Interview: ಧಾರವಾಡದ ಸಾಮಾನ್ಯ ಹುಡುಗ ಈಗ ಅಕಾಡೆಮಿಗೆ ಅಧ್ಯಕ್ಷ
ಕರ್ನಾಟಕ ಚಲನಚಿತ್ರ ಅಕಾಡಮಿಗೆ ನೂತನ ಅಧ್ಯಕ್ಷರ ಆಯ್ಕೆ ಆಗಿದೆ. ನಟ, ನಿರ್ದೇಶಕ, ನಿರ್ಮಾಪಕರಾಗಿರುವ ಸುನೀಲ್ ಪುರಾಣಿಕ್ ಇದೀಗ ಅಕಾಡಮಿ ಅಧ್ಯಕ್ಷರಾಗಿದ್ದಾರೆ.
ರಾಜ್ಯ ಸರ್ಕಾರ ಸುನೀಲ್ ಪುರಾಣಿಕ್ ರನ್ನು ಅಧ್ಯಕ್ಷರಾಗಿ ನೇಮಕ ಮಾಡಿದೆ. ಇಂದು (ಜನವರಿ 2) ನಂದಿನಿ ಲೇ ಔಟ್ ನಲ್ಲಿರುವ ಕರ್ನಾಟಕ ಚಲನಚಿತ್ರ ಅಕಾಡಮಿ ಕಛೇರಿಯಲ್ಲಿ ಅವರು ಅಧಿಕಾರ ಸ್ವೀಕಾರ ಮಾಡಿದರು. ಚಿತ್ರರಂಗದ ಅನೇಕರು ಬಂದು ಸುನೀಲ್ ರಿಗೆ ಶುಭಾಶಯ ತಿಳಿಸಿದರು.
ಸುನೀಲ್ ಪುರಾಣಿಕ್ 30ಕ್ಕೂ ಹೆಚ್ಚು ವರ್ಷಗಳ ಚಿತ್ರರಂಗದ ಅನುಭವ ಹೊಂದಿದ್ದಾರೆ. ಐದು ಭಾಷೆಯ ಸಿನಿಮಾಗಳಲ್ಲಿ ನಟಿಸಿದ್ದಾರೆ. 5000ಕ್ಕೂ ಹೆಚ್ಚು ಧಾರಾವಾಹಿ ಸಂಚಿಕೆಗಳಲ್ಲಿ ನಟನೆ, ನಿರ್ದೇಶನ, ನಿರ್ಮಾಪಕರಾಗಿ ಕೆಲಸ ಮಾಡಿದ್ದಾರೆ. 'ಗುರುಕುಲ' ಚಿತ್ರಕ್ಕೆ ರಾಜ್ಯ ಪ್ರಶಸ್ತಿ ಪಡೆದಿದ್ದಾರೆ.
ಅಧಿಕಾರ ಸ್ವೀಕಾರ ಮಾಡಿದ ಮೊದಲ ದಿನ ತಮ್ಮ ಕಛೇರಿಯಲ್ಲಿ ಸುನೀಲ್ ಪುರಾಣಿಕ್ ಪೂಜೆ ಸಲ್ಲಿಸಿದರು. ಈ ವೇಳೆ ಫಿಲ್ಮಿಬೀಟ್ ಕನ್ನಡದ ಜೊತೆಗೆ ಮಾತನಾಡಿದರು. ಸುನೀಲ್ ಪುರಾಣಿಕ್ ಸಂದರ್ಶನ ಇಲ್ಲಿದೆ.

ಶುಭಾಶಯಗಳು.. ಹೊಸ ಜವಾಬ್ದಾರಿ ಸಿಕ್ಕಿದೆ, ಹೇಗನಿಸುತ್ತದೆ?
''ನಮ್ಮ ನಾಯಕರು, ಸನ್ಮಾನ್ಯ ಮುಖ್ಯಮಂತ್ರಿ ಯಡಿಯೂರಪ್ಪನವರು ನನ್ನ ಮೇಲೆ ಭರವಸೆ ಇಟ್ಟು ಇಂತಹ ದೊಡ್ಡ ಜವಾಬ್ದಾರಿ ನೀಡಿದ್ದಾರೆ. ಚಿತ್ರರಂಗದಲ್ಲಿ ಇರುವ ಎಲ್ಲರ ಜೊತೆಗೆ ನಾನು ಒಳ್ಳೆಯ ಅನುಬಂಧ ಇಟ್ಟುಕೊಂಡಿದ್ದೇನೆ. ಅದು ನನಗೆ ಪ್ಲಸ್ ಪಾಯಿಂಟ್. ಯಾರಿಗೂ ನೋವು ಮಾಡದ ಹಾಗೆ, ಗುಂಪುಗಾರಿಕೆ ಇಲ್ಲದೆ, ಎಲ್ಲ ಹಿರಿಯರನ್ನು, ಉಳಿದ ಚಿತ್ರರಂಗದ ಅಂಗ ಸಂಸ್ಥೆಗಳನ್ನು ಜೊತೆಗೆ ಕರೆದುಕೊಂಡು ಹೋಗುತ್ತೇನೆ. ಒಳ್ಳೆಯ ಕೆಲಸ ಮಾಡುವ ಭರವಸೆ ಇದೆ. ಎಲ್ಲರ ಬೆಂಬಲ ಕೂಡ ಇದೆ.''

ಚಿತ್ರರಂಗದಲ್ಲಿ ತುಂಬ ಕೆಲಸಗಳು ಆಗಬೇಕಾಗಿದೆ. ಅದರಲ್ಲಿ ನಿಮ್ಮ ಮೊದಲ ಆದ್ಯತೆ ಯಾವುದು?
''ಅನೇಕ ಒಳ್ಳೆಯ ಸಿನಿಮಾಗಳ ನೆಗೆಟಿವ್ ಗಳು ಹಾಳಾಗುವ ಪರಿಸ್ಥಿತಿಗೆ ಬಂದಿದೆ. ಅದೆಲ್ಲದರ ಸಂಗ್ರಹ ಮಾಡಬೇಕು. ಕನ್ನಡದ ಕೀರ್ತಿ ಪತಾಕೆ ಹಾರಿಸಿರುವ ನಿರ್ದೇಶಕ, ನಿರ್ಮಾಪಕ, ನಟರ ಕೆಲಸವನ್ನು ಒಂದು ಕಡೆ ಶೇಖರಣೆ ಮಾಡಿ ಉತ್ತಮ ಸ್ಥಾನದಲ್ಲಿ ಇಡಬೇಕು ಎನ್ನುವುದು ನನ್ನ ಮೊದಲ ಆದ್ಯತೆ. ಎರಡನೇ ಆದ್ಯತೆ ನಮ್ಮ ಅಂತರಾಷ್ಟ್ರೀಯ ಚಲನಚಿತ್ರೋತ್ಸವಗಳು ಬೇರೆ ಚಿತ್ರಮಂದಿರಗಳಲ್ಲಿ ನಡೆಯುತ್ತಿವೆ. ಆದರೆ, ಅದು ನಮ್ಮದೇ ಆದ ಕಾಂಫ್ಲೆಕ್ಸ್ ನಲ್ಲಿ ನಡೆಸಬೇಕು ಎನ್ನುವ ಉದ್ದೇಶ ಇದೆ. 365 ದಿನ ಕೂಡ ಅಕಾಡಮಿಯಲ್ಲಿ ಕೆಲಸ ನಡೆಯುವ ಹಾಗೆ ಮಾಡುತ್ತೇನೆ.''

ಸದ್ಯ ಕನ್ನಡದಲ್ಲಿ ಬರುತ್ತಿರುವ ಸಿನಿಮಾಗಳ ಬಗ್ಗೆ ನಿಮ್ಮ ಅಭಿಪ್ರಾಯ?
''ನಮ್ಮಲ್ಲಿ ಒಳ್ಳೆಯ ಸಿನಿಮಾಗಳು ಬರುತ್ತಿದೆ. ವರ್ಷದಲ್ಲಿ ಎಲ್ಲೋ ಕೆಲವು ಸಿನಿಮಾಗಳು ಕಳಪೆ ಆಗಿವೆ. ಅದರ ಬಗ್ಗೆ ಮಾತನಾಡುವ ಬದಲು, ಎಷ್ಟೋ ಕನ್ನಡ ಸಿನಿಮಾಗಳು ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡುತ್ತಿದೆ. ನಾವು ಅವುಗಳ ಬಗ್ಗೆ ಹೆಮ್ಮೆ ಪಡಬೇಕು. ಕನ್ನಡ ಚಿತ್ರರಂಗದಲ್ಲಿ ಇನ್ನೂ ಒಳ್ಳೆ ಒಳ್ಳೆಯ ಸಿನಿಮಾಗಳು ಬರಲು ನಮ್ಮ ಸಹಕಾರ ಇರುತ್ತದೆ.''

ಚಿತ್ರರಂಗಕ್ಕೆ ಹೊಸಬರ ಆಗಮನ ತುಂಬ ಆಗುತ್ತಿದೆ. ಅಕಾಡಮಿ ಅವರಿಗೆ ಹೇಗೆ ಪ್ರೋತ್ಸಾಹ ನೀಡುತ್ತದೆ.
ಕರ್ನಾಟಕ ಅನೇಕ ಭಾಗಗಳಿಂದ ಅನೇಕ ಪ್ರತಿಭಾವಂತರು ಚಿತ್ರರಂಗಕ್ಕೆ ಬರುತ್ತಿದ್ದಾರೆ. ಅವರಗೆ ಉತ್ಸಾಹ ತುಂಬುವುದು ಅಕಾಡೆಮಿಯ ಉದ್ದೇಶ. ಎಷ್ಟೋ ಹೊಸಬರು ತುಂಬ ಒಳ್ಳೆಯ ಸಿನಿಮಾ ಮಾಡುತ್ತಿದ್ದಾರೆ. ಅವರ ಏಳಿಗೆಗೆ ಅಕಾಡಮಿ ಶ್ರಮ ವಹಿಸುತ್ತದೆ. ನಾಡಿನ ಬೇರೆ ಊರಿಗೂ ಅಕಾಡೆಮಿಯನ್ನು ತಗೆದುಕೊಂಡು ಹೋಗಿ ಅಲ್ಲಿಯೂ ಕೆಲಸ ಮಾಡುವ ಯೋಜನೆ ಇದೆ.''

ಪೈರಸಿ ವಿರುದ್ಧ ಅಕಾಡಮಿ ಕ್ರಮ ತೆಗೆದುಕೊಳ್ಳುತ್ತದೆಯೇ
''ಕಾನೂನಿನ ಪರಿದಿಯಲ್ಲಿ ಈ ವಿಷಯ ಒಳಪಡುತ್ತದೆ. ಇದರ ಬಗ್ಗೆ ಮಾತನಾಡುವುದು ಸಮಂಜಸ ಎನಿಸುವುದಿಲ್ಲ. ಪೈರಸಿಯನ್ನು ಕನ್ನಡ ಜನತೆಯೇ ತಿರಸ್ಕಾರ ಮಾಡಬೇಕು. ಒಂದು ಒಳ್ಳೆಯ ಸಿನಿಮಾವನ್ನು ಥಿಯೇಟರ್ ನಲ್ಲಿಯೇ ಹೋಗಿ ನೋಡುವ ಪ್ರವೃತ್ತಿಯನ್ನು ಜನ ಬೆಳೆಸಿಕೊಳ್ಳಬೇಕು. ನಟರು, ನಿರ್ಮಾಪಕರ ಜೊತೆಗೂಡಿ ಸರ್ಕಾರದ ಜೊತೆಗೆ ಈ ಬಗ್ಗೆ ಚರ್ಚೆ ಮಾಡಬೇಕಿದೆ.''

ನಿಮ್ಮ ಒಟ್ಟಾರೆ ಸಿನಿಮಾ ಜರ್ನಿ ಅನುಭವ?
''ದೇವರು ದೊಡ್ಡವನು. ಕರ್ನಾಟಕದ ಜನತೆಯ ಆಶೀರ್ವಾದ ದೊಡ್ಡದು. ಧಾರವಾಡದಿಂದ ಬೆಂಗಳೂರಿಗೆ 1985 ರಲ್ಲಿ ಬಂದು, ಸಣ್ಣ ಸಣ್ಣ ಪಾತ್ರಗಳು, ನಾಯಕ, ನಿರ್ದೇಶಕ ನಂತರ ನಿರ್ಮಾಣ ಮಾಡಿದೆ. ತೆಲುಗು, ತಮಿಳು, ಹಿಂದಿ ಭಾಷೆಗಳಲ್ಲಿ ನಟನೆ ಮಾಡಿದೆ. ಅದು ನನಗೆ ಹೆಮ್ಮೆ ಆಗುತ್ತದೆ. ನನ್ನ ತಂದೆ ತಾಯಿ ಆಶೀರ್ವಾದ.''


Click it and Unblock the Notifications











