Don't Miss!
- News 11 ಕೋಟಿ ಮಹಿಳೆಯರಿಗೆ ಅಡುಗೆ ಅನಿಲ: ಡಾ. ಕೆ. ಸುಧಾಕರ್
- Sports RCB vs KKR IPL 2024: ಕೆಕೆಆರ್ ವಿರುದ್ಧ ಆರ್ಸಿಬಿ ಹಸಿರು ಜೆರ್ಸಿಯಲ್ಲಿ ಕಣಕ್ಕೆ; ಅಂದೇ ಏಕೆ?
- Lifestyle ಮನೆಯಲ್ಲಿ ಸುಲಭವಾಗಿ ಬೀನ್ಸ್ ಬೆಳೆಯಬಹುದು..! ಹೇಗೆ ನೋಡಿ..!
- Automobiles ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- Finance ಬಿಸಿಲ ಬೇಗೆಯಿಂದ ರಕ್ಷಿಸಿಕೊಳ್ಳಲು ಟ್ರಾಫಿಕ್ ಪೊಲೀಸರಿಗೆ ರಿಲಿಫ್: ಬಂತು ಹವಾನಿಯಂತ್ರಿತ ಎಸಿ ಹೆಲ್ಮೆಟ್!
- Technology Samsung: ಸ್ಯಾಮ್ಸಂಗ್ನ ಈ ಸರಣಿ ಫೋನ್ಗಳಲ್ಲಿ ಗ್ರೀನ್ ಲೈನ್ ಸಮಸ್ಯೆ! ವರದಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಹಂಪ' ಎಂಬ ಸಕಲಕಲಾವಲ್ಲಭ : ಸಿನಿಮಾ, ನಾಟಕ, ಸ್ಟಾಂಡ್ ಅಪ್ ಕಾಮಿಡಿ ಇತ್ಯಾದಿ ಇತ್ಯಾದಿ..
ಇಂದಿನ ಯುವ ಪೀಳಿಗೆಗೆ ಇರುವ ದೊಡ್ಡ ತಲೆ ನೋವು ಪ್ಯಾಶನ್ ಹಾಗೂ ಪ್ರೊಫೆಶನ್ ನಡುವಿನ ಗೊಂದಲ. ಈ ಎರಡರಲ್ಲಿ ಯಾವುದನ್ನು ಆಯ್ಕೆ ಮಾಡಿಕೊಳ್ಳಬೇಕು ಎನ್ನುವುದು ಅನೇಕರಿಗೆ ಕಾಡುವ ಪ್ರಶ್ನೆ. ಆದರೆ, ಈ ಎರಡನ್ನು ಸಲಿಸಾಗಿ ನಿಭಾಯಿಸುತ್ತಿದ್ದಾರೆ ಹಂಪ.
ಎರಡು ದೋಣಿ ಮೇಲೆ ಪ್ರಯಾಣ ಮಾಡಬಾರದು ಎಂಬ ಮಾತನ್ನು ನೀವು ಕೇಳಿರಬಹುದು. ಆದರೆ, ಸದ್ಯ ಇವರು ನಾಲ್ಕೈದು ದೋಣಿಗಳ ಮೇಲೆ ಪ್ರಯಾಣ ಮಾಡುತ್ತಿದ್ದಾರೆ. ಹೀಗಿದ್ದರೂ ಎಲ್ಲವನ್ನು ಯಶಸ್ವಿಯಾಗಿ ನಿಭಾಯಿಸುತ್ತಿದ್ದಾರೆ.
ನಾಟಕ, ಸಿನಿಮಾ, ಸ್ಟಾಂಡ್ ಅಪ್ ಕಾಮಿಡಿ, ಶಾರ್ಟ್ ಮೂವಿ, ಸ್ಟೋರಿ ಟೆಲ್ಲಿಂಗ್, ವೆಬ್ ಸೀರಿಸ್ ಗೆ ಸ್ಕ್ರಿಪ್ಟ್ ಜೊತೆಗೆ ದಿನ ಆಫೀಸ್ (ಸಾಫ್ಟ್ ವೇರ್ ಇಂಜಿನಿಯರ್) ಕೆಲಸಕ್ಕೆ ಕೂಡ ಚಕ್ಕರ್ ಹಾಕುವುದಿಲ್ಲ. ಸೋಷಿಯಲ್ ಮೀಡಿಯಾದಲ್ಲಿ ಮಿಮ್ಸ್ ಮಾಡುವ ಇವರು ಮೈಮ್ ಸಹ ಮಾಡ್ತಾರೆ. ಇವುಗಳ ನಡುವೆ ಇತ್ತೀಚಿಗೆ ಬಂದ 'ಬಜಾರ್' ಸಿನಿಮಾದಲ್ಲಿಯೂ ಇವರದ್ದೇ ಅಬ್ಬರ.
ನಿರ್ದೇಶಕ ಸಿಂಪಲ್ ಸುನಿ ಅವರ ಕಳೆದ ಎರಡು ಸಿನಿಮಾಗಳಾದ 'ಚಮಕ್' ಹಾಗೂ 'ಬಜಾರ್' ಅನ್ನು ಗಮನಿಸಿದರೆ, ಅಲ್ಲಿ ತಮ್ಮ ಪಾತ್ರದ ಮೂಲಕ ಗಮನ ಸೆಳೆಯುತ್ತಾರೆ ಹಂಪ ಕುಮಾರ್ ಅಂಗಡಿ.
ಆಗ ದೊಡ್ಡಣ್ಣ.. ನಂತರ ಚಿಕ್ಕಣ್ಣ.. ಮುಂದೆ ಧರ್ಮಣ್ಣ..
ಕಲೆಯ ವಿವಿಧ ವಿಭಾಗಗಳಲ್ಲಿ ಹೆಸರು ಮಾಡುತ್ತಿರುವ ಹಂಪ ತಮ್ಮ ಕೆರಿಯರ್ ಬಗ್ಗೆ 'ಫಿಲ್ಮಿಬೀಟ್ ಕನ್ನಡ'ಕ್ಕೆ ಸಂದರ್ಶನ ನೀಡಿದ್ದಾರೆ. ನಮ್ಮ ಪ್ರಶ್ನೆಗಳಿಗೆ ಅವರ ಉತ್ತರಗಳು ಮುಂದಿವೆ ಓದಿ...
ಸಂದರ್ಶನ : ನವಿ ಕನಸು (ನವೀನ್ ಎಮ್ ಎಸ್)
ನಾಟಕಗಳಲ್ಲಿ ಕಾಮಿಡಿ ಮಾಡುವ ನಿಮಗೆ ಸಿನಿಮಾಗಳಲ್ಲಿ ಸೀರಿಯಸ್ ಪಾತ್ರವೇ ಬರುತ್ತಿದೆಯಲ್ವಾ?
''ನನಗೆ ಆಕ್ಟರ್ ಆಗಬೇಕು ಅಂತ ಇಷ್ಟ. ಆ ಪಾತ್ರ.. ಈ ಪಾತ್ರ ಎನ್ನುವುದಕ್ಕಿಂತ ಒಳ್ಳೆಯ ಪಾತ್ರಗಳನ್ನು ಮಾಡಬೇಕು ಎನ್ನುವ ಆಸೆ ಇದೆ. ನಾಟಕಗಳಲ್ಲಿ ಕಾಮಿಡಿ ಮಾಡುತ್ತಿದ್ದರು, ಸಿನಿಮಾಗಳಲ್ಲಿ ಸೀರಿಯಸ್ ಪಾತ್ರಗಳೆ ಹೆಚ್ಚು ಬರುತ್ತಿದೆ. 'ಚಮಕ್' ಹಾಗೂ ಬಜಾರ್ ಎರಡು ಸಿನಿಮಾದಲ್ಲಿ ಸೀರಿಯಸ್ ಪಾತ್ರವನ್ನು ಮಾಡಿದ್ದೆ. ಎರಡು ಚಿತ್ರದಲ್ಲಿ ನನ್ನ ಹೆಸರು ಹಂಪನೇ. ಮುಂದೆ ಕಾಮಿಡಿ ಕೂಡ ಮಾಡುವ ಆಸೆ ಇದೆ.''
ಹೇಗೆ ಶುರುವಾಯ್ತು ಸಿಂಪಲ್ ಸುನಿ ಸರ್ ಹಾಗೂ ನಿಮ್ಮ ಸಹವಾಸ?
''ಸ್ಟಾಂಡ್ ಅಪ್ ಕಾಮಿಡಿ ಮಾಡುವಾಗ ಅಭಿಷೇಕ್ ಸಾವಳಗಿ ಎಂಬ ಗೆಳೆಯ ಅವಕಾಶ ಕೊಡಿಸಿದರು. ಅವರು 'ಚಮಕ್' ಚಿತ್ರದ ಸಹ ನಿರ್ದೇಶಕರಾಗಿದ್ದರು. ಈ ರೀತಿ ಮೊದಲ ಬಾರಿಗೆ ಅವಕಾಶ ಸಿಕ್ತು. ಸಿಂಪಲ್ ಸುನಿ ಸರ್ ಕೂಡ ನಮ್ಮ ಶೋಗೆ ಬಂದಿದ್ದರು. 'ಚಮಕ್' ನೋಡಿ ಇಷ್ಟ ಪಟ್ಟು 'ಬಜಾರ್' ನಲ್ಲಿಯೂ ಅವಕಾಶ ನೀಡಿದರು.''
ಕೆಲಸದ ನಡುವೆ ನಿಮ್ಮ ಎಲ್ಲ ಚಟುವಟಿಕೆಯನ್ನು ಹೇಗೆ ಮ್ಯಾನೇಜ್ ಮಾಡುತ್ತೀರಿ?
''ಎಲ್ಲರೂ ಇದನ್ನೇ ನನಗೆ ಕೇಳುತ್ತಾರೆ. ಅದೇ ರೀತಿ ನನ್ನ ಆಸೆಗೆ ಸಪೋರ್ಟ್ ಮಾಡುವವರು ತುಂಬ ಜನ ಇದ್ದಾರೆ. ಟೈಮ್ ಮ್ಯಾನೇಜ್ ಸರಿಯಾಗಿ ಮಾಡುತ್ತೇನೆ. ಆಫೀಸ್ ನಲ್ಲಿಯೂ ತುಂಬ ಪ್ರೋತ್ಸಾಹ ನೀಡುತ್ತಾರೆ. ನಾನು ಇದುವರೆಗೆ ಸುಳ್ಳು ಹೇಳಿ ರಜೆ ಹಾಕಿಲ್ಲ. ಸಂಜೆ 5 ನಂತರ ಬೇರೆ ಕೆಲಸಗಳು ಶುರು ಮಾಡುತ್ತೇನೆ. ಪ್ಲಾನ್ ಮಾಡಿಕೊಂಡರೆ ಟೈಮ್ ಖಂಡಿತ ಇದೆ.''
ನಿಮ್ಮ ಊರು?, ಬೆಂಗಳೂರು ಬಂದಿದ್ದು ಯಾವ ಕಾರಣಕ್ಕೆ?
''ನಮ್ಮ ಊರು ರಾಯಚೂರು ಜಿಲ್ಲೆಯ ಹಾಲಪೂರ. ಇಂಜಿನಿಯರಿಂಗ್ ಮಾಡಲು ಬೆಂಗಳೂರಿಗೆ ಬಂದೆ. ಬಳಿಕ ಕೆಲಸ ಮಾಡುತ್ತಿದೆ. 2012ರಲ್ಲಿ ನಾಟಕ ಶುರು ಮಾಡಿದೆ. ಅಲ್ಲಿಯವರೆಗೆ ಒಮ್ಮೆಯೂ ವೇದಿಕೆ ಮೇಲೆ ಹೋಗಿರಲಿಲ್ಲ. 'I was born actor.. but i didn't perform till 27, because of my shy nature.'' ಎಂದು ನಗುತ್ತ ನುಡಿದರು ಹಂಪ.
ಮೊದಲು ವೇದಿಕೆ ಏರಿದ ಅನುಭವ, ಮೊದಲ ಪಾತ್ರ?
''ನಿಜ ಹೇಳಬೇಕು ಅಂದರೆ. ನನಗೆ ಆಗ ಇಂಗ್ಲೀಷ್ ಮಾತನಾಡಲು ಬರುತ್ತಿರಲಿಲ್ಲ. ಆದರೆ, ನಾನು ಮೊದಲು ಮಾಡಿದ್ದು ಇಂಗ್ಲೀಷ್ ನಾಟಕ. ಚರ್ಚ್ ನಲ್ಲಿ ವಾಚ್ ಮ್ಯಾನ್ ರೋಲ್ ಮಾಡಿದೆ. ನನ್ನ ನಾಟಕದ ಜರ್ನಿ ಪ್ರಾರಂಭ ಆಗಿದ್ದು ವೀ ಮೂ ಥಿಯೇಟರ್ ನಲ್ಲಿ. ಮೊದ ಮೊದಲು ನನಗೆ ಭಯ ಇತ್ತು, ಈಗ ಕಡಿಮೆ. ಈಗಲೂ ಶೋ ದಿನ ಸ್ವಲ್ಪ ಹೆದರಿಕೆ ಇರುತ್ತದೆ. ಆದರೆ, ಸ್ಟೇಜ್ ಮೇಲೆ ಹೋದ ಮೇಲೆ ಎಲ್ಲ ನನ್ನದಾಗಿ ಬಿಡುತ್ತದೆ.''
ರಂಗಭೂಮಿಯಲ್ಲಿ ನಿಮಗೆ ಎಷ್ಟು ವರ್ಷ?, ಎಷ್ಟು ಶೋ ಆಗಿದೆ?
''5 ವರ್ಷ ಆಯ್ತು. ಈವಗರೆಗೂ 7 ಪ್ರೋಡಕ್ಷನ್ ನಲ್ಲಿ ಮಾಡಿದ್ದೇನೆ. 65 ಶೋ ಆಗಿರಬಹುದು. 85 ಸ್ಟಾಂಡ್ ಅಪ್ ಕಾಮಿಡಿ ಕಾರ್ಯಕ್ರಮ ಮಾಡಿದ್ದೇನೆ. ಇತ್ತೀಚಿಗೆ ಸ್ಟೋರಿ ಟೆಲ್ಲಿಂಗ್ ಶುರು ಮಾಡಿದ್ದೇನೆ. ಮೊದಲು ನಾನು ತುಂಬ ಸಂಕೋಚದ ಹುಡುಗನಾಗಿದೆ. ಆಕ್ಟರ್ ಆಗುವ ಆಸೆ ಇರುವವರಿಗೆ ಸಂಕೋಚ ಇರಬಾರದು. ಅದರಿಂದ ಆಚೆ ಬರಲು ನಾಟಕ ಹಾಗೂ ನನ್ನ ಕಾರ್ಯಕ್ರಮಗಳು ಸಹಾಯ ಮಾಡಿವೆ.''
ನಿಮ್ಮ ಸ್ಟಾಂಡ್ ಅಪ್ ಕಾಮಿಡಿಗೆ ನೀವೇ ಸ್ಕ್ರಿಪ್ಟ್ ಬರೆಯುತ್ತೀರಾ?
''ಹೌದು.. ನಾನು ಕಾಮಿಡಿ ಮಾಡಬೇಕು ಎಂದ ಮೇಲೆ ನಾನೇ ಬರೆದರೆ ಚೆನ್ನಾಗಿರುತ್ತದೆ ಎನ್ನುವುದು ನನ್ನ ಅಭಿಪ್ರಾಯ. ಹಾಗಾಗಿ ನನ್ನ ಸ್ಟಾಂಡ್ ಅಪ್ ಕಾಮಿಡಿಯಲ್ಲಿ ನನ್ನ ಸ್ಕ್ರಿಪ್ಟ್ ಇರುತ್ತದೆ. LOLbagh ಟೀಮ್ ಜೊತೆಗೆ ಸೇರಿ ಸ್ಟಾಂಡ್ ಅಪ್ ಕಾಮಿಡಿ ಮಾಡುತ್ತಿದ್ದೇನೆ.''
ಇಷ್ಟೊಂದು ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೀರಿ. ಇದರಲ್ಲಿ ಯಾವುದು ಚಾಲೆಂಜಿಂಗ್ ಅನಿಸಿದೆ.?
''ಕಲೆ ಎನ್ನುವುದು ಎಲ್ಲರಿಗೂ ಇರುತ್ತದೆ. ನಾನು ಬೆಳೆದ ರೀತಿ ನನಗೆ ಇಷ್ಟೆಲ್ಲ ಮಾಡಲು ಸಹಾಯ ಮಾಡಿತು. ಆಗ ನನಗೆ 27 ವರ್ಷ ಆಗಿದ್ದರೂ, ಬೆಂಗಳೂರಿನಲ್ಲಿ ಬೆಳೆದ 22 ವರ್ಷದ ಹುಡುಗರ ಜೊತೆಗೆ ಕಾಂಪಿಟ್ ಮಾಡಲು ಆಗುತ್ತಿರಲಿಲ್ಲ. ಅವರ ಟ್ಯಾಲೆಂಟ್, ಅವರ ಕಾನ್ಫಿಡೆನ್ಸ್ ನನಗೆ ಇರಲಿಲ್ಲ. ಮಿಮೂ ಥಿಯೇಟರ್ ನಿಂದ ತುಂಬ ಕಲಿತೆ.. ಇನ್ನೂ ಕಲಿಯುತ್ತಿದ್ದೇನೆ.''
ನಿಮ್ಮ ಪ್ರಕಾರ ರಂಗಭೂಮಿ ನಟರಿಗೆ ಇರಬೇಕೆಕಾದ ಕ್ವಾಲಿಟಿ?
''ಪದಗಳ ಉಚ್ಛಾರಣೆ, ಏನರ್ಜಿ ಹಾಗೂ ಜ್ಞಾನ ಇರಬೇಕು. ಎಲ್ಲದಕ್ಕಿಂತ ಹೆಚ್ಚಾಗಿ ಓಪನ್ ಮೈಂಡ್ ಆಗಿರಬೇಕು. ಒಂದು ಪಾತ್ರ ಕೊಟ್ಟರೆ ಅದಕ್ಕೆ ತಯಾರಾಗುವ ಆಸಕ್ತಿ ಹೊಂದಿರಬೇಕು. ನಮಗೆ ನೀಡಿರುವ ಪಾತ್ರ ಭೂಮಿ ಮೇಲೆ ಎಲ್ಲೋ ಒಂದು ಕಡೆ ಇದ್ದೇ ಇರುತ್ತದೆ. ರಸ್ತೆಯಲ್ಲಿ ಹೋಗುವಾಗ ಎಲ್ಲಿಯಾದರೂ ನಮ್ಮ ಪಾತ್ರದ ಹೋಲಿಕೆ ಸಿಗುತ್ತದೆ. ಅದರಿಂದ ಕಲಿಯಬೇಕು.''
ಇಷ್ಟೆಲ್ಲ ಮಾಡುತ್ತಿದ್ದೀರಿ..ಮುಂದೆ..?
''ಪಿ ಆರ್ ಕೆ ಪ್ರೊಡಕ್ಷನ್ ನಲ್ಲಿ ಒಂದು ಸಿನಿಮಾ ಮಾಡುತ್ತಿದ್ದೇನೆ. 'ನಾರಾಯಣ ನಾರಾಯಣ', 'ಕಾಜಲ್' ಸೇರಿದಂತೆ ಕೆಲವು ಚಿತ್ರಗಳಲ್ಲಿ ನಟಿಸುತ್ತಿದ್ದೇನೆ. 'ಚಮಕ್' ಹಾಗೂ 'ಬಜಾರ್' ಮೂಲಕ ಜನ ಗುರುತಿಸುತ್ತಿದ್ದಾರೆ. ಮುಂದೆ ಒಳ್ಳೆಯ ಪಾತ್ರಗಳಿಗಾಗಿ ಕಾಯುತ್ತಿದ್ದೇನೆ. ಸ್ಟಾಂಡ್ ಅಪ್ ಕಾಮಿಡಿ ಹಾಗೂ ವೇದಿಕೆ ಕಾರ್ಯಕ್ರಮಗಳನ್ನು ಇನ್ನೂ ಚೆನ್ನಾಗಿ ಮಾಡಬೇಕು ಎಂಬ ಆಸೆ ಇದೆ. ನೋಡಬೇಕು...''