ಡೈರಕ್ಟರ್ ಆಗುವೆ ಎಂದು ಧೈರ್ಯವಾಗಿ ಹೇಳುವ ಅಂಗವಿಕಲ
''ಒಬ್ಬ ಅಂಗವಿಕಲ ಸಿನಿಮಾ ನಿರ್ದೇಶನ ಮಾಡಲು ಸಾಧ್ಯವೇ ಅಂತ ಅವಮಾನ ಮಾಡಿದ್ದರು. ನಿನ್ನ ಕೈನಲ್ಲಿ ಏನು ಮಾಡಲು ಆಗಲ್ಲ ಎಂದರು. ಆದರೆ, ನಾನು ಅದನೇ ಸವಾಲಾಗಿ ತೆಗೆದುಕೊಂಡಿದ್ದೇನೆ.''
ಈ ರೀತಿ ಧೈರ್ಯವಾಗಿ ತಮ್ಮ ಮುಂದಿನ ಕನಸಿನ ಬಗ್ಗೆ ಮಾತನಾಡಿದ್ದು ರಮೇಶ್. ಪ್ರೇಮಕವಿ ರಮೇಶ್ ಎಂದು ತಮ್ಮ ಹೆಸರನ್ನು ಬದಲಿಸಿಕೊಂಡಿದ್ದಾರೆ. ಅದೇ ಹೆಸರಿನ ಮೂಲಕ ಚಿತ್ರರಂಗದಲ್ಲಿ ಹೆಸರು ಮಾಡುವ ಕನಸು ಹೊಂದಿದ್ದಾರೆ.
ಸಿನಿಮಾ ನಿರ್ದೇಶನ ಎನ್ನುವುದು ದೊಡ್ಡ ಸವಾಲು. ಅಂತಹ ದೊಡ್ಡ ಜವಾಬ್ದಾರಿಯನ್ನು ತೆಗೆದುಕೊಳ್ಳಲು ರಮೇಶ್ ಪ್ರಯತ್ನ ಪಡುತ್ತಿದ್ದಾರೆ. ಸದ್ಯ, ಕಿರುಚಿತ್ರದ ನಿರ್ದೇಶನ ಮಾಡಿರುವ ಇವರು ದೊಡ್ಡ ಸಿನಿಮಾ ನಿರ್ದೇಶನ ಮಾಡುವ ತಯಾರಿ ಮಾಡಿಕೊಳ್ಳುತ್ತಿದ್ದಾರೆ.
ಸಿನಿಮಾವನ್ನು ಮಾತ್ರವಲ್ಲದೆ, ತಮ್ಮ ಕ್ರಿಕೆಟ್ ಆಟದ ಮೂಲಕವೂ ರಮೇಶ್ ಗಮನ ಸೆಳೆದಿದ್ದಾರೆ. ರಾಜ್ಯಮಟ್ಟದ ಪಂದ್ಯಗಳಲ್ಲಿ ಭಾಗಿಯಾಗಿದ್ದಾರೆ. ಕಾಲಿಲ್ಲ ಎನ್ನುವ ಕೊರಗು ಇದ್ದರೂ, ಚಿತ್ರರಂಗ ಎಂಬ ಸಮುದ್ರದಲ್ಲಿ ಈಜಿ ದಡ ಸೇರುವ ಛಲ ಹೊಂದಿದ್ದಾರೆ.

ರಾಯಚೂರಿನ ಹುಡುಗ ರಮೇಶ್
ಪ್ರೇಮಕವಿ ರಮೇಶ್ ಮೂಲತಃ ರಾಯಚೂರು ಜಿಲ್ಲೆ ಮಾನ್ವಿ ತಾಲ್ಲೂಕು, ಹರ್ವಾಪೂರ ಎಂಬ ಪುಟ್ಟ ಗ್ರಾಮದವರು. ಪೋಲಿಯೋದಿಂದ ಹುಟ್ಟಿನಿಂದ ಕಾಲು ಕಳೆದುಕೊಂಡರು. ಹೀಗಿದ್ದ ರಮೇಶ್ 15 ವರ್ಷ ಇರುವಾಗಲೇ ಸಿನಿಮಾದಿಂದ ಸ್ಫೂರ್ತಿ ಪಡೆದು, ಸಿನಿಮಾದಲ್ಲಿಯೇ ಕೆಲಸ ಮಾಡುವ ಗುರಿ ಹೊಂದಿದರು. ನಿರ್ದೇಶಕರಾಗಬೇಕು ಎಂದು ನಿರ್ಧಾರ ಮಾಡಿದರು.

2007ರಲ್ಲಿ ಬೆಂಗಳೂರಿಗೆ ಬಂದೆ
2007ರಲ್ಲಿ 7ನೇ ಕ್ಲಾಸ್ ಓದುವಾಗ ರಮೇಶ್ ಬೆಂಗಳೂರಿಗೆ ಬಂದರು. ಬೆಂಗಳೂರಿಗೆ ಬಂದು ಒಂದು ಸಂಸ್ಥೆಯಲ್ಲಿ ಇದ್ದ ರಮೇಶ್ ರಿಗೆ, 10 ವರ್ಷ ಏನು ಮಾಡಲು ಆಗಲಿಲ್ಲವಂತೆ. ಮುಂದೆ ಕಾಲೇಜಿಗೆ ಹೋಗುವಾಗ ಒಳ್ಳೆಯ ಸ್ನೇಹಿತರು ಸಿಕ್ಕರು. ಅಲ್ಲಿಂದ ಬೆಂಗಳೂರು ಸುತ್ತಾಟ ನಡೆಯಿತು. ಮುಂದೆ ಎಲ್ಲರ ಪರಿಚಯ, ಎಲ್ಲದರ ಬಗ್ಗೆ ತಿಳುವಳಿಕೆ ಶುರುವಾಯಿತು ಎಂದರು ರಮೇಶ್.

ಕಿರುಚಿತ್ರದ ಬಿಡುಗಡೆ ಆಗಬೇಕಿದೆ
ರಮೇಶ್ 'ಕರಾಟೆ' ಎನ್ನುವ ಕಿರುಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಈ ಕಿರುಚಿತ್ರದ ಬಿಡುಗಡೆ ಆಗಬೇಕಾಗಿದೆ. ಚಿತ್ರದ ಕೊನೆಯ ಹಂತದ ಕೆಲಸ ನಡೆಯುತ್ತಿದೆ. ನಾಲ್ಕು ಭಾಷೆಯಲ್ಲಿ ಈ ಕಿರುಚಿತ್ರ ಬರಲಿದೆಯಂತೆ. ತನ್ನ ಹಣ ಕೂಡು ಹಾಕಿ ಈ ಕಿರುಚಿತ್ರವನ್ನು ಮಾಡಿದ್ದಾರಂತೆ. 'ಕರಾಟೆ' ಕರಾಟೆ ಕಲೆಯ ಬಗ್ಗೆ ಇದೆ. ಜೊತೆಗೆ ಒಂದು ಲವ್ ಸ್ಟೋರಿ ಇರುತ್ತದೆ. ಇದರ ಟೀಸರ್ ಸದ್ಯದಲ್ಲಿಯೇ ಬರುತ್ತದೆ.

ಉಪೇಂದ್ರ, ಧ್ರುವ ಸರ್ಜಾ, ಯಶ್ ಭೇಟಿ
ಸ್ಟಾರ್ ನಟರ ಹುಟ್ಟುಹಬ್ಬ ಹಾಗೂ ಇತರ ಕಾರ್ಯಕ್ರಮದಲ್ಲಿ ಅವರನ್ನು ರಮೇಶ್ ಭೇಟಿ ಮಾಡುತ್ತಾ ಇರುತ್ತಾರೆ. ಹೀಗಾಗಿ ಅವರ ಸ್ನೇಹ ಕೂಡ ಸಿಕ್ಕಿದೆಯಂತೆ. ಧ್ರುವ ಸರ್ಜಾ ತಮ್ಮ ಕಿರುಚಿತ್ರದ ಟೀಸರ್ ಬಿಡುಗಡೆ ಮಾಡಿಕೊಡುವುದಾಗಿ ಹೇಳಿದ್ದಾರಂತೆ. ಉಪೇಂದ್ರ, ಯಶ್, ದುನಿಯಾ ವಿಜಯ್ ಹೀಗೆ ಅನೇಕರನ್ನು ರಮೇಶ್ ಮೀಟ್ ಮಾಡಿದ್ದಾರೆ.

ಚಲನಚಿತ್ರಕ್ಕಾಗಿ ಕಥೆ ಸಿದ್ಧವಾಗುತ್ತಿದೆ
ಕಿರುಚಿತ್ರದ ನಂತರ ದೊಡ್ಡ ಸಿನಿಮಾ ಮಾಡುವ ಪ್ಲಾನ್ ರಮೇಶ್ ಅವರದ್ದಾಗಿದೆ. ಈಗಾಗಲೇ ಒಂದು ಕಥೆ ಮಾಡಿಕೊಂಡಿದ್ದಾರಂತೆ. ಕನ್ನಡದ ಒಬ್ಬ ದೊಡ್ಡ ನಟನಿಗೆ ಸಿನಿಮಾ ಮಾಡಬೇಕು ಎನ್ನುವುದು ಅವರ ಕನಸ್ಸಾಗಿದೆ. ಆ ಕನಸನ್ನು ನನಸು ಮಾಡಿಕೊಳ್ಳುವ ದಾರಿಯಲ್ಲಿ ಅವರು ಹೋಗುತ್ತಿದ್ದಾರೆ.


Click it and Unblock the Notifications