ಸಂದರ್ಶನ : ಸಂಚಾರಿ ವಿಜಯ್ 'ಅವನು...ಅವಳಾದ' ಪರಿ
ವರ್ಷಗಳ ನಂತರ ಕನ್ನಡದ ಕೀರ್ತಿ ಪತಾಕೆಯನ್ನ ದೇಶದ ಮೂಲೆ ಮೂಲೆಯಲ್ಲೂ ಹಾರಿಸಿರುವ ನಟ ಕನ್ನಡಿಗ ಸಂಚಾರಿ ವಿಜಯ್. 'ನಾನು ಅವನಲ್ಲ..ಅವಳು' ಚಿತ್ರದಲ್ಲಿನ ಅಮೋಘ ಅಭಿನಯಕ್ಕಾಗಿ ಉತ್ತಮ ನಟ ರಾಷ್ಟ್ರ ಪ್ರಶಸ್ತಿ ಪಡೆದಿದ್ದಾರೆ ನಟ ಸಂಚಾರಿ ವಿಜಯ್.
ರಂಗಭೂಮಿಯಿಂದ ಧಾರಾವಾಹಿಗಳವರೆಗೂ, ಸಣ್ಣ ಪುತ್ರ ಪಾತ್ರಗಳಿಂದ ಹೀರೋ ಆಗುವವರೆಗೂ ಕನ್ನಡ ಚಿತ್ರರಂಗದಲ್ಲಿ ಪುಟ್ಟ ಪುಟ್ಟ ಹೆಜ್ಜೆಗಳನ್ನಿಟ್ಟುಕೊಂಡು ಬಂದಿರುವ ಸಂಚಾರಿ ವಿಜಯ್ 'ಫಿಲ್ಮಿಬೀಟ್ ಕನ್ನಡ'ಗೆ ವಿಶೇಷ ಸಂದರ್ಶನ ನೀಡಿದ್ದಾರೆ. ಅವರ ಸಂದರ್ಶನದ ಆಯ್ದ ಭಾಗ ಇಲ್ಲಿದೆ.

* ಪ್ರಶಸ್ತಿಗೆ ಮುನ್ನ ಮತ್ತು ಪ್ರಶಸ್ತಿ ಬಂದ ಬಳಿಕ ನೀವು ಕಂಡುಕೊಂಡಿರುವ ವ್ಯತ್ಯಾಸ?
- ಅದೇ ವಿಜಯ್. ಹ್ಹಾ...ಹ್ಹಾ...ಹ್ಹಾ...ಎರಡು ಮೂರು ವಾರದಿಂದ ಶಾಕ್ ಆಗೇ ಇದ್ದೀನಿ. ಇದೆಲ್ಲಾ ತಲೆಯಲ್ಲಿ ಇಟ್ಕೊಬಾರದು ಅಂತ ನಮ್ಮ ಮೇಡಂ ಹೇಳಿದರು. ಇನ್ನೊಂದು ಸ್ವಲ್ಪ ದಿನ. ಆಮೇಲೆ ಬೇರೆಯವರು ಬರುತ್ತಾರೆ. ಸೋ, ಅದೇ ವಿಜಯ್ ಆಗೇ ಇದ್ದೀನಿ.
* ಪ್ರಶಸ್ತಿ ಬಂದ ಬಳಿಕ ಕನ್ನಡ ಚಿತ್ರರಂಗದಲ್ಲಿ ನಿಮಗೆ ಸಿಕ್ಕ ಪ್ರತಿಕ್ರಿಯೆ?
- ಪಿ.ಶೇಷಾದ್ರಿ, ಕಾಸರವಳ್ಳಿ ಸೇರಿದಂತೆ ಹಿರಿಯರು ಫೋನ್ ಮಾಡಿ ವಿಶ್ ಮಾಡಿದ್ರು. ಅವರೆಲ್ಲಾ ಬಿಟ್ಟರೆ ಕಮರ್ಶಿಯಲ್ ಫಿಲ್ಮ್ಸ್ ನಲ್ಲಿ ಯಾರಿದ್ದಾರೆ ತುಂಬಾ ಕಮ್ಮಿ ವಿಶ್ ಮಾಡಿದವರು. ರಮೇಶ್ ಅರವಿಂದ್, ಪುನೀತ್ ರಾಜ್ ಕುಮಾರ್, ಶ್ರೀನಗರ ಕಟ್ಟಿ, ಶಶಾಂಕ್ ಫೋನ್ ಮಾಡಿ Congratulations ಹೇಳಿದ್ರು. ಪುನೀತ್ ರಾಜ್ ಕುಮಾರ್ ಫೋನ್ ಮಾಡಿದ್ದು ತುಂಬಾ ಸರ್ಪ್ರೈಸಿಂಗ್ ಆಗಿತ್ತು.

* ನಿಮಗೆ ಪ್ರಶಸ್ತಿ ಬಂದಿದೆ. ಆದ್ರೆ, 'ನಾನು ಅವನಲ್ಲ...ಅವಳು' ಸಿನಿಮಾದಲ್ಲಿನ ನಿಮ್ಮ ಅಭಿನಯ ತೃಪ್ತಿ ನೀಡಿದ್ಯಾ?
- ನನಗಿನ್ನೂ ತೃಪ್ತಿ ಸಿಕ್ಕಿಲ್ಲ. ಇನ್ನೊಂದು ಚೂರು ಚೆನ್ನಾಗಿ ಮಾಡಬಹುದಿತ್ತು. ಜೀವ ನೀಡಬಹುದಿತ್ತು ಅನ್ಸುತ್ತೆ. ಮೇಕಪ್ ಅವರ ಎಫರ್ಟ್ ಮತ್ತು ಡೈರೆಕ್ಟರ್ ಎಫರ್ಟ್ ನಿಂದ ತೆರೆಮೇಲೆ ಪಾತ್ರ ಚೆನ್ನಾಗಿ ಬಂದಿದೆ. [ನಿರ್ದೇಶಕ ಬಿ.ಎಸ್.ಲಿಂಗದೇವರು ವಿಶೇಷ ಸಂದರ್ಶನ]
* ಮಂಗಳಮುಖಿಯ ಪಾತ್ರಕ್ಕೆ ನಿಮ್ಮ ತಯಾರಿ?
- ತುಂಬಾ ತಯಾರಿ ಮಾಡಿಕೊಂಡಿದ್ವಿ. 'ಒಗ್ಗರಣೆ' ಸಿನಿಮಾದಲ್ಲಿ ಅಂತದ್ದೇ ಪಾತ್ರ ಮಾಡಿದ್ದೆ. ಅದಕ್ಕೂ ತಯಾರಿ ನಡೆಸಿದ್ದೆ. ಈ ಸಿನಿಮಾದಲ್ಲಿ ಕೊಂಚ ಏರುಪೇರು ಆದರೂ, ನಟನೆ ಅಂತ ಗೊತ್ತಾಗಿ ಬಿಡುತ್ತೆ. ಹೀಗಾಗಿ ತುಂಬಾ ಪೂರ್ವ ತಯಾರಿ ಮಾಡಿ, ಕೆಲವರನ್ನ ಭೇಟಿ ಮಾಡಿ, ಪುಸ್ತಕವನ್ನ ಓದಿ ಅಭಿನಯಿಸಿದ್ದು.

* ಸಿನಿಮಾ ಮಾಡುವ ಮುನ್ನ ಮಂಗಳಮುಖಿಯರ ಬಗ್ಗೆ ನಿಮಗಿದ್ದ ಭಾವನೆ, 'ನಾನು ಅವನಲ್ಲ...ಅವಳು' ಮಾಡಿದ ಬಳಿಕ ಬದಲಾಯ್ತಾ?
- ಖಂಡಿತ. ಮೊದಲು ಅವರು ಪಕ್ಕಾ ಬಂದ್ರೆ ಮುಜುಗರ ಆಗುತ್ತಿತ್ತು. ಸಿನಿಮಾ ಮಾಡಿದ ಮೇಲೆ ಅವರೊಂದಿಗೆ ಮಾತನಾಡಿದ ಮೇಲೆ, ಅವರ ಬಗ್ಗೆ ಗೊತ್ತಾಯ್ತು. ಈಗ ಅವರ ಮೇಲೆ ಸಾಫ್ಟ್ ಕಾರ್ನರ್ ಬಂದಿದೆ. ['ಮಂಗಳಮುಖಿಯರ ಮೇಲಿನ ದೃಷ್ಟಿಕೋನ ಬದಲಾಗಬೇಕು']
* ಅವಕಾಶಕ್ಕಾಗಿ ಮುಂಚೆ ಕಷ್ಟಪಟ್ಟಿದ್ರಿ. ಈಗ ಹೇಗಿದೆ?
- ಬರ್ತಾಯಿದೆ. ಕನ್ನಡ, ತಮಿಳಿನಿಂದ ಅವಕಾಶಗಳು ಬರ್ತಿದೆ. ಇನ್ನೂ ಯಾವುದು ಒಪ್ಪಿಕೊಂಡಿಲ್ಲ. ನಾನು ಯಾವತ್ತೂ ಹೀರೋ ಆಗಬೇಕು ಅಂದುಕೊಂಡಿಲ್ಲ. ನಾಟಕಗಳನ್ನ ಮಾಡ್ತಿದ್ದೆ. ಆಮೇಲೆ ಚಂದನ ಸೀರಿಯಲ್ ನಲ್ಲಿ ಚಾನ್ಸ್ ಸಿಕ್ತು. ಅಲ್ಲಿಂದ ಸಿನಿಮಾಗೆ ಬಂದೆ. ಈಗ ಪ್ರಶಸ್ತಿ ಸಿಕ್ಕಿದೆ. ಮುಂದೆ ಯಾವುದೇ ಅವಕಾಶ ಬಂದರೂ, ಇಷ್ಟ ಆದರೆ ಒಪ್ಪಿಕೊಳ್ಳುತ್ತೇನೆ. [ರಾಷ್ಟ್ರ ಪ್ರಶಸ್ತಿ ಬಂತು; ಸಂಚಾರಿ ವಿಜಯ್ ಗೆ ಅದೃಷ್ಟ ಖುಲಾಯಿಸ್ತು.!]

* ಮುಂದೆ ಮತ್ತೆ ನಾಟಕಗಳನ್ನ ಮಾಡುತ್ತೀರಾ?
- ಖಂಡಿತ. ನನಗೆ ನಾಟಕಗಳಲ್ಲಿ ಖುಷಿ ಇದೆ, ನೆಮ್ಮದಿ ಇದೆ. ಖಂಡಿತ ಮಾಡುತ್ತೇನೆ.
* ನಿಮ್ಮ ಮುಂದಿನ ಪ್ರಾಜೆಕ್ಟ್ ಗಳು...
- ತಮಿಳಿನಲ್ಲಿ ಒಂದು ಆಫರ್ ಸಿಕ್ಕಿದೆ. ಒಳ್ಳೆ ಪಾತ್ರ. ಕನ್ನಡದಲ್ಲೂ ಅವಕಾಶಗಳು ಬರುತ್ತಿವೆ. ಯಾವುದೂ ಇನ್ನೂ ಫೈನಲ್ ಆಗಿಲ್ಲ. ಈಗ 'ಸಿಪಾಯಿ' ಚಿತ್ರದಲ್ಲಿ ಅಭಿನಯಿಸುತ್ತಿದ್ದೇನೆ.


Click it and Unblock the Notifications











