07 ವರ್ಷಗಳ ನಂತರ ಕನ್ನಡ ಚಿತ್ರರಂಗಕ್ಕೆ ಮರಳಿದ ಸಿತಾರಾ, 'ತೀರ್ಥರೂಪ ತಂದೆಯವರಿಗೆ' ಚಿತ್ರದ ವಿಶೇಷತೆಗಳೇನು..?
ಹಲವು ವರ್ಷಗಳವರೆಗೆ ಕುಂತು ಕಥೆಯನ್ನು ಹೆಣೆದು ಆ ನಂತರ ತಮ್ಮ ಕಥೆಯಲ್ಲಿ ಬರುವ ಪಾತ್ರಗಳಿಗೆ ಬೆಳ್ಳಿ ತೆರೆಯ ಮೇಲೆ ಜೀವ ನೀಡಬೇಕು .. ತಾನು ಕೂಡ ಯಶಸ್ವೀ ನಿರ್ದೇಶಕನಾಗಬೇಕು, ನನ್ನ ಕಥೆಯನ್ನು ಜಗತ್ತು ಮೆಚ್ಚಿ ಕೊಂಡಾಡಬೇಕು, ನನ್ನ ಕಥೆ ಭಾಷೆಯ ಭೇದ ಭಾವ ಇಲ್ಲದೇ ಎಲ್ಲರನ್ನೂ ಕೂಡ ತಲುಪಬೇಕು, ಎನ್ನುವ ಉದ್ದೇಶದಿಂದ ಇಲ್ಲಿ ಕಳೆದ ಕೆಲ ವರ್ಷಗಳಿಂದ ಹಲವಾರು ಉತ್ಸಾಹಿ ನಿರ್ದೇಶಕರು ಬಂದಿದ್ದಾರೆ.
ಆದರೆ .. ಹೀಗೆ ಬಂದವರಲ್ಲಿ ನಿಜಕ್ಕೂ ಗೆದ್ದಿದ್ದು, ತಮ್ಮ ಪ್ರಯತ್ನಗಳಿಂದ ಗಮನ ಸೆಳೆದಿದ್ದು, ಬಾಕ್ಸಾಫೀಸ್ನಲ್ಲಿ ಚಿತ್ರ ಗೆಲ್ಲದಿದ್ದರೂ ಕೂಡ ಪ್ರೇಕ್ಷಕರ ಹೃದಯವನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದು ಕೆಲವೇ ಕೆಲ ನಿರ್ದೇಶಕರು ಮಾತ್ರ. ಆ ಪೈಕಿ ಹೊಂದಿಸಿ ಬರೆಯಿರಿ ಚಿತ್ರದ ನಿರ್ದೇಶಕ ರಾಮೇನಹಳ್ಳಿ ಜಗನ್ನಾಥ ಕೂಡ ಒಬ್ಬರು.

ಬದುಕನ್ನು ಬಂದಹಾಗೆ ಸ್ವೀಕರಿಸಿ. ಹೊಂದಾಣಿಕೆಯಿಂದ ಬಾಳಿ. ಬೆಳಕು ಇರುವಲ್ಲಿ ಕತ್ತಲಿಗೆ ಜಾಗವಿಲ್ಲ... ಹೀಗೆ ಬದುಕು, ಸಂಬಂಧಗಳ ಮೌಲ್ಯಗಳನ್ನು ತಮ್ಮ ಚಿತ್ರ ಹೊಂದಿಸಿ ಬರೆಯಿರಿ ಮೂಲಕ ಹೇಳಿದ ರಾಮೇನಹಳ್ಳಿ ಜಗನ್ನಾಥ್ ತಮ್ಮ ಚಿತ್ರದ ಮೂಲಕ ಅಹಂಕಾರದ ಅಮಲಿನಲ್ಲಿ ತೇಲುವ ಯುವ ಜೋಡಿಗಳಿಗೆ ಪ್ರಬಲವಾದ ಸಂದೇಶವನ್ನು ಕೂಡ ನೀಡಿದ್ದರು.
ಇಂಥಾ ರಾಮೇನಹಳ್ಳಿ ಜಗನ್ನಾಥ್ ಸದ್ಯ 'ತೀರ್ಥರೂಪ ತಂದೆಯವರಿಗೆ' ಎಂಬ ಚಿತ್ರವನ್ನು ಮಾಡುತ್ತಿರುವುದು ನಿಮಗೆಲ್ಲ ಗೊತ್ತೇ ಇರಬೇಕು. ಯಾಕೆಂದರೆ ಶೀರ್ಷಿಕೆಯಿಂದಲೇ ಹಿಂದೆ ಸದ್ದು ಮಾಡಿದ ಚಿತ್ರ ಇದು. ಸದ್ಯ ತಮ್ಮ ಈ ಚಿತ್ರದ ಕುರಿತು ನಿರ್ದೇಶಕ ರಾಮೇನಹಳ್ಳಿ ಜಗನ್ನಾಥ್ ನಿಮ್ಮ 'ಫಿಲ್ಮಿ ಬೀಟ್' ಕನ್ನಡ ಜೊತೆ ಕೆಲ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ. ರಾಮೇನಹಳ್ಳಿ ಜಗನ್ನಾಥ್ ಹೇಳಿದ್ದೇನು ಎಂದು ತಿಳಿಯಲು ಮುಂದೆ ಓದಿ.

ತೀರ್ಥರೂಪ ತಂದೆಯವರಿಗೆ ಯಾವ ಹಂತದಲ್ಲಿದೆ.
"ಸದ್ಯಕ್ಕೆ ಚಿತ್ರದ ಚಿತ್ರೀಕರಣ ಎಲ್ಲ ಮುಗಿದಿದೆ. ಒಂದೆರಡು ದಿನದ ಪ್ಯಾಚ್ ವರ್ಕ್ ಇದೆ. ಇದಿಷ್ಟು ಕೆಲಸ ಹೊರತುಪಡಿಸಿದರೆ ಚಿತ್ರದ ಡಬ್ಬಿಂಗ್ ಕೂಡ ಮುಕ್ತಾಯವಾಗಿದೆ. ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಎಲ್ಲ ಅಂದುಕೊಂಡಂತೆ ಆದರೆ ಅಗಸ್ಟ್ ನಲ್ಲಿ ಬಿಡುಗಡೆ ಹಂತಕ್ಕೆ ಬಂದು ತಲುಪಿರುತ್ತೀವಿ" ಎಂದು ರಾಮೇನಹಳ್ಳಿ ಜಗನ್ನಾಥ ಹೇಳಿದ್ದಾರೆ.
ಚಿತ್ರದ ಚಿತ್ರೀಕರಣ ಎಲ್ಲೆಲ್ಲಿ ನಡೆದಿದೆ.
"ನಮ್ಮ ಕಥೆ ಬಹುತೇಕ ನಡೆಯುವುದು ಮೂಡಗೆರೆಯಲ್ಲಿಯೇ. ಹೀಗಾಗಿ ಮೂಡಗೆರೆಯಲ್ಲಿ ಹತ್ ಹತ್ರ 25 ದಿನಗಳ ಕಾಲ ಚಿತ್ರೀಕರಣ ನಡೆದಿದೆ. ಬೆಂಗಳೂರು ಮತ್ತು ಮೈಸೂರಿನಲ್ಲಿ ಕೆಲ ಸನ್ನಿವೇಶಗಳನ್ನು ಸೆರೆ ಹಿಡಿಯಲಾಗಿದೆ. ಕೇರಳ, ಮೇಘಾಲಯ, ಚಿರಾಪುಂಜಿ, ಚಿರಾಂಪುಜಿ, ಗುವಾಹಟಿ, ಸುತ್ತ ಮುತ್ತ ಕೂಡ ಚಿತ್ರದ ಶೂಟಿಂಗ್ ನಡೆದಿದೆ" ಎಂದು ಮಾಹಿತಿಯನ್ನು ನಿರ್ದೇಶಕ ರಾಮೇನಹಳ್ಳಿ ಜಗನ್ನಾಥ ನೀಡಿದ್ದಾರೆ.
ಈ ಸಲ ನಿಮ್ಮಿಂದ ಏನು ನಿರೀಕ್ಷೆ ಮಾಡಬಹುದು
"ಹೊಂದಿಸಿ ಬರೆಯಿರಿ ಚಿತ್ರದಲ್ಲಿ ಬದುಕು ಬಂದಂತೆ ಸ್ವೀಕರಿಸಿ ಎನ್ನುವ ಸಂದೇಶ ಇತ್ತು. ಭಾವನಾತ್ಮಕವಾದ ಪ್ರಯಾಣ ಇತ್ತು. ಇಲ್ಲಿಯೂ ಕೂಡ ನೀವು ಅದೇ ತರಹದ ಭಾವನೆಗಳನ್ನು ನಿರೀಕ್ಷೆ ಮಾಡಬಹುದು. ಇನ್ನು ಚಿತ್ರದ ಶೀರ್ಷಿಕೆಯನ್ನು ನಾವು ಅನಾವರಣ ಮಾಡಿದಾಗ ಡಿವಿಜಿ ಅವರ ಇರುವ ಭಾಗ್ಯವ ನೆನೆದು, ಬಾರನೆಂಬುದನು ಬಿಡು ಹರುಷಕಿದೆ ದಾರಿ ಎಂಬ ಸಾಲು ಉಪಯೋಗ ಮಾಡಿದ್ವಿ ಈ ಸಾಲುಗಳು ನಮ್ಮ ಚಿತ್ರದ ಆಶಯ ಕೂಡ ಹೌದು. ಇನ್ನು ಶೀರ್ಷಿಕೆ ಹೇಳುವಂತೆ ಇದು ತಂದೆಯ ಹುಡುಗಾಟದ ಕಥೆ. ತಂದೆ ತಾಯಿ ಮೌಲ್ಯಗಳನ್ನು ಸಾರುವಂತಹ ಚಿತ್ರ ನಮ್ಮ ತೀರ್ಥರೂಪ ತಂದೆಯವರಿಗೆ. ಸಂಪೂರ್ಣ ಕುಟಂಬ ಸಮೇತ ನೋಡಬಹುದಾದ ಚಿತ್ರ" ಎಂದು ಫಿಲ್ಮಿ ಬೀಟ್ ಕನ್ನಡಗೆ ನೀಡಿದ ಸಂದರ್ಶನಲ್ಲಿ ರಾಮೇನಹಳ್ಳಿ ಜಗನ್ನಾಥ ಹೇಳಿದ್ದಾರೆ.
ತಾರಾಬಳಗ
"ತೆಲುಗಿನಲ್ಲಿ ಈಗಾಗಲೇ ಕಿರುತೆರೆಯಲ್ಲಿ ಹೆಸರು ಮಾಡಿರುವ ಕನ್ನಡದ ಹುಡುಗ ನಿಹಾರ್ ಮುಕೇಶ್ ನಾಯಕನ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ವೃತ್ತಿಯಲ್ಲಿ ವೈದ್ಯರಾಗಿರುವ ತೆಲುಗು ಮತ್ತು ತಮಿಳಿನಲ್ಲಿ ಚಿರಪರಿಚಿತ ಇರುವ ದಿ ಫ್ಯಾಮಿಲಿ ಮ್ಯಾನ್ ಮತ್ತು ಮಂಗಳವಾರಂನಲ್ಲಿ ಕಾಣಿಸಿಕೊಂಡಿರುವ ರವೀಂದ್ರ ವಿಜಯ್ ಅವರು ಕೂಡ ನಮ್ಮ ಚಿತ್ರದಲ್ಲಿ ಪ್ರಮುಖ ಪಾತ್ರವನ್ನು ಮಾಡಿದ್ದಾರೆ. ಇವರು ಹೊರತು ಪಡಿಸಿದರೆ ರಾಜೇಶ್ ನಟರಂಗ ಅವರು ಚಿತ್ರದಲ್ಲಿದ್ದಾರೆ. ಶ್ರೀರಸ್ತು ಶುಭಮಸ್ತು ಧಾರಾವಾಹಿಯ ಅಜಿತ್ ಹಂಡೆ ಅವರು ಇದ್ದಾರೆ. ಅಶ್ಮಿತಾ ಇದ್ದಾರೆ. ಇನ್ನು ನಾಯಕಿಯ ಪಾತ್ರವನ್ನು ರಚನಾ ಇಂದರ್ ಮಾಡಿದ್ದಾರೆ. ಸ್ವಾತಿ ಅವರು ಹೀಗೆ ತುಂಬಾ ಜನ ನಮ್ಮ ಚಿತ್ರದಲ್ಲಿದ್ದಾರೆ" ಎಂದು ಮಾಹಿತಿಯನ್ನು ನಿರ್ದೇಶಕರು ಹಂಚಿಕೊಂಡಿದ್ದಾರೆ.
ಮರಳಿ ಕನ್ನಡ ಚಿತ್ರರಂಗಕ್ಕೆ ಹಾಲುಂಡ ತವರು ಸಿತಾರಾ
"ಸಿತಾರಾ ಮೇಡಂ ಅವರಿಗೆ ಮೊದಲು ಕಥೆ ಹೇಳಿದಾಗ ನಾನೇ ಯಾಕೆ ಎನ್ನುವ ಪ್ರಶ್ನೆ ಬಂತು. ಇನ್ನು ಇಡೀ ಚಿತ್ರ ತಾಯಿಯ ಜೊತೆ ಸಾಗುತ್ತೆ ಹೀಗಾಗಿ ತೀರ್ಥರೂಪ ತಂದೆಯವರಿಗೆ ಎಂಬ ಹೆಸರು ಯಾಕೆ ಎನ್ನುವ ಪ್ರಶ್ನೆ ಕೇಳಿದರು ಆ ನಂತರ ವಿವರಣೆ ನೀಡಿದಾಗ ಒಪ್ಪಿಕೊಂಡರು. ಕಥೆ ಕೇಳಿ ತುಂಬಾನೇ ಖುಷಿ ಪಟ್ಟರು. ಇನ್ನು ನಮ್ಮ ಹೊಂದಿಸಿ ಬರೆಯಿರಿ ಚಿತ್ರದ ಬಗ್ಗೆ ಅವರ ಇಂಡಸ್ಟ್ರೀಯಲ್ಲಿ ಕೆಲವರು ಅವರ ಜೊತೆ ಮಾತನಾಡಿದ್ದರು ಹೀಗಾಗಿ ತುಂಬಾ ಇಷ್ಟ ಪಟ್ಟು ನಮ್ಮ ಸಿನಿಮಾ ಮಾಡಿದ್ದಾರೆ, ಅವರ ಪಾತ್ರದ ಬಗ್ಗೆ ಅವರಿಗೆ ತುಂಬಾ ಖುಷಿ ಇದೆ. ಅವರದ್ದು ಎಮೋಷ್ನಲಿ ಕನೆಕ್ಟ್ ಆಗುವ ಪಾತ್ರ" ಎಂದಿದ್ದಾರೆ ರಾಮೇನಹಳ್ಳಿ ಜಗನ್ನಾಥ.


Click it and Unblock the Notifications











