ಗಿಲ್ಲಿ, ರಕ್ಷಿತಾ, ಅಶ್ವಿನಿ ಗೌಡ ; ಯಾರ ಮುಡಿಗೆ ಬಿಗ್ ಬಾಸ್ ಕಿರೀಟ ? ನೀತು ಕಂಡಂತೆ ಹೇಗಿದೆ ಈ ಬಾರಿ ದೊಡ್ಮನೆ ಆಟ ?
ಬಣ್ಣದ ಸೆಳೆತಕ್ಕೆ ಸಿಲುಕಿದವರಲ್ಲಿ ಹಲವಾರು ಜನ ''ಬಿಗ್ ಬಾಸ್''ನಲ್ಲಿ ಭಾಗವಹಿಸಬೇಕೆಂದು ಕನಸು ಕಾಣುತ್ತಾರೆ. ಆದರೆ .. ಈ ಸುವರ್ಣ ಅವಕಾಶ ಎಲ್ಲರಿಗೆ ಸಿಗುವುದಿಲ್ಲ. ಒಂದು ವೇಳೆ ಸಿಕ್ಕರೂ ಕೂಡ ಮನೆಯಲ್ಲಿ ಹೆಚ್ಚು ದಿನ ಉಳಿಯಲು ಸಾಧ್ಯವಾಗುವುದಿಲ್ಲ. ಯಾಕೆಂದರೆ.. ''ಬಿಗ್ ಬಾಸ್'' ಕೇವಲ ಮಾನಸಿಕ ಸ್ಫರ್ಧೆ ಅಲ್ಲ. ದೈಹಿಕ ಸ್ಫರ್ಧೆ ಕೂಡ ಹೌದು. ಮಾನಸಿಕವಾಗಿ ಬಲಿಷ್ಠವಾಗಿದ್ದು ದೈಹಿಕವಾಗಿ ಬಲಹೀನರಾಗಿದ್ದರೆ..
ಅಥವಾ ದೈಹಿಕವಾಗಿ ಬಲಶಾಲಿಯಾಗಿ ಮಾನಸಿಕವಾಗಿ ದೌರ್ಬಲ್ಯವನ್ನು ಹೊಂದಿದ್ದರೆ ಈ ಮನೆಯಲ್ಲಿ ಉಳಿಯುವುದು, ಫಿನಾಲೆ ಹಂತದವರೆಗೆ ತಲುಪುವುದು ಅಸಾಧ್ಯ. ಇಂಥಾ ''ಬಿಗ್ ಬಾಸ್'' ಕಾರ್ಯಕ್ರಮದಲ್ಲಿ ಈ ಬಾರಿ ವಿಜೇತರಾಗಿ ಹೊರ ಹೊಮ್ಮುವುದು ಯಾರು..? ಎನ್ನುವ ಪ್ರಶ್ನೆಗೆ ಉತ್ತರ ಇನ್ನೇನು ಕೆಲವೇ ದಿನಗಳಲ್ಲಿ ಗೊತ್ತಾಗಲಿದೆಯಾದರೂ ಸದ್ಯ ''ಬಿಗ್ ಬಾಸ್'' ಮನೆ ದಿನದಿಂದ ದಿನಕ್ಕೇ ರಂಗೇರುತ್ತಿದೆ.

ಆದರೂ ಅದ್ಯಾಕೋ ಕಾರ್ಯಕ್ರಮದ ಆಯೋಜಕರಿಗೆ ಸಮಾಧಾನ ಇದ್ದಂತೆ ಇಲ್ಲ. ಇದಕ್ಕೆ ಕೈಗನ್ನಡಿ ಎಂಬಂತೆ ಅಖಾಡವನ್ನು ಇನ್ನೂ ರಂಗೇರಿಸಲು ಕಳೆದ ವರ್ಷದ ಪ್ರಬಲ ಸ್ಫರ್ಧಿಗಳಾಗಿದ್ದ ಉಗ್ರಂ ಮಂಜು.. ರಜತ್.. ಚೈತ್ರಾ ಕುಂದಾಪುರ.. ಮೋಕ್ಷಿತಾ.. ತ್ರಿವಿಕ್ರಮ್ ಅವರನ್ನು ಮನೆ ಒಳಗಡೆ ಕಳುಹಿಸಲಾಗಿದೆ.
ಹೀಗೆ ಹೋದ ಈ ಮಾಜಿ ಸ್ಫರ್ಧಿಗಳು ಹೊರ ಬರುವುದು ಯಾವಾಗ ? ಎಂಬ ಉತ್ತರ ''ಬಿಗ್ ಬಾಸ್'' ಗೆ ಗೊತ್ತಾದರೂ ನಿಮ್ಮ ''ಫಿಲ್ಮಿಬೀಟ್ ಕನ್ನಡ'' ಜೊತೆ ಈ ಬಾರಿಯ ''ಬಿಗ್ ಬಾಸ್'' ಕುರಿತು ಕಳೆದ ಬಾರಿಯ ಸ್ಫರ್ಧಿಗಳಲ್ಲಿ ಒಬ್ಬರಾಗಿದ್ದ ನೀತು ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.
ಹಾಗಿದ್ದರೆ ನೀತು ಕಂಡಂತೆ ಈ ಬಾರಿಯ ''ಬಿಗ್ ಬಾಸ್'' ಹೇಗಿದೆ..? ಈ ಬಾರಿ ''ಬಿಗ್ ಬಾಸ್'' ಗೆಲ್ಲುವ ಸುವರ್ಣ ಅವಕಾಶ ಯಾರಿಗೆ ಹೆಚ್ಚಿದೆ..? ಕಳೆದ ಬಾರಿಯ ''ಬಿಗ್ ಬಾಸ್''ಗೂ ಈ ಬಾರಿಯ ''ಬಿಗ್ ಬಾಸ್''ಗೂ ಇರುವ ವ್ಯತ್ಯಾಸವೇನು..? ಎಂದು ತಿಳಿಯಲು ಮುಂದೆ ಓದಿ.
ನೀತು ಕಂಡಂತೆ ಬಿಗ್ ಬಾಸ್ 12
ಈ ಕುರಿತು ''ಫಿಲ್ಮಿಬೀಟ್ ಕನ್ನಡ'' ಜೊತೆ ಮಾತನಾಡಿರುವ ನೀತು ನಮ್ಮ ''ಬಿಗ್ ಬಾಸ್'' ಮನೆಗೆ ಮತ್ತು ಈ ''ಬಿಗ್ ಬಾಸ್'' ಮನೆಗೆ ಹೆಚ್ಚೇನು ವ್ಯತ್ಯಾಸ ಇಲ್ಲ. ಆದರೆ.. ನಮ್ಮ ಮನೆಯಲ್ಲಿ ಎಲ್ಲರ ಮೇಲೇ ಗಮನ ಕೇಂದ್ರಿಕೃತವಾಗುತ್ತಿತ್ತು. ಆದರೆ ಈ ಬಾರಿ ಗಮನ ಕೇವಲ ಮೂರು ನಾಲ್ಕು ಜನರ ಮೇಲೆ ಮಾತ್ರ ಹೆಚ್ಚಿದೆ ಎಂದು ಹೇಳಿದ್ದಾರೆ.

''ಬಿಗ್ ಬಾಸ್'' ಅಂದರೆ ವ್ಯಕ್ತಿ ಮತ್ತು ವ್ಯಕ್ತಿತ್ವದ ನಡುವೆ ಸಂಘರ್ಷ. ಎಲ್ಲರದ್ದೂ ಬೇರೆ ಬೇರೆ ವ್ಯಕ್ತಿತ್ವಗಳಿರುತ್ತಾವೆ. ಉದಾಹರಣೆಗೆ ಸಂಗೀತಾ.. ವರ್ತೂರು ಸಂತೋಷ್.. ತುಕಾಲಿ.. ಹೀಗೆ ಇವರೆಲ್ಲರದ್ದು ಒಂದೊಂದು ವ್ಯಕ್ತಿತ್ವ. ಈ ವ್ಯಕ್ತಿತ್ವದ ಹಿಂದೆ ಒಂದೊಂದು ಕಥೆಗಳಿದ್ದವು. ಆದರೆ .. ಇಲ್ಲಿ ಎಲ್ಲರ ವ್ಯಕ್ತಿತ್ವಗಳ ನೈಜ ಅನಾವರಣವಾಗುತ್ತಿಲ್ಲ ಎನ್ನುವುದು ನನ್ನ ಅಭಿಪ್ರಾಯ ಎಂದು ನೀತು ಹೇಳಿದ್ಧಾರೆ.
ಇನ್ನೂ ''ಬಿಗ್ ಬಾಸ್'' ಮನೆಯಲ್ಲಿ ಈ ಬಾರಿ ದಿನನಿತ್ಯ ಕಿರಿಕ್ ನಡೆಯುತ್ತಿದೆ. ಎಲ್ಲರೂ ಪೈಪೋಟಿಗೆ ಬಿದ್ದವರಂತೆ ಕಾಲು ಕೆರೆದುಕೊಂಡು ಜಗಳ ಮಾಡುತ್ತಿದ್ದಾರೆ. ಈ ಕುರಿತು ಕೂಡ ಮಾತನಾಡಿರುವ ನೀತು ನಮ್ಮ ಮನೆ ಕೇವಲ ಜಗಳಕ್ಕೆ ಮಾತ್ರ ಸೀಮಿತವಾಗಿರಲಿಲ್ಲ. ಅಲ್ಲಿ ನಗು ಇತ್ತು. ಭಾವುಕತೆ ಇತ್ತು. ಉಗ್ರಂ ಮಂಜು ಅವರ ಹಾಸ್ಯ ಚಟಾಕಿಗೆ ನಾವೆಲ್ಲ ಬಿದ್ದು ಬಿದ್ದು ನಗಾಡುತ್ತಿದ್ದೆವು ಎಂದು ಹೇಳಿದ್ದಾರೆ. ನನ್ನ ಪ್ರಕಾರ ಈ ಬಾರಿ ಜಗಳ ತುಸು ಹೆಚ್ಚಾಗಿದೆ ಅನ್ಸುತ್ತೆ ಎಂದು ಹೇಳಿದ್ದಾರೆ.

ಇನ್ನುಳಿದಂತೆ ಗಿಲ್ಲಿ ಈ ಬಾರಿ ''ಬಿಗ್ ಬಾಸ್'' ಗೆಲ್ಲುವ ಪ್ರಬಲ ಸ್ಫರ್ಧಿ ಎನ್ನುವುದು ಹಲವರ ಅಭಿಪ್ರಾಯ. ಈ ಕುರಿತು ಕೂಡ ಮಾತನಾಡಿರುವ ನೀತು, ಗಿಲ್ಲಿ ಈ ಬಾರಿ ತುಂಬಾ ಚೆನ್ನಾಗಿ ಆಡ್ತಿದ್ದಾರೆ. ನಿನ್ನೆಯವರೆಗೆ (ನವೆಂಬರ್ 24 ) ರಕ್ಷಿತಾ ಕೂಡ ತುಂಬಾ ಚೆನ್ನಾಗಿ ಆಡ್ತಿದ್ದರು. ಆದರೆ.. ನಿನ್ನೆ ಅವರು ಎಡವಿದರು ಎನ್ನುವ ಭಾವನೆ ನನ್ನದು. ಯಾಕೆಂದರೆ ಗಿಲ್ಲಿಯನ್ನು ನಾಮಿನೇಟ್ ಮಾಡುವ ಅವಶ್ಯಕತೆ ಇರಲಿಲ್ಲ. ಅವಶ್ಯಕತೆ ಎನ್ನುವುದಕ್ಕಿಂತ ಅವರ ಹತ್ತಿರ ಬಲವಾದ ಕಾರಣ ಇರಲಿಲ್ಲ. ಆದರೂ ಕೂಡ ಗಿಲ್ಲಿಯನ್ನು ಟಾರ್ಗೆಟ್ ಮಾಡಿದರು ಎಂದು ಹೇಳಿದ್ದಾರೆ.
ಮುಂದಿನ ದಿನಗಳಲ್ಲಿ ಹೇಗೆ ರಕ್ಷಿತಾ ಆಡುತ್ತಾರೆ ಎನ್ನುವುದನ್ನು ನೋಡಬೇಕಿದೆ ಎಂದು ಹೇಳಿರುವ ನೀತು, ಅಶ್ವಿನಿ ಗೌಡ ಮತ್ತು ಜಾಹ್ನವಿ ಕೂಡ ಚೆನ್ನಾಗಿ ಆಡ್ತಿದ್ದಾರೆ. ಅವರ ಎಫರ್ಟ್ ಕೂಡ ಹಾಕುತ್ತಿದ್ದಾರೆ. ಎಲ್ಲೋ ಒಂದು ಕಡೆ ಅಶ್ವಿನಿ ಮತ್ತು ಜಾಹ್ನವಿ ಅವರಿಂದ ಗಿಲ್ಲಿ ಹೈಲೆಟ್ ಆಗ್ತಿದ್ದಾರೆ ಎಂದು ಕೂಡ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ.
ಇನ್ನೂ ಆಗಲೇ ಹೇಳಿದಂತೆ ಹಳೆಯ ಸ್ಫರ್ಧಿಗಳು ಈ ಬಾರಿಯ ''ಬಿಗ್ ಬಾಸ್'' ಮನೆಗೆ ಹೋಗಿದ್ದಾರೆ. ಆದರೆ ನೀತು ಅಲ್ಲಿ ಇಲ್ಲ. ಈ ಕುರಿತು ಕೇಳಲಾದ ಪ್ರಶ್ನೆಗೆ ಇಲ್ಲ ನಮ್ಮನ್ನು ಸಂಪರ್ಕ ಮಾಡಿಲ್ಲ ಎಂದು ಹೇಳಿರುವ ನೀತು ಹೇಗೂ ರಜತ್ ಹೋಗಿದ್ದಾರೆ. ಅವರನ್ನು ಈ ಬಾರಿ ಕೂಡ ವೈಲ್ಡ್ ಕಾರ್ಡ್ ಸ್ಫರ್ಧಿಯಾಗಿ ಉಳಿಸಿಕೊಂಡರೆ ಕಾರ್ಯಕ್ರಮ ಇನ್ನೂ ರೋಚಕತೆಯಿಂದ ತುಂಬಿರುತ್ತೆ ಎಂದು ಅನ್ಸುತ್ತೆ ಎಂದು ಹೇಳಿದ್ದಾರೆ.


Click it and Unblock the Notifications











