Don't Miss!
- News ಉಕ್ರೇನ್ ವಿರುದ್ಧ ರಷ್ಯಾ ಗಂಭೀರ ಆರೋಪ!
- Lifestyle ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- Sports RR vs DC: ಅವೇಶ್ ಖಾನ್, ರಿಯಾನ್ ಪರಾಗ್ ಶೈನ್; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ವಿನ್
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ರಾಬರ್ಟ್'ನಲ್ಲಿದ್ದಾರೆ ದರ್ಶನ್ ಮೆಚ್ಚಿದ ರೈಟರ್ ರಾಜಶೇಖರ್
ಸ್ಟಾರ್ ಸಿನಿಮಾಗಳೆಂದರೆ ಮುಹೂರ್ತದಿಂದ ಹಿಡಿದು ಬಿಡುಗಡೆ ಮತ್ತು ಬಿಡುಗಡೆಯ ಬಳಿಕವೂ ಸುದ್ದಿಯಾಗುತ್ತಲೇ ಇರುತ್ತದೆ. ಅದರಲ್ಲಿಯೂ ಕನ್ನಡದ ಮಟ್ಟಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ನೋಡುವ ನೋಟದಿಂದ ಆಡುವ ಮಾತಿನ ತನಕ ಪ್ರತಿಯೊಂದು ಕೂಡ ಸುದ್ದಿಯೇ.
ಸಾಮಾನ್ಯವಾಗಿ ಯಾವುದೇ ಅಲಂಕಾರಗಳಿಲ್ಲದೆ ನೇರವಾಗಿ ಮಾತನಾಡುವ ದರ್ಶನ್ ಅವರಿಗೆ ಪಾತ್ರದ ವಿಚಾರ ಬಂದಾಗ ಒಂದಷ್ಟು ಅಲಂಕಾರ ಮತ್ತು ಪಾತ್ರಕ್ಕೆ ಬೇಕಾದ ಅಹಂಕಾರ ಸೇರಿಸಿ ಸಂಭಾಷಣೆ ಬರೆದರೆ ಪ್ರೇಕ್ಷಕರಿಂದ ಸಿಗುವ ಜೈಕಾರವೇ ಬೇರೆ. ಆದರೆ ಅದನ್ನು ಅರ್ಥಮಾಡಿಕೊಂಡು, ಮಿತವಾಗಿ ಹಿತವಾಗಿ ಬರೆದು ಮನಸೆಳೆಯುವವರು ನಮ್ಮಲ್ಲಿ ಅಪರೂಪ ಎಂದೇ ಹೇಳಬಹುದು. ಅಂಥದೊಂದು ಮೆಚ್ಚುಗೆಗೆ ಪಾತ್ರರಾದವರು ರಾಜಶೇಖರ್.
ದರ್ಶನ್, ಸುದೀಪ್, ಶಿವಣ್ಣ, ಪುನೀತ್...ಈ ವರ್ಷ ಬಾಕ್ಸ್ ಆಫೀಸ್ 'ಕಿಂಗ್' ಯಾರು?
ರಸಮಯ ಸಂಭಾಷಣೆಗಳ ಸರಕನ್ನೇ ಶೇಖರವಾಗಿಸಿಕೊಂಡಿರುವ ರಾಜಶೇಖರ್ ದರ್ಶನ್ ಅಭಿನಯದ ರಾಬರ್ಟ್ ಚಿತ್ರಕ್ಕೂ ಸಂಭಾಷಣೆ ಬರೆದಿದ್ದಾರೆ. ತಮ್ಮ ವೃತ್ತಿ ಬದುಕು ಮತ್ತು ದರ್ಶನ್ ನೀಡಿದ ಮೆಚ್ಚುಗೆಯ ಬಗ್ಗೆ ಅವರು ಫಿಲ್ಮೀಬೀಟ್ ಜತೆಗೆ ಹಂಚಿಕೊಂಡಿರುವ ಮಾಹಿತಿಗಳು ಇಲ್ಲಿವೆ.
ನೀವು ಸಂಭಾಷಣಾಕಾರರಾಗಿ ಪ್ರವೇಶ ಪಡೆದಿದ್ದು ಹೇಗೆ?
ನಾನು ಮೊದಲು ನಿರ್ದೇಶನ ವಿಭಾಗದ ಮೂಲಕ ಕಿರುತೆರೆಗೆ ಪ್ರವೇಶಿಸಿದೆ. ಮಾಸ್ಟರ್ ಆನಂದ್ ಅವರ ಧಾರಾವಾಹಿಗಳಾದ 'ಪಡುವಾರ ಹಳ್ಳಿ ಪಡ್ಡೆಗಳು' `ರೋಬೋ ಫ್ಯಾಮಿಲಿ' ಮೊದಲಾದ ಧಾರಾವಾಹಿಗಳಿಗೆ ಸಂಚಿಕೆ ನಿರ್ದೇಶಕನಾಗಿಯೂ ಕೆಲಸ ಮಾಡಿದ್ದೆ. ಕಾನ್ಸೆಪ್ಟ್ ಬಗ್ಗೆ ಕೂಡ ಆಸಕ್ತಿ ಇದ್ದ ಕಾರಣ, `ಮಜಾ ಟಾಕೀಸ್'ನಂಥ ರಿಯಾಲಿಟಿ ಶೋಗೆ 200 ಎಪಿಸೋಡುಗಳಷ್ಟು ಬರೆದು ಕೊಡಲು ಸಾಧ್ಯವಾಯಿತು. ಟಿ.ವಿ ಬಿಟ್ಟು ಸಿನಿಮಾದಲ್ಲಿ ಕೆಲಸ ಮಾಡಬೇಕು ಎಂದುಕೊಂಡಾಗ `ಅಮ್ಮ ಐ ಲವ್ಯೂ' ಚಿತ್ರ ಸಿಕ್ಕಿತು. ಹಾಗೆ ಸಿನಿಮಾಗಳಲ್ಲಿ ಮುಂದುವರಿದೆ.
`ರಾಬರ್ಟ್’ ಚಿತ್ರಕ್ಕೆ ನೀವು ಆಯ್ಕೆಯಾಗಿದ್ದು ಯಾರ ಮೂಲಕ?
`ರಾಬರ್ಟ್' ಮಾತ್ರವಲ್ಲ ನನ್ನ ಮೊದಲ ಸಿನಿಮಾ `ಅಮ್ಮ ಐ ಲವ್ಯು' ತಂಡದಲ್ಲೇ ನನ್ನನ್ನು ಪರಿಚಯಿಸಿದ್ದು ನಿರ್ದೇಶಕ ತರುಣ್ ಸುಧೀರ್ ಸರ್. ಅವರಿಂದಲೇ `ವಿಕ್ಟ್ರಿ 2' ಅವಕಾಶವೂ ದೊರಕಿತ್ತು. ಅವರು `ಮಜಾಟಾಕೀಸ್' ವೀಕ್ಷಕರಾಗಿದ್ದು ಆ ದಿನಗಳಿಂದಲೇ ನನ್ನ ಬಗ್ಗೆ ಮೆಚ್ಚಿದ್ದರು. ಕಾಮಿಡಿ ಬರೆಯಬಲ್ಲವನು ಎಲ್ಲವನ್ನೂ ಬರೆಯಬಲ್ಲ ಎನ್ನುವುದು ಅವರ ನಂಬಿಕೆಯಾಗಿತ್ತು. ಅದನ್ನು ಉಳಿಸಿಕೊಳ್ಳುವಂತೆ ಸಿನಿಮಾಗಳಲ್ಲಿಯೂ ಬರೆದ ನನಗೆ ರಾಬರ್ಟ್ ನಲ್ಲಿ ಮಾಸ್ ಸಂಭಾಷಣೆ ಬರೆಯುವ ಅವಕಾಶ ಕೊಟ್ಟರು. ಈಗಾಗಲೇ ಪೋಸ್ಟರ್ ಗೆ ಬರೆದಂಥ `ಈ ಕೈಗೆ ಶಬರಿ ಮುಂದೆ ಸೋಲೋದು ಗೊತ್ತು; ರಾವಣನ ಮುಂದೆ ಗೆಲ್ಲೋದು ಗೊತ್ತು' ಡೈಲಾಗೇ ಜನಪ್ರಿಯವಾಗಿರುವುದು ತಂಡಕ್ಕೆ ಖುಷಿ ತಂದಿದೆ.
'ಒಡೆಯ' ನೋಡುವುದಕ್ಕೂ ಮುಂಚೆ ಈ ವಿಷಯಗಳನ್ನು ತಿಳಿದಿರಿ
ನಿಮ್ಮ ಸಂಭಾಷಣೆಗಳ ಬಗ್ಗೆ ದರ್ಶನ್ ಅವರು ಏನು ಹೇಳಿದರು?
ಮಜಾ ಟಾಕೀಸ್ ಶೋವನ್ನು ದರ್ಶನ್ ಸರ್ ಕೂಡ ನೋಡಿದ್ದಾರೆ. ಸೃಜನ್ ಸರ್ ಅವರ ಮೂಲಕ ನಾನು ಕೂಡ ಪರಿಚಯವಾಗಿದ್ದೆ. `ರಾಬರ್ಟ್' ಚಿತ್ರದ ಸೆಟ್ ನಲ್ಲಿ ದರ್ಶನ್ ಅವರನ್ನು ಕಂಡಾಗ ಒಂದು ನಮಸ್ಕಾರ ಕೊಟ್ಟು ಬದಿಗೆ ಹೋಗುತ್ತಿದ್ದೆ. ಅವರಾಗಿ ನನ್ನನ್ನು ಕರೆದು ಮಾತನಾಡಿಸದ ಕಾರಣ, ನನ್ನನ್ನೆಲ್ಲ ನೆನಪಿಟ್ಟುಕೊಂಡಿರಲ್ಲ ಎಂದುಕೊಂಡಿದ್ದೆ. ಆದರೆ ಅವರು ಮರೆತಿಲ್ಲ ಎನ್ನುವುದು ಗೊತ್ತಾಗಿದ್ದು, ಸೆಟ್ ನಲ್ಲಿ ವಿನೋದ್ ಪ್ರಭಾಕರ್ ಸರ್ ಬಂದಿದ್ದಾಗ. ಆಗ ನನ್ನನ್ನು ಕರೆದು ``ಇವರು ತುಂಬ ಚೆನ್ನಾಗಿ ಡೈಲಾಗ್ ಬರೆದಿದ್ದಾರೆ. ಮಜಾ ಟಾಕೀಸ್ ಗೂ ಬರೀತಾ ಇದ್ರು'' ಎಂದು ಪರಿಚಯ ಮಾಡ್ಕೊಟ್ರು. ನನಗೆ ಅದು ಯಾವತ್ತಿಗೂ ಮರೆಯದಂಥ ಘಟನೆ.
ದರ್ಶನ್ ಅವರ ಹೊರತು ನಿಮ್ಮನ್ನು ಸಂಭಾಷಣೆಯಿಂದ ಗುರುತಿಸಿದವರು ಯಾರು?
ಅದು ಡಾ. ಶಿವರಾಜ್ ಕುಮಾರ್. ಮಜಾ ಟಾಕೀಸ್ ನ 100ನೇ ಸಂಚಿಕೆಯಲ್ಲಿ ಅತಿಥಿಯಾಗಿ ಶಿವಣ್ಣ ಆಗಮಿಸಿದ್ದರು. ಅವರಿಗೆ ಗಿರಿಜಮ್ಮ ನನ್ನನ್ನು ಪರಿಚಯಿಸಿಕೊಟ್ಟಾಗ, ಒಮ್ಮೆಲೆ ಅವರು ನನಗೆ ಗೊತ್ತು, ಇವರು ಸಂಭಾಷಣೆ ಮಾತ್ರವಲ್ಲ, ನಟನೆ ಕೂಡ ಮಾಡುತ್ತಾರಲ್ವ? ಒಮ್ಮೆ ಕಾಡು ಮನುಷ್ಯನ ಪಾತ್ರ ಮಾಡಿದ್ದನ್ನು ನೋಡಿದ್ದೆ ಅಂದರು! ನನಗೆ ನಿಜಕ್ಕೂ ಅಚ್ಚರಿಯಾಯಿತು. ಅದರಲ್ಲಿ ಒಂದು ಅರ್ಥವೇ ಇರದ ಸಂಭಾಷಣೆಗಳನ್ನು ಹೇಳಿದ್ದೆ.ಅದನ್ನೇ ನೆನಪಿಸಿಕೊಂಡು ಅವರು ಮೆಚ್ಚಿದಾಗ ಬಹಳ ಖುಷಿಯಾಗಿತ್ತು.
ರೇಪಿಸ್ಟ್ ಗಳನ್ನ ಪಬ್ಲಿಕ್ ನಲ್ಲಿ ಎನ್ ಕೌಂಟರ್ ಮಾಡಬೇಕು: ದರ್ಶನ್ ಗುಡುಗು.!
ಉಳಿದಂತೆ ನಿಮಗೆ ಸಿಕ್ಕಂಥ ಪ್ರೋತ್ಸಾಹಗಳೇನಿವೆ?
ನನ್ನ ಮನೆ ರಾಯಚೂರು ಜಿಲ್ಲೆಯ ಸಿಂಧನೂರಿಲ್ಲಿದೆ. ಬೆಂಗಳೂರಿಗೆ ಬಂದು ಹದಿನಾರು ವರ್ಷಗಳಾಗಿವೆ. ನಮ್ಮಣ್ಣನ ಜತೆಗೆ ಸೇಲ್ಸ್ ಮ್ಯಾನ್ ಆಗಿ ಬಂದರೂ, ಚಿತ್ರೋದ್ಯಮ ನನ್ನ ಆಸಕ್ತಿಯ ಕ್ಷೇತ್ರವಾಗಿತ್ತು. ಹಾಗೆ ಇಲ್ಲಿ ಅವಕಾಶಕ್ಕಾಗಿ ಅಲೆದಾಡುವಾಗ ಕೂಡ ಎಂದಿಗೂ ನನ್ನಣ್ಣ ಬಸವರಾಜ್ ಆಗಲೀ ತಮ್ಮ ಮಂಜುನಾಥ್ ಆಗಲೀ ವಿರೋಧದ ಮಾತುಗಳಾಡಿದ್ದೇ ಇಲ್ಲ. ಅವರ ಜತೆಗೆ ಊರಲ್ಲಿರುವ ಸಹೋದರರು ಮತ್ತು ಮನೆಮಂದಿ ನೀಡಿದಂಥ ಪ್ರೋತ್ಸಾಹವನ್ನು ಎಂದಿಗೂ ಮರೆಯಲಾರೆ. ಆ ಕಾರಣದಿಂದಲೇ ಇಂದು ವಿನಯ ರಾಜ್ ಕುಮಾರ್ ಅವರ `ಯುವ ಕೇಸರಿ', `ಚಿಕ್ಕಣ್ಣನ ಬಿಲ್ ಗೇಟ್ಸ್', ಸಾಯಿಕುಮಾರ್ ಅವರ ‘ರಾಕ್ಷಸರು' ಮೊದಲಾದ ಚಿತ್ರಗಳಲ್ಲಿ ಇಂದು ಕೆಲಸ ಮಾಡಲು ಸಾಧ್ಯವಾಗಿದೆ.
ನಿಮ್ಮ ಪ್ರಕಾರ ಒಬ್ಬ ಸಿನಿಮಾ ಬರಹಗಾರನಿಗೆ ಇರಲೇಬೇಕಾದ ಪ್ರಮುಖ ಅಂಶಗಳೇನು?
ನಿರ್ದೇಶಕರು ಹೇಳುವುದನ್ನಷ್ಟೇ ಅಲ್ಲದೆ, ಒಂದಷ್ಟು ಡಿಫರೆಂಟಾಗಿ ಯೋಚಿಸುವ ಶಕ್ತಿ ಇರಬೇಕು. ಮಾತ್ರವಲ್ಲ, ತಾಳ್ಮೆ ಕೂಡ ಮುಖ್ಯವಾದ ವಿಚಾರ. ನಮಗೆ ಕಾನ್ಸೆಪ್ಟ್ ಆಗಲೀ ಪಂಚ್ ಆಗಲೀ ತಕ್ಷಣ ಹೊಳೆದಿಲ್ಲ ಎಂದ ಮಾತ್ರಕ್ಕೆ ಸಹನೆ ಕಳೆದುಕೊಳ್ಳಬಾರದು, ಸ್ವಲ್ಪ ಸಮಯ ತೆಗೆದುಕೊಂಡು ಬರೆಯುವ ಸಂಯಮ ಇರಬೇಕು.