'ಅಯೋಗ್ಯ' ಕಥೆ ಕೇಳಿ ಒಂದು ವರ್ಷ ಸುತ್ತಾಡಿಸಿ ಬೇಡ ಎಂದಿದ್ದರಂತೆ ಖ್ಯಾತ ಹಾಸ್ಯನಟ!
ಸತೀಶ್ ನೀನಾಸಂ ಮತ್ತು ರಚಿತಾ ರಾಮ್ ನಟಿಸಿದ್ದ ಸೂಪರ್ ಹಿಟ್ ಚಿತ್ರ 'ಅಯೋಗ್ಯ'. ಈ ಚಿತ್ರದ ಮೂಲಕ ಯೋಗರಾಜ್ ಭಟ್ ಬಳಿ ಸಹಾಯಕ ನಿರ್ದೇಶಕನಾಗಿದ್ದ ಮಹೇಶ್ ಪೂರ್ಣ ಪ್ರಮಾಣದ ನಿರ್ದೇಶಕವಾಗಿ ಸಕ್ಸಸ್ ಕಂಡರು. ಶತದಿನ ಆಚರಿಸಿಕೊಂಡ ಈ ಚಿತ್ರ ಮಹೇಶ್ ಹಾಗೂ ಸತೀಶ್ ಇಬ್ಬರಿಗೂ ಒಳ್ಳೆಯ ಯಶಸ್ಸು ತಂದುಕೊಟ್ಟಿತ್ತು.
Recommended Video

ಸತೀಶ್ ನೀನಾಸಂ ಈ ಸಿನಿಮಾ ಮಾಡುವುದಕ್ಕು ಮುಂಚೆ ಕನ್ನಡದ ಖ್ಯಾತ ಹಾಸ್ಯನಟನಿಗೆ ಕಥೆ ಹೇಳಲಾಗಿತ್ತು. ಕಥೆ ಕೇಳಿ ಚೆನ್ನಾಗಿದೆ, ಮಾಡೋಣ ಎಂದು ಹೇಳಿದ್ದ ನಟ ನಾಳೆ ನಾಳೆ ಎಂದು ಸುಮ್ಮನೆ ಸಮಯ ಕಳೆದರು ಎಂದು ನಿರ್ದೇಶಕ ಮಹೇಶ್ ಫಿಲ್ಮಿಬೀಟ್ ಡೈರೆಕ್ಟರ್ ಡೈರಿಯಲ್ಲಿ ಹೇಳಿಕೊಂಡಿದ್ದಾರೆ. ಅಷ್ಟಕ್ಕೂ, ಆ ನಟ ಯಾರು? ಮುಂದೆ ಓದಿ...

ಅಯೋಗ್ಯ ಟೈಟಲ್ ಇಟ್ಟಿದ್ದು ಹೇಗೆ
ತಮ್ಮ ಊರಿನಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ಹೇಗೆ ನಡೆಯುತ್ತದೆ ಎಂದು ನೋಡಿದ ಮಹೇಶ್, ಇದರ ಮೇಲೆ ಒಂದು ಕಥೆ ಮಾಡೋಣ ಎಂದು ಮಾಡಿದ ಸಿನಿಮಾ ಇದು. ಕಥೆ ಎಲ್ಲ ಮಾಡಿದ್ಮೇಲೆ ಈ ಚಿತ್ರಕ್ಕೆ ಟೈಟಲ್ ಏನು ಇಡೋಣ ಎಂದು ಯೋಚಿಸುತ್ತಿದ್ದಾಗ, ಯೋಗರಾಜ್ ಭಟ್ ಅವರು ಯಾವಾಗಲೂ ಬೈಯುತ್ತಿದ್ದ 'ಅಯೋಗ್ಯ' ಪದವನ್ನೇ ಶೀರ್ಷಿಕೆಯನ್ನಾಗಿಸಿದೆ ಎಂದು ಮಹೇಶ್ ಹೇಳಿದ್ದಾರೆ.

ಕಥೆ ಕೇಳಿ ಸೂರಿ ಇಷ್ಟ ಪಟ್ಟಿದ್ದರು
''ಅಯೋಗ್ಯ' ಕಥೆಯನ್ನು ನಿರ್ದೇಶಕ ಸೂರಿ ಬಳಿ ಹೇಳಿದೆ. ಕಥೆ ಕೇಳಿ ಇಷ್ಟಪಟ್ಟ ಸೂರಿ ಅವರು, ಆಗಿನ ಸಮಯಕ್ಕೆ ಟಾಪ್ ಕಾಮಿಡಿ ನಟ ಆಗಿದ್ದ ಒಬ್ಬರಿಗೆ ಫೋನ್ ಮಾಡಿ ''ಸರ್ ಒಂದು ಒಳ್ಳೆ ಕಥೆ ಇದೆ, ಒಮ್ಮೆ ಕೇಳಿ ಇಷ್ಟ ಆದರೆ ಮಾಡಿ'' ಎಂದು ಹೇಳಿದರು. ಆಮೇಲೆ ನಿರ್ಮಾಪಕ ಕೆಪಿ ಶ್ರೀಕಾಂತ್ ಅವರನ್ನು ಕರೆಸಿ ಕಥೆ ಕೇಳಿಸಿದರು. ಶ್ರೀಕಾಂತ್ ಸಿನಿಮಾ ಮಾಡಲು ಒಪ್ಪಿಗೆ ಕೊಟ್ಟರು''- ಮಹೇಶ್ ಕುಮಾರ್

ಒಂದು ವರ್ಷ ಆಟ ಆಡಿಸಿದ ನಟ
''ಸೂರಿ ಸರ್ ಹೇಳಿದ ಕಾಮಿಡಿ ನಟನ ಬಳಿ ಹೋಗಿ ಕಥೆ ಹೇಳಿದೆ. ಸುಮಾರು ಒಂದು ವರ್ಷ ಬರಿ ಕಥೆ ಕೇಳಿದರು. ಅದನ್ನು ಬದಲಾಯಿಸು, ಇದನ್ನು ಬದಲಾಯಿಸು ಅಂತ ಹೇಳಿ ಹೇಳಿ ಹೋದರು. ಕೊನೆಗೆ ನಾನು ಏನು ಬದಲಾಯಿಸಲ್ಲ ಅಂತ ಕೋಪ ಮಾಡ್ಕೊಂಡು ಬೇಡ ಬಿಡಿ ಅಂದರು. ಈ ಕಡೆ ನಿರ್ಮಾಪಕ ಕೆಪಿ ಶ್ರೀಕಾಂತ್ ಅವರು ಹೀರೋನಾ ಒಪ್ಪಿಸಿಕೊಂಡು ಬನ್ನಿ ಅಂತ ಹೇಳಿ ಬ್ಯುಸಿ ಆದರು'' - ಮಹೇಶ್ ಕುಮಾರ್

ಸತೀಶ್ ನೀನಾಸಂ ಸಿಕ್ಕರು
''ಸುಮಾರು ಒಂದು ತಿಂಗಳ ಗ್ಯಾಪ್ ಬಳಿಕ ಸತೀಶ್ ನೀನಾಸಂ ಅವರನ್ನು ಭೇಟಿ ಮಾಡಿದೆ. ಅವರ ಆಫೀಸ್ಗೆ ಹೋಗಿ ಕಥೆನೂ ಹೇಳಿದೆ. ಕಥೆ ಕೇಳಿ ಖುಷಿಯಾದ ಸತೀಶ್ ನೀನಾಸಂ ಅವರು ಟೈಟಲ್ ಚೆನ್ನಾಗಿದೆ, ಕಥೆ ಚೆನ್ನಾಗಿದೆ ಮಾಡೋಣ ಅಂತ ಮುಂದೆ ಬಂದರು'' ಎಂದು ಹೇಳಿದ ಮಹೇಶ್, ಆ ಟಾಪ್ ಕಾಮಿಡಿ ನಟ ಯಾರೆಂದು ಹೆಸರು ಹೇಳಲಿಲ್ಲ.


Click it and Unblock the Notifications











