'ಶುದ್ಧಿ'ಗೆ ರಾಜ್ಯ ಪ್ರಶಸ್ತಿ, ಆಸ್ಕರ್ ಸಿಕ್ಕಷ್ಟೇ ಸಂಭ್ರಮ ಪಟ್ಟ ನಿರ್ದೇಶಕ ಆದರ್ಶ್
2017ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರಕಟವಾಗಿದ್ದು, ಅತ್ಯುತ್ತಮ ಮೊದಲ ಸಿನಿಮಾ ಅವಾರ್ಡ್ 'ಶುದ್ಧಿ' ಮುಡಿಗೇರಿಸಿಕೊಂಡಿದೆ. ಆದರ್ಶ್ ಈಶ್ವರಪ್ಪ ಚೊಚ್ಚಲ ಬಾರಿಗೆ ನಿರ್ದೇಶನ ಮಾಡಿದ್ದ ಈ ಸಿನಿಮಾಗೆ ರಾಜ್ಯ ಪ್ರಶಸ್ತಿ ಸಿಕ್ಕಿರುವುದಕ್ಕೆ ಆಸ್ಕರ್ ಸಿಕ್ಕಷ್ಟೇ ಸಂತಸ ವ್ಯಕ್ತಪಡಿಸಿದ್ದಾರೆ ನಿರ್ದೇಶಕರು.
ಅಮೆರಿಕನ್ ಹುಡುಗಿಯೊಬ್ಬಳು ಭಾರತದಲ್ಲಿನ ಇಬ್ಬರು ಮಹಿಳಾ ಪತ್ರಕರ್ತೆಯರೊಂದಿಗೆ ಸೇರಿ, ಮಹಿಳಾ ಶೋಷಣೆ ವಿರುದ್ಧ ನ್ಯಾಯಕ್ಕಾಗಿ ಹೋರಾಡುವ ಅಂಶವನ್ನು 'ಶುದ್ಧಿ' ಹೊಂದಿತ್ತು. ನಟಿ ನಿವೇದಿತಾ, ಲಾರೆನ್ ಸ್ಪಾರ್ಟನೊ, ಅಮೃತಾ ಕರಗದ ಚಿತ್ರದ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದರು.
ವೃತ್ತಿಯಲ್ಲಿ ಇಂಜಿನಿಯರ್ ಆಗಿದ್ದರೂ, ಸಿನಿಮಾ ಮೇಲಿನ ಆಸಕ್ತಿ ಆದರ್ಶ್ ಅವರನ್ನ ಬಣ್ಣದ ಲೋಕಕ್ಕೆ ಆಹ್ವಾನಿಸಿತ್ತು. ಮಾಡಿದ ಮೊದಲ ಪ್ರಯತ್ನದಲ್ಲೇ ರಾಜ್ಯದ ಅತ್ಯುತ್ತಮ ಪ್ರಶಸ್ತಿ ಲಭಿಸಿರುವುದು ನಿರ್ದೇಶಕರ ಸಂತಸಕ್ಕೆ ಪಾರವೇ ಇಲ್ಲದಂತಾಗಿದೆ. ಪ್ರಶಸ್ತಿ ಗೆದ್ದ ಖುಷಿಯನ್ನ ಶುದ್ಧಿ ನಿರ್ದೇಶಕ ಆದರ್ಶ್ ಈಶ್ವರಪ್ಪ ಅವರು ಫಿಲ್ಮಿಬೀಟ್ ಕನ್ನಡದೊಂದಿಗೆ ಹಂಚಿಕೊಂಡಿದ್ದಾರೆ. ಮುಂದೆ ಓದಿ....

ಅತಿದೊಡ್ಡ ಪ್ರಶಸ್ತಿ ಸಿಕ್ಕಿರುವುದು ಖುಷಿ
'ಇದು ನಮಗೆ ಅತಿ ದೊಡ್ಡ ಗೌರವ. ಕರ್ನಾಟಕದಲ್ಲಿ ಅತಿದೊಡ್ಡ ಪ್ರಶಸ್ತಿ ಲಭಿಸಿರುವುದು ತುಂಬಾ ಖುಷಿಯಾಗ್ತಿದೆ. ನಂಬೋಕೆ ಸಾಧ್ಯವಾಗಲಿಲ್ಲ. ಈ ಹಿಂದೆ ಕೆಲವು ಪ್ರಶಸ್ತಿಗಳಿಗೆ ನಮ್ಮ ಸಿನಿಮಾ ನಾಮಿನೇಟ್ ಆಗಿತ್ತು. ಆದ್ರೆ, ವಿನ್ ಆಗಿರಲಿಲ್ಲ. ಬಟ್ ಮೊದಲ ಅತ್ಯುತ್ತಮ ಸಿನಿಮಾ ನೀಡಿದ್ದರಿಂದ ಈ ಹಿಂದಿನ ಸೋಲುಗಳು ಎಲ್ಲವೂ ಮಾಯವಾಯ್ತು. ಒಂದು ಕ್ಷಣ ಭಾವುಕನಾದೆ' ಎಂದು ಸಂತಸ ಹಂಚಿಕೊಂಡರು.

ಆಸ್ಕರ್ ಸಿಕ್ಕಷ್ಟೇ ಸಂಭ್ರಮ
'ಸಾಮಾಜಿಕ ಕಳಕಳಿ ಚಿತ್ರ ಮತ್ತು ಮಹಿಳಾ ಪ್ರಧಾನವಾಗಿದ್ದ ಸಿನಿಮಾ ಇದಾಗಿತ್ತು, ಆದ್ದರಿಂದ ಚಿತ್ರಕಥೆ, ಕಥೆ ಯಾವುದಾದರೂ ವಿಭಾಗದಲ್ಲಿ ಪ್ರಶಸ್ತಿ ಬರುತ್ತೆ ಎಂಬ ನಿರೀಕ್ಷೆ ಇತ್ತು. ಅದು ಈಗ ನೆರವೇರಿದೆ. ರಾಜ್ಯ ಪ್ರಶಸ್ತಿ ವಿಜೇತ ನಿರ್ದೇಶಕ ಎಂದು ಗುರುತಿಸಿಕೊಳ್ಳುವುದು ನನಗೆ ಆಸ್ಕರ್ ಸಿಕ್ಕಷ್ಟೇ ಆನಂದವಾಗ್ತಿದೆ. ಇದು ನಮ್ಮ ತಂದೆ-ತಾಯಿಗೆ ಹೆಮ್ಮೆ ತಂದಿದೆ' ಎಂದು ಖುಷಿಯಾದರು.

ಇಲ್ಲಿಂದ ಜವಾಬ್ದಾರಿ ಹೆಚ್ಚಿದೆ
'ಪ್ರತಿಯೊಂದು ಸಿನಿಮಾ ಮಾಡುವಾಗಲೂ ಯಾವುದೇ ಪ್ರಶಸ್ತಿ ಬರುತ್ತೆ ಎಂಬ ನಿರೀಕ್ಷೆಯಿಂದ ಮಾಡಲ್ಲ. ನನ್ನ ಮನಸ್ಸಿಗೆ ಹತ್ತಿರವಾದ ಕಥೆಯನ್ನಿಟ್ಟು ಸಿನಿಮಾ ಮಾಡ್ತೀನಿ. ಅದೇ ರೀತಿ ಮಾಡಿದ್ದು ಶುದ್ಧಿ. ಬಹುಶಃ ಇಲ್ಲಿಯವರೆಗೂ ಆ ಬಗ್ಗೆ ಯೋಚನೆ ಮಾಡಿರಲಿಲ್ಲ. ಬಟ್, ಈಗ ಪ್ರಶಸ್ತಿ ಸಿಕ್ಕಿದ ಮೇಲೆ ನನಗೂ ಅನಿಸುತ್ತಿದೆ ಹೆಚ್ಚು ಜವಾಬ್ದಾರಿ ಇದೆ ಅಂತ. ಜನರು ನನ್ನ ಮೇಲೆ ಇಟ್ಟಿರುವ ನಿರೀಕ್ಷೆಯನ್ನ ಹುಸಿ ಮಾಡಲ್ಲ'' ಎಂದರು.

'ಭಿನ್ನ' ಸಿನಿಮಾದ ಎಡಿಟಿಂಗ್ ಮುಗಿದಿದೆ
'ಶುದ್ಧಿ' ಮುಗಿಸಿದ ನಂತರ 'ಭಿನ್ನ' ಎಂಬ ಸಿನಿಮಾ ಮಾಡುತ್ತಿದ್ದಾರೆ ಆದರ್ಶ್ ಈಶ್ವರಪ್ಪ. ಈಗಾಗಲೇ ಪೋಸ್ಟರ್ ಮೂಲಕ ಭಾರಿ ಕುತೂಹಲ ಮೂಡಿಸಿದ್ದಾರೆ. ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರಿಗೆ ಈ ಸಿನಿಮಾ ಟ್ರಿಬ್ಯೂಟ್ ಆಗುತ್ತೆ. ಸಿನಿಮಾಗೆ ಯತೀಶ್ ವೆಂಕಟೇಶ್ ಹಾಗೂ ಪರ್ಪಲ್ ಆರೋ ಫಿಲಂಸ್ ಹಣ ಹಾಕುತಿದ್ದಾರೆ. ಸಂಗೀತ ಜಸ್ಸಿ ಕ್ಲಿಂಟನ್ ಮಾಡಿದ್ರೆ, ಆಂಡ್ರೋ ಆಯಿಲೋ ಭಿನ್ನ ಸಿನಿಮಾಗೆ ಕ್ಯಾಮೆರಾ ವರ್ಕ್ ಮಾಡುತ್ತಿದ್ದಾರೆ. ಮೊದಲ ಚಿತ್ರದಲ್ಲೇ ಪ್ರೇಕ್ಷಕರ ತಲೆಗೆ ಕೆಲಸ ಕೊಟ್ಟಿದ್ದ ಆದರ್ಶ್ ಭಿನ್ನ ಚಿತ್ರದ ಮೂಲಕ ಮತ್ತೊಂದು ಹೊಸ ಪ್ರಯತ್ನಕ್ಕೆ ಮುಂದಾಗಿದ್ದಾರೆ.

ಆದರ್ಶ್ ಈಶ್ವರಪ್ಪ ಹಿನ್ನೆಲೆ..
ವೃತ್ತಿಯಲ್ಲಿ ಮೆಕಾನಿಕಲ್ ಇಂಜಿನಿಯರ್ ಆಗಿದ್ದ ಆದರ್ಶ್ ಈಶ್ವರಪ್ಪ ಆಗಲೇ ಸಿನಿಮಾ ಮಾಡಬೇಕೆಂದು ಮನಸ್ಸು ಮಾಡಿದ್ದರು. ಅದಕ್ಕಾಗಿ ಪೂರ್ವ ತಯಾರಿ ಮಾಡಿಕೊಂಡೇ ಚಿತ್ರರಂಗಕ್ಕೆ ಬಂದ ಆದರ್ಶ್ ಯುಎಸ್ ನಲ್ಲಿ ಮೂರು ತಿಂಗಳ ತರಬೇತಿ ಪಡೆದುಕೊಂಡು ಬಂದಿದ್ದರು. ಈ ನಡುವೆ ಕೆಲವು ಖಾಸಗಿ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಲೇ, ನಾಲ್ಕೈದು ಸಾಕ್ಷ್ಯಚಿತ್ರಗಳನ್ನ ಕೂಡ ಡೈರೆಕ್ಟ್ ಮಾಡಿದ್ರು. ಅಲ್ಲಿಂದ ಶುದ್ಧಿ ಸಿನಿಮಾ ಮಾಡಲು ತಂಡವನ್ನ ಕಟ್ಟಿ ನಿರ್ದೇಶಕರಾದರು. ಅದರ ಪ್ರತಿಫಲವಾಗಿ ಈಗ ಚೊಚ್ಚಲ ಚಿತ್ರಕ್ಕೆ ರಾಜ್ಯ ಪ್ರಶಸ್ತಿ ಲಭಿಸಿದೆ.


Click it and Unblock the Notifications











