Don't Miss!
- News ಮನೆ ಬಾಗಿಲಿಗೆ ಹೋದರೂ ಸಿಗಲಿಲ್ಲ ಬಿಜೆಪಿ ಶಾಸಕರು, ಸಂಸದರು: ಉ.ಕನ್ನಡ ಬಿಜೆಪಿ ಅಭ್ಯರ್ಥಿ ಕಾಗೇರಿಗಿಲ್ಲ ಅಸಮಾಧಾನಿತರ ಬೆಂಬಲ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Automobiles ಯುಎಸ್ಎ, ಕೆನಡಾಗೂ ಕಾಲಿಟ್ಟ ಭಾರತೀಯ ಬೈಕ್: ಮುಂದುವರೆದ ವಿಶ್ವಗುರು ಭಾರತದ ನಾಗಾಲೋಟ
- Lifestyle ವಿಶ್ವದಲ್ಲೇ ಅತೀ ಹೆಚ್ಚು ಬಾರಿ ಚುನಾವಣೆ ಸೋತ ವ್ಯಕ್ತಿ..! ಯಾರು ಈ ಸೋಲುವ ಸರದಾರ ಗೊತ್ತಾ?
- Finance ನಿಮಗೆ ಗೊತ್ತಲ್ಲದೇ ನಿಮ್ಮ ಹೆಸರಲ್ಲಿ ಖಾತೆ ತೆರೆದಿರ್ತಾರೆ, ಪಿಂಚಣಿ ಯೋಜನೆ ಬಗ್ಗೆ ಹುಷಾರಾಗಿರಿ
- Sports IPL 2024: ಐಪಿಎಲ್ನಲ್ಲಿ ವಿಶಿಷ್ಟ ದಾಖಲೆ ಬರೆದ ಜಯದೇವ್ ಉನಾದ್ಕಟ್; ಈ ಸಾಧನೆ ಮಾಡಿದ ಮೊದಲ ಭಾರತೀಯ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನಿರೂಪ್ ಭಂಡಾರಿ ಈಸ್ ಎ ನೈಸ್ ಪರ್ಸನ್: ರಾಧಿಕಾ ಪಂಡಿತ್
ರಾಧಿಕಾ ಪಂಡಿತ್ ನಟನೆಯ ಚಿತ್ರಗಳೆಂದರೆ ಅವುಗಳಿಗೊಂದು ಬ್ರ್ಯಾಂಡ್ ಸೃಷ್ಟಿಯಾಗಿದೆ. ಪುರುಷಾಧಿಪತ್ಯವಿರುವ ಚಿತ್ರರಂಗದಲ್ಲಿ ಸ್ಟಾರ್ ನಟಿಯರಿಗೆ ಕೊರತೆಯಿಲ್ಲ. ಆದರೆ ಸ್ಟಾರ್ ನಾಯಕನ ನಾಯಕಿ ಎನ್ನುವ ಕಾರಣದಿಂದ ಮಾತ್ರವಲ್ಲದೆ ತಮ್ಮದೇ ನಟನೆ, ಪಾತ್ರ, ಶೈಲಿಗಳಿಂದ ಗಮನ ಸೆಳೆಯುವ ನಟಿಯಾಗಿ ಪ್ರಥಮ ಸ್ಥಾನದಲ್ಲಿರುವವರು ರಾಧಿಕಾ.
ಆದರೆ ರಾಧಿಕಾ ರಿಯಲ್ ಲೈಫ್ ನಂತೆ ಪರದೆಯ ಮೇಲೆ ಕೂಡ ಯಶ್ ಜೋಡಿಯಾಗಿ ಮಿಂಚಿದ್ದೇ ಹೆಚ್ಚು. ಇದೀಗ ಪ್ರಥಮ ಬಾರಿಗೆ ಕನ್ನಡದ ಮತ್ತೋರ್ವ ಚೆಲುವಿನ ನಟ, ರಂಗಿತರಂಗ ಖ್ಯಾತಿಯ ನಿರೂಪ್ ಭಂಡಾರಿಗೆ ನಾಯಕಿಯಾಗಿ ಸಾಥ್ ನೀಡಿದ್ದಾರೆ ರಾಧಿಕಾ.
ಇದು ಆದಿಲಕ್ಷ್ಮಿಯ ಹಾದಿಯಲ್ಲಿನ ನಮ್ಮ ಪಯಣ: ನಿರ್ದೇಶಕಿ ವಿ ಪ್ರಿಯಾ
ಈ ಜೋಡಿಯ ಚಿತ್ರ ಕನ್ನಡ ಚಿತ್ರರಂಗದಲ್ಲಿ ಮತ್ತೊಂದು ಇತಿಹಾಸ ದಾಖಲಿಸುವ ಯಶಸ್ಸು ತರುವ ಚಿತ್ರಕ್ಕೆ ಸಾಕ್ಷಿಯಾಗುತ್ತಾ? ಚಿತ್ರದ ಶೂಟಿಂಗ್ ವೇಳೆ ರಾಧಿಕಾ ಪಂಡಿತ್ ಅವರ ಅನುಭವಗಳೇನು? ಚಿತ್ರದ ಕುರಿತಾದ ನಿರೀಕ್ಷೆಗಳೇನು? ನಟ ಅನೂಪ್ ಭಂಡಾರಿ ಬಗ್ಗೆ ಅವರು ಹೇಳಿದ್ದೇನು? ಎಂಬ ಎಲ್ಲ ವಿಚಾರಗಳಲ್ಲಿ ಫಿಲ್ಮೀಬೀಟ್ ಕೇಳಿದಂಥ ಪ್ರಶ್ನೆಗಳಿಗೆ ಅವರು ನೀಡಿರುವ ಉತ್ತರಗಳು ಇಲ್ಲಿವೆ.
ಆದಿ ಲಕ್ಷ್ಮಿ ಪುರಾಣ ಚಿತ್ರವನ್ನು ನೀವು ಆಯ್ಕೆ ಮಾಡಿಕೊಳ್ಳಲು ಕಾರಣವೇನು?
ಸಾಮಾನ್ಯವಾಗಿ ನಾನು ಚಿತ್ರ, ಅದರಲ್ಲಿ ನನಗಿರುವ ಪಾತ್ರ ನೋಡಿ ಒಪ್ಪಿಕೊಳ್ಳುತ್ತೇನೆ. ಮದುವೆ ಮುಂಚೆ ಸಿಕ್ಕಿದ್ದರೂ ಈ ಪಾತ್ರವನ್ನು ಒಪ್ಪಿಕೊಳ್ಳುತ್ತಿದ್ದೆ. ಯಾಕೆಂದರೆ ಮದುವೆ ಬಳಿಕ ಮಾಡಬಹುದಾದ ಪಾತ್ರ ಎನ್ನುವ ಕಾರಣಕ್ಕಾಗಿ ಮಾಡಿದ ಆಯ್ಕೆ ಅಲ್ಲ. ಇದು ತುಂಬ ಸರಳವಾದ ಕತೆ ಹೊಂದಿರುವ ಚಿತ್ರ. ತುಂಬ ಎಂಟರ್ಟೇನ್ಮೆಂಟ್, ಮಜಾ ತುಂಬಿರುವ ಸನ್ನಿವೇಶಗಳಿರುವ ಕತೆ. ಅಲ್ಲದೆ ಇಂಥ ಪಾತ್ರವನ್ನು ನಾನು ಈ ಹಿಂದೆ ಮಾಡಿರಲಿಲ್ಲ ಎನ್ನುವ ಅನಿಸಿಕೆ ಕೂಡ ಇದೆ.
ಚಿತ್ರದ ಡೈರೆಕ್ಟರ್ ಮಹಿಳೆಯಾಗಿರುವ ಕಾರಣ ನಿಮಗೆ ಕಂಫರ್ಟ್ ಲೆವೆಲ್ ಹೆಚ್ಚಾಗಿತ್ತು ಎನ್ನಬಹುದೇ?
ಹಾಗೇನಿಲ್ಲ. ಈ ಹಿಂದೆ ನಾನು ನಟಿಸಿದ ಪುರುಷ ನಿರ್ದೇಶಕರ ಚಿತ್ರಗಳಲ್ಲಿಯೂ ಕಂಫರ್ಟ್ ಝೋನ್ ಇತ್ತು. ಆದರೆ ಡೈರೆಕ್ಟರ್ ಹೆಣ್ಣು ಎನ್ನುವ ಕಾರಣಕ್ಕಾಗಿ, ಅವರ ವರ್ಕಿಂಗ್ ಶೈಲಿ ನೋಡುವಾಗ ಒಬ್ಬಳು ಹೆಣ್ಣಾಗಿ ನನಗೆ ಅಭಿಮಾನ ಇತ್ತು. ಆದರೆ ಮಹಿಳಾ ನಿರ್ದೇಶಕಿಯ ಜತೆಗೆ ಕೆಲಸ ಮಾಡುತ್ತೇನೆ ಎನ್ನುವುದು ಚಿತ್ರದ ಆಯ್ಕೆಗೆ ಕಾರಣವಾಗಿರಲಿಲ್ಲ. ನಿರ್ದೇಶಕಿ ಮಾತ್ರವಲ್ಲ, ಛಾಯಾಗ್ರಹಣ ಸೇರಿದಂತೆ ಚಿತ್ರದ ಹಲವಾರು ವಿಭಾಗಗಳಲ್ಲಿ ಮಹಿಳಾ ಪ್ರಾಧಾನ್ಯತೆ ಇದೆ ಎನ್ನುವುದು ಸತ್ಯ. ನಿರ್ದೇಶಕಿ ಕ್ರೌಡ್ ಕಂಟ್ರೋಲ್ ಮಾಡುವುದು, ಛಾಯಾಗ್ರಾಹಕಿ ಕ್ಯಾಮೆರಾ ಎತ್ತಿಕೊಂಡು ಹೋಗಿ ಪ್ಲೇಸ್ ಮಾಡೋದು..ಎಲ್ಲವನ್ನೂ ನನ್ನ ಚಿತ್ರದ ಸೆಟ್ ನಲ್ಲಿ ಪ್ರಥಮ ಬಾರಿ ನೋಡಿ ಖುಷಿಯಾದೆ.
ರಾಕಿ ಭಾಯ್ ಕೈನಲ್ಲಿದೆ ಪತ್ನಿ ರಾಧಿಕಾ ಸಿನಿಮಾ ಟ್ರೈಲರ್
ಪ್ರಿಯಾ ಅವರ ನಿರ್ದೇಶನ ಕಂಡಾಗ ನಿಮಗೂ ನಿರ್ದೇಶಕಿಯಾಗುವ ಆಕಾಂಕ್ಷೆ ಮೂಡಿದೆಯೇ?
ನಿರ್ದೇಶನ ಮಾಡುವುದರ ಬಗ್ಗೆ ಮೊದಲಿನಿಂದಲೂ ನಾನು ಯೋಚಿಸಿಲ್ಲ. ಯಾಕೆಂದರೆ ಅದು ನನ್ನ ಪಾಲಿಗೆ ನಿಭಾಯಿಸಲಾಗದಷ್ಟು ದೊಡ್ಡ ಜವಾಬ್ದಾರಿ. ನಾವು ಕಲಾವಿದರು ನಮ್ಮ ನಮ್ಮ ದೃಶ್ಯಗಳನ್ನು ಮುಗಿಸಿ ಹೋಗಿಬಿಡುತ್ತೇವೆ. ಆದರೆ ಡೈರೆಕ್ಟರ್ ಇಡೀ ಚಿತ್ರವನ್ನೇ ನಿಭಾಯಿಸಬೇಕಾಗುತ್ತದೆ. ಆದರೆ ನಿರ್ದೇಶಕಿಯ ಕೆಲಸ ಹೇಗೆ ಸ್ಫೂರ್ತಿ ಆಗುತ್ತದೆ ಅಂದರೆ ಮಹಿಳೆಯನ್ನು ಪುರುಷರಿಗೆ ಸಮಾನಳು ಎಂದು ಹೇಳಿದರೂ ಇಂಥ ಕೆಲಸಗಳಲ್ಲಿ ಮಹಿಳೆಯರನ್ನು ಕಾಣೋದೇ ಅಪರೂಪ. ಆದರೆ ಇವರನ್ನೆಲ್ಲ ನೋಡಿದಾಗ ಇದೇ ನಿಜವಾದ ಸಮಾನತೆ ಎಂಬ ಭಾವನೆ ಮೂಡುತ್ತದೆ ಅಷ್ಟೇ.
ನಿರೂಪ್ ಭಂಡಾರಿ ಅವರಿಗೆ ಜೋಡಿಯಾದ ಅನುಭವ ಹೇಗಿತ್ತು?
ರಂಗಿತರಂಗ ಚಿತ್ರ ಮತ್ತು ಅವರ ನಟನೆ ಎರಡೂ ಇಷ್ಟವಾಗಿತ್ತು. ಈ ಚಿತ್ರದಲ್ಲಿ ಅವರು ಈ ಪಾತ್ರ ಮಾಡುತ್ತಿದ್ದಾರೆ ಎಂದು ತಿಳಿದಾಗ ತುಂಬ ಖುಷಿಯಾಯಿತು. ಹಿ ಈಸ್ ವೆರಿ ನೈಸ್ ಪರ್ಸನ್. ಚಿತ್ರದಲ್ಲಿ ತುಂಬ ಸಟಲ್ ಆಗಿ ಎಮೋಶನ್ಸ್ ಎಲ್ಲ ವ್ಯಕ್ತಪಡಿಸೋದು, ಕಾಮಿಕ್ ಟೈಮಿಂಗ್ಸ್ ಎಲ್ಲ ಕಂಡಾಗ ನಿಜಕ್ಕೂ ಖುಷಿಯಾಯಿತು.
ಕೊನೆಗು ಯಶ್-ರಾಧಿಕಾ ಮಗಳ ಹೆಸರು ಫೈನಲ್ ಆಯ್ತು
ನಿರ್ದೇಶಕಿಯವರ ಪ್ರಕಾರ ಕೆ.ಆರ್ ಮಾರ್ಕೆಟ್ ಸನ್ನಿವೇಶದ ಚಿತ್ರೀಕರಣ ಮರೆಯಲಾಗದ ಘಟನೆಯಂತೆ. ನಿಮಗೆ ಹೇಗಿತ್ತು?
ನಿಜ. ಕೃಷ್ಣರಾಜ ಮಾರುಕಟ್ಟೆ ಶೂಟಿಂಗ್ ನನಗೂ ತುಂಬ ಮೆಮೋರೇಬಲ್ ಎನ್ನಬಹುದು. ಯಾಕೆಂದರೆ ಅದು ಚಿತ್ರೀಕರಣದ ಆರಂಭದ ದಿನಗಳಲ್ಲೇ ಶೂಟ್ ಮಾಡಿದ ದೃಶ್ಯ ಅದು. ಸಿನಿಮಾದಲ್ಲಿ ಕೂಡ ಆದಿ ಮತ್ತು ಲಕ್ಷ್ಮಿಯ ಮೊದಲ ಭೇಟಿಯ ಸನ್ನಿವೇಶ ಅದು. ಮಾಮೂಲಾಗಿಯೇ ಆ ಮಾರ್ಕೆಟ್ ನಲ್ಲಿ ಎಷ್ಟೊಂದು ಜನ ತುಂಬಿರುತ್ತಾರೆ ಅಂತ ನಮಗೆಲ್ಲ ಗೊತ್ತು. ಅದರಲ್ಲೂ ಸಿನಿಮಾ ಫೈಟ್ ಅಂದಾಗ ಜನ ಡಬಲ್ಲಾಗಿ ಸೇರಿಕೊಂಡಿದ್ದರು. ಕ್ಯಾಮೆರಾ ಬೇರೆ ಕಾಣದೇ ಇರೋ ತರಹ ಇಟ್ಟಿದ್ದರು. ಹಾಗಾಗಿ ದೂರದಿಂದ ನೋಡೋರಿಗೆ ತಕ್ಷಣಕ್ಕೆ ಅಲ್ಲಿ ಶೂಟಿಂಗ್ ನಡೀತಿದೆ ಎನ್ನುವುದೇ ಗೊತ್ತಾಗ್ತಿರಲಿಲ್ಲ.
ಒಂದು ಗ್ಯಾಪ್ ನ ಬಳಿಕ ಎಂಟ್ರಿ ನೀಡಿದ ಕಾರಣ ಟ್ರ್ಯಾಕ್ ಗೆ ಬರಲು ಸಮಯ ಬೇಕಾಯಿತೇ?
ಖಂಡಿತವಾಗಿಯೂ ಇಲ್ಲ. ಯಾಕೆಂದರೆ ನನಗೆ ಇದು ಒಂದು ಗ್ಯಾಪ್ ಆಗಿ ಅನಿಸಿಲ್ಲ. ಮದುವೆ ಬಳಿಕದ ಆರು ತಿಂಗಳು ನಾನು ಬೇಕೆಂದೇ ಬ್ರೇಕ್ ತೆಗೆದುಕೊಂಡಿದ್ದೆ. ಸೆಟಲಾಗೋಕೆ ಸ್ವಲ್ಪ ಸಮಯ ಬೇಕಾಗುತ್ತದೆ ಎಂಬ ಕಾರಣಕ್ಕೆ ಬಿಡುವು ಬೇಕಿತ್ತು. ಅದರ ಬಳಿಕ ಆಯ್ಕೆ ಮಾಡಿಕೊಂಡಂಥ ಸಬ್ಜೆಕ್ಟ್ ಇದು. ನಡುವೆ ಶೂಟಿಂಗ್, ಡಬ್ಬಿಂಗ್ ಎಲ್ಲಾ ಮಾಡ್ಕೊಂಡೇ ಬಂದಿದ್ದೀನಿ. ಕೆಲಸಕ್ಕೆ ಮತ್ತೆ ಹಾಜರಾಗಿದ್ದೀನಿ ಎಂಬ ಭಾವದ ಹೊರತು ಸಂಪರ್ಕವೇ ಬಿಟ್ಟು ಹೋಗಿತ್ತು.. ಎನ್ನುವ ಫೀಲ್ ಏನೂ ಆಗಿಲ್ಲ.
ಶೂಟಿಂಗ್ ನಡೆಯಬೇಕಾದರೆ ನೀವು ಗರ್ಭಿಣಿಯಾಗ್ತಿದ್ದೀರಿ ಎನ್ನುವ ಅರಿವು ಬಂದಾಗ ಆತಂಕಕ್ಕೆ ಒಳಗಾದಿರ?
ನಾನು ಗರ್ಭಿಣಿಯಾಗಿದ್ದು ಚಿತ್ರೀಕರಣ ಮುಗಿದ ಮೇಲೆ. ಆಮೇಲೆ ಇದ್ದಿದ್ದು ಡಬ್ಬಿಂಗ್ ಮೊದಲಾದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುವ ಹಂತವಷ್ಟೇ. ಇನ್ನು ನಾನು ಆತಂಕ ಪಡುವಂಥ ಸಂದರ್ಭವಂತು ಇರಲೇ ಇಲ್ಲ, ಯಾಕೆಂದರೆ ನಾನು ಯಾವತ್ತೂ ಪರ್ಸನಲ್ ಮತ್ತು ಪ್ರೊಫೆಷನಲ್ ಬದುಕನ್ನು ಮಿಕ್ಸ್ ಮಾಡಿಕೊಳ್ಳುವುದಿಲ್ಲ. ಅಂದರೆ ಪರ್ಸನಲ್ ವಿಚಾರಗಳನ್ನು ಕೆಲಸದ ನಡುವಿನಲ್ಲಾಗಲೀ, ಕೆಲಸದಲ್ಲಿನ ವಿಚಾರಗಳನ್ನು ವೈಯಕ್ತಿಕ ಬದುಕಿಗಾಗಲೀ ಪರಿಣಾಮ ಬೀರದ ಹಾಗೆ ನೋಡಿಕೊಂಡಿದ್ದೇನೆ. ಎಲ್ಲವೂ ಯೋಜನೆಯ ಪ್ರಕಾರವೇ ನಡೆದಿದೆ.
ರಾಧಿಕಾ ಪಂಡಿತ್ ಕಂಬ್ಯಾಕ್ ಗೆ ಚಿರು ಸರ್ಜಾ ಎದುರಾಳಿ.!
ಒಂದುವೇಳೆ ಗರ್ಭಿಣಿಯ ಪರಿಸ್ಥಿತಿಯನ್ನೇ ಚಿತ್ರದಲ್ಲಿ ಬಳಸಿಕೊಳ್ಳುವಂಥ ಪ್ರಗ್ನೆಂಟ್ ಪಾತ್ರದ ಆಫರ್ ಬಂದರೆ ಈಗಲೂ ನಟಿಸಲು ಸಿದ್ಧರಿದ್ದೀರ?
ನಾನು ಯಾವತ್ತೂ ಇಂಥದೇ ಪಾತ್ರ ಮಾಡಬೇಕು ಎನ್ನುವ ಪ್ಲ್ಯಾನ್ ಹಾಕಿಕೊಂಡು ಚಿತ್ರ ಹುಡುಕಿಲ್ಲ. ಮದುವೆಗೆ ಮೊದಲು ಕೂಡ ನನಗೆ ಇಷ್ಟವಾಗದ ಪಾತ್ರಗಳು ಬಂದಾಗ ಒಪ್ಪಿಕೊಂಡಿಲ್ಲ. ಮದುವೆಯಾದ ಮೇಲೆ ಮದುವೆಯಾಗಿರೋ ಗೃಹಿಣಿ ಪಾತರವನ್ನೇ ಮಾಡಬೇಕು ಎಂದಾಗಲೀ, ಈಗ ಗರ್ಭಿಣಿ ಎನ್ನುವ ಕಾರಣಕ್ಕಾಗಿ ಗರ್ಭಿಣಿಯ ಪಾತ್ರವನ್ನೇ ಮಾಡಬೇಕು ಎಂದಾಗಲೀ ನಾನು ಯೋಚಿಸಲ್ಲ. ನಾನು ಕತೆ ಕೇಳ್ತಾ ಇರ್ತೀನಿ. ಕೇಳಿರುವ ಕತೆಗಳಲ್ಲಿ ನನಗೆ ಇಷ್ಟವಾದ ಚಿತ್ರವನ್ನು ಆಯ್ಕೆ ಮಾಡ್ಕೋತೀನಿ. ಅಷ್ಟೇ. ಆಗಲೇ ಹೇಳಿದಂತೆ ಪರ್ಸನಲ್ ಲೈಫ್ ಗೆ ಹೊಂದಿಕೊಂಡಂತೆ ಪಾತ್ರಗಳನ್ನು ಆಯ್ಕೆ ಮಾಡುವ ರೀತಿ ನನ್ನದಲ್ಲ.
ಆದರೆ ಇಬ್ಬರು ಮಕ್ಕಳ ತಾಯಿಯಾದ ಮೇಲೆ ಸಹಜವಾಗಿ ಒಂದಷ್ಟು ಬ್ರೇಕ್ ತೆಗೆದುಕೊಳ್ಳಲೇ ಬೇಕಾಗುತ್ತದೆ ಅಲ್ಲವೇ?
ಹಾಗೇನಿಲ್ಲ. ಅದೇ ನನಗೆ ಯಾವುದನ್ನೇ ಆಗಲೀ ಹೀಗೆಯೇ ಇರಬೇಕು, ಇರುತ್ತೆ ಎನ್ನುವುದರಲ್ಲಿ ನಂಬಿಕೆಯಿಲ್ಲ. ಉದಾಹರಣೆಗೆ ಈಗಲೇ ನೋಡಿ, ಮೊದಲ ಮಗುವಾದ ಮೇಲೆ ಕೂಡ ನಾನು ತಕ್ಷಣ ಬ್ರೇಕ್ ತೆಗೆದುಕೊಂಡಿಲ್ಲ. ಆದಿ ಲಕ್ಷ್ಮಿ ಪುರಾಣದ ಪ್ರಮೋಶನಲ್ಲಿ ತೊಡಗಿಸಿಕೊಂಡಿದ್ದೇನೆ. ಹಾಗಾಗಿ ಎರಡನೇ ಮಗು ಕೂಡ ಅಷ್ಟೇ, ಆ ಬಳಿಕ ಬ್ರೇಕ್ ಬೇಕಾ ಬೇಡ್ವ ಎನ್ನುವುದನ್ನು ಆ ಸಂದರ್ಭದಲ್ಲಿ ನಾನು ನಿರ್ಧರಿಸುತ್ತೇನೆ.
ನಾನು-ಯಶ್ ಪರ್ಫೆಕ್ಟ್ ಜೋಡಿ ಅಲ್ಲ: ರಾಧಿಕಾ ಪಂಡಿತ್ ಸರ್ಪ್ರೈಸ್
ಸಿನಿಮಾದ ಹೊರತು ಧಾರಾವಾಹಿ ಅಥವಾ ವೆಬ್ ಸೀರೀಸ್ ಆಫರ್ ಬಂದರೆ ಒಪ್ಪುವ ಸಾಧ್ಯತೆ ಇದೆಯಾ?
ಕೆಲಸವಂತೂ ಮಾಡುತ್ತಿರುತ್ತೇನೆ. ಆದರೆ ಅದು ಸಿನಿಮಾನ, ವೆಬ್ ಸೀರೀಸ ಎನ್ನುವುದು ಆ ಸಂದರ್ಭಕ್ಕೆ ಹೊಂದಿಕೊಂಡಿರುತ್ತೆ. ಅದೆಲ್ಲ ಏನು ಗೊತ್ತಾ.. ನಾವು ಪ್ಲ್ಯಾನ್ ಮಾಡಿ ಹೇಳೋಕಾಗಲ್ಲ. ಜೀವನ ಹೇಗೆ ಅಂತ ಆ ಸಮಯ ಬಂದಾಗಲೇ ಹೇಳೋಕಾಗೋದು. ಉದಾಹರಣೆಗೆ ನನ್ನ ತಂದೆ ಒಬ್ಬರು ಥಿಯೇಟರ್ ಪರ್ಸನ್. ನಾನು ಚಿಕ್ಕ ವಯಸ್ಸಿನಿಂದಲೂ ಅವರನ್ನು ನೋಡುತ್ತಾ ಬಂದಿದ್ದೀನಿ. ಆದರೆ ನನಗೆ ಒಮ್ಮೆಯೂ ರಂಗದ ಮೇಲೆ ಕಾಣಿಸಿಕೊಳ್ಳುವ ಅವಕಾಶ ಬಂದೇ ಇಲ್ಲ! ಹಾಗಂತ ರಂಗಭೂಮಿ ನನಗೆ ಇಷ್ಟವಿಲ್ಲ ಅಂತ ಅಲ್ಲ. ಸಿನಿಮಾದಲ್ಲಿ ತೊಡಗಿಸಿಕೊಂಡ ಕಾರಣ ಆ ಕಡೆಗೆ ಗಮನ ಹರಿಸಿಲ್ಲ.
ವಿಕಿಪೀಡಿಯಾದಲ್ಲಿ ಉಲ್ಲೇಖಿಸಿರುವ ಹಾಗೆ ಪೂಜೆಗಳಿಗಿಂತ ಹೆಚ್ಚು ಪ್ರಾರ್ಥನೆಯಲ್ಲಿ ನಂಬಿಕೆ ಇರಿಸುವ ನಿಮ್ಮ ನಿಲುವು ಇಂದಿಗೂ ಹಾಗೆಯೇ ಉಳಿದುಕೊಂಡಿದೆಯೇ?
ನನ್ನ ಬಹಳಷ್ಟು ವಿಚಾರಗಳನ್ನು ವಿಕಿಪೀಡಿಯ ತಪ್ಪಾಗಿ ಉಲ್ಲೇಖಿಸಿದೆ. ಉದಾಹರಣೆಗೆ ನಾನು ಶಿರಾಲಿಯಲ್ಲಿ ಹುಟ್ಟಿದೆ ಅನ್ನೋದು, ಮತ್ತು ಭಟ್ಕಳದಲ್ಲಿ ಎಜುಕೇಶನ್ ಮಾಡಿದ್ದೀನಿ ಎಂದೆಲ್ಲ ತಪ್ಪು ಮಾಹಿತಿ ನೀಡಲಾಗಿದೆ. ಅದೇ ರೀತಿ ದೇವರ ವಿಚಾರದಲ್ಲೂ ಅಷ್ಟೇ, ನಾನು ಮೊದಲಿನಿಂದಲೂ ತುಂಬ ದೈವಭಕ್ತೆ. ಹಾಗಂತ ನಿತ್ಯ ದೇವಸ್ಥಾನಕ್ಕೆ ಹೋಗ್ತೀನಿ ಅಂತ ಏನಿಲ್ಲ. ಅಂಥ ನಂಬಿಕೆಗಳು ಈಗಲೂ ಕೂಡ ಅಂದರೆ ಮದುವೆ ಬಳಿಕವೂ ಹಾಗೆಯೇ ಇವೆ.
ನಿಮ್ಮ ಪತಿ ಯಶ್ ಅವರು ಪ್ರಸ್ತುತ ಒಬ್ಬ ದೊಡ್ಡ ಸ್ಟಾರ್ ಆಗಿದ್ದಾರೆ. ಇದನ್ನು ಹೇಗೆ ಕಾಣುತ್ತೀರಿ ?
ಯಶ್ ಅವರ ಈ ಬೆಳವಣಿಗೆಯನ್ನು ಬಹಳ ಹತ್ತಿರದಿಂದ ನೋಡುವ ಅವಕಾಶ ನನಗೆ ದೊರಕಿದೆ. ಕೆ.ಜಿ.ಎಫ್ ಒಂದೇ ಅಲ್ಲ, ಅದರ ಹಿಂದಿನ ಚಿತ್ರಗಳ ವಿಚಾರದಲ್ಲಿ ಕೂಡ ಅಷ್ಟೇ, ಸ್ಕ್ರಿಪ್ಟ್, ಮ್ಯೂಸಿಕ್ ನಿಂದ ಹಿಡಿದು ಪ್ರತಿಯೊಂದರಲ್ಲಿಯೂ ಇನ್ವಾಲ್ವ್ ಆಗಿರುತ್ತಾರೆ. ಪಾತ್ರಕ್ಕೆ ಸಮರ್ಪಿಸಿಕೊಳ್ಳುವುದರ ಜತೆಗೆ ಪೂರ್ತಿ ಚಿತ್ರದ ಬಗ್ಗೆ ಕಾಳಜಿ ತೆಗೆದುಕೊಳ್ಳುತ್ತಾರೆ. ಹಾಗಾಗಿ ಅವರ ಹಾರ್ಡ್ ವರ್ಕ್ ಅವರಿಗೆ ಇಂದು ಇಷ್ಟು ಖ್ಯಾತಿ ತಂದು ಕೊಟ್ಟಿದೆ. ಹಾಗಾಗಿ ಅದನ್ನು ಲಕ್ ಎಂದು ಹೇಳಲಾರೆ. ಇನ್ನು ಪತ್ನಿಯಾಗಿ ಅಫ್ಕೋರ್ಸ್ ನಾನು ತುಂಬ ಹೆಮ್ಮೆ ಪಡ್ತೀನಿ, ಅಷ್ಟೇ ಖುಷಿಯಿದೆ.
ಮಗು ಐರಾ ವಿಶೇಷಗಳ ಬಗ್ಗೆ ಹೇಳುತ್ತೀರ?
ಮಗು ಐರಾ ವಿಚಾರದಲ್ಲಿ ಕೂಡ ನಾನು ನಿಜಕ್ಕೂ ದೇವರ ಕೃಪೆಗೆ ಪಾತ್ರಳಾಗಿದ್ದೇನೆ. ಯಾಕೆಂದರೆ ಮೊದಲ ಮಗು ಹೆಣ್ಣಾಗಿರಬೇಕು ಎನ್ನುವ ಆಸೆಯಿತ್ತು. ಅದರಂತೆ ನಡೆಯಿತು. ಇನ್ನು ಎಲ್ಲ ಕಡೆ ಹೇಳಿಕೊಂಡಿರುವ ಹಾಗೆ ನಾನು ಇದುವರೆಗೆ ಮಾಡಿರುವ ಪಾತ್ರಗಳಲ್ಲಿ ಈಗ ನಿಜ ಜೀವನದಲ್ಲಿ ನಿರ್ವಹಿಸುತ್ತಿರೋ ತಾಯಿಯ ಪಾತ್ರ ಬೆಸ್ಟ್ ಎಂದೇ ಹೇಳುತ್ತೇನೆ! ಯಾಕೆಂದರೆ ನನ್ನ ಪಾಪು ರಾತ್ರಿ ಎಲ್ಲ ಚೆನ್ನಾಗಿ ನಿದ್ದೆ ಮಾಡುತ್ತೆ, ನನಗೆ ಜಾಸ್ತಿ ತೊಂದರೆ ಕೊಡುವುದಿಲ್ಲ.
ಮತ್ತೆ ಚಿತ್ರದ ಬಗ್ಗೆ ಮಾತನಾಡುವುದಾದರೆ ನಿಮ್ಮ ಪ್ರಕಾರ 'ಆದಿ ಲಕ್ಷ್ಮಿ ಪುರಾಣ'ವನ್ನು ಜನ ಯಾಕೆ ನೋಡಬೇಕು?
ಇದು ಒಂದು ಸಿಂಪಲ್ ಆಗಿರುವ ಎಂಟರ್ಟೇನ್ಮೆಂಟ್ ತುಂಬಿರುವ ಚಿತ್ರ. ಕುಟುಂಬ ಸಮೇತ ಥಿಯೇಟರ್ ಗೆ ಹೋದರೆ ಎರಡು ಗಂಟೆಗಳ ಕಾಲ ನಿಮ್ಮ ಚಿಂತೆಗಳನ್ನೆಲ್ಲ ಮರೆಯೋ ಹಾಗೆ ಮಾಡಿ, ಮನತುಂಬ ನಗಿಸುವ, ಲವಲವಿಕೆ ತುಂಬುವಂಥ ಚಿತ್ರ. ನಾವು ಚಿತ್ರೀಕರಣದ ವೇಳೆ ಎಷ್ಟು ಎಂಜಾಯ್ ಮಾಡಿದ್ದೇವೆಯೋ ಅಷ್ಟೇ ಖುಷಿ ಪ್ರೇಕ್ಷಕರಿಗೂ ಸಿಗುತ್ತೆ ಎನ್ನುವ ನಂಬಿಕೆ ನನಗಿದೆ