Exclusive: ಬೆಂಗಳೂರಿನ ಪ್ರಮುಖ ಚಿತ್ರಮಂದಿರ ಸಂತೋಷ್ ಕಾರ್ಯಾರಂಭ: ರಿಲೀಸ್ ಆಗೋದ್ಯಾವ ಸಿನಿಮಾ?
ಬೆಂಗಳೂರು ಕೆಜಿ ರಸ್ತೆಯ ಸಂತೋಷ್ ಥಿಯೇಟರ್ ನಾಳೆಯಿಂದ ಮತ್ತೆ ಸಿನಿಮಾ ಪ್ರದರ್ಶನ ಆರಂಭಿಸಲಿದೆ. ಡಾ. ರಾಜ್ಕುಮಾರ್ ಮೊಮ್ಮಗ ಧೀರೇನ್ ರಾಮ್ಕುಮಾರ್ ನಟನೆಯ 'ಶಿವ 143' ಸಿನಿಮಾ ನಾಳೆ ತೆರೆಗಪ್ಪಳಿಸಿದೆ. ಕಾರಣಾಂತರಗಳಿಂದ ಹಲವು ತಿಂಗಳ ಕಾಲ ಸಂತೋಷ್ ಥಿಯೇಟರ್ನಲ್ಲಿ ಸಿನಿಮಾ ಪ್ರದರ್ಸನ ಸ್ಥಗಿತವಾಗಿತ್ತು. ಇದೀಗ ಮತ್ತೆ ಥಿಯೇಟರ್ ರೀ ಓಪನ್ ಆಗುತ್ತಿರುವು ಅತ್ತ ಕನ್ನಡ ಚಿತ್ರರಂಗ ಹಾಗೂ ಕನ್ನಡ ಸಿನಿರಸಿಕರಿಗೆ ಖುಷಿ ತಂದಿದೆ.
ಎರಡು ವಾರಗಳೇ ಹಿಂದೆಯೇ ಸಂತೋಷ್ ಥಿಯೇಟರ್ ಬಾಗಿಲು ತೆರೆದು ಸಿನಿಮಾ ಪ್ರದರ್ಶನ ಆರಂಭಿಸಲು ತಯಾರಿ ನಡೆದಿತ್ತು. 'ರವಿ ಬೋಪಣ್ಣ' ಚಿತ್ರವನ್ನು ಅಲ್ಲೇ ರಿಲೀಸ್ ಮಾಡುವುದಾಗಿ ಘೋಷಿಸಲಾಗಿತ್ತು. ಆದರೆ ಕೊಂಚ ತಡವಾಗಿದ್ದು, ನಾಳೆ ಶತಾಯಗತಾಯ ಸಿನಿಮಾ ಪ್ರದರ್ಶನ ಶುರುವಾಗಲಿದೆ ಎಂದು ಥಿಯೇಟರ್ ಮಾಲೀಕರು ಮಾಹಿತಿ ನೀಡಿದ್ದಾರೆ.
ಕೊರೊನಾ ಹಾವಳಿ ಸಮಯದಲ್ಲಿ ಥಿಯೇಟರ್ಗಳು ಬಂದ್ ಆಗಿ ಸಾಕಷ್ಟು ನಷ್ಟವಾಗಿತ್ತು. ಅಕ್ಟೋಬರ್ 8ರಂದು ಸೂರಜ್ ಗೌಡ ಹಾಗೂ ಧನ್ಯಾ ರಾಮ್ಕುಮಾರ್ ಅಭಿನಯದ 'ನಿನ್ನ ಸನಿಹಕೆ' ಸಿನಿಮಾ ಬಿಡುಗಡೆಯಾಗಿತ್ತು. ಅದಕ್ಕೆ ಸಂತೋಷ್ ಮೇನ್ ಥಿಯೇಟರ್ ಆಗಿತ್ತು. ಸಿನಿಮಾ ರಿಲೀಸ್ ಸಂಭ್ರಮದಲ್ಲಿ ಇದ್ದಾಗಲೇ ತಾಂತ್ರಿಕ ಸಮಸ್ಯೆಯಿಂದ ಸಿನಿಮಾ ಪ್ರದರ್ಶನ ಆಗಿರಲಿಲ್ಲ. 'ನಿನ್ನ ಸನಿಹಕೆ' ನಂತರ 'ಸಲಗ' ಸಿನಿಮಾ ಸಂತೋಷ್ ಥಿಯೇಟರ್ನಲ್ಲಿ ಬಿಡುಗಡೆಯಾಗುತ್ತದೆ ಎಂದು ಹೇಳಿದ್ದರು. ಆದರೆ 'ಸಲಗ' ಸಿನಿಮಾ ತ್ರಿವೇಣಿ ಥಿಯೇಟರ್ನಲ್ಲಿ ಪ್ರದರ್ಶನ ಕಂಡಿತ್ತು.

ಅಕ್ಟೋಬರ್ನಲ್ಲಿ ಕೆಲ ಕಾನೂನಾತ್ಮಕ ಕಾರಣಗಳಿಂದ ಸಂತೋಷ್ ಹಾಗೂ ನರ್ತಕಿ ಥಿಯೇಟರ್ಗಳಲ್ಲಿ ಸಿನಿಮಾಗಳ ಪ್ರದರ್ಶನ ನಿಂತು ಹೋಗಿತ್ತು. ಇದೀಗ ಬಹುತೇಕ ಸಮಸ್ಯೆ ಬಗೆಹರಿದಿದ್ದು, ಸಂಜೆ ವೇಳೆಗೆ ಸಿನಿಮಾ ಪ್ರದರ್ಶನಕ್ಕೆ ಅವಕಾಶ ಸಿಗಲಿದೆ. ನಾಳೆ(ಆಗಸ್ಟ್ 26) ಸಂತೋಷ್ ಥಿಯೇಟರ್ನಲ್ಲೇ 'ಶಿವ 143' ಸಿನಿಮಾ ಪ್ರದರ್ಶನ ಮಾಡುವ ಭರವಸೆಯಲ್ಲಿ ಮಾಲೀಕರು ಇದ್ದಾರೆ. ಈ ಬಗ್ಗೆ ಫಿಲ್ಮಿಬೀಟ್ ಜೊತೆ ಮಾತನಾಡಿರುವ ಸಂತೋಷ್ ಥಿಯೇಟರ್ ಮಾಲೀಕರು "ಎಲ್ಲಾ ಸಮಸ್ಯೆಗಳು ಬಗೆಹರಿದಿದೆ. ಸಂಜೆ ವೇಳೆಗೆ ಡಿಸಿ ಕಛೇರಿಯಿಂದ ಅನುಮತಿ ಸಿಗಲಿದೆ. ಥಿಯೇಟರ್ನಲ್ಲಿ ಸಿನಿಮಾ ಪ್ರದರ್ಶನಕ್ಕೆ ಸಿದ್ಧತೆ ಕೂಡ ಮಾಡಿಕೊಂಡಿದ್ದೇವೆ. ಈಗಾಗಲೇ ಸಿನಿಮಾ ಪ್ರದರ್ಶನದ ಟೆಸ್ಟ್ ಕೂಡ ಮಾಡಲಾಗಿದೆ. ಲಾಕ್ಡೌನ್ ಸಮಯದಲ್ಲಿ ಬಾಗಿಲು ಮುಚ್ಚಿದ್ದಾಗಲೇ ಥಿಯೇಟರ್ಗೆ ಪೈಂಟ್ ಎಲ್ಲಾ ಮಾಡಿಸಿದ್ದೇವೆ. ಶೌಚಾಲಯಕ್ಕೆಲ್ಲಾ ಹೊಸ ರೂಪ ಕೊಟ್ಟಿದ್ದೇವೆ. ನಾಳೆ ಸಿನಿಮಾ ಪ್ರದರ್ಶನ ಆಗುವುದು ಬಹುತೇಕ ನಿಶ್ಚಿತ" ಎಂದು ಹೇಳಿದ್ದಾರೆ.

ಸಂತೋಷ್ ಥಿಯೇಟರ್ ಜೊತೆಗೆ ನರ್ತಕಿ ಥಿಯೇಟರ್ನಲ್ಲೂ ಸಿನಿಮಾ ಪ್ರದರ್ಶನಕ್ಕೆ ಎಲ್ಲಾ ಸಿದ್ಧತೆ ನಡೆಯುತ್ತಿದೆ. ಯಾವುದಾದರೂ ದೊಡ್ಡ ಸಿನಿಮಾ ಬಂದರೆ ಪ್ರದರ್ಶನ ಶುರುವಾಗಲಿದೆ. ಏಳೆಂಟು ತಿಂಗಳ ಹಿಂದೆ ಎರಡೂ ಥಿಯೇಟರ್ಗಳು ಶಾಶ್ವತವಾಗಿ ಬಂದ್ ಆಗಿದೆ. ಥಿಯೇಟರ್ ನೆಲಸಮ ಮಾಡಿ ಕಾಂಪ್ಲೆಕ್ಸ್ ಕಟ್ಟುತ್ತಾರೆ ಅನ್ನುವ ಮಾತುಗಳು ಕೇಳಿಬಂದಿತ್ತು. ಇದು ಸಹಜವಾಗಿಯೇ ಸಿನಿರಸಿಕರಿಗೆ ಬೇಸರ ತಂದಿತ್ತು. ಆದರೆ ಇದೀಗ ಗಾಂಧಿನಗರದ ಎರಡು ಪ್ರಮುಖ ಥಿಯೇಟರ್ಗಳು ಮತ್ತೆ ಬಾಗಿಲು ತೆರೆದು ಸಿನಿಮಾ ಪ್ರದರ್ಶನಕ್ಕೆ ಮುಂದಾಗಿರುವುದು ಸಂತಸದ ಸಂಗತಿ.


Click it and Unblock the Notifications











