ಕೈನಲ್ಲಿದ್ದ ಇನ್ಫೊಸಿಸ್ ಕೆಲಸ ಬಿಟ್ಟು ಮಜಾಭಾರತ ಸೇರಿದ್ದೇಕೆ ಎಂಬುದನ್ನು ಬಿಚ್ಚಿಟ್ಟ ಮಾನಸಾ ಗುರುಸ್ವಾಮಿ
ಕೈನಲ್ಲಿದ್ದ ಒಳ್ಳೊಳ್ಳೆ ಕೆಲಸಗಳನ್ನ ಬಿಟ್ಟು ಚಿತ್ರರಂಗ ಹಾಗೂ ಕಿರುತೆರೆ ಪ್ರವೇಶಿಸಿ ಯಶಸ್ವಿಯಾದ ಹಲವಾರು ಕಲಾವಿದರ ಉದಾಹರಣೆಗಳು ನಮ್ಮನಿಮ್ಮ ಮುಂದಿವೆ. ರಕ್ಷಿತ್ ಶೆಟ್ಟಿ ಹಾಗೂ ನಿರ್ದೇಶಕ ಸಂತೋಷ್ ಆನಂದ್ ರಾಮ್ ರೀತಿಯ ಹಲವಾರು ಕಲಾವಿದರು ಇದಕ್ಕೆ ತಾಜಾ ಉದಾಹರಣೆ ಎನ್ನಬಹುದು.
ಇನ್ನು ಕಿರುತೆರೆಯಲ್ಲಿ ಈ ರೀತಿ ಒಳ್ಳೆಯ ಕೆಲಸಗಳನ್ನು ಬಿಟ್ಟು ನಟನೆಯತ್ತ ಮುಖ ಮಾಡಿದವರ ಸಂಖ್ಯೆ ತುಸು ಹೆಚ್ಚು ಎಂದೇ ಹೇಳಬಹುದು. ಈ ಸಾಲಿನಲ್ಲಿ ನಿಲ್ಲುವ ಕಲಾವಿದೆ ಮಾನಸಾ ಗುರುಸ್ವಾಮಿ. ಮೂಲತಃ ಮೆಕ್ಯಾನಿಕಲ್ ಎಂಜಿನಿಯರ್ ಆಗಿದ್ದ ಮಾನಸಾ ಗುರುಸ್ವಾಮಿ ಇನ್ಫೋಸಿಸ್ ರೀತಿಯ ದೊಡ್ಡ ಸಂಸ್ಥೆಯಲ್ಲಿ ಕೆಲಸ ನಿರ್ವಹಿಸುವ ಅವಕಾಶ ಗಿಟ್ಟಿಸಿಕೊಂಡಿದ್ದರು.
ಹೀಗೆ ಒಂದೊಳ್ಳೆ ಕಂಪೆನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಮಾನಸಾ ಗುರುಸ್ವಾಮಿ ಆ ಕೆಲಸವನ್ನು ಬಿಟ್ಟು ಕಿರುತೆರೆ ಪ್ರವೇಶಿಸಲು ಕಾರಣವೇನೆಂಬುದನ್ನು ಇತ್ತೀಚಿಗಷ್ಟೆ ಫಿಲ್ಮಿಬೀಟ್ ಕನ್ನಡ ಜತೆ ನಡೆದ ಸಂದರ್ಶನದಲ್ಲಿ ಬಿಚ್ಚಿಟ್ಟಿದ್ದಾರೆ.

ನಾನು ಓದಿದ್ದಕ್ಕೂ ನನ್ನ ಕೆಲಸಕ್ಕೂ ಲಿಂಕ್ ಇಲ್ಲ
ತನ್ನ ಕಿರು ಪರಿಚಯ ಮಾಡಿಕೊಳ್ಳುವುದರ ಮೂಲಕ ಸಂದರ್ಶನದಲ್ಲಿ ಮಾತನ್ನು ಆರಂಭಿಸಿದ ಮಾನಸಾ ಗುರುಸ್ವಾಮಿ ತನ್ನ ಕುಟುಂಬದಲ್ಲಿ ತಾನು, ತನ್ನ ತಂದೆ, ತಾಯಿ ಹಾಗೂ ತಮ್ಮ ಇರುವುದಾಗಿ ಹೇಳಿಕೊಂಡರು. ರಾಜರಾಜೇಶ್ವರಿ ಇಂಜಿನಿಯರಿಂಗ್ ಕಾಲೇಜ್ನಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಮುಗಿಸಿದ್ದ ತನ್ನ ಓದಿಗೂ ಮತ್ತು ತಾನು ಮಾಡುತ್ತಿರುವ ಕೆಲಸಕ್ಕೂ ಯಾವುದೇ ಲಿಂಕ್ ಇಲ್ಲ ಎಂದು ನಗುತ್ತಲೇ ಹೇಳಿಕೊಂಡರು ಮಾನಸಾ ಗುರುಸ್ವಾಮಿ.

ಇನ್ಫೋಸಿಸ್ ಕೆಲಸ ಮಾಡುವಾಗಲೇ ಮಜಾ ಭಾರತದ ಆಫರ್
ಹೀಗೆ ವಿದ್ಯಾಭ್ಯಾಸ ಮುಗಿಸಿದ್ದ ಮಾನಸಾ ಗುರುಸ್ವಾಮಿ ಹೆಸರಾಂತ ಇನ್ಫೋಸಿಸ್ ಸಂಸ್ಥೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾಗಿ ಹೇಳಿಕೊಂಡಿದ್ದಾರೆ. ಹಾಗೂ ಇದೇ ಸಮಯದಲ್ಲಿ ಮಜಾ ಭಾರತ ಸೀಸನ್ 2ರ ಆಫರ್ ಸಿಕ್ಕಿತ್ತು ಎಂದು ಹೇಳಿಕೊಂಡಿದ್ದಾರೆ.

ಆಡಿಷನ್ ಎಂದು ಹೋದ್ರೆ ಆಲ್ರೆಡಿ ಸೆಲೆಕ್ಟ್ ಆಗಿ ಬಿಟ್ಟಿದ್ದೆ!
ಇನ್ನು ಮಜಾಭಾರತ ಆಡಿಷನ್ ಕೊಡಲು ಹೋದ ಮಾನಸ ಗುರುಸ್ವಾಮಿಗೆ ಶಾಕ್ ಕಾದಿತ್ತು. ಮನಸಾ ಗುರುಸ್ವಾಮಿ ಕೈಗೆ ಸ್ಕ್ರಿಪ್ಟ್ ಪೇಪರ್ ನೀಡಿ ನಾಳೆ ಶೂಟಿಂಗ್ ಇದೆ ತಯಾರಾಗಿ ಎಂದು ಹೇಳಿದ್ದರಂತೆ. ಅರೇ ಇದೇನು ನಾನು ಆಡಿಷನ್ ಕೊಡಲು ಬಂದರೆ ಇವರು ಶೂಟಿಂಗ್ ಎಂದು ಹೇಳುತ್ತಿದ್ದಾರೆ ಎಂದು ಆಶ್ಚರ್ಯಕ್ಕೊಳಗಾದ ಮಾನಸಾ ಗುರುಸ್ವಾಮಿಗೆ ನೀವು ಈಗಾಗಲೇ ಆಯ್ಕೆಯಾಗಿದ್ದೀರಾ ಎಂಬ ಉತ್ತರ ಮಜಾ ಭಾರತ ತಂಡದಿಂದ ಬಂದಿತ್ತಂತೆ. ಈ ವಿಷಯ ಆಶ್ಚರ್ಯಕರ ಮತ್ತು ಇದರಲ್ಲಿ ತಾನು ತುಂಬಾ ಲಕ್ಕಿ ಎಂದು ಮಾನಸಾ ಗುರುಸ್ವಾಮಿ ಹೇಳಿಕೊಂಡಿದ್ದಾರೆ.

ಥಿಯೇಟರ್ನಲ್ಲಿ ಕೆಲಸ ಮಾಡುವಾಗ ಪರಿಚಯವಿದ್ದವರಿಂದ ಮಜಾಭಾರತದ ಅವಕಾಶ
ಇನ್ನು ಚಿಕ್ಕ ವಯಸ್ಸಿನಿಂದಲೂ ಸಹ ನಟನೆಯಲ್ಲಿ ಆಸಕ್ತಿ ಇದ್ದ ಮಾನಸಾ ಗುರುಸ್ವಾಮಿ ಅವರನ್ನು ಅವರ ತಾಯಿ ನಟನ ಕಲಿಕಾ ಶಾಲೆಗೆ ಸೇರಿಸಿದ್ದರು ಮತ್ತು ಮಾನಸ ಗುರುಸ್ವಾಮಿ ನಂತರದ ದಿನಗಳಲ್ಲಿ ಥಿಯೇಟರ್ ಆರ್ಟಿಸ್ಟ್ ಆಗಿ ಕೂಡ ಕಲಿಯಲು ಆರಂಭಿಸಿದ್ದರು. ಹೀಗೆ ಥಿಯೇಟರ್ನಲ್ಲಿ ಮಾನಸಾ ಗುರುಸ್ವಾಮಿಗೆ ಮಾರ್ಗದರ್ಶಕರಾಗಿದ್ದ ಓರ್ವರು ಮಜಾ ಭಾರತದಲ್ಲಿಯೂ ಕೆಲಸ ಮಾಡುತ್ತಿದ್ದ ಕಾರಣ ಅವಕಾಶ ಲಭಿಸಿತು ಎನ್ನುತ್ತಾರೆ. ಇನ್ನು ಈ ಆಫರ್ ಬಂದಾಗ ಕೆಲಸ ಬಿಟ್ಟು ಹೋಗೋದಾ ಹಾಗೂ ಹೋದ್ರೆ ಮುಂದಿನ ಜೀವನ ಹೇಗೆ ಎಂದು ಗೊಂದಲಕ್ಕೊಳಗಾಗಿದ್ದ ಮಾನಸಾ ಗುರುಸ್ವಾಮಿಗೆ ಅವರ ತಾಯಿ ಕೆಲಸ ಬಿಟ್ಟು ಮಜಾ ಭಾರತಕ್ಕೆ ಹೋಗು ಎಂಬ ಸಲಹೆ ನೀಡಿದ್ರಂತೆ.


Click it and Unblock the Notifications











