4ನೇ ವಯಸ್ಸಿಗೆ ಹಾರ್ಮೋನಿಯಂ ಹಿಡಿದ್ದಿದ ಈ ಹುಡುಗ ಕೊನೆಗೂ ಮ್ಯೂಸಿಕ್ ಡೈರೆಕ್ಟರ್ ಆದ
ಸಂಗೀತ ಎನ್ನುವುದು ಒಂದು ದೊಡ್ಡ ಪರಿಶುದ್ಧ ಪ್ರಪಂಚ. ಅಲ್ಲಿ ಏನಾದರೂ ಸಾಧನೆ ಮಾಡಬೇಕು ಅಂಬ ಹಂಬಲ ಅನೇಕರಿಗೆ ಇರುತ್ತದೆ. ಅದೇ ರೀತಿಯ ಆಸೆ ಹೊಂದಿದ್ದ ಒಬ್ಬ ಹುಡುಗ ಈಗ ಅದನ್ನು ಸಾಬೀತು ಮಾಡಿದ್ದಾನೆ.
ನಾಲ್ಕನೇ ವಯಸ್ಸಿಗೆ ಹಾರ್ಮೋನಿಯಂ ಕಲಿಯುವುದಕ್ಕೆ ಶುರು ಮಾಡಿದ್ದ ರಿತ್ವಿಕ್ ಇಂದು ಸಂಗೀತ ನಿರ್ದೇಶಕರಾಗಿದ್ದಾರೆ. 'ಸಂಕಷ್ಟಹರ ಗಣಪತಿ' ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಗೆ ಬಂದಿರುವ ಈ ಮಲೆನಾಡಿನ ಹುಡುಗ ಬೆಟ್ಟದಷ್ಟು ಆಸೆ ಇಟ್ಟುಕೊಂಡಿದ್ದಾನೆ.
ಕನ್ನಡದ ಯುವ ಸಂಗೀತ ನಿರ್ದೇಶಕ ರಿತ್ವಿಕ್ ತಮ್ಮ ಸಂಗೀತ ಪಯಣದ ಅನೇಕ ವಿಚಾರಗಳನ್ನು 'ಫಿಲ್ಮಿಬೀಟ್ ಕನ್ನಡ'ದ ಜೊತೆಗೆ ಹಂಚಿಕೊಂಡಿದ್ದಾರೆ. ಅವರ ಸಂದರ್ಶನದ ಕೆಲ ಭಾಗ ಮುಂದಿದೆ ಓದಿ...
ಸಂದರ್ಶನ : ನವಿ ಕನಸು (ನವೀನ್.ಎಂ.ಎಸ್)

ಕಿರುಚಿತ್ರದಿಂದ ಸಿನಿಮಾ ಆಫರ್ ಸಿಕ್ತು
''ಮೊದಲು 'ದಿ ಗ್ರೇಟ್ ಸ್ಟೋರಿ ಆಫ್ ಸೋಡಾ ಬುಡ್ಡಿ' ಎಂಬ ಸಿನಿಮಾದಲ್ಲಿ ಹಿನ್ನಲೆ ಸಂಗೀತವನ್ನು ನೀಡಿದ್ದೆ. ಆ ಬಳಿಕ 'ಪನ್ಮಂಡಿ ಕ್ರಾಸ್' ಕಿರುಚಿತ್ರಕ್ಕೆ ಸಂಗೀತ ಕೊಟ್ಟೆ. 'ಸಂಕಷ್ಟಹರ ಗಣಪತಿ' ಚಿತ್ರದ ನಿರ್ದೇಶಕ ಅರ್ಜುನ್ ಅವರು ಆ ಕಿರುಚಿತ್ರದ ನಿರ್ದೇಶನ ಮಾಡಿದ್ದರು. ಆ ಕಿರುಚಿತ್ರದಿಂದ 'ಸಂಕಷ್ಟಹರ ಗಣಪತಿ' ಸಿನಿಮಾದ ಆಫರ್ ಸಿಕ್ಕಿತು.''

ನಾಲ್ಕು ವರ್ಷ ಇದ್ದಾಗ ಹಾರ್ಮೋನಿಯಂ ಕಲಿತೆ
''ನಾನು ಶಿವಮೊಗ್ಗದ ಹುಡುಗ. ನಾಲ್ಕು ವರ್ಷ ಇರುವಾಗ ನಮ್ಮ ತಂದೆ ಹಾರ್ಮೋನಿಯಂ ಕಲಿಸಿದರು. ಜೀ ಕನ್ನಡದ 'ಸರಿಗಮಪ ಸೀಸನ್ 1' ನಲ್ಲಿ ಭಾಗವಹಿಸಿ ಟಾಪ್ 5 ಸಿಂಗರ್ ಆಗಿ ಆಯ್ಕೆ ಆಗಿದ್ದೆ. ನಂತರ ಹೆಚ್ಚಿನ ಸಂಗೀತ ಕಲಿತುಕೊಂಡು ರೇಡಿಯೋ ಜಿಂಗಲ್ಸ್, ಜಾಹಿರಾತು ಹಾಗೂ ಕಿರುಚಿತ್ರಗಳಿಗೆ ಮ್ಯೂಸಿಕ್ ನೀಡಲು ಶುರು ಮಾಡಿದೆ. ಅಲ್ಲಿಂದ ಈಗ ಸಿನಿಮಾರಂಗಕ್ಕೆ ಬಂದಿದ್ದೇನೆ.''

'ಸಂಕಷ್ಟಹರ ಗಣಪತಿ' ಹಾಡುಗಳಿಗೆ ಒಳ್ಳೆಯ ರೆಸ್ಪಾನ್ಸ್ ಬಂತು
''ಸಂಕಷ್ಟಹರ ಗಣಪತಿ' ಚಿತ್ರದಲ್ಲಿ ಸಾಂದರ್ಭಿಕ ಹಾಡುಗಳು ಇತ್ತು. ಟೈಟಲ್ ಸಾಂಗ್, 'ನೂರು ಚೂರಿನಲ್ಲಿ..' ಹಾಗೂ 'ಜೀವನದ ಸಂತೆಯಲ್ಲಿ..' ಈ ಮೂರು ಹಾಡಿಗೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿತು. ಮೆಹಬೂಬ್ ಸಾಬ್ ಹಾಗೂ ಸಂಚಿತ್ ಹೆಗ್ಡೆ ಹಾಡನ್ನು ಹಾಡಿದ್ದರು. ಈಗ ಸಿನಿಮಾ ಚೆನ್ನಾಗಿ ಓಡುತ್ತಿದೆ. ರಿಲೀಸ್ ಆದ ಮೇಲೆ ಹಾಡುಗಳ ರೆಸ್ಪಾನ್ಸ್ ಚೆನ್ನಾಗಿದೆ.

ಕರ್ನಾಟಕ ಸಂಗೀತ ಕಲಿತಿದ್ದೇನೆ
''ನಾನು ಕರ್ನಾಟಕ ಸಂಗೀತ ಕಲಿತಿದ್ದೇನೆ. ಚಿಕ್ಕ ವಯಸ್ಸಿನಿಂದ ಹೆಚ್ಚು ಸಿನಿಮಾ ನೋಡುತ್ತಿದೆ. ಆ ಕಾರಣ ನಾನು ಕಮರ್ಷಿಯಲ್ ಮೈಡ್ ಸೆಟ್ ನಲ್ಲಿ ಇದ್ದೆ. ಮೊದ ಮೊದಲು ಹೆಚ್ಚು ಲೈವ್ ಪ್ರೋಗ್ರಾಂ ಗಳನ್ನು ಮಾಡುತ್ತಿದ್ದೆ. ನನಗೆ ರೆಹಮಾನ್ ಸರ್, ಡಿ ಇಮಾನ್ ಹಾಗೂ ಇಳಯರಾಜ ಸರ್ ತುಂಬ ಇಷ್ಟ. ಕನ್ನಡದಲ್ಲಿ ಎಲ್ಲ ಸಂಗೀತ ನಿರ್ದೇಶಕರು ಇಷ್ಟ ಆಗುತ್ತಾರೆ.''

ಮ್ಯೂಸಿಷಿಯನ್ ಗಳ ಸರ್ಕಲ್ ತುಂಬ ಚೆನ್ನಾಗಿದೆ
''ಈಗೀಗ ಬಂದಿರುವ ಕನ್ನಡದ ಎಲ್ಲ ಸಂಗೀತ ನಿರ್ದೇಶಕರು ತುಂಬ ಇಷ್ಟ ಆಗುತ್ತಾರೆ. ಬೇರೆ ಭಾಷೆಗೆ ಹೋಲಿಸಿದರೆ ಕನ್ನಡದಲ್ಲಿಯೇ ತುಂಬ ಫ್ರೆಶ್ ಈಗ ಹಾಡುಗಳು ಬರುತ್ತಿದೆ. ಎಲ್ಲರೂ ಹೊಸದಾಗಿ ಪ್ರಯತ್ನ ಮಾಡುತ್ತಿದ್ದಾರೆ. ಅದನ್ನು ನಾನು ಕಾಂಪಿಟೇಷನ್ ಅಂತ ಕರೆಯುವುದಕ್ಕಿಂತ ನಮ್ಮ ಮ್ಯೂಸಿಷಿಯನ್ ಗಳ ಸರ್ಕಲ್ ತುಂಬ ಚೆನ್ನಾಗಿದೆ ಎಂದು ಹೇಳುತ್ತೇನೆ. ಎಲ್ಲರೂ ಅವರವರ ಕೆಲಸ ಮಾಡುತ್ತಿದ್ದಾರೆ.''

ಎರಡು ಹೊಸ ಸಿನಿಮಾ ಮಾಡುತ್ತಿದ್ದೇನೆ
''ಸಂಕಷ್ಟಹರ ಗಣಪತಿ' ಸಿನಿಮಾದ ನಂತರ ಒಂದೆರಡು ಪ್ರಾಜೆಕ್ಟ್ ಗಳನ್ನು ಒಪ್ಪಿಕೊಂಡಿದ್ದೇನೆ. ಆ ಸಿನಿಮಾದ ಕೆಲಸಗಳು ನಡೆಯುತ್ತಿದೆ. ಸದ್ಯ ಹೊಸಬರಿಗೆ ಸಿನಿಮಾ ಮಾಡುತ್ತಿದ್ದೇನೆ ಆ ಎರಡೂ ಕಥೆ ಚೆನ್ನಾಗಿದೆ. ಬೇರೆ ರೀತಿಯ ಹಾಡುಗಳನ್ನು ಆ ಸಿನಿಮಾಗಳು ಕೇಳುತ್ತಿದೆ''.

ನನ್ನ ಆಸೆ ಇದು
''ಲಂಡನ್ ನಲ್ಲಿ ದೊಡ್ಡ ಆರ್ಕೆಸ್ಟ್ರ ಸ್ಕೋರಿಂಗ್ ಮಾಡುತ್ತಾರೆ ಆ ರೀತಿ ಮಾಡಬೇಕು ಅಂತ ನನಗೆ ಇಷ್ಟ. 'ಸೈರಾಟ್' ಸಿನಿಮಾದಲ್ಲಿ ಮಾಡಿದ ಹಾಗೆ ಲೈವ್ ಮ್ಯೂಸಿಕ್ ಅನ್ನು ಮಾಡಬೇಕು ಎಂಬ ಆಸೆ ಇದೆ. ನಮ್ಮ ಮ್ಯೂಸಿಷಿಯನ್ ಗಳು ಸಹ ತುಂಬ ಸಪೋರ್ಟ್ ಮಾಡುತ್ತಾರೆ. ಹೊಸಬರು ಅಂದರೆ ಕಡಿಮೆ ದುಡ್ಡು ತೆಗೆದುಕೊಂಡು ಅದೇ ಕ್ವಾಲಿಟಿ ನೀಡುತ್ತಾರೆ. ನಮ್ಮ ಜೊತೆಗೆ ಕೆಲಸ ಮಾಡಿದ ಸಿಂಗರ್, ಮ್ಯೂಸಿಷಿಯನ್ ಗಳಿಗೆ ಎಲ್ಲರಿಗೆ ಧನ್ಯವಾದ ಹೇಳುತ್ತೇನೆ.''


Click it and Unblock the Notifications











