ಅವತ್ತು ದಾದಾ ನಟನೆ ನೋಡಿ ನನ್ನ ತಮಿಳು ಅಸಿಸ್ಟೆಂಟ್ ಅಚ್ಚರಿಗೊಂಡಿದ್ದ, ರಜನಿ ಭಾವುಕರಾಗಿದ್ರು; ಪಿ. ವಾಸು
ಸಾಹಸಸಿಂಹ ವಿಷ್ಣವರ್ಧನ್ ಜೊತೆ ಹೆಚ್ಚು ಸಿನಿಮಾಗಳಲ್ಲಿ ಕೆಲಸ ಮಾಡಿದವರಲ್ಲಿ ಪಿ. ವಾಸು ಕೂಡ ಒಬ್ಬರು. ಇವರಿಬ್ಬರ ಕಾಂಬಿನೇಷನ್ 'ಕಥಾನಾಯಕ' ಚಿತ್ರದಿಂದ ಶುರುವಾಗಿತ್ತು. ತಮಿಳುನಾಡು ಮೂಲಕ ಪಿ. ವಾಸು ಸ್ವತಂತ್ರ ನಿರ್ದೇಶಕರಾಗಿ ಪರಿಚಿತರಾಗಿದ್ದು ಕನ್ನಡ ಸಿನಿಮಾ ಮೂಲಕ ಎನ್ನುವುದು ವಿಶೇಷ. ಬಳಿಕ ತೆಲುಗು, ತಮಿಳಿನಲ್ಲಿ ಅವರು ಸಕ್ಸಸ್ ಕಂಡರು.
ವಿಷ್ಣುವರ್ಧನ್ ಅವರನ್ನು ತಮ್ಮ ಮಾರ್ಗದರ್ಶನ, ಆರಾಧ್ಯದೈವ ಎಂದೇ ಭಾವಿಸುತ್ತಾರೆ ಪಿ. ವಾಸು. ಅವರಿಬ್ಬರ ಒಡನಾಟ ಅಪೂರ್ವವಾದದ್ದು. ಇವತ್ತಿಗೂ ದಾದಾನನ್ನು ವಾಸು ಮಿಸ್ ಮಾಡಿಕೊಳ್ಳುತ್ತಾರೆ. ಫಿಲ್ಮಿಬೀಟ್ ಕನ್ನಡ ಜೊತೆ ವಿಷ್ಣು ಜೊತೆಗಿನ ಸುಂದರ ನೆನಪುಗಳನ್ನು ಅವರು ಹಂಚಿಕೊಂಡಿದ್ದಾರೆ. 'ದಾದಾ' ಬಳಿಕ ವಾಸು ತಮಿಳು ಸಿನಿಮಾಗಳಲ್ಲಿ ಹೆಚ್ಚು ಬ್ಯುಸಿಯಾಗಿಬಿಟ್ಟಿದ್ದರು.

13 ವರ್ಷಗಳ ಬಳಿಕ 'ಹೃದಯವಂತ' ಸಿನಿಮಾ ಮೂಲಕ ಚಂದನವನಕ್ಕೆ ಪಿ. ವಾಸು ಮರಳಿ ಬಂದಿದ್ದರು. ಅದೇ ಸಮಯದಲ್ಲಿ ಒಂದು ಹಾರರ್ ಸಿನಿಮಾ ಮಾಡುವಂತೆ ವಿಷ್ಣು ಸಲಹೆ ನೀಡಿದ್ದರಂತೆ. ಅದನ್ನು ಅವರು ನೆನಪಿಸಿಕೊಂಡಿದ್ದಾರೆ. "ಹೃದಯವಂತ ಸಿನಿಮಾ ಮಾಡುವಾಗ ಹಾರರ್ ಸಿನಿಮಾ ಮಾಡುವಂತೆ ನನಗೆ ಕೇಳಿದ್ರು. ಆಗ ನಾನು 'ಮಣಿ ಚಿತ್ರತ್ತಾಳ್' ಸಿನಿಮಾ ಬಗ್ಗೆ ಹೇಳ್ದೆ. ಆದರೆ ಆ ಚಿತ್ರದಲ್ಲಿ ಕಮರ್ಷಿಯಲ್ ಅಂಶಗಳು ಇಲ್ಲ. ಅದನ್ನು ಸೇರಿಸೋಕೆ ಸ್ವಲ್ವ ಸಮಯ ಬೇಕು ಎಂದು ಕೇಳಿ ಚಿತ್ರಕಥೆ ಸಿದ್ಧಪಡಿಸಿದೆ" ಎಂದಿದ್ದಾರೆ.
"ನಿರ್ಮಾಪಕರು ಯಾರು ಎನ್ನುವುದು ಕನ್ಫರ್ಮ್ ಆಗದೇ ಆ ಸಿನಿಮಾ ಕೆಲಸ ಶುರುವಾಯಿತು. ದ್ವಾರಕೀಶ್ ನಿರ್ಮಾಪಕರಾಗಿ ಕೈ ಜೋಡಿಸಿದರು. ನನ್ನ ಚಿತ್ರಕಥೆಯನ್ನೇ ಬೇರೆ ಭಾಷೆಗಳಿಗೆ ಬಳಸಿಕೊಂಡರು. ರಜನಿಕಾಂತ್ ಜೊತೆ ಸಿನಿಮಾ ಮಾಡೋಣ ಎಂದಾಗ ಅವರು ಭಯವಾಗುತ್ತೆ ಮಾಡೋಕೆ, ಕನ್ನಡ ಸಿನಿಮಾ ನೋಡಿದ್ದೀನಿ ಅಂದ್ರು. 'ಚಂದ್ರಮುಖಿ' ಗೆದ್ದಮೇಲೆ ನನಗೆ ಥ್ಯಾಂಕ್ಸ್ ಹೇಳಿದ್ರು, ನಾನು ವಿಷ್ಣು ಸರ್ಗೆ ಹೇಳ್ಬೇಕು ಸರ್ ಅಂದೆ. ಹಿಂದೂ ಮುಂದೂ ನೋಡದೇ ವಿಷ್ಣು ಸರ್ ಕತೆ ಒಪ್ಪಿ ಮಾಡಿದ್ದಕ್ಕೆ ಈ ಸಿನಿಮಾ ಆಯಿತು ಎಂದು ಹೇಳಿದ್ದಾಗಿ" ವಾಸು ವಿವರಿಸಿದ್ದಾರೆ.
ಅವತ್ತು ವಿಷ್ಣು ಸರ್ ನಟನೆ ನೋಡಿ ನಮ್ಮ ತಮಿಳು ಅಸಿಸ್ಟೆಂಟ್ ಶಾಕ್ ಆಗಿದ್ದ ಎಂದು ಪಿ. ವಾಸು ಮೆಲುಕು ಹಾಕಿದ್ದಾರೆ. "ಆಪ್ತಮಿತ್ರ ಚಿತ್ರದಲ್ಲಿ ವಿಜಯರಾಜೇಂದ್ರ ಬಹದ್ದೂರ್ ಪಾತ್ರವನ್ನು ಸಣ್ಣದಾಗಿ ತೋರಿಸಿದ್ದೆವು. ಅದನ್ನು ತಮಿಳಿನಲ್ಲಿ ವೆಟ್ಟೆಯಾನ್ ಆಗಿ ಮತ್ತಷ್ಟ ಖದರ್ ಆಗಿ ತೋರಿಸಿದ್ದು ಗೊತ್ತೇಯಿದೆ. ರಜನಿಕಾಂತ್ ಲಕ ಲಕ ಲಕ ಎಂದು ಬರ್ತಾರೆ. ಅದನ್ನು 'ಆಪ್ತರಕ್ಷಕ' ಚಿತ್ರದಲ್ಲಿ ಮತ್ತೊಂದು ರೀತಿ ತೋರಿಸಲು ಹೊರಟೆವು. ಮೊದಲ ದಿನ ವಿಜಯರಾಜೇಂದ್ರ ಬಹದ್ದೂರ್ ಪಾತ್ರದಲ್ಲಿ ಬರಬೇಕಿತ್ತು. ಅವತ್ತು ಅವರ ನಟನೆ ಮರೆಯೋಕೆ ಸಾಧ್ಯವಿಲ್ಲ" ಎಂದಿದ್ದಾರೆ.
"ನಾನು ಶಾಟ್ ರೆಡಿ ಅಂದೆ. ನೀವು ತಲೆ ಕೆಡಿಸಿಕೊಳ್ಳಬೇಡಿ ನಾನು ಬರ್ತೀನಿ ಅಂದ್ರು. ಬಳಿಕ ಗೆಟಪ್ ಸಮೇತ ವಿಜಯರಾಜೇಂದ್ರ ಬಹದ್ದೂರ್ ಅವತಾರದಲ್ಲಿ ವಾರೆಯಾಗಿ ಅವರು ನಡೆದು ಬರುವ ಸ್ಟೈಲ್, ಹೌಲಾ ಹೌಲಾ ಎನ್ನುವ ಪರಿ ನೋಡಿ ನನ್ನ ತಮಿಳು ಅಸಿಸ್ಟೆಂಟ್ ಚಪ್ಪಾಳೆ ತಟ್ಟಿದ್ದ. ಅದನ್ನು ನೋಡಿ ಸೆಟ್ನಲ್ಲಿ ಇದ್ದವರೆಲ್ಲಾ ಚಪ್ಪಾಳೆ ತಟ್ಟಿ ಸಂಭ್ರಮಿಸಿದ್ರು. ಅವತ್ತೇ ಸಿನಿಮಾ ಗೆಲ್ತು ಎಂದು ನಾನು ಅಂದುಕೊಂಡಿದ್ದೆ" ಎಂದು ವಾಸು ತಿಳಿಸಿದ್ದಾರೆ.
'ಆಪ್ತರಕ್ಷಕ' ಸಿನಿಮಾ ನೋಡಿ ರಜನಿಕಾಂತ್ ಪ್ರತಿಕ್ರಿಯೆ ಹೇಗಿತ್ತು ಎನ್ನುವುದನ್ನು ಪಿ. ವಾಸು ಮೆಲುಕು ಹಾಕಿದ್ದಾರೆ. "ಅವತ್ತು ಚೆನ್ನೈನ ಸಣ್ಣ ಪ್ರೀವ್ಯೂ ಥಿಯೇಟರ್ನಲ್ಲಿ ಸಿನಿಮಾ ಹಾಕಿ ತೋರಿಸಿದ್ದೆ. ಸಿನಿಮಾ ನೋಡಿ ಸ್ವಲ್ಪ ಹೊತ್ತು ರಜನಿಕಾಂತ್ ಮೌನಕ್ಕೆ ಜಾರಿದ್ರು. ಅಲ್ಲೇ ಬಾಲ್ಕನಿಗೆ ಹೋದ್ರು. ಇದ್ದಕ್ಕಿದ್ದಂತೆ ತಮ್ಮ ಶರ್ಟ್ ಒಳಗೆ ಕೈಹಾಕಿ ಎದೆಮೇಲೆ ಕೈಇಟ್ಟುಕೊಂಡು ವಿಷ್ಣು.. ವಿಷ್ಣು.. ವಿಷ್ಣು ಎಂದು ಒಂದುಕ್ಷಣ ಭಾವುಕರಾಗಿಬಿಟ್ರು. ಸ್ವಲ್ಪ ಹೊತ್ತು ಸುಮ್ಮನಾಗಿಬಿಟ್ರು. ಆಮೇಲೆ ಮಾತನಾಡಿ ಅಬ್ಬಬ್ಬಾ ವಿಷ್ಣು ಸರ್ ಏನ್ ಆಕ್ಟಿಂಗ್ ಮಾಡಿದ್ದಾರೆ ಸರ್ ಎಂದ್ರು. ನಾನು ಮಾಡದ್ದನ್ನು ವಿಷ್ಣು ಮಾಡಿದ್ದಾರೆ ಎನಿಸಿಬಿಟ್ಟಿತ್ತು, ಅವರಿಗೆ ಮಾತ್ರ ಅದು ಸಾಧ್ಯ. ಇಂತಹ ವ್ಯಕ್ತಿ ನಮ್ಮೊಂದಿಗೆ ಈಗ ಇಲ್ಲ ಎಂದಿದ್ರು" ಎಂದು ವಿವರಿಸಿದ್ದಾರೆ.

ಈಗ ಪ್ಯಾನ್ ಇಂಡಿಯಾ ಟ್ರೆಂಡ್ ನಡೀಯಿದೆ. ಮಲ್ಟಿಸ್ಟಾರರ್ ಸಿನಿಮಾಗಳು ಬರ್ತಿವಿ. ಒಂದು ವೇಳೆ ವಿಷ್ಣು ಸರ್ ಇದ್ದಿದ್ದರೆ ರಜನಿಕಾಂತ್ ಜೊತೆ ಸಿನಿಮಾ ಮಾಡುತ್ತಿದ್ದರು. ಈಗ ಬಜೆಟ್ ಕೂಡ ಜಾಸ್ತಿ ಸಿಗುತ್ತೆ, ಬೇರೆ ಬೇರೆ ಇಂಡಸ್ಟ್ರಿ ಕಲಾವಿದರು ಒಟ್ಟಿಗೆ ಸೇರಿ ನಟಿಸುತ್ತಿದ್ದಾರೆ. ನಾನು ಅವರಿಬ್ಬರ ಕಾಂಬಿನೇಷನ್ ಸಿನಿಮಾ ಮಾಡುತ್ತಿದ್ದೆ. ಅಂತಹ ವ್ಯಕ್ತಿತ್ವ ವಿಷ್ಣು ಸರ್ ಅವರದ್ದು. ದಾದಾ ಫೋಟೊಗೆ ಇವತ್ತಿಗೂ ದಿನ ಪೂಜೆ ಮಾಡ್ತೀನಿ ಎಂದು ಪಿ. ವಾಸು ಹೇಳಿದ್ದಾರೆ.
ವಿಷ್ಣು ಸರ್ ತೀರಿಕೊಂಡ ವಿಚಾರ ತಿಳಿದಾಗ ಅಕ್ಷರಶಃ ಆಕಾಶ ಕಳಚಿ ಬಿದ್ದಂತೆ ಆಗಿತ್ತು ಎಂದು ಪಿ. ವಾಸು ಆ ದಿನವನ್ನು ನೆನಪು ಮಾಡಿಕೊಂಡಿದ್ದಾರೆ. "ಅವತ್ತು ಬೆಳಗಿನ ಜಾವ 4.30ರ ಸುಮಾರಿಗೆ ನನಗೆ ವಿಷಯ ಗೊತ್ತಾಯಿತು. ಲ್ಯಾಂಡ್ಲೈನ್ ಫೋನ್ಗೆ ಕಾಲ್ ಬಂತು. ನಮ್ಮ ಪತ್ನಿ ಹೋಗಿ ಹಾಲ್ನಲ್ಲಿ ಫೋನ್ ರಿಸೀವ್ ಮಾಡಿ ಮಾತನಾಡಿದ್ರು, ನನಗೆ ಅಸ್ಪಷ್ಟವಾಗಿ ಅದು ಕೇಳಿಸಿತ್ತು. ಬಳಿಕ ಆಕೆ ಬಂದು ನಿಮಗೆ ಒಂದು ಕಹಿ ಸುದ್ದಿ ಇದೆ ಎಂದಳು. ಆಗ ನಮ್ಮ ತಂದೆಗೆ 80 ವರ್ಷ ವಯಸ್ಸಾಗಿತ್ತು, ಅವ್ರು ತೀರಿಕೊಂಡ್ರಾ? ಎಂದುಕೊಂಡೆ. ನನ್ನ ಪತ್ನಿ ಅಳಲು ಆರಂಭಿಸಿದ್ಲು. ಬಳಿಕ ವಿಷ್ಣು ಸರ್ ನಿಧನರಾದ್ರಂತೆ ಅಂದ್ಲು. ಆ ಸುದ್ದಿ ಕೇಳಿ ನನ್ನ ತಲೆ ಸಿಡಿದಂತೆ ಆಗಿತ್ತು" ಎಂದಿದ್ದಾರೆ.
ಕೂಡಲೇ ನಾನು ಬೆಂಗಳೂರಿಗೆ ಧಾವಿಸಿ ಬಂದೆ. ವಿಷ್ಣುವರ್ಧನ್ ಅವರನ್ನು ಎಲ್ಲರೂ ಸಿಂಹ ಎಂದು ಕರೆಯುತ್ತಿದ್ದರು. ಅವತ್ತು ಮನೆಯಲ್ಲಿ ಸಿಂಹದಂತೆಯೇ ಮಲಗಿದ್ದರು. ಸತ್ತ ಶವದಂತೆ ಅಲ್ಲ. ನಾನು ಶಿವಾಜಿ ಅವರು ತೀರಿಕೊಂಡಾಗ ಅವರ ಪಾರ್ಥೀವ ಶರೀರ ನೋಡಲು ಹೋಗಿದ್ದೆ. ಅವ್ರು ಕೂಡ ಸಿಂಹ ಮಲಗಿದಂತೆ ಕಂಡಿದ್ದರು. ಅದೇ ರೀತಿ ವಿಷ್ಣು ಸತ್ತಮೇಲೆಯೂ ಸಿಂಹದಂತೆ ಇದ್ರು. ವಿಷ್ಣು ಜಾಗವನ್ನು ಯಾರೂ ಭರ್ತಿ ಮಾಡಲು ಸಾಧ್ಯವಿಲ್ಲ. ಅವರನ್ನು ಮಿಸ್ ಮಾಡಿಕೊಳ್ತೀನಿ ಎಂದು ಪಿ. ವಾಸು ನೆನಪಿನ ಆಳಕ್ಕೆ ಜಾರಿದ್ದಾರೆ.
ಅಭಿಮಾನ್ ಸ್ಟುಡಿಯೋದಲ್ಲಿದ್ದ ವಿಷ್ಣು ಸಮಾಧಿ ಧ್ವಂಸ ವಿಚಾರ ಕೇಳಿ ಪಿ. ವಾಸು ಬೇಸರ ವ್ಯಕ್ತಪಡಿಸಿದ್ದಾರೆ. ಸುದೀಪ್ ಅವರು ಕೆಂಗೇರಿ ಬಳಿಕ ವಿಷ್ಣು ಕೇಂದ್ರ ಸ್ಥಾಪಿಸುತ್ತಿದ್ದಾರೆ ಎನ್ನುವ ವಿಚಾರ ಕೇಳಿ ಸಂತಸ ವ್ಯಕ್ತಪಡಿಸಿದ್ದಾರೆ. ವಿಷ್ಣುವರ್ಧನ್ ಅವರ ಅಭಿಮಾನಿ ಸುದೀಪ್ ಒಳ್ಳೆ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಶುಭವಾಗಲಿ ಎಂದು ತಿಳಿಸಿದ್ದಾರೆ.
'ಆಪ್ತರಕ್ಷಕ' ಬಳಿಕ 'ಆರಕ್ಷಕ', 'ದೃಶ್ಯ', ಶಿವಲಿಂಗ, 'ಆಯುಷ್ಮಾನ್ಭವ' ಹಾಗೂ 'ದೃಶ್ಯ'-2 ಸಿನಿಮಾಗಳನ್ನು ಪಿ. ವಾಸು ಕನ್ನಡದಲ್ಲಿ ನಿರ್ದೇಶನ ಮಾಡಿದ್ದಾರೆ. ಕಳೆದ 2 ವರ್ಷದಿಂದ ಯಾವುದೇ ಹೊಸ ಸಿನಿಮಾ ಕೈಗೆತ್ತಿಕೊಂಡಿಲ್ಲ. ಒಂದಷ್ಟು ಕತೆಗಳನ್ನು ಸಿದ್ಧಪಡಿಸಿಕೊಂಡಿದ್ದಾರೆ. ಮತ್ತೆ ಕನ್ನಡದಲ್ಲಿ ಸಿನಿಮಾ ನಿರ್ದೇಶನ ಮಾಡುವ ಅವಕಾಶ ಸಿಕ್ಕರೆ ಮಾಡಲು ಉತ್ಸುಕರಾಗಿದ್ದಾರೆ. 'ದೃಶ್ಯ- 3' ಬಗ್ಗೆ ಸದ್ಯಕ್ಕೆ ಏನೂ ಹೇಳಲು ಸಾಧ್ಯವಿಲ್ಲ ಎಂದು ಹಿಂದೆ ತಿಳಿಸಿದ್ದರು.


Click it and Unblock the Notifications











