಾ ಎಡಿಟ್ ಮಾಡೋದು ಬಹಳ ಚಾಲೆಂಜ್ ಆಗಿತ್ತು. ಮೇಷ್ಟ್ರ ಸಿನಿಮಾ ಅಂತ ಅಂದಾಗ ಅದು ಇದ್ದೇ ಇರುತ್ತೆ. ಜೊತೆಗೆ ಬಹಳ ಎಂಜಾಯ್ ಕೂಡ ಮಾಡಿದ್ದೀನಿ. ಮೇಷ್ಟ್ರು ತುಂಬಾ ಸ್ವಾತಂತ್ರ ಕೊಡುತ್ತಾರೆ ನಮಗೆ ಕೆಲಸ ಮಾಡಲು.
ನಿನಗೆ ಏನು ಅನಿಸುತ್ತೆ ಅದನ್ನು ಮಾಡಪ್ಪ ಅಂತ ತುಂಬಾ ಫ್ರೀಡಂ ಕೊಡುತ್ತಾರೆ ಅದು ನನಗೆ ಕೆಲಸ ಮಾಡಲು ಉತ್ಸಾಹ ಜೊತೆಗೆ ಪ್ಲಸ್ ಪಾಯಿಂಟ್ ಆಯಿತು. ಜೊತೆಗೆ ಎಲ್ಲಾ ಪಾತ್ರಗಳನ್ನು ಕನೆಕ್ಟ್ ಮಾಡೋದು ಇರುತ್ತಲ್ವಾ, ಅದು ತುಂಬಾ ಚಾಲೆಂಜಿಂಗ್ ಆಗಿ ಇತ್ತು.
* ಕರ್ನಾಟಕದ ಪ್ರಸಿದ್ಧ ತಾಣಗಳನ್ನು ನಿಮ್ಮ ಕ್ಯಾಮೆರಾ ಕಣ್ಣಲ್ಲಿ ತೋರಿಸಿದ ಬಗ್ಗೆ ಹೇಳಿ?
-ಕ್ಯಾಮೆರಾ ಮೆನ್ ರವಿ: ನನಗೆ ಮಲೆನಾಡು ಅಂದ್ರೆ ತುಂಬಾ ಪ್ರೀತಿ, ನಾನು ಮಲೆನಾಡಿನಲ್ಲೇ ಸೆಟಲ್ ಆಗಬೇಕೆಂದಿದ್ದೆ, ನಾನು ಹೆಚ್ಚಾಗಿ ಅಲ್ಲೇ ಇರುತ್ತೇನೆ. ಮೇಷ್ಟ್ರಿಗೆ ಮಲೆನಾಡಿನಲ್ಲಿ ತುಂಬಾ ಜನ ಗೆಳೆಯರು ಇದ್ರು, ಆದ್ದರಿಂದ ಅವರ ಗೆಳೆಯರ ಸಹಾಯದಿಂದ ಮಲೆನಾಡು ಪ್ರದೇಶವನ್ನು ನಮ್ಮ ಸಿನಿಮಾದಲ್ಲಿ ತೋರಿಸಲು ನಮಗೆ ಸಹಾಯ ಆಯ್ತು.
ನನಗೆ ಸಿನಿಮಾ ಶುರು ಆಗುವಾಗಲೇ ನಂಬಿಕೆ ಇತ್ತು, ಇದು ಚಿತ್ರದಲ್ಲಿ ತುಂಬಾ ಚೆನ್ನಾಗಿ ಮೂಡಿ ಬರುತ್ತೆ ಅಂತ, ಯಾಕೆಂದ್ರೆ ಲೊಕೇಶನ್ ಗಳು ಹಾಗೆ ಇದ್ದವು. ಇಲ್ಲಿಯವರೆಗೆ ಯಾವ ಸಿನಿಮಾದವರು ತೋರಿಸದ ಲೋಕೇಶನ್ ಗಳನ್ನು ನಾವು ನಮ್ಮ ಸಿನಿಮಾದಲ್ಲಿ ತೋರಿಸಿದ್ದೇವೆ.
ಶೂಟಿಂಗ್ ಗೆ ಯಾರು ಅವಕಾಶ ಕೊಡಲ್ಲ, ಆದರೆ ನಾಗತಿಹಳ್ಳಿ ಅವರನ್ನು ನೋಡಿ ಗೇಟ್ ತೆಗಿತಾರೆ. ಕ್ಯಾಮೆರಾ ವರ್ಕ್ ಇನ್ನೂ ಚೆನ್ನಾಗಿ ಮಾಡಬಹುದಿತ್ತು, ಆದರೆ ನಮಗೆ ಕೆಲವು ಲಿಮಿಟೇಶನ್ ಇರೋದ್ರಿಂದ ಎಲ್ಲವನ್ನು ಮಾಡಕ್ಕಾಗಲ್ಲ.


Click it and Unblock the Notifications











