'ಜಾನಕಿ ಸಂಸಾರ' ಮುಗಿದ 5 ತಿಂಗಳಲ್ಲೇ 'ಶಾರದೆ' ಧಾರಾವಾಹಿಗೆ ಎಂಟ್ರಿ; ಏನಂತಾರೆ ಸೂರಜ್ ಹೊಳಲು?
ವಿಭಿನ್ನ ರೀತಿಯ ಧಾರಾವಾಹಿಗಳ ಮೂಲಕ ಕಿರುತೆರೆ ವೀಕ್ಷಕರ ಮನ ಸೆಳೆಯುತ್ತಿರುವ ಧಾರಾವಾಹಿಗಳ ಪೈಕಿ ಸ್ಟಾರ್ ಸುವರ್ಣ ವಾಹಿನಿಯೂ ಒಂದು. ಸಾಲು ಸಾಲು ಧಾರಾವಾಹಿಗಳ ಮೂಲಕ ಕಿರುತೆರೆ ವೀಕ್ಷಕರನ್ನು ರಂಜಿಸುತ್ತಿರುವ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಇದೀಗ ಹೊಸ ಧಾರಾವಾಹಿಯೊಂದು ಪ್ರಸಾರವಾಗುತ್ತಿದೆ.
ಪುರಾಣಿಕ್ ಪ್ರೊಡಕ್ಷನ್ಸ್ ನಡಿಯಲ್ಲಿ ಸುನೀಲ್ ಪುರಾಣಿಕ್ ಹಾಗೂ ಸಾಗರ್ ಪುರಾಣಿಕ್ ನಿರ್ಮಿಸುತ್ತಿರುವ ಈ ಧಾರಾವಾಹಿಯ ಹೆಸರು 'ಶಾರದೆ'. ಧರಣಿ ಜಿ ರಮೇಶ್ ನಿರ್ದೇಶಿಸುತ್ತಿರುವ ಈ ಧಾರಾವಾಹಿಯಲ್ಲಿ ನಾಯಕ ಸಿದ್ಧಾರ್ಥ್ ಆಗಿ ಅಭಿನಯಿಸುತ್ತಿದ್ದಾರೆ ಸೂರಜ್ ಹೊಳಲು. ಈ ಹಿಂದೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಜಾನಕಿ ಸಂಸಾರ' ಧಾರಾವಾಹಿಯಲ್ಲಿ ಸೂರಜ್ ಅವರು ನಾಯಕ ರಾಘವನಾಗಿ ಅಭಿನಯಿಸಿದ್ದರು.

"ಜಾನಕಿ ಸಂಸಾರ ಧಾರಾವಾಹಿಯಲ್ಲಿ ನಾನು ರಾಘವನಾಗಿ ನಟಿಸಿದ್ದೆ. ರಮೇಶ್ ಅರವಿಂದ್ ಅವರ ಪ್ರೊಡಕ್ಷನ್ ಹೌಸ್ ನಿಂದ ನಿರ್ಮಾಣವಾದ ಈ ಧಾರಾವಾಹಿಯಲ್ಲಿ ನಾನು ಪಕ್ಕಾ ಫ್ಯಾಮಿಲಿಮ್ಯಾನ್ ಆಗಿ ಕಾಣಿಸಿಕೊಂಡಿದ್ದೆ. ರಾಘವನ ಮಾತ್ರ ತುಂಬಾ ಮೆಚ್ಯೂರ್ಡ್ ಆಗಿದ್ದಂತಹ ಪಾತ್ರ. ನನ್ನ ವಯಸ್ಸಿಗಿಂತಲೂ ದೊಡ್ಡದಾಗಿರುವ ಪಾತ್ರವದು. ಜಾನಕಿ ಸಂಸಾರ ಧಾರಾವಾಹಿ ಮುಕ್ತಾಯಗೊಂಡು ಐದು ತಿಂಗಳುಗಳಾಗಿದೆ. ಐದು ತಿಂಗಳ ನಂತರ ಸಿದ್ಧಾರ್ಥ್ ಆಗಿ ಸ್ಟಾರ್ ಸುವರ್ಣ ವಾಹಿನಿಗೆ ಮರಳುತ್ತಿರುವುದು ಖುಷಿ ತಂದಿದೆ" ಎಂದು ಫಿಲ್ಮಿಬೀಟ್ ಕನ್ನಡ ಜೊತೆಗೆ ಮಾತಾನಾಡಿದ ಸೂರಜ್ ಹೊಳಲು ಹೇಳಿಕೊಂಡಿದ್ದಾರೆ.
"ಶಾರದೆ ಧಾರಾವಾಹಿಯಲ್ಲಿ ನಾನು ಸಿದ್ದಾರ್ಥ್ ಆಗಿ ನಟಿಸುತ್ತಿದ್ದೇನೆ. ಸಿದ್ಧಾರ್ಥ್ ತುಂಬಾ ಲವ್ಲಿಯಾಗಿರುವ ಹುಡುಗ. ಅಪ್ಪ ಅಮ್ಮ ಎಂದರೆ ತುಂಬಾ ಪ್ರೀತಿ ಹೊಂದಿರುವ ಸಿದ್ಧಾರ್ಥ್ಗೆ ಅತ್ತೆ ಎಂದರೂ ಇಷ್ಟ. ತುಂಬು ಕುಟುಂಬದಲ್ಲಿರುವ ನನಗೆ ಎಲ್ಲರೂ ಇಷ್ಟವೇ. ಇನ್ನು ನನಗೂ, ನಾಯಕಿ ಶಾರದಾಗೂ ಯಾವುದೋ ಒಂದು ಸಣ್ಣ ಮಿಸ್ ಅಂಡರ್ ಸ್ಟ್ಯಾಂಡಿಗ್ ಆಗಿದೆ. ಅದು ಮುಂದಿನ ದಿನಗಳಲ್ಲಿ ಏನೆಂದು ತಿಳಿಯಲಿದೆ. ಒಟ್ಟಿನಲ್ಲಿ ಕೇವಲ ಐದು ತಿಂಗಳ ಗ್ಯಾಪ್ನ ನಂತರ ಸಿದ್ಧಾರ್ಥ್ ಆಗಿ ಕಿರುತೆರೆಗೆ ಮರಳುತ್ತಿರುವುದು ಖುಷಿ ತಂದಿದೆ" ಎಂದು ಫಿಲ್ಮಿಬೀಟ್ ಕನ್ನಡಕ್ಕೆ ಸೂರಜ್ ಹೊಳಲು ತಿಳಿಸಿದ್ದಾರೆ.
ಇನ್ನು ಸೂರಜ್ ಹೊಳಲು ಅವರ ನಟನಾ ಪಯಣಕ್ಕೆ ಹತ್ತರ ಹರೆಯ ಎಂದರೆ ತಪ್ಪಾಗಲಾರದು. ಕಲರ್ಸ್ ಕನ್ನಡ ವಾಹಿನಿಯಲ್ಲಿ 2014ರಲ್ಲಿ ಪ್ರಸಾರ ಶುರು ಮಾಡಿದ 'ಕುಲವಧು' ಧಾರಾವಾಹಿಯಲ್ಲಿ ನಾಯಕನಾಗಿ ಅಭಿನಯಿಸುವ ಮೂಲಕ ಕಿರುತೆರೆಗೆ ಕಾಲಿಟ್ಟರು ಸೂರಜ್ ಹೊಳಲು. ಮೊದಲ ಧಾರಾವಾಹಿಯಲ್ಲಿ ನಾಯಕನಾಗಿ ನಟಿಸಿ ಕಿರುತೆರೆ ವೀಕ್ಷಕರ ಮನ ಸೆಳೆದಿರುವ ಸೂರಜ್ ಹೊಳಲು ನಂತರ ನಟಿಸಿದ್ದು 'ಯಾರೇ ನೀ ಮೋಹಿನಿ' ಧಾರಾವಾಹಿಯಲ್ಲಿ.

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ "ಯಾರೇ ನೀ ಮೋಹಿನಿ" ನಾಯಕ ಮುತ್ತುವಾಗಿ ನಟಿಸಿದ್ದ ಸೂರಜ್ ನಂತರ ಕಾಣಿಸಿಕೊಂಡಿದ್ದು ತೆಲುಗು ಕಿರುತೆರೆಯಲ್ಲಿ.
'ಚಿಟ್ಟಿತಲ್ಲಿ' ಎನ್ನುವ ತೆಲುಗು ಧಾರಾವಾಹಿಯಲ್ಲಿ ನಾಯಕನಾಗಿ ನಟಿಸಿ ಸೈ ಎನಿಸಿಕೊಂಡಿದ್ದ ಸೂರಜ್ ಹೊಳಲು 'ಪುಟ್ಟಕ್ಕನ ಮಕ್ಕಳು' ಧಾರಾವಾಹಿಯಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುವ ಕನ್ನಡ ಕಿರುತೆರೆಗೆ ಮರಳಿದರು.
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಗೃಹಪ್ರವೇಶ' ಧಾರಾವಾಹಿಯಲ್ಲಿ ನಾಯಕ ಮಿಥುನ್ ಪಾತ್ರದಲ್ಲಿ ಅಭಿನಯಿಸಿದ್ದರು ಸೂರಜ್ ಹೊಳಲು. ಪ್ರತಿ ಮಧ್ಯಾಹ್ನ ಪ್ರಸಾರವಾಗುತ್ತಿದ್ದ ಕೌಟುಂಬಿಕ ಕಥಾಹಂದರವನ್ನೊಳಗೊಂಡ ಈ ಧಾರಾವಾಹಿಯು ಕಿರುತೆರೆ ವೀಕ್ಷಕರ ಮನ ಸೆಳೆಯುವಲ್ಲಿ ಯಶಸ್ವಿಯಾಗಿತ್ತು. ನಂತರ 'ಜಾನಕಿ ಸಂಸಾರ' ಧಾರಾವಾಹಿಯ ರಾಘವನಾಗಿ ಕಿರುತೆರೆಯಲ್ಲಿ ಮಿಂಚಿದ ಸೂರಜ್ ಅವರು ಸಿದ್ಧಾರ್ಥ್ ಪಾತ್ರದಲ್ಲಿ ಕಿರುತೆರೆಗೆ ಮರಳಿದ್ದು ವೀಕ್ಷಕರಿಗೆ ಖುಷಿ ತಂದಿದೆ. ಐದು ತಿಂಗಳ ಬಳಿಕ ತಮ್ಮ ನೆಚ್ಚಿನ ನಟನನ್ನು ಕಂಡು ವೀಕ್ಷಕರು ಮೆಚ್ಚಿಕೊಂಡಿದ್ದಾರೆ.


Click it and Unblock the Notifications











