Don't Miss!
- News ಹಿರಿಯೂರು: ರಾಷ್ಟ್ರೀಯ ಹೆದ್ದಾರಿಯಲ್ಲಿ ಆಟೋ ಪಲ್ಟಿ: NHAIನ ಆ ಒಂದು ಯಡವಟ್ಟಿನ ವಿರುದ್ಧ ಭುಗಿಲೆದ್ದ ಆಕ್ರೋಶ
- Technology Poco: ಹೊಸದಾಗಿ ಲಾಂಚ್ ಆದ ಪೊಕೊ X6 ಪ್ರೊ 5G ಸ್ಮಾರ್ಟ್ಫೋನ್ಗೆ 17% ರಿಯಾಯಿತಿ!8 GB RAM
- Finance ಜಗತ್ತಿಗೆ ಭಾರತವೇ ಬಾಸ್, ಅಂತಾರಾಷ್ಟ್ರೀಯ ಹಣಕಾಸು ನಿಧಿ ಹೇಳಿದ್ದು ಏನು?
- Lifestyle ಶುಕ್ರವಾರ ವೈಭವ ಲಕ್ಷ್ಮಿ ವ್ರತ ಮಾಡೋದೇಕೆ..? ಹೇಗೆ ಆಚರಿಸಬೇಕು ಎಂಬ ಮಾಹಿತಿ ಇಲ್ಲಿದೆ..!
- Sports RCB vs KKR IPL 2024: ಕೆಕೆಆರ್ ವಿರುದ್ಧ ಆರ್ಸಿಬಿ ಹಸಿರು ಜೆರ್ಸಿಯಲ್ಲಿ ಕಣಕ್ಕೆ; ಅಂದೇ ಏಕೆ?
- Automobiles ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಚರ್ಚ್ನಲ್ಲಿದ್ದೀನಿ, ನಾನೇನು ಸನ್ಯಾಸಿ ಅಲ್ಲ': ಬೆಳ್ಳಿತೆರೆಗೆ ಮರಳಲಿರುವ ಮಹಾಲಕ್ಷ್ಮಿ
ಕನ್ನಡ ಚಿತ್ರರಂಗದ ಹಿರಿಯ ನಟಿ ಮಹಾಲಕ್ಷ್ಮಿ ಈಗ ಎಲ್ಲಿದ್ದಾರೆ? ಏನ್ಮಾಡ್ತಿದ್ದಾರೆ? ಎನ್ನುವ ಕುತೂಹಲ ಅನೇಕರಲ್ಲಿ ಇತ್ತು. 1980-90ರ ದಶಕದಲ್ಲಿ ಚಿತ್ರರಂಗವನ್ನಾಳಿದ ನಟಿ ಮಹಾಲಕ್ಷ್ಮಿ ದಿಢೀರನೆ ಬಣ್ಣದ ಲೋಕದಿಂದ ಮಾಯವಾಗಿದ್ದರು. ಅದ್ಭುತ ಅಭಿನಯದ ಮೂಲಕ ಕನ್ನಡ ಚಿತ್ರ ಪ್ರೇಕ್ಷಕರನ್ನು ರಂಜಿಸಿ, ಹೇಳದೆ ಕೇಳದೆ ಮಾಯವಾಗಿದ್ದ ಮಹಾಲಕ್ಷ್ಮಿ ಈಗ ಮತ್ತೆ ಬಣ್ಣದ ಲೋಕಕ್ಕೆ ವಾಪಸ್ ಆಗುತ್ತಿದ್ದಾರೆ.
ಮಹಾಲಕ್ಷ್ಮಿ ವಾಪಸ್ ಬರ್ತಿದ್ದಾರೆ ಎನ್ನುವ ವಿಚಾರ ಗೊತ್ತಾಗುತ್ತಿದ್ದಂತೆ ಯಾವ ಸಿನಿಮಾದಲ್ಲಿ ಅಭಿನಯಿಸುತ್ತಾರೆ ಎನ್ನುವುದಕ್ಕಿಂತ ಹೆಚ್ಚಾಗಿ ಎಲ್ಲಿದ್ದರು? ಏನು ಮಾಡುತ್ತಿದ್ದರು? ಎನ್ನುವ ಹಲವಾರು ವಿಚಾರಗಳ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಹೆಚ್ಚಾಗಿತ್ತು. ನಿನ್ನೆ ಪಿಲ್ಮಿ ಬೀಟ್ ಕನ್ನಡ ತಂಡ ಅವರನ್ನು ಸಂಪರ್ಕಿಸಿದಾಗ ಹೆಚ್ಚಿನ ಮಾಹಿತಿಯನ್ನು ನೀಡಿರಲಿಲ್ಲ. ಆದರೀಗ ಫಿಲ್ಮಿ ಬೀಟ್ ತಂಡದ ಜೊತೆ ಸುದೀರ್ಘವಾಗಿ ಮಾತನಾಡಿದ್ದಾರೆ. ಅಭಿಮಾನಿಗಳಿದ್ದ ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಿದ್ದಾರೆ. ಅವರು ಏನು ಹೇಳಿದ್ದಾರೆ ಎನ್ನುವುದನ್ನು ನೀವೆ ಓದಿ.
ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲ ಇತ್ತು ಮಹಾಲಕ್ಷ್ಮಿ ಎಲ್ಲಿದ್ದಾರೆ ಈಗ, ಹೇಗಿದ್ದಾರೆ ಅಂತ? ಹೇಗಿದ್ದೀರಿ?
ನಾನು ತುಂಬ ತುಂಬಾ ಚೆನ್ನಾಗಿ ಇದ್ದೀನಿ. ನನ್ನ ಬಗ್ಗೆ ಕೇಳಿ ಬರುತ್ತಿದ್ದ ಸುದ್ದಿಗಳೆಲ್ಲ ರೂಮರ್ಸ್ ಅಷ್ಟೆ, ನನಗೆ ತುಂಬ ಒಳ್ಳೆಯ ಫ್ಯಾಮಿಲಿ ಇದೆ. ನಾನು ಹೌಸ್ ವೈಫ್ ಆಗಿದ್ದೀನಿ, ನಾನು ಸನ್ಯಾಸಿ ಅಲ್ಲ, ನಾನು ಸಂಸಾರಸ್ತೆ ಎನ್ನುವುದನ್ನು ಸ್ಪಷ್ಟಪಡಿಸುತ್ತೇನೆ. ಚರ್ಚ್ ನಲ್ಲಿ ಕೆಲಸ ಮಾಡುತ್ತಿರುವುದು ನಿಜ ಆದರೆ ಸನ್ಯಾಸಿ ಅಲ್ಲ. ನಾನೂ ಚೆನ್ನೈನಲ್ಲಿ ನೆಲೆಸಿದ್ದೀನಿ.
ನಿಮ್ಮ ಬಗ್ಗೆ ಸಾಕಷ್ಟು ಸುದ್ದಿಗಳು ಹರಿದಾಡುತ್ತಿತ್ತು? ಇದೆಲ್ಲ ನಿಮ್ಮ ಗಮನಕ್ಕೆ ಬಂದಿದೆಯಾ?
ನಾನು ಆ ಬಗ್ಗೆ ಎಲ್ಲಾ ಪ್ರತಿಕ್ರಿಯೆ ಕೊಡಲು ಇಷ್ಟಪಡುವುದಿಲ್ಲ. ಅವರರವ ಅಭಿಪ್ರಾಯಗಳನ್ನು ಅವರು ಹೇಳಿದರು. ಎಲ್ಲರಿಗೂ ಒಂದು ಆಸಕ್ತಿ ಇರುತ್ತೆ ಎಲ್ಲಿ ಇದ್ದಾರೆ, ಏನು ಮಾಡುತ್ತಿದ್ದಾರೆ ಎನ್ನುವುದು. ಹಾಗಾಗಿ ಅವರಿಗೆ ಅನಿಸಿದನ್ನು ಅವರು ಹೇಳಿದ್ದಾರೆ ಅಷ್ಟೆ.
'ಒಲವಿನ' ಬದುಕಿನಲ್ಲಿ ನೊಂದ ನಟಿ ಮಹಾಲಕ್ಷ್ಮಿ 'ಸನ್ಯಾಸಿನಿ' ಆದ ಕಥೆ-ವ್ಯಥೆ
ಚಿತ್ರರಂಗದಿಂದ ದೂರ ಸರಿದಿದ್ದೇಕೆ?
ಪ್ರತಿಯೊಬ್ಬ ಹೆಣ್ಣುಮಗಳಿಗೂ ಒಂದು ಟೈಂನಲ್ಲಿ ಮದುವೆ ಆಗಬೇಕು, ತಾಯಿ ಆಗಬೇಕು ಅಂತ ಅನಿಸುತ್ತೆ. ಹಾಗೆ ನಾನು ಕೂಡ ಮದುವೆ ಆಗಿ ಹೌಸ್ ವೈಫ್ ಆಗಿದ್ದೀನಿ. ಕುಟುಂಬ ಮತ್ತು ಮಕ್ಕಳ ಕಡೆ ಹೆಚ್ಚು ಗಮನ ಹರಿಸುತ್ತಿದ್ದೆ. ಹಾಗಾಗಿ ಚಿತ್ರರಂಗದಿಂದ ದೂರ ಉಳಿಯಬೇಕಾಯಿತು.
ಎಲ್ಲಾ ದಿಗ್ಗಜ ನಟರ ಜೊತೆ ಅಭಿನಯಿಸಿದ್ದೀರಿ, ಆಗಿನ ಉತ್ತಮ ಕ್ಷಣಗಳು, ವಿಷಾದನೀಯ ಎನಿಸಿದನ್ನು ಹಂಚಿಕೊಳ್ಳಬಹುದೇ?
ಎಲ್ಲಾ ದಿಗ್ಗಜ ನಟರ ಜೊತೆ ರಾಜ್ ಕುಮಾರ್, ಶಂಕರ್ ನಾಗ್, ವಿಷ್ಣುವರ್ಧನ್, ಅಂಬರೀಶ್ ಜೊತೆ ಅಭಿನಯಿಸುವ ಅವಕಾಶ ಸಿಕ್ಕಿದೆ. ಇದು ಒಂದು ನಾಯಕಿಯ ಲಕ್. ಚಿತ್ರೀಕರಣ ಸಮಯದಲ್ಲಿ ಎಲ್ಲರು ನನ್ನನ್ನು ತುಂಬ ಚೆನ್ನಾಗಿ ನೋಡಿಕೊಳ್ಳುತ್ತಿದ್ದರು. ವಿಷಾದನೀಯ ಅಂತ ಏನು ಇಲ್ಲ.
ಸಾರ್ವಜನಿಕವಾಗಿ ಯಾಕೆ ಇಲ್ಲಿಯೂ ಕಾಣಿಸಿಕೊಂಡಿಲ್ಲ?
ನನ್ನ ಆದ್ಯತೆ ಕುಟುಂಬ ಆಗಿದ್ದರಿಂದ ಕುಟುಂಬ ನಿರ್ವಹಣೆಯಲ್ಲಿ ಬ್ಯುಸಿಯಾಗಿದ್ದೆ. ಜೊತೆಗೆ ಚರ್ಚ್ ಕಡೆ ಹೆಚ್ಚು ಗಮನ ಹರಿಸುತ್ತಿದ್ದೆ. ಆ ಕಡೆಯೆ ಇರುತ್ತಿದ್ದ ಕಾರಣ ಎಲ್ಲಿಯೂ ಕಾಣಿಸಿಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ.
ತೆರೆಮರೆಯಾಗಿದ್ದ ನಟಿ ಮಹಾಲಕ್ಷ್ಮಿ ರೀ-ಎಂಟ್ರಿ: ಈ ಬಗ್ಗೆ 'ಮುದ್ದಿನ ರಾಣಿ' ಹೇಳಿದ್ದೇನು?
ಗ್ಯಾಪ್ ನಂತರ ಬಣ್ಣಹಚ್ಚಬೇಕು ಅಂತ ಯಾಕೆ ಅನಿಸಿತು?
ನಾನು ಯೂಟ್ಯೂಬ್ ನಲ್ಲಿ ಶಾರ್ಟ್ ಸಿನಿಮಾ ನೋಡುತ್ತಿದ್ದೆ. ಆಗ 'ಎಲ್ಲಿದ್ದಾರೆ ಮಹಾಲಕ್ಷ್ಮಿ' ಎನ್ನುವುದನ್ನು ನೋಡಿದೆ. ತುಂಬ ಚೆನ್ನಾಗಿ ಮಾಡಿದ್ದಾರೆ. ಅದರ ಕೆಳಗೆ ಅಭಿಮಾನಿಗಳೆಲ್ಲ ಕಮೆಂಟ್ ಮಾಡಿದ್ದರು. ಮತ್ತೆ ಬನ್ನಿ ಎಂದು ಅನೇಕರು ಹೇಳಿದ್ದರು. ಇಂದಿನ ಜನರೇಶನ್ ಅಂದರೆ ಯುವಕರಿಗೂ ನಾನು ಪರಿಚಯ ಇದ್ದೀನಿ ಅಂದಮೇಲೆ ಯಾಕೆ ಮತ್ತೆ ಬರಬಾರದು ಅಂತ ಅನಿಸಿತು. ಮಕ್ಕಳು ಕೂಡ ಈಗ ದೊಡ್ಡವರಾಗಿದ್ದಾರೆ. ಹಾಗಾಗಿ ಮತ್ತೆ ಸಿನಿಮಾಗಳಲ್ಲಿ ಕಾಣಿಸಿಕೊಳ್ಳಬೇಕು ಅಂತ ಅನಿಸಿತು.
ಖ್ಯಾತ ನಟರಾದ ರಾಜ್ ಕುಮಾರ್, ವಿಷ್ಣುವರ್ಧನ್, ಅಂಬರೀಶ್ ಈಗ ಯಾರು ಇಲ್ಲ, ಅವರ ಬಗ್ಗೆ ಏನು ಹೇಳುತ್ತೀರಿ?
ಎಲ್ಲರು ಅದ್ಭುತ ಮತ್ತು ಪ್ರತಿಭಾವಂತ ನಟರು. ಅವರ ಜೊತೆ ಅಭಿನಯಿಸಿದ ಖುಷಿ ಇದೆ. ಅದೊಂದು ಸುವರ್ಣಯುಗವಾಗಿತ್ತು. ಆದರೆ ಈಗ ಅವರು ಇಲ್ಲ. ಅವರ ಆತ್ಮಕ್ಕೆ ಶಾಂತಿ ಕೋರುತ್ತೇನೆ.
ಈಗ ಯಾವ ಸಿನಿಮಾದಲ್ಲಿ ಬಣ್ಣ ಹಚ್ಚುತ್ತಿದ್ದೀರಿ?
ಮಾತುಕಥೆ ನಡೆಯುತ್ತಿದೆ. ಚಿತ್ರತಂಡದ ಜೊತೆ ಸಂಪರ್ಕದಲ್ಲಿ ಇದ್ದೀನಿ. ಆದರೆ ಇನ್ನು ಫೈನಲ್ ಆಗಿಲ್ಲ. ಫೈನಲ್ ಆದಮೇಲೆ ಹೇಳುತ್ತೇನೆ.
ಚಿತ್ರರಂಗದವರಲ್ಲಿ ಯಾರ ಜೊತೆಗಾದರು ಸಂಪರ್ಕದಲ್ಲಿ ಇದ್ರಾ?
ಯಾರ ಜೊತೆಯು ಸಂಪರ್ಕದಲ್ಲಿ ಇಲ್ಲ. ತುಂಬ ಗ್ಯಾಪ್ ಆದ ಕಾರಣ ಯಾರು ಸಂಪರ್ಕದಲ್ಲಿ ಇಲ್ಲ.
ಇತ್ತೀಚಿನ ಕನ್ನಡ ಸಿನಿಮಾಗಳನ್ನು ನೋಡಿದ್ದೀರಾ? ಈಗಿನ ನಟರ ಪರಿಚಯವಿದೆಯಾ?
ಇತ್ತೀಚಿಗೆ ಯಾವುದೆ ಕನ್ನಡ ಸಿನಿಮಾ ನೋಡಿಲ್ಲ. ಯಾರು ಸಂಪರ್ಕದಲ್ಲಿ ಇಲ್ಲ ಹಾಗಾಗಿ ಯಾರು ಪರಿಚಯವಿಲ್ಲ.
ಯಾವ ರೀತಿಯ ಸಿನಿಮಾಗಳನ್ನು ಮಾಡಬೇಕು ಅಂತ ಅಂದುಕೊಂಡಿದ್ದೀರಿ?
ಉತ್ತಮ ಪಾತ್ರಗಳು ಬಂದರೆ ಮಾತ್ರ ಅಭಿನಯಿಸುತ್ತೇನೆ.
ನಿಮ್ಮ ಮಕ್ಕಳ ಬಗ್ಗೆ ಹೇಳಬಹುದ? ಅವರಿಗೆ ಚಿತ್ರರಂಗದ ಕಡೆ ಆಸಕ್ತಿ ಇದೆಯಾ?
ನನಗೆ ಇಬ್ಬರು ಹೆಣ್ಣು ಮಕ್ಕಳು. ಒಬ್ಬಳು ಏರೋನಾಟಿಕಲ್ ಎಂಜಿನಿಯರಿಂಗ್ ಮುಗಿಸಿದ್ದಾಳೆ, ಮತ್ತೊಬ್ಬಳು ಆರ್ಕಿಟೆಕ್ಚರ್. ಮಕ್ಕಳು ಚಿತ್ರರಂಗಕ್ಕೆ ಖಂಡಿತಾ ಬರಲ್ಲ.