ರಿಯಾಲಿಟಿ ಶೋಗಳಲ್ಲಿ ಸಂಗೀತ ನುಡಿಸುವ ಈ ರಿಯಲ್ ಟ್ಯಾಲೆಂಟ್ ಪರಿಚಯ
ಕೆಲವರು ಪ್ರತಿಭೆ ಇದ್ದರೂ ಎಲೆ ಮರೆ ಕಾಯಿ ಅಂತೆ ಇರುತ್ತಾರೆ. ಆ ರೀತಿ ಇರುವ ಒಬ್ಬ ಹುಡುಗನ ಪರಿಚಯವನ್ನು ಇಲ್ಲಿ ನಾವು ಮಾಡಿಕೊಂಡುತ್ತಿದ್ದೇವೆ. ಆ ಪ್ರತಿಭಾವಂತ ಹುಡುಗನೇ ಆಕಾಶ್ ಪರ್ವ.
ಸಂಗೀತವೇ ಸರ್ವಸ್ವ ಎಂದುಕೊಂಡಿರುವ ಆಕಾಶ್ ಪರ್ವ ಈಗಾಗಲೇ ಸಾಕಷ್ಟು ದೊಡ್ಡ ದೊಡ್ಡ ರಿಯಾಲಿಟಿ ಶೋ ಗಳಿಗೆ ಸಂಗೀತ ನುಡಿಸಿದ್ದಾರೆ. ನಾದ ಬ್ರಹ್ಮ ಹಂಸಲೇಖ, ಮನೋಮೂರ್ತಿ, ವಿ ಮನೋಹರ್, ವಿಜಯ ಪ್ರಕಾಶ್, ಅರ್ಜುನ್ ಜನ್ಯ ಹೀಗೆ ಸಾಕಷ್ಟು ಸಂಗೀತ ನಿರ್ದೇಶಕರೊಂದಿಗೆ ಕೆಲಸ ಮಾಡಿದ್ದಾರೆ. ವಿದೇಶದಲ್ಲಿ ಅದೆಷ್ಟೋ ಕಾರ್ಯಕ್ರಮಗಳನ್ನು ನೀಡಿದ್ದಾರೆ.
ಆಕಾಶ್ ಕೀ ಬೋರ್ಡ್ ನುಡಿಸಿರುವ ಅನೇಕ ಕಾರ್ಯಕ್ರಮಗಳನ್ನು ಎಲ್ಲರೂ ನೋಡಿರುತ್ತಾರೆ. ಅವರ ಸಂಗೀತಕ್ಕೆ ತಲೆದೂಗಿರುತ್ತಾರೆ. ಹೀಗಿದ್ದರೂ ಅನೇಕರಿಗೆ ಅವರ ಪರಿಚಯ ಇರುವುದಿಲ್ಲ. ಸೋ, ಇಂತಹ ಪ್ರತಿಭಾವಂತ ಸಂಗೀತಗಾರನ ಬಗ್ಗೆ ಒಂದಷ್ಟು ವಿವರಗಳು ಮುಂದಿದೆ ಓದಿ...
ಸಂದರ್ಶನ : ನವಿ ಕನಸು (ನವೀನ್ ಎಂ ಎಸ್)

ಆಕಾಶ್ ಪರ್ವ ಎಂಬ ಪ್ರತಿಭಾವಂತ ಯುವಕ
ಆಕಾಶ್ ಪರ್ವ ಮೂಲತಃ ಬೆಂಗಳೂರಿನ ಚಾಮರಾಜಪೇಟೆಯವರು. BSC ಪದವೀಧರರಾಗಿರುವ ಇವರು ಚಿಕ್ಕ ವಯಸ್ಸಿನಿಂದಲೂ ಸಂಗೀತವನ್ನೇ ಉಸಿರಾಗಿಸಿಕೊಂಡವರು. ತನ್ನ 10ನೇ ವಯಸ್ಸಿನಲ್ಲಿಯೇ ವೇದಿಕೆ ಕಾರ್ಯಕ್ರಮ ನೀಡಲು ಆರಂಭಿಸಿದ ಆಕಾಶ್ ಅವರಿಗೆ ಅವರ ತಂದೆ ತಾಯಿಯೇ ಮೊದಲ ಗುರುಗಳಂತೆ.

ಜನಪ್ರಿಯ ರಿಯಾಲಿಟಿ ಶೋ ಗಳಲ್ಲಿ ಸಂಗೀತ
ತನ್ನ 22ನೇ ವಯಸ್ಸಿನಲ್ಲಿಯೇ ಬಹುತೇಕ ಕನ್ನಡ ವಾಹಿನಿಗಳ ರಿಯಾಲಿಟಿ ಶೋ ಗಳಲ್ಲಿ ಆಕಾಶ್ ಕೆಲಸ ಮಾಡಿದ್ದರು. 'ಫ್ರೆಶ್ ವಾಯ್ಸ್ ಆಫ್ ಕರ್ನಾಟಕ', 'ನೋಡಿ ಸ್ವಾಮಿ ನಾವ್ ಹಾಡೊದೇ ಹೀಗೆ', 'ಮಧುರ ಮಧುರವೀ ಮಂಜುಳ ಗಾನ', 'ಸ್ಟಾರ್ ಸಿಂಗರ್', 'ಸಿಂಪಲ್ಲಾಗ್ ಒಂದ್ ಸಿಂಗಿಂಗ್ ಶೋ', 'ಎದೆ ತುಂಬಿ ಹಾಡುವೆನು' ಆಕಾಶ್ ಅವರ ಪ್ರಮುಖ ರಿಯಾಲಿಟಿ ಶೋಗಳಾಗಿವೆ.

ಇತ್ತೀಚಿಗಿನ ರಿಯಾಲಿಟಿ ಶೋ ಗಳು
ಜೀ ಕನ್ನಡ ವಾಹಿನಿಯ 'ಸ ರಿ ಗ ಮ ಪ ಸೀಸನ್ 10, 11, 12, 13 ಹಾಗೂ 14ರಲ್ಲಿ ಮ್ಯೂಸಿಷಿಯನ್ ಆಗಿ ಕಾರ್ಯ ನಿರ್ವಹಿಸಿದ್ದರು. ಸದ್ಯ ಕಲರ್ಸ್ ಸೂಪರ್ ಚಾನೆಲ್ ನಲ್ಲಿ ಪ್ರಸಾರ ಆಗುತ್ತಿರುವ 'ಕನ್ನಡ ಕೋಗಿಲೆ'ಯಲ್ಲಿಯೂ ಸಹ ಆಕಾಶ್ ಕೀಬೋರ್ಡ್ ಪ್ಲೇ ಮಾಡುತ್ತಿದ್ದಾರೆ.

ದೊಡ್ಡ ದೊಡ್ಡ ಸಂಗೀತ ನಿರ್ದೇಶಕರ ಜೊತೆಗೆ ಕೆಲಸ
ನಾದ ಬ್ರಹ್ಮ ಹಂಸಲೇಖ, ಮನೋಮೂರ್ತಿ, ವಿ. ಮನೋಹರ್, ವಿಜಯ್ ಪ್ರಕಾಶ್, ಪ್ರವೀಣ್ ಗೊಡ್ಕಿಂಡಿ, ರಾಜೇಶ್ ಕೃಷ್ಣನ್, ಎಂ ಡಿ ಪಲ್ಲವಿ, ಅರ್ಚನಾ ಉಡುಪ, ಅರ್ಜುನ್ ಜನ್ಯ ರವರಂತಹ ಮಹಾನ್ ಸಂಗೀತ ನಿರ್ದೇಶಕ ಹಾಗೂ ಗಾಯಕರ ಜೊತೆಗೆ ಆಕಾಶ್ ತಮ್ಮ ಸಂಗೀತ ಪ್ರತಿಭೆಯನ್ನು ಪ್ರದರ್ಶನ ಮಾಡಿದ್ದಾರೆ. ವಿದೇಶದಲ್ಲೂ ಅನೇಕ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಜೊತೆಗೆ ತನ್ನ ಹಾಡುಗಾರಿಕೆಯ ಮೂಲಕವೂ ಗಮನ ಸೆಳೆದಿದ್ದಾರೆ.

ಆಕಾಶ್ ಪ್ರತಿಭೆ ಮೆಚ್ಚಿದ ದರ್ಶನ್
ರಿಯಾಲಿಟಿ ಶೋ ಗಳ ಜೊತೆಗೆ 'ದಿವ್ಯ ಸನ್ನಿಧಿ', 'ನಿನ್ನದೇ ಕಲರವ', 'ಕರ್ಮಾ' ಸೇರಿದಂತೆ ಅನೇಕ ಕಿರುಚಿತ್ರಗಳಿಗೆ ಸಂಗೀತ ನಿರ್ದೇಶನ ಮಾಡಿದ್ದಾರೆ. ಇನ್ನು ಆಕಾಶ್ ಪ್ರತಿಭೆ ಬಗ್ಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ ಮಾತನಾಡಿದ್ದರು. ದರ್ಶನ್ ರವರ ಹುಟ್ಟುಹಬ್ಬಕ್ಕೆ ಕೊಡುಗೆಯಾಗಿ ಆಕಾಶ್ ಒಂದು ಹಾಡಿನ್ನು ಮಾಡಿದ್ದರು. ಈ ವೇಳೆ ಸ್ವತಃ ದರ್ಶನ್ ಹಾಡು ನೋಡಿ ಖುಷಿ ಪಟ್ಟಿದ್ದರು.

ಆಕಾಶ್ ಸಿನಿಮಾ ಯಾನ ಶುರು
ಹಂಸಲೇಖ, ಇಳಯರಾಜ, ಎ.ಆರ್. ರೆಹಮಾನ್, ಡಾಕ್, ಸ್ಟೀಫನ್ ದೇವಸ್ಸಿ ರವರನ್ನು ಸ್ಪೂರ್ತಿ ಯಾಗಿಸಿಕೊಂಡಿರುವ ಆಕಾಶ್ ಸಂಗೀತದಲ್ಲಿಯೇ ದೊಡ್ಡ ಸಾಧನೆ ಮಾಡಬೇಕು ಎಂಬ ಕನಸು ಹೊಂದಿದ್ದಾರೆ. ಇದೀಗ ಸ್ಯಾಂಡಲ್ ವುಡ್ ಗೆ ಸಂಗೀತಗಾರನಾಗಿ ಎಂಟ್ರಿ ಕೊಟ್ಟಿರುವ ಆಕಾಶ್ ಕೈನಲ್ಲಿ ಕೆಲ ಚಿತ್ರಗಳು ಇವೆ. ಅಂದಹಾಗೆ, ಸಂಗೀತದಲ್ಲಿ ಈ ಯುವ ಪ್ರತಿಭೆ ದೊಡ್ಡ ಹೆಸರು ಮಾಡಲಿ ಎನ್ನುವುದು ನಮ್ಮ ಆಶಯ.


Click it and Unblock the Notifications











