'ಕಾಮಿಡಿ ಕಿಲಾಡಿ'ಗಳಿಂದ 'ಕ್ವಾಟ್ಲೆ ಕಿಚನ್'ವರೆಗೆ ; ವಾಣಿ ಗೌಡ ಕನಸು ನೂರು, ಅಡುಗೆ ಯುದ್ಧದಲ್ಲಿ ಗೆಲ್ಲೋದು ಯಾರು ?
ಪ್ರತಿಭೆ ಇದ್ದವರಿಗೆ ಪ್ರತಿಫಲ ಕಟ್ಟಿಟ್ಟ ಬುತ್ತಿ. ಪ್ರತಿಭಾವಂತರಿಗೆ ಬಡತನ ಯಾವತ್ತು ಅಡ್ಡಿಯಾಗುವುದಿಲ್ಲ ಎನ್ನುವ ಮಾತು ಇದೆ. ನಿಜಾ.. ಅಂದುಕೊಂಡಿದ್ದು ಸಾಧಿಸಲು.. ಗುರಿ ತಲುಪಲು ಸಮಯ ಬೇಕಾಗಬಹುದು. ಕನಸೆಂಬ ಕುದುರೆಯ ಬೆನ್ನೇರಿ ಹೊರಟಾಗ ಹಲವಾರು ಸವಾಲು ಎದುರಾಗಬಹುದು. ಕೆಲವರು ಕಾಲೆಳೆಯಬಹುದು. ನಿಂದಿಸಬಹುದು. ಅವಮಾನ ಮಾಡಬಹುದು. ಆದರೆ.. ತಮ್ಮ ಮೇಲೆ ನಂಬಿಕೆ ಇದ್ದರೆ ಎಂತಹ ಅಸಾಧ್ಯವನ್ನೂ ಕೂಡ ಸಾಧಿಸಬಹುದು.
ಇನ್ನೂ ಬದುಕೇ ಹಾಗೆ... ಅದು ಯಾರನ್ನು, ಯಾವಾಗ, ಎಲ್ಲಿಗೆ ಬೇಕಾದರೂ ಕರೆದುಕೊಂಡು ಬಂದು ನಿಲ್ಲಿಸುತ್ತದೆ. ನಾನು ಅಂತಾ ಮೆರೆಯುವವರನ್ನು ನಡುಬೀದಿಗೆ ಬಿಡಬಹುದು; ನಾನೇನೂ ಅಲ್ಲ ಅಂದುಕೊಂಡೇ ಕುಂತರೆ ಇದ್ದಲ್ಲೇ ಇರಬಹುದು. ಅಥವಾ, ನನ್ನಲ್ಲೇನೋ ಇದೆ ಅಂದುಕೊಳ್ಳುವುದರ ಜೊತೆಗೆ ತನ್ನ ಶಕ್ತಿ ಸಾಮರ್ಥ್ಯಗಳನ್ನು ಗುರುತಿಸಿಕೊಂಡವನು, ಮತ್ತದನ್ನು ಹೊರತೆಗೆಯುವಲ್ಲಿ ಶ್ರಮಿಸಿದವನು ಎಂಥ ಎತ್ತರಕ್ಕೆ ಬೇಕಾದರೂ ಏರಿ ನಿಲ್ಲಬಹುದು. ಉದಾಹರಣೆಗೆ ''ವಾಣಿ ಗೌಡ''.

ಹೌದು.. ವಾಣಿ ಗೌಡ... ಚೆನ್ನರಾಯಪಟ್ಟಣದ ಚೆಲುವೆ. ಯಾವ ಗಾಡ್ಫಾದರ್ ಸಹಾಯ ಇಲ್ಲದೇ ಕೇವಲ ತನ್ನಲ್ಲಿನ ಕಲೆಯನ್ನೇ ನಂಬಿ ಬಣ್ಣದ ಪ್ರಪಂಚಕ್ಕೆ ಬಂದ ವಾಣಿಗೆ ಮೊದಲು ಕೈ ಹಿಡಿದಿದ್ದು ''ಕಾಮಿಡಿ ಕಿಲಾಡಿಗಳು''.
''ಕಾಮಿಡಿ ಕಿಲಾಡಿಗಳು'' ಎರಡನೇ ಸೀಸನ್ನಲ್ಲಿ ತಮ್ಮ ಅಭಿನಯದಿಂದ ಅಸಂಖ್ಯಾತ ಕನ್ನಡಿಗರ ಹೃದಯ ಗೆದ್ದ ವಾಣಿ ''ಕಾಮಿಡಿ ಕಿಲಾಡಿಗಳು ಸೀಸನ್ 2''ರಲ್ಲಿ ಫೈನಲಿಸ್ಟ್ 7 ಜನರ ಪೈಕಿ ಒಬ್ಬರಾಗಿದ್ದರು.
ಇಂಥಾ ವಾಣಿ ಸದ್ಯ ''ಕ್ವಾಟ್ಲೆ ಕಿಚನ್'' ಕಾರ್ಯಕ್ರಮದ ಮೂಲಕ ಮತ್ತೆ ಮನೆ ಮಾತಾಗಿದ್ದಾರೆ. ಕಾರ್ಯಕ್ರಮದಲ್ಲಿ ಕ್ವಾಟ್ಲೆ ನೀಡಿ ನಕ್ಕು ನಲಿದಿದ್ದಾರೆ. ನಗಿಸಿದ್ದಾರೆ. ಸದ್ಯ ಈ ''ಕ್ವಾಟ್ಲೆ ಕಿಚನ್'' ಗ್ರ್ಯಾಂಡ್ ಫಿನಾಲೆ ಹಂತಕ್ಕೆ ಬಂದಿದೆ. ಈ ಹಿನ್ನೆಲೆ ವಾಣಿ ಗೌಡ ತಮ್ಮ ಮನದ ಮಾತುಗಳನ್ನು ನಿಮ್ಮ ''ಫಿಲ್ಮಿಬೀಟ್ ಕನ್ನಡ'' ಜೊತೆ ಹಂಚಿಕೊಂಡಿದ್ದಾರೆ. ಹಾಗಿದ್ದರೆ ವಾಣಿ ಗೌಡ ಮಾತನಾಡಿದ ಮಾತುಗಳೇನು..? ಅವರ ಮುಂದಿನ ಕನಸುಗಳೇನು..? ಯೋಚನೆ -ಯೋಜನೆಗಳೇನು..? ಎಂದು ತಿಳಿಯಲು ಮುಂದೆ ಓದಿ.
ಕ್ವಾಟ್ಲೆ ಕಿಚನ್ ಗ್ರ್ಯಾಂಡ್ ಫಿನಾಲೆ ಹಂತಕ್ಕೆ ತಲುಪಿದೆ. ಈ ಪ್ರಯಾಣದ ಬಗ್ಗೆ ನಿಮ್ಮ ಮಾತು ?
''ನಾನು ಇದೂವರೆಗೆ ಮಾಡಿದ ರಿಯಾಲಿಟಿ ಶೋಗಳಲ್ಲಿ ತುಂಬಾನೇ ರಿಯಲ್ ಆದ ಕಾರ್ಯಕ್ರಮ ಈ ''ಕ್ವಾಟ್ಲೆ ಕಿಚನ್''.ಯಾಕೆಂದರೆ ಬೇರೆ ರಿಯಾಲಿಟಿ ಶೋಗಳಲ್ಲಿ ಒಂದು ಸ್ಕ್ರಿಪ್ಟ್ ಇರುತ್ತೆ. ಫ್ಲ್ಯಾನಿಂಗ್ ಅಂತ ಇರುತ್ತೆ. ಅದೆ ಪ್ರಕಾರ ಎಲ್ಲ ನಡೆಯುತ್ತಿರುತ್ತೆ. ಅಂದರೆ ಡೈರೆಕ್ಷನ್ ವಿಭಾಗ ಹೇಳಿದಂತೆ ಅಲ್ಲಿ ಎಲ್ಲವೂ ನಡೆಯುತ್ತಿರುತ್ತೆ. ಆದರೆ ''ಕ್ವಾಟ್ಲೆ ಕಿಚನ್'' ಆಗಲ್ಲ. ಇಲ್ಲಿ ಎಲ್ಲವೂ ನಮ್ಮ ಮೇಲೆಯೇ ನಿಂತಿರುತ್ತೆ. ನಮ್ಮ ನಡೆ ನುಡಿ ನಾವು ಕೊಡುವ ಕ್ಲಾಟ್ಲೆ ಮೇಲೆ ಶೋ ಹೋಗುವುದರಿಂದ ಈ ಕಾರ್ಯಕ್ರಮವನ್ನು ನಾನು ವ್ಯೆಯಕ್ತಿಕವಾಗಿ ಮನಸಾರೆ ತುಂಬಾ ಎಂಜಾಯ್ ಮಾಡಿದೆ. ಇನ್ನು ಸಾಮಾನ್ಯವಾಗಿ ಶೂಟಿಂಗ್ ಅಂದರೆ ಅಯ್ಯೋ ಶೂಟಿಂಗಾ ಮತ್ತೆ ಹೋಗಬೇಕಾ ಎಂದುಕೊಂಡು ನಾವು ಹೋಗ್ತಿರ್ತಿವಿ ಆದರೆ ಈ ಕಾರ್ಯಕ್ರಮದ ಸಮಯದಲ್ಲಿ ಆ ತರಹದ ಭಾವನೆ ನನಗೆ ಯಾವತ್ತೂ ಬರಲೇ ಇಲ್ಲ''

''ಕಾಮಿಡಿ ಕಿಲಾಡಿ''ಗಳಿಂದ ''ಕ್ವಾಟ್ಲೆ ಕಿಚನ್''ವರೆಗೆ
''ಕಾಮಿಡಿ ಕಿಲಾಡಿಗಳು ಮತ್ತು ಕ್ವಾಟ್ಲೆ ಕಿಚನ್ ನಡುವೆ ತುಂಬಾ ವ್ಯತ್ಯಾಸ ಇತ್ತು. ಹೋಲಿಕೆ ಮಾಡಲು ಸಾಧ್ಯ ಇಲ್ಲ ಅದೇ ಬೇರೆ ಇದೇ ಬೇರೆ. ಆದರೆ ಎರಡರಲ್ಲಿಯೂ ಬಹುದೊಡ್ಡ ಸವಾಲು ಅಂದರೆ ಅದು ನಗು. ಯಾಕೆಂದರೆ ನಿಮಗೆ ಗೊತ್ತು ಕಾಮಿಡಿಯಲ್ಲಿ ಚೂರು ಆಚೀಚೆ ಆದರೂ ಕೂಡ ತುಂಬಾ ಅತಿಯಾಯ್ತು ಅನ್ಸುತ್ತೆ. ಇನ್ನೂ ತಟಸ್ಥವಾಗಿದ್ದರೆ ತುಂಬಾ ಸಪ್ಪೆ ಅನ್ಸುತ್ತೆ. ಹೀಗಾಗಿ ಈ ಎರಡನ್ನು ಬ್ಯಾಲೆನ್ಸ್ ಮಾಡಿಕೊಂಡು ನಗಿಸುವುದೇ ಈ ಎರಡು ಕಾರ್ಯಕ್ರಮದಲ್ಲಿ ನನಗೆ ಎದುರಾದ ಬಹುದೊಡ್ಡ ಸವಾಲು. ನಿಜಾ.. ಕಾಮಿಡಿ ಕಿಲಾಡಿಗಳಲ್ಲಿ ನಮ್ಮ ಕೈಯಲ್ಲಿ ಸ್ಕ್ರಿಪ್ಟ್ ಇರುತ್ತೆ. ಆದರೆ ಅವರ ಬರವಣಿಗೆಗೆ ನಾವು ಜೀವ ತುಂಬುವುದು ಕೂಡ ತುಂಬಾ ಕಷ್ಟದ ಕೆಲಸ. ಇನ್ನು ಇಲ್ಲಿ ಕೂಡ ಅಡುಗೆ ಮನೆಗೆ ಬಂದಿರುವವರು ಅವರ ಅವರ ಕ್ಷೇತ್ರದಲ್ಲಿ ಸಾಧನೆ ಮಾಡಿ ಬಂದಿರುವಂತವರು. ಹೀಗಾಗಿ ಅವರ ಕಾಲೆಳೆಯಬೇಕಾದರೆ ಅವರು ನಮ್ಮ ಜೋಕ್ನ ಹೇಗೆ ಸ್ವೀಕಾರ ಮಾಡ್ತಾರೆ ಎನ್ನುವ ಭಯ ಇದ್ದೇ ಇರುತ್ತಿತ್ತು. ಹೀಗಾಗಿ ತುಂಬಾ ಅಳೆದು ತೂಗಿ ನಾವು ನಮ್ಮ ಮಾತುಗಳನ್ನು ಹೇಳಬೇಕಾಗಿತ್ತು. ಇದು ಒಂದು ತರ ಸವಾಲಾಗಿಯೇ ಇತ್ತು''
ಕ್ವಾಟ್ಲೆ ಕಿಚನ್ನಲ್ಲಿ ತುಂಬಾ ಖುಷಿ ಕೊಟ್ಟ ಸಂಚಿಕೆ ?
''ಕ್ವಾಟ್ಲೆ ಕಿಚನ್ನಲ್ಲಿ ನ್ಯೂಸ್ ಆಂಕರ್ ಗೆಟಪ್ಪಿನಲ್ಲಿ ನಾನು ಕಾಣಿಸಿಕೊಂಡಿದ್ದೇ. ಆಗ ಎಲ್ಲರೂ ನಾನು ಕೂಡ ಎಲ್ಲರಂತೆ ಸುದ್ದಿಯನ್ನು ಓದಬಹುದು ಎಂದು ಅಂದುಕೊಂಡಿದ್ದರು. ಆದರೆ ನಾನು ಅರರೇರೆ ಎಂದು ನನ್ನದೇ ಆದ ಒಂದು ಶೈಲಿ ರೂಡಿಸಿಕೊಂಡು ಹೇಳಿದೆ. ನಾನು ಹೇಳಿದ್ದು ಸುಮ್ಮನೆಯಾದರೂ ಕೂಡ ಫ್ಲೋರ್ ಅಲ್ಲಿ ತುಂಬಾ ಎಂಜಾಯ್ ಮಾಡಿದರು. ಇಷ್ಟೇ ಅಲ್ಲ ಈಗ ಹೊರಗಡೆ ಕೂಡ ಹಲವರು ನನನ್ನೂ ಅರರೇರೆ ಎಂದೇ ಮಾತನಾಡಿಸುತ್ತಾರೆ.ಹೀಗಾಗಿ ಆ ಎಪಿಸೋಡ್ ನನಗೆ ತುಂಬಾ ಖುಷಿ ಕೊಡ್ತು''.

ವಾಣಿ ಅವರಿಗೆ ಅಡುಗೆ ಮಾಡಲು ಬರುತ್ತಾ ?
''ನಿಜಾ ಹೇಳಬೇಕು ಅಂದರೆ ಚೆನ್ನಾಗಿ ನನಗೆ ಅಡುಗೆ ಮಾಡೋಕೆ ಬರುತ್ತೆ ಎಂದು ನಾನು ಹೇಳಲ್ಲ. ಆದರೆ ಸ್ವಲ್ಪ ಸ್ವಲ್ಪ ಬರುತ್ತೆ. ಅಡುಗೆ ಮಾಡುವ ಐಡಿಯಾ ಇದೆ. ಅಂದರೆ ಉಪ್ಪು-ಖಾರ ಎಷ್ಟು ಹಾಕಿದರೆ ಯಾವ ತರ ರುಚಿ ಬರಬಹುದು ಎನ್ನುವ ಜ್ಞಾನ ಇದೆ. ಹಾಗೇ ನೋಡಿದರೆ ಚಿತ್ರರಂಗಕ್ಕೆ ಅಥವಾ ಕಿರುತೆರೆಗೆ ಬರುವ ಮುಂಚೆ ನಾನು ಎಂಎನ್ಸಿ ಕಂಪನಿಯಲ್ಲಿ ಕೆಲಸ ಮಾಡ್ತಿದ್ದೆ. ಆ ಟೈಮ್ನಲ್ಲಿ ಪಲಾವ್ ಮಾಡಿಕೊಳ್ತಿದ್ದೆ ಇಲ್ಲಾ ಅಂದರೆ ಚಿಕನ್ ಅಡುಗೆ ಮಾಡುವ ಪ್ರಯತ್ನ ಮಾಡ್ತಿದ್ದೆ. ಆದರೆ ಆ ನಂತರ ಈ ಕಡೆ ಬಂದ ನಂತರ ನನಗೆ ಸಮಯ ಸಿಗಲ್ಲ. ಹೀಗಾಗಿ ಅಮ್ಮನೇ ಅಡುಗೆ ಮಾಡ್ತಿರ್ತಾರೆ''.
ಯಾವ ಅಡುಗೆ ಚೆನ್ನಾಗಿ ಮಾಡ್ತೀರಾ ?
''ನಾನು ಮುಂಚೆಯೆಲ್ಲಾ ಮೊಸರನ್ನ ಚೆನ್ನಾಗಿ ಮಾಡ್ತಿದ್ದೆ. ಆದರೆ ಅದೊಂದು ಕಲೆನಾ.? ಎಂದು ಎಲ್ಲ ನಗ್ತಾರೆ. ಆದರೆ ಅದು ಕೂಡ ಒಂದು ಡಿಶ್ ನನ್ನ ಪ್ರಕಾರ. ಕೊರೊನಾ ಟೈಮ್ನಲ್ಲಿ ಡಿಫ್ರೆಂಟ್ ಆಗಿ ಮೊಸರನ್ನ ಮಾಡುವುದು ಹೇಗೆ ಎನ್ನುವುದನ್ನು ನಾನು ಕಲಿತುಕೊಂಡಿದ್ದೇ. ಈಗ ನಾನು ಬಿರಿಯಾನಿ ಮಾಡಬಲ್ಲೆ. ನಮ್ಮ ಕೊನೆಯ ಎಪಿಸೋಡ್ನಲ್ಲಿ ಕೂಡ ಬಾಸ್ಕೆಟ್ ಎಲ್ಲಾ ಬದಲಾದಾಗ ನನಗೆ ಗೊತ್ತಿರುವ ವಿದ್ಯೆಯನ್ನೆಲ್ಲಾ ಉಪಯೋಗಿಸಿ ಬಿರಿಯಾನಿನ ನಾನು ಅರ್ಧ ಕುಕ್ ಮಾಡಿದ್ದೇ. ದೇವರ ದಯೆಯಿಂದ ಅಡುಗೆ ಚೆನ್ನಾಗಿ ಆಗಿತ್ತು. ಹೀಗಾಗಿ ಬಿರಿಯಾನಿ ಮಾಡೋಕೆ ಬರುತ್ತೆ ಎಂದು ಈಗ ಧೈರ್ಯವಾಗಿ ನಾನು ಹೇಳಬಹುದು''.

ಕಲ್ಲು ಮುಳ್ಳಿನ ಹಾದಿ ಹಿಂದೆ ತಿರುಗಿ ನೋಡಿದಾಗ ?
'' ಹಿಂದೆ ತಿರುಗಿ ನೋಡಿದಾಗ ನನ್ನ ಈ ಜರ್ನಿ ತುಂಬಾ ಖುಷಿಯಾಗುತ್ತೆ. ನನಗೆ ಹೆಮ್ಮೆ ಇದೆ. ಯಾಕೆಂದರೆ ವಿಶೇಷವಾಗಿ ಕಾಮಿಡಿ ಫೀಲ್ಡ್ನಲ್ಲಿ ಬದುಕುಳಿಯುವುದು ತುಂಬಾ ಕಷ್ಟ. ನಮಗಿಂತ ಹಿಂದಿನ ಸೀಸನ್ನಲ್ಲಿ ಕೂಡ ಅನೇಕ ಕಾಮಿಡಿಯನ್ಸ್ ಬಂದಿದ್ಧಾರೆ. ಹಿಂದೆ ಸಿನಿಮಾಗಳಲ್ಲಿ ಆಕ್ಟ್ ಮಾಡುತ್ತಿದ್ದ ಕಾಮಿಡಿಯನ್ಸ್ಗಳನ್ನು ಕೂಡ ನಾವು ನೋಡಿದ್ದೀವಿ. ಬಹುತೇಕರ ಲೈಫ್ನಲ್ಲಿ ನಿರಂತರವಾಗಿ ಕೆಲಸ ಸಿಗುವುದು ಕಷ್ಟ. ಆದರೆ ನನ್ನ ಬದುಕಿನಲ್ಲಿ ಹಾಗಾಗಿಲ್ಲ. ಅದೃಷ್ಟನಾ..? ಗೊತ್ತಿಲ್ಲ. ಆದರೆ ಕಾಮಿಡಿ ಕಿಲಾಡಿಯಿಂದ ಕ್ವಾಟ್ಲೆ ಕಿಚನ್ವರೆಗೆ ಪ್ರತಿ ವರ್ಷ ಹೊಸದೊಂದು ಪ್ರಾಜೆಕ್ಟ್ ನನಗೆ ಸಿಗ್ತಿದೆ. ದೇವರ ದಯೆನಾ ಗೊತ್ತಿಲ್ಲ. ಆದರೆ ಸಿನಿಮಾ ಇಂಡಸ್ಟ್ರಿ ಕುರಿತು ಏನೆಂದರೆ ಏನೂ ಗೊತ್ತಿರದ ನಾನು ಇಲ್ಲಿ ಬಂದು 07-08 ವರ್ಷ ಆದರೂ ಕೂಡ ಇವತ್ತು ನೆಲೆ ನಿಂತಿದ್ದೇನೆ ಅಂದರೆ ಅದು ಒಂದು ರೀತಿಯ ಸಾಧನೆಯೇ''
ಕ್ವಾಟ್ಲೆ ಕಿಚನ್ ಯಾರು ಗೆಲ್ಲಬಹುದು ?
ಗ್ರ್ಯಾಂಡ್ ಫಿನಾಲೆಯಲ್ಲಿ ಕ್ವಾಟ್ಲೆ ನಾವು ನೀಡಿದ್ದಕ್ಕೆ ಕ್ವಾಟ್ಲೆಗಳಿಗೆ ಏನಾದರೂ ಸರ್ಫ್ರೈಸ್ ಇರಬಹುದಾ ಎನ್ನುವ ಲೆಕ್ಕಾಚಾರ ನನ್ನದು. ಇನ್ನೂ ಯಾರು ಗೆಲ್ಲಬಹುದು ಎನ್ನುವ ಪ್ರಶ್ನೆಗೆ ಉತ್ತರ ಹೇಳುವುದು ಕಷ್ಟ ಆದರೂ ಕೂಡ ದಿಲೀಪ್, ರಘು ಅವರಲ್ಲಿ ಯಾರಾದರು ಗೆಲ್ಲಬಹುದು. ಚಂದನ್ ಅವರು ಕೂಡ ತುಂಬಾ ಚೆನ್ನಾಗಿ ಅಡುಗೆ ಮಾಡ್ತಾರೆ. ಆದರೆ ದಿಲೀಪ್ ಮತ್ತು ರಘು ಇಲ್ಲಿಯವರೆಗೆ ವೆರೈಟಿ ಅಡುಗೆಗಳನ್ನು ಮಾಡಿದ್ದಾರೆ. ರುಚಿ ಕೂಡ ಚೆನ್ನಾಗಿತ್ತು. ಹೀಗಾಗಿ ಇವರಿಬ್ಬರಲ್ಲಿ ಯಾರಾದರು ಒಬ್ಬರು ಗೆಲ್ಲಬಹುದು ಎನ್ನುವುದು ನನ್ನ ಅನಿಸಿಕೆ.


Click it and Unblock the Notifications











