'ಕೌಂತೇಯ'ದಲ್ಲಿ ವಿಲನ್ ಪಾತ್ರ ಮಾಡಲು ಒಪ್ಪಿದ್ದೇಕೆ ಮನೋರಂಜನ್ ? ಮಗನ ಹೊಸ ಹೆಜ್ಜೆಯ ಬಗ್ಗೆ ರವಿಚಂದ್ರನ್ ಹೇಳಿದ್ದೇನು ?
ನೂರು -ನೂರಿಪ್ಪತ್ತೈದು ಚಿತ್ರಕ್ಕೆ ಹೇಗೋ ಸಬ್ಸಿಡಿ ಕೊಡ್ತಾರೆ ಎನ್ನುವ ಆಲೋಚನೆಯಲ್ಲಿ ಅನೇಕರು ಇಲ್ಲಿ ಸಂತೆ ಹೊತ್ತಿಗೆ ಮೂರು ಮೊಳ ನೇಯ್ದಂತೆ ಸಿನಿಮಾವನ್ನು ಮಾಡುತ್ತಾರೆ. ಸರ್ಕಾರದ ಸಹಾಯಧನ ಕಬಳಿಸುವ ಏಕೈಕ ಉದ್ದೇಶ ಇವರ ಚಿತ್ರಗಳ ಹಿಂದೆ ಇರುತ್ತೆ. ಆದರೆ. ಇದಕ್ಕೆ ಅಪವಾದ ಎನ್ನುವಂತೆ ಚಿತ್ರರಂಗದಲ್ಲಿ ಅಲ್ಲೊಬ್ಬರು .. ಇಲ್ಲೊಬ್ಬರು .. ಸಿನಿಮಾವನ್ನೇ ಉಸಿರಾಗಿಸಿಕೊಳ್ಳುತ್ತಾರೆ. ಯಾವುದೇ ಅಬ್ಬರವಿಲ್ಲದೆ...
ಯಾವ ಪ್ರಚಾರದ ಗೀಳಿಲ್ಲದೆ, ತಮ್ಮಷ್ಟಕ್ಕೆ ತಾವು ಕೆಲಸ ಮಾಡುತ್ತಾ ಮುಂದುವರೆಯುತ್ತಾರೆ. ಒಂದೊಳ್ಳೆಯ ಸದಭಿರುಚಿಯ ಚಿತ್ರವನ್ನು ಮಾಡುವುದೇ ಇವರ ಬದುಕಿನ ಗುರಿಯಾಗಿರುತ್ತೆ. ಗೆಲುವು -ಸೋಲು .. ಫಲಿತಾಂಶ ಏನೇ ಇರಲಿ ಒಂದೊಳ್ಳೆಯ ಚಿತ್ರ ಮಾಡಿರುವ ತೃಪ್ತಿ ಇವರಿಗೆ ಯಾವಾಗಲೂ ಇರುತ್ತೆ. ತಮ್ಮ ಚಿತ್ರಕ್ಕೆ ಇಂದಲ್ಲ, ನಾಳೆ ಸಿಗಬೇಕಾದ ಮನ್ನಣೆ ಸಿಗುತ್ತೆ ಎನ್ನುವ ವಿಶ್ವಾಸವೂ ಇವರಲ್ಲಿರುತ್ತೆ. ಆ ಪೈಕಿ ಬಿ.ಕೆ ಚಂದ್ರಹಾಸ್ ಕೂಡ ಒಬ್ಬರು.

ಹೌದು, ಬಿ.ಕೆ ಚಂದ್ರಹಾಸ್.. ಒಂದು ದಶಕದ ಹಿಂದೆ ಚೇತನ್ ಚಂದ್ರ ಅಭಿನಯದಲ್ಲಿ ಬಂದಿದ್ದ ''ಕುಂಭರಾಶಿ'' ಚಿತ್ರದ ನಿರ್ದೇಶಕ. ಮೊದಲ ಚಿತ್ರದಲ್ಲಿಯೇ ಎಲ್ಲರ ಗಮನ ಸೆಳೆದು ಭರವಸೆಯನ್ನು ಮೂಡಿಸಿದ್ದ ಚಂದ್ರಹಾಸ ಆ ನಂತರ ನವರಸನಾಯಕ ಜಗ್ಗೇಶ್ ಅವರ ಮಗ ಗುರುರಾಜ್ ಜಗ್ಗೇಶ್ ಚಿತ್ರವನ್ನು ನಿರ್ದೇಶಿಸಿದ್ದರು. ಆರಂಭದಲ್ಲಿ ''ದಂಧೆ ಬಾಯ್ಸ್'' ಎಂದು ಇಡಲಾಗಿದ್ದ ಈ ಚಿತ್ರದ ಹೆಸರನ್ನು ಆ ನಂತರ ''ಕಾಗೆ ಮೊಟ್ಟೆ'' ಎಂದು ಬದಲಿಸಲಾಗಿತ್ತು.
ಇಂಥಾ ಚಂದ್ರಹಾಸ್ ಇದೀಗ ಕೆಲ ದಿನಗಳ ಗ್ಯಾಪ್ ನಂತರ ಮತ್ತೆ ಮರಳಿ ಚಿತ್ರರಂಗಕ್ಕೆ ಬಂದಿದ್ದಾರೆ. ಹೊಸದೊಂದು ಪ್ರಯೋಗಕ್ಕೆ ಕೈ ಹಾಕಿದ್ದಾರೆ. ಆ ಪ್ರಯೋಗದ ಹೆಸರು ''ಕೌಂತೇಯ''.
ಕನ್ನಡ ಚಿತ್ರರಂಗದ ವರ್ಸಟೈಲ್ ಆಕ್ಟರ್ ಅಚ್ಯುತ್ ಕುಮಾರ್ ಈ ಚಿತ್ರದ ಕೇಂದ್ರ ಬಿಂದು. ಪೊಲೀಸ್ ಅಧಿಕಾರಿ ರಂಗನಾಥ್ ಪಾತ್ರವನ್ನು ಅಚ್ಯುತ್ ಕುಮಾರ್ ಇಲ್ಲಿ ಮಾಡ್ತಿದ್ಧಾರೆ. ''ಕೃಷ್ಣಂ ಪ್ರಣಯ ಸಖಿ'' ಖ್ಯಾತಿಯ ಶರಣ್ಯ ಶೆಟ್ಟಿ ಈ ಚಿತ್ರದಲ್ಲಿ ಅಚ್ಯುತ್ ಕುಮಾರ್ ಮಗಳ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ''ಬಿಗ್ ಬಾಸ್'' ನೀತು ವನಜಾಕ್ಷಿ ಕೂಡ ಈ ಚಿತ್ರದ ಪ್ರಮುಖ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.
ವಿಶೇಷ ಅಂದರೆ ಇದೇ ಚಿತ್ರದ ಮೂಲಕ ಕನಸುಗಾರ ರವಿಚಂದ್ರನ್ ಅವರ ಹಿರಿಯ ಮಗ ಮನೋರಂಜನ್ ರವಿಚಂದ್ರನ್ ತಮ್ಮ ವೃತ್ತಿ ಬದುಕಿನಲ್ಲಿ ಮಗ್ಗಲು ಬದಲಿಸುತ್ತಿದ್ದಾರೆ. ನಾಯಕ ಅಲ್ಲ ಬದಲಿಗೆ ಇದೇ ಮೊದಲ ಬಾರಿಗೆ ಖಳನಾಯಕನ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಈ ಹಿನ್ನೆಲೆ ಮನೋರಂಜನ್ ಅವರ ಪಾತ್ರದ ಕುರಿತು ಮಾಹಿತಿಯನ್ನು ಪಡೆಯಲು ನಿರ್ದೇಶಕ ಚಂದ್ರಹಾಸ್ ಅವರನ್ನು ನಿಮ್ಮ ''ಫಿಲ್ಮಿಬೀಟ್ ಕನ್ನಡ'' ಸಂಪರ್ಕ ಮಾಡಿದಾಗ ಚಿತ್ರದ ಕುರಿತು ಮತ್ತು ಮನೋರಂಜನ್ ಅವರ ಪಾತ್ರದ ಕುರಿತು ಕೆಲ ಆಸಕ್ತಿಕರ
ವಿಚಾರಗಳನ್ನು ಚಂದ್ರಹಾಸ್ ನಿಮ್ಮ ''ಫಿಲ್ಮಿಬೀಟ್ ಕನ್ನಡ ''ಜೊತೆ ಹಂಚಿಕೊಂಡಿದ್ದಾರೆ.

ಹಾಗಿದ್ದರೆ ಮನೋರಂಜನ್ ಈ ಚಿತ್ರವನ್ನು ಮತ್ತು ಪಾತ್ರವನ್ನು ಒಪ್ಪಿಕೊಂಡಿದ್ಹೇಗೆ..? ಮಗನ ಈ ಚೆಂಜ್ ಓವರ್ ಬಗ್ಗೆ ರವಿಚಂದ್ರನ್ ಹೇಳಿದ್ದೇನು..? ಎಂದು ತಿಳಿಯಲು ಮುಂದೆ ಓದಿ.
ಕೌಂತೇಯದ ಪ್ರಮುಖ ಆಧಾರ ಸ್ತಂಭ ಮನು ಅವರ ಪಾತ್ರ
ಕೌಂತೇಯದಲ್ಲಿ ಮನೋರಂಜನ್ ಅವರ ಪಾತ್ರದ ಕುರಿತು ಹೆಚ್ಚಿನ ಗುಟ್ಟು ಈಗಲೇ ಬಿಟ್ಟು ಕೊಡುವುದು ತುಂಬಾ ಕಷ್ಟ. ಯಾಕೆಂದರೆ ತುಂಬಾನೇ ಪ್ರಮುಖವಾದ ಪಾತ್ರ ಅವರದ್ದು. ಅವರ ಪಾತ್ರದ ಕುರಿತು ಹೇಳಳು ಹೋದರೆ ಇಡೀ ಕಥೆ ಹೇಳಿದಂತಾಗುತ್ತೆ. ಒಂದು ರೀತಿ ನಮ್ಮ ಚಿತ್ರದ ಆಧಾರ ಸ್ತಂಭದಂತೆ ಇರುವ ಪಾತ್ರ ಅವರದ್ದು. ಮನೋರಂಜನ್ ಅವರಿಗೆ ಇಲ್ಲಿ ಹೊಸ ಅನನ್ಯಾ ರಾಜ್ಶೇಖರ್ ಎನ್ನುವವರು ಜೋಡಿಯಾಗಿದ್ದಾರೆ. ಹೊಸಬರು ಆದರೂ ಚೆನ್ನಾಗಿ ಮಾಡಿದ್ದಾರೆ. ಇನ್ನೂ ಮನೋರಂಜನ್ ಅವರ ಪಾತ್ರದ ಬಗ್ಗೆ ಹೇಳಲೇ ಬೇಕು ಅಂದರೆ ರವಿ ಸರ್ ಮಗ ಇದೇ ಮೊದಲ ಬಾರಿ ವಿಲನ್ ಪಾತ್ರದಲ್ಲಿ ನಮ್ಮ ಚಿತ್ರದ ನಿಮ್ಮೆಲ್ಲರ ಎದುರು ಬರಲಿದ್ದಾರೆ. ಈ ಚಿತ್ರದ ವಿಶೇಷ ಮತ್ತು ಹೆಗ್ಗಳಿಕೆ ಇದೇ ಎನ್ನಬಹುದು ಎಂದಿದ್ದಾರೆ ಚಂದ್ರಹಾಸ್.

ಮೊದಲ ಬಾರಿ ಕಥೆ ಕೇಳಿದಾಗ ಮನೋರಂಜನ್ ಪ್ರತಿಕ್ರಿಯೆ ಹೇಗಿತ್ತು..?
ಮನೋರಂಜನ್ ನನಗೆ ಮೊದಲಿಂದ ಆತ್ಮೀಯರು. ನಾನು ಅವರನ್ನು ಯಾವಾಗಲೂ ಕ್ಯಾಪ್ಟನ್.. ಕ್ಯಾಪ್ಟನ್.. ಎಂದು ಕರೆಯುತ್ತೇನೆ. ಹೀಗೆ ಒಂದು ದಿನ ಒಂದೈದು ನಿಮಿಷ ಬಿಡುವಾಗಿದ್ದೀರಾ ಮಾತನಾಡಬೇಕಿತ್ತು ಎಂದು ನಾನು ಫೋನ್ ಮಾಡಿದ್ದೇ, ಆಗ ನಾನೇ ಐದು ನಿಮಿಷ ಬಿಟ್ಟು ಫೋನ್ ಮಾಡ್ತೀನಿ ಎಂದು ಮನು ಹೇಳಿದರು. ಅದರಂತೆಯೇ ಮಾಡಿದರು. ಆಗ ನಾನು ಕಥೆ ಹೇಳಲು ಶುರು ಮಾಡಿದೆ. ಆದರೆ, ನಾನು ಕಥೆ ಅವರಿಗೆ ಹೇಳುತ್ತಿರುವ ವಿಚಾರ ಅವರಿಗೆ ಗೊತ್ತಿರಲಿಲ್ಲ. ಬೇರೆಯವರಿಗೆ ಮಾಡಿದ ಕಥೆ ಅವರ ಅಭಿಪ್ರಾಯ ಕೇಳಲು ನಾನು ಹೇಳುತ್ತಿದ್ದೇನೆ ಎಂದು ಅವರು ಅಂದುಕೊಂಡಿದ್ದರು. ಕೊನೆಯಲ್ಲಿ ಆ ಪಾತ್ರ ನೀವು ಮಾಡ್ತೀರಾ ಎಂದು ಕೇಳಿದೆ. ನಾನು ಆ ಪಾತ್ರ ಮಾಡಲು ಕೇಳ್ತೀನಿ ಎಂದು ಅವರು ಅಂದುಕೊಂಡಿರಲಿಲ್ಲ. ಹೀಗಾಗಿ ಆಶ್ಚರ್ಯಗೊಂಡ ಅವರು ಮತ್ತೆ ಒಂದು ಐದು ನಿಮಿಷ ಫೋನ್ ಮಾಡ್ತೀನಿ ಎಂದು ಸಮಯ ತಗೊಂಡರು ಎಂದು ಹೇಳಿದ್ದಾರೆ.
ವಿಕ್ರಂ ಕೂಡ ಕಥೆ ಮೆಚ್ಚಿಕೊಂಡರು
ಆ ನಂತರ ವಿಕ್ರಂ ಅವರು ಫೋನ್ ಮಾಡಿದರು. ಮನು ಕೈಯಲ್ಲಿ ನೆಗೆಟಿವ್ ಪಾತ್ರ ಮಾಡಿಸಬೇಕೆನ್ನುವ ಆಲೋಚನೆಯಾದರೂ ಹೇಗೆ ಬಂತು ಎಂದು ಕೇಳಿದರು. ಆಗ ನಾನು ಮತ್ತೊಮ್ಮೆ ವಿಕ್ರಂ ಅವರಿಗೆ ಕೂಡ ಕಥೆ ಹೇಳಿದೆ. ಅವರು ಕಥೆ ಪೂರ್ತಿ ಹೇಳಿ ಅಂತೇನು ಹೇಳಲಿಲ್ಲ. ಆದರೆ ನಾನೇ ಕಥೆ ಕೇಳುವಂತೆ ಅವರಿಗೆ ಒತ್ತಾಯ ಮಾಡಿ ಹೇಳಿದೆ. ಆಗ ಅವರಿಗೂ ಕೂಡ ಕಥೆ ಇಷ್ಟ ಆಯ್ತು. ಮನು ಮಾಡಿದರೆ ಚೆನ್ನಾಗಿರುತ್ತೆ ಎಂಬ ಭಾವನೆ ಅವರಲ್ಲಿಯೂ ಬಂತು ಎಂದು ಹೇಳಿದ್ದಾರೆ ಚಂದ್ರಹಾಸ್.

ರವಿಚಂದ್ರನ್ ಏನಂದರು..?
ಈ ಚಿತ್ರಕ್ಕೆ ಸಂಬಂಧಿಸಿದಂತೆ ಅಥವಾ ಮನು ಅವರ ಪಾತ್ರಕ್ಕೆ ಸಂಬಂಧಿಸಿದಂತೆ ರವಿ ಸರ್ ಅವರ ಜೊತೆ ಮುಖಾಮುಖಿ ಭೇಟಿಯಾಗಿಲ್ಲ. ಆದರೆ, ಅವರು ನಮ್ಮ ಚಿತ್ರದ ಟೀಸರ್ ನೋಡಿದ್ದಾರೆ. ಮಲಯಾಳಂ ಶೈಲಿಯ ಇದ್ದಂತೆ ಇದೆ. ಮಾಡು ನೋಡೋಣ ಚೆನ್ನಾಗಿದೆ ಎಂದು ಅವರು ಮನು ಅವರಿಗೆ ಹೇಳಿದ್ದಾರೆ. ಮುಂಬರುವ ಸಿನಿಮಾಗಳಲ್ಲಿ ಯಾವ ಸಿನಿಮಾ ಮೊದಲು ಬರಬೇಕು, ಯಾವುದು ಆಮೇಲೆ ಬರಬೇಕು ಎನ್ನುವುದು ಲೈನ್ ಅಪ್ ಮಾಡಿಕೊಳ್ಳುವಂತೆ ಮನು ಅವರಿಗೆ ಸಲಹೆ ನೀಡಿರುವುದಾಗಿ ಮನು ಅವರು ನನಗೆ ಹೇಳಿದ್ದರು ಎಂದು ಚಂದ್ರಹಾಸ್ ಹೇಳಿದ್ದಾರೆ.
ಚಿತ್ರದ ಚಿತ್ರೀಕರಣ ಎಲ್ಲಿಗೆ ಬಂತು ?
ಶೇಕಡಾ 70% ರಷ್ಟು ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಮನೋರಂಜನ್ ಅವರದ್ದು ಇನ್ನೊಂದೆರಡು ಮೂರು ದಿನ ಚಿತ್ರೀಕರಣ ಬಾಕಿ ಇದೆ. ನಾವು ಅಂದುಕೊಂಡಂತೆಯೇ ಚಿತ್ರ ಮೂಡಿ ಬಂದಿದ್ದು, ಏಕಕಾಲಕ್ಕೆ ಕನ್ನಡ ಮತ್ತು ಮಲಯಾಳಂನಲ್ಲಿ ಚಿತ್ರದ ಚಿತ್ರೀಕರಣ ಮಾಡಿದ್ದೇವೆ, ಮುಂದಿನ ವರ್ಷ ಫೆಬ್ರವರಿ ಅಥವಾ ಮಾರ್ಚ್ ನಂತರ ಚಿತ್ರವನ್ನು ಬಿಡುಗಡೆ ಮಾಡುವ ಉದ್ದೇಶ ಇದೆ, ಇದೇ ಹನ್ನೊಂದರಂದು ಮನೋರಂಜನ್ ಅವರ ಹುಟ್ಟುಹಬ್ಬದ ಪ್ರಯುಕ್ತ ಕೇಕ್ ಕಟ್ ಮಾಡುವ ಮೂಲಕ ಚಿತ್ರದಲ್ಲಿನ ಅವರ ಪಾತ್ರದ ಪರಿಚಯವನ್ನು ಪೋಸ್ಟರ್ ಮೂಲಕ ಮಾಡಿ ಕೊಡಲಿದ್ದೇವೆ, ಕ್ಯಾರೆಕ್ಟರ್ ಪೋಸ್ಟರ್ ಬಿಡುಗಡೆ ಮಾಡಲಿದ್ದೇವೆ ಎಂದು ಮಾಹಿತಿಯನ್ನು ಚಂದ್ರಹಾಸ್ ಹಂಚಿಕೊಂಡಿದ್ದಾರೆ.
ನಿರ್ಮಾಪಕರ ಸಹಕಾರ ಸಹಯೋಗ
ಮಹಾಕಾಳಿ ಪಿಕ್ಚರ್ಸ್ ಬ್ಯಾನರ್ ಅಡಿ ''ಸುರೇಶ್ ಕುಮಾರ್ ಅವರು ನಮ್ಮ ಚಿತ್ರಕ್ಕೆ ಹಣ ಹೂಡುತ್ತಿದ್ದಾರೆ. ಕಥೆಯನ್ನು ಮತ್ತು ನಮ್ಮನ್ನು ನಂಬಿ, ಕನ್ನಡಿಗರು ಒಳ್ಳೆಯ ಚಿತ್ರಗಳನ್ನು ಕೈ ಬಿಡುವುದಿಲ್ಲ ಎಂಬ ವಿಶ್ವಾಸದೊಂದಿಗೆ ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರದ ಕುರಿತು ತುಂಬಾನೇ ಪ್ರೀತಿ ಇರುವ ನಿರ್ಮಾಪಕರು. ಚಿತ್ರದ ಸಂಗೀತದ ಕೆಲಸಗಳು ಚೆನ್ನೈನಲ್ಲಿ ಮಾಡುವುದಾಗಿ ನಾನು ಹೇಳಿದಾಗ ಮರು ಪ್ರಶ್ನೆ ಮಾಡದೇ ಅದಕ್ಕೆ ಬೇಕಾದ ಎಲ್ಲ ಸೌಕರ್ಯಗಳನ್ನು ಮಾಡಿ ಕೊಟ್ಟರು. ಇಷ್ಟೇ ಅಲ್ಲ ಚಿತ್ರದ ಮೇಲಿನ ಪ್ರೀತಿಯಿಂದ ಅವರು ಕೂಡ ನಮ್ಮ ಜೊತೆ ಚೆನ್ನೈಗೆ ಬಂದು ಹಗಲಿರುಳು ಕೆಲಸ ಮಾಡಿದರು ಎನ್ನುವುದು ಚಂದ್ರಹಾಸ್ ಅವರ ಮನದ ಮಾತು.

ತಾಂತ್ರಿಕ ವಿಭಾಗದ ಕುರಿತು
''ಸಿಂಪಲ್ ಆಗಿ ಒಂದ್ ಲವ್ ಸ್ಟೋರಿ''.. ''ಹಾಫ್ ಮೆಂಟ್ಲು''.. ''ಯೋಗಿ ದುನಿಯಾ'' ಸೇರಿ ಹಲವು ಚಿತ್ರಗಳಿಗೆ ಸಂಗೀತ ನೀಡಿರುವ ಬಿಜೆ ಭರತ್ ನಮ್ಮ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ''. ಪಿಎಲ್ ರವಿ ಚಿತ್ರದ ಛಾಯಾಗ್ರಾಹಕರಾದರೆ, ಉತ್ಸಾಹಿ ಹೊಸ ಹುಡುಗ ಅನುರಂಜನ್ ಎಡಿಟಿಂಗ್ ಜವಾಬ್ಧಾರಿ ವಹಿಸಿಕೊಂಡಿದ್ಧಾರೆ. ಹೈಟ್ ಮಂಜು ನೃತ್ಯ ನಿರ್ದೇಶನ ಮತ್ತು ಮಾಸ್ ಮಾದಾ ಅವರ ಸಾಹಸ ನಿರ್ದೇಶನ ಚಿತ್ರಕ್ಕಿರಲಿದೆ. ''ಯೋಗಿ ದುನಿಯಾ'' ಚಿತ್ರವನ್ನು ನಿರ್ದೇಶಿಸಿದ್ದ ಹರಿ ಮಹಾದೇವ್ ಮತ್ತು ನಾನು ಇಬ್ಬರು ಸೇರಿ ಕಥೆ ಮಾಡಿದ್ದು ಸಂಭಾಷಣೆಯನ್ನು ಹರಿ ಮಹಾದೇವ್ ಅವರೇ ಬರೆದಿದ್ದಾರೆ ಎಂದು ಬಿಕೆ ಚಂದ್ರಹಾಸ್ ಮಾಹಿತಿಯನ್ನು ಹಂಚಿಕೊಂಡಿದ್ಧಾರೆ.


Click it and Unblock the Notifications











