ಸಿನಿಮಾ ಚೆನ್ನಾಗಿದ್ರೆ ಓಟಿಟಿಗೆ ಬಂದಮೇಲೂ 100 ದಿನ ಓಡುತ್ತೆ, ಈ ಚಿತ್ರವೇ ಉದಾಹರಣೆ ಎಂದ್ರು ದರ್ಶನ್!

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಕ್ರಾಂತಿ ಚಿತ್ರದ ಬಿಡುಗಡೆ ದಿನಾಂಕ ಈಗಾಗಲೇ ಘೋಷಣೆಯಾಗಿದ್ದು ಬಿಡುಗಡೆಗೆ ದಿನಗಣನೆ ಆರಂಭವಾಗಿದೆ. ಮುಂಬರುವ ವರ್ಷದ ಜನವರಿ 26ರಂದು ಕ್ರಾಂತಿ ಚಿತ್ರ ತೆರೆಕಾಣಲಿದ್ದು ಚಿತ್ರದ ಪ್ರಚಾರ ಕೆಲಸಗಳನ್ನು ಚಿತ್ರತಂಡ ಆರಂಭಿಸಿಕೊಂಡಿದೆ.
ಇನ್ನು ಈ ಬಾರಿ ಸ್ವತಃ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರೇ ಸಂದರ್ಶನಗಳನ್ನು ನೀಡುವುದರ ಮೂಲಕ ಪ್ರಚಾರ ಕಾರ್ಯಗಳನ್ನು ಆರಂಭಿಸಿದ್ದಾರೆ. ನಮ್ಮ ಕನ್ನಡ ಫಿಲ್ಮಿಬೀಟ್ ಚಾನೆಲ್ ನಡೆಸಿದ ಸಂದರ್ಶನದಲ್ಲಿ ಭಾಗವಹಿಸಿದ ದರ್ಶನ್ ಚಿತ್ರದ ಕುರಿತು ಹಾಗೂ ಇನ್ನಿತರ ಇಂಟರೆಸ್ಟಿಂಗ್ ವಿಷಯಗಳ ಕುರಿತು ಮುಕ್ತವಾಗಿ ಮಾತನಾಡಿದ್ದಾರೆ.
ಕ್ರಾಂತಿ ಸಿನಿಮಾದ ಕತೆಯ ಬಗ್ಗೆ ಮಾತನಾಡಿದ ದರ್ಶನ್ ಸರ್ ಎಂ ವಿಶ್ವೇಶ್ವರಯ್ಯ ಹಾಗೂ ಅಬ್ದುಲ್ ಕಲಾಂ ಅವರಂತಹ ಸಾಧಕರು ಸರ್ಕಾರಿ ಶಾಲೆಯಲ್ಲೇ ಓದಿದವರಲ್ಲವಾ ಎಂದು ಹೇಳುವ ಮೂಲಕ ಚಿತ್ರ ಸರ್ಕಾರಿ ಶಾಲೆ ಹಾಗೂ ಖಾಸಗಿ ಶಾಲೆಗಳ ನಡುವಿನ ವ್ಯತ್ಯಾಸದ ಕುರಿತು ಸಂದೇಶ ನೀಡಲಿದೆ ಎಂದರು. ಇನ್ನು ಇತ್ತೀಚೆಗೆ ಬಂದಿರುವ ಓಟಿಟಿ ವೇದಿಕೆ ಹಾಗೂ ಹಿಂದಿನಿಂದಲೂ ಇರುವ ಚಿತ್ರಮಂದಿರಗಳ ಕುರಿತಾಗಿಯೂ ಮಾತನಾಡಿದ ದರ್ಶನ್ ತಮ್ಮದೇ ಶೈಲಿಯಲ್ಲಿ ಉತ್ತರವನ್ನು ನೀಡಿದ್ದಾರೆ.

ಏನೇ ಬಂದ್ರೂ ಥಿಯೇಟರ್ ವ್ಯಾಲ್ಯೂ ಕಡಿಮೆ ಆಗಲ್ಲ
ಸಂದರ್ಶನದಲ್ಲಿ ಭಾಗವಹಿಸಿದ್ದ ದರ್ಶನ್ ಇತ್ತೀಚೆಗೆ ಅತಿ ಹೆಚ್ಚು ಚರ್ಚೆಗೆ ಒಳಪಟ್ಟಿರುವ ಚಿತ್ರಮಂದಿರ vs ಓಟಿಟಿ ಎಂಬ ವಿಷಯದ ಬಗ್ಗೆ ಮಾತನಾಡಿದರು. 'ನೋಡಿ ಅವಾಗೆಲ್ಲ ಚಂದನ, ಡಿಡಿ ಒನ್ ಚಾನಲ್ ಇತ್ತಲ್ವ. ಇವಾಗ ಎಷ್ಟೆಲ್ಲಾ ಚಾನೆಲ್ ಬಂದರೂ ಅದು ಇನ್ನೂ ಅಲ್ಲೇ ಇಲ್ವಾ, ಅದಿಕ್ಕೇನು ಕಡಿಮೆ ಆಗಿಲ್ಲ ಅಲ್ವಾ. ಅದೇ ರೀತಿ ಏನೇ ಬಂದರೂ ಥಿಯೇಟರ್ ಬೆಲೆ ಕಡಿಮೆ ಆಗಲ್ಲ' ಎಂದರು.

ಚಿತ್ರ ಚೆನ್ನಾಗಿದ್ರೆ ಓಟಿಟಿಗೆ ಬಂದಮೇಲೂ ನೂರು ದಿನ ಓಡುತ್ತೆ
ಇನ್ನೂ ಮುಂದುವರಿದು ಮಾತನಾಡಿದ ದರ್ಶನ್ 'ಚಿತ್ರಗಳನ್ನು ಯಾವಾಗಲೂ ಬಿಗ್ ಸ್ಕ್ರೀನ್ನಲ್ಲಿ ನೋಡಿದ್ರೇನೇ ಮಜಾ, ಟಿವಿಯಲ್ಲಿ ನೋಡಿದ್ರೆ ಏನಿಲ್ಲ. ಅದಕ್ಕೆ ಬೆಸ್ಟ್ ಎಕ್ಸಾಂಪಲ್ ನಮ್ಮ ಯಜಮಾನನೇ ಇದೆಯಲ್ಲ. ಥಿಯೇಟರ್ಗೆ ಹಾಕಿದ್ವಿ, 45 ದಿನಕ್ಕೆ ಪ್ರೈಮ್ಗೆ ಕೊಟ್ವಿ, ಪುನಃ ನೂರು ದಿನ ಥಿಯೇಟರ್ಲಿ ಹೇಗ್ ಓಡಿತು ಹಾಗಾದ್ರೆ?' ಎಂದು ಪ್ರಶ್ನೆ ಹಾಕಿದರು.

ಚಿತ್ರದಲ್ಲಿ ಜನ ನೋಡುವ ಅಂಶ ಇರಬೇಕು, ಹಾಗಿದ್ರೆ ಜನ ನೋಡೇ ನೋಡ್ತಾರೆ
ಈ ಕುರಿತಾಗಿ ಮಾತು ಮುಂದುವರಿಸಿದ ದರ್ಶನ್ ಓಟಿಟಿಗೆ ಬಂದ ನಂತರವೂ ಚಿತ್ರವನ್ನು ಚಿತ್ರಮಂದಿರದಲ್ಲಿ ಮೂರು ಗಂಟೆ ಪ್ರೇಕ್ಷಕ ಕುಳಿತುಕೊಂಡು ನೋಡುವಂತ ಅಂಶವಿರಬೇಕು, ಹಾಗಿದ್ದಾಗ ಮಾತ್ರ ಜನ ನೋಡ್ತಾರೆ, ಇಂಥ ಅಂಶವೇ ಇಲ್ಲದೇ ಕೈಗುಟುಕದ ದ್ರಾಕ್ಷಿ ಹುಳಿ ಎಂದು ಹೇಳಿಕೊಳ್ಳುವುದು ತಪ್ಪು ಎಂದರು. ಇನ್ನು ತಮ್ಮದ್ದೇ ಮತ್ತೊಂದು ಚಿತ್ರವನ್ನು ಉದಾಹರಣೆಯಾಗಿ ತೆಗೆದುಕೊಂಡ ನಟ ದರ್ಶನ್ ಮೊಣಕಾಲಿನವರೆಗೂ ನೀರಿದ್ದರೂ ಸಹ ಕುರುಕ್ಷೇತ್ರ ಚಿತ್ರವನ್ನು ಜನ ವೀಕ್ಷಿಸಿದ್ದರು, ಯಾವುದೇ ಕಾರಣವೂ ಚಿತ್ರದ ಓಟಕ್ಕೆ ಅಡ್ಡಿಯಾಗುವುದಿಲ್ಲ ಎಂದರು.


Click it and Unblock the Notifications











