'ಭೈರತಿ ರಣಗಲ್ಲು' ಪಾತ್ರದ ಹುಟ್ಟಿನ ಬಗ್ಗೆ 'ಮಫ್ತಿ' ನಿರ್ದೇಶಕರ ಮಾತು!
Recommended Video

'ಮಫ್ತಿ' ಸಿನಿಮಾ ನೋಡಿದ ಬಹುತೇಕರಿಗೆ ಕಾಡುವ ಪಾತ್ರ 'ಭೈರತಿ ರಣಗಲ್ಲು'. ಆ ಪಾತ್ರಕ್ಕೆ ಇರುವ ತಾಕತ್ತೇ ಬೇರೆ. ಚಿತ್ರಮಂದಿರದಿಂದ ಹೊರ ಬಂದ ಮೇಲೆಯೂ ಆ ಪಾತ್ರ ಪ್ರೇಕ್ಷಕರನ್ನು ಕೆಣಕುತ್ತದೆ. ಆ ಪಾತ್ರಕ್ಕಾಗಿ ಮತ್ತೆ ಸಿನಿಮಾ ನೋಡಬೇಕು ಎನ್ನುವ ಬಯಕೆ ಹುಟ್ಟಿಸುತ್ತದೆ.
'ಭೈರತಿ ರಣಗಲ್ಲು' ಪಾತ್ರ ಮಾಡಿದ್ದು ಸ್ಯಾಂಡಲ್ ವುಡ್ ಕಿಂಗ್ ಶಿವರಾಜ್ ಕುಮಾರ್. ನೂರಕ್ಕೂ ಹೆಚ್ಚು ಸಿನಿಮಾ ಮಾಡಿರುವ ಶಿವಣ್ಣ 'ಮಫ್ತಿ'ಯಲ್ಲಿ ಮಾಡಿದ ಪಾತ್ರ ತುಂಬ ವಿಭಿನ್ನ ಮತ್ತು ವಿಶೇಷವಾಗಿತ್ತು. 'ಭೈರತಿ ರಣಗಲ್ಲು' ಪಾತ್ರದ ಬಗ್ಗೆ ಈಗ ಎಲ್ಲರೂ ಮಾತನಾಡುತ್ತಿದ್ದಾರೆ. ಆದರೆ ಆ ಪಾತ್ರ ಹೇಗೆ ಹುಟ್ಟಿದ್ದು ಹೇಗೆ ಎಂಬ ಕುತೂಹಲಕಾರಿ ವಿಷಯವನ್ನು ಚಿತ್ರದ ನಿರ್ದೇಶಕ ನರ್ತನ್ ಬಿಚ್ಚಿಟ್ಟಿದ್ದಾರೆ.
ಅಂದಹಾಗೆ, 'ಮಫ್ತಿ' ಚಿತ್ರದ 'ಭೈರತಿ ರಣಗಲ್ಲು' ಪಾತ್ರದ ಬಗ್ಗೆ 'ಫಿಲ್ಮ್ ಬೀಟ್ ಕನ್ನಡ'ಕ್ಕೆ ಸಂದರ್ಶನ ನೀಡಿದ ನರ್ತನ್ ಆ ಪಾತ್ರದ ಹಿಂದಿನ ಸಾಕಷ್ಟು ವಿಷಯಗಳನ್ನು ಹಂಚಿಕೊಂಡಿದ್ದಾರೆ. ಮುಂದೆ ಓದಿ...
ಸಂದರ್ಶನ : ನವೀನ.ಎಂ.ಎಸ್

'ಮಫ್ತಿ' ಚಿತ್ರಕ್ಕೆ ಎಲ್ಲ ಕಡೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ಹೇಗನಿಸುತ್ತಿದೆ..?
''ಖುಷಿ ಆಗುತ್ತಿದೆ. ನನ್ನ ಮೊದಲ ಸಿನಿಮಾ ಈ ಮಟ್ಟದ ರೆಸ್ಪಾನ್ಸ್ ಪಡೆದುಕೊಂಡಿದ್ದು ತುಂಬ ಖುಷಿ ಆಗುತ್ತಿದೆ. ಈ ಚಿತ್ರವನ್ನು ಒಪ್ಪಿಕೊಂಡ ಜನರಿಗೆ ಮೊದಲು ಧನ್ಯವಾದ ಹೇಳುತ್ತೇನೆ.'' - ನರ್ತನ್, ನಿರ್ದೇಶಕ

'ಮಫ್ತಿ' ಅಂದರೆ ಭೈರತಿ ರಣಗಲ್ಲು, ಭೈರತಿ ರಣಗಲ್ಲು ಅಂದರೆ 'ಮಫ್ತಿ' ಎನ್ನುವ ಹಾಗೆ ಆಗಿದೆ. ಆ ಪಾತ್ರ ಹುಟ್ಟಿದ್ದು ಹೇಗೆ..?
''ಚಿತ್ರದಲ್ಲಿ ಎರಡು ಪಾತ್ರಗಳಿಗೂ ಪ್ರಾಮುಖ್ಯತೆ ಇದೆ. ಕಥೆ ಶುರು ಆಗುವುದೇ ಒಬ್ಬ ರಾಕ್ಷಸನನ್ನು ಹಿಡಿಯುವುದಕ್ಕೆ ಹೋಗಬೇಕು ಎನ್ನುವ ಒಬ್ಬ ನಾಯಕನ ಪಾತ್ರದಿಂದ. ರಾಮಾಯಣದಲ್ಲಿ ರಾಮ ಎಷ್ಟು ಬಲಿಷ್ಟನೋ.. ರಾವಣ ಕೂಡ ಅಷ್ಟೇ ಬಲಿಷ್ಟ. ಆ ಪಾತ್ರ ಬರೀತಾ.. ಬರೀತಾ.. ಅದಕ್ಕೆ ಪ್ರಾಮುಖ್ಯತೆ ಬಂತು. ಕೊನೆಗೆ ಆ ವಿಲನ್ ತುಂಬ ಒಳ್ಳೆಯವನು ಎಂದು ಕಥೆಯಲ್ಲಿ ತಿರುವು ಬರುತ್ತದೆ. ಎರಡು ಪಾತ್ರಗಳ ಮೂಲಕ ಸಿನಿಮಾ ನಡೆಯುತ್ತಿದ್ದು, ಬರೆಯುವಾಗಲೇ ಭೈರತಿ ರಣಗಲ್ಲು ಪಾತ್ರ ಚೆನ್ನಾಗಿ ಬಂತು. ಎರಡು ಪಾತ್ರಗಳು ಇಲ್ಲಿ ಬ್ಯಾಲೆನ್ಸ್ ಆಗಿದೆ.'' - ನರ್ತನ್, ನಿರ್ದೇಶಕ

ನೀವು ಬರೆಯುವಾಗಲೇ ಭೈರತಿ ರಣಗಲ್ಲು ಪಾತ್ರ ಶಿವಣ್ಣನಿಗೆ ಅಂತ ಫಿಕ್ಸ್ ಆಗಿದ್ರಾ..?
''ಭೈರತಿ ರಣಗಲ್ಲು ಪಾತ್ರ ಸೃಷ್ಟಿ ಆದಾಗ ತುಂಬ ಸ್ಟ್ರಾಂಗ್ ಆಗಿತ್ತು. ಆ ಪಾತ್ರ ಮಾಡುವವರ ಕಣ್ಣಲ್ಲಿ ಆ ಪವರ್ ಇರಬೇಕು.. ಲುಕ್ ಕೊಟ್ಟರೆ ಅರ್ಥ ಇರಬೇಕು.. ಅಂತ ಆ ಪಾತ್ರಕ್ಕೆ ಯಾರು ಸೂಟ್ ಆಗುತ್ತಾರೆ ಎಂದು ಯೋಚಿಸಿದೆ. ಆಮೇಲೆ ಶಿವಣ್ಣ ಅವರು ಮಾತ್ರ ಈ ಪಾತ್ರ ಮಾಡಲು ಸಾಧ್ಯ ಅನಿಸಿತು. ಬಳಿಕ ಅವರನ್ನು ಸಂಪರ್ಕ ಮಾಡಿದ್ವಿ'' - ನರ್ತನ್, ನಿರ್ದೇಶಕ

ಎಲ್ಲರೂ ವಿಲನ್ ಪಾತ್ರಕ್ಕೆ ವಿಲನ್ ಹುಡುಕುತ್ತಾರೆ ಆದರೆ ನೀವು ಶಿವಣ್ಣರನ್ನು ಆಯ್ಕೆ ಮಾಡಿದ್ದು ಯಾಕೆ..?
''ನನಗೆ ಒಬ್ಬ ಒಳ್ಳೆಯ ನಟ ಬೇಕು ಅಂತ ಇತ್ತು. ಶಿವಣ್ಣ ಒಪ್ಪಿಕೊಂಡಗಲೇ ಸಿನಿಮಾ ಗೆದ್ದ ಫೀಲ್ ಆಗಿತ್ತು. ವಿಲನ್ ಆದರೂ ಕೊನೆಗೆ ಆ ಪಾತ್ರ ಒಳ್ಳೆಯದು ಎಂದು ನಾವು ಚಿತ್ರೀಕರಿಸುತ್ತೇವೆ. ಒಬ್ಬ ವಿಲನ್ ಒಳ್ಳೆಯವನಾದರೆ ಜನಕ್ಕೆ ಅಷ್ಟು ಒಪ್ಪಿಗೆ ಆಗಲ್ಲ. ಒಬ್ಬ ಹೀರೋ ವಿಲನ್ ಆಗಿ ನಂತರ ಒಳ್ಳೆಯವನಾದರೆ ಓಕೆ ಎನ್ನುತ್ತಾರೆ. ಅದಕ್ಕೆ ಶಿವಣ್ಣ ಅವರನ್ನು ಸೆಲೆಕ್ಟ್ ಮಾಡಿದ್ದು.'' - ನರ್ತನ್, ನಿರ್ದೇಶಕ

ಶಿವಣ್ಣನ ಲುಕ್ ಬಗ್ಗೆ ಹೇಗೆ ಪ್ಲಾನಿಂಗ್ ಮಾಡಿದ್ದು..?
''ಭೈರತಿ ರಣಗಲ್ಲು ಪಾತ್ರ ಸೃಷ್ಟಿ ಮಾಡಿದಾಗ ಒಬ್ಬ ಪವರ್ ಫುಲ್ ಮನುಷ್ಯ ತುಂಬ ಸಿಂಪಲ್ ಆಗಿ ಇದ್ದರೇ ಹೇಗಿರುತ್ತದೆ ಅಂತ ಶುರು ಆಯ್ತು. ಸಾಮಾನ್ಯವಾಗಿ ಎಲ್ಲ ಸಿನಿಮಾಗಳಲ್ಲಿ ಚಾಪರ್ ನಲ್ಲಿ ಇಳಿದ ತಕ್ಷಣ ಸೂಟು ಬೂಟು, ಗನ್ ಮ್ಯಾನ್ ಇರುತ್ತಾರೆ. ಆದರೆ ಈ ಪಾತ್ರ ಹಾಗಲ್ಲ. ಭೈರತಿ ರಣಗಲ್ಲು ಪಾತ್ರ ಪವರ್ ಇರಬೇಕು, ಆದರೆ ನೋಡುವುದಕ್ಕೆ ಅವನು ಸಿಂಪಲ್ ಆಗಿ ಇರಬೇಕು. ಅವನ ಮೇಲೆ ಚಿನ್ನ, ಕಣ್ಣಿಗೆ ಕ್ಲಾಸ್, ಸೂಟ್ ಏನು ಇರಬಾರದು ಅಂತ ಪ್ಲಾನ್ ಮಾಡಿಕೊಂಡ್ವಿ. - ನರ್ತನ್, ನಿರ್ದೇಶಕ

ಮೊದಲು ಶಿವಣ್ಣ ಅವರಿಗೆ ಈ ಪಾತ್ರ ಹೇಳಿದಾಗ ಅವರ ಪ್ರತಿಕ್ರಿಯೆ ಹೇಗಿತ್ತು?
''ನನಗೆ ಒಳಗೆ ಭಯ ಇತ್ತು. ಶಿವಣ್ಣ ಈ ಪಾತ್ರವನ್ನು ಒಪ್ಪಿಕೊಳ್ಳುತ್ತಾರಾ.. ಇಲ್ವಾ.. ಅಂತ. ಆದರೆ ಅವರು ಭೈರತಿ ರಣಗಲ್ಲು ಪಾತ್ರಕ್ಕೆ ಪ್ರಾಮುಖ್ಯತೆ ನೀಡಿ ಒಪ್ಪಿಕೊಂಡರು. ಖುಷಿಯಾಯಿತು''. - ನರ್ತನ್, ನಿರ್ದೇಶಕ

ಶಿವಣ್ಣ ಸಿನಿಮಾ ನೋಡಿದ ಮೇಲೆ ತಮ್ಮ ಪಾತ್ರದ ಬಗ್ಗೆ ಏನು ಹೇಳಿದರು?
''ಶಿವಣ್ಣ ಶೂಟಿಂಗ್ ವೇಳೆಯೇ ತಮ್ಮ ಶಾಟ್ ಗಳನ್ನು ನೋಡುತ್ತಿದ್ದರು. ಅಲ್ಲಿಯೇ ಅವರು ಹೊಗಳುತ್ತಿದ್ದರು. ನನ್ನ ಕೆಲಸ ಅವರಿಗೆ ತುಂಬ ಇಷ್ಟ ಆಗಿದೆ. ಅದೇ ನನಗೆ ಖುಷಿ.'' - ನರ್ತನ್, ನಿರ್ದೇಶಕ

ಮುಂದೆ ಶಿವಣ್ಣನ ಜೊತೆ ಸಿನಿಮಾ ಮಾಡುತ್ತೀರಾ..?
''100%.. ಖಂಡಿತ ಮಾಡಿಯೇ ಮಾಡುತ್ತೇನೆ. ಆದರೆ ಯಾವಾಗ ಅಂತ ಗೊತ್ತಿಲ್ಲ. ಇನ್ನು ಆ ಬಗ್ಗೆ ನಿರ್ಧಾರ ಮಾಡಿಲ್ಲ. ಭೈರತಿ ರಣಗಲ್ಲು ಗಿಂತ ಒಳ್ಳೆಯ ಪಾತ್ರ ಬರಬೇಕು.'' - ನರ್ತನ್, ನಿರ್ದೇಶಕ

ಭೈರತಿ ರಣಗಲ್ಲು ಪಾತ್ರದ ಬಗ್ಗೆ ಒಂದೇ ಹಾಡಿನಲ್ಲಿ ಎಷ್ಟೋ ವಿಷಯ ಹೇಳಿದ್ದೀರಾ. ಆ ಹಾಡಿನ ಬಗ್ಗೆ ಹೇಳಿ?
''ಆ ಹಾಡನ್ನು ಮೊದಲು 'ರಾಕ್ಷಸನು ನೀನೇನಾ... ರಕ್ಷಕನು ನೀನೇನಾ...' ಎನ್ನುವ ಸಾಲು ಇಟ್ಟುಕೊಂಡು ಶುರು ಮಾಡಿದ್ವಿ. ಬಳಿಕ ಒಂದೊಂದೆ ತೂಕದ ಪದ ಆಯ್ಕೆ ಮಾಡಿ ಒಂದೂವರೆ ತಿಂಗಳು ಈ ಹಾಡನ್ನು ಬರೆಸಿದೆ. ಸರ್ವೇಶ್ ಅಂತ ಈ ಹಾಡು ಬರೆದಿದ್ದಾರೆ. ಸಿನಿಮಾದ ಅರ್ಧಭಾಗದಲ್ಲಿಯೇ ಆ ಪಾತ್ರದ ಕೆಟ್ಟ ಕೆಲಸ ಮತ್ತು ಒಳ್ಳೆಯ ತನ ಎರಡನ್ನು ತೋರಿಸಬೇಕಾಗಿತ್ತು. ಅದಕ್ಕೆ ಪ್ಲಾನ್ ಮಾಡಿ ಈ ಹಾಡು ಮಾಡಿದ್ವಿ.'' - ನರ್ತನ್, ನಿರ್ದೇಶಕ


Click it and Unblock the Notifications











