3 ತಿಂಗಳಲ್ಲಿ ರಿಷಬ್ 30 ಗಂಟೆ ನಿದ್ದೆ, ಅವ್ನ ಎನರ್ಜಿಯೇ 'ಕಾಂತಾರ-1' ಸಕ್ಸಸ್ ಸೀಕ್ರೆಟ್- ಪ್ರಮೋದ್ ಶೆಟ್ಟಿ
ಕನ್ನಡದ ಹೆಮ್ಮೆಯ 'ಕಾಂತಾರ- 1' ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡ್ತಿದೆ. ದೇಶ ವಿದೇಶಗಳಲ್ಲಿ ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಈಗಾಗಲೇ 60 ಲಕ್ಷ ಜನ ಸಿನಿಮಾ ನೋಡಿದ್ದಾರೆ. ಚಿತ್ರತಂಡ ಗೆಲುವಿನ ಅಲೆಯಲ್ಲಿ ತೇಲುತ್ತಿದೆ. ಪ್ರೇಕ್ಷಕರು ಪ್ರತಿಕ್ರಿಯೆ ಕಂಡು ಸಂತಸಗೊಂಡಿದೆ. ಚಿತ್ರದಲ್ಲಿ ಭೋಗೇಂದ್ರ ಪಾತ್ರದಲ್ಲಿ ನಟಿಸಿರುವ ಪ್ರಮೋದ್ ಶೆಟ್ಟಿ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
ರಿಷಬ್ ಶೆಟ್ಟಿ ಹಾಗೂ ಪ್ರಮೋದ್ ಶೆಟ್ಟಿ ಆತ್ಮೀಯ ಸ್ನೇಹಿತರು. ಹಲವು ವರ್ಷಗಳಿಂದ ಇಬ್ಬರೂ ಒಟ್ಟಿಗೆ ಚಿತ್ರರಂಗದಲ್ಲಿ ಮುನ್ನಡೆತ್ತಿದ್ದಾರೆ. ರಿಷಬ್ ಸಿನಿಮಾಗಳಲ್ಲಿ ನಟಿಸುವುದು ಮಾತ್ರವಲ್ಲ ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ ಆಗಿ ಕೂಡ ಪ್ರಮೋದ್ ಕೆಲಸ ಮಾಡುತ್ತಾ ಬರ್ತಿದ್ದಾರೆ. 'ಕಾಂತಾರ- 1' ಚಿತ್ರಕ್ಕಾಗಿ ತಿಂಗಳುಗಳ ಕಾಲ ರಿಷಬ್ ಶೆಟ್ಟಿ ಜೊತೆ ಕುಂದಾಪುರದಲ್ಲಿ ಪ್ರಮೋದ್ ಶೆಟ್ಟಿ ಬೀಡು ಬಿಟ್ಟಿದ್ದರು.

ಚಿತ್ರದಲ್ಲಿ ರಾಜಕುಮಾರ ಕುಲಶೇಖರನ ಸ್ನೇಹಿತ ಹಾಗೂ ಮಂತ್ರಿ ಭೋಗೇಂದ್ರನ ಪಾತ್ರದಲ್ಲಿ ಪ್ರಮೋದ್ ಶೆಟ್ಟಿ ಬಣ್ಣ ಹಚ್ಚಿದ್ದಾರೆ. ಅವರ ನಟನೆಗೂ ಮೆಚ್ಚುಗೆಯ ಮಾತುಗಳು ಕೇಳಿಬರ್ತಿದೆ. ಬಹಳ ಹತ್ತಿರದಿಂದ 'ಕಾಂತಾರ-1' ಸಿನಿಮಾ ಕೆಲಸಗಳನ್ನು ಅವರು ಗಮನಿಸಿದ್ದಾರೆ. ಸ್ನೇಹಿತ ರಿಷಬ್ ಶೆಟ್ಟಿ ಶಕ್ತಿ ಸಾಮರ್ಥ್ಯವನ್ನು ಕಂಡು ಬೆರಗಾಗಿದ್ದಾರೆ. 'ಕಾಂತಾರ-1' ಚಿತ್ರದ ಮೇಕಿಂಗ್ ಅನುಭವ ಹಾಗೂ ಸಕ್ಸಸ್ ಸಂಭ್ರಮವನ್ನು ಫಿಲ್ಮಿಬೀಟ್ ಕನ್ನಡ ಜೊತೆ ಅವರು ಹಂಚಿಕೊಂಡಿದ್ದಾರೆ.
ಚಿತ್ರಕ್ಕೆ ಸಿಗುತ್ತಿರುವ ರೆಸ್ಪಾನ್ಸ್ ಬಗ್ಗೆ ಏನು ಹೇಳ್ತೀರಾ?
ಬಹಳ ಖುಷಿಯಾಗುತ್ತಿದೆ. ಅದನ್ನು ವ್ಯಕ್ತಪಡಿಸುವುದಕ್ಕೆ ಸಾಧ್ಯವಾಗ್ತಿಲ್ಲ. ಕರ್ನಾಟಕ ಮಾತ್ರವಲ್ಲ ಎಲ್ಲಾ ಕಡೆ ರೆಸ್ಪಾನ್ಸ್ ಚೆನ್ನಾಗಿದೆ. ಸಣ್ಣಪುಟ್ಟ ವಿವಾದಗಳ ನಡುವೆಯೂ ಇಷ್ಟು ಒಳ್ಳೆ ರಿಪೋರ್ಟ್ ಬರುತ್ತಿರುವುದು ಸಿನಿಮಾ ಹಾಗೂ ರಿಷಬ್ ತಾಕತ್ತು. ಅವನಿಗೆ ದೇವರು ಮತ್ತಷ್ಟು ಶಕ್ತಿ ಕೊಡಲಿ ಇಂತಹ ಇನ್ನಷ್ಟು ಸಿನಿಮಾ ಮಾಡುವಂತಾಗಲಿ ಎಂದು ಹಾರೈಸುತ್ತೇನೆ.
ಭೋಗೇಂದ್ರ ಪಾತ್ರ ಎಷ್ಟು ಖುಷಿ ಕೊಟ್ಟಿದೆ?
ನಾನು ಚಿತ್ರದಲ್ಲಿ ನಟಿಸಿರುವುದು ಮಾತ್ರವಲ್ಲ, ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ ಕೂಡ ಆಗಿ ಕೆಲಸ ಮಾಡಿದ್ದೇನೆ. ಹೊಂಬಾಳೆ ಫಿಲ್ಮ್ಸ್ ಕಡೆಯಿಂದ ಒಬ್ರು ಇದ್ರು. ನಾನು ಕೂಡ ಇದ್ದೆ. ಎರಡು ವರ್ಷಗಳ ಕಾಲ ಮನೆ ಮಠ ಬಿಟ್ಟು ಅಲ್ಲೇ ಕಾಲ ಕಳೆದಿದ್ದೇನೆ. ವಿಭಿನ್ನವಾದ ಪಾತ್ರಗಳನ್ನು ಮಾತ್ರ ರಿಷಬ್ ಕೊಡ್ತಾನೆ. ಈ ಸಲ ಕೂಡ ಅಂಥದ್ದೆ ಸಿಕ್ಕಿದೆ. ನೋಡೋಕೆ ಫ್ರೆಂಡ್ ಪಾತ್ರ ಅನ್ನಿಸಬಹುದು. ಆದರೆ ಸಾಕಷ್ಟು ವೇರಿಯೇಷನ್ ಇದೆ. ಕಾಮಿಡಿ ಮಾಡುವುದು ಸುಲಭ ಅಲ್ಲ, ಟೈಮಿಂಗ್ ಮುಖ್ಯ. ನನ್ನ, ರಿಷಬ್ ಒಡನಾಟ ಚೆನ್ನಾಗಿರುವುದರಿಂದ ಆ ದೃಶ್ಯಗಳು ಅಷ್ಟು ಚೆನ್ನಾಗಿ ಬಂದಿದೆ ಎನ್ನಿಸುತ್ತದೆ.
ರಿಷಬ್ ಶೆಟ್ಟಿ ಕೆಲಸದ ಹಸಿವಿನ ಬಗ್ಗೆ ಹೇಳಿ
ಬರಹಗಾರನಾಗಿ ನಿರ್ದೇಶಕನಾಗಿ ನಟನಾಗಿ ಕೆಲಸ ಮಾಡಲು ಒಳ್ಳೆ ಸಾಥ್ ಬೇಕು. ಅವನ ಎನರ್ಜಿಗೆ ಸಮನಾಗಿ ಕೆಲಸ ಮಾಡುವ ತಂಡ ಬೇಕು. ಅರವಿಂದ್, ಅನಿ, ಗುರು ಇವರೆಲ್ಲರ ಸಹಕಾರದಿಂದ ಎಲ್ಲ ಸಾಧ್ಯವಾಯಿತು. ರಿಷಬ್ ಹೈಪರ್. ಇಷ್ಟು ದೊಡ್ಡ ಸಿನಿಮಾ ರಿಲೀಸ್ ಡೇಟ್ ಅನೌನ್ಸ್ ಮಾಡಿ ಹೇಳಿದ ಸಮಯಕ್ಕೆ ಸಿನಿಮಾ ತೆರೆಗೆ ತರುವುದು ಸುಲಭ ಅಲ್ಲ. ಕಳೆದ 3 ತಿಂಗಳಲ್ಲಿ ರಿಷಬ್ ಒಟ್ಟು 30 ಗಂಟೆ ನಿದ್ದೆ ಮಾಡಿರಬಹುದು. ಅಷ್ಟರಮಟ್ಟಿಗೆ ಪೋಸ್ಟ್ ಪ್ರೊಡಕ್ಷನ್ಗಾಗಿ ಕೆಲಸ ಮಾಡಿದ್ದಾನೆ. ಅದು ವಿಮಾನ, ಕಾರಿನಲ್ಲಿ ಓಡಾಡುವಾಗ ನಿದ್ದೆ ಮಾಡಿರುವುದು ಅಷ್ಟೇ. ಆಗ ಕೂಡ ಫೋನ್ ಕಾಲ್ನಲ್ಲಿ ಎಲ್ಲವನ್ನು ಸಂಭಾಳಿಸಿಕೊಂಡು ಬಂದಿದ್ದಾನೆ.

5 ವರ್ಷಗಳ 'ಕಾಂತಾರ' ಪಯಣ ಹೇಗಿತ್ತು?
ರಿಷಬ್ ಶೆಟ್ಟಿ ಕೆಲಸದಲ್ಲಿ ರಾಕ್ಷಸ. ಈ ಸಿನಿಮಾ ಅಂತ ಅಲ್ಲ. 'ಉಳಿದವರು ಕಂಡಂತೆ' ಚಿತ್ರದಿಂದ ಒಟ್ಟಿಗೆ ಕೆಲಸ ಮಾಡಿಕೊಂಡು ಬಂದ್ವಿ. ಅಂದಿನಿಂದಲೂ ರಿಷಬ್ ವರ್ಕಿಂಗ್ ಸ್ಟೈಲ್ ಹಂಗೆ ಇದೆ. ಎಫರ್ಟ್ ಜಾಸ್ತಿ ಆಗ್ತಿದೆ, ಕಮ್ಮಿ ಆಗ್ತಿಲ್ಲ. 'ಕಾಂತಾರ' ಸಕ್ಸಸ್ ಬಳಿಕ ಕೂಡ ಸುಮ್ಮನಾಗಲಿಲ್ಲ. ಆ ಮಟ್ಟಗಿನ ಎನರ್ಜಿ ಅವನಿಗಿದೆ. ಹಾಗಾಗಿ ಇಂತಹ ಸಿನಿಮಾ ಮಾಡಲು, ಅಂತಹ ಪರ್ಫಾರ್ಮನ್ಸ್ ಮಾಡಲು ಸಾಧ್ಯವಾಯಿತು. ಒಬ್ಬ ನಟನಿಗೆ ಬಾಡಿ ಚೆನ್ನಾಗಿರಬೇಕು, ವಾಯ್ಸ್ ಚೆನ್ನಾಗಿರಬೇಕು, ಎಕ್ಸ್ಪ್ರೆಷನ್ ಬೇಕು ಅಂತ ಹೇಳ್ತೀವಿ. ಈ ಯಪ್ಪಾ ನರ ನಾಡಿ ಹತ್ರ ಕೂಡ ಆಕ್ಟಿಂಗ್ ಮಾಡಿಸಿಬಿಟ್ಟಿದ್ದಾರೆ. ಕಣ್ಣ ರೆಪ್ಪೆಯಲ್ಲೂ ನಟಿಸಿದ್ದಾರೆ. 5 ವರ್ಷ ಚಿತ್ರಕ್ಕಾಗಿ ಕೆಲಸ ಮಾಡಿದ್ದಕ್ಕೂ ಸಾರ್ಥಕ ಆಯ್ತು ಅನ್ಸತ್ತೆ. ಜನರ ನಿರೀಕ್ಷೆ ಹೆಚ್ಚಾಗಿತ್ತು, ಅದನ್ನು ತಲುಪಿದ್ದೀವಿ ಅನ್ನಿಸುತ್ತೆ.
ರಿಷಬ್ ನಟನೆ ಹತ್ತಿರದಿಂದ ನೋಡಿದ್ದೀರಾ, ಆ ಬಗ್ಗೆ ಹೇಳಿ
ಅವನು ಬಹಳ ಏಕಾಗ್ರತೆಯಿಂದ ನಟಿಸುತ್ತಾನೆ. ನಟನೆ ಬಗ್ಗ ಬಹಳ ಕೇಂದ್ರಿಕರಿಸಿ ತೊಡಗಿಕೊಳ್ಳುತ್ತಾನೆ. ಫ್ರೇಮ್ ರೆಡಿ ಆದ್ಮೇಲೆ ಎರಡು ನಿಮಿಷ ಸಮಯ ತಗೋತ್ತಾನೆ. ಆಗ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡುತ್ತಾನೆ. ಆ ಸಮಯದಲ್ಲಿ ಅವನು ಯಾರನ್ನು ಮಾತನಾಡಿಸಲ್ಲ, ಅನಿ, ಗುರು ಜೊತೆ ಮಾತ್ರ ಮಾತು. ಹೀಗೆ ಮಾಡೋಣ ಅಂತ ಚರ್ಚಿಸ್ತಾನೆ. ಇನ್ನುಳಿದಂತೆ ನಟನೆ ಬಿಟ್ಟು ಬೇರೆ ಆಲೋಚನೆ ಇರಲ್ಲ. ಅದೇ ಅವನ ನಟನೆ ಸೀಕ್ರೆಟ್ ಅನ್ಸತ್ತೆ.
ರಿಷಬ್ ವಿಷನ್ ಹಾಗೂ ಅದು ತೆರೆಮೇಲೆ ಬಂದಿದ್ದು ಹೇಗೆ?
ಫಿಲ್ಮ್ ಮೇಕರ್ ಕನಸು ಕಾಣುವುದು ಸುಲಭ. ಅದನ್ನು ತೆರೆಗೆ ತರುವಲ್ಲಿ ಕೆಲವರು ಸೋಲುತ್ತಾರೆ. ತಾನು ಅಂದುಕೊಂಡಿದ್ದನ್ನು ತಂಡದವರಿಗೆ ಹೇಳಿ ಕೆಲಸ ಮಾಡಿಸುವುದು ನಿಜವಾದ ಚಾಲೆಂಜ್. ತನಗೆ ಅನ್ನಿಸಿದ್ದನ್ನು ಮತ್ತೊಬ್ಬರಿಗೆ ಅರ್ಥ ಮಾಡಿಸಿ ಅದರಂತೆ ಔಟ್ಫುಟ್ ತಗೋಬೇಕು. ಅದರಲ್ಲಿ ರಿಷಬ್ ಎಲ್ಲರಿಗೂ ಚೆನ್ನಾಗಿ ವಿವರಿಸ್ತಾನೆ. ತನ್ನ ಮನಸ್ಸಿನಲ್ಲಿರುವುದು ಮತ್ತೊಬ್ಬರಿಗೆ ಹೇಳಿ ಅದೇ ರೀತಿ ಕೆಲಸ ತೆಗೆಸಿಕೊಳ್ತಾನೆ.
ಕಲಾವಿದರಿಂದ ರಿಷಬ್ ನಟನೆ ಹೊರಗೆ ತೆಗೆದಿದ್ದು ಹೇಗೆ?
ರಿಷಬ್ ಶೆಟ್ಟಿಗೆ ಕಲಾವಿದರಿಂದ ಕೆಲಸ ತೆಗೆಸುವುದು ಗೊತ್ತು. ತಾನೇ ಎಲ್ಲವನ್ನು ಹೇಳಿಕೊಡುತ್ತಾನೆ. ಅವನು ಹೇಳಿದನ್ನು ನಟಿಸಿದರೆ ಸಾಕು ಎನ್ನುವಂತಿರುತ್ತದೆ. ಆತನ ಆ ಪಾತ್ರಕ್ಕೆ ಸೂಕ್ತ ಕಲಾವಿದರು ಆಯ್ಕೆ ಮಾಡಿಕೊಳ್ಳುತ್ತಾನೆ. ನಟನೆ ತಾನೇ ಮಾಡಿಸುತ್ತಾನೆ. ಅಷ್ಟು ಕ್ಲಾರಿಟಿ ಅವನಿಗಿದೆ. ಮೊದಲಿಗೆ ಕಲಾವಿದರಿಗೆ ಹೇಳಿ ಮಾಡಿಸುತ್ತಾನೆ. ಸಾಲಲಿಲ್ಲ ಅನ್ನಿಸಿದ್ದಾಗ ತಾನೇ ನಟಿಸಿ ತೋರಿಸಿ ಹೀಗೆ ಮಾಡಿ ಸಾಕು ಎನ್ನುತ್ತಾನೆ. ಹಾಗಾಗಿ ಸುಲಭವಾಗುತ್ತದೆ.
ಮಾಯಕಾರ ಪಾತ್ರವನ್ನು ರಿಷಬ್ ಮಾಡಿದ್ದಾರಾ?
ಚಿತ್ರದಲ್ಲಿ ರಿಷಬ್ ಶೆಟ್ಟಿ ದ್ವಿಪಾತ್ರ ಮಾಡಿದ್ದಾನೆ. ಮಾಯಕಾರ ಪಾತ್ರ ಮಾಡಿರೋದು ಅವನೇ. ಸಿಜಿಯಲ್ಲಿ ಸಣ್ಣಗೆ ದೇಹ ತೋರಿಸಲಾಗಿದೆ. ಆ ಗೆಟಪ್ಗಾಗಿ 8 ಗಂಟೆಗಳ ಕಾಲ ಮೇಕಪ್ ಮಾಡಿಸಿಕೊಳ್ಳುತ್ತಿದ್ದ. ರಾತ್ರಿ 11.30ಕ್ಕೆ ಮೇಕಪ್ ಮಾಡಿಸಿಕೊಳ್ಳಲು ಕೂರುತ್ತಿದ್ದ. ಬೆಳಗ್ಗೆ 6 ಗಂಟೆಗೆ ಶೂಟ್ ಮಾಡುತ್ತಿದ್ದರು. ಬಿಸಿಲಿನ ವೇಳೆ ಆ ಮೇಕಪ್ನಲ್ಲಿ ಚಿತ್ರೀಕರಣ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಬೆಳಗಿನ ಜಾವ ಮಾಡಬೇಕಿತ್ತು.
ಕರ್ನಾಟಕ ಬಿಟ್ಟು ಬೇರೆ ಕಡೆಯಿಂದ ಚಿತ್ರಕ್ಕೆ ರೆಸ್ಪಾನ್ಸ್ ಹೇಗಿದೆ?
ಎಲ್ಲಾ ಕಡೆಯಿಂದ ಒಳ್ಳೆ ರೆಸ್ಪಾನ್ಸ್ ಇದೆ. ಮುಖ್ಯವಾಗಿ ತಮಿಳುನಾಡಿನಿಂದ ಈ ಬಾರಿ ಒಳ್ಳೆ ಮಾತುಗಳು ಕೇಳಿಬರ್ತಿದೆ. ಅಷ್ಟು ಸುಲಭವಾಗಿ ಅವರು ಒಪ್ಪಿಕೊಳ್ಳಲ್ಲ. 'ಕಾಂತಾರ' ಚಿತ್ರಕ್ಕೂ ಬೇರೆ ಕಡೆಗಿಂತ ಚೆನ್ನೈನಲ್ಲಿ ಕೊಂಚ ಕಲೆಕ್ಷನ್ ಕಮ್ಮಿ ಇತ್ತು. ಆದರೆ ಈ ಬಾರಿ ಆರಂಭದಲ್ಲೇ ಪ್ರೀತಿ ವಿಶ್ವಾಸ ಸಿಕ್ಕಿದೆ. ಅಲ್ಲಿನ ಪ್ರೇಕ್ಷಕರು ಇಷ್ಟಪಟ್ಟಿದ್ದಾರೆ. ಬೇರೆ ಇಂಡಸ್ಟ್ರಿ ಸಿನಿಮಾವನ್ನು ಅವರು ಇಷ್ಟರಮಟ್ಟಿಗೆ ಒಪ್ಪಿರುವುದು ವಿಶೇಷ.


Click it and Unblock the Notifications











