ಸಲ್ಮಾನ್, ಪ್ರಭಾಸ್ ಸಿನಿಮಾ ನಿರ್ದೇಶಿಸುವಂತೆ ಕೇಳಿದ್ದರು, ನಾನು ಆಗಲ್ಲ ಅಂದೆ: ಪ್ರೇಮ್
ಕನ್ನಡ ಚಿತ್ರರಂಗಕ್ಕೆ ಕಾಲ-ಕಾಲಕ್ಕೆ ಕೆಲವು ನಿರ್ದೇಶಕರು ಹೊಸದೊಂದು ಅಲೆ ತರುತ್ತಾರೆ. ರಾಜೇಂದ್ರ ಸಿಂಗ್ ಬಾಬು, ಸುನಿಲ್ ಕುಮಾರ್ ದೇಸಾಯಿ, ನಾಗತಿಹಳ್ಳಿ ಚಂದ್ರಶೇಖರ್, ಎಸ್ ನಾರಾಯಣ್, ಉಪೇಂದ್ರ ಹೀಗೆ ಪಟ್ಟಿ ಉದ್ದವಾಗುತ್ತಾ ಸಾಗುತ್ತದೆ. ಹೀಗೆ ಕನ್ನಡ ಚಿತ್ರರಂಗಕ್ಕೆ ಹೊಸ ಅಲೆ ತಂದ ನಿರ್ದೇಶಕರಲ್ಲಿ ಪ್ರೇಮ್ ಸಹ ಒಬ್ಬರು.
ಪ್ರೇಮ್ ಕನ್ನಡ ಚಿತ್ರರಂಗಕ್ಕೆ ಅಡಿಯಿಟ್ಟ ಕೆಲ ವರ್ಷ ಬಹುದೊಡ್ಡ ಹೆಸರು ಮಾಡಿದರು. 'ಎಕ್ಸ್ಕ್ಯೂಸ್ ಮೀ', 'ಕರಿಯ', 'ಜೋಗಿ' ಮೂರೂ ಸಿನಿಮಾಗಳು ಬ್ಲಾಕ್ ಬಸ್ಟರ್ಗಳಾದವು. 'ಜೋಗಿ' ಅಂತೂ ಬಹುದೊಡ್ಡ ಹಿಟ್ ಆಗಿಬಿಟ್ಟಿತು.
'ಜೋಗಿ' ಬಳಿಕ ಪ್ರೇಮ್ ಬೇಡಿಕೆ ಬಹುವಾಗಿ ಹೆಚ್ಚಿತು. 'ಜೋಗಿ' ಸಿನಿಮಾ ತೆಲುಗು ಹಾಗೂ ತಮಿಳಿಗೆ ರೀಮೇಕ್ ಆಯಿತು. ತೆಲುಗಿನಲ್ಲಿ ಪ್ರಭಾಸ್, ನಯನತಾರಾ ನಟಿಸಿದರೆ, ತಮಿಳಿನಲ್ಲಿ ಧನುಶ್, ಮೀರಾ ಜಾಸ್ಮಿನ್ ನಟಿಸಿದರು. ಈ ಸಿನಿಮಾ ಹಿಂದಿಯಲ್ಲಿಯೂ ರೀಮೇಕ್ ಆಗಬೇಕಿತ್ತು. ಸಲ್ಮಾನ್ ಖಾನ್ 'ಜೋಗಿ'ಯ ಹಿಂದಿ ರೀಮೇಕ್ನಲ್ಲಿ ನಟಿಸಬೇಕಿತ್ತು. ಆದರೆ ಅದು ಸಾಧ್ಯವಾಗಲಿಲ್ಲ. ಈ ಬಗ್ಗೆ ನಿರ್ದೇಶಕ ಪ್ರೇಮ್ 'ಫಿಲ್ಮಿಬೀಟ್ ಕನ್ನಡ'ದೊಂದಿಗೆ ಮಾತನಾಡಿದ್ದಾರೆ.

ರಜನೀಕಾಂತ್ ನಟಿಸುವ ಆಸಕ್ತಿ ವಹಿಸಿದ್ದರು: ಪ್ರೇಮ್
''ಜೋಗಿ'' ಸಿನಿಮಾವನ್ನು ತಮಿಳಿಗೆ ರೀಮೇಕ್ ಮಾಡಲು ರಜನೀಕಾಂತ್ ಕೇಳಿದರು. ಅವರಂತೂ ಬಹಳ ಉತ್ಸುಕರಾಗಿದ್ದರು. ನನ್ನ ಮುಂದೆ ನಟಿಸಿ ಎಲ್ಲ ತೋರಿಸಿಬಿಟ್ಟರು. ಬೆನ್ನಿಗೆ ಕೊಕ್ಕಿ ಹಾಕಿಕೊಳ್ಳುವ ತಮಿಳುನಾಡಿನ ಕೆಲವೆಡೆ ಇದೆ, ಅದನ್ನು ನಾನು ಮಾಡೋಣ ಎಂದೆಲ್ಲ ಹೇಳಿದ್ದರು. ಆದರೆ ನನಗೆ ಮುಜುಗರ ಮತ್ತು ಭಯ. ಅವರನ್ನು ನಾನು 'ಜೋಗಿ' ಪಾತ್ರದಲ್ಲಿ ಕಲ್ಪಿಸಿಕೊಳ್ಳಲು ಆಗಲಿಲ್ಲ. ಹಾಗಾಗಿ ರೇಸ್ಕೋರ್ಸ್ ರಸ್ತೆಯಲ್ಲಿರುವ ಅವರ ಮನೆಗೆ ಹೋಗಿ ಕಾಲಿಗೆ ನಮಸ್ಕಾರ ಮಾಡಿ ಆಗಲ್ಲ ಅಂದೆ. ನನ್ನ ಅಳಿಯನಿಗೆ (ಧನುಷ್)ಗೆ ಮಾಡು ಅಂದರು. ನನ್ನ ಸಿನಿಮಾವನ್ನು ನಾನೇ ರೀಮೇಕ್ ಮಾಡಲಾರೆ'' ಎಂದು ಹೇಳಿಬಿಟ್ಟೆ'' ಎಂದರು ನಿರ್ದೇಶಕ ಪ್ರೇಮ್.

ಪ್ರಭಾಸ್ ಹತ್ತಾರು ಬಾರಿ ಕೇಳಿದರು: ಪ್ರೇಮ್
''ಜೋಗಿ ಸಿನಿಮಾ ತೆಲುಗಿಗೆ 'ಯೋಗಿ' ಹೆಸರಲ್ಲಿ ರೀಮೇಕ್ ಆಯಿತು. ಆಗ ಪ್ರಭಾಸ್ ಹತ್ತಾರು ಬಾರಿ ಕೇಳಿಕೊಂಡರು ನೀವೇ ತೆಲುಗಿನಲ್ಲಿಯೂ ನಿರ್ದೇಶನ ಮಾಡಿ ಅಂತ ಆದರೆ ನನಗೆ ಇಷ್ಟವಿರಲಿಲ್ಲ ಹಾಗಾಗಿ ಮಾಡಲಿಲ್ಲ. ತಮಿಳಿನ ಸಿನಿಮಾ ರೀಮೇಕ್ ಮಾಡುವ ಅವಕಾಶ ಸಹ ಇತ್ತು ಆದರೆ ಅದನ್ನೂ ಬೇಡ ಅಂದೆ. ನನಗೆ ನನ್ನ ಸಿನಿಮಾವನ್ನು ನಾನೇ ಬರೆದು ಅದನ್ನು ತೆರೆಯ ಮೇಲೆ ತರುವುದರಲ್ಲಿ ತೃಪ್ತಿ ಸಿಗುತ್ತದೆ. ಒಂದು ಬಾರಿ ಮಾಡಿದ್ದನ್ನೇ ಮತ್ತೊಂದು ಬಾರಿ ಮಾಡಲು ಖುಷಿ ಎನಿಸಲ್ಲ'' ಎಂದಿದ್ದಾರೆ ಪ್ರೇಮ್.

ನಿರ್ದೇಶನ ಮಾಡುವಂತೆ ಸಲ್ಮಾನ್ ಖಾನ್ ಕೇಳಿದ್ದರು: ಪ್ರೇಮ್
''ಹಿಂದಿಗೂ ಆ ಸಿನಿಮಾ ರೀಮೇಕ್ ಆಗಬೇಕಿತ್ತು. ಸ್ವತಃ ಸಲ್ಮಾನ್ ಖಾನ್ ಸಿನಿಮಾ ನಿರ್ದೇಶನ ಮಾಡುವಂತೆ ಕೇಳಿದರು. ಅವರಾದರೆ ಎಮೋಷನ್ ಅನ್ನು ಚೆನ್ನಾಗಿ ಕ್ಯಾರಿ ಮಾಡುತ್ತಾರೆ. ಅವರು ನಿರ್ದೇಶಿಸಿದರಷ್ಟೆ ನಾನು ನಟಿಸುತ್ತೇನೆ ಎಂದರು. ಆದರೆ ನನಗೆ ಆಸಕ್ತಿ ಇಲ್ಲ ಭಾಯ್ ಎಂದು ನಾನು ಸಲ್ಮಾನ್ ಖಾನ್ಗೆ ಹೇಳಿಬಿಟ್ಟೆ ಎಂದರು ಪ್ರೇಮ್. ಇತ್ತೀಚೆಗೆ ಸುದೀಪ್ ಜೊತೆ ಚಿತ್ರೀಕರಣದಲ್ಲಿದ್ದಾಗ ಸಲ್ಮಾನ್ ಖಾನ್ ಸಿಕ್ಕಿದ್ದರು. ಆಗಲೂ ಅದನ್ನೇ ಕೇಳಿದರು. ನೀನು ಒಪ್ಪಿದ್ದಿದ್ದರೆ ಅಂದು ಆ ಸಿನಿಮಾ ಮಾಡಬಹುದಿತ್ತು ಎಂದರು ಎಂದು ನೆನಪು ಮಾಡಿಕೊಂಡರು ನಿರ್ದೇಶಕ ಪ್ರೇಮ್.

ಫೆಬ್ರವರಿ 24ಕ್ಕೆ 'ಏಕ್ ಲವ್ ಯಾ' ಬಿಡುಗಡೆ
ಕನ್ನಡದ ಸೂಪರ್ ಹಿಟ್ ನಿರ್ದೇಶಕರಲ್ಲಿ ಒಬ್ಬರು ಪ್ರೇಮ್. ಆರಂಭದಲ್ಲಿ ಸತತ ಹಿಟ್ ನೀಡಿದ ಪ್ರೇಮ್ ಬಳಿಕ ನಟನೆಯ ಕಡೆ ಹೊರಳಿಕೊಂಡರು. ಇದೀಗ ಮತ್ತೆ ನಿರ್ದೇಶನದ ಕಡೆಗೆ ಗಮನ ಹರಿಸಿದ್ದು, 2018 ರಲ್ಲಿ ಸುದೀಪ್ ಹಾಗೂ ಶಿವರಾಜ್ ಕುಮಾರ್ ನಟನೆಯ 'ದಿ ವಿಲನ್' ನಿರ್ದೇಶನ ಮಾಡಿದರು. ಇದೀಗ ಅವರ ನಿರ್ದೇಶನದ 'ಏಕ್ ಲವ್ ಯಾ' ಸಿನಿಮಾ ಫೆಬ್ರವರಿ 24ಕ್ಕೆ ಬಿಡುಗಡೆ ಆಗುತ್ತಿದೆ. ಸಿನಿಮಾದಲ್ಲಿ ರಾಣಾ, ರೇಷ್ಮಾ, ರಚಿತಾ ರಾಮ್, ಅಂಕಿತಾ ನಾಯಕ್, ಚರಣ್ ರಾಜ್, ಶಶಿಕುಮಾರ್ ಇನ್ನೂ ಹಲವರು ನಟಿಸಿದ್ದಾರೆ.


Click it and Unblock the Notifications











