Don't Miss!
- News ಉಕ್ರೇನ್ ವಿರುದ್ಧ ರಷ್ಯಾ ಗಂಭೀರ ಆರೋಪ!
- Lifestyle ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- Sports RR vs DC: ಅವೇಶ್ ಖಾನ್, ರಿಯಾನ್ ಪರಾಗ್ ಶೈನ್; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ವಿನ್
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಮೈತ್ರಿ' ಚಿತ್ರದ ನಿರ್ದೇಶಕ ಗಿರಿರಾಜ್ ವಿಶೇಷ ಸಂದರ್ಶನ
ಮಲೆಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್ ಮತ್ತು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮೊದಲ ಬಾರಿ ಒಂದಾಗಿರುವ ಸಿನಿಮಾ 'ಮೈತ್ರಿ'. ನಾಳೆ (ಫೆಬ್ರವರಿ 20) ರಂದು 'ಮೈತ್ರಿ' ಚಿತ್ರ ರಾಜ್ಯಾದ್ಯಂತ ಅದ್ದೂರಿಯಾಗಿ ರಿಲೀಸ್ ಆಗುತ್ತಿದೆ.
ಇಳಯರಾಜ ಸಂಗೀತ ನಿರ್ದೇಶನದ 'ಮೈತ್ರಿ' ಸಿನಿಮಾ ಈಗಾಗಲೇ ಹಲವು ವಿಶೇಷತೆಗಳಿಂದ ಸುದ್ದಿಯಾಗಿದೆ. 'ಜಟ್ಟ' ಚಿತ್ರಕ್ಕೆ ರಾಜ್ಯ ಪ್ರಶಸ್ತಿ ಕಿರೀಟ ತಂದುಕೊಟ್ಟ ನಿರ್ದೇಶಕ ಗಿರಿರಾಜ್, 'ಮೈತ್ರಿ' ಚಿತ್ರದ ರುವಾರಿ.
'ಮೈತ್ರಿ' ಬಿಡುಗಡೆ ಹೊಸ್ತಿಲಿನಲ್ಲಿ ಚಿತ್ರದ ಬಗ್ಗೆ ನಿರ್ದೇಶಕ ಗಿರಿರಾಜ್ 'ಫಿಲ್ಮಿಬೀಟ್ ಕನ್ನಡ'ಗೆ ಸಂದರ್ಶನ ನೀಡಿದ್ದಾರೆ. ಅವರ ಸಂದರ್ಶನ ಇಲ್ಲಿದೆ, ಮುಂದೆ ಓದಿ.....
* ನಿಮ್ಮ ಪ್ರಕಾರ 'ಮೈತ್ರಿ' ಅಂದ್ರೆ...
- 'ಮೈತ್ರಿ' ಕಮರ್ಶಿಯಲ್ ಅಥವಾ ಆರ್ಟ್ ಸಿನಿಮಾ ಅಂತ ಕಂದಕ ಇಲ್ಲ. ಒಂದು ಕಮರ್ಶಿಯಲ್ ಸಿನಿಮಾಗೆ ಬೇಕಾದ ಎಲ್ಲಾ ಅಂಶಗಳು ಈ ಚಿತ್ರದಲ್ಲಿದೆ. ಹಾಗೆ, ಕಲಾತ್ಮಕ ಟಚ್ ಕೂಡ ಇದೆ. ನಟರ ಕಾಂಬಿನೇಷನ್ ನಲ್ಲೂ ಈ ಚಿತ್ರ 'ಮೈತ್ರಿ'. ಪುನೀತ್ ರಾಜ್ ಕುಮಾರ್, ಮೋಹನ್ ಲಾಲ್, ಅತುಲ್ ಕುಲಕರ್ಣಿ ಜೊತೆಗೆ ಇಳೆಯರಾಜ. ಈ ತರಹ ಕಾಂಬಿನೇಷನ್ ಮತ್ತೆ ತರೋಕೆ ಆಗಲ್ಲ. ಹೀಗಾಗಿ, ಎಲ್ಲಾ ಆಂಗಲ್ ನಿಂದಲೂ ಇದು 'ಮೈತ್ರಿ'. [ಪವರ್ ಸ್ಟಾರ್ ಪುನೀತ್ ಅಭಿಮಾನಿಗಳಿಗೆ ಸಂತಸದ ಸುದ್ದಿ]
* 'ಮೈತ್ರಿ' ಮೂಲಕ ಸಮಾಜಕ್ಕೆ ನಿಮ್ಮ ಸಂದೇಶ..
- ಇವತ್ತಿನ ಕಾಲಘಟ್ಟದಲ್ಲಿ ಮಕ್ಕಳ ಮೇಲೆ ಆಗುತ್ತಿರುವ ಶೋಷಣೆ ನನಗೆ ತುಂಬಾ ಕಾಡುತ್ತಿತ್ತು. ಇವತ್ತು ಮಕ್ಕಳು ಆಟದ ಮೈದಾನದಲ್ಲೂ ನೆಮ್ಮದಿಯಾಗಿ ಆಡೋಕೆ ಆಗದ ಪರಿಸ್ಥಿತಿ ಇದೆ. ನಾವು ಕಳ್ಕೊಂಡಿರುವ ಮಗುತನದ ವಾಲ್ಯೂ ಮತ್ತು ಮಕ್ಕಳ ಹಕ್ಕುಗಳನ್ನ 'ಮೈತ್ರಿ' ಮೂಲಕ ನಾವು ಎತ್ತಿಹಿಡಿದಿದ್ದೀವಿ. [ಸೂಪರ್ ಸ್ಟಾರ್-ಪವರ್ ಸ್ಟಾರ್ 'ಮೈತ್ರಿ' ಟೀಸರ್ ಸೂಪರ್]
* ಬಾಲಾಪರಾಧದ ಬಗ್ಗೆ 'ಮೈತ್ರಿ' ಚಿತ್ರದ ನಿಲುವು...
- ಆ ಅಂಶಗಳು ಚಿತ್ರದಲ್ಲಿದೆ. ಬಾಲಾಪರಾಧ, ಮಕ್ಕಳ ಶೋಷಣೆ ಚಿತ್ರದ ಮುಖ್ಯ ಕಥಾಹಂದರ.
* ಮಕ್ಕಳ ಶೋಷಣೆ ಬಗ್ಗೆ ಮಾತನಾಡಿದ್ರಿ, ಇಡೀ ಭಾರತವನ್ನೇ ಸದ್ಯ ಬೆಚ್ಚಿಬೀಳಿಸುತ್ತಿರುವ ಮಕ್ಕಳ ಮೇಲಿನ ಅತ್ಯಾಚಾರ ಪ್ರಕರಣಗಳು 'ಮೈತ್ರಿ' ಚಿತ್ರದಲ್ಲಿ ಪ್ರತಿಧ್ವನಿಸುತ್ತಾ?
- ಹೌದು. ಎಲ್ಲಾ ಎಲಿಮೆಂಟ್ಸ್ 'ಮೈತ್ರಿ' ಚಿತ್ರದಲ್ಲಿವೆ. ಮಕ್ಕಳ ಹಕ್ಕುಗಳ ಜೊತೆಗೆ ಒಂದು ಫ್ಯಾಮಿಲಿಯ ಕಥೆ ಇದೆ. ಒಬ್ಬ ಸ್ಟಾರ್ ನಟನ ಕಥೆ ಇದೆ. ಒಬ್ಬ ಪೊಲೀಸ್ ಆಫೀಸರ್ ಕಥೆ ಇದೆ. ಎಲ್ಲರೂ 'ಮೈತ್ರಿ'ಯಾಗುವುದು ಹೇಗೆ ಅನ್ನುವುದೇ ಸಸ್ಪೆನ್ಸ್.
* ನೀವು ಹೇಳಿದಂತೆ 'ಮೈತ್ರಿ' ಸಿನಿಮಾ ಸ್ಟಾರ್ ನಟರ 'ಮೈತ್ರಿ'. ಇದು ನಿಮ್ಮ ಅಭಿಲಾಷೆಯಾಗಿತ್ತಾ?
- ಇಲ್ಲಾ. ಮೊದಲು ಪ್ಲಾನ್ ಆದಾಗ, ಸಣ್ಣ ಬಜೆಟ್ ಸಿನಿಮಾ ಮಾಡಬೇಕು ಅಂತ ಅಂದುಕೊಂಡಿದ್ದು. ಹೋಗ್ತಾ ಹೋಗ್ತಾ, ನಮ್ಮ ಪ್ರೊಡ್ಯೂಸರ್, ''ಒಳ್ಳೆ ಕಥೆ, ಚೆನ್ನಾಗಿ ಸಿನಿಮಾ ಮಾಡೋಣ, ಬಿಗ್ ಬಜೆಟ್ ಆದರೂ ಅಡ್ಡಿ ಇಲ್ಲ'' ಅಂತ ಹುಮ್ಮಸ್ಸು ಕೊಟ್ಟರು. ನಾವು ಸ್ಟಾರ್ ನಟರನ್ನ ಅಪ್ರೋಚ್ ಮಾಡಿದಾಗ, ಅವರಿಗೂ ಕಥೆ ಇಷ್ಟವಾಯ್ತು. ಎಲ್ಲವೂ ಸಲೀಸಾಗಿ ಮುಗೀತು. [ಸದ್ದಿಲ್ಲದಂತೆ ಶೂಟಿಂಗ್ ನಡೆಸಿದ ಪುನೀತ್ 'ಮೈತ್ರಿ']
* ಮೋಹನ್ ಲಾಲ್ ಪಾತ್ರದ ಬಗ್ಗೆ ಹೇಳುವುದಾದರೆ...
- ಅವರು ಸೈಟಿಂಸ್ಟ್ ಕ್ಯಾರೆಕ್ಟರ್ ಪ್ಲೇ ಮಾಡ್ತಿದ್ದಾರೆ. ಅರ್ಚನಾ ಪೇರ್ ಆಗಿ ಅಭಿನಯಿಸುತ್ತಿದ್ದಾರೆ. ಅವರ ಪಾತ್ರಕ್ಕೆ ತುಂಬಾ ಪ್ರಾಮುಖ್ಯತೆ ಇದೆ.
* 'ಮೈತ್ರಿ' ಚಿತ್ರಕ್ಕೆ ಸ್ಪೂರ್ಥಿ...
- ನಾನು ಹದಿಮೂರು ವರ್ಷಗಳಿಂದಲೂ ಮಕ್ಕಳ ಹಕ್ಕುಗಳ ಬಗ್ಗೆ ಹೋರಾಟ ಮಾಡುತ್ತಾ ಬಂದಿದ್ದೇನೆ. ಮಕ್ಕಳ ಮೇಲೆ ಆಗುವ ಶೋಷಣೆಗಳು, ಅನೇಕ ಘಟನೆಗಳನ್ನ ನಾನು ನೋಡಿದ್ದೇನೆ, ಕೇಳಿದ್ದೇನೆ. 'ಮೈತ್ರಿ' ಯಾವುದೇ ಒಂದು ಘಟನೆ ಮೇಲೆ ಆಧರಿಸಿರುವ ಸಿನಿಮಾ ಅಲ್ಲ. ಅನೇಕ ಘಟನೆಗಳು, ಅನೇಕ ಕಥೆಗಳು 'ಮೈತ್ರಿ'ಗೆ ಸ್ಪೂರ್ಥಿಯಾಗಿದೆ.
* ಪುನೀತ್ ರಾಜ್ ಕುಮಾರ್ ಇಲ್ಲಿ 'ಪುನೀತ್ ರಾಜ್ ಕುಮಾರ್' ಆಗೇ ಕಾಣಿಸಿದ್ದಾರೆ. ಅವರದ್ದು ಅತಿಥಿ ಪಾತ್ರ ಅಂತ ಸುದ್ದಿ ಇದ್ಯಲ್ಲ?
- ಪುನೀತ್ ರಾಜ್ ಕುಮಾರ್ ಅವರು ತಮ್ಮ ರಿಯಲ್ ಲೈಫ್ ಕ್ಯಾರೆಕ್ಟರ್ ಪ್ಲೇ ಮಾಡ್ತಿದ್ದಾರೆ. ಅವರು 'ಮೈತ್ರಿ' ಸಿನಿಮಾ ಲೀಡ್ ಹೀರೋ ಅಲ್ಲ. ಹಾಗೇ, ಒಂದು ಸೀನ್ ಗೆ ಬಂದು ಹೋಗೋ ಕ್ಯಾರೆಕ್ಟರ್ ಕೂಡ ಅಲ್ಲ. ಹಾಗೆ ನೋಡಿದರೆ, ಸಿನಿಮಾದಲ್ಲಿ ಎಲ್ಲರೂ ಹೀರೋಗಳೇ. ಮಲ್ಟಿ ಸ್ಟಾರ್ ಕಾಸ್ಟ್ ಇದೆ. ಇದು ಪುನೀತ್ ಸಿನಿಮಾ ಅಂತ ಬ್ರ್ಯಾಂಡ್ ಮಾಡಿದ್ರೆ, ತಪ್ಪು ಮೆಸೇಜ್ ಪಾಸ್ ಮಾಡಿದಹಾಗಾಗುತ್ತೆ. ಆದರೆ, ಅವರ ಪಾತ್ರಕ್ಕೆ ಕಥೆಯಲ್ಲಿ ತುಂಬಾ ಮಹತ್ವ ಇದೆ.
* ಸಂಭಾವನೆ ಪಡೆಯದೇ ಪುನೀತ್ ರಾಜ್ ಕುಮಾರ್ 'ಮೈತ್ರಿ' ಚಿತ್ರದಲ್ಲಿ ಅಭಿನಯಿಸಿದ್ದಾರಂತೆ?
- ಅದರ ಬಗ್ಗೆ ನಾನು ಕಮೆಂಟ್ ಮಾಡುವುದಿಲ್ಲ. ನಮ್ಮ ಪ್ರೊಡ್ಯೂಸರ್, ಅಪ್ಪು ಸರ್ ಗೆ ಅತ್ಯಾಪ್ತರು. 'ಮೈನಾ' ಸಿನಿಮಾದಲ್ಲಿ ಸ್ವಲ್ಪ ಲಾಸ್ ಆಗಿದ್ದರಿಂದ ''ನಿಮಗೆ ಒಂದು ಸಿನಿಮಾ ಮಾಡಿ ಕೊಡುತ್ತೀನಿ ಅಂತ ಪುನೀತ್ ಸರ್ ಹೇಳಿದ್ದರಂತೆ'' ಅದರಂತೆ 'ಮೈತ್ರಿ' ಮಾಡಿದ್ದಾರೆ. ಸಂಭಾವನೆ ವಿಷಯ ಆಮೇಲೆ ನೋಡೋಣ ಅಂತ ಹೇಳಿದ್ದಾರಂತೆ. ['ಸಿಪಾಯಿ ರಾಮು' ಆದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್]
* ಇಳಯರಾಜ ಸಂಗೀತದ ಬಗ್ಗೆ....
- ಅವರ ಬಗ್ಗೆ ಮಾತನಾಡುವುದಕ್ಕೆ ನಾನು ತುಂಬಾ ಸಣ್ಣವನು. ಸಾವಿರ ಸಿನಿಮಾ ಮಾಡಿರುವವರು, ನಮ್ಮ ಸಿನಿಮಾಗೆ ಸಂಗೀತ ನೀಡಿದ್ದಾರೆ ಅಂದ್ರೆ ಅದು ನಮ್ಮ ಹೆಮ್ಮೆ. ಹೊಸ ಡೈರೆಕ್ಟರ್ ಅಂತ ಅವರು ಹಿಂದು ಮುಂದೆ ನೋಡಲಿಲ್ಲ. ಅವರ ಪ್ರೆಸೆನ್ಸ್ ಇಂದ ಸಿನಿಮಾಗೆ ಮತ್ತಷ್ಟು ಕಳೆ ಸಿಕ್ಕಿದೆ.
* 'ವರ್ಲ್ಡ್ ಕಪ್' ನಡೆಯುವ ವೇಳೆಯಲ್ಲಿ 'ಮೈತ್ರಿ' ರಿಲೀಸ್ ಆಗುತ್ತಿದೆ. ಕ್ರಿಕೆಟ್ ಭಯ ಕಾಡುತ್ತಿಲ್ಲವಾ?
- ಖಂಡಿತ ನಮಗೆ ಭಯ ಇಲ್ಲ. ಈಗ ಯಾರೂ ವರ್ಲ್ಡ್ ಕಪ್ ನ ನೋಡುತ್ತಿಲ್ಲ. ಐಪಿಎಲ್ ಯಾವಾಗ ಶುರುವಾಯ್ತೋ, ಕ್ರಿಕೆಟ್ ಅನ್ನುವುದನ್ನ ಕ್ರಿಕೆಟ್ಟೇ ಸಾಯಿಸಿಬಿಡ್ತು. ನಾವೂ ಕ್ರಿಕೆಟ್ ಅಭಿಮಾನಿಗಳೇ. ಇವಾಗ ನಮಗೆ ಅದನ್ನ ನೋಡೋಕೆ ಇಂಟ್ರೆಸ್ಟ್ ಇಲ್ಲ. ಇಂಡಿಯಾ-ಪಾಕಿಸ್ತಾನ ಮ್ಯಾಚ್ ಮುಗಿದಿದೆ. ಇನ್ನು ಫೈನಲ್ ಮ್ಯಾಚ್ ಅಷ್ಟೇ ಕಾತರ.
* 'ಮೈತ್ರಿ' ಸಿನಿಮಾ ನಾಳೆ ರಿಲೀಸ್ ಆಗುತ್ತಿದೆ. ನಮ್ಮ ಓದುಗರಿಗೆ ಏನು ಹೇಳುವುದಕ್ಕೆ ಇಷ್ಟ ಪಡುತ್ತೀರಾ...
- ತುಂಬಾ ಪ್ರಾಮಾಣಿಕವಾಗಿ ಸಿನಿಮಾ ಮಾಡಿದ್ದೀವಿ. 'ಮೈತ್ರಿ' ಒಂದೊಳ್ಳೆ ಸಿನಿಮಾ. ಎಲ್ಲರೂ ನೋಡಿ ಹಾರೈಸಿ ಅಂತ ಕೇಳಿಕೊಳ್ಳುತ್ತೇನೆ.
ಸಂದರ್ಶನ : ಹರ್ಷಿತಾ ನಾಗರಾಜ್