ಸುಳಿ-ಭಾವನೆ, ಬದುಕು- ಬವಣೆ, ಬೆಸುಗೆ :ಶ್ರೀನಾಥ್
ಭಾವನೆ, ಬೆಸುಗೆ, ಪ್ರೇಮ, ವಾತ್ಸಲ್ಯ, ವಿರಹ, ಸಮಸ್ಯೆ, ಸಂತಸ ಹೀಗೆ ನಾನಾ ವಿಧದ ಸುಳಿಗಳನ್ನು ಒಳಗೊಂಡ ಚಿತ್ರವೇ ಸುಳಿ. ಇಲ್ಲಿ ಮುಖ್ಯ ಪಾತ್ರ ಬುಡೇನ್ ಸಾಹೇಬರಾದರೂ ಚಿತ್ರದ ಕಥೆ ಹಾಗೂ ಪರಿಸರವೇ ನಿಮ್ಮನ್ನು ಸುಳಿಯ ಒಳಹೊರಗಿನ ಪೂರ್ಣ ಪರಿಚಯ ಮಾಡಿಸುತ್ತದೆ.
ಒಂದೆಡೆ ಪುಟ್ಟಣ್ಣ ಕಣಗಾಲ್ ಗರಡಿಯಿಂದ ಬಂದಿರುವ ಅನುಭವಿ ನಿರ್ದೇಶಕ ಪಿ.ಎಚ್ ವಿಶ್ವನಾಥ್, ಹಿರಿಯ ನಟ ಶ್ರೀನಾಥ್ ಇನ್ನೊಂದೆಡೆ ರಂಗಭೂಮಿ ಕಲಾವಿದರು ಮತ್ತೊಂದೆಡೆ ಚಿತ್ರರಂಗದಲ್ಲಿ ಹೊಸತನ ಹುಡುಕುತ್ತಿರುವ ಉದಯೋನ್ಮುಖ ಪ್ರತಿಭೆಗಳು ಇವೆಲ್ಲದ್ದರ ಸಮಾಗಮಕ್ಕೆ ಸುಳಿ ಕಾರಣವಾಗಿದೆ. ಸುಳಿ ಚಿತ್ರತಂಡದೊಡನೆ ನಡೆದ ಸಂದರ್ಶನ ರೂಪದ ಮಾತುಕತೆ ನಿಮ್ಮ ಮುಂದಿದೆ...

ಪ್ರ: ಸುಳಿ ನಿಮ್ಮ ಸಂಸ್ಥೆ ನಿರ್ಮಾಣದ ಮೊದಲ ಚಿತ್ರವೇ?
ಗೀತಾ ಹಾಗೂ ಶ್ರೀನಾಥ್: ಮಾನಸ ಸರೋವರ ಕಾಲದಿಂದ ಸಿನಿಮಾ ನಿರ್ಮಾಣ ಮಾಡುತ್ತಾ ಇದ್ದೀವಿ. ಉತ್ತಮ ಕಥೆ ಸಿಕ್ಕಾಗೆಲ್ಲ ಚಿತ್ರ ನಿರ್ಮಿಸಿದ್ದೇವೆ. ಐದಾರು ಸಿನಿಮಾ ಮಾಡಿರಬಹುದು. ಆದರೆ, ದಿಶಾ ಕಮ್ಯೂನಿಕೇಷನ್ ಮೂಲಕ ಇದು ಮೊಟ್ಟ ಮೊದಲ ಪ್ರಯತ್ನ.
ಪ್ರ: ಈ ಚಿತ್ರ ಒಪ್ಪಲು ಕಾರಣ, ಪಾತ್ರದ ಬಗ್ಗೆ ಹೇಳಿ?
ಶ್ರೀನಾಥ್: ಬುಡೇನ್ ಸಾಬ್ ಬಗ್ಗೆ ನನಗೆ ತಿಳಿದಾಗ ನಾನು ಅಮೆರಿಕದಲ್ಲಿದ್ದೆ. ಪಿಎಚ್ ವಿಶ್ವನಾಥ್ ಅವರು ಕಥೆ ಚಿಕ್ಕದಾಗಿ ಹೇಳಿದ ತಕ್ಷಣವೇ ಪಾತ್ರ ನನ್ನನ್ನು ಕಾಡಿತು. ವಿಶ್ವನಾಥ್ ಅವರದ್ದು ಒಂದೇ ಬೇಡಿಕೆ ಗಡ್ಡ ಬಿಡಬೇಕು ಎಂಬುದು. ಬೆಂಗಳೂರಿಗೆ ಬಂದಾಗ ಕ್ಲೀನ್ ಶೇವ್ ಮಾಡಿಕೊಂಡಿದ್ದೆ, ನಂತರ ಪಾತ್ರಕ್ಕೆ ತಕ್ಕ ವೇಷ ಭೂಷಣ, ನಡೆ ನುಡಿ, ಪರಿಸರ ಸಿಕ್ಕ ಮೇಲೆ ಪಾತ್ರ ನನ್ನನ್ನು ತನ್ನದಾಗಿಸಿಕೊಳ್ಳ ತೊಡಗಿತು.
ಪ್ರ: ಇತರೆ ಪಾತ್ರಗಳೊಡನೆ ಹೊಂದಾಣಿಕೆ ಹೇಗಿತ್ತು?
ಇಲ್ಲಿ ಕಥೆಗೆ ಪೂರಕವಾಗಿ ಪಾತ್ರಗಳು ಬಂದಿವೆ. ನನಗೆ ಮೂರು ಮುದ್ದಾದ ಮಕ್ಕಳು. ದೈನಂದಿನ ಬದುಕಿನಲ್ಲಿ ಮುಸ್ಲಿಂ ಕುಟುಂಬ ಬಾಳುವ ಬಗೆ, ಬುಡೇನ್ ಸಾಬ್ ಹಾಗೂ ಅವರ ಪರಿವಾರ, ಪರಿಸರ, ಊರಿನ ಕಥೆ ವಿಶಿಷ್ಟ ಅನುಭವ ನೀಡುತ್ತದೆ. ಮನುಷ್ಯರಷ್ಟೇ ಅಲ್ಲ, ಕತ್ತೆಗಳು ಕೂಡಾ ಕಥೆ ಹಾಗೂ ಪಾತ್ರಧಾರಿಗಳ ಜೊತೆ ಜೊತೆಗೆ ನಿಮಗೆ ಆಪ್ತವಾಗುತ್ತ ಹೋಗುತ್ತದೆ.
ಚಿತ್ರದ ಪ್ರಚಾರದ ಬಗ್ಗೆ ಶ್ರೀಮತಿ ಗೀತಾ ಶ್ರೀನಾಥ್
ಹಳೆ ಕಾಲದ ಇದ್ದ ಪ್ರಚಾರ ವ್ಯವಸ್ಥೆಗೂ ಈಗಿನ ಲಭ್ಯವಿರುವ ಅವಕಾಶಗಳಿಗೂ ವ್ಯತ್ಯಾಸಗಳಿವೆ. ಈಗೆಲ್ಲ ಫೇಸ್ ಬುಕ್, ಯೂಟ್ಯೂಬ್, ಟ್ವಿಟ್ಟರ್ ನಲ್ಲಿ ಸುಲಭವಾಗಿ ಚಿತ್ರದ ಬಗ್ಗೆ ಪ್ರಚಾರ ಮಾಡಬಹುದು. ಚಿತ್ರದ ಪ್ರತಿ ಹಂತದ ಬಗ್ಗೆ ಮಾಹಿತಿ ನೀಡುತ್ತಾ ಚಿತ್ರದ ಬಗ್ಗೆ ಕ್ರೇಜ್ ಹುಟ್ಟುಹಾಕಲು ಸಹಕಾರಿಯಾಗಿದೆ.
ಶ್ರೀನಾಥ್: ಅದು ನಿಜ, ನನ್ಗೆ ಫೇಸ್ಬುಕ್ ಎಲ್ಲಾ ಅಷ್ಟಾಗಿ ಒಗ್ಗಿಲ್ಲ, ಆದರೆ, ಯಂಗ್ ಸ್ಟರ್ ಗಳು ಮೇಸೆಜ್ ಮಾಡಿ ವಿಚಾರಿಸುತ್ತಿರುತ್ತಾರೆ. ನನ್ನ ಮನೆಯವರಿಗೆ ಆಶ್ಚರ್ಯ ಆಗುವಂತೆ ಅನೇಕ ಬಾರಿ ಮೆಸೆಂಜರ್ ನಲ್ಲಿ ಅಭಿಮಾನಿಗಳಿಗೆ ಸಂದೇಶ ಕಳಿಸುತ್ತಾ ಕುಳಿತ್ತಿರುತ್ತೀನಿ. ಇನ್ನಷ್ಟು ಪಾತ್ರಧಾರಿಗಳು, ನಿರ್ದೇಶಕರ ಅನುಭವ ಬಗ್ಗೆ ಮುಂದೆ ನಿರೀಕ್ಷಿಸಿ...
ಸುಳಿ-ಭಾವನೆ, ಬದುಕು- ಬವಣೆ, ಬೆಸುಗೆ :ಶ್ರೀನಾಥ್


Click it and Unblock the Notifications











