ಸಂದರ್ಶನ: ಜೀವನ ಮತ್ತು ಸ್ಪರ್ಧೆ.. ಎರಡರಲ್ಲೂ ಗೆದ್ದ ಮೆಹಬೂಬ್ ಸಾಬ್
'ಕತ್ತಲು ಬೆಳಕಿನ ಅಂತ್ಯ ಅಲ್ಲ.. ಅದು ಬೆಳಕಿನ ಆರಂಭ. ದೃಷ್ಟಿ ಇಲ್ಲದವರು ಕುರುಡರಲ್ಲ.. ದೂರದೃಷ್ಟಿ ಇರದೆ ಇರುವವರು ಕುರುಡರು'.... ರಾಗ ಸಿನಿಮಾದ ಈ ಅದ್ಭುತ ಡೈಲಾಗ್ ಇಂದು ಮತ್ತೆ ನೆನಪಾಗುತ್ತಿದೆ. ಅದಕ್ಕೆ ಕಾರಣ ಮೆಹಬೂಬ್ ಸಾಬ್ ಎಂಬ ಅಪ್ರತಿಮ ಪ್ರತಿಭಾವಂತ.
ಉತ್ತರ ಕರ್ನಾಟಕದ ಅಪ್ರತಿಮ ಕಲಾವಿದ ಮೆಹಬೂಬ್ ಸಾಬ್ 'ಸರಿಗಮಪ ಸೀಸನ್ 13' ಸಂಗೀತ ಯಾತ್ರೆಯಲ್ಲಿ ಎರಡನೇ ಸ್ಥಾನಗಳಿಸಿದ್ದಾರೆ. ಎಲ್ಲ ಸೌಲಭ್ಯ ಇದ್ದರೂ ಕುಂಟು ನೆಪ ಹೇಳುವವರ ನಡುವೆ ದೃಷ್ಟಿ ಇಲ್ಲದ ಮೆಹಬೂಬ್ ಸಾಬ್ ದೊಡ್ಡ ಸಾಧನೆ ಮಾಡಿದ್ದಾರೆ.
'ಜೀ ಕನ್ನಡ' ವಾಹಿನಿಯ 'ಸರಿಗಮಪ ಸೀಸನ್ 13' ರನ್ನರ್ ಅಪ್ ಪಟ್ಟ ಪಡೆದ ಮೆಹಬೂಬ್ ಸಾಬ್ ಅವರ ವಿಶೇಷ ಸಂದರ್ಶನ ನಿಮ್ಮ ಫಿಲ್ಮಿಬೀಟ್ ಕನ್ನಡದಲ್ಲಿ.. ಓದಿರಿ...
ಸಂದರ್ಶನ : ನವೀನ.ಎಂ.ಎಸ್

'ಸರಿಗಪಮ' ಎಂಬ ದೊಡ್ಡ ಕಾರ್ಯಕ್ರಮದಲ್ಲಿ ರನ್ನರ್ ಅಪ್ ಆಗಿದ್ದೀರಿ ಹೇಗನಿಸುತ್ತದೆ..?
''ನನಗೆ ತುಂಬ ಖುಷಿ ಆಗುತ್ತಿದೆ. ನಮ್ಮ ಕುಟುಂಬದವರಿಗೂ ತುಂಬ ಖುಷಿ ಆಯ್ತು. ಯಾಕಂದ್ರೆ, ನಾನು ಗೆಲ್ಲುವುದು ಇರಲಿ ಗ್ರಾಂಡ್ ಫಿನಾಲೆಗೆ ಬರುತ್ತೇನೆ ಅಂತಲೂ ಅಂದುಕೊಂಡಿರಲಿಲ್ಲ. ನಮ್ಮ ಕಡೆಯ ಜನರು ನನ್ನ ಬಗ್ಗೆ ನಿರೀಕ್ಷೆ ಇಟ್ಟುಕೊಂಡಿದ್ದರು. ಒಂದೇ ಮಠದವರಾದ ನಾನು ಮತ್ತು ಸುನೀಲ್ ಒಟ್ಟಿಗೆ ಗೆದ್ದಿದ್ದು ಇನ್ನೂ ಖುಷಿಯಾಯ್ತು''

ಉತ್ತರ ಕರ್ನಾಟಕದ ಪ್ರತಿಭೆಗಳಿಗೆ ಸರಿಯಾದ ಪ್ರೋತ್ಸಾಹ ಸಿಗುತ್ತಿಲ್ಲ ಅಂತಾರೆ. ನಿಜವೇ..?
''ಹೌದು, ಆದರೆ ನಾನು ಏನು ಹೇಳುತ್ತೇನೆ ಎಂದರೆ, ನಿಮ್ಮಲ್ಲಿ ಇರುವ ಕಲೆಯನ್ನು ಹೊರಗೆ ಹಾಕಿರಿ. ನಿಮ್ಮ ಕಲೆಯನ್ನು ಒಳಗೆ ಇಟ್ಟುಕೊಂಡರೆ ಅದನ್ನು ಯಾರೂ ಗುರುತಿಸುವುದಕ್ಕೆ ಆಗುವುದಿಲ್ಲ. ಮೊದಲು ನಿಮ್ಮಲ್ಲಿ ಇರುವ ಪ್ರತಿಭೆಯನ್ನು ಹೊರಗೆ ಹಾಕಬೇಕು. ನಂತರ ಅವಕಾಶ ಸಿಕ್ಕೆ ಸಿಗುತ್ತದೆ''

'ಸರಿಗಪಮ' ನಂತರ ನಿಮ್ಮ ಮುಂದಿನ ಗುರಿ.?
''ಮುಂದೆ ಮ್ಯೂಸಿಕ್ ಟೀಚರ್ ಆಗಬೇಕು. ಜೊತೆಗೆ ಸಿನಿಮಾದಲ್ಲಿ ಹಾಡಬೇಕು ಎಂಬ ಆಸೆ ಇದೆ. ಈ ಎರಡೇ ನನ್ನ ಮುಂದಿನ ಗುರಿ''

ಸಂಗೀತ ಮೇಲಿನ ಆಸಕ್ತಿ ಯಾವಾಗ ಹುಟ್ಟಿತು..?
''2003ರಲ್ಲಿ... ನನಗೆ 8 ವರ್ಷ ಆಗಿರುವಾಗಿನಿಂದ ಸಂಗೀತ ಕಲಿಯುವುದಕ್ಕೆ ಶುರು ಮಾಡಿದೆ. ನಮ್ಮ ದೊಡ್ಡಪ್ಪ ಒಮ್ಮೆ ನನ್ನ ಧ್ವನಿ ಕೇಳಿ ಚೆನ್ನಾಗಿ ಹಾಡುತ್ತಾನೆ ಅಂತ ಅಜ್ಜರ ಆಶ್ರಮಕ್ಕೆ ತಂದು ಬಿಟ್ಟರು. ಆಗಿನಿಂದ ನನ್ನ ಸಂಗೀತ ಶುರುವಾಯಿತು''

ನಮ್ಮಲ್ಲಿನ ಕೊರತೆಗಳು ಸಾಧನೆಗೆ ಅಡ್ಡ ಆಗುತ್ತದೆಯಾ..?
''ಇಲ್ಲ.. ಹಾಗೆಲ್ಲ ಆಗುವುದೇ ಇಲ್ಲ.. ಏನೇ ತೊಂದರೆ ಬಂದರೂ ಅದನ್ನು ಎದುರಿಸಿ ನಿಂತಾಗಲೇ ಸಾಧನೆ ಮಾಡುವುದಕ್ಕೆ ಸಾಧ್ಯ''

ನೀವು ತುಂಬ ಇಷ್ಟ ಪಡುವ ಗಾಯಕರು ಯಾರು..?
''ರಾಜ್ ಕುಮಾರ್ ಅಂದರೆ ತುಂಬ ಇಷ್ಟ. ಎಸ್ ಪಿ ಬಾಲಸುಬ್ರಹ್ಮಣ್ಯಂ ಸರ್, ಯೇಸುದಾಸ್ ಸರ್, ಹಿಂದಿಯಲ್ಲಿ ಮೊಹಮ್ಮದ್ ರಫಿ ಸರ್ ಹೀಗೆ ತುಂಬ ಗಾಯಕರು ಇಷ್ಟ ಆಗುತ್ತಾರೆ''

ಇಡೀ ಸರಿಗಮಪ ಜರ್ನಿ ಹೇಗಿತ್ತು..?
''ತುಂಬ ಚೆನ್ನಾಗಿತ್ತು. ಕಾರ್ಯಕ್ರಮ ನಿರ್ದೇಶಕರು, ವಿ.ಪಿ ಸರ್, ಅರ್ಜುನ್ ಸರ್, ರಾಜೇಶ್ ಸರ್, ಅನುಶ್ರೀ ಮೇಡಂ ಎಲ್ಲರೂ ಬಹಳ ಸಪೋರ್ಟ್ ಮಾಡುತ್ತಿದ್ದರು. ನನಗೆ ಇದು ಹೊಸ ಶೈಲಿ ಆಗಿದ್ದರಿಂದ ನಮ್ಮ ಜೊತೆಗಿದ್ದ ಸ್ಪರ್ಧಿಗಳು ಸಹಾಯ ಮಾಡಿದ್ದರು. 'ಸೀಸನ್ 13' ನಲ್ಲಿ ನಾವು ಫ್ಯಾಮಿಲಿ ತರಹ ಇದ್ವಿ. ಅದಕ್ಕೆ ಯಾರು ಗೆದ್ದಿದ್ದರೂ ನಮಗೆ ಖುಷಿನೇ ಆಗ್ತಿತ್ತು''

ಮೊದಲ ಬಾರಿ ವೇದಿಕೆ ಮೇಲೆ ಹಾಡುವಾಗ ಭಯ ಇತ್ತಾ..?
''ಹಾಗೇನೂ ಇಲ್ಲ.. ಏನು ಆಗುತ್ತೋ ಆಗಲಿ ಅಂತ ನಮ್ಮ ಗುರುಗಳನ್ನು ನೆನಪಿಸಿಕೊಂಡು ಹೋದೆ. ಗುರುಗಳು ನನಗೆ ಒಂದು ದಾರಿ ತೋರಿಸಿದರು. ನಾನು ಸೆಲೆಕ್ಟ್ ಆದೆ''

ನಿಮ್ಮ ಗೆಲುವಿಗೆ ಮುಖ್ಯ ಕಾರಣ..?
''ನಮ್ಮ ತಂದೆ ತಾಯಿ ಆಶೀರ್ವಾದ.. ನಾನು ಬಡ ಕುಟುಂಬದಿಂದ ಬಂದವನು. ನಮ್ಮ ತಂದೆ ತಾಯಿ ಇಬ್ಬರು ಕೂಲಿ ಕೆಲಸ ಮಾಡುತ್ತಾರೆ. ಅವರಿಂದನೇ ನಾನು ಈ ಮಟ್ಟಕ್ಕೆ ಬಂದೆ''

ಬಹುಮಾನದ ದುಡ್ಡನು ಏನು ಮಾಡುತ್ತೀರಿ..?
''ರನ್ನರ್ ಆಪ್ ಆಗಿದ್ದಕ್ಕೆ ಒಟ್ಟು ಮೂರು ಲಕ್ಷ ರೂಪಾಯಿ ಹಣ ಬಹುಮಾನವಾಗಿ ಬಂದಿದೆ. ಇದನ್ನು ನನ್ನ ಮುಂದಿನ ವಿದ್ಯಾಭ್ಯಾಸಕ್ಕಾಗಿ ಮತ್ತು ಕುಟುಂಬದ ಖರ್ಚು ವೆಚ್ಚಕ್ಕೆ ಬಳಸುತ್ತೇನೆ''


Click it and Unblock the Notifications











