Don't Miss!
- News IT Company: ಐಟಿ-ಬಿಟಿ ಕಂಪನಿಗಳಿಗೆ ಜಲಮಂಡಳಿಯ ನೀರಿನ ಭರವಸೆ
- Sports CSK vs RCB: ದಾಖಲೆಯ ಪುಟ ಸೇರಿದ ಉದ್ಘಾಟನಾ ಪಂದ್ಯ: 16.8 ಕೋಟಿ ಜನರಿಂದ ವೀಕ್ಷಣೆ
- Finance ಮೃತರ ಖಾತೆಯಲ್ಲಿರುವ ಹಣವನ್ನು ಕುಟುಂಬಸ್ಥರು ಡ್ರಾ ಮಾಡಬಹುದಾ, ಬ್ಯಾಂಕ್ ನಿಯಮಾವಳಿ ಏನು ಹೇಳುತ್ತೆ?
- Automobiles ಇನ್ಮುಂದೆ ಟೋಲ್ ಪ್ಲಾಜಾಗಳು ಕಣ್ಮರೆ: ಖುಷಿ ಪಡುವ ಮುನ್ನ ಈ ಸುದ್ದಿ ನೋಡಿ...
- Lifestyle ಬಾಯಲ್ಲಿ ನೀರು ತರಿಸುವ ಮಾವಿನ ಕಾಯಿ ಚಟ್ನಿ..! 5 ನಿಮಿಷದಲ್ಲಿ ರೆಡಿ..!
- Technology Motorola: ಮೊಟೊರೊಲಾ ಎಡ್ಜ್ 50 ಅಲ್ಟ್ರಾ ಸ್ಮಾರ್ಟ್ಫೋನ್ ಫೀಚರ್ಸ್ ಲೀಕ್! ವಿಶೇಷತೆ ಏನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಪವನ್ ಒಡೆಯರ್ ನಿರ್ದೇಶಕರಾಗಿದ್ದರ ಹಿಂದಿನ ಒಂದು ಕುತೂಹಲಕಾರಿ ಕಥೆ
''ನಾನು ಇನ್ನೂ ಎಷ್ಟೇ ಸಿನಿಮಾ ಮಾಡಲಿ. ಏನೇ ಸಕ್ಸಸ್ ಕಾಣಲಿ ಅದು ಯಾವತ್ತೂ 'ಗೋವಿಂದಾಯ ನಮಃ' ಸಕ್ಸಸ್ ಗೆ ಸಮ ಆಗೋದಕ್ಕೆ ಸಾಧ್ಯವೇ ಇಲ್ಲ... ಆ ಸಿನಿಮಾ ನನಗೆ ಎಲ್ಲವೂ ಆಗಿದೆ'' - ಇದು ನಿರ್ದೇಶಕ ಪವನ್ ಒಡೆಯರ್ ಬಾಯಿಂದ ಬಂದ ಮಾತು.
ಇಂದು 'ಗೂಗ್ಲಿ', 'ರಣವಿಕ್ರಮ', 'ಜೆಸ್ಸಿ' ಮತ್ತು 'ನಟರಾಜ ಸರ್ವಿಸ್' ಇಂತಹ ಸೂಪರ್ ಹಿಟ್ ಸಿನಿಮಾಗಳು ಪವನ್ ಒಡೆಯರ್ ಖಾತೆಯಲ್ಲಿ ಇವೆ. ಆದರೆ ಅಂದು ಒಬ್ಬ ಸಾಮಾನ್ಯ ಪವನ್ ಒಡೆಯರ್ ಎಂಬ ಹುಡುಗನನ್ನು ನಿರ್ದೇಶಕ ಪವನ್ ಒಡೆಯರ್ ಆಗಿ ಮಾಡಿದ್ದು ಇದೇ 'ಗೋವಿಂದಾಯ ನಮಃ' ಸಿನಿಮಾ. ಈ ಚಿತ್ರದಿಂದ ಒಳ್ಳೆಯ ಹೆಸರು, ಯಶಸ್ಸು, ಪ್ರಶಸ್ತಿ ಎಲ್ಲವೂ ಪವನ್ ಒಡೆಯರ್ ಗೆ ಸಿಕ್ಕಿತ್ತು.
'ಫಿಲ್ಮಿ ಬೀಟ್ ಕನ್ನಡ'ದ ನನ್ನ ಮೊದಲ ಸಿನಿಮಾ ಎಂಬ ಈ ವಿಶೇಷ ಸಂದರ್ಶನದಲ್ಲಿ ಪವನ್ ತಮ್ಮ ಮೊದಲ ಸಿನಿಮಾ 'ಗೋವಿಂದಾಯ ನಮಃ' ಬಗ್ಗೆ ಮಾತನಾಡಿದ್ದಾರೆ. ಆ ಸಿನಿಮಾ ಹುಟ್ಟಿದ ಕಥೆ, ಆ ದಿನದ ಅವರ ಕಷ್ಟ, ನೋವು, ಸಾಧನೆಯನ್ನು ನಗುನಗುತ್ತಾ ಹೇಳಿಕೊಂಡಿದ್ದಾರೆ. ಇಲ್ಲಿಂದ ಅವರ ಕಥೆ ಅವರ ಬಾಯಲ್ಲಿ...
ಡೈರೆಕ್ಟರ್ ಆಗ್ಬೇಕು ಎಂಬ ಹುಚ್ಚು ಹುಟ್ಟಿದ್ದು..
''ಆಗಿನ್ನೂ ನಾನು ಯೋಗರಾಜ್ ಭಟ್ ಸರ್ ಜೊತೆ 'ಪಂಚರಂಗಿ' ಚಿತ್ರಕ್ಕೆ ಕೆಲಸ ಮಾಡುತ್ತಿದೆ. ಇನ್ನೂ ಆ ಚಿತ್ರದ ಟಾಕಿ ಪೋರ್ಷನ್ ಮುಗಿದಿತ್ತು ಅಷ್ಟೇ. ಆಗಲೇ ನನಗೆ ಡೈರೆಕ್ಟರ್ ಆಗಬೇಕು ಎಂಬ ಹುಚ್ಚು ಹುಟ್ಟಿತ್ತು. ಆಗಿನ್ನೂ ನಾನು ಏನೂ ಕಲಿತೇ ಇರಲಿಲ್ಲ. ಆ ಕ್ಷಣಕ್ಕೆ ನನಗೆ ಅನಿಸಿದ್ದು ಒಂದು ಒಳ್ಳೆಯ ಕಥೆ ಮಾಡಿಕೊಳ್ಳಬೇಕು. ಕ್ಯಾಮರಾದಲ್ಲಿ ಮಿಡ್.. ವೈಡ್.. ಕ್ಲೋಸ್ ಅಪ್ ಅಂತ ಬೇಕಾದ ಶಾಟ್ ಗಳನ್ನು ತೆಗೆಯಬಹುದು. ಆದರೆ ಒಂದು ಸಿನಿಮಾಗೆ ಕಥೆ ತುಂಬ ಮುಖ್ಯ ಅಂತ ಗೊತ್ತಾಯ್ತು.
ಯೋಗರಾಜ್ ಸರ್ ಗೆ ನನ್ನ ಹೆಸರು ಸಹ ಗೊತ್ತಿರಲಿಲ್ಲ
ನಾನು ಕೆಲಸ ಮಾಡಲ್ಲ ಮೈಗಳ್ಳ.. ನಾನು ಯೋಗರಾಜ್ ಭಟ್ ಸರ್ ಅವರಿಗೆ ಲಾಸ್ಟ್ ಅಸಿಸ್ಟೆಂಟ್ ಆಗಿ ಇದ್ದೆ. ಕ್ಲಾಪ್ ಹೊಡೆಯುವವನು ಅಂತ್ತಾರಲ್ಲ ಹಾಗೆ. ಅವರಿಗೆ ನನ್ನ ಹೆಸರು ಕೂಡ ಗೊತ್ತಿರಲಿಲ್ಲ. 'ಪರಮಾತ್ಮ' ಸಿನಿಮಾ ಶುರು ಮಾಡಿದಾಗ ನನ್ನನ್ನು ಕರೆದು ಈ ಸಿನಿಮಾಗೆ ಕೆಲಸ ಮಾಡ್ತೀಯಾ ಅಂತ ಕೇಳಿದರು. ನಾನು ಇಲ್ಲ ಸರ್ ಡೈರೆಕ್ಷನ್ ಮಾಡುತ್ತಿದ್ದೇನೆ ಅಂದೆ. ಏನೋ... 20 ದಿನ ಕೆಲಸ ಮಾಡಿ ಡೈರೆಕ್ಷನ್ ಮಾಡುತ್ತೀಯಾ.. ಸರಿ ಹೋಗು ಒಳ್ಳೆಯದಾಗಲಿ ಅಂತ ಕಳುಹಿಸಿಕೊಟ್ಟರು.
ತುಂಬ ಕಡಿಮೆ ಬಜೆಟ್..
ಕಥೆ ಇದ್ದರೂ ಕೂಡ ನಾನು ಮೊದಲೇ 'ರಣವಿಕ್ರಮ', 'ಗೂಗ್ಲಿ' ಅಂತಹ ಸಿನಿಮಾ ಮಾಡೋಕ್ಕೆ ಆಗಲಿಲ್ಲ. ಯಾಕಂದ್ರೆ ಅದಕ್ಕೆ ಬಜೆಟ್.. ಹೀರೋ ಬೇಕು. ಹಾಗಾಗಿ ಕಡಿಮೆ.. ತುಂಬ ಕಡಿಮೆ ಬಜೆಟ್... ನಲ್ಲಿ ಸಿನಿಮಾ ಮಾಡಬೇಕು ಅಂತ ನಿರ್ಧಾರ ಮಾಡಿದೆ. ಎಲ್ಲರೂ ಕಥೆ ಮಾಡಿ ಲೋಕೇಷನ್ ಹುಡುಕುತ್ತಾರೆ. ಆದರೆ ನಾನು ಲೋಕೇಷನ್ ನೋಡಿ ಕಥೆ ಮಾಡಿದೆ. ಶೂಟಿಂಗ್ ಜಾಸ್ತಿ ಇರಬಾರದು ಎರಡೇ ಲೋಕೇಷನ್ ನಲ್ಲಿ ಮುಗಿಯಬೇಕು ಅಂತ ಪ್ಲಾನ್ ಮಾಡಿದೆ. ನೋಡುವವರಿಗೆ ಬೋರ್ ಆಗಬಾರದು ಅಂತ ನಾಯಕನ ಪಾತ್ರದಲ್ಲಿ ಕಾಮಿಡಿ ಇರಲಿ ಅಂತ ಅಂದುಕೊಂಡೆ. ಎಲ್ಲ ಉಲ್ಟಾ ಮಾಡಿದೆ. ಅವಶ್ಯಕತೆಗೋಸ್ಕರ ಕಥೆ ಮಾಡಿದೆ. ಎಂದು ಹೇಳಿ ನಕ್ಕರು ಪವನ್
ದಟ್ ಬೂಸ್ಟೆಡ್ ಮೀ..
ನನಗೆ ನಂಬಿಕೆ ಇರಲಿಲ್ಲ. ಯೋಗರಾಜ್ ಭಟ್ ಸರ್ ಜೊತೆ ಕೆಲಸ ಮಾಡುವಾಗ ವೀರೇಂದ್ರ ಅಂತ ಇದ್ದರು. ಅವರು ನನ್ನ ಸೀನಿಯರ್. ಅವರು ನಾನು ಜೊತೆಗೆ ಶಾರ್ಟ್ ಫಿಲ್ಮ್ ಮಾಡಿದ್ವಿ. ಅವರು ಕೂಡ 'ಕಥೆ ಮುಖ್ಯ.. ಮೇಕಿಂಗ್ ಎಲ್ಲ ಅದೇ ಇರುತ್ತದೆ' ಅಂತ ಹೇಳಿದರು. ನನಗೂ ಸಹ ಹೌದಲ್ವಾ.. ಅನಿಸಿತು. ದಟ್ ಬೂಸ್ಟೆಡ್ ಮೀ. ನನ್ನ ಮೊದಲ ಸಿನಿಮಾದಲ್ಲಿಯೇ ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ, ನಿರ್ದೇಶನ.. ಎಲ್ಲಾ ಮಾಡಿದೆ.
ಪ್ರತಿ ದಿನ ನಿರಾಸೆ..
ಆಗತಾನೆ ಐಟಿ ಕಂಪನಿಯ ಕೆಲಸ ಬಿಟ್ಟು ಮನೆಯಲ್ಲಿ ಒಂದು ವರ್ಷ ಟೈಂ ತೆಗೆದುಕೊಂಡಿದ್ದೆ. ನನಗೆ ಚಿತ್ರರಂಗದ ಬಗ್ಗೆ ಏನೂ ಗೊತ್ತಿರಲಿಲ್ಲ. ಆಗ ನಿರ್ಮಾಪಕರನ್ನು ಹುಡುಕುವುದು ತುಂಬ ಕಷ್ಟ ಆಯಿತು. ಯಾರ ಪರಿಚಯ ಇರಲಿಲ್ಲ. ಆಗ ಕುಮಾರ್ ಅಂತ ಈಗ 'ಖದರ್' ಚಿತ್ರದ ಡೈರೆಕ್ಟರ್, ಅವರ ಪರಿಚಯ ಆಯ್ತ. ಅವರ ಮೂಲಕ ಸುರೇಶ್ ಸರ್ ಭೇಟಿ ಆಯ್ತು. ಅದುವರೆಗೆ ಎಷ್ಟೋ ನಿರ್ಮಾಪಕರನ್ನು ಭೇಟಿ ಮಾಡಿದ್ದೆ. ಪ್ರತಿ ದಿನ ನಿರಾಸೆಯಿಂದ ವಾಪಸ್ ಹೋಗುತ್ತಿದೆ. ಊರಿನಿಂದ ತಂದೆ ಜೇಬಿನಲ್ಲಿ ದುಡ್ಡು ಕದ್ದು ಬಂದಿದ್ದು ಇದೆ.
ಅಂತೂ ಸಿನಿಮಾ ಶುರು ಆಯ್ತು..
ಪ್ರೊಡ್ಯೂಸರ್ ಸುರೇಶ್ ಸರ್ ಅವರಿಗೆ ಕಥೆ ತುಂಬ ಇಷ್ಟ ಆಯ್ತು. ಆದರೆ ಅವರು ಆಗ ಬೇರೆ ಸಿನಿಮಾ ಮಾಡುತ್ತಿದ್ದರು. ಆ ಚಿತ್ರಕ್ಕೆ ಸ್ಕ್ರೀನ್ ಪ್ಲೇ ಬರೆದುಕೊಡುತ್ತೀರಾ ಅಂತ ಕೇಳಿದರು. ಏನು ಆಗ್ತಿಲ್ಲ ಅಂತ ಸ್ಕ್ರೀನ್ ಪ್ಲೇ ಆದರೂ ಬರೆಯೋಣವೆಂದು ಹೋದೆ. ಹೋಗ್ತಾ.. ಹೋಗ್ತಾ.. ಅವರಿಗೆ ಈ ಚಿತ್ರದ (ಗೋವಿಂದಾಯ ನಮಃ) ಮೇಲೆ ಹೆಚ್ಚು ಒಲವು ಬಂದು ಇದೇ ಸಿನಿಮಾ ಮೊದಲು ಶುರುವಾಯಿತು.
ಸೋತು ಹೋಗಿದ್ದೆ..
''ನಾನು ಮೊದಲು 8 ರಿಂದ 10 ನಿರ್ಮಾಪಕರನ್ನು ಸಂಪರ್ಕ ಮಾಡಿದ್ದೆ. ಎಲ್ಲರಿಗೂ ಕಥೆ ಇಷ್ಟ ಆಯ್ತು. ಕೆಲವು ನಿರ್ಮಾಪಕರಿಗೆ ಶೋಕಿ ಇರುತ್ತದೆ. ಆ ಟೈಂ ನಲ್ಲಿ ಯಾರೋ ಒಬ್ಬ ಬರಿ ಅಲ್ಲಿ ಇಲ್ಲಿ ಕರೆಸಿ ಅವನ ಬೇಡದ ವಿಷಯವನ್ನು ಮಾತನಾಡುತ್ತಿದ್ದ. ನನಗೆ ಎಲ್ಲ ಹೊಸದಾಗಿತ್ತು. ಸೋತು ಹೋಗಿದ್ದೆ. ಆದರೆ ಕೊನೆಗೆ ಸುರೇಶ್ ಸರ್ ಸಿಕ್ಕರು. ಅದೇ ರೀತಿ ಕೋಮಲ್ ಸರ್ ಸಪೋರ್ಟ್ ಮಾಡಿದರು.
10 ನಿಮಿಷದಲ್ಲಿ ಹಾಡು ಬರೆದೆ..
ಯೂ ಟ್ಯೂಬ್ ನಲ್ಲಿ ಕನ್ನಡ ಹಾಡನ್ನು ಪ್ರಚಾರ ಮಾಡಬಹುದು ಅಂತ ಕಲಿಸಿಕೊಟ್ಟಿದ್ದು ಈ ಚಿತ್ರದ 'ಪ್ಯಾರ್ ಗೆ ಆಗ್ಬಿಟೈತೆ..' ಹಾಡು. ಆಗ ಅದು 'ಕನ್ನಡದ ಕೊಲೆವರಿ' ಆಗಿತ್ತು. ಅದೊಂದು ಮಿರಾಕಲ್... ಆ ಹಾಡು ನಾನೇ ಬರೆದದ್ದು. ಚಿತ್ರದ ಮುಸ್ಲಿಂ ಪಾತ್ರ ಹಾಡಿನಲ್ಲಿಯೂ ಅದೇ ರೀತಿ ಮಾತನಾಡಲಿ ಎಂದುಕೊಂಡು ಬರಿ 10 ನಿಮಿಷದಲ್ಲಿ ಹಾಡು ಬರೆದ ಹಾಡು 'ಪ್ಯಾರ್ ಗೆ ಆಗ್ಬಿಟೈತೆ'. ನಂತರ ಅದು ವಿಶ್ವಾದ್ಯಂತ ಫೇಮಸ್ ಆಯ್ತು.
'ಎದ್ದೇಳು ಮಂಜುನಾಥ' ಸಿನಿಮಾ ಕಾಡುತ್ತಿತ್ತು..
ನನಗೆ 'ಎದ್ದೇಳು ಮಂಜುನಾಥ' ಸಿನಿಮಾ ತುಂಬ ಕಾಡುತ್ತಿತ್ತು. ಆ ರೀತಿ ಒಂದು ಸಿನಿಮಾ ಮಾಡಬೇಕು ಅಂತ ಅನಿಸಿತು. ಕೋಮಲ್ ಸರ್ ಅವರ ಕಾಮಿಡಿ ಟೈಮಿಂಗ್, ಆ ಕ್ಯೂಟ್ ನೆಸ್, ಬಾಡಿ ಲಾಂಗ್ವೇಜ್ ನನಗೆ ತುಂಬ ಇಷ್ಟ. ನಾನು ಬರೆದ ಆ ಪಾತ್ರ ಅವರಿಗೆ ಹೇಳಿ ಮಾಡಿಸಿದ ಹಾಗೆ ಇತ್ತು. ಆಗ ಕಾದು ಅವರ ಜೊತೆ ಸಿನಿಮಾ ಮಾಡಿದ್ದು. ಅವರು ಕೂಡ ಆ ಪಾತ್ರಕ್ಕೆ ಜೀವ ತುಂಬಿದರು.
ನೆನಪಿಸಿಕೊಂಡರೆ ಭಯ ಆಗುತ್ತದೆ..
ನಿಜ ಹೇಳಬೇಕು ಅಂದರೆ ನನಗೆ ಈಗಲೂ ಅದನ್ನು ನೆನಪಿಸಿಕೊಂಡರೆ ಆಶ್ಚರ್ಯ ಆಗುತ್ತದೆ. ಇಂದು ನೀವು ಈ ಪವನ್ ಒಡೆಯರ್ ಸಂದರ್ಶನ ಮಾಡುತ್ತಿದ್ದೀರಿ.. ಆದರೆ ಆಗ ನಾನು ಯಾವ ನಟರ ಜೊತೆ ಕೆಲಸ ಮಾಡಿಲ್ಲ. ನಾನು ಏನೂ ಅಲ್ಲ.. ಎಲ್ಲವೂ ಹಂತ ಹಂತವಾಗಿ ಮಾಡಿಕೊಂಡು ಬಂತು. ಈಗ ನೆನಪಿಸಿಕೊಂಡರೆ ಭಯ ಆಗುತ್ತದೆ. ಆ ಚಾಮುಂಡೇಶ್ವರಿ ನಿಂತು ಸಿನಿಮಾ ಮಾಡಿಸಿದಳು ಅನಿಸುತ್ತದೆ.
ಇಡೀ ಸಿನಿಮಾ ತಲೆಯಲ್ಲಿ ಕುಳಿತುಕೊಂಡು ಬಿಟ್ಟಿತ್ತು..
ನಾನು ದಿನ ನನ್ನ ಟೀಂ ಜೊತೆ ಕಥೆ ಹೇಳುತ್ತಿದೆ. 80 ರಿಂದ 90 ಸಲ ಡೈಲಾಗ್ ಸಮೇತ ಸ್ಕ್ರೀಪ್ಟ್ ರೀಡಿಂಗ್ ಕೊಟ್ಟಿದ್ದೇನೆ. ಅದೇ ನನಗೆ ಪರಿಪಕ್ವತೆ ಕೊಟ್ಟಿತು ಅನಿಸುತ್ತದೆ. ಎಲ್ಲ ದೃಶ್ಯಗಳು ನನ್ನ ತಲೆಯಲ್ಲಿ ಕುಳಿತುಕೊಂಡು ಬಿಟ್ಟಿತ್ತು. ಇದೆಲ್ಲ ನಂದಲ್ಲ.. ಒಂದು ಟೀಂ ವರ್ಕ್.
ರಿಲೀಸ್ ಹಿಂದಿನ ದಿನ, 4 ಗಂಟೆ..
ರಿಲೀಸ್ ಹಿಂದಿನ ದಿನ ಸಂತೋಷ್ ಥಿಯೇಟರ್ ಬಳಿ ನನ್ನ ಸ್ನೇಹಿತರೆಲ್ಲರೂ ಖುಷಿಯಾಗಿ ಪಾರ್ಟಿ ಮಾಡುತ್ತಿದ್ದರು. ಆದರೆ ನಾನು ಒಬ್ಬನೇ ಗೇಟ್ ಹತ್ತಿರ ಒಂದು ಮೂಲೆಯಲ್ಲಿ ಬೆಳಗಿನ ಜಾವ 4 ಗಂಟೆ ವರೆಗೆ ಅಲ್ಲೇ ಕುಳಿತ್ತಿದ್ದೆ.. ನಾಳೆ ರಿಲೀಸ್ ಏನಾಗುತ್ತದೆಯೋ.. ಏನೋ.. ನನ್ನ ಭವಿಷ್ಯ.. ನನ್ನ ಸ್ನೇಹಿತರು ಸಿನಿಮಾ ಓಡುತ್ತದೆ ಅಂತ ಹೇಳುತ್ತಿದ್ದರು ಆದರೆ ನನಗೆ ಭಯ. ರಾತ್ರಿ ಪೂರ ಕುಳಿತು ಸಂತೋಷ್ ಥಿಯೇಟರ್ ದಿಟ್ಟಿಸಿ ನೋಡುತ್ತಿದ್ದೆ. ಬಳಿಕ ನನ್ನ ಮೂರು ಸಿನಿಮಾಗಳು ಅಲ್ಲೇ ನೂರು ದಿನ ಆಯ್ತು.
ಕಣ್ಣಲ್ಲಿ ನೀರು ಬಂತು..
ಬೆಳಗ್ಗೆ ನೋಡಿದರೆ ಸಿನಿಮಾ ಸಂತೋಷ್ ಥಿಯೇಟರ್ ನಲ್ಲಿ ಹೌಸ್ ಫುಲ್. ಅದು ಮ್ಯಾಜಿಕಲ್. ನನ್ನ ಪಕ್ಕ ನಮ್ಮ ಅಕ್ಕ ಭಾವ ಕುತ್ತಿದ್ದರು. ಕುಣಿಗಲ್ ನಲ್ಲಿ ನನ್ನ ಟೀಚರ್ ಸತೀಶ್ ಅಂತ ಅವರೇ ಮೊದಲ ಟಿಕೆಟ್ ತಗೊಂದು ನನ್ನ ಶಿಷ್ಯ ಮಾಡಿದ್ದಾನೆ ಅಂತ ಸಿನಿಮಾ ನೋಡಿದರು. ಸಿನಿಮಾ ಹೌಸ್ ಫುಲ್ ಆಗಬೇಕು ಅಂತ ನಮ್ಮ ಫ್ರೆಂಡ್ಸ್ ಗಳನ್ನು ಕರೆದುಕೊಂಡು ಬಂದಿದೆ. ಆದರೆ ಅವರಿಗೆ ಟಿಕೆಟ್ ಇಲ್ಲದ ಹಾಗೆ ಆಯ್ತು. ಅವರಿಗೆ ಸಿಕ್ಕಾಪಟ್ಟೆ ಖುಷಿ ಆದರು. ಇಡೀ ಕರ್ನಾಟಕ ಹೌಸ್ ಫುಲ್ ಆಗಿತ್ತು. ಅದು ನೆನಸಿಕೊಂಡರೆ ನನಗೆ ಈಗಲೂ ಕಣ್ಣಲ್ಲಿ ನೀರು ಬರುತ್ತದೆ.
ನಿಮ್ಮ ಮೊದಲ ಸಿನಿಮಾ ನಿಮಗೆ ಏನು..?
ನಾನು ಇನ್ನೂ ಎಷ್ಟೇ ಸಿನಿಮಾ ಮಾಡಲಿ. ಏನೇ ಸಕ್ಸಸ್ ಕಾಣಲಿ ಅದು ಯಾವತ್ತೂ 'ಗೋವಿಂದಾಯ ನಮಃ' ಸಕ್ಸಸ್ ಗೆ ಸಮ ಆಗೋದಕ್ಕೆ ಸಾಧ್ಯ ಇಲ್ಲ. ಆ ಸಿನಿಮಾ ನನಗೆ ಎಲ್ಲ ಆಗಿದೆ. ತುಂಬ ಜನ ಈ ಹೆಸರಿಟ್ಟಾಗ ಸಿನಿಮಾ ಕೂಡ ಗೋವಿಂದ.. ಆಗುತ್ತೆ ಎಂದಿದ್ದರು. ಆದರೆ ಆ ದೇವರು ನಿರ್ಮಾಪಕರಿಗೆ ಹಣ ಕರುಣಿಸಿದ. ಈ ಚಿತ್ರದಿಂದ ತುಂಬ ಜನರ ಲೈಫ್ ಆಯ್ತು. ಸಿನಿಮಾ ಅಷ್ಟು ಕಲೆಕ್ಷನ್ ಮಾಡಿತು.. ಇಷ್ಟು ಮಾಡಿತು.. ಅಂತ ಮಾತನಾಡುತ್ತೇವೆ. ಆದರೆ ಬೇರೆ ರಾಜ್ಯದವರು ಬೇರೆ ಭಾಷೆಯವರು ನಮ್ ಸಿನಿಮಾಗಳನ್ನು ಬಂದು ತಗೋತ್ತಾರೆ ಅಲ್ವಾ ಅದು ನಿಜವಾದ ಸಕ್ಸಸ್. ಆಗ ಒಬ್ಬ ನಿರ್ದೇಶಕನಿಗೆ ಬೆಲೆ ಬರುತ್ತದೆ. 'ಗೋವಿಂದಾಯ ನಮಃ' ಚಿತ್ರ 5 ಭಾಷೆಗೆ ರಿಮೇಕ್ ರೈಟ್ಸ್ ಸೇಲ್ ಆಗಿದೆ. ಅದು ನಿಜವಾದ ಸಕ್ಸಸ್. ಎಂದು ಮಾತು ಮುಗಿಸಿ ಪವನ್ ತಮ್ಮ ಮೊದಲ ಸಿನಿಮಾದ ಬಗ್ಗೆ ಖುಷಿಯಾಗಿ ಮಾತನಾಡಿದರು.