ಸುಖಾಂತ್ಯ ಕಂಡ 'ಜಾನಕಿ ಸಂಸಾರ': "ತಂಡವನ್ನೂ ಕೂಡಾ ಮಿಸ್ ಮಾಡಿಕೊಳ್ತೀನಿ" ಎಂದ ಸೂರಜ್ ಹೊಳಲು
"ತುಂಬು ಪ್ರೀತಿಯ ಸಾರ.. ಜಾನಕಿ ಸಂಸಾರ.." ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಜಾನಕಿ ಸಂಸಾರ' ಧಾರಾವಾಹಿಯು ಮುಕ್ತಾಯಗೊಂಡಿದೆ. ಇದೇ ವರ್ಷ ಮೇ ತಿಂಗಳಿನಲ್ಲಿ ಶುರುವಾದ ಈ ಧಾರಾವಾಹಿಯು ಕೇವಲ ನಾಲ್ಕು ತಿಂಗಳಿನಲ್ಲಿಯೇ ತನ್ನ ಪ್ರಸಾರವನ್ನು ನಿಲ್ಲಿಸಿದೆ. ಕೌಟುಂಬಿಕ ಕಥಾಹಂದರವುಳ್ಳ 'ಜಾನಕಿ ಸಂಸಾರ' ಧಾರಾವಾಹಿಯು ಸುಖಾಂತ್ಯ ಕಾಣುವ ಮೂಲಕ ತನ್ನ ಪಯಣವನ್ನು ಮುಗಿಸಿದೆ.
"ಎಲ್ಲಾ ಸುಂದರ ಕಥೆಗಳಿಗೆ ಒಂದು ಅಂತ್ಯವಿದೆ. ಆದರೆ ಎಲ್ಲಾ ಅಂತ್ಯವೂ ಒಂದು ಹೊಸ ಆರಂಭಕ್ಕೆ ಮುನ್ನುಡಿ. ಕೂಡು ಕುಟುಂಬದ ಸವಿಯನ್ನು ಉಣಬಡಿಸಿದ 'ಜಾನಕಿ ಸಂಸಾರ' ದ ಸುಂದರ ಪಯಣದಲ್ಲಿ ಇಷ್ಟು ಕಾಲ ಜೊತೆಗಿದ್ದ ತಮಗೆಲ್ಲರಿಗೂ ಧನ್ಯವಾದಗಳು" ಎಂದು ಸ್ಟಾರ್ ಸುವರ್ಣ ವಾಹಿನಿಯೂ ತನ್ನ ಇನ್ಸ್ಟಾಗ್ರಾಂ ಪೇಜ್ನಲ್ಲಿ ಹಂಚಿಕೊಂಡಿದೆ.

ಇನ್ನು 'ಜಾನಕಿ ಸಂಸಾರ' ಧಾರಾವಾಹಿಯಲ್ಲಿ ನಾಯಕ ರಾಘವ್ ಆಗಿ ಅಭಿನಯಿಸುತ್ತಿರುವ ಸೂರಜ್ ಹೊಳಲು ಅವರು ಈ ಕುರಿತು ಫಿಲ್ಮಿಬೀಟ್ ಕನ್ನಡ ಜೊತೆಗೆ ಮಾತನಾಡಿದ್ದಾರೆ. "ಜಾನಕಿ ಸಂಸಾರ ಧಾರಾವಾಹಿಯಲ್ಲಿ ನಾನು ಪಕ್ಕಾ ಫ್ಯಾಮಿಲಿಮ್ಯಾನ್ ಆಗಿ ಕಾಣಿಸಿಕೊಂಡಿದ್ದೆ. ರಾಘವನ ಮಾತ್ರ ತುಂಬಾ ಮೆಚ್ಯೂರ್ಡ್ ಆಗಿರುವಂತಹ ಪಾತ್ರ. ಸತ್ಯ ಹೇಳಬೇಕು ಎಂದರೆ ನನ್ನ ವಯಸ್ಸಿಗಿಂತಲೂ ದೊಡ್ಡದಾಗಿರುವ ಪಾತ್ರವದು. ಇದೀಗ ಅದು ಮುಕ್ತಾಯಗೊಂಡಿದ್ದು ಬೇಸರವಾಗಿದೆ" ಎಂದು ಫಿಲ್ಮಿಬೀಟ್ ಕನ್ನಡ ಸಂದರ್ಶನದಲ್ಲಿ ಹೇಳಿದ್ದಾರೆ ಸೂರಜ್ ಹೊಳಲು.
"ಜಾನಕಿ ಸಂಸಾರ ಧಾರಾವಾಹಿಗಿಂತಲೂ ಮೊದಲು ನಾನು ಗೃಹಪ್ರವೇಶ ಧಾರಾವಾಹಿಯಲ್ಲಿ ಮಿಥುನ್ ಆಗಿ ನಟಿಸುತ್ತಿದ್ದೆ. ಗೃಹಪ್ರವೇಶ ಮುಕ್ತಾಯಗೊಂಡ ನಾಲ್ಕು ತಿಂಗಳಿನಲ್ಲಿ ರಾಘವ ಪಾತ್ರ ದೊರಕಿತು. ಒಂದು ಒಳ್ಳೆಯ ಪಾತ್ರವಾದ ಕಾರಣ ನಾನು ಹಿಂದೆ ಮುಂದೆ ಆಲೋಚಿಸದೆ ಒಪ್ಪಿಕೊಂಡು ಬಿಟ್ಟೆ" ಎಂದು ಹೇಳುತ್ತಾರೆ ಸೂರಜ್ ಹೊಳಲು.

"ಜಾನಕಿ ಸಂಸಾರ ಧಾರಾವಾಹಿಯ ತಂಡವೂ ತುಂಬಾ ಕಂಫರ್ಟೇಬಲ್ ಆಗಿತ್ತು. ನಾನಂತೂ ಈ ಟೀಂ ಅನ್ನು ಖಂಡಿತಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಯಾಕೆಂದರೆ ನನ್ನ ಪಾಲಿಗೆ ಇದು ತುಂಬಾ ಬೆಸ್ಟ್ ಟೀಂ ಆಗಿತ್ತು. ನಾವೆಲ್ಲರೂ ತುಂಬಾ ಫ್ರೆಂಡ್ಲಿಯಾಗಿದ್ದೆವು" ಎಂದು ಸೂರಜ್ ಹೊನಲು ಹೇಳುತ್ತಾರೆ.
ಅಂದ ಹಾಗೇ 'ಜಾನಕಿ ಸಂಸಾರ' ಧಾರಾವಾಹಿಯು ಹಿಂದಿಯ 'ಘರ್ ಘರ್ ಕಿ ಕಹಾನಿ'ಯ ರಿಮೇಕ್ ಹೌದು. ಧಾರಾವಾಹಿಯ ಕಥೆ ಹಾಗೂ ರಾಘವ್ ಪಾತ್ರದ ಬಗ್ಗೆ ಕೇಳಿದ ಸೂರಜ್ ಹೊಳಲು ಅಸ್ತು ಎಂದು ಒಪ್ಪಿಕೊಂಡರು. ಇದರ ಜೊತೆಗೆ ರಾಘವ್ ಅವರು ಈ ಧಾರಾವಾಹಿಯನ್ನು ಒಪ್ಪಿಕೊಳ್ಳಲು ಪ್ರೊಡಕ್ಷನ್ ಹೌಸ್ ಕಾರಣ. ಹೌದು, 'ಜಾನಕಿ ಸಂಸಾರ' ಧಾರಾವಾಹಿಯು ರಮೇಶ್ ಅರವಿಂದ್ ಅವರ ಪ್ರೊಡಕ್ಷನ್ ಹೌಸ್ ನಿಂದ ನಿರ್ಮಾಣವಾಗುತ್ತಿದ್ದು ಸೂರಜ್ ಹೊಳಲು ಈ ಧಾರಾವಾಹಿಯನ್ನು ಒಪ್ಪಿಕೊಳ್ಳಲು ಕಾರಣ.
ಅಂದ ಹಾಗೇ ಬೆರಳೆಣಿಕೆಯಷ್ಟು ಧಾರಾವಾಹಿಗಳಲ್ಲಿ ನಟಸಿರುವ ಸೂರಜ್ ಹೊಳಲು ಮನೋಜ್ಞ ನಟನೆಯ ಮೂಲಕ ಕಿರುತೆರೆಯಲ್ಲಿ ಮೋಡಿ ಮಾಡಿದ ಹುಡುಗ. 'ಕುಲವಧು' ಧಾರಾವಾಹಿಯ ಗೌರವ್ ಆಗಿ ಕಿರುತೆರೆಗೆ ಕಾಲಿಟ್ಟ ಸೂರಜ್ ಮುಂದೆ 'ಯಾರೇ ನೀ ಮೋಹಿನಿ' ಧಾರಾವಾಹಿಯ ಮುತ್ತು ಮಾವನಾಗಿ ಕಾಣಿಸಿಕೊಂಡರು. ನಂತರ ತೆಲುಗು ಕಿರುತೆರೆಗೆ ಕಾಲಿಟ್ಟ ಸೂರಜ್ 'ಚಿಟ್ಟಿತಲ್ಲಿ' ಧಾರಾವಾಹಿಯಲ್ಲಿ ನಾಯಕನಾಗಿ ನಟಿಸುವ ಮೂಲಕ ಪರಭಾಷೆಯ ಕಿರುತೆರೆಯಲ್ಲಿ ಮಿಂಚಿದರು.
ಮುಂದೆ 'ಪುಟ್ಟಕ್ಕನ ಮಕ್ಕಳು' ಧಾರಾವಾಹಿಯಲ್ಲಿ ಅತಿಥಿ ಪಾತ್ರದ ಮೂಲಕ ವೀಕ್ಷಕರ ಮನ ಸೆಳೆದಿದ್ದ ಸೂರಜ್ ಹೊಳಲು 'ಗೃಹಪ್ರವೇಶ' ಧಾರಾವಾಹಿಯಲ್ಲಿ ನಾಯಕ ಮಿಥುನ್ ಆಗಿ ಬಣ್ಣ ಹಚ್ಚಿದರು. ನಂತರ 'ಜಾನಕಿ ಸಂಸಾರ' ಧಾರಾವಾಹಿಯ ರಾಘವ್ ಆಗಿಯೂ ಕಿರುತೆರೆಯಲ್ಲಿ ಕಮಾಲ್ ಮಾಡಿರುವ ಸೂರಜ್ ಹೊಳಲು ಮುಂದೊಂದು ದಿನ ಸಿನಿಮಾದಲ್ಲಿ ಕಾಣಿಸಿಕೊಂಡರೆ ಆಶ್ಚರ್ಯವಿಲ್ಲ.


Click it and Unblock the Notifications











