Don't Miss!
- Lifestyle ಶಾಲೆಯನ್ನೇ ಬ್ಯೂಟಿ ಪಾರ್ಲರ್ ಮಾಡಿಕೊಂಡ ಪ್ರಿನ್ಸಿಪಾಲ್..! ಕೇಳಿದ ಶಿಕ್ಷಕಿ ಕೈ ಕಚ್ಚಿ ಹಲ್ಲೆ..!
- Automobiles ಜಾವಾ ಮೋಟಾರ್ಸೈಕಲ್ ಮಾಲೀಕರಿಗೆ ಸಿಹಿಸುದ್ದಿ: ಈ ಅವಕಾಶ ಕಳೆದುಕೊಳ್ಳಬೇಡಿ!
- Finance ಎಮರ್ಜೆನ್ಸಿ ಲೋನ್ ಅಂದ್ರೆ ಏನು, ಇದನ್ನು ಪಡೆದುಕೊಳ್ಳುವುದು ಹೇಗೆ ? ಇಲ್ಲಿದೆ ನೋಡಿ ಸುಲಭ ಉಪಾಯ
- News Yaduveer Wadiyar: ಬಿಜೆಪಿ ಅಭ್ಯರ್ಥಿ ಯದುವೀರ್ ಒಡೆಯರ್ಗೆ ಶಾಕ್ ಕೊಟ್ಟ ಒಕ್ಕಲಿಗರು!
- Sports ಜೈಪುರ ವ್ಯಾಕ್ಸ್ ಮ್ಯೂಸಿಯಂನಲ್ಲಿ ವಿರಾಟ್ ಕೊಹ್ಲಿ ಮೇಣದ ಪ್ರತಿಮೆ; ದಿಗ್ಗಜರ ಸಾಲಿಗೆ ಸೇರಿದ ಶ್ರೇಷ್ಠ ಬ್ಯಾಟರ್
- Technology ಇಂದು ಸ್ಯಾಮ್ಸಂಗ್ ಗ್ಯಾಲಕ್ಸಿ F15 5G ಫೋನ್ ಸೇಲ್!..ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅಣ್ಣಾವ್ರ 'ಭಾಗ್ಯವಂತರು' ಸಿನಿಮಾ ಹುಟ್ಟಿದ ರೋಚಕ ಕಥೆ ಹೇಳಿದ ಭಾರ್ಗವ
ಒಂದೇ ಒಂದು ಬಾರಿ ರಾಜ್ ಕುಮಾರ್ ಸಿನಿಮಾವನ್ನು ನಿರ್ದೇಶನ ಮಾಡಬೇಕು ಎನ್ನುವುದು ಆ ಕಾಲದ ಎಲ್ಲ ನಿರ್ದೇಶಕರ ದೊಡ್ಡ ಕನಸು. ಅದರಲ್ಲಿ ಕೆಲವೇ ಕೆಲವು ನಿರ್ದೇಶಕರು ಮಾತ್ರ ಅದನ್ನು ನನಸು ಮಾಡಿ ತೋರಿಸಿದರು. ಆದರೆ ನಿರ್ದೇಶಕ ಭಾರ್ಗವ ತಮ್ಮ ಮೊದಲ ಸಿನಿಮಾದಲ್ಲಿಯೇ ಅಣ್ಣಾವ್ರಿಗೆ ಆಕ್ಷನ್ ಕಟ್ ಹೇಳಿದ್ದರು.
'ನನ್ನ ಮೊದಲ ಸಿನಿಮಾ' ವಿಶೇಷ ಲೇಖನಕ್ಕೆ ನೀವು ಮಾತಾಡಿ ಅಂತ ಕೇಳಿದ್ದಕ್ಕೆ, ಅವರು ''ಸರಿ... ಮಾತಾಡುತ್ತೇನೆ. ಈ ಸಿನಿಮಾದ ಹಿಂದೆ ತುಂಬ ಒಳ್ಳೆಯ ರೋಚಕ ಕಥೆ ಇದೆ. ಆದರೆ ನನಗೆ ಈಗ ವಯಸ್ಸು ಬೇರೆ ಆಗಿದೆ. ಸ್ವಲ್ಪ ಸ್ವಲ್ಪ ಮರೆತ್ತಿದ್ದೇನೆ.... ಪರವಾಗಿಲ್ಲ....'' ಎಂದು 40 ವರ್ಷ ಹಿಂದಕ್ಕೆ ನಮ್ಮನ್ನೂ ಕರೆದುಕೊಂಡು ಹೋದರು. ''ನೀವು ಕೇಳಿ.. ನನ್ ಹೇಳ್ತಿನಿ..'' ಅಂತ ತಮ್ಮ ಎಂದಿನ ಜೋಶ್ ನಲ್ಲಿ ಮಾತು ಶುರು ಮಾಡಿದರು.....
ಸಂದರ್ಶನ : ನವೀನ.ಎಂ.ಎಸ್
ಸ್ವಲ್ಪ ಸ್ವಲ್ಪ ಸಿನಿಮಾವನ್ನು ಕಲಿತು ಬಂದೆ..
''ನಾನು ಸಿನಿಮಾದಿಂದ ಬಂದವನು. ನಿರ್ದೇಶಕ ಹುಣಸೂರು ಕೃಷ್ಣಮೂರ್ತಿ ಅವರ ಅಣ್ಣನ ಮಗ ನಾನು. ಸಿನಿಮಾದಲ್ಲಿಯೇ ನಮ್ಮ ಕುಟುಂಬ ಇದ್ದರು, ನನಗೆ ಸಿನಿಮಾ ಮಾಡುವ ಆಸೆ ಇರಲಿಲ್ಲ. ಆದರೆ ಬರ್ತಾ... ಬರ್ತಾ... ನಮ್ಮ ಚಿಕ್ಕಪ್ಪ ಹುಣಸೂರು ಕೃಷ್ಣಮೂರ್ತಿ ಅವರು ಸಿನಿಮಾವನ್ನು ನೋಡಿಕೊಳ್ಳುವ ಹಾಗೆ ಬಂತು. ಅಂದು ನನಗೆ ಯಾವುದೇ ಬುನಾದಿ ಇರಲಿಲ್ಲ. ಸ್ವಲ್ಪ ಸ್ವಲ್ಪ ಸಿನಿಮಾವನ್ನು ಕಲಿತುಕೊಂಡು ಅವರ ಗರಡಿಯಲ್ಲಿ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಚಿತ್ರರಂಗಕ್ಕೆ ಬಂದೆ.''
ರಾಜ್ ಕುಮಾರ್ ಅವರ 16 ಚಿತ್ರಗಳಿಗೆ ಅಸಿಸ್ಟೆಂಟ್ ಆಗಿದೆ..
''ಭಾಗ್ಯವಂತರು' ಚಿತ್ರಕ್ಕೆ ಮುಂಚೆ ರಾಜ್ ಕುಮಾರ್ ಅವರ ಸುಮಾರು 16 ಸಿನಿಮಾಗಳಿಗೆ ಅಸಿಸ್ಟೆಂಟ್ ಆಗಿ ಕೆಲಸ ಮಾಡಿದೆ. ಅದು ನನಗೆ ದೊಡ್ಡ ಅನುಭವ ನೀಡಿತು. ಆಗ ನಾನು ಏಕೆ ಸಿನಿಮಾ ನಿರ್ದೇಶನ ಮಾಡಬಾರದು ಅಂತ ಅನಿಸಿತು. ಅದೇ ವೇಳೆ ದ್ವಾರಕೀಶ್ ಅವರು ರಾಜ್ ಕುಮಾರ್ ಡೇಟ್ಸ್ ತೆಗೆದುಕೊಂಡು ಚಿತ್ರ ನಿರ್ಮಾಣ ಮಾಡುವ ತಯಾರಿ ಮಾಡಿದ್ದರು. ಅದಕ್ಕೆ ನಿರ್ದೇಶಕನಾಗಿ ನನ್ನನ್ನು ಆಯ್ಕೆ ಮಾಡಿದರು. ನಾನು ದ್ವಾರಕೀಶ್ ಅವರ ತಂಗಿಯನ್ನೇ ಮದುವೆ ಆಗಿರುವುದು. ನನ್ನ ಕೈ ನಲ್ಲಿ ಈ ಚಿತ್ರ ಮಾಡಿಸಬೇಕು ಅಂತ ಅವರೇ ಪ್ಲಾನ್ ಮಾಡಿದ್ದು.''
ಉದಯ ಶಂಕರ್ ಸೂಚಿಸಿದ ಕಥೆ ಇದು..
''ಪ್ರಾರಂಭದಲ್ಲಿ ಎಲ್ಲರಿಗೂ ಕಷ್ಟ ಇರುವ ಹಾಗೆ ನನಗೂ ಕಷ್ಟ ಇತ್ತು. ಆದರೆ ರಾಜ್ ಕುಮಾರ್ ಅವರಿಗೆ ನನ್ನ ಮೇಲೆ ನಂಬಿಕೆ ಇತ್ತು. ನಾನು ಅವರ ಚಿತ್ರಗಳಿಗೆ ಅಸಿಸ್ಟೆಂಟ್ ಆಗಿ ಕೆಲಸ ಮಾಡುವಾಗಲೇ 'ನನ್ನ ಮೊದಲ ಸಿನಿಮಾ' ನನ್ನಲ್ಲಿ ಹುಟ್ಟುಕೊಂಡಿತು. ಆಗ ಉದಯ ಶಂಕರ್ ಒಂದು ಒಳ್ಳೆಯ ಕಥೆಯನ್ನು ಸೂಚಿಸಿದರು... ಅದೇ 'ಭಾಗ್ಯವಂತರು. ಈ ಚಿತ್ರ ನನಗೆ ಒಳ್ಳೆಯ ಹೆಸರು, ಯಶಸ್ಸು ಎರಡನ್ನು ತಂದು ಕೊಟ್ಟಿತು. ಒಬ್ಬ ನಿರ್ದೇಶಕನಿಗೆ ಮೊದಲ ಸಿನಿಮಾ ಬಹಳ ಮುಖ್ಯ ಆಗಿರುತ್ತದೆ. ನನ್ನ ಮೊದಲ ಸಿನಿಮಾನೇ ನನಗೆ ದೊಡ್ಡ ಸಿನಿಮಾವಾಯ್ತು ಎನ್ನುವ ಸಂತೋಷ ನನ್ನಲ್ಲಿ ಇದೆ''
ಅಂದು ರಿಮೇಕ್ ಮಾಡುವುದು ತುಂಬ ಕಷ್ಟ ಆಗಿತ್ತು..
''ಈ ಚಿತ್ರ ಎಲ್ಲ ಭಾಷೆಯಲ್ಲಿ ಬಂದಿತ್ತು. ತಮಿಳಿನಲ್ಲಿ 'ದೀರ್ಘ ಸುಮಂಗಲಿ' ಆದ ಸಿನಿಮಾ ಕನ್ನಡದಲ್ಲಿ 'ಭಾಗ್ಯವಂತರು' ಆಯ್ತು. ಆಗ ರಿಮೇಕ್ ಮಾಡಬೇಕು ಅಂದರೆ ತುಂಬ ಕಷ್ಟ ಇತ್ತು. ಆ ಚಿತ್ರದ ಪ್ರಿಂಟ್ ತರಿಸಿ ನೋಡಿದ್ವಿ.. ಇಷ್ಟ ಆಯ್ತು. ರಾಜ್ ಕುಮಾರ್ ಕೂಡ ಒಪ್ಪಿದರು. ಹೀಗೆ ನನ್ನ ಮೊದಲ ಸಿನಿಮಾ ಶುರುವಾಯ್ತು.''
ಯಾವುದೇ ಡೈಲಾಗ್, ಶಾಟ್ ಇಟ್ಟರು ಏನು ಕೇಳುತ್ತಿರಲಿಲ್ಲ..
''ಅವತ್ತಿನ ದಿನದಲ್ಲಿಯೇ ರಾಜ್ ಕುಮಾರ್ ಕೈಯಲ್ಲಿ ನಾವು ವಯಸ್ಸಾದ ಪಾತ್ರವನ್ನು ಮಾಡಿಸಿದ್ವಿ. ರಾಜ್ ಕುಮಾರ್ ಮತ್ತು ಸರೋಜನಿ ದೇವಿ ಕಾಂಬಿನೇಶನ್ ಇರಲಿ ಅಂತ ಅವರನ್ನು ನಾಯಕಿ ಆಗಿ ಆಯ್ಕೆ ಮಾಡಿದ್ವಿ. ಇಬ್ಬರು ಕೂಡ ಹೊಸ ನಿರ್ದೇಶಕ ಅಂತ ನನ್ನನ್ನು ನೋಡದೆ ಪ್ರೋತ್ಸಾಹ ನೀಡಿದರು. ಯಾವುದಕ್ಕೂ ಅವರು ತಕರಾರು ಮಾಡುತ್ತಿರಲಿಲ್ಲ. ನಾನು ನನಗೆ ಇಷ್ಟ ಬಂದ ಹಾಗೆ ಸಿನಿಮಾ ತೆಗೆಯಬಹುದಾಗಿತ್ತು. ನಾನು ಯಾವುದೇ ಡೈಲಾಗ್, ಶಾಟ್ ಇಟ್ಟರು ಅವರು ಏನು ಕೇಳುತ್ತಿರಲಿಲ್ಲ. ಒಬ್ಬ ನಿರ್ದೇಶಕನಿಗೆ ಮೊದಲು ಸ್ವಾತಂತ್ಯ ಬೇಕು. ಅದನ್ನು ಅವರು ಕೊಟ್ಟರು.''
ರಾಜ್ ಕುಮಾರ್ ಆಗಲೇ 100 ಸಿನಿಮಾ ಮಾಡಿದ್ದರು
''ಈ ಸಿನಿಮಾ ಮಾಡಿದಾಗ ರಾಜ್ ಕುಮಾರ್ ಆಗಲೇ 100 ಸಿನಿಮಾ ಮಾಡಿದ್ದರು. ಒಬ್ಬ ಸೂಪರ್ ಸ್ಟಾರ್ ಗೆ ನಾನು ನನ್ನ ಮೊದಲ ಸಿನಿಮಾವನ್ನು ನಿರ್ದೇಶನ ಮಾಡಿದೆ. ಅಂತಹ ದೊಡ್ಡ ನಟನಿಗೆ ಸಿನಿಮಾ ನಿರ್ದೇಶನ ಮಾಡಬೇಕು ಎಂದಾಗ ಭಯ ಇತ್ತು. ಹೇಗೆ ಮಾಡುವುದು ಎಂಬ ಸಣ್ಣ ಅಳುಕು ಇತ್ತು. ಆದರೆ ಗಾಬರಿ ಆಗಬೇಡಿ ಅಂತ ರಾಜ್ ಕುಮಾರ್ ಧೈರ್ಯ ಕೊಟ್ಟರು. ಸಿನಿಮಾದಲ್ಲಿ ದುರಂತ ಅಂತ್ಯ ಇತ್ತು. ರಾಜ್ ಕುಮಾರ್ ಪಾತ್ರ ಸಿನಿಮಾದಲ್ಲಿ ಸಾಯುತ್ತದೆ. ಅದನ್ನು ಜನರು ಯಾವ ರೀತಿ ತೆಗೆದುಕೊಳ್ಳುತ್ತಾರೆ ಎನ್ನುವ ಭಯ ಇತ್ತು.''
ರಾಜ್ ಕುಮಾರ್ ಜೀವನಕ್ಕೆ ಈ ಚಿತ್ರ ಬಹಳ ಹತ್ತಿರ..
''ಚಿತ್ರದ ಕಥೆ ಮಾಡಿದಾಗ ನಾಯಕನ ಪಾತ್ರಕ್ಕೆ ಯಾವ ಹೆಸರು ಇಡಬೇಕು ಎನ್ನುವ ಚರ್ಚೆ ಶುರು ಆಯ್ತು. ಈ ಚಿತ್ರ ಅವರ ಜೀವನಕ್ಕೆ ಹತ್ತಿರ ಆಗಲಿ ಎನ್ನುವ ಉದ್ದೇಶದಿಂದ ರಾಜ್ ಕುಮಾರ್ ಎನ್ನುವ ಹೆಸರಿನ ಕಟ್ ಮಾಡಿ ಕುಮಾರ್ ಅಂತ ಇಟ್ಟೆವು. ನಾಯಕಿ ಪಾತ್ರಕ್ಕೆ ಪಾರ್ವತಿ ಅಂತ, ಮಗಳ ಪಾತ್ರಕ್ಕೆ ಅವರ ಹೆಣ್ಣು ಮಕ್ಕಳಾದ ಪೂರ್ಣಿಮ ಹೆಸರನೇ ಇಟ್ಟೆವು. ಹೀಗೆ ರಾಜ್ ಕುಮಾರ್ ಅವರಿಗೆ ಹತ್ತಿರವಾದ ಹೆಸರನ್ನು ಇಟ್ಟ ಈ ಸಿನಿಮಾವೂ ಕೊನೆಗೆ ಅವರ ಜೀವನಕ್ಕೆ ಬಹಳ ಹತ್ತಿರ ಆಯ್ತು.''
ಕ್ಯಾಮರಾ ಆನ್ ಆದ ತಕ್ಷಣ ಪಾತ್ರವಾಗಿ ಬಿಡುತ್ತಿದ್ದರು..
''ರಾಜ್ ಕುಮಾರ್ ಅವರ ಜೊತೆ ಇದ್ದಾಗ ಕಲಿಯಬೇಕು ಎಂದರೆ ಜಸ್ಟ್ ಅವರನ್ನು ಫಾಲೋ ಮಾಡಬೇಕು. ರಾಜ್ ಕುಮಾರ್ ಕ್ಯಾಮರಾ ಆನ್ ಮಾಡಿದ ತಕ್ಷಣ ಚಿತ್ರದ ಆ ಪಾತ್ರವಾಗಿ ಬಿಡುತ್ತಿದ್ದರು. ನಿರ್ದೇಶಕನಾದ ನನಗೆ ಏನು ಬೇಕು ಎನ್ನುವುದು ಅವರಿಗೆ ಗೊತ್ತಿತ್ತು, ಅವರ ನಟನ ಸಾಮಥ್ಯ ನನಗೆ ಗೊತ್ತಿತ್ತು. ರಾಜ್ ಕುಮಾರ್ ಗೆ ನಿರ್ದೇಶನ ಮಾಡಿದ ಸಂದರ್ಭಗಳು ಅಮೋಘ.''
ಕೇವಲ 200 ರೂಪಾಯಿ ಪಡೆದು 10 ನಿಮಿಷದಲ್ಲಿ ಬರೆದರು..
''ಚಿತ್ರದ ಸಾವಿನ ದೃಶ್ಯವನ್ನು ಇವತ್ತು ನೋಡಿದರು ಕಣ್ಣಿನಲ್ಲಿ ನೀರು ಬರುತ್ತದೆ. ಈ ದೃಶ್ಯಕ್ಕೆ ಒಂದು ಹಾಡು ಬೇಕಿತ್ತು. ಆಗ ಉದಯಶಂಕರ್ 10 ನಿಮಿಷದಲ್ಲಿ 'ನಿನ್ನ ನನ್ನ ಮನವು ಸೇರಿತು...' ಹಾಡನ್ನು ಬರೆದರು. ಉದಯಶಂಕರ್ ಇಸ್ ಎ ಗ್ರೇಟ್ ರೈಟರ್. ಅವರು ಬರೆದು ಕೊಡುತ್ತಿದ್ದರೆ ನಮಗೆ ಯಾವುದನ್ನು ಇಟ್ಟುಕೊಳ್ಳಬೇಕು ಯಾವುದನ್ನು ಬಿಡಬೇಕು ಎನ್ನುವುದು ಗೊತ್ತಾಗುತ್ತಿರಲಿಲ್ಲ. ಒಂದು ಹಾಡಿಗೆ ಅವರು ಬರೀ 200 ರೂಪಾಯಿ ತೆಗೆದುಕೊಳ್ಳುತ್ತಿದ್ದರು.''
ಈ ಒಂದು ದೃಶ್ಯ ಯಾವತ್ತು ಮರೆಯೋಕ್ಕೆ ಆಗಲ್ಲ..
''ಚಿತ್ರದಲ್ಲಿ ಹೆಂಡತಿಯ ಪಾತ್ರಕ್ಕೆ ಕ್ಯಾನ್ಸರ್ ಇರುತ್ತದೆ. ಅದು ಗಂಡನಿಗೆ ತಿಳಿಯುವ ಸಂಧರ್ಭದಲ್ಲಿ ಆ ದೃಶ್ಯದ ಭಾವವನ್ನು ಏರಿಸಬೇಕಾಗಿತ್ತು. ಆಕೆ ಸಾವಿನ ಸ್ಥಿತಿಯಲ್ಲಿ ಇದ್ದಾಗ ಗಂಡನ ಊರುಗೋಲು ಮುರಿಯುವ ದೃಶ್ಯವನ್ನು ಚಿತ್ರೀಕರಿಸಿದೆವು. ಸಿಂಬಾಲಿಕ್ ಆಗಿ ಗಂಡನಿಗೆ ಊರುಗೋಲಾಗಿದ್ದ ಹೆಂಡತಿ ಇನ್ನಿಲ್ಲ ಅಂತ ಈ ಸೀನ್ ತಗೆದವು.''
ಯೋಗ್ಯತೆ ಇದ್ದವರು ಮಾತ್ರ ಸಿನಿಮಾದಲ್ಲಿ ನಿಂತುಕೊಳ್ಳುತ್ತಾರೆ..
''ಈ ಕಾಲದಲ್ಲಿ ನಿರ್ದೇಶಕರು ದುಡ್ಡು ಮಾಡುತ್ತಾರೆ. ನಮ್ಮ ಕಾಲದ ನಿರ್ದೇಶಕರು ದುಡ್ಡು ನೋಡೆ ಇಲ್ಲ. ಅಂದು ನಿರ್ದೇಶಕನಿಗೆ ಹೆಸರೇ ಬಂಡವಾಳವಾಗಿತ್ತು. ಇಂದು ಒಂದು ಸಿನಿಮಾ ಹಿಟ್ ಆದರೆ ನಿರ್ದೇಶಕರು ದುಡ್ಡು ಮಾಡುತ್ತಾರೆ. ಇವತ್ತು ಸಿನಿಮಾ ಸಮೃದ್ಧಿ ಆಗಿದೆ. ಯೋಗ್ಯತೆ ಇದ್ದವರು ಮಾತ್ರ ಸಿನಿಮಾದಲ್ಲಿ ನಿಂತುಕೊಳ್ಳುತ್ತಾರೆ. ಚಿತ್ರರಂಗದ ಒಂದು ದೊಡ್ಡ ಸಮುದ್ರ.. ಇಲ್ಲಿ ಯಾವಾಗಲೂ ಈಜುತಲ್ಲೇ ಇರಬೇಕು.''
ಮೊದಲ ದಿನ ಚಿತ್ರಮಂದಿರದಲ್ಲಿ ಕಡಿಮೆ ಜನ ಇದ್ದರು
''ರಾಜ್ ಕುಮಾರ್ ಸಿನಿಮಾಗಳಿಗೆ ಆ ಕಾಲಕ್ಕೆ ದೊಡ್ಡ ಕ್ರೇಜ್ ಇತ್ತು. ಒಂದು ವಾರದ ಟಿಕೆಟ್ ಮುಂಚೆಯೇ ಬುಕ್ಕಿಂಗ್ ಆಗುತ್ತಿತ್ತು. ಆದರೆ ಇದು ಫ್ಯಾಮಿಲಿ ಚಿತ್ರವಾಗಿದ್ದರಿಂದ ಮೊದಲು ಜನ ಕಡಿಮೆ ಇದ್ದರು. ಸೋಮವಾರದಿಂದ ಸಿನಿಮಾ ಹೌಸ್ ಫುಲ್ ಆಯ್ತು. ರಾಜ್ ಕುಮಾರ್ ಅವರಿಗೆ ಮತ್ತು ನನಗೆ 'ಭಾಗ್ಯವಂತರು' ಚಿತ್ರದಿಂದ ಒಳ್ಳೆಯ ಹೆಸರು ಬಂತು. ನನ್ನ ಅದೃಷ್ಟ ಅಂದರೆ ಮೊದಲ ಸಿನಿಮಾ ಆದ ಮೇಲೆ ಎರಡನೇ ಚಿತ್ರ 'ಒಲವೇ ಗೆಲುವು' ವನ್ನು ಕೂಡ ರಾಜ್ ಕುಮಾರ್ ಜೊತೆಗೆ ಮಾಡಿದೆ.''