ಪಾಪಾ ಪಾಂಡು ನನ್ನ ಜೀವನ ಬದಲಿಸಿದ ಧಾರಾವಾಹಿ: ಶ್ರುತಿ ರಮೇಶ್
ಪಾಪಾ ಪಾಂಡು ಎಂಬ ಸೀರಿಯಲ್ ಹೆಸರು ಕೇಳಿದರೆ ಸಾಕು ಮೊಗದಲ್ಲಿ ಮಂದಹಾಸ ಹಾಗೆಯೇ ಮೂಡುತ್ತದೆ. ದಶಕಗಳ ಇತಿಹಾಸವಿರುವ ಈ ಸೀರಿಯಲ್ ಈಗ ಹೊಸ ಮೆರಗಿನೊಂದಿಗೆ ಕಿರುತರೆಯಲ್ಲಿ ಪ್ರಸಾರವಾಗುತ್ತಿದೆ. ಹಳೆಯ ಹಾಗೂ ಹೊಸ ಕಲಾವಿದರ ಸಮಾಗಮದೊಂದಿಗೆ ಇನ್ನು ನಗೆ ಜರ್ನಿ ಮುಂದುವರೆಯುತ್ತಲೇ ಇದೆ.
ಡೈರಕ್ಟರ್ ಡೈಲಾಗ್ ಕೊಡಬಹುದು, ಆದರೆ ಅಭಿನಯ ಮಾಡಿಯೇ ಮೋಡಿ ಮಾಡಬೇಕು. ಅಂತಹ ಕಲಾವಿದರು ಈ ನಗುವಿನ ಸೀರಿಯಲ್ ಗೆ ಬೇಕೇ ಬೇಕು. ಅವರಲ್ಲಿ ಒಬ್ಬರು ಮಲೆನಾಡಿನ ಮುದ್ದು ಹುಡುಗಿ ಶೃತಿ ರಮೇಶ್ ಅಲಿಯಾಸ್ ಪಾಪಾ ಪಾಂಡು ನಿಮ್ಮಿ.
ಪಾಂಡುವಿನ ಸಾರಥಿ ಸಿಹಿ-ಕಹಿ ಚಂದ್ರು ಕಲಾವಿದರನ್ನು ಆಯ್ಕೆ ಮಾಡುವಲ್ಲಿ ಕಾಳಜಿ ವಹಿಸಿ ಹೆಕ್ಕುತ್ತಾರೆ ಎಂಬುದಕ್ಕೆ ಶೃತಿ ಸಾಕ್ಷಿ. ಶೃತಿ ರಮೇಶ್ ಓದಿದ್ದು ಇಂಜಿನಿಯರಿಂಗ್. ಆದರೆ ಮಾಡುತ್ತಿರುವುದು ಮಾತ್ರ ನಗಿಸುವ ಕೆಲಸ. ಶೃತಿಗೆ ಪಾಪಾ ಪಾಂಡವಿನ ಅವಕಾಶ ಸಿಕ್ಕಿದ್ದು ಹೇಗೆ ? ಮುಂದಿನ ಗುರಿಯೇನು ಎಂಬುದನ್ನು ಫಿಲ್ಮಿಬೀಟ್ ತಂಡದೊಂದಿಗೆ ಹಂಚಿಕೊಂಡಿದ್ದು ಹೀಗೆ. ಮುಂದೆ ಓದಿ....

ನನಗೆ ಇದು ಪಾಪಾ ಪಾಂಡು ಧಾರಾವಾಹಿ ಎಂದು ಗೊತ್ತಿರಲಿಲ್ಲ
ನಾನು ಈ ಹಿಂದೆ ಐದು ಸೀರಿಯಲ್ ನಲ್ಲಿ ಅಭಿನಯಿಸಿದ್ದೆ. ಆದರೆ ಅದಕ್ಕೊಂದು ತಿರುವು ಕೊಟ್ಟಿದ್ದು ಪಾಪಾಪಾಂಡು. ಈ ಹಿಂದೆ ಸತ್ಯಂ ಶಿವಂ ಸುಂದರಂ, ಸುಬ್ಬಲಕ್ಷ್ಮೀ ಸಂಸಾರ, ಶಾಂತಂ ಪಾಪಂ, ಬಿಳಿ ಹೆಂಡ್ತಿ, ಮಾನಸ ಸರೋವರ ಹೀಗೆ ಕೆಲವು ಸೀರಿಯಲ್ ನಲ್ಲೂ ಸಣ್ಣ ಪಾತ್ರಗಳಲ್ಲಿ ಹಾಗೂ ಕೆಲವು ಶಾರ್ಟ್ ಮೂವಿಯಲ್ಲಿ ಅಭಿನಯಿಸಿದ್ದೆ. ನಂತರದ ದಿನದಲ್ಲಿ ಕಾಮಿಡಿ ಸೀರಿಯಲ್ ಗೆ ಆಡಿಷನ್ ನಡೆಯುತ್ತಿದೆ ಎಂದು ಗೊತ್ತಾಯಿತು. ಹಾಗೆಯೇ ಅಪ್ಲೈ ಮಾಡಿದೆ, ಆಯ್ಕೆಯಾದೆ. ಅಲ್ಲಿಯವರೆಗೂ ಅದು ಪಾಪಾ ಪಾಂಡು ಸೀರಿಯಲ್ ಎಂದು ಗೊತ್ತಿರಲಿಲ್ಲ.

ನನ್ನ ಈ ಬೆಳವಣಿಗೆಗ ಅಪ್ಪನೇ ಕಾರಣ
ನಾನು ಹುಟ್ಟಿ ಬೆಳೆದದ್ದು ಎಲ್ಲಾ ತರೀಕೆರೆ, ಶಿವಮೊಗ್ಗದಲ್ಲಿ. ತಂದೆ ರಮೇಶ್, ತಾಯಿ ಅಮೃತಾ, ಅಕ್ಕ ಶ್ವೇತಾ ನನ್ನ ಕುಟುಂಬ. ಬೆಂಗಳೂರಿನಲ್ಲಿ ಸಿವಿಲ್ ಇಂಜಿನಿಯರಿಂಗ್ ಓದುವ ವೇಳೆ ಸಾಂಸ್ಕೃತಿಕ ಕಾರ್ಯಕ್ರಮ, ರ್ಯಾಂಪ್ ವಾಕ್ ನಲ್ಲಿ ಭಾಗವಹಿಸುತ್ತಿದೆ. ಹಾಗೆಯೇ ಶಾರ್ಟ್ ಮೂವಿ ಆಫರ್ ಸಹ ಬಂತು. ನಾನು ಇಂಜಿನಿಯರಿಂಗ್ ಮುಗಿಯುವ ವೇಳೆಗೆ ನನಗೆ ಕ್ಯಾಂಪಸ್ ಸೆಲೆಕ್ಷನ್ ಸಹ ಆಯಿತು. ಆದರೆ ಅಪ್ಪನ ಸಲಹೆ ಮೇರೆಗೆ ನಾನು ಸೀರಿಯಲ್ ಗೆ ಬಂದೆ. ಇದು ನನಗೂ ಇಷ್ಟ ಇತ್ತು ಕೂಡ. ನಾನು ಸಿಹಿಕಹಿ ಚಂದ್ರುರವರ ಸಾರಥ್ಯದಲ್ಲಿ ಕೆಲಸ ಮಾಡುತ್ತಿದ್ದೇನೆ ಎಂದಾಗ ನನ್ನಪ್ಪ ಅಮ್ಮ ಸಂತೋಷಪಟ್ಟರು. ಅಪ್ಪ ನನಗೆ ತುಂಬಾನೇ ಸಪೋರ್ಟ್ ಮಾಡುತ್ತಾರೆ.

ನನಗೆ ಯಾವ ರಂಗಭೂಮಿ ಹಿನ್ನಲೆ ಇಲ್ಲ
ಮೊದ ಮೊದಲು ಈ ಬ್ರಾಂಡ್ ಇರುವ ಧಾರಾವಾಹಿಯಲ್ಲಿ ಅಭಿನಯಿಸಲು ಭಯವಿತ್ತು. ಆದರೆ ನನ್ನನ್ನು ಇಲ್ಲಿನ ತಂಡ ಹೊಸಬಳೆಂದು ಭಾವಿಸಲೇ ಇಲ್ಲ. ನನಗೆ ಯಾವುದೇ ರಂಗಭೂಮಿ ಹಿನ್ನೆಲೆ ಸಹ ಇಲ್ಲ. ಆದರೆ ನನ್ನೊಂದಿಗೆ ನಟಿಸುವ ಪ್ರತಿಯೊಬ್ಬರು ರಂಗಭೂಮಿಯಲ್ಲಿ ಪಳಗಿದವರು. ಸಿಹಿ-ಕಹಿ ಎಂಬ ದೊಡ್ಡ ಪ್ರೊಡಕ್ಷನ್ ನಲ್ಲಿ ಕೆಲಸ ಮಾಡುವುದು ಒಂದು ಸಾಧನೆ. ಅದರಲ್ಲೂ ಚಿದಾನಂದ್ ಸರ್, ಶಾಲಿನಿ ಮೇಡಂ ತುಂಬಾ ಅಭಿನಯದ ಬಗ್ಗೆ ತಿಳಿಸಿ ಹೇಳುತ್ತಾರೆ. ಅವರಿಂದನೇ ನಾನಿಷ್ಟು ಕಲಿತಿದ್ದೇನೆ ಹಾಗೂ ಕಲಿಯುತ್ತಿದ್ದೇನೆ. ಅವರು ನನ್ನನ್ನು ಕುಟುಂಬದ ಒಬ್ಬಳಂತೆ ಭಾವಿಸುತ್ತಾರೆ ಎಂದು ಭಾವುಕರಾದರು.

ನಿವೇದಿತಾಗೌಡರನ್ನು ನಾನು ಭೇಟಿಯಾಗಿಲ್ಲ
ಕೆಲವು ಬಾರಿ ನನ್ನ ಕ್ಯಾರೆಕ್ಟರ್ ಕಂಡು ನಿವೇದಿತಾ ಗೌಡ ಎಂದು ಹೇಳಿದ್ದುಂಟು. ಈ ಪಾತ್ರ ಹಾಗೆಯೇ ಇದೆ ಕೂಡ. ನಾನು ಇದುವರೆಗೂ ಅವರನ್ನು ಭೇಟಿ ಸಹ ಆಗಿಲ್ಲ. ಅವರು ಒಂದು ಬ್ರಾಂಡ್ ಕ್ರಿಯೇಟ್ ಮಾಡಿದ್ದರು. ಅಲ್ಲದೇ ಚಂದ್ರು ಸರ್ ಗೂ ಆ ತರಹದ ಪಾತ್ರ ಇಷ್ಟವಾಯಿತು. ಆದರೆ ಧಾರಾವಾಹಿಯಲ್ಲಿ ಯಾರನ್ನೂ ಅನುಕರಣೆ ಮಾಡಿಲ್ಲ. ನಾನು ಇದುವರೆಗೂ ಅವರನ್ನು ಎದುರಿಗೂ ಸಹ ನೋಡಿಲ್ಲ. ಮೊದ-ಮೊದಲು ಈ ಪಾತ್ರ ಜನರಿಗೆ ಇಷ್ಟವಾಗುವುದಿಲ್ಲ ಎಂದುಕೊಂಡಿದ್ದರು ಚಂದ್ರು ಸರ್. ಆದರೆ ಜನ ಈ ಪಾತ್ರವನ್ನು ಪ್ರೀತಿಸುತ್ತಿದ್ದಾರೆ ಎಂದರು.

ಸಣ್ಣ ಮಕ್ಕಳಿಗೂ ನಿಮ್ಮಿ ಪಾತ್ರ ಇಷ್ಟವಾಗಿದೆ
ನನಗೆ ಜೀವನದಲ್ಲಿ ಟರ್ನಿಂಗ್ ಪಾಯಿಂಟ್ ನೀಡಿದ ಸೀರಿಯಲ್ ಪಾಪಾ ಪಾಂಡು. ಜನ ಎಲ್ಲೇ ಹೋದರೂ ನಿಮ್ಮಿ ಎಂದೇ ಗುರುತಿಸುತ್ತಾರೆ. ನನ್ನ ಹೆಸರೇ ನನಗೆ ಮರೆತುಹೋಗಿದೆ. ಮನೆಯಲ್ಲೂ ಎಲ್ಲರೂ ನಿಮ್ಮಿ ಎಂದೇ ಕರೆಯುತ್ತಿದ್ದಾರೆ. ನಾನು ಸಹ ನಿಮ್ಮಿ ಪಾತ್ರವನ್ನು ತುಂಬಾ ಇಷ್ಟಪಡುತ್ತೇನೆ. ಸಣ್ಣ ಮಕ್ಕಳಿಗೂ ನಿಮ್ಮಿ ಪಾತ್ರ ಇಷ್ಟವಾಗಿದೆ. ನನ್ನ ಪಾತ್ರಕ್ಕೆ ನ್ಯಾಯ ಒದಗಿಸಲು ಶ್ರಮಿಸುತ್ತಿದ್ದೇನೆ. ನಾನು ಎಲ್ಲೇ ಹೋದರು ಪಾನಿಪುರಿ ಈಟ್ ಮಾಡೋಕೆ ಹೋಗೋಣ ಬಾ ಶ್ರೀಹರಿ ಅನ್ನೋ ಡೈಲಾಗ್ ಜನರಿಗೆ ತುಂಬಾನೇ ಇಷ್ಟವಾಗಿದೆ ಎನ್ನುತ್ತಾರೆ.

ಅಮ್ಮ ಮಾಡೋ ಎಲ್ಲಾ ಅಡುಗೆ ನನ್ನ ಫೇವರೆಟ್
ನನಗೆ ಇಷ್ಟವಾದ ಫುಡ್ ಚಿಕನ್ ಬಿರಿಯಾನಿ. ಹೋಳಿಗೆ ನನ್ನಿಷ್ಟದ ಸಿಹಿ. ಅಮ್ಮ ಮಾಡುವ ಎಲ್ಲಾ ಅಡುಗೆ ನನ್ನ ಫೇವರೆಟ್. ಮುಂದಿನ ದಿನಗಳಲ್ಲಿ ನಾನು ಕಿರುತರೆಯಲ್ಲಿ ಇನ್ನಷ್ಟು ಬೆಳೆಯಬೇಕೆಂಬ ಹಂಬಲವಿದೆ ಎಂದು ಮುಗುಳ್ನಕ್ಕರು ಶೃತಿ.


Click it and Unblock the Notifications











