ಶಿವಣ್ಣ ಸಂದರ್ಶನ: ನಾನು ಕಾಯಾ, ವಾಚಾ, ಮನಸಾ ತೊಡಗಿಸಿಕೊಂಡ ಚಿತ್ರ 'ಕವಚ'
ಮೊದಲ ಚಿತ್ರ ತೆರೆಕಂಡು ಮೂರು ದಶಕ ಮತ್ತು ಮೂರು ವರ್ಷಗಳಾಗಿವೆ. ಆದರೂ ಇಷ್ಟು ವರ್ಷಗಳಲ್ಲಿಯೂ ಸ್ಟಾರ್ ನಾಯಕ. ಭಾರತೀಯ ಚಿತ್ರರಂಗದಲ್ಲಿ ಆಯಾ ಭಾಷೆಗಳಲ್ಲಿ ಒಬ್ಬ ಸ್ಟಾರ್ ನಟರು ಇಂಥವರು ಸಿಗುತ್ತಾರೆ. ಆ ನಿಟ್ಟಿನಲ್ಲಿ ಕನ್ನಡದ ಪಾಲಿಗೆ ದೊರಕಿರುವ ಮುತ್ತು ಶಿವರಾಜ್ ಕುಮಾರ್.
ಅವರ ವಿಶೇಷತೆ ಏನೆಂದರೆ ಮೂರುವರೆ ದಶಕಗಳಿಂದ ಯಶಸ್ವಿ ನಾಯಕ ಮಾತ್ರವಲ್ಲ, ಚಟುವಟಿಕೆಯಲ್ಲಿಯೂ ಯುವಕ. ಸದಾ ಯೌವ್ವನದ ಕವಚ ತೊಟ್ಟಂತಿರುವ ಡಾ. ಶಿವರಾಜ್ ಕುಮಾರ್ ಅವರು ನಾಯಕರಾಗಿರುವ ಕವಚ ಸಿನಿಮಾ ಇಂದು ರಾಜ್ಯಾದ್ಯಂತ ತೆರೆ ಕಾಣುತ್ತಿದೆ. ಚಿತ್ರದ ಬಗ್ಗೆ ಮನಸಿನ ಕವಚ ತೆರೆದು ಅವರು ಫಿಲ್ಮಿಬೀಟ್ ಜೊತೆಗೆ ಮಾತನಾಡಿದ್ದಾರೆ.
ಜಿವಿಆರ್ ವಾಸು ಈ ಚಿತ್ರವನ್ನ ನಿರ್ದೇಶನ ಮಾಡಿದ್ದು, ಸುಮಾರು ವರ್ಷದ ಬಳಿಕ ರೀಮೇಕ್ ಸಿನಿಮಾದಲ್ಲಿ ನಟಿಸಿದ್ದಾರೆ ಶಿವಣ್ಣ. ರೀಮೇಕ್ ಸೂತ್ರವನ್ನ ಮುರಿದು ಹ್ಯಾಟ್ರಿಕ್ ಹೀರೋ ಈ ಚಿತ್ರವನ್ನ ಆಯ್ಕೆ ಮಾಡಿಕೊಂಡಿದ್ದೇಕೆ? ಕಣ್ಣಿಲ್ಲದ ಪಾತ್ರದಲ್ಲಿ ಸೆಂಚುರಿ ಸ್ಟಾರ್ ಅಭಿನಯಿಸಿದ ಅನುಭವ ಹೇಗಿತ್ತು ಎಂಬುದರ ಬಗ್ಗೆ ಸ್ವತಃ ಶಿವಣ್ಣನ ಮಾತಗಳಲ್ಲಿ ನೋಡಿ...ಮುಂದೆ ಓದಿ....

'ಕವಚ' ಚಿತ್ರದಲ್ಲಿ ಕಣ್ಣೇ ಇರದಂತೆ ನಟಿಸಿದ ಅನುಭವ ಹೇಗಿತ್ತು?
ಕಣ್ಣಿಗೆ ಕಪ್ಪು ಕನ್ನಡಕ ಹಾಕಿಕೊಂಡು ಅಂಧನ ಪಾತ್ರದಲ್ಲಿ ನಟಿಸುವುದು ರೀತಿಯಲ್ಲಿ ಸುಲಭ. ಆದರೆ ಕನ್ನಡಕ ಇಲ್ಲದೆ ನೇಕೆಡ್ ಐಸ್ನಲ್ಲಿ ನಟಿಸುವುದು ಒಂಥರಾ ಛಾಲೆಂಜಿಂಗೇ ಸರಿ. ಅದಕ್ಕಾಗಿ ಐ ಬಾಲ್ ಕಾಣದಂತೆ ಮಾಡಿ ಕಷ್ಟ ಪಟ್ಟಿಲ್ಲ. ಆದರೆ ಕಣ್ಣು ತೆರೆದುಕೊಂಡೇ ಕಣ್ಣಿರದವನ ಭಾವನೆ ವ್ಯಕ್ತಪಡಿಸೋಕೆ ಟ್ರೈ ಮಾಡಿದ್ದೇನೆ. ಇದು ಮೂಲ ಚಿತ್ರದಲ್ಲಿ ಮೋಹನ್ಲಾಲ್ ಅವರು ಚೆನ್ನಾಗಿ ಮಾಡಿದ್ದಾರೆ. ಅದೇ ಮೆಥಡ್ ಇಲ್ಲಿಯೂ ಮಾಡಿದ್ದೇವೆ. ಅಫ್ಕೋರ್ಸ್ ಎರಡು ದಿನ ಒಬ್ಬರು ಬ್ಲೈಂಡ್ ಟೀಚರ್ ಬಂದು ಹೇಳಿಕೊಟ್ಟಿದ್ದಾರೆ. ಏನೋ ಸ್ವಲ್ಪ ಕಣ್ಣು ಸ್ಟ್ರೆಸ್ ಆಯಿತು. ಆದರೆ ನಟಿಸಿದ ಪಾತ್ರದ ಮುಂದೆ ಅದೇನೂ ಅಲ್ಲ.

ಒಂದು ಒಳ್ಳೆಯ ಪಾತ್ರವನ್ನು ಮಾಡಿದ ತೃಪ್ತಿ ದೊರಕಿತು ಎನ್ನಬಹುದೇ?
ಖಂಡಿತವಾಗಿ. ಅದೇ ಕಾರಣದಿಂದಲೇ 15 ವರ್ಷಗಳ ಬಳಿಕ ಒಂದು ರಿಮೇಕ್ ಚಿತ್ರವನ್ನು ಒಪ್ಪಿಕೊಂಡೆ. ನನ್ನ ಪಾತ್ರ ಮಾತ್ರವಲ್ಲ, ಚಿತ್ರ ನೀಡುವ ಸಂದೇಶ ಇದೆಯಲ್ಲ? ತುಂಬ ಚೆನ್ನಾಗಿದೆ. ಮಾನವೀಯ ವೌಲ್ಯಗಳನ್ನು ಎಲ್ಲರಿಗೂ ಒಂದೇ ರೀತಿ ಹಂಚಬೇಕು. ಜನ ನೋಡಿ ವಿಂಗಡಿಸುತ್ತಾ ಹೋಗಬಾರದು. ಹಣವಿದ್ದವರು, ಕಣ್ಣು ಸೇರಿದಂತೆ ಇತರ ಅಂಗಾಗಳೆಲ್ಲ ಸರಿ ಇದ್ದವರು ಎನ್ನುವ ಕಾರಣಕ್ಕೆ ಅವರಿಗೆ ಒಂದಷ್ಟು ಹೆಚ್ಚು ವ್ಯಾಲ್ಯೂ ಕೊಡೋದು, ಅದೇ ಬಡವರಿಗೆ , ಕಣ್ಣು, ಕೈ ಕಾಲು, ಇಲ್ಲದವರಿಗೆ ವ್ಯಾಲ್ಯೂ ಇಲ್ಲ' ಎಂದು ನಾವು ವ್ಯತ್ಯಾಸ ಮಾಡಬಾರದು ಅನ್ನೋದನ್ನು ಚಿತ್ರ ಸೂಚ್ಯವಾಗಿ ಹೇಳುತ್ತದೆ.

ನಿಮ್ಮಂಥ ಕಲಾವಿದನಿಗೆ ಈ ರೀತಿಯ ಪಾತ್ರಗಳು ನಮ್ಮಲ್ಲೇ ಸೃಷ್ಟಿಯಾಗುವುದಿಲ್ಲ ಯಾಕೆ?
ಈ ವಿಚಾರದಲ್ಲಿ ನಾನು ಯಾರನ್ನೂ ಬ್ಲೇಮ್ ಮಾಡುವುದಿಲ್ಲ. ಯಾಕೆಂದರೆ ಇಟ್ ಹ್ಯಾಪನ್ಸ್. ಎಲ್ಲ ನಿರ್ದೇಶಕರಿಗೂ ಅವರದೇ ಆದ ಒಂದು ಟೇಸ್ಟ್ ಇರುತ್ತದೆ. ಪ್ರತಿಯೊಬ್ಬರು ಇಂಥದನ್ನೇ ಮಾಡಬೇಕು ಎಂದು ಹೇಳುವುದು ಕಷ್ಟ. ಮಲಯಾಳಂನಲ್ಲಿ ಬಂತು, ನಾನು ನೋಡಿದ್ದೆ. ಆಫರ್ ಬಂದಾಗ ಸರಿಯಾದ ಫಿಲ್ಮ್ ಅನಿಸಿತು. ಒಪ್ಪಿಕೊಂಡೆ. ಕೆಲವೊಮ್ಮೆ ನಾವು ಬೆನ್ನು ಬಿದ್ದು ಹೋಗುವ ಪಾತ್ರಗಳು ಸಿನಿಮಾ ಆಗಬೇಕು ಎಂದೇನಿಲ್ಲ. ಸಿಕ್ಕ ಪಾತ್ರವನ್ನು ಹಾನೆಸ್ಟ್ ಆಗಿ ಮಾಡಿದ್ದೇನೆ. ನಾವು ನಟಿಸಿದಲ್ಲಿಗೆ ಮುಗಿದಿಲ್ಲ. ಸಿನಿಮಾ ಎನ್ನುವುದು ಪ್ರೇಕ್ಷಕರು ಮೆಚ್ಚಿದಾಗಲೇ ಸಂಪೂರ್ಣವಾಗೋದು.

ನಿಮ್ಮ ಅಭಿಮಾನಿಗಳು ನೇತ್ರದಾನಕ್ಕೆ ಪ್ರೇರೇಪಿಸುವ ಕಾರ್ಯಕ್ರಮಗಳ ಮೂಲಕ ಉತ್ಸಾಹದಲ್ಲಿದ್ದಾರೆ?
ಹೌದು. ಅಭಿಮಾನಿಗಳು ಬಿಡಿ, ನಮ್ಮ ಪ್ರತಿಯೊಂದು ಮನೆಯವರಂತೆ ಹೆಜ್ಜೆಗೂ ಬೆಂಬಲಿಸುತ್ತಾರೆ. ಜೊತೆಗೆ ಇಷ್ಟವಾಗದೆ ಇದ್ದಾಗ ಅದನ್ನು ನಮಗೆ ಹೇಳುತ್ತಾರೆ. ಟೀಮ್ ಶಿವಸೈನ್ಯ'ದವರು ಅಪ್ಪಾಜಿಯನ್ನು ಆದರ್ಶವಾಗಿ ಇರಿಸಿಕೊಂಡು ಐ ಚೆಕಪ್, ಐ ಡೊನೇಶನ್ಗೆ ಮುಂದಾಗಿದ್ದಾರೆ. ಖುಷಿಯಿದೆ. ಚಿತ್ರ ಸಂದೇಶಕ್ಕೆ ಮಾತ್ರ ಸೀಮಿತವಾಗಿಲ್ಲ. ಕಮರ್ಷಿಯಲ್ ಆಗಿಯೂ ಆಕರ್ಷಕ ಅಂಶಗಳನ್ನು ಹೊಂದಿದೆ. ಹಾಗಾಗಿ ಚಿತ್ರದ ಬಗ್ಗೆ ಮಾಧ್ಯಮಗಳ ವಿಮರ್ಶೆ ಮತ್ತು ಸಾಮಾನ್ಯ ಪ್ರೇಕ್ಷಕರ ಪ್ರತಿಕ್ರಿಯೆಗೆ ನಾನು ಹೆಚ್ಚು ನಿರೀಕ್ಷೆಯಲ್ಲಿದ್ದೇನೆ.

ಯುವ ನಿರ್ದೇಶಕ ತಂಡದ ಜೊತೆಗೆ ಅನುಭವ ಹೇಗಿತ್ತು?
ನಿರ್ದೇಶಕ ವಾಸು ಅವರು ತುಂಬ ಕಾನ್ಫಿಡೆಂಟಲ್ಲಿ ಕೆಲಸ ಮಾಡಿದ್ದಾರೆ. ಇವರ ವೇ ಆಫ್ ಟೇಕಿಂಗ್ಸ್ ಎಲ್ಲ ತುಂಬಾನೇ ಚೆನ್ನಾಗಿದೆ. ಕನ್ವಿನ್ಸಿಂಗ್ ಮತ್ತು ಪ್ರಾಮಿಸಿಂಗ್ ಆಗಿದೆ. ಅಲ್ಟಿಮೇಟ್ ಆಗಿ ಜಡ್ಜ್ಮೆಂಟ್ ಬಿಡುಗಡೆಯಂದು ಸಿಗುತ್ತದೆ. ಈ ವಾರದಲ್ಲಿ ಗೊತ್ತಾಗುತ್ತದೆ.

ನಿಮ್ಮ ಜೊತೆಗೆ ನಂದಿನಿಯಾಗಿ ನಟಿಸಿದ ಎಂಬ ಬಾಲ ಕಲಾವಿದೆ ಬಗ್ಗೆ ಹೇಳಿ?
ಆ ಹುಡುಗಿ ತುಂಬ ಚೆನ್ನಾಗಿ, ಬ್ರಿಲಿಯಂಟಾಗಿ ನಟಿಸಿದೆ. ಸಾಮಾನ್ಯವಾಗಿ ಮಕ್ಕಳು ಆಕ್ಟಿಂಗ್ ಎಂದೊಡನೆ ಓವರ್ ಆಕ್ಟಿಂಗ್ ಮಾಡಿಬಿಡುತ್ತಾರೆ. ಆದರೆ ಈ ಹುಡುಗಿ ತುಂಬ ನೈಜವಾಗಿ ಮಾಡಿದ್ದಾಳೆ. ಅದೇ ನನಗೆ ಅಚ್ಚರಿ ಮೂಡಿಸುವಂತಿತ್ತು. ವಿಶೇಷ ಏನೆಂದರೆ ಆ ಮಗುವಿಗೆ ಹೆಚ್ಚು ಹೇಳಿಕೊಡುವುದೇ ಬೇಕಾಗಿಲ್ಲ. ಬಹಳಷ್ಟು ಒಳ್ಳೆಯ ಎಮೋಶನ್ಸ್ ಅನ್ನು ತೋರಿಸಿದೆ. ಗೊತ್ತಿಲ್ಲದ ಭಾಷೆಯನ್ನು ಮಾತನಾಡುತ್ತಾ ಅಭಿನಯಿಸುವುದು ತುಂಬ ಕಷ್ಟ. ಆದರೆ ಆ ಬುದ್ಧಿವಂತೆ ಅದನ್ನು ಸಮರ್ಥವಾಗಿ ನಿಭಾಯಿಸಿದ್ದಾಳೆ. ಆಕೆಗೆ ಮಾತ್ರವಲ್ಲ, ಚಿತ್ರದಲ್ಲಿ ಬರುವ ಸಣ್ಣ ಸಣ್ಣ ಪಾತ್ರಗಳಿಗೂ ಏನೋ ಒಂದು ಸಂಬಂಧವಿರುವ ಹಾಗೆ ಪ್ರಾಮುಖ್ಯತೆ ನೀಡಿ ಚಿತ್ರ ಮಾಡಲಾಗಿದೆ.

ಶೂಟಿಂಗ್ ವೇಳೆ ನಡೆದ ಮರೆಯಲಾಗದ ಘಟನೆ ಏನಾದರೂ ಹೇಳಬಹುದೇ?
ಚಿತ್ರದಲ್ಲಿ ನನಗೆ ಪೊಲೀಸರು ಹೊಡೆಯುವ ದೃಶ್ಯಗಳಿವೆ. ಆ ಹೊಡೆತಗಳಿಗೆ ನಾನು ಅನಿರೀಕ್ಷಿತವಾಗಿ ಏಟು ತಿಂದಂತೆ ರಿಯಾಕ್ಷನ್ ಕೊಡಬೇಕಿತ್ತು. ಅವರು ದೂಡಿ ಹಾಕಿದಾಗ ಕಣ್ಣ ಮುಂದೆ ಏನಿದೆ ಎಂದು ತಿಳಿಯದೇ ಬ್ಲ್ಯಾಂಕಾಗಿ ಹೋಗಿ ಬೀಳುವುದು ಮೊದಲಾದ ದೃಶ್ಯಗಳಿದ್ದವು. ಆದರೆ ಅಲ್ಲಿ ಏನೇನೋ ಪ್ರಾಪರ್ಟಿ ಇರುವುದನ್ನು ಕಂಡೂ ಕಾಣದಂತೆ ಹೋಗಿ ಬೀಳೋದು ನನಗೆ ಒಂದು ರೀತಿಯಲ್ಲಿ ಛಾಲೆಂಜಿಂಗ್ ಆಗಿತ್ತು. ಚಿತ್ರದಲ್ಲಿ ಅದನ್ನೇ ಮೆಮೊರೆಬಲ್ ಇನ್ಸಿಡೆಂಟ್ ಎಂದು ಹೇಳಬಹುದು. ಸ್ವಲ್ಪ ರಿಸ್ಕ್ ಎನಿಸಿದರೂ, ಸಹಜತೆಯೊಂದಿಗೆ ಮಾಡಿದ ಕೆಲಸಕ್ಕೆ ಸಾಹಸ ನಿರ್ದೇಶಕ ರವಿವರ್ಮ ಕೂಡ ಮೆಚ್ಚಿದ್ದಾರೆ.

ಸದ್ಯಕ್ಕೆ ನಿಮ್ಮ ಹೊಸ ಸಿನಿಮಾಗಳು ಯಾವುವು?
ಪಿ ವಾಸು ಅವರು ನಿರ್ದೇಶಿಸುತ್ತಿರುವ ಚಿತ್ರದ ಶೂಟಿಂಗ್ ಮುಂ ದುವರಿದೆ. 'ದ್ರೋಣ' ಸಿನಿಮಾ ಕೂಡ ಚಿತ್ರೀಕರಣದಲ್ಲಿದೆ. 'ರುಸ್ತುಂ' ಮುಗಿಯಿತು. ಅದರ ಡಬ್ಬಿಂಗ್ ಕೂಡ ಆಗಿದೆ. ಪೋಸ್ಟ್ ಪ್ರೊಡಕ್ಷನ್ ಕೆಲಸ ನಡೆಯುತ್ತಿದೆ.


Click it and Unblock the Notifications











