ನನ್ನ ಮೊದಲ ಸಿನಿಮಾ : 'ರಾಮಾ ರಾಮಾ ರೇ' ಸಿನಿಮಾ ಹುಟ್ಟಿದ್ದು ಭಗವದ್ಗೀತೆ ಪುಸ್ತಕದಿಂದ!
Recommended Video

''ನಮ್ಮ ಸಿನಿಮಾದ ಮೊದಲ ಶೋ ನೋಡಿದ್ದು ನಮ್ಮ ಫ್ಯಾಮಿಲಿ, ಫ್ರೆಂಡ್ಸ್ ಮತ್ತು ಪ್ರೆಸ್ ನವರು ಅಷ್ಟೇ..'' ಈ ರೀತಿ ಹೇಳಿದ ನಿರ್ದೇಶಕನ ಸಿನಿಮಾ ಮುಂದೆ 100 ದಿನ ಪ್ರದರ್ಶನ ಕಂಡಿತು. ಅದು ನಿಜಾವಾಗಲು ಒಂದು ಒಳ್ಳೆಯ ಸಿನಿಮಾಗೆ ಇರುವ ತಾಕತ್ತು.
'ನನ್ನ ಮೊದಲ ಸಿನಿಮಾ' ಲೇಖನ ಸರಣಿಯಲ್ಲಿ ಈವರೆಗೂ ಚಿತ್ರರಂಗದಲ್ಲಿ ಬಹಳ ವರ್ಷದಿಂದ ಇದ್ದು, ದೊಡ್ಡ ಸಾಧನೆ ಮಾಡಿರುವವರ ಮೊದಲ ಸಿನಿಮಾದ ಬಗ್ಗೆ ಬರೆಯುತ್ತ ಬರುತ್ತಿದ್ವಿ. ಆದರೆ ಈ ಬಾರಿ ವಿಶೇಷವಾಗಿ ಒಂದು ಸಿನಿಮಾ ಮಾಡಿರುವ ಕನ್ನಡದ ಪ್ರತಿಭಾವಂತ ನಿರ್ದೇಶಕ ಡಿ.ಸತ್ಯ ಪ್ರಕಾಶ್ ಅವರ ಬಗ್ಗೆ ವಿಶೇಷ ಲೇಖನ ಬರೆದಿದ್ದೇವೆ.
ನಿರ್ದೇಶಕ ಡಿ.ಸತ್ಯ ಪ್ರಕಾಶ್ ತಮ್ಮ ಮೊದಲ ಸಿನಿಮಾ 'ರಾಮಾ ರಾಮಾ ರೇ' ಸಿನಿಮಾ ಹುಟ್ಟಿದ ಕಥೆಯನ್ನು ಹಂಚಿಕೊಂಡಿದ್ದಾರೆ. ಸಿನಿಮಾದ ಕಥೆ ಅವರ ತಲೆಯಲ್ಲಿ ಬಂದಾಗಿನಿಂದ ಹಿಡಿದು ಆ ಸಿನಿಮಾ 100 ದಿನ ಆಗುವ ವರೆಗಿನ ಅನೇಕ ಕುತೂಹಲಕಾರಿ ವಿಷಯವನ್ನು ಹೇಳಿಕೊಂಡಿದ್ದಾರೆ....
ಸಂದರ್ಶನ : ನವೀನ.ಎಂ.ಎಸ್ (ನವಿ ಕನಸು)

ಒಮ್ಮೆ ಭಗವದ್ಗೀತೆ ಪುಸ್ತಕ ಓದಿದೆ..
''ರಾಮಾ ರಾಮಾ ರೇ ಕಥೆ ಹುಟ್ಟಿದ್ದು 2010ರ ಕೊನೆಯಲ್ಲಿ. ಆಗ ಸಿನಿಮಾ ಮಾಡಬೇಕು ಅಂತ ಇದ್ವಿ. ಬಟ್ ಯಾವುದು ಒಂದು ಒಳ್ಳೆಯ ಲೈನ್ ಸಿಕ್ಕಿರಲಿಲ್ಲ. ಆ ಟೈಂ ನಲ್ಲೇ ಸುಮ್ಮನೆ ಊರಿಗೆ ಹೋದಾಗ ಮನೆಯಲ್ಲಿ ಭಗವದ್ಗೀತೆ ಪುಸ್ತಕ ನೋಡಿದೆ. ಯಾವತ್ತು ಭಗವದ್ಗೀತೆ ಓದಿಲ್ಲವಲ್ಲ ಅಂತ ಶುರು ಮಾಡಿದೆ. ಅದರಲ್ಲಿ ದ್ರುಪದ ಮತ್ತು ದ್ರೋಣಾಚಾರ್ಯ ಎರಡು ಪಾತ್ರಗಳು ನನ್ನನ್ನು ಕಾಡಿತು. ಒಬ್ಬ ಸಾಯುವವನ್ನು ಮತ್ತು ಸಾಯಿಸುವವನ್ನು ಇಬ್ಬರ ನಡುವಿನ ಕಥೆ ಇಟ್ಟುಕೊಂಡು ಏನಾದರೂ ಮಾಡಬಹುದಾ... ಎಂದಾಗ ಇದು ಶುರು ಆಯ್ತು. 2011 ರಲ್ಲಿ ಸ್ಕ್ರಿಪ್ಟ್ ಚರ್ಚೆ ಪ್ರಾರಂಭ ಮಾಡಿ 2013 ವರೆಗೆ ಅದು ನಡೆಯಿತು.''

ಕಥೆ ಬರೆಯುವಾಗಲೇ ಕಲಾವಿದರು ನನ್ನ ತಲೆಯಲ್ಲಿ ಇದ್ದರು..
''ಕಥೆ ಬರೆಯುವಾಗಲೇ ಈ ಪಾತ್ರಗಳನ್ನು ಯಾರು ಮಾಡುತ್ತಾರೆ ಎಂಬುದು ನನ್ನ ತಲೆಯಲ್ಲಿ ಇತ್ತು. ಮುಖ್ಯ ಪಾತ್ರಗಳನ್ನು ಮಾಡಿದ ನಟರಾಜ, ಧರ್ಮಣ್ಣ, ಜಯರಾಮಣ್ಣ ನನಗೆ ಮುಂಚೆಯಿಂದ ಗೊತ್ತಿತ್ತು. ಅವರ ಬಾಡಿ ಲಾಂಗ್ವೇಜ್ ಮೇಲೆ ಸನ್ನಿವೇಶಗಳನ್ನು ಹೆಣೆದೆ. ಪಾತ್ರಕ್ಕಾಗಿ ನಟರಾಜ ಒಂದು ವರ್ಷ ಗಡ್ಡ ಬಿಟ್ಟರು. ಎಷ್ಟೋ ಜೈಲುಗಳನ್ನು ನೋಡಿಕೊಂಡು ಬಂದರು. ಡಯಟ್ ಮಾಡಿ ತೆಳಗಾದರು. ಧರ್ಮಣ್ಣ ನನಗೆ ಬಾಲ್ಯ ಸ್ನೇಹಿತ ಅದ್ದರಿಂದ ಅವರ ಪಾತ್ರದ ಕಾಮಿಡಿ ಚೆನ್ನಾಗಿ ಬಂತು.''

ಒಂದು ಸಿನಿಮಾ ಎಷ್ಟೋ ಜನರ ಜೀವನ..
''ಹಿಂದೆ ಶಾರ್ಟ್ ಮೂವಿ ಮಾಡಿದೆ. ಆದರೆ ಶಾರ್ಟ್ ಫಿಲ್ಮ್ಸ್ ಒಂದ್ ತರ ಸ್ಕೂಲ್ ನಲ್ಲಿ ಟೆಸ್ಟ್ ಕೊಟ್ಟ ಹಾಗೆ. ಅದರ ಮೂಲಕ ನಮಗೆ ನಾವು ಟೆಸ್ಟ್ ಮಾಡಿಕೊಳ್ಳ ಬಹುದು. ನಾನು ಶಾರ್ಟ್ ಫಿಲ್ಮ್ಸ್ ಮಾಡಿದ್ದು ನನಗೆ ಸಿನಿಮಾ ಮಾಡುವುದಕ್ಕೆ ಬರುತ್ತಾ ಇಲ್ವಾ ಅಂತ ತಿಳಿಯೋಕ್ಕೆ ಅಷ್ಟೇ. ಆದರೆ ಶಾರ್ಟ್ ಫಿಲ್ಮ್ಸ್ ಬೇರೆ.. ಸಿನಿಮಾನೇ ಬೇರೆ.. ಒಂದು ಸಿನಿಮಾ ಎಷ್ಟೋ ಜನರ ಜೀವನ ಆಗಿರುತ್ತದೆ. ಮೂರು ಮೂರು ವರ್ಷ ಒಂದು ಸಿನಿಮಾ ಮಾಡುತ್ತಾರೆ. ಎಷ್ಟೊ ಜನರ ಬದುಕು ಅದರಲ್ಲಿ ಇರುತ್ತದೆ.''

ಸ್ಕ್ರಿಪ್ಟ್ ಬರೆಯುವುದೇ ತುಂಬ ಕಷ್ಟ ಇತ್ತು..
''ಈ ಸ್ಕ್ರಿಪ್ಟ್ ಬರೆಯುವುದು ತುಂಬ ಚಾಲೆಂಜ್ ಆಗಿತ್ತು. ಒಬ್ಬ ಪಾಶಿದಾರ (ಜೈಲಿನಲ್ಲಿ ನೇಣು ಹಾಕುವವನು) ಮತ್ತು ಒಬ್ಬ ನೇಣು ಹಾಕಿಸಿಕೊಳ್ಳುವ ವ್ಯಕ್ತಿಯ ಕಥೆ ಇದು. ತುಂಬ ಸೀರಿಯಲ್ ಆಗಿರುವ ಇಂತಹ ಕಥೆಯನ್ನು ಕಾಮನ್ ಜನರಿಗೆ ಅರ್ಥ ಮಾಡಿಸಬೇಕು ಅಂದಾಗ ಅದರಲ್ಲಿ ಹ್ಯೂಮರ್ ಮಿಕ್ಸ್ ಮಾಡಬೇಕಿತ್ತು. ಹ್ಯೂಮರ್ ಇದ್ದರೂ ಕೂಡ ಸಿನಿಮಾದ ಗಂಭೀರತೆ ಹೋಗಬಾರದಿತ್ತು. ಸೋ, ನನಗೆ ಬರವಣಿಗೆ ತುಂಬ ಚಾಲೆಂಜಿಂಗ್ ಆಗಿತ್ತು. ಅದರ ಜೊತೆಗೆ ಲೊಕೇಶನ್ ಹುಡುಕಾಟಕ್ಕಾಗಿ ಕರ್ನಾಟಕದ ತುಂಬ 12 ಸಾವಿರ ಕಿಲೋ ಮೀಟರ್ ಸುತ್ತಿದ್ದು ಅದೆಲ್ಲ ಸಖತ್ ಕಷ್ಟ ಇತ್ತು.''

ಯಾರು ಪ್ರೊಡ್ಯೂಸ್ ಮಾಡಲ್ಲ ಅಂತ ಮುಂಚೆಯೇ ಗೊತ್ತಿತ್ತು..
''ನನಗೆ ಮುಂಚೆಯೇ ಗೊತ್ತಿತ್ತು ಈ ಸಿನಿಮಾವನ್ನು ಯಾರು ಪ್ರೊಡ್ಯೂಸ್ ಮಾಡಲ್ಲ ಅಂತ. ನನಗೆ ಪ್ರೊಡ್ಯೂಸರ್ ಗಳನ್ನು ಕನ್ವಿನ್ಸ್ ಮಾಡೋಕ್ಕೆ ಬರಲ್ಲ. ಆದರೂ ತುಂಬ ಜನ ನಿರ್ಮಾಪಕರನ್ನು ಸಂಪರ್ಕ ಮಾಡಿದೆ. ಅವರಿಗೆ ಸಿನಿಮಾ ನಂಬಿ ನೀವು ದುಡ್ಡು ಹಾಕಿ ಲಾಭ ಆದರೂ ಆಗುತ್ತೆ.. ಲಾಸ್ ಆದರೂ ಆಗುತ್ತೆ... ಅಂತ ಹೇಳುತ್ತಿದೆ. ನನ್ನ ಮಾತು ಕೇಳಿ ಇವನಿಗೆ ಇವನ ಸಿನಿಮಾ ಮೇಲೆ ನಂಬಿಕೆ ಇಲ್ಲ ಅಂತ ಅವರು ಅಂದುಕೊಳ್ಳುತ್ತಿದ್ದರು. ಕೊನೆಗೆ ಯಾರು ಸಿಗದಿದ್ದಾಗ ಇಡೀ ಟೀಂ ಸೇರಿ ಎಲ್ಲರೂ ದುಡ್ಡು ಹಾಕಿ ಸಿನಿಮಾ ಮಾಡಿದ್ದು.''

ಸಿನಿಮಾ ಮುಗಿಯುವ ಮುಂಚೆಯೇ ಜಯರಾಮಣ್ಣ ತೀರಿ ಹೋದರು..
''ಪಾಶಿದಾರ ಪಾತ್ರ ಮಾಡಿದ್ದ ಜಯರಾಮಣ್ಣ ಚಿತ್ರದ ಶೂಟಿಂಗ್ ಮುಗಿಯುವ ಮುಂಚೆಯೇ ತೀರಿ ಹೋದರು. ನಮಗಿಂತ ಅವರು ತುಂಬ ಇಷ್ಟ ಪಟ್ಟಿದ್ದ ಸಿನಿಮಾ ಇದು. ಆದರೆ ಅದನ್ನು ನೋಡೋಕ್ಕೆ ಅವರೇ ಇರಲಿಲ್ಲ. ಆಮೇಲೆ ಅದೇ ರೀತಿ ಇರುವ ನಾಗಾಲ್ಯಾಂಡ್ ಮೂಲದ ಒಬ್ಬರನ್ನು ಪಾತ್ರಕ್ಕಾಗಿ ರೆಡಿ ಮಾಡಿದ್ವಿ. ಉಳಿದಂತೆ ನಾವು ಶೂಟಿಂಗ್ ಮಾಡಿದ ಜಾಗದಲ್ಲಿ ನೆರಳು, ನೀರು ಯಾವುದು ಇರಲಿಲ್ಲ. ಆದರೂ ಎಲ್ಲ ನಮ್ಮ ಜೊತೆ ಇದ್ದರು. ಯಾವಾಗಲೂ ಒಂದು ಒಳ್ಳೆಯ ಟೀಂ ಜೊತೆಗೆ ಇರಬೇಕು.. ಅದು ಇದ್ದರೆ ನಮ್ಮ ಭಾರ ಹಂಚಿಹೋಗುತ್ತದೆ.''

ಮೊದಲ ಶೋ ನೋಡಿದ್ದು ನಮ್ಮ ಫ್ಯಾಮಿಲಿ, ಫ್ರೆಂಡ್ಸ್ ಮತ್ತು ಪ್ರೆಸ್ ನವರು ಅಷ್ಟೇ..
''ನಾವು ಯಾರಿಗೂ ಪರಿಚಯ ಇರಲಿಲ್ಲ. ಏನು ಮಾಡೋದು ಅಂತ ಗೊತ್ತಿರಲಿಲ್ಲ. ಆಗ ರಿಲೀಸ್ ಹಿಂದಿನ ದಿನ ವಾಟ್ಸ್ ಆಪ್ ನಲ್ಲಿ ಒಂದು ಪ್ರಮೊಷನ್ ವಿಡಿಯೋ ಮಾಡಿದ್ವಿ. ಆದರೆ ಸಿನಿಮಾ ರಿಲೀಸ್ ಆದ ದಿನವೇ ಎಷ್ಟೊ ಚಿತ್ರಮಂದಿರಗಳಲ್ಲಿ ನಮ್ಮ ಸಿನಿಮಾವನ್ನು ತೆಗೆದು ಬಿಟ್ಟಿದರು. ಮೊದಲ ಶೋ ಬರಿ ನಮ್ಮ ಫ್ಯಾಮಿಲಿ, ಫ್ರೆಂಡ್ಸ್ ಮತ್ತು ಪ್ರೆಸ್ ನವರು ಅಷ್ಟೇ ಇದ್ದಿದ್ದು.''

ನಾನು ಎಂತಹ ಒಳ್ಳೆಯ ಇಂಡಸ್ಟ್ರಿಯಲ್ಲಿ ಇದ್ದೇನೆ ಅಂತ ಅನಿಸಿತು..
''ಮೊದಲ ದಿನ ಮಧ್ಯಾಹ್ನದ ಶೋಗೆ ರಕ್ಷಿತ್ ಶೆಟ್ಟಿ, ಧನಂಜಯ್, ಶೃತಿ ಹರಿಹರನ್ ಎಲ್ಲರೂ ಅವರೇ ಬಂದು ಸಿನಿಮಾ ನೋಡಿ ಫೇಸ್ ಬುಕ್ ನಲ್ಲಿ ಬರೆದರು. ಸಂಜೆಯಿಂದ ಸ್ವಲ್ಪ ಪಿಕ್ ಅಪ್ ಆಯ್ತು. ಸಿನಿಮಾ ನೋಡಿದ ಪ್ರತಿ ಪ್ರೇಕ್ಷಕರು ಕೂಡ ವಿಮರ್ಶೆ ಬರೆಯುತ್ತಿದ್ದರು. ಸಾವಿರಾರು ಒಳ್ಳೆಯ ವಿಮರ್ಶೆ ಬಂತು. ನಾನು ಯಾರಿಗೂ ಪರಿಚಯ ಇರಲಿಲ್ಲ ಆದರೂ ಸಹ ಸುದೀಪ್ ಸರ್, ಉಪೇಂದ್ರ ಸರ್, ಗಣೇಶ್ ಸರ್, ಪುನೀತ್ ಸರ್ ಹೀಗೆ ಇಂಡಸ್ಟ್ರಿಯಲ್ಲಿ ಇರುವ ಎಲ್ಲರೂ ಸಿನಿಮಾ ಚೆನ್ನಾಗಿದೆ ಎನ್ನುವ ಕಾರಣಕ್ಕೆ ಸಪೋರ್ಟ್ ಮಾಡಿದರು. ಆಗ ನನಗೆ ನಾನು ಎಂತಹ ಒಳ್ಳೆಯ ಇಂಡಸ್ಟ್ರಿಯಲ್ಲಿ ಇದ್ದೇನೆ.. ಇಲ್ಲಿ ಕೆಲಸ ಚೆನ್ನಾಗಿ ಇದ್ದರೆ ಅದನ್ನು ಎಲ್ಲರೂ ಕಾಪಾಡಿಕೊಳ್ಳುತ್ತಾರೆ ಅಂತ ತುಂಬ ಖುಷಿ ಆಯ್ತು.''

ಸಿನಿಮಾ ಇನ್ನೂ ಎಷ್ಟೋ ಜನರಿಗೆ ರೀಚ್ ಆಗಲೇ ಇಲ್ಲ..
''ನನ್ನ ಪ್ರಕಾರ ಸಿನಿಮಾ ಎಷ್ಟೋ ಜನರಿಗೆ ರೀಚ್ ಆಗಲೇ ಇಲ್ಲ. ಬೆಂಗಳೂರು ಮೈಸೂರು ಬಿಟ್ಟರೆ ಬೇರೆ ಕಡೆ ರೀಚ್ ಮಾಡಿಸೋದಕ್ಕೆ ಆಗಲಿಲ್ಲ. ಅಷ್ಟೆಲ್ಲ ಆದರೂ ಕೊನೆಗೆ ಸಿನಿಮಾದ ಶ್ರಮಕ್ಕೆ ಬೆಲೆ ಸಿಕ್ಕಿತು. ಸಿನಿಮಾಗೆ ಕೆಲಸ ಮಾಡಿದ ಎಲ್ಲ ಕಲಾವಿದರು, ತಂತ್ರಜ್ಞರು ಬಿಜಿ ಆದರು. ಅದೇ ನಮಗೆ ಸಮಾಧಾನ. ನಾವು ಜನರಿಗಾಗಿ ಸಿನಿಮಾ ಮಾಡಿದ್ದು. ಅದರ ಜೊತೆಗೆ ಫಿಲ್ಮ್ ಫೆಸ್ಟಿವಲ್ ನಲ್ಲಿ ಬೆಸ್ಟ್ ಫಿಲ್ಮ್ ಅವಾರ್ಡ್ ಮತ್ತು ಅತ್ಯುತ್ತಮ ನವ ನಿರ್ದೇಶಕ ಪ್ರಶಸ್ತಿ ಸಿಗ್ತು. ನಿಮ್ಮ 'ಫಿಲ್ಮಿಬೀಟ್ ಕನ್ನಡ'ದಿಂದ ಕೂಡ ಒಂದು ಪ್ರಶಸ್ತಿ ಬಂತು.''

ರಿಲೀಸ್ ಹಿಂದಿನ ದಿನ..
''ರಿಲೀಸ್ ದಿನ ನಮ್ಮಲ್ಲಿ ಜಾಸ್ತಿ ಉತ್ಸಾಹ, ಸಂಭ್ರಮ ಯಾವುದು ಇರಲಿಲ್ಲ. ಯಾಕಾಂದ್ರೆ ಅದಕ್ಕೂ ಮುಂಚೆ ತುಂಬ ಸರ್ಕಸ್ ಮಾಡಿದ್ವಿ. ಗಾಂಧಿನಗರದ ಅಭಿನಯ ಚಿತ್ರಮಂದಿರದಲ್ಲಿ ರಿಲೀಸ್ ಹಿಂದಿನ ದಿನ ಹೋಗಿ ಒಮ್ಮೆ ಸಿನಿಮಾ ಹಾಕಿ ಸುಮ್ಮನೆ ಟೆಸ್ಟ್ ಮಾಡಿದ್ವಿ. ಆಗ ಚಿತ್ರಮಂದಿರದಲ್ಲಿ ಕೆಲಸ ಮಾಡುವವರು ನೋಡುತ್ತಿದ್ದರು. ನಾವು ಹೋಗುವಾಗ ಅವರು 'ಸರ್ ಈ ಪಿಚ್ಚರ್ ಖಂಡಿತ ಹಿಟ್ ಆಗುತ್ತೆ..' ಅಂತ ಹೇಳಿದರು. ನಾವು ತಮಾಷೆಗೆ ಹೀಗೆ ಹೇಳ್ತಾರೆ ಅಂದುಕೊಂಡ್ವಿ. ಆದರೆ ಅವರು ಒತ್ತಿ ಒತ್ತಿ ಹೇಳಿದರು. ಮುಂದೆ ಅದು ಹಾಗೆಯೇ ಆಯ್ತು.''

ಒಬ್ಬ ನಿರ್ದೇಶಕನಿಗೆ ಪ್ರತಿ ಸಿನಿಮಾ ಕೂಡ ಮೊದಲ ಸಿನಿಮಾ..
''ನಮ್ಮ ಬಗ್ಗೆ ನಮಗೆ ಒಂದು ನಂಬಿಕೆ ಬರಬೇಕು ಅಂದರೆ ಮೊದಲ ಸಿನಿಮಾ ಬಹಳ ಮುಖ್ಯ. ಆದರೆ ಮೊದಲ ಸಿನಿಮಾ ಫೇಲ್ ಆದ ನಂತರ ಮುಂದೆ ಯಾವ ಸಿನಿಮಾ ಮಾಡೋಕ್ಕೆ ಆಗಲ್ಲ ಅಂತನೂ ಅಲ್ಲ. ಒಬ್ಬ ನಿರ್ದೇಶಕನಿಗೆ ಪ್ರತಿ ಸಿನಿಮಾ ಕೂಡ ಮೊದಲ ಸಿನಿಮಾನೆ. ಪ್ರತಿ ಸಿನಿಮಾದಲ್ಲಿಯೂ ಅಷ್ಟೇ ಒತ್ತಡ ಇರುತ್ತೆ... ಅಷ್ಟೇ ಯೋಚನೆ ಇರುತ್ತೆ... ಅಷ್ಟೇ ತಲೆ ಕೆಡಿಸಿಕೊಳ್ಳಬೇಕಾಗುತ್ತದೆ..''

ನಿಮ್ಮ ಮೊದಲ ಸಿನಿಮಾ ನಿಮಗೆ ಏನು..?
''ಒಂದೇ ಲೈನ್ ನಲ್ಲಿ 'ರಾಮಾ ರಾಮಾ ರೇ' ಬಗ್ಗೆ ಹೇಳಬೇಕು ಅಂದರೆ ಅದು ಒಂದು ತಂಡದ ಶ್ರಮ ಮತ್ತು ಒಂದು ತಂಡದ ಗೆಲುವು.''


Click it and Unblock the Notifications











