Don't Miss!
- News Karnataka Dam Water Level: ಏಪ್ರಿಲ್ 20ರಂದು ರಾಜ್ಯದ ಪ್ರಮುಖ ಜಲಾಶಯಗಳ ನೀರಿನ ಮಟ್ಟ, ವಿವರ ಇಲ್ಲಿದೆ
- Automobiles ಪೆಟ್ರೋಲ್ಗೆ ಹೆಚ್ಚು ಹಣ ಖರ್ಚು ಮಾಡುತ್ತಿದ್ದೀರಾ?.. ಇಲ್ಲಿವೆ ಉತ್ತಮ ಎಲೆಕ್ಟ್ರಿಕ್ ಸ್ಕೂಟರ್ಗಳು, ಜಾಸ್ತಿ ಓಡ
- Finance Bengaluru Traffic Police: ಬೆಂಗಳೂರಿನ ಈ ರಸ್ತೆ ಸಂಚಾರ ಮಾರ್ಗ ಬದಲಾವಣೆ, ವಿವರ
- Technology Samsung: ಭಾರತದಲ್ಲಿ ಹೊಸ ವೇರಿಯಂಟ್ನಲ್ಲಿ ಸ್ಯಾಮ್ಸಂಗ್ ಗ್ಯಾಲಕ್ಸಿ F15 5G! ಬೆಲೆ ಎಷ್ಟು?
- Sports RCB: 'ಗೋ ಗ್ರೀನ್' ಭಾಗವಾಗಿ 3 ಕೆರೆಗಳ ಅಭಿವೃದ್ಧಿಪಡಿಸಿದ ಆರ್ಸಿಬಿ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಆಸೆಗಳಿದ್ದರೆ ತಾನೆ ಈ ಸಮಯದಲ್ಲಿ ಕಷ್ಟ ಎನಿಸೋದು?: ಬಿರಾದಾರ್ ಜೀವನ ಪಾಠ
ಹಿರಿಯ ನಟ ವೈಜನಾಥ್ ಬಿರಾದಾರ್ 68ನೇ ವಯಸ್ಸಿಗೆ ಕಾಲಿರಿಸಿದ್ದಾರೆ. ಸಿನಿಮಾಗಳಲ್ಲಿ ಸಣ್ಣ ಪುಟ್ಟ ಪಾತ್ರಗಳಲ್ಲಿ ಬಂದು ನಕ್ಕು ನಗಿಸುವ ಬಿರಾದಾರ್, ಎಂತಹ ಸವಾಲಿನ ಪಾತ್ರವನ್ನೂ ಬೆರಗಾಗಿಸುವಂತೆ ನಿಭಾಯಿಸುತ್ತಾರೆ ಎಂಬುದನ್ನು ತೋರಿಸಿದ್ದು ಗಿರೀಶ್ ಕಾಸರವಳ್ಳಿ ನಿರ್ದೇಶನದ 'ಕನಸೆಂಬೋ ಕುದುರೆಯನೇರಿ' ಚಿತ್ರ.
Recommended Video
ಬೀದರ್ ಜಿಲ್ಲೆಯ ಪುಟ್ಟ ಹಳ್ಳಿಯೊಂದರಿಂದ ಬಂದವರಾದ ಬಿರಾದಾರ್, ರಂಗಭೂಮಿಯಲ್ಲಿ ಬದುಕು ಕಂಡವರು. ನಂತರ ಚಿತ್ರರಂಗ ಕೈಹಿಡಿಯಿತು. ಸಿನಿಮಾಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದ್ದು ಭಿಕ್ಷುಕನ ಪಾತ್ರಗಳಲ್ಲಿ. ಸಿನಿಮಾ ಚಿತ್ರೀಕರಣಗಳೇ ನಡೆಯದೆ ಮೂರು ತಿಂಗಳು ಕಳೆದಿದೆ. ಸಣ್ಣ ಪುಟ್ಟ ಪಾತ್ರಗಳಿಗಾಗಿ ಸಿನಿಮಾ ಅವಲಂಬಿಸಿರುವ ಅನೇಕರು ಸಂಕಷ್ಟದಲ್ಲಿದ್ದಾರೆ. ಇಂತಹ ಸಂದರ್ಭದಲ್ಲಿ ಜನ್ಮದಿನ ಆಚರಿಸಿಕೊಳ್ಳುತ್ತಿರುವ ಬಿರಾದಾರ್ ಅವರನ್ನು 'ಫಿಲ್ಮಿ ಬೀಟ್' ಸಂಪರ್ಕಿಸಿದಾಗ ಅವರು ಬದುಕಿನ ಪಾಠವನ್ನೇ ತೆರೆದಿಟ್ಟರು. ಮುಂದೆ ಓದಿ...
ಸಮಯ ಕಳೆಯುವುದು ಕಷ್ಟವಲ್ಲ
ಸಮಯ ಕಳೆಯೋಕೆ ಬರೆಯೋದು, ಪೇಪರ್ ಓದುವುದು ವಿಚಾರಗಳು ಏನಾದರೂ ಇರುತ್ತವಲ್ಲ? ಸಣ್ಣಪುಟ್ಟ ಕೆಲಸಗಳು, ದೇವಸ್ಥಾನ, ಹಾಲು, ಹಣ್ಣು-ತರಕಾರಿ ತರುವುದು, ವಾಕಿಂಗ್, ಮನೆಯಲ್ಲಿ ವ್ಯಾಯಾಮ ಹೀಗೆ ಆರಾಮಾಗಿ ಕಾಲ ಕಳೆಯುತ್ತಿದ್ದೇನೆ ಎಂದು ಲಾಕ್ ಡೌನ್ ಅವಧಿಯ ದಿನಚರಿ ಕಷ್ಟವೆನಿಸುತ್ತಿಲ್ಲ ಎಂದರು ಬಿರಾದಾರ್.
ಒಂದು ಪಾತ್ರ ಕೊಟ್ಟು ಬಿರಾದರ್ ಗೆ ಕಂಡಿಷನ್ ಹಾಕಿದ್ದರಂತೆ ಕಾಶೀನಾಥ್.!
ಆಗ ಹೊರಜಗತ್ತೇ ಗೊತ್ತಿರಲಿಲ್ಲ
ಮನುಷ್ಯನಿಗೆ ಜೀವನದಲ್ಲಿ ಅನೇಕ ರೀತಿಯ ಬಿಕ್ಕಟ್ಟಿನ ಸಂದರ್ಭಗಳು ಬರಬಹುದು. ಅದನ್ನು ಎದುರಿಸುವ ಶಕ್ತಿಯನ್ನು ಮೊದಲು ಬೆಳೆಸಿಕೊಳ್ಳಬೇಕು. ಈಗಿನ ಪರಿಸ್ಥಿತಿಗೆ ಮೂರು ತಿಂಗಳಾಯ್ತು. ನನಗೆ ರಂಗಂಭೂಮಿಯಲ್ಲಿದ್ದಾಗ ಹೊರಗಿನ ಜಗತ್ತು ಗೊತ್ತಿರಲಿಲ್ಲ. ರಾತ್ರಿ ಮೂರು ಮೂರೂವರೆಗೆ ಮಲಗುವುದು, ಬೆಳಿಗ್ಗೆ 9 ಗಂಟೆಗೆ ಏಳುವುದು 11 ಗಂಟೆಯಿಂದ ಅಭ್ಯಾಸ ಮಧ್ಯಾಹ್ನ ಎರಡು ಗಂಟೆಗೆ ಊಟ ಮಾಡಿ ಎದ್ದರೆ ಆರು ಏಳು ಗಂಟೆಗೆ ಏಳುವುದು. ರಾತ್ರಿ ಒಂಬತ್ತು ಗಂಟೆಗೆ ಬಣ್ಣ ಹಚ್ಚುವುದು. ಇಷ್ಟೇ ಗೊತ್ತಿದ್ದದ್ದು. ಅದರಿಂದ ನಮಗೆ ಏನೂ ಅನಿಸುತ್ತಿರಲಿಲ್ಲ. ಸಂದರ್ಭ ಬಂದಾಗ ಅನುಸರಿಸಿಕೊಂಡು ಹೋದರೆ ಕಷ್ಟ ಎನಿಸುವುದಿಲ್ಲ. ಮನುಷ್ಯ ಸಂಸಾರದಲ್ಲಿ ಸಿಲುಕಿದ ಬಳಿಕ ಅನೇಕ ಕಷ್ಟಗಳು ಬರುತ್ತವೆ. ಅದಕ್ಕೆ ಹೆದರಿದರೆ ಜೀವನ ನಡೆಸಲು ಆಗುವುದಿಲ್ಲ.
ಈಗ ಎಲ್ಲರಲ್ಲಿ ನಾವು ಅಷ್ಟೇ
ಬಂದದ್ದು ಬರಲಿ ಸದ್ಗುರು ದಯೆಯೊಂದಿರಲಿ ಎನ್ನುತ್ತೀವಲ್ಲ, ಅಷ್ಟೇ. ದುಂದು ವೆಚ್ಚವಿಲ್ಲ. ಇದ್ದಿದ್ದರಲ್ಲೇ ತೃಪ್ತಿ ಪಡುತ್ತೇನೆ. ಇಲ್ಲದಾಗ ಬೇಕು ಎಂದಾಗ ಕಷ್ಟ ಆಗುತ್ತದೆ. ಏನು ಬರುತ್ತೋ ಶಿವ ಎಂಬಂತೆ ಇದ್ದಿದ್ದರಲ್ಲೇ ತೃಪ್ತಿಯಿಂದ ಜೀವನ ಮಾಡುತ್ತಾ ಇದ್ದೇನೆ.
ಚೆನ್ನೈನಲ್ಲಿದ್ದ ಅಣ್ಣಾವ್ರ ಮನೆ ಹುಡುಕಿಕೊಂಡು ಹೋಗಿದ್ದ ಬಿರಾದರ್ ಗೆ ರಾಜ್ ಹೇಳಿದ್ದೇನು?
ಕಷ್ಟ ಬಂದಾಗ ಎದುರಿಸುವ ಶಕ್ತಿ ಕಲಿಯಬೇಕು. ಹೇಗೆ ನಿಭಾಯಿಸಬೇಕು ಎನ್ನುವುದು ಮುಖ್ಯ. ಎಲ್ಲರೊಂದಿಗೆ ಪ್ರೀತಿಯಿಂದ ಇರಬೇಕು. ಹಾಗೆ ಇದ್ದಾಗ ಬಂದಿದ್ದನ್ನು ಎದುರಿಸುವ ಶಕ್ತಿ ಬರುತ್ತದೆ, ಕಷ್ಟ ದೂರವಾಗುತ್ತದೆ. ಅದನ್ನೇ ದೊಡ್ಡದಾಗಿ ಮಾಡಿಕೊಂಡರೆ ಜೀವನ ಮಾಡಲು ಆಗೊಲ್ಲ. ಜೀವನದಲ್ಲಿ ಎಲ್ಲ ಇದ್ದವರಿಗೂ ಕಷ್ಟ ಬರುತ್ತದೆ. ಎದುರಿಸುವ ಶಕ್ತಿ ಕಲಿತರೆ ಬದುಕಬಹುದು. ಇದು ಯಾರೋ ಒಬ್ಬರಿಗೆ ಬಂದಿಲ್ಲ, ಇಡೀ ಜಗತ್ತಿಗೇ ಬಂದಿದೆ. ಒಬ್ಬರು ಇಬ್ಬರಿಗೆ ಬಂದಾಗ ಗಾಬರಿಯಾಗಬಹುದು. ಎಲ್ಲರಲ್ಲಿ ನಾವು ಅಷ್ಟೇ.
ಗಟ್ಟಿಯಾಗಿರಲು ರಂಗಭೂಮಿ ಕಾರಣ
ಮೊದಲಿಂದ ಅಧ್ಯಾತ್ಮ ಇದೆ, ಗುರುಗಳ ಒಡನಾಟ ಜಾಸ್ತಿ ಇದೆ. ಪ್ರವಚನ ಪುರಾಣಗಳಲ್ಲಿ ಆಸಕ್ತಿ. ರಂಗಭೂಮಿ ಎಲ್ಲ ಪಾಠವನ್ನೂ ಕಲಿಸಿದೆ. ರಂಗಭೂಮಿಯಲ್ಲಿದ್ದವರಿಗೆ ಎಲ್ಲ ಪಾಠವೂ ಸಿಗುತ್ತದೆ. ರಂಗಭೂಮಿಯಲ್ಲಿ ಕೆಲಸ ಮಾಡಿದವರಿಗೆ ಎಲ್ಲ ಶಕ್ತಿಯನ್ನೂ ಸರಸ್ವತಿ ಕೊಟ್ಟಿರುತ್ತಾಳೆ. ಏನೇ ಬಂದರೂ ಎದುರಿಸುವ ಶಕ್ತಿ ಇರುತ್ತದೆ ಒಳಗಡೆ. ನಾವು ಇಷ್ಟು ಗಟ್ಟಿಯಾಗಿ ಇರಲು ರಂಗಭೂಮಿ ಕಾರಣ.
ಇಲ್ಲಿ ಕಲಾವಿದರು ಇದ್ದಾರೆ. ಎಲ್ಲ ನನಗೇ ಸಿಗಲಿ ಎಂದರೆ ಹೇಗೆ ಬದುಕಲು ಆಗುತ್ತದೆ. ಎಲ್ಲರಿಗೂ ಸಿಗಬೇಕಲ್ಲ. ಕೆಲಸಕ್ಕಿಂತಲೂ ಈ ಜೀವನ ಇರುವುದೇ ಹಾಗೆ. ಅಮವಾಸ್ಯೆ-ಹುಣ್ಣಿಮೆ, ಬೆಳಕು-ಕತ್ತಲು, ಒಳ್ಳೆಯದು-ಕೆಟ್ಟದು, ಕಷ್ಟ-ಸುಖ, ಎಲ್ಲವನ್ನೂ ಸಮವಾಗಿ ತೆಗೆದುಕೊಳ್ಳಬೇಕು. ಹಾಗೆ ತೆಗೆದುಕೊಂಡಿಲ್ಲ ಎಂದರೆ ನಾವು ಆರೋಗ್ಯ ಕಳೆದುಕೊಳ್ಳುತ್ತೇವೆ, ಜೀವನದ ದಾರಿ ಕಡಿಮೆಯಾಗುತ್ತದೆ. ಖುಷಿಯಲ್ಲಿದ್ದಾಗ ಜೀವನದ ದಾರಿ ಉದ್ದವಾಗುತ್ತದೆ.
ಪಾತ್ರಗಳು ನಮ್ಮ ಆಯ್ಕೆಯಲ್ಲ
ಭಿಕ್ಷುಕನ ಪಾತ್ರಗಳ ವಿಚಾರದಲ್ಲಿ ನಮ್ಮ ಕೈಯಲ್ಲಿ ಏನೂ ಇರುವುದಿಲ್ಲ. ನಿರ್ದೇಶಕರು ಯಾವ ಪಾತ್ರ ಕೊಡುತ್ತಾರೋ ಆ ಪಾತ್ರವನ್ನು ಮಾಡಬೇಕು. ಇಂತಹ ಪಾತ್ರವನ್ನೇ ಮಾಡುತ್ತೇನೆ ಎಂದು ಹೇಳಲು ಆಗುವುದಿಲ್ಲ. ಪಾತ್ರ ನೀಡುವುದು ನಿರ್ದೇಶಕರ ಆಯ್ಕೆ. ಅವರು ಕೊಟ್ಟಾಗ ನಿಭಾಯಿಸುವ ಜವಾಬ್ದಾರಿ ನಮ್ಮದು. ರಂಗಭೂಮಿಯಿಂದ ಬಂದಿರುವುದರಿಂದ ಯಾವ ಪಾತ್ರ ಕೊಟ್ಟರೂ ನಿಭಾಯಿಸುವ ಶಕ್ತಿ ಇರುತ್ತದೆ. ಯಾವ ಪಾತ್ರ ಕೊಟ್ಟರೂ ಮಾಡಬಹುದು. ಆದರೆ ಅದರ ಆಯ್ಕೆ ನಿರ್ದೇಶಕರದ್ದು ಇರುತ್ತದೆ.
ಕಷ್ಟದ ದಿನದಲ್ಲಿ ಉಪೇಂದ್ರ - ಬಿರಾದರ್ ನಡುವೆ ಆಗಿತ್ತು ಈ ಒಪ್ಪಂದ
ನಿರ್ದೇಶಕರು ಬಯಸಿದ ಪಾತ್ರ ನೀಡುತ್ತಾರೆ. 'ಟೋಪಿವಾಲ'ದಲ್ಲಿ ಉಪೇಂದ್ರ ಮುಖ್ಯ ಪಾತ್ರ ನೀಡಿದರು. 'ಅಮ್ಮಾ ಐ ಲವ್ ಯೂ'ದಲ್ಲಿ, 'ಅಭಿಮನ್ಯು'ದಲ್ಲಿ ಅರ್ಜುನ್ ಸರ್ಜಾ ಮುಖ್ಯ ಪಾತ್ರ ಕೊಟ್ಟರು. ಕೊಟ್ಟ ಪಾತ್ರಗಳನ್ನು ಮಾಡಬೇಕು. ಅದು ಕೊಡಿ, ಇದನ್ನು ಕೊಡಿ, ಅದನ್ನು ಮಾಡೊಲ್ಲ ಎನ್ನಲು ಆಗೊಲ್ಲ.
'ಕನಸೆಂಬೋ ಕುದುರೆಯನೇರಿ' ಬಳಿಕ ಆ ರೀತಿಯ ಎಂಟು ಹತ್ತು ಮಾಡಿದೆ. ಯಾವುದೂ ಆ ಮಟ್ಟಕ್ಕೆ ಹೋಗಲಿಲ್ಲ. ಎಂಟ್ಹತ್ತು ಜನರ ಒಳ್ಳೆ ಒಳ್ಳೆ ನಿರ್ದೇಶಕರು ಇದ್ದಾರೆ. ಅವರವರು ತಮ್ಮ ಸಾಮರ್ಥ್ಯ, ಕಥೆಗೆ ಅನುಗುಣವಾಗಿ ಸಿನಿಮಾ ತೆಗೆಯುತ್ತಾರೆ.
ಭಿಕ್ಷುಕನ ಪಾತ್ರವೇ ನನಗೆ ಅಕ್ಷಯ ಪಾತ್ರೆ
ನಾನು ನಟಿಸಿದ ಎರಡು ಮೂರು ಸಿನಿಮಾಗಳು ಉತ್ತಮ ಹೆಸರು ಪಡೆದಿದ್ದವು. ಪ್ರಶಸ್ತಿಯ ಹಂತಕ್ಕೆ ಹೋಗಿದ್ದರೂ ಅದು ಬರಲಿಲ್ಲ. ಇನ್ನು ಮೂರು ನಾಲ್ಕು ಸಿನಿಮಾಗಳು ಇವೆ. ನಮ್ಮ ಕೈಯಲ್ಲಿ ಏನೂ ಇರೊಲ್ಲ, ನೋಡೋಣ ದೇವರಿದ್ದಾನೆ.
ಅದು ನಮ್ಮ ಕರ್ತವ್ಯ. ಭಿಕ್ಷುಕನ ಪಾತ್ರವೇ ಆದರೂ ಸುಮ್ಮನೆ ಅಲ್ಲ. ಪರಮಾತ್ಮನೂ ಒಂದು ಸಂದರ್ಭದಲ್ಲಿ ಭಿಕ್ಷೆ ಬೇಡಿದ್ದಾನೆ. ಭಿಕ್ಷುಕನ ಪಾತ್ರವೇ ನನಗೆ ಅಕ್ಷಯ ಪಾತ್ರೆ ಆಗಿದೆ. ಅದೊಂದೇ ಅಲ್ಲ, ಬೇರೆ ರೀತಿಯ ಹಾಸ್ಯ ಪಾತ್ರಗಳೂ ಬಂದವು. ಅವಾರ್ಡ್ ಚಿತ್ರಗಳೂ ಬಂದವು, ಹಳ್ಳಿ ಪಾತ್ರಗಳು ಬಂದವು. ಈಗ ತುಂಬಾ ಬದಲಾಗಿದೆ. ಗುರುಪ್ರಸಾದ್ 'ಮಠ' ಚಿತ್ರದಲ್ಲಿ ಒಳ್ಳೆಯ ಪಾತ್ರ ನೀಡಿದರು. ಕಾಸರವಳ್ಳಿ ಸರ್ ಸಿನಿಮಾ ಆದ ಬಳಿಕ ಇನ್ನೊಂದಿಷ್ಟು ಬದಲಾವಣೆ ಆಗಿವೆ. ಪ್ರತಿ ವರ್ಷ ಜೀವನಕ್ಕೆ ಆಧಾರವಾಗುವಂತಹ ಒಂದೆರಡು ಒಳ್ಳೆಯ ಪಾತ್ರಗಳು ಬರುತ್ತಿವೆ.
ಕನಸುಗಳನ್ನು ಕಂಡವನಲ್ಲ..
ಸಿನಿಮಾ ಪ್ರಯಾಣದಲ್ಲಿ ತೃಪ್ತಿ ಇದೆ. ತೃಪ್ತಿ ಇಲ್ಲ ಎಂದರೆ ಬೆಂಗಳೂರಲ್ಲಿ ಇರಲು ಆಗುವುದಿಲ್ಲ. ರೈತನಿಗೂ ಒಂದು ವರ್ಷ ಹೊಲ ಬೆಳೆಯುತ್ತದೆ, ಇನ್ನೊಂದು ವರ್ಷ ಬೆಳೆಯುವುದಿಲ್ಲ. ಅವನು ಹೊಲ ಬಿಟ್ಟು ಹೋಗುವುದಿಲ್ಲ. ನಮಗೂ ಅಷ್ಟೆ, ಒಮ್ಮೆ ಹೆಚ್ಚು ಅವಕಾಶ ಇರುತ್ತದೆ, ಇನ್ನೊಮ್ಮೆ ಕಡಿಮೆ, ಕೆಲವೊಮ್ಮೆ ಇರುವುದಿಲ್ಲ. ನಾವು ಹೊಂದಾಣಿಕೆ ಮಾಡಿಕೊಂಡು ಜೀವನ ಮಾಡಬೇಕು.
ನಾನು ಹೀಗಿರಬೇಕು ಹಾಗಿರಬೇಕು ಎಂದು ಕನಸುಗಳನ್ನು ಕಟ್ಟಿಕೊಂಡವನಲ್ಲ. ಬಂದರೆ ಅನುಭವಿಸುತ್ತೇನೆ, ಬರಲಿಲ್ಲ ಎಂದರೆ ತೊಂದರೆಯಿಲ್ಲ. ಹೀಗೆಯೇ ಇರಬೇಕು ಎಂದಾಗ ಕಷ್ಟ ಆಗುತ್ತದೆ. ಹೇಗೆ ಬೇಕಾದರೂ ಇರುತ್ತೇನೆ ಎಂದಾಗ ಕಷ್ಟ ಆಗುವುದಿಲ್ಲ. ಹಾಗೆ ಆಸೆಗಳು ಮನುಷ್ಯನಿಗೆ ನೂರಾರು ಇರುತ್ತವೆ. ಆದರೆ ಆಸೆಗಳಿಗೂ ಮಿತಿ ಇರಬೇಕು, ಜೀವನಕ್ಕೂ ಮಿತಿ ಇರಬೇಕು. ಅತಿ ಆಸೆಗಳನ್ನು ಇಟ್ಟುಕೊಳ್ಳಬಾರದು. ಎಷ್ಟು ಬೇಕೋ ಅಷ್ಟು ಆಸೆಗಳಿದ್ದರೆ ಜೀವನ ಸಲೀಸು. ಜೀವನಕ್ಕೆ ಮಿತಿ ಮೀರಿ ಮಾಡಿದಾಗ ಜೀವನಕ್ಕೆ ತೊಂದರೆಯಾಗುತ್ತದೆ.