Don't Miss!
- Lifestyle ಗಂಡು ಎಂದು ಸಾಕಿದ್ದ ನೀರು ಕುದುರೆ 7 ವರ್ಷದ ಬಳಿಕ ಹೆಣ್ಣಾಗಿತ್ತು..! ಝೂನಲ್ಲಿ ಅಚ್ಚರಿ..!
- Technology HMD ಪಲ್ಸ್ ಸರಣಿ ಅಡಿಯಲ್ಲಿ 3 ಹೊಸ ಸ್ಮಾರ್ಟ್ಫೋನ್ ಲಾಂಚ್! ಫೀಚರ್ಸ್ ಏನಿವೆ?
- News Tamannaah Bhatia: ಮಿಲ್ಕಿ ಬ್ಯೂಟಿ ತಮನ್ನಾಗೆ ಮುಂಬೈ ಸೈಬರ್ ಪೊಲೀಸರಿಂದ ಸಮನ್ಸ್.!-ಕಾರಣ ಏನು?
- Automobiles ವಿಮಾನದಂತಹ ಸೌಲಭ್ಯ ಹೊಂದಿರುವ ವಂದೇ ಭಾರತ್ ಸರಣಿ ರೈಲುಗಳು ಶೀಘ್ರ ಬರಲಿವೆ.. ಆರಾಮದಾಯಕ ಪ್ರಯಾಣ!
- Finance April 25 Gold Rate: ಇಂದಿನ ಚಿನ್ನದ ಬೆಲೆ, ಬೆಂಗಳೂರಿನಲ್ಲಿ ದರ ಎಷ್ಟಿದೆ ತಿಳಿಯಿರಿ
- Sports 2009ರ ಐಪಿಎಲ್ ಫೈನಲ್ನಲ್ಲಿ ಆರ್ಸಿಬಿ ಸೋಲಲು ಕಾರಣ ತಿಳಿಸಿದ ಅನಿಲ್ ಕುಂಬ್ಳೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮಲ್ಟಿಫ್ಲೆಕ್ಸ್ಗಳಿಗೆ ಬೆಣ್ಣೆ, ಚಿತ್ರಮಂದಿರಗಳಿಗೆ ಸುಣ್ಣ: ಚಿತ್ರಮಂದಿರ ಮಹಾಸಭಾ ಅಧ್ಯಕ್ಷ
ಸಿನಿಮಾ ನಿರ್ಮಾಪಕರು ಮತ್ತು ಚಿತ್ರಮಂದಿರಗಳ ನಡುವೆ ಭಿನ್ನಾಭಿಪ್ರಾಯ ತಲೆದೂರಿದೆ. ಸಿನಿಮಾದ ಲಾಭ ಹಂಚಿಕೆ ವಿಚಾರವಾಗಿ ಹೊಸ ಸೂತ್ರವನ್ನು ಚಿತ್ರಮಂದಿರ ಮಹಾಸಭಾವು ನಿರ್ಮಾಪಕರ ಸಂಘದ ಮುಂದಿಟ್ಟಿದ್ದು, ಇದಕ್ಕೆ ಕೆಲವು ನಿರ್ಮಾಪಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ದೊಡ್ಡ ಬಜೆಟ್ ಸಿನಿಮಾಗಳ ನಿರ್ಮಾಪಕರು ನಿನ್ನೆ ಸಭೆ ನಡೆಸಿದ್ದು, ಚಿತ್ರಮಂದಿರ ಮಹಾಸಭಾದ ಬೇಡಿಕೆಯ ಬಗ್ಗೆ ಚರ್ಚಿಸಿದ್ದಾರೆ. ಸಭೆಯಲ್ಲಿ ಭಾಗವಹಿಸಿದ್ದ ನಿರ್ಮಾಪಕ ಕಾರ್ತಿಕ್ ಗೌಡ, 'ಮಹಾಸಭಾದ ಬೇಡಿಕೆಗಳನ್ನು ಒಪ್ಪುವುದು ಕಷ್ಟ, ದೊಡ್ಡ ಬಜೆಟ್ನ ಸಿನಿಮಾಗಳು ಒಟಿಟಿಗೆ ಹೋಗಲಿವೆ' ಎಂದು ಇಂದು (ಜನವರಿ 07) ಟ್ವೀಟ್ ಮಾಡಿದ್ದು, ನಿರ್ಮಾಪಕ-ಚಿತ್ರಮಂದಿರಗಳ ನಡುವಿನ ಭಿನ್ನಾಭಿಪ್ರಾಯ ಇನ್ನೂ ಹೆಚ್ಚಾಗುವಂತೆ ಮಾಡಿದೆ.
ಲಾಭ ಹಂಚಿಕೆ ಸೂತ್ರದ ಔಚಿತ್ಯ, ಹಳೆಯ ಮಾದರಿಯಲ್ಲಿದ್ದ ತೊಡಕುಗಳು, ಚಿತ್ರಮಂದಿರಗಳ ಭವಿಷ್ಯ, ನಿರ್ಮಾಪಕರ ಅಸಹಕಾರ, ವಿಷಯಗಳ ಬಗ್ಗೆ ಚಿತ್ರಮಂದಿರ ಮಹಾಸಭಾದ ಅಧ್ಯಕ್ಷರಾದ ಓದುಗೌಡರ್ 'ಫಿಲ್ಮೀಬೀಟ್ ಕನ್ನಡ' ದ ಜೊತೆ ಮಾತನಾಡಿದ್ದಾರೆ.
ಲಾಭ ಹಂಚಿಕೆ ಹೊಸ ಸೂತ್ರದ ಔಚಿತ್ಯ ಏನಿತ್ತು?
-ಹಳೆಯ ಮಾದರಿಯಲ್ಲಿ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳಿಗೆ ವಿಪರೀತ ನಷ್ಟವಾಗುತ್ತಿದ್ದ ಜೊತೆಗೆ ಚಿತ್ರಮಂದಿರ ಮಾಲೀಕರು ತುಳಿತಕ್ಕೆ ಒಳಗಾಗುತ್ತಿದ್ದರು. ತಮ್ಮ ಸಿನಿಮಾಕ್ಕಾಗಿ ಲಕ್ಷಗಟ್ಟಲೆ 'ಮಿನಿಮಮ್ ಗ್ಯಾರೆಂಟಿ' ಹಣ ಅಥವಾ 'ನಾನ್ ರಿಫಂಡೇಬಲ್ ಅಡ್ವಾನ್' ಪಡೆಯುತ್ತಿದ್ದ ನಿರ್ಮಾಪಕರು ತಮ್ಮ ಸಿನಿಮಾಗಳನ್ನು 'ಸೇಫ್' ಮಾಡಿಕೊಳ್ಳುತ್ತಿದ್ದರು. ಆದರೆ ಹಣ ಕೊಟ್ಟು, ಕಲೆಕ್ಷನ್ ಸಹ ಆಗದೆ ಚಿತ್ರಮಂದಿರ ಮಾಲೀಕರು ತೀವ್ರ ನಷ್ಟ ಅಥವಾ ಅತ್ಯಂತ ಕಡಿಮೆ ಲಾಭ ಹೊಂದುತ್ತಿದ್ದರು. ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳ ಉಳಿವಿಗೆ ಹಾಗೂ ಚಿತ್ರಮಂದಿರಗಳ ಮಾಲೀಕರ ಮೇಲೆ ನಿರ್ಮಾಪಕರ ಅಥವಾ ವಿತರಕರ ದಬ್ಬಾಳಿಕೆ ಕೊನೆಗೊಳಿಸಲು ಹೊಸ ಲಾಭ ಹಂಚಿಕೆ ಸೂತ್ರ ಮುಂದಿಟ್ಟಿದ್ದೇವೆ.
ಲಾಭ ಹಂಚಿಕೆ ಹೊಸ ಸೂತ್ರ ಹೇಗಿದೆ?
-ಮಲ್ಟಿಫ್ಲೆಕ್ಸ್ ಮಾದರಿಯಲ್ಲಿ 50:50, 40:60, 30:70 ಅನುಪಾತದಲ್ಲಿ ಲಾಭ ಹಂಚಿಕೆಗೆ ಬೇಡಿಕೆ ಇಟ್ಟಿದ್ದೇವೆ. ಶೇಕಡಾವಾರು ಪ್ರಮಾಣದ ಬದಲಾವಣೆ ಬಗ್ಗೆ ಮಾತುಕತೆಗೆ ನಾವು ಸಿದ್ಧರಿದ್ದೇವೆ. ಕೇರಳ, ತಮಿಳುನಾಡು, ಆಂಧ್ರ, ತೆಲಂಗಾಣ ರಾಜ್ಯಗಳಲ್ಲಿ ಶೇಕಡಾವಾರು ಮಾದರಿಯಲ್ಲಿಯೇ ಲಾಭ ಹಂಚಿಕೆ ಆಗುತ್ತಿದೆ. ಮಲ್ಟಿಫ್ಲೆಕ್ಸ್ ಗಳ ಮುಂದೆ 'ಜೀ ಹುಜೂರ್' ಎನ್ನುವ ನಿರ್ಮಾಪಕರು, ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳ ವಿಷಯದಲ್ಲಿ ಭಿನ್ನವಾಗಿ ವರ್ತಿಸುತ್ತಾರೆ. ಮಲ್ಟಿಫ್ಲೆಕ್ಸ್ ಕಣ್ಣಿಗೆ ಬೆಣ್ಣೆ, ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳ ಕಣ್ಣಿಗೆ ಸುಣ್ಣ ಎಂಬತಾಗಿದೆ ಪರಿಸ್ಥಿತಿ.
ಚಿತ್ರಮಂದಿರ ಮಹಾಸಭಾದ ಬೇಡಿಕೆಯನ್ನು ಒಪ್ಪಲು ಸಾಧ್ಯವಿಲ್ಲ ಎಂದಿದ್ದಾರಲ್ಲ ಕೆಲವು ನಿರ್ಮಾಪಕರು?
-ನಾವು ನಮ್ಮ ಬೇಡಿಕೆಯನ್ನು ನಿರ್ಮಾಪಕರ ಸಂಘದ ಮುಂದೆ ಇಟ್ಟಿದ್ದೇವೆ. ಸಂಘದ ಪ್ರಮುಖರಾದ ಕೆ.ಮಂಜು ಹಾಗೂ ಇನ್ನಿತರರು ಹಾಜರಿದ್ದ ಸಭೆಯಲ್ಲಿ ಮಾತುಕತೆ ನಡೆಸಲಾಗಿದೆ. ನಮ್ಮ ಬೇಡಿಕೆ ಅವರಿಗೆ ಸಮಂಜಸ ಎನಿಸಿದೆ. ಆದರೆ ಶೇಕಡಾವಾರು ಹಂಚಿಕೆ ವಿಷಯದಲ್ಲಿ ತುಸು ಬದಲಾವಣೆ ಬೇಕಿದೆ. 'ಪರೀಷ್ಕರಿಸಿದ ಮನವಿ ಸಲ್ಲಿಸಿ, ಮತ್ತೆ ಮಾತುಕತೆ ನಡೆಸೋಣ' ಎಂದಿದ್ದಾರೆ. ಪ್ರತಿಯೊಬ್ಬ ನಿರ್ಮಾಪಕರ ಬಳಿಗೂ ಹೋಗಿ ಮನವಿ ಮಾಡಲು, ಒತ್ತಾಯ ಮಾಡಲು ಆಗದು, ನಮ್ಮ ಮಾತು-ಕತೆ ಏನಿದ್ದರೂ ನಿರ್ಮಾಪಕ ಸಂಘದೊಂದಿಗೆ.
ಬಿಗ್ಬಜೆಟ್ ಸಿನಿಮಾಗಳನ್ನು ಒಟಿಟಿಯಲ್ಲಿ ಬಿಡುಗಡೆ ಮಾಡುತ್ತೇವೆ ಎಂದಿದ್ದಾರಲ್ಲ ಕೆಲ ನಿರ್ಮಾಪಕರು?
-ಅದು ಅವರ ಆಯ್ಕೆ. ಅವರ ಸಿನಿಮಾವನ್ನು ಯಾವ ವೇದಿಕೆಯಲ್ಲಾದರೂ ಪ್ರದರ್ಶಿಸುವ ಹಕ್ಕು ನಿರ್ಮಾಪಕರಾದ ಅವರಿಗೆ ಇದ್ದೇ ಇದೆ. ಇದಕ್ಕೆ ನಮ್ಮ ಆಕ್ಷೇಪಣೆ ಇಲ್ಲ. ಹಾಗೆಯೇ ಯಾರ ಸಿನಿಮಾವನ್ನು ಬೇಕಾದರೂ ಪ್ರದರ್ಶಿಸುವ ಅಥವಾ ಪ್ರದರ್ಶಿಸದೇ ಇರುವ ಅಧಿಕಾರ ನಮಗೂ ಇದೆ. ನಮ್ಮ ಒತ್ತಾಯ ಇಷ್ಟೇ; ಲಾಭವಾಗಲಿ-ನಷ್ಟವಾಗಲಿ ಸಮಾನ ಪಾಲಿರಲಿ ಎಂಬುದಷ್ಟೆ.