twitter
    For Quick Alerts
    ALLOW NOTIFICATIONS  
    For Daily Alerts

    'ಕಪಟ ನಾಟಕ ಪಾತ್ರಧಾರಿ'ಯ ಬಗ್ಗೆ ಸೂತ್ರಧಾರಿಯ ಮಾತು

    |

    ಇತ್ತೀಚೆಗೆ ಸಿನಿಮಾ ಪ್ರಚಾರದ ವಿಚಾರಕ್ಕೆ ಬಂದರೆ ಸಾಮಾಜಿಕ ಜಾಲತಾಣಗಳದ್ದು ಪ್ರಮುಖ ಪಾತ್ರ. ಅದನ್ನು ಸದ್ಬಳಕೆ ಮಾಡಿಕೊಂಡವರಲ್ಲಿ ನವ ನಿರ್ದೇಶಕ ಕ್ರಿಶ್ ಕೂಡ ಸೇರಿಕೊಳ್ಳುತ್ತಾರೆ. ಅಂದಹಾಗೆ ಇವರ ನಿರ್ದೇಶನದ ಚಿತ್ರದ ಹೆಸರು 'ಕಪಟ ನಾಟಕ ಪಾತ್ರಧಾರಿ'.

    ಇದು ಕ್ರಿಶ್ ನಿರ್ದೇಶನದ ಪ್ರಥಮ ಚಿತ್ರ. ಮೂಲತಃ ಶಿಡ್ಲಘಟ್ಟ ನಿವಾಸಿಯಾದ ಇವರು ಗಾಂಧಿನಗರ ಸೇರಿಕೊಂಡಿದ್ದು ಏಳು ವರ್ಷಗಳ ಹಿಂದೆ. ಚಿತ್ರರಂಗದ ಜತೆಗೆ ಯಾವುದೇ ನಂಟು ಇರದ ಕುಟುಂಬವಾದರೂ ಸಿನಿಮಾಸಕ್ತಿಗೆ ಕೊರತೆ ಇರಲಿಲ್ಲ. ಅದಕ್ಕೆ ಮೂಲ ಕಾರಣ ಖ್ಯಾತ ನಿರ್ದೇಶಕ ರಾಜಮೌಳಿಯವರ ಸಿನಿಮಾಗಳು.

    'ಸಿಂಹಾದ್ರಿ' ಚಿತ್ರದಿಂದಲೇ ರಾಜಮೌಳಿಯವರಿಗೆ ಅಭಿಮಾನಿಯಾದ ಕ್ರಿಶ್ ತುಳಿದಿದ್ದು ಮಾತ್ರ ಕನ್ನಡದ ಹಾದಿ. ಹಾಗಂತ ಪ್ರಸ್ತುತ 'ಕಪಟ ನಾಟಕ ಪಾತ್ರಧಾರಿ' ಚಿತ್ರ ಕೂಡ ರಾಜಮೌಳಿಯ ಶೈಲಿಯ ಸಿನಿಮಾವೇನಲ್ಲ. ಆದರೆ ಕನ್ನಡದ ಮಟ್ಟಿಗೆ ಒಂದು ಆಕರ್ಷಕ ಚಿತ್ರವಾಗುವ ಭರವಸೆಯನ್ನು ಅದರ ಲಿರಿಕಲ್ ವಿಡಿಯೋಗಳೇ ಸಾರುತ್ತಿರುವುದು ಸತ್ಯ. ಒಟ್ಟು ಸಿನಿಮಾ ಮತ್ತು ತಮ್ಮ ನಿರೀಕ್ಷೆಗಳ ಬಗ್ಗೆ ನಿರ್ದೇಶಕ ಕ್ರಿಶ್ ಇಲ್ಲಿ ಫಿಲ್ಮೀಬೀಟ್ ಜತೆಗೆ ಮಾತನಾಡಿದ್ದಾರೆ.

     ಕಪಟ ನಾಟಕ ಪಾತ್ರಧಾರಿ ನಿಮ್ಮ ಪ್ರಥಮ ಚಿತ್ರವೇ?

    ಕಪಟ ನಾಟಕ ಪಾತ್ರಧಾರಿ ನಿಮ್ಮ ಪ್ರಥಮ ಚಿತ್ರವೇ?

    ಹೌದು, ಕಪಟ ನಾಟಕ ಪಾತ್ರಧಾರಿ ನನ್ನ ನಿರ್ದೇಶನದ ಮೊದಲ ಚಿತ್ರ. ಈ ಹಿಂದೆ ಒಂದಷ್ಟು ಸಿನಿಮಾಗಳಲ್ಲಿ ಕೆಲಸ ಮಾಡಿದ್ದೇನೆ. ಸ್ನೇಹಿತನ ಜತೆ ಸೇರಿಕೊಂಡು `ಜಾಸ್ತಿ ಪ್ರೀತಿ' ಎನ್ನುವ ಚಿತ್ರ ಮಾಡಿದ್ದೇನೆ. ಅದರಲ್ಲಿ ನಾನು ಸಹ ನಿರ್ದೇಶಕನಾಗಿದ್ದೆ. ಆದರೆ ಆ ಚಿತ್ರ ಪೂರ್ತಿಯಾಗಿಲ್ಲ. ಆದರೆ ನನಗೆ ಸ್ವತಃ ನಿರ್ದೇಶಕನಾಗುವ ಆತ್ಮಸ್ಥೈರ್ಯ ಇತ್ತು. ಯಾಕೆಂದರೆ ವಿಜಯ ಫಿಲ್ಮ್ ಇನ್ಸಿಟ್ಯೂಟ್ ನಲ್ಲಿ ನಿರ್ದೇಶನದ ತರಬೇತಿ ಪಡೆದುಕೊಂಡೇ ಚಿತ್ರರಂಗಕ್ಕೆ ಕಾಲಿಟ್ಟಿದ್ದೆ. ಅಂದಹಾಗೆ ನನ್ನ ಮೂಲ ಹೆಸರು ವೇಣುಗೋಪಾಲ ಕೃಷ್ಣಪ್ಪ. ಆದರೆ ಆ ಹೆಸರಲ್ಲಿ ಒಂದಷ್ಟು ನಿರ್ದೇಶಕರು ಈಗಾಗಲೇ ಕನ್ನಡದಲ್ಲಿ ಇರುವ ಕಾರಣ ಕ್ರಿಶ್ ಎಂದು ಬದಲಾಯಿಸಿಕೊಂಡೆ.

     ಸೂತ್ರಧಾರಿ ಎನ್ನುವ ಬದಲು ಪಾತ್ರಧಾರಿ ಎಂದಿರುವುದು ಏಕೆ?

    ಸೂತ್ರಧಾರಿ ಎನ್ನುವ ಬದಲು ಪಾತ್ರಧಾರಿ ಎಂದಿರುವುದು ಏಕೆ?

    ನಿಜವಾಗಿ ನಮ್ಮ ಚಿತ್ರಕ್ಕೆ ನಾವು ಇಟ್ಟ ಹೆಸರು `ಕಪಟ ನಾಟಕ ಸೂತ್ರಧಾರಿ' ಎನ್ನುವುದೇ ಆಗಿತ್ತು. ಆದರೆ ಸೂತ್ರಧಾರಿ ಎನ್ನುವ ಶೀರ್ಷಿಕೆ ಈಗಾಗಲೇ ಇರುವ ಕಾರಣ, ವಾಣಿಜ್ಯ ಮಂಡಳಿಯಲ್ಲಿ ಆ ಟೈಟಲ್ ಕೊಡಲು ಸಾಧ್ಯವಿಲ್ಲ ಎಂದಿದ್ದರು. ಹಾಗಾಗಿ ನಾವು `ಕಪಟ ನಾಟಕ ಪಾತ್ರಧಾರಿ' ಎಂದು ಹೆಸರು ಬದಲಾಯಿಸಿಕೊಂಡೆವು. ನಮ್ಮ ಕತೆಗೆ ಪಾತ್ರಧಾರಿ ಎನ್ನುವ ಪದ ಕೂಡ ಹೊಂದುತ್ತದೆ. ಅಂದುಕೊಳ್ಳುವುದು ಒಂದು ನಡೆಯುವುದು ಒಂದು ಎನ್ನುವ ಹಾಗೆ ಬದಲಾಗುವ ಘಟನೆಗಳು ಚಿತ್ರದಲ್ಲಿಯೂ ನಡೆಯುತ್ತಿರುತ್ತದೆ. ಅದರಿಂದ ಪಾಡು ಪಡುವ ಪಾತ್ರಧಾರಿಗಳು ಹಲವರು ಇರುತ್ತಾರೆ. ಅವರಲ್ಲಿ ನಮ್ಮ ಪಾತ್ರಧಾರಿ ಯಾರು ಎನ್ನುವುದನ್ನು ನಾವು ಚಿತ್ರಕತೆಯ ಮೂಲಕ ತೋರಿಸಲಿದ್ದೇವೆ.

     ಚಿತ್ರದ ಪಾತ್ರಧಾರಿಗಳನ್ನು ಹೇಗೆ ಆಯ್ಕೆ ಮಾಡಿದಿರಿ?

    ಚಿತ್ರದ ಪಾತ್ರಧಾರಿಗಳನ್ನು ಹೇಗೆ ಆಯ್ಕೆ ಮಾಡಿದಿರಿ?

    ಇದು ಒಬ್ಬ ರಿಕ್ಷಾ ಚಾಲಕ ಮತ್ತು ಒಂದು ಮಧ್ಯಮ ವರ್ಗದ ಹುಡುಗಿಯ ನಡುವೆ ನಡೆಯುವ ಕತೆ. ನಾನು ಈ ಕತೆಯನ್ನು ಸಿನಿಮಾ ಮಾಡಲು ಯೋಚಿಸುವ ಸಂದರ್ಭದಲ್ಲೇ `ಹುಲಿರಾಯ' ಚಿತ್ರದ ಟ್ರೇಲರ್ ಬಿಡುಗಡೆಯಾಗಿತ್ತು. ಅದರ ನಾಯಕನೇ ನಮ್ಮ ರಿಕ್ಷಾಚಾಲಕನ ಪಾತ್ರಕ್ಕೆ ಹೊಂದುತ್ತಾರೆ ಎಂದುಕೊಂಡೆ. ಹಾಗಾಗಿ ಬಾಲು ನಾಗೇಂದ್ರ ನಾಯಕರಾದರು. ‘ಎರಡನೇ ಸಲ' ಚಿತ್ರ ನೋಡಿದಾಗ ಅದರ ನಾಯಕಿ ಸಂಗೀತಾ ಭಟ್ ಮಧ್ಯಮ ವರ್ಗದ ಹೆಣ್ಣುಮಗಳಾಗಿ ಮನ ಸೆಳೆಯುವಂತೆ ನಟಿಸಿದ್ದು ಕಾಣಿಸಿತ್ತು. ಹಾಗಾಗಿ ಅವರನ್ನೇ ನಾಯಕಿಯಾಗಿ ಮಾಡಿದೆ. ಹೀಗೆ ಪ್ರಮುಖ ಪಾತ್ರಗಳ ಆಯ್ಕೆ ನಡೆಯಿತು.

     ಚಿತ್ರದ ಪ್ರಧಾನ ಪಾತ್ರಧಾರಿಗಳು ಪ್ರಚಾರದಲ್ಲಿ ಪಾಲ್ಗೊಳ್ಳುತ್ತಾರ?

    ಚಿತ್ರದ ಪ್ರಧಾನ ಪಾತ್ರಧಾರಿಗಳು ಪ್ರಚಾರದಲ್ಲಿ ಪಾಲ್ಗೊಳ್ಳುತ್ತಾರ?

    ಸದ್ಯಕ್ಕೆ ನಾಯಕ ಬಾಲು ನಾಗೇಂದ್ರ ಬೇರೆ ಚಿತ್ರದಲ್ಲಿ ಬ್ಯುಸಿ ಇದ್ದಾರೆ. ಆದರೆ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಾಗ ಖಂಡಿತವಾಗಿ ಪ್ರಚಾರ ಕಾರ್ಯದಲ್ಲಿ ನಮ್ಮೊಂದಿಗೆ ಕೈ ಜೋಡಿಸುವ ಭರವಸೆ ಇದೆ. ಯಾಕೆಂದರೆ ಇದು ಅವರೇ ಕತೆ ಕೇಳಿ ಮೆಚ್ಚಿ ಒಪ್ಪಿಕೊಂಡಂಥ ಚಿತ್ರ. ಇನ್ನು ನಮ್ಮ ಚಿತ್ರದ ನಾಯಕಿ ಸಂಗೀತಾ ಭಟ್ ಸದ್ಯಕ್ಕೆ ವಿದೇಶದಲ್ಲೇ ವಾಸವಾಗಿದ್ದಾರೆ. ಹಾಗಾಗಿ ಅವರು ಅಲ್ಲಿಂದ ಆನ್ಲೈನಲ್ಲೇ ಪ್ರಚಾರ ಮಾಡುವುದಾಗಿ ಹೇಳಿದ್ದಾರೆ. ಚಿತ್ರದ ಹಾಡುಗಳನ್ನು ಈಗಾಗಲೇ ಅವರು ತಮ್ಮ ಫೇಸ್ಬುಕ್ ನಲ್ಲಿ ಹಾಕಿಕೊಂಡಿದ್ದಾರೆ.

     ಉಳಿದಂತೆ ಚಿತ್ರತಂಡದ ಬಗ್ಗೆ ಹೇಳಿ

    ಉಳಿದಂತೆ ಚಿತ್ರತಂಡದ ಬಗ್ಗೆ ಹೇಳಿ

    ಚಿತ್ರಕ್ಕೆ `ಐ ಡ್ಯಾಶ್ ಯು' ಚಿತ್ರದ ಸಂಗೀತ ನಿರ್ದೇಶಕ ಆದಿಲ್ ನಡಾಫ್ ಸಂಗೀತ ನೀಡಿದ್ದಾರೆ. ಐದು ಹಾಡುಗಳಿವೆ. ತಮಿಳಿನ ಹರಿಚರಣ್ ಸೇರಿದಂತೆ, ರಿಯಾಲಿಟಿ ಶೋ ಖ್ಯಾತಿಯ ಸಿದ್ಧಾರ್ಥ ಬೆಳ್ಮಣ್ಣು, ಮಾಧುರಿ ಶೇಷಾದ್ರಿ, ಇಶಾ ಸುಚಿ ಮೊದಲಾದವರು ಹಾಡಿದ್ದಾರೆ. ಪರಮೇಶ್ ಛಾಯಾಗ್ರಹಣವಿದೆ. ಉಗ್ರಂ, ಕೆಜಿಎಫ್ ಚಿತ್ರಗಳ ಸಂಕಲನಕಾರ ಶ್ರೀಕಾಂತ್ ಚಿತ್ರದ ಸಂಕಲನ ನಿರ್ವಹಿಸಿದ್ದಾರೆ. ಜನಪ್ರಿಯ ಕಲಾವಿದರಾದ ಉಗ್ರಂ ಮಂಜು ಮತ್ತು ಪ್ರಕಾಶ್ ತೂಮಿನಾಡು ಮೊದಲಾದವರು ನಮ್ಮ ಚಿತ್ರದಲ್ಲಿದ್ದಾರೆ.

     ಪ್ರಸ್ತುತ ಜನಪ್ರಿಯಗೊಂಡಿರುವ ಲಿರಿಕಲ್ ಹಾಡನ್ನು ಚಿತ್ರದಲ್ಲಿ ಹೇಗೆ ಬಳಸಿದ್ದೀರಿ?

    ಪ್ರಸ್ತುತ ಜನಪ್ರಿಯಗೊಂಡಿರುವ ಲಿರಿಕಲ್ ಹಾಡನ್ನು ಚಿತ್ರದಲ್ಲಿ ಹೇಗೆ ಬಳಸಿದ್ದೀರಿ?

    ಇದೊಂದು ಲವ್ ಮತ್ತು ಸಸ್ಪೆನ್ಸ್ ಥ್ರಿಲ್ಲರ್. ಹಾಗಾಗಿ ಹೆಚ್ಚಿನ ವಿವರಗಳನ್ನು ನೀಡುವುದು ಕಷ್ಟ. ಆದರೆ ಹಾಡಿನ ವಿಚಾರಕ್ಕೆ ಬಂದರೆ ಫೇಸ್ಬುಕ್ ಕಾನ್ಸೆಪ್ಟ್ ಎನ್ನುವುದನ್ನು ಜನಮನ ಸೆಳೆಯುವುದಕ್ಕಾಗಿ ಮಾಡಿದ್ದೇನೆ. ಇದು ಲಿರಿಕಲ್ ವಿಡಿಯೋ ಅಷ್ಟೇ. ಹಾಡು ಸಿನಿಮಾದಲ್ಲಿ ಬೇರೆ ರೀತಿ ಬರುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಈ ಹೊಸ ತಂಡದ ಮೂಲಕ ನೀಡಲು ಪ್ರಯತ್ನಿಸುತ್ತಿರುವ ಉತ್ತಮ ಚಿತ್ರಕ್ಕೆ ಪ್ರೇಕ್ಷಕರ ಸಹಕಾರವಿರಲಿ ಎಂದು ಈ ಸಂದರ್ಭದಲ್ಲಿ ವಿನಂತಿಸಿಕೊಳ್ಳುತ್ತೇನೆ.

    English summary
    Interview of new kannada film director Krish. He is the Director of upcoming Movie Kapata Nataka pathradhari.
    Saturday, August 31, 2019, 13:13
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X