Don't Miss!
- Technology ಜಿಯೋ ನಿವ್ವಳ ಲಾಭದಲ್ಲಿ ಭರ್ಜರಿ ಹೆಚ್ಚಳ: ಇಲ್ಲಿದೆ ವಿವರ
- Lifestyle ಉಪ್ಪು ನೀರಿನಿಂದ ಮುಖ ತೊಳೆದರೆ ಆಗುವ ಲಾಭವೇನು.? ಇದರ ಅನಾನುಕೂಲವೇನು ಗೊತ್ತಾ?
- Finance ಬೆಂಗಳೂರಿಗೆ ಪ್ರತ್ಯೇಕ ನ್ಯಾವಿಗೇಟಿಂಗ್ ಅಪ್ಲಿಕೇಶನ್, ಟೆಕ್ ಕಂಪೆನಿಯೊಂದಿಗೆ ಒಪ್ಪಂದ
- Sports IPL 2024: ಆರ್ಸಿಬಿ ಕಪ್ ಗೆಲ್ಲದಿರಲು ಅತಿಯಾದ ಪಾರ್ಟಿ ಕಾರಣವೇ?; ರೈನಾ ಬಿಚ್ಚಿಟ್ಟ ಸತ್ಯ
- News Bengaluru Heat Wave: ಮಳೆಯ ನಡುವೆ ಮತ್ತೆ ದಾಖಲೆಯ ಗರಿಷ್ಠ ತಾಪಮಾನ: ಶಾಖದ ಅಲೆ ಮುನ್ಸೂಚನೆ
- Automobiles Ola: ಓಲಾದಿಂದ ಕಡಿಮೆ ಬೆಲೆಯ 'ಎಸ್1 ಎಕ್ಸ್' ಎಲೆಕ್ಟ್ರಿಕ್ ಸ್ಕೂಟರ್ ಬಗ್ಗೆ ದೊಡ್ಡ ಘೋಷಣೆ.. ಏನದು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಬಾಲಿವುಡ್ ನಿಂದ ಆಫರ್ ಪಡೆದ 'ಪಂಚತಂತ್ರ' ನಟಿ ಸೊನಾಲ್
ಯೋಗರಾಜ್ ಭಟ್ಟರ ನಿರ್ದೇಶನದ 'ಪಂಚತಂತ್ರ'ದ ಹಾಡುಗಳು ಒಂದೊಂದಾಗಿ ಬಿಡುಗಡೆಯಾಗುತ್ತಲೇ ಸೊನಾಲ್ ಮೊಂತೇರೋ ಎನ್ನುವ ನಾಯಕಿಯೂ ಜನಪ್ರಿಯತೆ ಪಡೆಯತೊಡಗಿದ್ದಾರೆ. ಶೃಂಗಾರದ ಹೊಂಗೆಮರ ಅಂತ ಹಾಡು ಹೇಳಿದ್ದ ಈ ಹುಡುಗಿ ಈಗ ಬಾಲಿವುಡ್ ನಿಂದ ಅವಕಾಶ ಪಡೆದಿದ್ದಾರೆ.
ತಮ್ಮ ಬಾಲ್ಯದಿಂದ ಹಿಡಿದು 'ಪಂಚತಂತ್ರ' ಸಿನಿಮಾದ ಬಗೆಗಿನ ಕೆಲ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಇದೇ ವಾರ ತೆರೆಕಾಣುತ್ತಿರುವ 'ಪಂಚತಂತ್ರ'ದ ನಾಯಕಿಯ ಜೊತೆಗೆ ಫಿಲ್ಮಿಬೀಟ್ ನಡೆಸಿದ ಮಾತುಕತೆ ಇದು.
ಯೋಗರಾಜ್ ಭಟ್ಟರ ಅಡ್ಡಕ್ಕೆ ಬಂದ ಅಭಿಸಾರಿಕೆ ಈಕೆ
"ಪಂಚತಂತ್ರ'ಕ್ಕೂ ಮೊದಲು ನೀವು ಸಾಕಷ್ಟು ಚಿತ್ರಗಳಲ್ಲಿ ನಟಿಸಿದ್ದೀರಿ. ಆ ಬಗ್ಗೆ ಹೇಳಿ.
ತುಳು ಚಿತ್ರರಂಗದಿಂದ ನಾನು ಸಿನಿಮಾ ಕ್ಷೇತ್ರಕ್ಕೆ ಎಂಟ್ರಿ ಕೊಟ್ಟೆ.'ಎಕ್ಕಸಕ', "ಜೈ ತುಳುನಾಡು' 'ಪಿಲಿಬೈಲ್ ಯಮುನಕ್ಕ' ಚಿತ್ರದ ಬಳಿಕ ಕನ್ನಡದಲ್ಲಿ "ಅಭಿಸಾರಿಕೆ,' ಪ್ರಥಮ್ ಜೊತೆಗೆ "ಎಂಎಲ್ಎ' ಚಿತ್ರಗಳಲ್ಲಿ ನಟಿಸಿದ್ದೇನೆ. ಮದುವೆ ದಿಬ್ಬಣ' ಎನ್ನುವ ಕಲಾತ್ಮಕ ಚಿತ್ರದಲ್ಲಿಯೂ ಅಭಿನಯಿಸಿದ್ದೇನೆ. ನಾನು ನಟಿಸಿರುವ ಸ್ಪರ್ಶ ರೇಖಾ ನಿರ್ಮಾಣದ "ಡೆಮೋ ಪೀಸ್' ಚಿತ್ರ ಬಿಡುಗಡೆಯಾಗಬೇಕಿದೆ. ಆದರೆ ಯೋಗರಾಜ್ ಭಟ್ಟರಂಥ ದೊಡ್ಡ ನಿರ್ದೇಶಕರ ಚಿತ್ರ ಸಿಕ್ಕಿರುವುದು ಇದೇ ಪ್ರಥಮ.
`ಪಂಚತಂತ್ರ' ಚಿತ್ರಕ್ಕೆ ಆಯ್ಕೆಯಾದಾಗ ಹೇಗೆ ಅನಿಸಿತು?
ಯೋಗರಾಜ್ ಭಟ್ಟರ ಸಿನಿಮಾ ಎಂದಾಗ, ಹಿರಿಯ ನಿರ್ದೇಶಕರ ಚಿತ್ರೀಕರಣ ಹೇಗಿರುತ್ತದೇನೋ ಎಂಬ ಆತಂಕದಿಂದಲೇ ಒಪ್ಪಿಕೊಂಡಿದ್ದೆ. ಆದರೆ ಅಭಿನಯಿಸಲು ತುಂಬ ಕಂಫರ್ಟೆಬಲ್ ಜೋನ್ ನೀಡಿದ್ದರು. ಅವರಿಂದ ಕಲಾವಿದೆಯಾಗಿ ತುಂಬಾನೇ ಕಲಿತುಕೊಂಡಿದ್ದೇನೆ. "ಶೃಂಗಾರದ ಹೊಂಗೆ ಮರ' ಹಾಡು ಬಿಡುಗಡೆಯಾದ ಬಳಿಕವಂತೂ ತುಂಬ ಒಳ್ಳೆಯ ಆಫರ್ ಗಳು ಬರತೊಡಗಿವೆ.
ಕನ್ನಡದವರಾಗಿದ್ದು ನಿಮ್ಮ ಹೆಸರು ಯಾಕೆ ಇಷ್ಟು ವಿಭಿನ್ನವಾಗಿದೆ?
ನನ್ನದು ಮಂಗಳೂರಲ್ಲಿರುವ ಕ್ರಿಶ್ಚಿಯನ್ ಕುಟುಂಬ. ಕನ್ನಡ ನನಗೆ ಚೆನ್ನಾಗಿ ಗೊತ್ತು. ಈಗ ಬೆಂಗಳೂರು ಕನ್ನಡ ಕೂಡ ಕಲಿತುಕೊಂಡಿದ್ದೇನೆ. ಮೊಂತೆರೋ ಎನ್ನುವುದು ಫ್ಯಾಮಿಲಿ ನೇಮ್. ಸೊನಾಲ್ ನಂಥ ಹೆಸರುಗಳು ನಮ್ಮಲ್ಲಿ ಸಾಮಾನ್ಯ. ಮನೆಯಲ್ಲಿ ನನ್ನನ್ನು ಸೋನು ಎಂದು ಕರೆಯುತ್ತಾರೆ.
ನಿಮ್ಮ ಬಾಲ್ಯದ ದಿನಗಳ ಬಗ್ಗೆ ಹೇಳಿ ?
ಮಂಗಳೂರಿನ ಸೈಂಟ್ ಮೇರೀಸ್ ಸ್ಕೂಲ್ ನಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಮಾಡಿದೆ. ಶಾಲಾ ದಿನಗಳಲ್ಲೇ ಹಾಡಿನ ಸ್ಪರ್ಧೆಗಳ ಮೂಲಕ ರಾಜ್ಯ ಮಟ್ಟದ ತನಕ ಭಾಗವಹಿಸಿದ್ದೆ. ನನೆಗೆ ಹಾಡುವುದನ್ನು ಕಲಿಸಿಕೊಟ್ಟಿದ್ದು ತಂದೆ ವಿನ್ಸೆಂಟ್ ಮೊಂತೆರೋ. ಆದರೆ ಅವರಂತೆ ನಾನು ಕೂಡ ಶಾಸ್ತ್ರೀಯವಾಗಿ ಸಂಗೀತ ಕಲಿತಿಲ್ಲ. ನಾನು ಮೂರನೇ ತರಗತಿಯಲ್ಲಿದ್ದಾಗಲೇ ತಂದೆಯನ್ನು ಕಳೆದುಕೊಂಡೆ.
ಮುಂದೆ ಸಂಗೀತವನ್ನು ಮುಂದುವರಿಸಬೇಕು ಅನಿಸಲಿಲ್ಲವೇ?
ನಾನು ತುಳು ಚಿತ್ರಗಳಾದ "ಪಿಲಿಬೈಲು ಯಮುನಕ್ಕ' ಮತ್ತು "ಮೈ ನೇಮ್ ಈಸ್ ಅಣ್ಣಪ್ಪ' ಚಿತ್ರಗಳಲ್ಲಿ ಖುದ್ದಾಗಿ ಹಾಡಿದ್ದೇನೆ. ವೈಯಕ್ತಿಕವಾಗಿ ಹೇಳುವುದಾದರೆ ನನಗೆ ಹಾಡು, ಸಂಗೀತ, ನಟನೆ ಯಾವುದರಲ್ಲಿಯೂ ಆಸಕ್ತಿ ಇರಲಿಲ್ಲ. ತಂದೆ ತಾಯಿಯ ಪ್ರೋತ್ಸಾಹದಿಂದ ಎಲ್ಲವನ್ನೂ ಬೆಳೆಸಿಕೊಂಡೆ.
ಹಾಗಾದರೆ ನಿಮ್ಮ ವೈಯಕ್ತಿಕ ಆಸಕ್ತಿ ಏನಿತ್ತು?
ನನಗೆ ಎಲ್ಲಕ್ಕಿಂತ ನಾ ಮಾಡುತ್ತಿದ್ದ ಕ್ಲಿನಿಕಲ್ ಸೈಕಾಲಜಿ ಕೋರ್ಸ್ ಅನ್ನು ಕಂಪ್ಲೀಟ್ ಮಾಡಬೇಕೆಂಬ ಆಸೆಯಿತ್ತು. ಆದರೆ ಮಾಡೆಲಿಂಗ್ ಅಂದರೆ ಉತ್ಸಾಹ ಇತ್ತು. ಕಾಲೇಜ್ ದಿನಗಳಲ್ಲೇ ಮಾಡೆಲಿಂಗ್ ಪಾಲ್ಗೊಂಡು ಮಿಸ್ ಬ್ಯೂಟಿಫುಲ್ ಸ್ಮೈಲ್ ಮಂಗಳೂರು ಟೈಟಲ್ ವಿನ್ನರ್ ಆಗಿದ್ದೆ. ಮಿಸ್ ಕೊಂಕಣ್ ವಲ್ಡ್ ಫೊಟೋಜೆನಿಕ್ ಆದಾಗ ಒಂದು ಕೊಂಕಣಿ ಆಲ್ಬಮ್ ಹಾಡಲ್ಲಿಯೂ ಕಾಣಿಸಿಕೊಂಡಿದ್ದೆ. 'ಎಕ್ಕಸಕ' ಚಿತ್ರದ ಬಳಿಕ ಸಿನಿಮಾರಂಗಕ್ಕೆ ಗುಡ್ಬೈ ಹೇಳುವುದಾಗಿ ತಾಯಿಯಲ್ಲಿಯೂ ಹೇಳಿದ್ದೆ. ಆದರೆ ಆ ಚಿತ್ರಕ್ಕೆ ಸಿಕ್ಕ ಯಶಸ್ಸು, ನನಗೆ ತಂದು ಕೊಟ್ಟಂಥ ಜನಪ್ರಿಯತೆ ನನ್ನ ಆಸಕ್ತಿಯನ್ನೇ ಬದಲಾಯಿಸುವಂತೆ ಮಾಡಿತು.
ಈಗ ನಿಮ್ಮ ತಾಯಿ ಏನು ಹೇಳುತ್ತಾರೆ?
ಅವರು ಖುಷಿಯಾಗಿದ್ದಾರೆ. ನಾವು ಮೂರು ಜನ ಹೆಣ್ಣು ಮಕ್ಕಳಲ್ಲಿ ಯಾರಾದರೊಬ್ಬರನ್ನು ಸಿನಿಮಾ ನಟಿ ಮಾಡಬೇಕು ಎನ್ನುವುದು ಅವರ ಆಕಾಂಕ್ಷೆಯಾಗಿತ್ತು. ನನಗೆ ಶೆರೋನ್ ಮತ್ತು ಶೆರಿಲ್ ಎಂಬ ಅವಳಿ ಜವಳಿ ಅಕ್ಕಂದಿರಿದ್ದಾರೆ. ಒಬ್ಬಾಕೆಯನ್ನು ಕೊಂಕಣಿ ಧಾರಾವಾಹಿಗೆ ನಾಯಕಿಯಾಗಿಸುವಲ್ಲಿ ಅಮ್ಮ ಯಶಸ್ವಿಯಾಗಿದ್ದರು. ಇದೀಗ ನಾನು ಚಿತ್ರನಟಿಯಾಗಿರುವುದಂತೂ ಅವರಿಗೆ ಮಾತ್ರವಲ್ಲ ಈಗ ನನಗೂ ಖುಷಿ ತಂದಿದೆ.
ನಿಮಗಿದ್ದಂಥ ಮಾಡೆಲಿಂಗ್ ಆಸಕ್ತಿ ಮುಂದುವರಿದಿದೆಯಾ ಹೇಗೆ?
ಹೌದು! ನಾನೀಗ "ಪ್ಯಾಷನ್ ಎಬಿಸಿಡಿ' ಎನ್ನುವ ಸಂಸ್ಥೆಯ ಮೂಲಕ ಸೌಂಧರ್ಯ ಸ್ಪರ್ಧೆಗಳನ್ನು ನಡೆಸುತ್ತಿದ್ದೇನೆ. ಮಂಗಳೂರು ಮೂಲದ ಚರಣ್ ಸುವರ್ಣ ಜೊತೆಗೆ ಸೇರಿಕೊಂಡು ಮುಂಬೈನಲ್ಲಿ ಸಕ್ರಿಯಗೊಳಿಸಿರುವ ಈ ಸಂಸ್ಥೆಯಲ್ಲಿ "ಮಿಸ್ ಇಂಡಿಯಾ, "ಮಿಸ್ಟರ್ ಇಂಡಿಯಾ ಪೇಜೆಂಟ್' ನಡೆಸಿಕೊಡುತ್ತೇನೆ. ಈಗಾಗಲೇ ಮೂವತ್ತರಷ್ಟು ಶೋಗಳಿಗೆ ಡೈರೆಕ್ಟರ್ ಆಗಿದ್ದೇನೆ. ಇತ್ತೀಚೆಗಷ್ಟೇ ಮುಂಬೈನ ಲೊನಾವಾಲದಲ್ಲಿ ‘ಮಿಸ್ಟರ್ ಇಂಡಿಯಾ' ಕಾರ್ಯಕ್ರಮ ಆಯೋಜಿಸಿದ್ದೆವು. ಸದ್ಯದಲ್ಲೇ 'ವಲ್ಡ್ ಸುಪರ್ ಮಾಡೆಲ್' ಎನ್ನುವ ಅಂತಾರಾಷ್ಟ್ರೀಯ ಪೇಜೆಂಟ್ ಅನ್ನು ಮಲೇಷ್ಯಾದಲ್ಲಿ ಮಾಡಲಿದ್ದೇನೆ.
ನಿಮ್ಮಂತೆ ಚಿತ್ರರಂಗಕ್ಕೆ ಪ್ರವೇಶಿಸುವವರಿಗೆ ನೀವು ಹೇಳಬಯಸುವುದೇನು?
ನಿಮ್ಮ ಆಸಕ್ತಿ ಏನೇ ಇರಲಿ, ಮೊದಲು ತಂದೆ ತಾಯಿಯ ಮಾತಿಗೆ ಗೌರವ ನೀಡಿ. ನಿಮ್ಮ ಆಯ್ಕೆ ಸಿನಿಮಾರಂಗವೇ ಆಗಿದ್ದರೆ ಯಾಕೆ ಆರಿಸಿಕೊಂಡಿದ್ದೀರಿ? ನಿಮ್ಮ ನಿರೀಕ್ಷೆಗಳೇನು? ಅವುಗಳು ಫಲಿಸದಿದ್ದರೆ ಮುಂದೇನು ಎನ್ನುವ ಬಗ್ಗೆಯೂ ಅವರಲ್ಲಿ ತಿಳಿಸಿ. ಒಂದು ಅವಕಾಶ ಯಾವ ಪೋಷಕರೂ ನೀಡದೇ ಇರಲಾರರು. ಅದನ್ನು ಪ್ರಾಮಾಣಿಕವಾಗಿ ಬಳಸಿಕೊಳ್ಳಿ. ನಿಮ್ಮ ಬಗ್ಗೆ ಭರವಸೆ ಬಂದರೆ ಮನೆ ಮಂದಿಯೂ ನಿಮ್ಮ ಆಸಕ್ತಿಯನ್ನು ಪ್ರೋತ್ಸಾಹಿಸುತ್ತಾರೆ. ಇಲ್ಲವಾದರೆ ಅವರು ಪ್ರೋತ್ಸಾಹಿಸುವ ರಂಗದಲ್ಲಿ ನಿಮ್ಮ ಆಸಕ್ತಿಯನ್ನು ಬೆಳೆಸಿಕೊಳ್ಳಿ ಎಂದು ಹೇಳುತ್ತೇನೆ.
ಚಿತ್ರರಂಗದ ಹಿನ್ನೆಲೆ ಇಲ್ಲದೆ ಬರುವ ಯುವತಿಯರಿಗೆ ಸಿನಿಮಾ ಕ್ಷೇತ್ರ ಸೇಫ್ ಅಲ್ಲ ಎನ್ನುವ ಮಾತಿಗೆ ನಿಮ್ಮ ಅಭಿಪ್ರಾಯ ಏನು?
ಯಾವುದೇ ಕ್ಷೇತ್ರ ಕೂಡ ಯುವತಿಯರ ಹಾದಿ ತಪ್ಪಿಸಲು ಹಲವಾರು ಅವಕಾಶಗಳನ್ನು ನೀಡುತ್ತದೆ. ಆದರೆ ಇಲ್ಲಿ ಕೂಡ ನಾನು ನನ್ನ ತಾಯಿಯ ಮಾತನ್ನು ನೆನಪಿಸಿಕೊಳ್ಳಲು ಬಯಸುತ್ತೇನೆ. "ನಮ್ಮ ವರ್ತನೆ ಹೇಗಿರುತ್ತದೆಯೋ, ಅದಕ್ಕೆ ತಕ್ಕಂತೆ ಇತರರ ಪ್ರತಿಕ್ರಿಯೆ ಇರುತ್ತದೆ. ಯಾರೇ ಆಗಲೀ, ನಮ್ಮ ಮೇಲೆ ಒತ್ತಡ ಹೇರುವ ಅವಕಾಶವನ್ನು ನಾವು ನೀಡಬಾರದು. ಅಂಥ ಒತ್ತಡದಲ್ಲಿ ಕೆಲಸ ಮಾಡುವುದಕ್ಕಿಂತ, ಆ ಕೆಲಸವನ್ನು ಬಿಡುವುದೇ ಉತ್ತಮ ಎನ್ನುವ ನಿರ್ಧಾರ ಮಾಡಬಹುದು.
ಹೊಸದಾಗಿ ಬರುತ್ತಿರುವ ಆಫರ್ ಗಳ ಬಗ್ಗೆ ಹೇಳಿ?
ಹಿಂದಿಯಲ್ಲಿ ಸೂಪರ್ ಹಿಟ್ ಆಗಿದ್ದ 'ಸಾಜನ್ ಚಲೇ ಸಸುರಾಲ್' ಸಿನಿಮಾದ 2ನೇ ಭಾಗಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದೇನೆ!. ಆ ಚಿತ್ರ ಹಿಂದೆ ಕನ್ನಡದಲ್ಲಿ "ಗಡಿಬಿಡಿ ಗಂಡ' ಎಂದು ರಿಮೇಕ್ ಮಾಡಿದ್ದು ನೆನಪಿರಬಹುದು. ಅದರ ಎರಡನೇ ಭಾಗವಾಗಿರುವ ಕಾರಣ ಕುತೂಹಲ ಹೆಚ್ಚಿದೆ. ಹಾಗಂತ ಬಾಲಿವುಡ್ ನಲ್ಲೇ ಬೀಡು ಬಿಡುವ ಕನಸಿಲ್ಲ. ಭಾಷೆ ಯಾವುದಾದರೂ ಪರವಾಗಿಲ್ಲ, ಜನ ಮೆಚ್ಚುವಂಥ ಚಿತ್ರಗಳಲ್ಲಿ ನಟಿಸುವುದು ಮುಖ್ಯ ಎನ್ನುವ ಧೋರಣೆ ನನ್ನದು.