Don't Miss!
- News Toilet Photo Viral: ಕಡಿಮೆ ಖರ್ಚಿನಲ್ಲಿ 'ಲೀಕೆಜ್ ಟ್ಯಾಂಕರ್'ನಿಂದ ಟಾಯ್ಲೆಟ್ ನಿರ್ಮಾಣ: ನೀವೂ ಟ್ರೈ ಮಾಡಿ
- Sports IPL 2024: ಹೈದರಾಬಾದ್-ಡೆಲ್ಲಿ ನಡುವೆ ಮೆಗಾ ಫೈಟ್; ಟಾಸ್, ಆಡುವ 11ರ ಬಳಗದ ವರದಿ
- Automobiles ಭಾರತದಲ್ಲಿ 80 ಲಕ್ಷ ಸ್ಕೂಟರ್ ಮಾರಿದ ಜಪಾನ್ ಕಂಪನಿ: ವಿಶ್ವಗುರು ಭಾರತದಲ್ಲಿ ಎಲ್ಲವೂ ಸಾಧ್ಯ!
- Technology 6000mAh ಬ್ಯಾಟರಿಯ ಈ ಫೋನ್ ಶೀಘ್ರದಲ್ಲೇ ಖರೀದಿಗೆ ಲಭ್ಯ!..ಬೆಲೆ ಎಷ್ಟು?
- Lifestyle 2 ಬಗೆಯ ಮಜ್ಜಿಗೆ ಸಾರು ರೆಸಿಪಿ: ಕಾಯಿ ಹಾಕಿದ, ಕಾಯಿ ಹಾಕದ ಸಾರಿನ ರೆಸಿಪಿ
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಜಿಗರ್ ಥಂಡ' ರಿಯಲ್ ಹೀರೋ ಆರ್ಮುಗಂ ರವಿಶಂಕರ್ ಸಂದರ್ಶನ
"ಕನ್ನಡ ಚಿತ್ರಗಳಲ್ಲಿ ನನಗಾಗಿ ಅಂತ ವಿಶೇಷವಾಗಿ ಡೈಲಾಗ್ ಬರೆಯುತ್ತಾರೆ. ಆ ಡೈಲಾಗ್ ಗಳಿಂದ ನಾನು ಫೇಮಸ್ ಆದೆ. ಎಲ್ಲಾ ಸಿನಿಮಾಗಳಿಗೆ ವಿಶೇಷ ಡೈಲಾಗ್ ಬರೆದು ನನ್ನನ್ನು ಎಲ್ಲರೂ ಗುರುತಿಸುವಂತೆ ಮಾಡಿದ ಡೈಲಾಗ್ ಮಹಾಶಯರಿಗೆ ಕೋಟಿ ವಂದನೆ' ಅಂತ ಮಾತು ಆರಂಭಿಸುತ್ತಾರೆ ರವಿಶಂಕರ್ ಅವರು.
ವಿಶಿಷ್ಟ ಧ್ವನಿ, ಸ್ಟೈಲಿಷ್ ಡೈಲಾಗ್ ಡೆಲಿವರಿ ಹಾಗೂ ವಿಭಿನ್ನ ಖದರ್ ವುಳ್ಳ ನಟನೆಯ ಮೂಲಕ ಕನ್ನಡ ಚಿತ್ರರಂಗದಲ್ಲಿ ಸಂಚಲನ ಸೃಷ್ಟಿಸಿದ ಖಡಕ್ ಖಳನಟ ರವಿಶಂಕರ್ ಅವರು ಸುದೀಪ್ ಅವರ ಜೊತೆ 'ಕೆಂಪೇಗೌಡ' ಚಿತ್ರದಲ್ಲಿ 'ಆರ್ಮುಗಂ' ಆಗಿ ಅಬ್ಬರಿಸಿದ ನಂತರ ಚಿಕ್ಕ ಮಕ್ಕಳಿಂದ ಹಿಡಿದು ಮುದಿ ವಯಸ್ಸಿನ ಪ್ರೇಕ್ಷಕರಿಗೂ ಇಷ್ಟವಾಗಿದ್ದಾರೆ.
ಇದೀಗ 50ನೇ ಸಿನಿಮಾ ಕೂಡ ತಮ್ಮ ನೆಚ್ಚಿನ ಗೆಳೆಯ ಕಿಚ್ಚ ಸುದೀಪ್ ಅವರ ಜೊತೆ ಮಾಡುತ್ತಿರುವುದಕ್ಕೆ ಖುಷಿ ವ್ಯಕ್ತಪಡಿಸುತ್ತಾರೆ. ನಾಳೆ (ಜೂನ್ 24) ಕಿಚ್ಚ ಕ್ರಿಯೇಷನ್ಸ್ ಅಡಿಯಲ್ಲಿ ಮೂಡಿಬರುತ್ತಿರುವ 'ಜಿಗರ್ ಥಂಡ' ಚಿತ್ರ ತೆರೆ ಕಾಣುತ್ತಿದ್ದು, ಇದರಲ್ಲಿ ನಟ ರವಿಶಂಕರ್ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ.[50ರ ಗಡಿ ತಲುಪಿದ ಸಂಭ್ರಮದಲ್ಲಿ 'ಆರ್ಮುಗಂ' ರವಿಶಂಕರ್]
ಪ್ರತೀ ಸಿನಿಮಾದಲ್ಲೂ ವಿಭಿನ್ನ ಸ್ಟೈಲ್ ನಲ್ಲಿ ವಿಲನ್ ಆಗಿ ಕಾಣಿಸಿಕೊಳ್ಳುವ ನಟ ರವಿಶಂಕರ್ ಅವರು 'ಜಿಗರ್ ಥಂಡ' ಚಿತ್ರದಲ್ಲೂ ಬೇರೆ ತರ ಮಿಂಚಿದ್ದಾರೆ. ಮಾತ್ರವಲ್ಲದೇ ಈ ಚಿತ್ರದ ಹಾಡೊಂದಕ್ಕೆ ಇದೇ ಮೊದಲ ಬಾರಿಗೆ ಧ್ವನಿ ನೀಡಿದ್ದಾರೆ.
ಅಂದಹಾಗೆ 'ಜಿಗರ್ ಥಂಡ' ಬಗ್ಗೆ ಕೆಲವು ಕುತೂಹಲಕಾರಿ ವಿಷಯಗಳು ಹಾಗೂ 50 ನೇ ಸಿನಿಮಾ ಪೂರೈಸಿದ ಹಿನ್ನಲೆಯಲ್ಲಿ ಕೆಲವು ಘಟನೆಗಳನ್ನು ರವಿಶಂಕರ್ ಅವರು ನಮ್ಮೊಂದಿಗೆ ಹಂಚಿಕೊಂಡಿದ್ದಾರೆ. ಖಳನಟ ರವಿಶಂಕರ್ ಅವರ ಜೊತೆ ನಿಮ್ಮ ಫಿಲ್ಮಿಬೀಟ್ ಕನ್ನಡ ನಡೆಸಿದ ಚಿಟ್ ಚಾಟ್ ನೋಡಲು ಕೆಳಗಿನ ಸ್ಲೈಡ್ಸ್ ಕ್ಲಿಕ್ ಮಾಡಿ...
* 50ನೇ ಸಿನಿಮಾ ಕಿಚ್ಚ ಸುದೀಪ್ ಅವರ ಜೊತೆ ಮಾಡ್ತಾ ಇದ್ದೀರಾ, ಹೇಗನ್ನಿಸ್ತಾ ಇದೆ?
- ಸುದೀಪ್ ಅವರ ಜೊತೆ 'ಕೆಂಪೇಗೌಡ' ಚಿತ್ರ ಮಾಡಿದೆ ಅದು ನನಗೆ ದೊಡ್ಡ ಹೆಸರು ತಂದುಕೊಟ್ಟಿತು. ಇದೀಗ ಮತ್ತೆ 50ನೇ ಸಿನಿಮಾ ಕಿಚ್ಚ ಕ್ರಿಯೇಷನ್ಸ್ ನಲ್ಲಿ ಮಾಡೋಕೆ ಸಿಕ್ತು. ನಾನು ತುಂಬಾ ಅದೃಷ್ಟ ಮಾಡಿದ್ದೆ, ತುಂಬಾ ಸಂತೋಷ ಆಗ್ತಾ ಇದೆ. ಜೀವನ ಪೂರ್ತಿ ಕಿಚ್ಚ ಸುದೀಪ್ ಗೆ ಥ್ಯಾಂಕ್ಸ್ ಹೇಳೋಕೆ ಇಷ್ಟಪಡ್ತೀನಿ. ನನಗೆ ಬ್ರೇಕ್ ಕೊಟ್ಟವರೇ ಸುದೀಪ್, ಇದೀಗ ತಿರುಗಾ ಅವರ ಬ್ಯಾನರ್ ನಲ್ಲೇ 50ನೇ ಸಿನಿಮಾ ಮಾಡೋಕೆ ಅವಕಾಶ ಕೊಟ್ಟಿದ್ದಾರೆ. ಬಹಳ ಪ್ರಮುಖವಾದ ಪಾತ್ರವನ್ನೇ ಕೊಟ್ಟಿದ್ದಾರೆ. ಹೇಳಲಾಗದಷ್ಟು ಆನಂದ ಆಗ್ತಾ ಇದೆ. -ರವಿಶಂಕರ್[ನಂಬಿದ್ರೆ ನಂಬಿ.! ರವಿಶಂಕರ್ ಇನ್ಮುಂದೆ ವಿಲನ್ ಅಲ್ಲ.! ಹೀರೋ ಕಣ್ರೀ!]
* 50 ಸಿನಿಮಾ ಪೂರೈಸಿದ್ರಿ, ಹೇಗಿತ್ತು ಇಲ್ಲಿಯವರೆಗಿನ ಸಿನಿಪಯಣ?
- ತುಂಬಾ ಅದ್ಭುತವಾಗಿತ್ತು, ಯಾಕೆಂದರೆ 2011ರಲ್ಲಿ 'ಕೆಂಪೇಗೌಡ' ಬಂದಾಗಿನಿಂದ ಜನ ನನಗೆ ಎಷ್ಟೊಂದು ಅಭಿಮಾನ-ಪ್ರೀತಿ ತೋರಿಸಿದ್ದಾರೆ ಅಂದ್ರೆ ಅದಕ್ಕೆ ನಾನು ಫಸ್ಟ್ ಕನ್ನಡ ಚಿತ್ರರಂಗಕ್ಕೆ ಧನ್ಯವಾದ ಹೇಳ್ತೀನಿ. ಕನ್ನಡ ಇಂಡಸ್ಟ್ರಿಯವರು ನನ್ನನ್ನು ಕರೆದು ಮರ್ಯಾದೆ ಕೊಟ್ಟು ಒಳ್ಳೆ ಒಳ್ಳೆ ಪಾತ್ರ ಕೊಟ್ಟಿದ್ದಾರೆ. -ರವಿಶಂಕರ್[ಕೂದಲು ಕಟ್ ಮಾಡಿದ್ದಕ್ಕೆ ಲಿಫ್ಟ್ ಒಡೆದು ಹಾಕಿದ್ದ ರವಿಶಂಕರ್!]
ಯಾರೂ ದೂರ ತಳ್ಳಲಿಲ್ಲ
ಯಾರೋ ಏನೋ, ಎಲ್ಲಿಂದಾನೋ ಬಂದಿದ್ದಾನೆ, ಇವನಿಗ್ಯಾಕೆ ಕೊಡಬೇಕು ಅಂತ ಯಾರಾದರು ಒಬ್ಬರು ಅಂದುಕೊಂಡ್ರೆ ಸಾಕಲ್ವ. ಆದರೆ 'ಇಲ್ಲಿ ಇವರು ಬರ್ಲಿ, ಒಳ್ಳೆ ಆರ್ಟಿಸ್ಟ್, ಚಾನ್ಸ್ ಕೊಡೋಣ ಅಂತ ಎಲ್ಲರೂ ಇಷ್ಟು ಒಳ್ಳೊಳ್ಳೆ ಚಾನ್ಸ್ ಕೊಟ್ಟಿದ್ದಾರೆ, ಇವತ್ತು ಕೊಡ್ತಾ ಇದ್ದಾರೆ ಅಂದ್ರೆ ಅದಕ್ಕೆ ಕನ್ನಡ ಫಿಲ್ಮ್ ಇಂಡಸ್ಟ್ರಿಗೆ ಥ್ಯಾಂಕ್ಸ್ ಹೇಳ್ತೀನಿ.- ರವಿಶಂಕರ್[ನಟ ರವಿಶಂಕರ್ ಬಗ್ಗೆ ನಿಮಗೆ ಗೊತ್ತಿಲ್ಲದ ಸತ್ಯ ಸಂಗತಿಗಳು!]
ಈ ಮಟ್ಟದಲ್ಲಿ ಇರಲು ಕಾರಣ ತಂತ್ರಜ್ಞರ ಶ್ರಮ
ನಾನೀಗ ಈ ಮಟ್ಟದಲ್ಲಿ ಇರಲು ಮುಖ್ಯ ಕಾರಣ ಅಂದ್ರೆ ಸ್ಟೋರಿ ಬರೆಯುವವರು, ಮತ್ತು ಡೈಲಾಗ್ ಬರೆಯುವವರು. ಯಾಕೆಂದ್ರೆ ಇವತ್ತಿಗೂ ನಾನು ಹೊಡಿಯುವ ಆ ಖಡಕ್ ಡೈಲಾಗ್ ಏನು ಇದೆಯಲ್ವಾ, ಅದು ಅವರು ನನಗಾಗಿ ಬರೆದಿದ್ದು. ರವಿಶಂಕರ್ ಗೆ ಹೀಗೆ ಡೈಲಾಗ್ ಇರಬೇಕು ಅಂತ ಬರೀತಾರೆ. ಆದರೆ ಜನ ಹೊಗಳೋದು ಡೈಲಾಗ್ ಹೊಡೆದ ನನ್ನನ್ನು ಮಾತ್ರ ಬಿಟ್ಟರೆ ಅವರನ್ನು ಯಾರು ಗುರುತಿಸೋದಿಲ್ಲ. ಅವರು ಹಾರ್ಡ್ ವರ್ಕ್ ಮಾಡಿ ಮನೆಯಲ್ಲಿ ಕುಳಿತು ಯೋಚನೆ ಮಾಡಿ ಬರೆದಿರುತ್ತಾರೆ. -ರವಿಶಂಕರ್[ಖಡಕ್ ಖಳ ನಟ ರವಿಶಂಕರ್ ಗೆ ಅವಮಾನ ಮಾಡಿದವರು ಯಾರು?]
ಜನ್ಮದಲ್ಲಿ ಋಣ ತೀರಿಸಲು ಸಾಧ್ಯವಿಲ್ಲ
'ಏನ್ ಹಂಗೆ ನೋಡ್ತಾ ಇದ್ದೀಯಾ, ಶಾಕ್ ಆಯ್ತಾ? ಆಗ್ಲೇಬೇಕು? ನನಗೆ ಆಪಾ? ಅಂತ ನಾನು ಡೈಲಾಗ್ ಹೊಡ್ದೆ ಅಲ್ವಾ, ಅದನ್ನು ಈಗ ಸಣ್ಣ ಮಕ್ಕಳು ಹೊಡಿತಾರೆ. ಆದ್ರೆ ಆವತ್ತು ಅವರು ಕುಳಿತು ಈ ಡೈಲಾಗ್ ಬರೆಯಲು ತಲೆಗೆ ಎಷ್ಟು ಕೆಲಸ ಕೊಟ್ಟಿರ್ತಾರೆ. ಅಂತವರಿಗೆ ನಾನು ತುಂಬಾ ಧನ್ಯವಾದ ಹೇಳೋಕೆ ಇಷ್ಟಪಡ್ತೀನಿ. ಕಥೆ ಬರೆಯುವವರು, ಡೈಲಾಗ್ ಬರೆಯುವವರು, ಎಲ್ಲವನ್ನು ಸುಂದರವಾಗಿ ಚಿತ್ರೀಕರಣ ಮಾಡುವ ಡೈರೆಕ್ಟರ್ ಗಳು, ಸಹ ಕಲಾವಿದರು ಎಲ್ಲರೂ ಸೇರಿ ನನಗೆ ಈ ಸ್ಥಾನ ಕೊಟ್ಟಿದ್ದಾರೆ. ಇದೆಲ್ಲಕ್ಕಿಂತ ಮುಖ್ಯವಾಗಿ ನಮ್ಮ ಕನ್ನಡ ಪ್ರೇಕ್ಷಕರು. ಎಲ್ಲಿ ಹೋದ್ರು ರವಿಶಂಕರ್ ಸರ್ ಅಂತ ನನಗೆ ಮರ್ಯಾದೆ ಕೊಟ್ಟಿದ್ದಾರೆ. ಇದೆಲ್ಲವನ್ನು ನಾನು ಯಾವ ಜನ್ಮದಲ್ಲಿ ತೀರಿಸ್ತೀನೋ ಗೊತ್ತಿಲ್ಲ.
* 'ಜಿಗರ್ ಥಂಡ' ಅಂದ್ರೆ ಏನು?
- ಜಿಗರ್ ಅಂದ್ರೆ ಹಾರ್ಟ್ (ಹೃದಯ) ಅಂತ ಅರ್ಥ, ಥಂಡ ಅಂದ್ರೆ ಕೋಲ್ಡ್. ಕೋಲ್ಡ್ ಆಗಿರೋ ಹೃದಯ ಇರೋನು, ಅಂದ್ರೆ ಇಂಗ್ಲೀಷ್ ನಲ್ಲಿ ಕೋಲ್ಡ್ ಬ್ಲಡೆಡ್ ಮರ್ಡರರ್ ಅಂತ ಅರ್ಥ.
* ಕಿಚ್ಚ ಸುದೀಪ್ ಅವರು ಸೆಟ್ ನಲ್ಲಿ ಹೇಗೆ ಇರ್ತಾ ಇದ್ರು? ಅವರು ಈ ಸಿನಿಮಾದಲ್ಲಿ ನಟಿಸಿದ್ದಾರಾ?
- ಸುದೀಪ್ ಅವರು ಸಿನಿಮಾದಲ್ಲಿ ನಟಿಸಿಲ್ಲ, ಆದರೆ ಇಡೀ ಸಿನಿಮಾದಲ್ಲಿ ಎಲ್ಲಾ ಕಡೆ ಅವರ ಇರುವಿಕೆ ಎದ್ದು ಕಾಣುತ್ತದೆ. ಅದು ಹೇಗಪ್ಪಾ ಅಂದ್ರೆ ಯಾವುದೇ ಡೈಲಾಗ್ ಇರಬಹುದು, ಅಥವಾ ಫಿನಿಶಿಂಗ್, ಅದೆಲ್ಲಾ ಯಾಕೆ ಮೇಕಪ್ಪ್ ನಲ್ಲಿ ಕೂಡ ಅವರ ಇರುವಿಕೆ ಎದ್ದು ಕಾಣುತ್ತದೆ. ಎಲ್ಲದರಲ್ಲೂ ಅವರ ಕೈ ಇದ್ದೇ ಇರುತ್ತೆ. ನನ್ನ ವಿಷಯದಲ್ಲೂ ಅಷ್ಟೇ, ನಾನು ಸುದೀಪ್ ಅವರಿಗೆ ಹೇಗೆ ಬೇಕೋ ಹಾಗೆ ನನ್ನನ್ನು ಅವರೇ ತಯಾರು ಮಾಡುತ್ತಿದ್ದರು. ಅವರ ಜೊತೆ ಇರುವ ಎಲ್ಲಾ ಸಿನಿಮಾಗಳಲ್ಲಿ ನನ್ನ ಕೂದಲಿಗೆ ಕತ್ತರಿ ಹಾಕಿದ್ದಾರೆ.
ಸುದೀಪ್ ಅವರಿಗೆ ಎಲ್ಲವೂ ಪರ್ಫೆಕ್ಟ್ ಆಗಿರಬೇಕು
ಜಿಗರ್ ಥಂಡ ಶೂಟಿಂಗ್ ಸ್ಪಾಟ್ ಗೆ ಬಂದಿದ್ದಾರೆ. ಆದರೆ ರೆಗ್ಯುಲರ್ ಆಗಿ ಬರ್ತಾ ಇರ್ಲಿಲ್ಲ. ಆವಾಗ ಅವರು 'ಮುಕುಂದ ಮುರಾರಿ', 'ಕೋಟಿಗೊಬ್ಬ ೨' ಸಿನಿಮಾದ ಶೂಟಿಂಗ್ ನಲ್ಲಿ ಬ್ಯುಸಿ ಆಗಿದ್ರು. ದೊಡ್ಡ-ದೊಡ್ಡ ಸೀನ್ ಶೂಟ್ ಇದ್ದಾಗ ಅವರು ಮೊದಲೇ ಚರ್ಚೆ ಮಾಡ್ತಾ ಇದ್ರು. ಏನಪ್ಪಾ ಈ ಸೀನ್ ಹೇಗೆ ಮಾಡಬಹುದು?, ನೀವು ಏನು ಅನ್ಕೊಂಡಿದ್ದೀರಾ? ಅಂತ ಕೇಳಿ ಆಮೇಲೆ ಫೈನಲ್ ಮಾಡ್ತಾ ಇದ್ರು. ಯಾರೂ ಕೂಡ ಇಷ್ಟೆಲ್ಲಾ ಒಟ್ಟಿಗೆ ನಿಂತು ಮಾಡಿಸೋದಿಲ್ಲಾ, ಆದ್ರೆ ಸುದೀಪ್ ಅವರು ಮಾಡಿದ್ದಾರೆ, ಅವರಿಗೆ ಯಾವಾಗಲೂ, ಎಲ್ಲವೂ ಪರ್ಫೆಕ್ಟ್ ಆಗಿ ಇರಬೇಕು.
* ರಾಹುಲ್ ಜೊತೆ ಶೂಟಿಂಗ್ ಅನುಭವ ಹೇಗಿತ್ತು?
- ರಾಹುಲ್ ನನಗೆ ಸುಮಾರು 5-6 ವರ್ಷಗಳಿಂದ ಗೊತ್ತು. ಅವರೆಲ್ಲಾ ಸಿಸಿಎಲ್ ಆಡ್ತಾ ಇದ್ರಲ್ವಾ? ಹಾಗೆ ಮೊದಲೇ ಪರಿಚಯ. ರಾಹುಲ್ ತುಂಬಾ ಒಳ್ಳೆ ಹುಡುಗ, ತುಂಬಾ ಹಾರ್ಡ್ ವರ್ಕ್ ಮಾಡೋ ಹುಡುಗ. ಜೊತೆಗೆ ತುಂಬಾ ವಿಧೇಯ ನಟ ಕೂಡ. ಈ ಚಿತ್ರದಲ್ಲಿ ಅವರು ಮಾಡಿರುವ ಪಾತ್ರಕ್ಕೆ ಸರಿಯಾಗಿ ಸೂಟ್ ಆಗ್ತಾರೆ . ಮತ್ತೆ ಸಾಧು ಕೋಕಿಲಾ, ನನ್ನ ಜೊತೆ ಹಾಗೂ ಇಡೀ ಸೆಟ್ ನಲ್ಲಿ ಎಲ್ಲರ ಜೊತೆ ತುಂಬಾ ಫ್ರೆಂಡ್ಲಿ ಆಗಿ ಇರ್ತಾ ಇದ್ರು. ಅಲ್ಲದೇ ಅವರಿಗೆ ಈ ಸಿನಿಮಾ ಖಂಡಿತ ಬ್ರೇಕ್ ಕೊಡುತ್ತೆ. ಅಷ್ಟು ಚೆನ್ನಾಗಿ ಅವರು ಆಕ್ಟ್ ಮಾಡಿದ್ದಾರೆ. ಅವರು ಈ ಸಿನಿಮಾದ ಮೂಲಕ ರೀ-ಲಾಂಚ್ ಆಗಿದ್ದಾರೆ ಅಂದ್ರೂ ತಪ್ಪಾಗಲ್ಲ.
* ಕೊನೆಯದಾಗಿ ಏನು ಹೇಳೋಕೆ ಇಷ್ಟಪಡ್ತೀರಾ?
- ಕನ್ನಡ ಚಿತ್ರರಂಗಕ್ಕೆ ಒಳ್ಳೆ ಕಾಲ ಬಂದಿದೆ. ಅಲ್ಲದೇ ಪಾಸಿಟಿವ್ ಆಗಿ ಜನರು ರೆಸ್ಪಾನ್ಸ್ ಮಾಡ್ತಾ ಇದ್ದಾರೆ. ಒಳ್ಳೆ ಸಿನಿಮಾ ಬಂದಾಗ ಜನ ನೋಡ್ತಾರೆ ಅನ್ನೋದಕ್ಕೆ 'ತಿಥಿ', 'ಯು-ಟರ್ನ್', 'ರಂಗಿತರಂಗ' ಸಿನಿಮಾಗಳೇ ಸಾಕ್ಷಿ. ಹಾಗಾಗಿ ನಮ್ಮ ಸಿನಿಮಾವನ್ನು ಕೂಡ ಥಿಯೇಟರ್ ನಲ್ಲೇ ಬಂದು ನೋಡಿ. ಖಂಡಿತ ಎರಡೂವರೆ ಘಂಟೆ ತುಂಬಾ ಒಳ್ಳೆ ಮನರಂಜನೆ ನೀಡುವ ಸಿನಿಮಾ. ಎಲ್ಲಾ ಕುಟುಂಬ ಸಮೇತ ಬಂದು ನೋಡಿ ಅಂತ ಕೇಳಿಕೊಳ್ಳುತ್ತೇನೆ.