ಇದು ಕಿತ್ತಾಡುವ ಸಮಯವಲ್ಲ, ಕಟ್ಟುವ ಸಮಯ: ನಿರ್ಮಾಪಕ ಕಾರ್ತಿಕ್ ಗೌಡ
ಲಾಭ ಹಂಚಿಕೆ ವಿಚಾರದಲ್ಲಿ ಸಿಂಗಲ್ ಸ್ಕ್ರೀನ್ ಚಿತ್ರಮಂದಿರ ಮಾಲೀಕರು ಹಾಗೂ ಸಿನಿಮಾ ನಿರ್ಮಾಪಕರ ನಡುವೆ ಭಿನ್ನಾಭಿಪ್ರಾಯ ಏರ್ಪಟ್ಟಿದೆ.
ಪ್ರಸ್ತುತ ಇರುವ ಬಾಡಿಗೆ ಪದ್ಧತಿಯಿಂದ ಚಿತ್ರಮಂದಿರ ಮಾಲೀಕರಿಗೆ ನಷ್ಟವಾಗುತ್ತಿದೆ, ಹಾಗಾಗಿ ಶೇಕಡಾವಾರು ಮಾದರಿಯಲ್ಲಿ ಲಾಭದ ಹಂಚಿಕೆ ಆಗಬೇಕು ಎಂದು ಒತ್ತಾಯ ಮಾಡಿದೆ ಚಿತ್ರಮಂದಿರ ಮಹಾಸಭಾ. ಈಗಾಗಲೇ ನಿರ್ಮಾಪಕರ ಸಂಘದ ಬಳಿ ಮಾತುಕತೆ ಸಹ ನಡೆಸಲಾಗಿದೆ.
ಚಿತ್ರಮಂದಿರ ಮಹಾಸಭಾದ ಒತ್ತಾಯಕ್ಕೆ ಕೆಲವು ನಿರ್ಮಾಪಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಫಿಲ್ಮೀಬೀಟ್ ಜೊತೆಗೆ ನಿರ್ಮಾಪಕ ಕಾರ್ತಿಕ್ ಗೌಡ ಮಾತನಾಡಿದ್ದು, 'ಹಳೆಯ ವ್ಯವಸ್ಥೆಯೇ ಮುಂದುವರೆಯಲಿ' ಎಂದಿದ್ದಾರೆ.
'ಇಷ್ಟು ದಿನ ಏನು ನಡೆದುಕೊಂಡು ಬಂದಿದೆ ಅದೇ ಪದ್ಧತಿ ಮುಂದುವರೆಯಲಿ. ಈಗಲೂ ಕೆಲವು ಚಿತ್ರಮಂದಿರಗಳಲ್ಲಿ ಶೇಕಡಾವಾರು ಹಂಚಿಕೆ ಪದ್ಧತಿ ಇದೆ. ಅದು ಚಿತ್ರಮಂದಿರ ಮಾಲೀಕರು ಹಾಗೂ ವಿತರಕರ ನಡುವಿನ ಒಡಂಬಡಿಕೆ, ಎಲ್ಲಾ ಸಿಂಗಲ್ ಸ್ಕ್ರೀನ್ ಶೇಕಡಾವಾರ ಪದ್ಧತಿಗೆ ಒಳಪಟ್ಟರೆ ನಿರ್ಮಾಪಕ ನಷ್ಟ ಅನುಭವಿಸಬೇಕಾಗುತ್ತದೆ' ಎಂದು ತಮ್ಮ ವಾದ ಮುಂದಿಟ್ಟರು ಕಾರ್ತಿಕ್ ಗೌಡ.
ಮಲ್ಟಿಫ್ಲೆಕ್ಸ್ ಮಾದರಿಯ ಅಂದರೆ 50:50, 40:60, 30:70 ಅನುಪಾತದ ಲಾಭ ಹಂಚಿಕೆಗೆ ಮಹಾಸಭಾ ಬೇಡಿಕೆ ಇಟ್ಟಿದೆ ಎನ್ನಲಾಗುತ್ತಿದೆ. ಆದರೆ ಇದು 'ಮಲ್ಟಿಫ್ಲೆಕ್ಸ್ ಮಾದರಿ' ಅಲ್ಲ. ಮಲ್ಟಿಫ್ಲೆಕ್ಸ್ಗಳು ಮಾದರಿ ಬೇರೆಯೇ ಇದೆ. ಅದು ರಾಜ್ಯವಾರು ಬದಲಾವಣೆ ಸಹ ಆಗುತ್ತದೆ. ದಶಕದಿಂದಲೂ ಅದೇ ಮಾದರಿಯನ್ನು ಅವರು ಅನುಸರಿಸುತ್ತಿದ್ದಾರೆ, ಈ ಮಾದರಿ ಈಗ ಬಂದಿದ್ದಲ್ಲ. ಪ್ರದರ್ಶಕರು, ವಿತರಕರನ್ನು ಅವರ ಪಾಡಿಗೆ ಅವರಿಗೆ ಅನುಕೂಲವಾಗುವಂತಹಾ ಒಪ್ಪಂದ ಮಾಡಿಕೊಳ್ಳಲಿ. ಒಂದೇ ಮಾದರಿಯನ್ನು ರಾಜ್ಯದ ಎಲ್ಲ ಚಿತ್ರಮಂದಿರಗಳ ಮೇಲೆ ಹೇರುವುದು ಬೇಡ ಎಂದರು ಕಾರ್ತಿಕ್ ಗೌಡ.

ಎನ್ಆರ್ಎ ಪ್ರಾರಂಭಿಸಿದ್ದೇ ಪ್ರದರ್ಶಕರು: ಕಾರ್ತಿಕ್ ಗೌಡ
ನಾನ್ ರೀಫಂಡೆಬಲ್ ಅಡ್ವಾನ್ಸ್ ಅಥವಾ ಮಿನಿಮಮ್ ಗ್ಯಾರೆಂಟಿ ಹಣ ಪಡೆವ ನಿರ್ಮಾಪಕರು ಸೇಫ್ ಆಗುತ್ತಾರೆ ಎಂಬ ವಾದ ಸರಿಯಲ್ಲ. ಎನ್ಆರ್ಎ ಪದ್ಧತಿ ಪ್ರಾರಂಭ ಮಾಡಿದ್ದೇ ಪ್ರದರ್ಶಕರು. ಸಿನಿಮಾವನ್ನು ತಮ್ಮ ಚಿತ್ರಮಂದಿರದಲ್ಲಿ ಬಿಡುಗಡೆ ಮಾಡಿಸಲು ವಿತರಕನಿಗೆ ಹೆಚ್ಚು ಮೊತ್ತದ ಎನ್ಆರ್ಎ ಆಸೆ ತೋರಿಸಿದ ಪ್ರದರ್ಶಕರೇ ಇಂದು ಎನ್ಆರ್ಎ ಪದ್ಧತಿಯಿಂದ ಅನ್ಯಾಯವಾಗುತ್ತಿದೆ ಎನ್ನುತ್ತಿದ್ದಾರೆ. ಚಿತ್ರ ನಿರ್ಮಾಪಕರು ಇಂದು ಯಾವ ಪರಿಸ್ಥಿತಿಯಲ್ಲಿದ್ದಾರೆ, ಚಿತ್ರಪ್ರದರ್ಶಕರು ಯಾವ ಪರಿಸ್ಥಿತಿಯಲ್ಲಿದ್ದಾರೆ ಬಿಡಿಸಿ ಹೇಳಬೇಕಾಗಿಲ್ಲ. ಒಮ್ಮೊಮ್ಮೆ ಐದು ಸಾವಿರ ಹಣವನ್ನೂ ಸಹ ಸ್ವತಃ ನಾನೇ ಚಿತ್ರಮಂದಿರಗಳಿಂದ ಶೇರ್ ಪಡೆದುಕೊಂಡಿದ್ದೇನೆ ಎಂದು ತಮ್ಮದೇ ಉದಾಹರಣೆ ಕೊಟ್ಟರು ಕಾರ್ತಿಕ್ ಗೌಡ.

ಆಂಧ್ರ-ತೆಲಂಗಾಣಗಳಲ್ಲಿ ಬಾಡಿಗೆ ಪದ್ಧತಿಯೇ ಇದೆ: ಕಾರ್ತಿಕ್
ಇಷ್ಟು ವರ್ಷ ನಡೆದುಕೊಂಡು ಬಂದಿರುವ ಪದ್ಧತಿಯನ್ನು ಹಠಾತ್ತನೆ ಬದಲಾವಣೆ ಏಕೆ? ಎಂದು ಪ್ರಶ್ನಿಸಿದ ಕಾರ್ತಿಕ್ ಗೌಡ, ತಮಿಳುನಾಡು ಬಿಟ್ಟರೆ ಆಂಧ್ರಪ್ರದೇಶ, ತೆಲಂಗಾಣದಲ್ಲಿ ಈಗಲೂ ಬಾಡಿಗೆ ವ್ಯವಸ್ಥೆಯಲ್ಲಿಯೇ ಚಿತ್ರಮಂದಿರಗಳು ಕಾರ್ಯನಿರ್ವಹಿಸುತ್ತಿವೆ. ಕೇರಳದಲ್ಲಿ ಅರ್ಧ ಪರ್ಸೆಂಟೇಜ್ ಲೆಕ್ಕದಲ್ಲಿ ಇನ್ನರ್ಧ ಬಾಡಿಗೆ ಲೆಕ್ಕದಲ್ಲಿ ಚಿತ್ರಮಂದಿರಗಳು ಕಾರ್ಯನಿರ್ವಹಿಸುತ್ತಿವೆ.

ಪರ್ಸೆಂಟೇಜ್ ವ್ಯವಸ್ಥೆಯಲ್ಲಿ ಕೊರತೆಗಳಿವೆ : ಕಾರ್ತಿಕ್ ಗೌಡ
ಪರ್ಸೆಂಟೇಜ್ ವ್ಯವಸ್ಥೆಯಲ್ಲಿನ ಸಮಸ್ಯೆ ಬಗ್ಗೆ ಮಾತನಾಡಿದ ಕಾರ್ತಿಕ್, ಸಿನಿಮಾ ಒಂದು ಪ್ರದರ್ಶನ ಕಾಣಬೇಕಾದರೆ ದೊಡ್ಡ ಸಿನಿಮಾವೊಂದು ಬಿಡುಗಡೆ ಆದರೆ ಚಿತ್ರಮಂದಿರ ಮಾಲೀಕರು ಈ ಸಿನಿಮಾವನ್ನು ತೆಗೆದು ದೊಡ್ಡ ಸಿನಿಮಾದ ಕಡೆಗೆ ಹೊರಟುಬಿಡುತ್ತಾರೆ ಇದು ಸಣ್ಣ ಸಿನಿಮಾಗಳ ಪಾಲಿಗೆ ಹೊಡೆತ ಬಿದ್ದಂತೆ ಆಗುತ್ತದೆ. ಮತ್ತೊಂದು ವಿಷಯವೆಂದರೆ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಲ್ಲಿ ಒಂದು ಚೆನ್ನಾಗಿರುವ ಚಿತ್ರಮಂದಿರವಿದೆ, ಇನ್ನೊಂದು ಚೆನ್ನಾಗಿಲ್ಲದ ಚಿತ್ರಮಂದಿರವಿದೆ, ಹಾಗಿದ್ದಾಗ ಇಬ್ಬರಿಗೂ ಒಂದೇ ಮಾದರಿ ಶೇಕಡಾವಾರು ಹಂಚಿಕೆ ಕೊಡಲು ಹೇಗೆ ಸಾಧ್ಯವಾಗುತ್ತದೆ? ಎಂದು ಪ್ರಶ್ನೆ ಮುಂದಿಟ್ಟರು.

ಇದು ಕಿತ್ತಾಡುವ ಸಮಯ ಅಲ್ಲ, ಕಟ್ಟುವ ಸಮಯ: ಕಾರ್ತಿಕ್ ಗೌಡ
ಕಳೆದ ತಿಂಗಳು ಮಹಾಸಭಾದ ಅಧ್ಯಕ್ಷರು ಕೆಲವು ಪದಾಧಿಕಾರಿಗಳು ನಮ್ಮನ್ನು ಭೇಟಿ ಆಗಿದ್ದಾಗ, ನಾವು ಅವರ ಬಳಿ ಮನವಿ ಮಾಡಿದ್ದೇನೆ. ಇದು ಕಷ್ಟದ ಸಮಯ, 'ಡಿಮ್ಯಾಂಡ್' ಮುಂದಿರಿಸಿಕೊಂಡು ನಮಗೆ ನಾವುಗಳೇ ಅಡ್ಡಗಾಲು ಹಾಕಿಕೊಳ್ಳುವುದು ಬೇಡ. ಉದ್ಯಮ ಕಷ್ಟದಲ್ಲಿದೆ, ಇದು ಕಿತ್ತಾಡುವ ಸಮಯವಲ್ಲ ಬದಲಿಗೆ ಕಟ್ಟುವ ಸಮಯ, ಎಲ್ಲರೂ ಜೊತೆಯಾಗಿ ಹೋಗೋಣ. ಮೊದಲು ಉದ್ಯಮ ತುಸು ಚೇತರಿಸಿಕೊಳ್ಳಲಿ, ನಂತರ ಎಲ್ಲರೂ ಕುಳಿತು ಮಾತನಾಡಿ ಸಮಸ್ಯೆ ಬಗೆಹರಿಸಿಕೊಳ್ಳೋಣ ಎಂದೇ ನಾವು ಹೇಳಿದ್ದೇವೆ ಎಂದು ಮಾಹಿತಿ ನೀಡಿದರು ಕಾರ್ತಿಕ್ ಗೌಡ.
Recommended Video

'ಬಿಡುಗಡೆಗೆ ಸಿದ್ಧವಾಗಿರುವ ಸಿನಿಮಾಗಳಿಗೆ ಹಳೆಯ ಪದ್ಧತಿಯೇ ಇರಲಿ'
ಈಗ ಸಾಕಷ್ಟು ಸಿನಿಮಾಗಳು ಸರತಿಯಲ್ಲಿವೆ, ಅವುಗಳ ಪ್ರದರ್ಶನ ಹಳೆಯ ಮಾದರಿಯಲ್ಲಿಯೇ ನಡೆಯಲಿ. ಏಕೆಂದರೆ ನಿರ್ಮಾಪಕರು ಹಳೆಯ ಮಾದರಿಯನ್ನು ಲೆಕ್ಕಾಚಾರ ಹಾಕಿಯೇ ಸಿನಿಮಾಗಳ ಮೇಲೆ ಬಂಡವಾಳ ಹೂಡಿದ್ದಾರೆ. ಈಗ ಹಠಾತ್ತನೆ ಪದ್ಧತಿ ಬದಲಿಸಿದರೆ ನಿರ್ಮಾಪಕರಿಗೆ ನಷ್ಟವಾಗುತ್ತದೆ. ಈಗ ಸಾಲಿನಲ್ಲಿರುವ ಸಿನಿಮಾಗಳು ಬಿಡುಗಡೆ ಆಗಲಿ, ಉದ್ಯಮ ಮರಳಿ ಹಾದಿಗೆ ಬರಲಿ ನಂತರ ಮತ್ತೊಮ್ಮೆ ಕೂತು ಚರ್ಚೆ ಮಾಡಿ ಎಲ್ಲರಿಗೂ ಒಳಿತಾಗುವಂತೆ ಒಂದು ನಿರ್ದಿಷ್ಟ ನಿರ್ಧಾರಕ್ಕೆ ಬರೋಣ ಎಂದರು ಕಾರ್ತಿಕ್ ಗೌಡ.


Click it and Unblock the Notifications











