ಕವಿರತ್ನ ನಾಗೇಂದ್ರ ಪ್ರಸಾದ್ ಬರೆದ ಹಾಡುಗಳಲ್ಲಿ ಅಪ್ಪುಗೆ ತುಂಬಾ ಇಷ್ಟವಾಗಿದ್ದ ಹಾಡು ಯಾವುದು ? ಬರೆದ ಪತ್ರದಲ್ಲೇನಿತ್ತು ?
ಚಿತ್ರರಂಗದಲ್ಲಿ ಸ್ಟಾರ್ ಗಳಾಗಿ ಹಲವರು ಮಿಂಚಬಹುದು. ಆದರೆ ಪ್ರೇಕ್ಷಕರ ಹೃದಯದಲ್ಲಿ ಶಾಶ್ವತವಾದ ಸ್ಥಾನ ಪಡೆಯುವರು ಕೆಲವರು ಮಾತ್ರ. ಆ ಪೈಕಿ ಒಬ್ಬರು ಪುನೀತ್ ರಾಜ್ ಕುಮಾರ್. ಆಡುವ ವಯಸ್ಸಿನಲ್ಲಿಯೇ ರಾಷ್ಟ್ರ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡ ಅಪ್ಪು ಜೈತ್ರಯಾತ್ರೆ ಅನನ್ಯ.
ಅವರ ಕಣ್ಣಿನ ಹೊಳಪು .. ಮಾತುಗಳಲ್ಲಿದ್ದ ವಿನಯ .. ನಗು ಹಿಂದೆ ಇದ್ದ ಸರಳ ವ್ಯಕ್ತಿತ್ವ.. ಕನ್ನಡದ ಕಲಾ ರಸಿಕರು ಯಾವತ್ತೂ ಮರೆಯಲಾರರು. ಪವರ್ ಸ್ಟಾರ್ ಎಂಬ ಬಿರುದಿಗೆ ಅಕ್ಷರಶಃ ನ್ಯಾಯ ಒದಗಿಸಿದವರು ಅಪ್ಪು.

ಇಂದು ಪುನೀತ್ ರಾಜ್ ಕುಮಾರ್ ನಮ್ಮ ನಡುವೆ ದೈಹಿಕವಾಗಿ ಇಲ್ಲದಿರಬಹುದು.ಆದರೆ ಅವರ ನೆನಪು ಸದಾ ಅಮರ. ರಾಜರತ್ನನ ಹುಟ್ಟುಹಬ್ಬದ ಪ್ರಯುಕ್ತ ಇಂದು(ಮಾರ್ಚ್ 17)ಕನ್ನಡದ ಕವಿರತ್ನ ಡಾ.ವಿ.ನಾಗೇಂದ್ರ ಪ್ರಸಾದ್ ತಮ್ಮ ನೆನಪಿನ ಬುತ್ತಿಯನ್ನು ತೆರೆದು ನಿಮ್ಮ ''ಫಿಲ್ಮಿಬೀಟ್ ಕನ್ನಡ''ದ ಮೂಲಕ ಕೆಲ ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ಹಾಗಿದ್ದರೆ ಸದಾ ಕಾಡುವ ಚೆಂದದ ಹಾಡುಗಳನ್ನೇ ಕನ್ನಡಿಗರ ಮಡಿಲಿಗೆ ಹಾಕುವ ಡಾ. ವಿ.ನಾಗೇಂದ್ರ ಪ್ರಸಾದ್ ಕಂಡಂತೆ ಹೇಗಿದ್ದರು ಅಪ್ಪು..? ಡಾ.ವಿ.ನಾಗೇಂದ್ರ ಪ್ರಸಾದ್ ಅವರಿಗೆ ಪುನೀತ್ ರಾಜ್ ಕುಮಾರ್ ಉಡುಗೊರೆ ಕಳಿಸಿದ್ದೇಕೆ..? ನಿರ್ದೇಶಕರಾಗಿ, ನಟನಾಗಿಯೂ ಗುರುತಿಸಿಕೊಂಡಿರುವ ಡಾ.ನಾಗೇಂದ್ರ ಪ್ರಸಾದ್ ಅವರ ಯಾವ ಹಾಡನ್ನು ಅಪ್ಪು ಇಷ್ಟ ಪಟ್ಟಿದ್ದರು..? ಎಂದು ತಿಳಿಯಲು ಮುಂದೆ ಓದಿ.
ನಿಮಗೆ ಅಪ್ಪು ಅವರು ಉಡುಗೊರೆ ನೀಡಿದ್ದೇಕೆ..?
''ಶಿವಣ್ಣ ಅವರ ''ಟಗರು'' ಚಿತ್ರದ ''ಟಗರು ಬಂತು ಟಗರು'' ಹಾಡನ್ನು ಅತೀವವಾಗಿ ಇಷ್ಟ ಪಟ್ಟಿದ್ದರು ಅಪ್ಪು. ನನಗೆ ತಿಳಿದಿರುವಂತೆ ಅಪ್ಪು ಅವರ ಪಿ.ಆರ್.ಕೆ ಸಂಸ್ಥೆಯಲ್ಲಿ ತುಂಬಾನೇ ಸದ್ದು ಮಾಡಿದ ಮೊದಲ ಹಾಡು ಅದು''.
''ಆ ಹಾಡನ್ನು ಮೆಚ್ಚಿ ನನ್ನ ಮನೆಗೆ ಅವರೊಂದು ಬ್ಲೂಟೂತ್ ಸ್ಪೀಕರ್ ಕಳಿಸಿದ್ದರು. ಕೆಂಪು ಬಣ್ಣದ ಬ್ಲೂಟೂತ್ ಸ್ಪೀಕರ್ ಅದು. ನನಗಾಗ ಅಚ್ಚರಿ. ತೆರೆದು ನೋಡಿದರೆ ಅದರಲ್ಲಿ ಪತ್ರ ಕೂಡ ಇತ್ತು. ಥ್ಯಾಂಕ್ಯೂ ಎಂದು ಆ ಪತ್ರದಲ್ಲಿ ಬರೆದಿದ್ದರು ಅಪ್ಪು.''

''ಆ ನಂತರ ನಾನು ಅವರಿಗೆ ಫೋನ್ ಮಾಡಿದ್ದೇ. ಅವರು ಕೂಡಲೇ ರಿಸೀವ್ ಮಾಡಿ ಮಾತನಾಡಿದರು ಕೂಡ. ಹಾಡಿನ ಬಗ್ಗೆ ತುಂಬಾನೇ ಮೆಚ್ಚುಗೆಯ ಮಾತುಗಳನ್ನಾಡಿದರು. ಹಾಡು ತುಂಬಾ ಹಿಟ್ ಆಗಿದೆ, ತುಂಬಾ ಚೆನ್ನಾಗಿದೆ ಎಂದು ಹೇಳಿದರು''.
''ಅಷ್ಟೇ ಅಲ್ಲ ನಾನು ಕಾರಲಿ ಹೋಗುವಾಗ ಈ ಹಾಡನ್ನೇ ಸದ್ಯ ಯಾವಾಗಲೂ ಕೇಳ್ತಿರ್ತಿನಿ ಎಂದು ಹೇಳಿದ್ದರು. ಹೆಮ್ಮೆಯ ಮಾತುಗಳನ್ನಾಡಿದ್ದರು. ಅವರ ಜೊತೆ ನನಗೆ ಹಲವಾರು ನೆನಪುಗಳಿವೆ. ಈ ಕ್ಷಣಕ್ಕೆ ನನಗೆ ನೆನಪಾದ ನೆನಪು ಇದು'' ಎಂದು ಡಾ.ವಿ.ನಾಗೇಂದ್ರ ಪ್ರಸಾದ್ ಹೇಳಿದ್ದಾರೆ.
ಪುನೀತ್ ರಾಜ್ಕುಮಾರ್ ಅವರಿಗೆ ತುಂಬಾ ಇಷ್ಟವಾದ ನಿಮ್ಮ ಹಾಡು ಯಾವುದು ?
''ಅವರಿಗೆ ನಾನು ಹಲವು ಹಾಡು ಬರೆದಿದ್ದೇನೆ. ಆ ಹಾಡುಗಳಲ್ಲಿ ಅವರ ನೆಚ್ಚಿನ ಹಾಡು ''ಹುಡುಗರು'' ಚಿತ್ರದ ''ಏನ್ ಚೆಂದಾನೋ'' ಹಾಡಾಗಿತ್ತು. ಇನ್ನೂ ಅದೇ ಚಿತ್ರದ ''ಶಂಭೋ ಶಿವ ಶಂಭೋ'' ಹಾಡು ಕೂಡ ಅವರ ಇಷ್ಟವಾದ ಹಾಡು. ಆ ಚಿತ್ರ ರಿಮೇಕ್ ಆದರೂ ಕೂಡ ''ಶಂಭೋ ಶಿವ ಶಂಭೋ'' ಹಾಡಿನಲ್ಲಿ ಚರಣ ಬೇರೆಯದ್ದೇ ರೀತಿ ಬರೆಯಲಾಗಿತ್ತು. ತಮಿಳಿನಲ್ಲಿ ನಾನು ಬರೆದಂತೆ ಬರೆದಿರಲಿಲ್ಲ. ಹೀಗಾಗಿ ಅವರಿಗೆ ಅದು ತುಂಬಾ ಇಷ್ಟ ಆಗಿತ್ತು''.
''ಎಲ್ಲಕ್ಕಿಂತ ಅವರಿಗೆ ಇಷ್ಟವಾಗಿದ್ದ ನನ್ನ ಹಾಡು ಅಂದರೆ ''ವಂಶಿ'' ಚಿತ್ರದ ''ಭುವನಂ ಗಗನಂ'' ಹಾಡು. ಇನ್ನು ನನಗೆ ಅವರ ಚಿತ್ರಗಳಿಗೆ ನಾನು ಬರೆದ ಹಾಡುಗಳಲ್ಲಿ ಯಾವ ಹಾಡು ಇಷ್ಟ ಅಂದರೆ ''ಭುವನಂ ಗಗನಂ'' ನನ್ನ ಉತ್ತರ''.
''ಹಾಗೇ ನೋಡಿದರೆ ''ರಾಜ್'' ಚಿತ್ರದ ಹಾಡುಗಳಿರಲಿ.. ''ಆಕಾಶ್''.. ''ರಾಮ್''.. ಹೀಗೆ ಎಲ್ಲ ಚಿತ್ರದ ಹಾಡುಗಳು ಇಷ್ಟ. ಆದರೂ ಕೂಡ ''ಭುವನಂ ಗಗನಂ'' ಹಾಡು ಸ್ವಲ್ಪ ಜಾಸ್ತಿ ಇಷ್ಟವಾದ ಹಾಡು'' ಎಂದು ಡಾ.ವಿ.ನಾಗೇಂದ್ರ ಪ್ರಸಾದ್ ನಿಮ್ಮ ''ಫಿಲ್ಮಿಬೀಟ್ ಕನ್ನಡ''ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.


Click it and Unblock the Notifications











