ಆಫ್ ದಿ ರೆಕಾರ್ಡ್ : ಯಾವಾಗಲೂ ಗದರುತ್ತಿದ್ದ ಅಂಬಿ ಆ ದಿನ ಬಿಕ್ಕಿ ಬಿಕ್ಕಿ ಅತ್ತಿದ್ದರು
Recommended Video

ನಟ ಅಂಬರೀಶ್ ಅವರ ಬಗ್ಗೆ ಅನೇಕರಿಗೆ ತಿಳಿಯದ ಸಂಗತಿಯನ್ನು ಹೇಳಬೇಕು ಎಂಬ ನಮ್ಮ ಪ್ರಯತ್ನದ ಎರಡನೇ ಲೇಖನ ಇದು. ಇಲ್ಲಿ ಪತ್ರಕರ್ತರು ತಾವು ಕಂಡ ಅಂಬಿಯ ಅಂತರಂಗವನ್ನ ಎಲ್ಲರಿಗೆ ತಿಳಿಸುತ್ತಿದ್ದಾರೆ.
ಈ ಲೇಖನದಲ್ಲಿ ಕನ್ನಡ ಮಾಧ್ಯಮ ಕ್ಷೇತ್ರದ ಮತ್ತೊಬ್ಬ ಹೆಸರಾಂತ ಸಿನಿಮಾ ಪತ್ರಕರ್ತೆ ಪದ್ಮಾ ಶಿವಮೊಗ್ಗ ಮಾತನಾಡಿದ್ದಾರೆ. ಅಂಬರೀಶ್ ಅವರ ಬಗ್ಗೆ ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಸದ್ಯ, ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಅವರು ಹಿರಿಯ ಪತ್ರಕರ್ತೆಯಾಗಿ ಕೆಲಸ ಮಾಡುತ್ತಿದ್ದಾರೆ.
ನಟ ಅಂಬರೀಶ್, ಪದ್ಮಾ ಶಿವಮೊಗ್ಗ ಅವರ ಫ್ಯಾಮಿಲಿ ಫ್ರೆಂಡ್ ಆಗಿದ್ದರು. ಅವರ ಚಿಕ್ಕಪ್ಪ ಬಹಳ ವರ್ಷಗಳಿಂದ ಅಂಬಿಯ ಸ್ನೇಹಿತರಾಗಿದ್ದರು. ಅಂಬರೀಶ್ ಅನೇಕ ವಿಷಯಗಳನ್ನ ಪದ್ಮಾ ಅವರ ಕುಟುಂಬದ ಜೊತೆಗೆ ಹಂಚಿಕೊಂಡಿದ್ದರು.
ಯಾವಾಗಲೂ ರಫ್ ಅಂಡ್ ಟಫ್ ಆಗಿ, ಎಲ್ಲರ ಮೇಲೆ ಪ್ರೀತಿಯಿಂದಲೇ ಗದರುವ ಅಂಬಿ ಆ ಒಂದು ದಿನ ಬಿಕ್ಕಿ ಬಿಕ್ಕಿ ಅತ್ತಿದ್ದರು. ಆ ದಿನ ನಡೆದ ಘಟನೆ ಹಾಗೂ ಅಂಬರೀಶ್ ಅವರ ಬಗ್ಗೆ ಪದ್ಮಾ ಅವರ ಮಾತುಗಳು ಮುಂದಿವೆ ಓದಿ...

ನಮ್ಮ ಫ್ಯಾಮಿಲಿ ಫ್ರೆಂಡ್ ಆಗಿದ್ದರು
''ನಾನು ಅಂಬರೀಶ್ ಅವರನ್ನ ಒಬ್ಬ ಪತ್ರಕರ್ತೆಯಾಗಿ ನೋಡುವುದಕ್ಕಿಂತ ಅವರು ನಮ್ಮ ಫ್ಯಾಮಿಲಿ ಫ್ರೆಂಡ್ ಆಗಿದ್ದರು. ಅವರು ಬಹುತೇಕ ಪತ್ರಕರ್ತರ ಜೊತೆಗೆ ಗದರಿಕೊಂಡೆ ಮಾತನಾಡುತ್ತಿದ್ದರು. ಆದರೆ, ನನ್ನ ಬಳಿ ಮಾತ್ರ ಎಂದೂ ಆ ರೀತಿ ಮಾತನಾಡಲೇ ಇಲ್ಲ. ನಮ್ಮ ಚಿಕ್ಕಪ್ಪ ಅವರ ಒಳ್ಳೆಯ ಸ್ನೇಹಿತರಾಗಿದ್ದರು. ಹೀಗಾಗಿ, ಸುಮಾರು ಬಾರಿ ಅವರನ್ನ ಭೇಟಿ ನಾನು ಮಾಡಿದ್ದೇನೆ.''

ತಾಯಿಯನ್ನ ನೆನೆದ ಅಂಬಿ
''ನಾನು ನೋಡಿರುವ ಹಾಗೆ ಅವರು ತುಂಬ ಎಮೋಷನಲ್ ಹಾಗೂ ಮೃದು ಸ್ವಭಾವ. ಆದರೆ, ಅದನ್ನು ಅವರು ಎಂದೂ ತೋರಿಸಿಕೊಂಡಿರಲಿಲ್ಲ. ಒಮ್ಮೆ ತಮ್ಮ ತಂಗಿಯ ಮನೆಯಲ್ಲಿ ಕುಟುಂಬದವರೆಲ್ಲ ಸೇರಿದೆವು. ಅಂದೂ ಅಂಬರೀಶ್ ಅವರನ್ನು ಊಟಕ್ಕೆ ಕರೆದಿದ್ದೆವು. ಆ ದಿನ ಅಂಬರೀಶ್ ನಮ್ಮ ಅಮ್ಮನನ್ನು ನೋಡಿ ತಮ್ಮ ತಾಯಿಯನ್ನ ನೆನಪು ಮಾಡಿಕೊಂಡರು. ಸುಮಾರು ಮೂರು ಗಂಟೆ ತಮ್ಮ ಹಳೆಯ ನೆನಪುಗಳನ್ನು ಹೇಳಿಕೊಳ್ಳುತ್ತ ಹೋದರು.''

ಅಪ್ಪ ನಿಧನರಾದ ದಿನ
''ಅಂಬರೀಶ್ ಅವರ ತಂದೆ ಸತ್ತಾಗ ಅವರ ತಾಯಿ ನಡೆದುಕೊಂಡ ರೀತಿ, ಎಷ್ಟು ಕಷ್ಟ ಪಟ್ಟು ಅವರ ತಾಯಿ ತಮ್ಮನ್ನು ಬೆಳೆಸಿದ್ದಾರೆ ಎಂಬುದನ್ನು ಆ ದಿನ ಹೇಳಿದರು. ಕಷ್ಟ ಅಂದರೆ ಹಣಕಾಸಿನ ಸಮಸ್ಯೆಯಲ್ಲ ಬೇರೆ ರೀತಿ ಬರುವ ಸಮಸ್ಯೆಗಳು. ತಂದೆ ಸತ್ತ ದಿನ ಅಂಬರೀಶ್ ಶೂಟಿಂಗ್ ನಲ್ಲಿ ಇದ್ದರಂತೆ. ಅಪ್ಪನ ಅಂತ್ಯಸಂಸ್ಕಾರ ಆದ ನಂತರದ ದಿನವೇ ಮತ್ತೆ ಚಿತ್ರೀಕರಣಕ್ಕೆ ಹೋಗಬೇಕಿತಂತೆ. ಆಗಿನ್ನು ಚಿತ್ರರಂಗದಲ್ಲಿ ಬೆಳೆಯುತ್ತಿದ್ದ ಅಂಬಿ ಅದನ್ನು ಹೇಳಿಕೊಳ್ಳುವ ಹಾಗೆ ಇರಲಿಲ್ಲ.''

ತಾಯಿ ಹೇಳಿದ ಧೈರ್ಯ
''ಅವರ ತಂದೆ ಸತ್ತಗಾ ಏನು ಮಾಡಬೇಕು ಎಂದು ತಿಳಿಯದೆ ಇದ್ದಾಗ ತಾಯಿ ಧೈರ್ಯ ಹೇಳಿ ಸಿನಿಮಾದ ಶೂಟಿಂಗ್ ಗೆ ಕಳುಹಿಸಿದಂತೆ. ಅಮ್ಮನನ್ನು ನೆನೆದು ಆ ದಿನ ಅವರ ಕಣ್ಣಲ್ಲಿ ನೀರು ಬಂತು. ಅವರ ತಾಯಿಯ ಹೆಸರು ಪದ್ಮಾ ನನ್ನ ಹೆಸರು ಪದ್ಮಾ ಆಗಿದೆ. ಯಾವಾಗಲೂ ಜನರ ಜೊತೆಗೆ ಇರಬೇಕು ಎನ್ನುವುದು ಅವರಿಗೆ ಇತ್ತು.''

ಖಾರವಾದ ಬಿರಿಯಾನಿ ಅಂದರೆ ಬಲು ಪ್ರೀತಿ
''ಖಾರವಾದ ಬಿರಿಯಾನಿ ಎಂದರೆ ಅವರಿಗೆ ಬಹಳ ಇಷ್ಟ. ಒಮ್ಮೆ ನಾವು ಸ್ನೇಹಿತರ ಮನೆಗೆ ಹೋದಾಗ ಅಂಬರೀಶ್ ಅವರು ಕೂಡ ಬಂದಿದ್ದರು. ನಮ್ಮದು ಊಟ ಆಯ್ತು ಅಂದರೂ ಬಿಡಲಿಲ್ಲ. ಏನು ಹೇಳಿದರು ಹೇಳಿಲಿಲ್ಲ. ನನಗೆ ನನ್ನ ಮಗನಿಗೆ ಖಾರ ಆಗಲಿಲ್ಲ. ಅವರು ಇನ್ನೂ ಖಾರ ಬೇಕಿತ್ತು ಎನ್ನುತ್ತಿದ್ದರು.''

ಅದೆಷ್ಟೋ ಜನರಿಗೆ ಸಹಾಯ
''ಅವರು ವೈಭವದ ಜೀವನ ನಡೆಸಿದರು ಎಂದು ಬಹಳ ಜನ ಹೇಳುತ್ತಾರೆ. ಆದರೆ, ಅದನ್ನು ಮೀರಿ ಅವರು ಅದೆಷ್ಟೋ ಜನರಿಗೆ, ಎಷ್ಟೊಂದು ಸಹಾಯ ಮಾಡಿದ್ದಾರೆ. ಕೆಲಸ ಬೇಕು, ಕಾಲೇಜ್ ಗಳಲ್ಲಿ ಸೀಟ್ ಬೇಕು ಅಂತ ಬಂದ ವಿದ್ಯಾರ್ಥಿಗಳಿಗೆ ದಾರಿ ತೋರಿಸಿದ್ದಾರೆ. ಅಂಬರೀಶ್ ಅವರು ಒಂದು ಮಾತು ಹೇಳಿದರೆ ಎಲ್ಲ ಕೆಲಸ ಆಗುತ್ತಿತ್ತು.

ಏರ್ ಪೋರ್ಟ್ ನಲ್ಲಿ ನಡೆದ ಘಟನೆ
''ನಾನು ಚಿಕ್ಕವಯಸ್ಸಿನಲ್ಲಿ ಇದ್ದಾಗ ಒಮ್ಮೆ ಏರ್ ಪೋರ್ಟ್ ಗೆ ನಮ್ಮ ಚಿಕ್ಕಪ್ಪರನ್ನ ಬಿಡಲು ಅಂಬರೀಶ್ ಅವರು ಸಹ ಬಂದಿದ್ದರು. ಏರ್ ಪೋರ್ಟ್ ನಲ್ಲಿ ಅವರ ಎದರುಗಡೆ ಸಿಕ್ಕ ಎಲ್ಲ ಕೆಲಸದ ಹುಡುಗರಿಗೆ ನೋಟ್ ತೆಗೆದು ತೆಗೆದು ಕೊಡುತ್ತಿದ್ದರು. ದುಡ್ಡಿನ ವಿಚಾರದಲ್ಲಂತು ಅದೆಷ್ಟೋ ಜನರಿಗೆ ಸಹಾಯ ಮಾಡಿದ್ದಾರೆ.''

ಸಾವಿಗೆ ಡೋಂಟ್ ಕೇರ್ ಎನ್ನುತ್ತಿದ್ದ ವ್ಯಕ್ತಿ
''ನಮ್ಮ ಚಿಕ್ಕಪ್ಪ ಬೆಂಗಳೂರಿಗೆ ಬಂದ ಸಮಯದಲ್ಲಿಯೇ ಅಂಬರೀಶ್ ಇಲ್ಲ ಎಂಬ ಸುದ್ದಿ ಬಂತು. ಅದು ನಮ್ಮ ಚಿಕ್ಕಪ್ಪನಿಗೆ ತುಂಬ ನೋವು ನೀಡಿತು. ಆರೋಗ್ಯದ ಬಗ್ಗೆ ಗಮನ ಕೊಡಿ ಎಂದು ಹೇಳಿದಾಗಲೆಲ್ಲ, 'ಯೋಗ ಮಾಡಿದವರೆ ಸತ್ತಿದ್ದಾರೆ, ನಾನು ಭೋಗ ಮಾಡಿ ಸಾಯುತ್ತೇನೆ ಬಿಡು' ಎಂದು ಚಿಕ್ಕಪ್ಪನಿಗೆ ಹೇಳಿದ್ದರು. ಸಾವಿಗೆ ಡೋಂಟ್ ಕೇರ್ ಎನ್ನುತ್ತಿದ್ದರು. ಸಾವಿಗೆ ಸವಾಲು ಹಾಕಿದ ವ್ಯಕ್ತಿ ಅವರು.''


Click it and Unblock the Notifications











