ನನ್ನ ಜತೆಗಿರುವವರು ಆತಂಕಗೊಂಡಾಗಲೇ ನನಗೆ ನೋವಾಗೋದು! - ಶಿವರಾಜ್ ಕುಮಾರ್
ಕನ್ನಡ ನಟ ಶಿವರಾಜ್ ಕುಮಾರ್ ಅವರು ಇಂದು ಚಿಕಿತ್ಸೆಗೆಂದು ಲಂಡನ್ ಗೆ ಹೊರಟಿದ್ದಾರೆ. ಭುಜದ ನೋವಿನಿಂದ ಬಳಲುತ್ತಿದ್ದ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಶಸ್ತ್ರ ಚಿಕಿತ್ಸೆಗಾಗಿ ಲಂಡನ್ ಗೆ ಹೋಗುತ್ತಿದ್ದಾರೆ. ಬೆಳಿಗ್ಗೆ 10.30ರ ಫ್ಲೈಟ್ ನಲ್ಲಿ ಅವರು ಕುಟುಂಬ ಸಮೇತವಾಗಿ ಲಂಡನ್ ಗೆ ಹೊರಡುವ ಮೊದಲು ಫಿಲ್ಮೀಬೀಟ್ ಕನ್ನಡದ ಜೊತೆ ಮಾತನಾಡಿದರು.
ಇತ್ತೀಚಿಗಷ್ಟೆ ಸಾಹಸ ನಿರ್ದೇಶಕ ರವಿವರ್ಮ ಜೊತೆ ಮಾಡಿದ್ದ ರುಸ್ತುಂ ಸಿನಿಮಾ ಬಿಡುಗಡೆಯಾಗಿತ್ತು. ಈ ಸಿನಿಮಾದ ಸಕ್ಸಸ್ ಬೆನ್ನಲ್ಲೆ ಈಗ ಹೆಚ್ಚಿನ ಚಿಕಿತ್ಸೆಗಾಗಿ ವಿದೇಶಕ್ಕೆ ಹೋಗುತ್ತಿರುವ ಶಿವಣ್ಣ ಕೆಲವು ವಿಚಾರವನ್ನ ನಮ್ಮೊಂದಿಗೆ ಹಂಚಿಕೊಂಡಿದ್ದಾರೆ.
ಇದೇ ಸಂದರ್ಭದಲ್ಲಿ ಅವರು ಪಿ ವಾಸು ನಿರ್ದೇಶನದ ಚಿತ್ರ ಮಂಗಳೂರಿನಲ್ಲಿ ಚಿತ್ರೀಕರಣ ಆದ ವೇಳೆ ನಡೆದಿತ್ತು ಎನ್ನಲಾದ ವಿವಾದದ ಬಗ್ಗೆ ಕೂಡ ಶಿವಣ್ಣ ಪ್ರತಿಕ್ರಿಯೆ ನೀಡಿದ್ದಾರೆ. ಮುಂದೆ ಓದಿ....

ಹೊಸ ನಿರ್ದೇಶಕರು ಕತೆ ಹೇಳುವ ಮಟ್ಟಕ್ಕೆ ಚಿತ್ರ ಮಾಡಿರಲ್ಲ. ಈ ನಿಟ್ಟಿನಲ್ಲಿ ರವಿವರ್ಮ ಅವರ ನಿರ್ದೇಶನ ಎಷ್ಟು ಪರ್ಸೆಂಟ್ ತೃಪ್ತಿ ನೀಡಿದೆ?
ಹಾಗೆ ನೋಡಿದ್ರೆ ಮೊದಲ ಸಿನಿಮಾ ಆದರೂ, ರವಿವರ್ಮ 'ರುಸ್ತುಂ' ಅನ್ನು ಚೆನ್ನಾಗಿ ಮಾಡಿದ್ದಾರೆ. ಪರ್ಸೆಂಟೇಜ್ ವಿಚಾರಕ್ಕೆ ಬಂದರೆ ಎಪ್ಪತ್ತರಿಂದ ಎಂಬತ್ತು ಪರ್ಸೆಂಟ್ ಅವರು ಹೇಳಿದ ಮಾದರಿಯಲ್ಲೇ ಚಿತ್ರ ಹೊರಗೆ ತಂದಿದ್ದಾರೆ. ಮುಖ್ಯವಾಗಿ ಜನಗಳು ಎಂಟರ್ಟೈನ್ಮೆಂಟ್ ಪಡೆದುಕೊಳ್ಳುತ್ತಿದ್ದಾರೆ. ಸೆಕೆಂಡ್ ಹಾಫಲ್ಲಿ ನರೇಶನ್ ಕೂಡ ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಂಡಿದೆ.

'ರುಸ್ತುಂ'ನಲ್ಲಿ ನಿಮಗೆ ವೈಯಕ್ತಿಕವಾಗಿ ಇಷ್ಟವಾದ ದೃಶ್ಯಗಳು ಯಾವುದು?
ಪೊಲೀಸ್ ಎಪಿಸೋಡ್ ಗಳು ಮತ್ತು ಮನೆಯ ದೃಶ್ಯಗಳದ್ದು ಒಂದು ಇಂಟರ್ ಕಟ್ ಬರುತ್ತೆ ನೋಡಿ? ಅದು ನನಗೆ ಕತೆ ಕೇಳುವಾಗಲೇ ಇಷ್ಟವಾಗಿತ್ತು. ಸಿನಿಮಾದಲ್ಲಿಯೂ ಇಷ್ಟವಾಯಿತು.

ದ್ರೋಣ, ಆನಂದ್ ಮತ್ತು ಭಜರಂಗಿ 2 ಎನ್ನುವ ಮೂರು ಚಿತ್ರಗಳು ಕೂಡ ಇದೇ ವರ್ಷ ಬಿಡುಗಡೆಯಾಗಲಿವೆಯಾ?
ಇಲ್ಲ. ದ್ರೋಣ ಬರುತ್ತೆ. ಆನಂದ್ ವರ್ಷಾಂತ್ಯಕ್ಕೆ ತರುವ ಯೋಜನೆ ಹಾಕಲಾಗಿದೆ. ಭಜರಂಗಿ 2 ಮುಂದಿನ ವರ್ಷ ಬಿಡುಗಡೆ. ಅದು ತುಂಬ ಟೈಮ್ ತೆಗೆದುಕೊಳ್ಳುತ್ತೆ. ಬಹುಶಃ ಮುಂದಿನ ವರ್ಷ ಏಪ್ರಿಲ್ ವೇಳೆ ಸಿನಿಮಾ ತೆರೆಗೆ ಬರಬಹುದು. ಟೈಟಲ್ ಲಾಂಚ್ ಆಗಿರುವ ಪಟ್ಟಿಯಲ್ಲಿ ಎಸ್ ಆರ್ ಕೆ ಕೂಡ ಇದೆ. ಆದರೆ ಈ ಬಾರಿ ಎಲ್ಲವನ್ನೂ ಒಮ್ಮೆಲೆ ಮೈಮೇಲೆ ಎಳೆದುಕೊಳ್ಳುವುದಿಲ್ಲ. ಆಪರೇಷನ್ ಆದಮೇಲೆ ನಿಧಾನಕ್ಕೆ ಭಜರಂಗಿ 2 ಮುಗಿಸಿ ಅದರ ಮೇಲೆಯೇ ಮತ್ತೊಂದು ಸಿನಿಮಾದಲ್ಲಿ ತೊಡಗಿಸಿಕೊಳ್ಳೋಣ ಅಂತ ಮಾಡಿದ್ದೀನಿ.

ಆನಂದ್ ಶೂಟಿಂಗ್ ವೇಳೆ ಬಂಟ್ವಾಳದ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಪ್ರತಿಭಟನೆ ನಡೆದಿದ್ದರ ಬಗ್ಗೆ ಏನು ಹೇಳ್ತೀರ?
ಪ್ರತಿಭಟನೆನಾ? ಪ್ರತಿಭಟನೆ ಬಗ್ಗೆ ನನಗೇನೂ ಗೊತ್ತಿಲ್ಲ. ಪ್ರತಿಭಟನೆ ಆಗಿದ್ದರೆ ಖಂಡಿತವಾಗಿ ನನಗೆ ಗೊತ್ತಾಗಿರೋದು. ಯಾಕೆಂದರೆ ನಾನು ಅಲ್ಲೇ ಚಿತ್ರೀಕರಣದಲ್ಲಿ ಇದ್ದೆ ಅಲ್ವ? ನೀವು ಆಗ್ಲೇ ಹೇಳಿರೋ ಪ್ರಕಾರ ದೇವಸ್ಥಾನದಲ್ಲಿ ದೈವದ ಕುರಿತಾದ ಚಿತ್ರೀಕರಣ ನಡೆಸಬಾರದಿತ್ತು ಅಂತ ಅಸಮಾಧಾನ ಆಗಿತ್ತು ಎಂದಿದ್ದೀರಿ. ಅಂಥ ವಿಚಾರಗಳ ಬಗ್ಗೆ ನಮಗೆ ತಿಳಿಸಬೇಕಾದವರು ದೇವಸ್ಥಾನದವರೇ ತಾನೇ? ನಾವು ಅವರ ಒಪ್ಪಿಗೆ ಪಡೆದೇ ಚಿತ್ರೀಕರಣ ಮಾಡಿರುವ ಕಾರಣ ಅದರಲ್ಲಿ ತಪ್ಪು ನಡೆದಿರಬಹುದು ಎನ್ನುವ ಕಲ್ಪನೆ ನನಗಿಲ್ಲ. ನಾವು ಭಾರತೀಯರಾಗಿ ಬೇರೆ ಧರ್ಮಗಳನ್ನೇ ಗೌರವಿಸುತ್ತೇವೆ. ಹಾಗಿರಬೇಕಾದ್ರೆ ನಾನು ಧರ್ಮದೊಳಗಿನ ನಂಬಿಕೆಗಳನ್ನು ಕಡೆಗಣಿಸೋ ವಿಚಾರವೇ ಇಲ್ಲ.

ಇತರರ ಸಾವು, ಅನಾರೋಗ್ಯಕ್ಕೆ ಕಣ್ಣೀರಾಗುವ ನೀವು, ನಿಮ್ಮ ವಿಚಾರದಲ್ಲಿ ಮಾತ್ರ ಯಾವತ್ತೂ ಆತಂಕ, ಚಿಂತೆ ಮಾಡೋದನ್ನು ಕಂಡೇ ಇಲ್ಲ. ಈ ಆತ್ಮವಿಶ್ವಾಸದ ಗುಟ್ಟೇನು?
ಹೌದು, ಕೆಲವರು ವಯಸ್ಸಾಗ್ತಾ ಹೋದಂತೆ ಸಾವು ಹತ್ತಿರ ಬಂತು ಅಂತ ಆತಂಕಗೊಳ್ತಾ ಹೋಗ್ತಾರೆ. ಆದರೆ ನನಗೆ "ವಯಸ್ಸೇ ಕಾಣಿಸ್ತಿಲ್ಲ " ಅಂತ ಹೇಳೋರೇ ಹೆಚ್ಚಿರೋದರಿಂದ ನನಗೂ ವಯಸ್ಸಾದ ಫೀಲ್ ಆಗೋದೇ ಇಲ್ಲ. ಏನೋ ಮೈ ಹುಷಾರಿಲ್ಲ ಅಂದಾಗ ನನ್ನ ಜತೆಗಿರೋರು, ಅಭಿಮಾನಿಗಳು ಆತಂಕ ಪಡೋದು ನನಗೆ ಇಷ್ಟಾಗಲ್ಲ. ಅವರು ಆತಂಕ ತೋರಿಸುವಷ್ಟು ನೋವು ನಾನು ಅನುಭವಿಸುತ್ತಿಲ್ಲ ಅಂತ ಅವರಿಗೆ ಹೇಳೋಣ ಎನ್ನುವುದೇ ನನ್ನ ಮೊದಲ ಆದ್ಯತೆ ಆಗಿರುತ್ತೆ. ಹಾಗಾಗಿ ನನ್ನ ಬಗ್ಗೆ ನನಗೆ ಚಿಂತೆ ಮಾಡಬೇಕು ಅನಿಸೋದೇ ಇಲ್ಲ. ಮಾತ್ರವಲ್ಲ, ಸಾವು ನನಗಿಂತ ಚಿಕ್ಕೋರಿಗೂ ಬಂದಿದೆ. ಇಂದಲ್ಲ ನಾಳೆ ನನಗೂ ಬರುತ್ತೆ. ದೇವರು ಹಣೇಲಿ ಎಲ್ಲೀ ತನಕ ಚೆನ್ನಾಗಿರು ಅಂತ ಬರೆದಿದ್ದಾನೋ ಅಲ್ಲಿಯವರೆಗೆ ಖುಷಿಯಾಗೇ ಇರುತ್ತೇನೆ. ಎಲ್ಲರೂ ಅಷ್ಟೇ ಅಲ್ಲವೇ? ಆಮೇಲೆ ಶಿವಾಯ ನಮಃ.. (ನಗು)

ಲಂಡನ್ ಪ್ರಯಾಣದ ತಯಾರಿ ಹೇಗಿತ್ತು?
ತಯಾರಿ ಅಂಥದ್ದೇನಿಲ್ಲ. ಗುರುವಾರ ತನಕ ಚಿತ್ರೀಕರಣದಲ್ಲೇ ಇದ್ದೆ. 'ಭಜರಂಗಿ 2' ಚಿತ್ರೀಕರಣಕ್ಕಾಗಿ ನೈಟ್ ಎಫೆಕ್ಟ್ ಶೂಟ್ ಇತ್ತು. ನಿನ್ನೆ ಪ್ಯಾಕಿಂಗ್ ಅಪ್ ಗಾಗಿ ತಯಾರಿ ನಡೆಸಿದ್ದೆ. ಇವತ್ತು ಬೆಳಿಗ್ಗೆ 10.30ರ ಫ್ಲೈಟಲ್ಲಿ ಹೊರಡ್ತಾ ಇದ್ದೀನಿ. 23ಕ್ಕೆಲ್ಲ ವಾಪಾಸು ಬಂದು ಬಿಡುತ್ತೀನಿ.

ನಿರ್ದೇಶಕ ಭಗವಾನ್ ಅವರು ನಿನ್ನೆ (ಜುಲೈ 5)ತಮ್ಮ 87ನೇ ಜನ್ಮದಿನ ಆಚರಿಸಿಕೊಂಡರು. ಅವರ ಬಗ್ಗೆ ಏನು ಹೇಳಲು ಬಯಸುತ್ತೀರ?
ಭಗವಾನ್ ಸರ್ ಅಪರೂಪದ ನಿರ್ದೇಶಕ. ಕಾದಂಬರಿಗಳನ್ನು ಇರಿಸಿಕೊಂಡು ಯಶಸ್ವಿ ಕೌಟುಂಬಿಕ ಚಿತ್ರ ಮಾಡಿ ಗೆದ್ದವರು ಮಾತ್ರವಲ್ಲ, ಅಪ್ಪಾಜಿ ನಾಯಕನಾಗಿರುವ ಬಾಂಡ್ ಚಿತ್ರಗಳ ಮೂಲಕ ಭಾರತೀಯ ಸಿನಿಮಾರಂಗದಲ್ಲೇ ಗುರುತಿಸಿಕೊಂಡವರು. ಇಂದಿಗೂ ನಿರ್ದೇಶನ ರಂಗದಲ್ಲಿ ಸಕ್ರಿಯರಾಗಿದ್ದಾರೆ ಜತೆಗೆ ಈಗಲೂ ಸ್ಲಿಮ್ ಆಗಿ ಇದ್ದಾರೆ,ತಾವೇ ಖುದ್ದಾಗಿ ಕಾರು ಓಡಿಸುತ್ತಾರೆ.. ಅದೆಲ್ಲ ತುಂಬ ಖುಷಿ ಕೊಡುತ್ತದೆ. ಅವರು ನೂರು ವರ್ಷ ಹೀಗೆಯೇ ಚೆನ್ನಾಗಿ ಇರಲಿ ಎಂದು ಹಾರೈಸುತ್ತೇನೆ.


Click it and Unblock the Notifications











